Homeನ್ಯಾಯ ಪಥಮೋದಿ ಮತ್ತೆ ಪ್ರಧಾನಿಯಾಗಲಾರರು ಎಂಬ ಸುಳಿವು ನೀಡುತ್ತಿದೆಯೇ ಬಿಜೆಪಿ-ಶಿವಸೇನೆ ಮೈತ್ರಿ?

ಮೋದಿ ಮತ್ತೆ ಪ್ರಧಾನಿಯಾಗಲಾರರು ಎಂಬ ಸುಳಿವು ನೀಡುತ್ತಿದೆಯೇ ಬಿಜೆಪಿ-ಶಿವಸೇನೆ ಮೈತ್ರಿ?

- Advertisement -
- Advertisement -

ಗಿರೀಶ್ ತಾಳಿಕಟ್ಟೆ |

ಬಿಜೆಪಿ ಮತ್ತು ಶಿವಸೇನೆ ಮತ್ತೆ ಮೈತ್ರಿ ಮಾಡಿಕೊಂಡಿವೆ. ಇವೆರಡೂ ಅವಲಂಬಿಸಿರುವ ವೋಟ್ ಬ್ಯಾಂಕ್ ರಾಜಕಾರಣ ಬಲ್ಲವರಿಗೆ ಇದರಲ್ಲಿ ಅಚ್ಚರಿ ಪಡುವಂತದ್ದೇನೂ ಇಲ್ಲ. ಯಾಕೆಂದರೆ ಈ ಎರಡೂ ಪಕ್ಷಗಳಿಗೆ ‘ಹಿಂದೂತ್ವ’ವೇ ಬಂಡವಾಳ. ಒಂದೇ ಬಂಡವಾಳವನ್ನು ಇಬ್ಬರು ಹಂಚಿಕೊಂಡರೆ ಬರುವ ಲಾಭವೂ ಕಡಿಮೆ ಎಂಬುದು ಕಾಮನ್‌ಸೆನ್ಸ್. ಆ ನಿಟ್ಟಿನಿಂದ ಸುಮಾರು ಎರಡು ದಶಕಗಳ ಈ ಹಳೇ ಮಿತ್ರರ ಮರುಮೈತ್ರಿ ಅಚ್ಚರಿ ಹುಟ್ಟಿಸುವುದಿಲ್ಲ. ಆದಾಗ್ಯೂ ಬಿಜೆಪಿ-ಶಿವಸೇನೆ ಮೈತ್ರಿ ರಾಷ್ಟ್ರ ರಾಜಕಾರಣದಲ್ಲಿ ಬೇರೊಂದು ಆಯಾಮದಿಂದ ಗಮನ ಸೆಳೆಯುತ್ತದೆ. ಅದು ಮೋದಿಯವರ ರಾಜಕೀಯ ಭವಿಷ್ಯಕ್ಕೆ ಸಂಬಂಧಪಟ್ಟದ್ದು.

ಬಹುಶಃ ಇತ್ತೀಚಿನ ವರ್ಷಗಳಲ್ಲಿ ಮೋದಿಯವರನ್ನು ಮತ್ತು ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗಿಂತಲೂ ಕಟುವಾಗಿ ಟೀಕಿಸುತ್ತಾ ಬಂದದ್ದು ಶಿವಸೇನೆ. ರಾಮಮಂದಿರ ನಿರ್ಮಾಣದ ವಿಚಾರ ಇರಬಹುದು, ರಫೇಲ್ ಹಗರಣವಿರಬಹುದು, ಪಾಕಿಸ್ತಾನದೊಂದಿಗೆ ವಿದೇಶಾಂಗ ನೀತಿಗಳಿರಬಹುದು ಎಲ್ಲಾ ವಿಚಾರಗಳಲ್ಲೂ ಶಿವಸೇನೆ ಮೋದಿಯವರ ಕಾಲೆಳೆಯುವ ಅವಕಾಶವನ್ನು ಮಿಸ್ ಮಾಡಿಕೊಂಡಿಲ್ಲ. ಎಷ್ಟರಮಟ್ಟಿಗೆ ಅಂದರೆ, ರಾಹುಲ್ ಗಾಂಧಿಯವರ ಪಾಪ್ಯುಲರ್ ಸ್ಲೋಗನ್ ಆದ ‘ಚೌಕಿದಾರ್ ಹೀ ಚೋರ್ ಹೈ’ ಹೇಳಿಕೆಯನ್ನು ಶಿವಸೇನೆಯ ಸುಪ್ರಿಮೋ ಉದ್ಧವ್ ಠಾಕ್ರೆ ಬಹಿರಂಗವಾಗಿ ಪುನರುಚ್ಚರಿಸಿ ಬಿಜೆಪಿಯನ್ನು ಹಂಗಿಸಿದ್ದರು. ಮಹಾರಾಷ್ಟ್ರದ ಬಿಜೆಪಿ ಸಿಎಂ ದೇವೇಂದ್ರ ಫಡ್ನವೀಸ್‌ರವರು ‘ಪ್ರಧಾನಿ ಮೋದಿಯನ್ನು ಟೀಕಿಸುವುದೆಂದರೆ ಸೂರ್ಯನಿಗೆ ಉಗಿದಂತೆ. ಉಗಳು ಯಾರ ಮೇಲೆ ಬೀಳುತ್ತೆ ಅಂತ ಟೀಕಿಸುವವರಿಗೆ ಗೊತ್ತಿರಬೇಕು’ ಎಂದು ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದರು. ಇದೆಲ್ಲ ನಡೆದದ್ದು ತೀರಾ ಇತ್ತೀಚೆಗಷ್ಟೆ. ಇನ್ನು ತೆಲುಗುದೇಶಂ ಪಾರ್ಟಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧದ ಎಲ್ಲಾ ಪಕ್ಷಗಳ ಪ್ರತಿಭಟನೆಗೂ ಶಿವಸೇನೆ ತನ್ನ ಪ್ರತಿನಿಧಿಯನ್ನು ಕಳಿಸಿಕೊಟ್ಟಿತ್ತು. ಅಷ್ಟೆಲ್ಲಾ ಯಾಕೆ, ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ‘ಉಗ್ರರನ್ನು ಮಟ್ಟಹಾಕಲು ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ’ ಎಂದು ಬಿಜೆಪಿ ಪ್ರಚಾರಕ್ಕೆ ಮುಂದಾದಾಗ ಇದೇ ಉದ್ಧವ್ ಠಾಕ್ರೆ ’ಸೈನಿಕರ ಬಲಿದಾನವನ್ನು ಬಿಜೆಪಿ ಹೀಗೆ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಹೇಯ ಕೃತ್ಯ’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಉದ್ದವ್ ಠಾಕ್ರೆ, ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಮತ್ತು ದೇವೇಂದ್ರ ಫಡ್ನವೀಸ್ ಕೈಕೈಹಿಡಿದು ಮೈತ್ರಿಯನ್ನು ಸಾರಿದರು!

ಇಲ್ಲಿ ಶಿವಸೇನೆ ಎಂಬ ಪ್ರಾದೇಶಿಕ ಪಕ್ಷವೊಂದರ sudden shift over, ಅದರ ನುಡಿ ಮತ್ತು ನಡೆಗಳಿಗಿಂತಲೂ ಹೆಚ್ಚಾಗಿ, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷವೊಂದು ತನ್ನನ್ನು ಮತ್ತು ತನ್ನ ಪ್ರಧಾನಿಯನ್ನು ಕೊನೇ ಕ್ಷಣದವರೆಗು ಕಾಡಿದ ಪಾರ್ಟಿಯನ್ನು ಸಹಿಸಿಕೊಳ್ಳುವ ತೀರ್ಮಾನ ಕೈಗೊಂಡಿದ್ದೇಕೆ? ಎಂಬುದು ಇಂಟರೆಸ್ಟಿಂಗ್ ವಿಷಯ. ನೋ ಡೌಟ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಂತಹ ‘ಹಿಂದಿ ಹಾರ್ಟ್‌ಲ್ಯಾಂಡ್’ ಚುನಾವಣೆಗಳಲ್ಲಿ ಸೋತ ನಂತರ ಬಿಜೆಪಿಗೆ ರಾಜಕೀಯ ಪರಿಸ್ಥಿತಿಯ ಅಂದಾಜು ಸಿಕ್ಕಿದೆ ಮತ್ತು ಆ ಅಂದಾಜಿನ ಪ್ರಕಾರ 2019ರ ಎಲೆಕ್ಷನ್‌ನಲ್ಲಿ ಕಳೆದ ಸಾರಿಯಂತೆ ತಾನು ಒಂಟಿಯಾಗಿ ಅಧಿಕಾರ ರಚಿಸಲು ಸಾಧ್ಯವಿಲ್ಲ ಎಂಬುದು ಮನದಟ್ಟಾಗಿದೆ. ಮಿತ್ರಪಕ್ಷಗಳ ಮೈತ್ರಿ ಅನಿವಾರ್ಯತೆ ಬಿಜೆಪಿಗೆ ಮನದಟ್ಟಾಗಿರುವುದರಿಂದಲೇ ಈಗ ಶಿವಸೇನೆ, ಎಐಎಡಿಎಂಕೆಗಳ ಜೊತೆ ಕೈಜೋಡಿಸುತ್ತಿದೆ. ಇದು ಬಿಜೆಪಿ-ಶಿವಸೇನೆ ಮೈತ್ರಿಗೆ ಸಿಗುವ ಸೀದಾಸಾದಾ ಪೊಲಿಟಿಕಲ್ ವಿಶ್ಲೇಷಣೆ. ನಿರ್ದಿಷ್ಟವಾಗಿ ಶಿವಸೇನೆಯ ವಿಚಾರಕ್ಕೆ ಬಂದರೆ, ಇದನ್ನೂ ಮೀರಿದ ರಾಜಕೀಯ ಲೆಕ್ಕಾಚಾರವೊಂದು ನಮ್ಮ ಗಮನಕ್ಕೆ ಬರುತ್ತದೆ. ಅದು ನಮಗೆ ಅರ್ಥವಾಗಬೇಕೆಂದರೆ ಶಿವಸೇನೆ-ಬಿಜೆಪಿ ನಡುವಿನ ಮೈತ್ರಿ ಯಾಕೆ ಮುರಿದುಬಿದ್ದಿತ್ತು ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು.

1960ರಲ್ಲಿ ಮಹಾರಾಷ್ಟ್ರ ಸ್ವತಂತ್ರ ರಾಜ್ಯವಾಗಿ ಉದಯಿಸಿದ ಮೇಲೆ ಬಹುಪಾಲು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮಿತ್ರಕೂಟಗಳೇ ಆ ರಾಜ್ಯವನ್ನು ಆಳಿವೆ. ಅಂಥಾ ಪ್ರತಿಕೂಲ ಪರಿಸ್ಥಿತಿ ನಡುವೆಯೂ 1995ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಲು ಶಿವಸೇನೆಗೆ ಸಾಧ್ಯವಾದದ್ದು ಬಿಜೆಪಿ ಜೊತೆಗಿನ ಮೈತ್ರಿಯಿಂದ. ಅಲ್ಲಿಂದ ಶುರುವಾದ ಆ ದೋಸ್ತಿ ಎರಡು ದಶಕಗಳ ಕಾಲ ನಿರಾತಂಕವಾಗಿ ಮುಂದುವರೆದಿತ್ತು. ಹಾಗೆ ನೋಡಿದರೆ, ಶಿವಸೇನೆಯ ಹೆಗಲೇರಿಕೊಂಡೇ ಬಿಜೆಪಿ ಮಹಾರಾಷ್ಟ್ರದಲ್ಲಿ ಗಟ್ಟಿ ನೆಲೆಕಂಡುಕೊಳ್ಳಲು ಸಾಧ್ಯವಾದದ್ದು. ಆದರೆ 2014ರ ಲೋಕಸಭಾ ಚುನಾವಣೆಯ ತರುವಾಯ ದೋಸ್ತಿಯೊಳಗೆ ಹಳೆಯ ವಿಶ್ವಾಸ ಉಳಿದುಕೊಳ್ಳಲಿಲ್ಲ. ಅದಕ್ಕೆ ಕಾರಣವಾದದ್ದು ಮೋದಿಯವರ Personal ego!

ಎಂಪಿ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿ ಬಿಜೆಪಿ ಪ್ರಚಂಡ ಜಯಸಾಧಿಸಿದ್ದು ಮೋದಿ ಕೇಂದ್ರಿತ ಚುನಾವಣಾ ಪ್ರಚಾರದಿಂದ. ಹಾಗಾಗಿ ಮೋದಿ ಪಕ್ಷದೊಳಗೆ ಬಲಾಢ್ಯವಾಗುತ್ತಾ ಬಂದರು. ಅಡ್ವಾಣಿಯಂತಹ ಹಿರಿಯ ನಾಯಕರೂ ದನಿ ಕಳೆದುಕೊಂಡರು. ಪಕ್ಷದೊಳಗಿನ ನಾಯಕರೇ ಮಂಕಾಗಿರಬೇಕೆಂದು ಬಯಸುತ್ತಿದ್ದ ಮೋದಿಯವರಲ್ಲಿ ಮಿತ್ರಪಕ್ಷಗಳ ಬಗ್ಗೆಯೂ ಆದರ ಉಳಿಯಲಿಲ್ಲ. ಅದರ ಮೊದಲ ಬಲಿಪಶು ಈ ಶಿವಸೇನೆ. ಎಂಪಿ ಎಲೆಕ್ಷನ್ ಗೆಲುವಿನ ಹ್ಯಾಂಗ್‌ಹೋವರ್ ಇಳಿಯುವ ಮುನ್ನವೇ ಅಂದರೆ, ಆರು ತಿಂಗಳ ಒಳಗೇ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಎದುರಾಯ್ತು. ಇದೇ ಗೆಲುವಿನ ಅಲೆಯಲ್ಲಿ, ಸ್ವತಂತ್ರವಾಗಿ ಸ್ಪರ್ಧಿಸಿದರೂ ಮಹಾರಾಷ್ಟ್ರದಲ್ಲಿ ಸುಸೂತ್ರವಾಗಿ ಅಧಿಕಾರ ಹಿಡಿದುಬಿಡುತ್ತೇವೆ ಎಂಬ ಲೆಕ್ಕಾಚಾರದಲ್ಲಿ ಮೋದಿ-ಶಾ ಜೋಡಿ ಶಿವಸೇನೆ ಜೊತೆಗಿನ ಸೀಟು ಹೊಂದಾಣಿಕೆಯಲ್ಲಿ ತಕರಾರು ಬರುವಂತೆ ನೋಡಿಕೊಂಡಿತು. ಒಳಗೊಳಗೇ ಸ್ವತಂತ್ರವಾಗಿ ಚುನಾವಣೆ ಎದುರಿಸಲು ಏನೆಲ್ಲ ತಯಾರಿಗಳು ಬೇಕೊ ಅದನ್ನೆಲ್ಲ ಬಿಜೆಪಿ ಮಾಡಿಕೊಳ್ಳುತ್ತಿದ್ದರೂ ಸೀಟು ಹಂಚಿಕೆಯ ಮಾತುಕತೆಯನ್ನು ಚಾಲ್ತಿಯಲ್ಲಿಟ್ಟಯ. ಚುನಾವಣೆ ಘೋಷಣೆಗೆ ಇನ್ನು ಹದಿನೈದು ದಿನ ತಾನೇ  ಅಧಿಕೃತವಾಗಿ ಮೈತ್ರಿಯನ್ನು ಮುರಿದುಕೊಳ್ಳುವಂಥ ಪರಿಸ್ಥಿತಿ ಬರುವವರೆಗೂ ಶಿವಸೇನೆ ಸೀಟು ಹಂಚಿಕೆ ಕಗ್ಗಂಟು ಬಗೆಹರಿಯುತ್ತೆ ಎಂಬ ವಿಶ್ವಾಸದಲ್ಲೇ ಇತ್ತು. ಆದರೆ ಅದು ಸುಳ್ಳಾಯ್ತು. ಮೈತ್ರಿ ಮುರಿದುಬಿತ್ತು. ಇಂಥಾ ಪರಿಸ್ಥಿತಿಗೆ ಸಿದ್ಧವಾಗಿದ್ದ ಬಿಜೆಪಿ ಒಟ್ಟು 288 ಕ್ಷೇತ್ರಗಳ ಪೈಕಿ 262ರಲ್ಲಿ ಸ್ಪರ್ಧಿಸಿ 122 ಸ್ಥಾನ ಗೆದ್ದು ಬಹುದೊಡ್ಡ ಪಕ್ಷವಾಗಿ ಹೊಮ್ಮಿದರೆ, ಸ್ವತಂತ್ರ ಸ್ಪರ್ಧೆಗೆ ಯಾವ ತಯಾರಿಯನ್ನೂ ಮಾಡಿಕೊಳ್ಳದ ಶಿವಸೇನೆ 282 ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಗೆದ್ದದ್ದು 66 ಸ್ಥಾನ ಮಾತ್ರ!

ಆನಂತರವೂ ಸಂಖ್ಯಾಬಲವಿಲ್ಲದ ಬಿಜೆಪಿ ಮೈತ್ರಿಗಾಗಿ ಎನ್.ಸಿ.ಪಿ.ಯ ಶರದ್ ಪವಾರ್‌ರನ್ನು ವಿಶ್ವಾಸಕ್ಕೆ ತೆಗೆದುಕೊಂಡಿತೇ ವಿನಾಃ ಶಿವಸೇನೆಯನ್ನಲ್ಲ. ‘ಯಜಮಾನಿಕೆ’ ಧೋರಣೆ ಮೇಲೆಯೇ ಪಕ್ಷ ಕಟ್ಟಿಕೊಂಡ ಶಿವಸೇನೆ ನಾಯಕರಿಗೆ ಇದು ತಮಗೆ ಮಾಡಿದ ದೊಡ್ಡ ಅವಮಾನದಂತೆ ಭಾಸವಾದುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅಲ್ಲಿಂದಾಚೆಗೆ ಮೋದಿ ಮತ್ತು ಶಿವಸೇನೆಯ ಸಂಬಂಧ ಬಿಗಡಾಯಿಸುತ್ತಲೇ ಬಂದಿತು. ‘ಹಿಂದೂತ್ವ’ವನ್ನೇ ತನ್ನ ಅಜೆಂಡಾವಾಗಿಸಿಕೊಂಡಿರುವ ಶಿವಸೇನೆಗೆ ಅದೇ ಸಿದ್ಧಾಂತದ ಬಿಜೆಪಿ ಜೊತೆ ಮುನಿಸಿಕೊಳ್ಳಲು ಬೇರಾವ ಕಾರಣಗಳೂ ಇಲ್ಲ, ಏಕೈಕ ಕಾರಣ ಅದು ಮೋದಿಯವರ egoistic ವರ್ತನೆ! ಪ್ರಧಾನಿ ಭೇಟಿಗೆ ದಿನಾಂಕಕ್ಕಾಗಿ ಸತತ ಒಂದು ತಿಂಗಳು ಸತಾಯಿಸಿಕೊಂಡು ಸಿಟ್ಟಿಗೆದ್ದು ಮೈತ್ರಿಯಿಂದ ಹೊರಬಂದ ಚಂದ್ರಬಾಬು ನಾಯ್ಡು ಒಳಗೊಂಡು ಬಹುತೇಕ ಮಿತ್ರ ಪಕ್ಷಗಳು ಎನ್ ಡಿ ಎ ತೊರೆಯಲು ಇದೇ ಮುಖ್ಯ ಕಾರಣ. ಸ್ವತಃ ಬಿಜೆಪಿ ನಾಯಕರೇ ಮೋದಿಯವರ ಈ ಆಟಿಟ್ಯೂಡ್ ಬಗ್ಗೆ ಅಸಮಾಧಾನ ಹೊಂದಿರುವುರಾದರು ಪಕ್ಷಕ್ಕೆ ಡ್ಯಾಮೇಜ್ ಮಾಡಬಾರದೆನ್ನುವ ಉದ್ದೇಶದಿಂದ, (ಅಥವಾ ಅಸಹಾಯಕತೆಯಿಂದಲೂ ಇರಬಹುದು), ಸಹಿಸಿಕೊಂಡಿದ್ದಾರೆ.

ಈಗ ಪ್ರಸ್ತುತ ವಿದ್ಯಮಾನದ ಒಳಗುಟ್ಟು ನಮಗೆ ಅರ್ಥವಾಗುತ್ತೆ. ಯಾವ ಮೋದಿಯವರನ್ನು ಶಿವಸೇನೆ ವಿರೋಧಿಸುತ್ತಿತ್ತೊ ಅದೇ ಮೋದಿಯ ಕೈಬಲಪಡಿಸಲು ಮೈತ್ರಿ ಮಾಡಿಕೊಳ್ಳುತ್ತದಾ? ಯಾವ ಲಾಜಿಕ್ಕೂ ಇದನ್ನು ಸಮರ್ಥಿಸುವುದಿಲ್ಲ. ಆದರೆ ಈ ಗೊಂದಲಕ್ಕೆ ಉತ್ತರವಾಗಿ ನಿಲ್ಲುವ ಹೆಸರು ನಿತಿನ್ ಗಡ್ಕರಿ! ಬಿಜೆಪಿಯೊಳಗೆ ನಿತಿನ್ ಗಡ್ಕರಿ ಹೆಸರು ಮುನ್ನೆಲೆಗೆ ಬರುತ್ತಿರುವ ಕಾಲದಲ್ಲೇ ಶಿವಸೇನೆ ಮೈತ್ರಿಗೆ ಓಕೆ ಎಂದಿರುವುದು ಕೇವಲ ಕಾಕತಾಳೀಯವಲ್ಲ. ಅದರ ಹಿಂದೆ ಸ್ಪಷ್ಟ ಲೆಕ್ಕಾಚಾರಗಳಿವೆ. ಮೋದಿ-ಶಾ ವಿರುದ್ಧ ಬಿಜೆಪಿಯಲ್ಲಿ ಅಪಸ್ವರಕ್ಕೆ ಆಸ್ಪದವೇ ಇಲ್ಲ ಎನ್ನುವಂತಿದ್ದ ವಾತಾವರಣದಲ್ಲಿ ನಿತಿನ್ ಗಡ್ಕರಿ ‘ಮೂರು ರಾಜ್ಯಗಳ ಚುನಾವಣಾ ಸೋಲಿಗೆ ಬಿಜೆಪಿ ಅಧ್ಯಕ್ಷರೇ ಹೊಣೆ ಹೊತ್ತುಕೊಳ್ಳಬೇಕು’, ‘ತನ್ನ ಸಂಸಾರವನ್ನು ಸಾಕಲಾಗದ ವ್ಯಕ್ತಿ ದೇಶವನ್ನು ಹೇಗೆ ಮುನ್ನಡೆಸಿಯಾನು’ ಎಂಬಿತ್ಯಾದಿ ಕಾಂಟ್ರವರ್ಸಿ ಹೇಳಿಕೆಗಳ ಮೂಲಕ ರೆಬೆಲ್ ಆದದ್ದು ಒಂದು ನಿರ್ದಿಷ್ಟ, ನಿರ್ದೇಶಿತ ಉದ್ದೇಶಕ್ಕೆ. 2019ರಲ್ಲಿ ಸರ್ಕಾರ ರಚನೆಗೆ ಮಿತ್ರಪಕ್ಷಗಳು ಅನಿವಾರ್ಯ ಎನಿಸಿದಾಗ, ಯಾವ ಮೋದಿಯವರ ವರ್ತನೆಯನ್ನು ವಿರೋಧಿಸಿ ಅವರೆಲ್ಲ ಹಿಂದೆ ಸರಿದಿದ್ದವೋ ಅದೇ ಮೋದಿಯನ್ನು ಮುಂದಿಟ್ಟುಕೊಂಡು ಬೆಂಬಲ ಕೇಳಿದರೆ ಒಪ್ಪಲಾರವು. ಒಂದು ತಟಸ್ಥ, ಸರ್ವಸಮ್ಮತ ಮುಖವನ್ನು ಮುಂದಿಟ್ಟುಕೊಂಡು ಮೈತ್ರಿಗೆ ಮುಂದಾಗಬೇಕು ಎನ್ನುವ ಯೋಚನೆಯಿಂದಲೇ ಮೋದಿಗೆ ಪರ್ಯಾಯವಾಗಿ ನಾಗ್ಪುರದ ಲಿಂಕುಗಳು ಚೆನ್ನಾಗಿರುವ ನಿತಿನ್ ಗಡ್ಕರಿಯನ್ನು ಪೋಷಿಸಲಾಗುತ್ತಿದೆ. ಇದು ಈಗ ರಹಸ್ಯವಾಗೇನೂ ಉಳಿದಿಲ್ಲ.

‘ಮುಂದಿನ ಸಲ ಯಾರ ಹಂಗೂ ಇಲ್ಲದ ಸ್ಥಿರ ಸರ್ಕಾರ ರಚಿಸಲು ಸಾಧ್ಯವಾಗದೇ ಹೋದರೆ (ಮಿತ್ರ ಪಕ್ಷಗಳ ಮರ್ಜಿ ಇಲ್ಲದೆ) ಭಾರತದ ಘನತೆ ವಿಶ್ವದ ಮುಂದೆ ಕುಸಿದು ಬೀಳಲಿದೆ’ ಎಂಬರ್ಥದಲ್ಲಿ ಮೋದಿಯವರು ಇತ್ತೀಚೆಗೆ ಜನರನ್ನು ಅಪ್ರೋಚ್ ಮಾಡಿದ್ದು ಸಹಾ ಸಮ್ಮಿಶ್ರ ಸರ್ಕಾರ ರಚನೆಯಾದರೆ ತನಗೆ ಪ್ರಧಾನಿಯಾಗುವ ಅವಕಾಶ ಸಿಕ್ಕುವುದಿಲ್ಲ ಎಂಬ ಸ್ಪಷ್ಟ ಇರಾದೆಯಿಂದ. ಇತ್ತ ಮೋದಿಯವರು ಮಿತ್ರಪಕ್ಷಗಳ ಮುಲಾಜಿಲ್ಲದ ಸ್ವತಂತ್ರ ಬಿಜೆಪಿಯ ಸರ್ಕಾರಕ್ಕಾಗಿ ಜನರ ಬಳಿ ಬೇಡಿಕೆ ಇಡುತ್ತಿದ್ದರೆ, ಅತ್ತ ಅವರ ಆಪ್ತರಾದ ಅಮಿತ್ ಶಾ ಪಕ್ಷದ ಅಧ್ಯಕ್ಷಾಗಿರುವ ಕಾರಣಕ್ಕೆ ಅನಿವಾರ್ಯವಾಗಿ ತಾನೆ ಮುಂದೆ ನಿಂತು ಮಿತ್ರಪಕ್ಷಗಳ ಜೊತೆಗೆ ಹೊಂದಾಣಿಕೆಗೆ ಓಡಾಡಬೇಕಿದೆ.

ಶಿವಸೇನೆಗು ಸಹಾ ಪ್ರಧಾನಿ ಹುದ್ದೆಯಿಂದ ಮೋದಿಯವರನ್ನು ದೂರ ಇರಿಸುವ ಭರವಸೆ ಕೊಟ್ಟು, ಉದ್ಧವ್ ಠಾಕ್ರೆ ಸೇರಿದಂತೆ ಬಹುಪಾಲು ಮಿತ್ರಪಕ್ಷಗಳ ಜೊತೆ ಒಳ್ಳೆಯ ಒಡನಾಟವಿರುವ ಗಡ್ಕರಿಯವರನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಪ್ರಪೋಸ್ ಮಾಡಿರುವುದರಿಂದಲೇ ಹಳೆಯ ಸಿಟ್ಟನ್ನೆಲ್ಲ ಮರೆತು ಮೈತ್ರಿಗೆ ಸಮ್ಮತಿಸಿದೆ ಎಂದು ಶಿವಸೇನೆಯ ಒಳಮೂಲಗಳೇ ತಿಳಿಸುತ್ತಿವೆ. ಇಂತಹ ಒಂದು ಸ್ಪಷ್ಟ ನೀಲನಕ್ಷೆ ಇರುವ ಕಾರಣಕ್ಕೇ ಅವತ್ತು ಮೈತ್ರಿಯನ್ನು ಘೋಷಿಸುವ ಸಮಯದಲ್ಲಿ ಉದ್ದೇಶಪೂರ್ವಕವಾಗಿ ನಿತಿನ್ ಗಡ್ಕರಿಯವರ ಮುಖ ಕಾಣದಂತೆ ನೋಡಿಕೊಳ್ಳಲಾಯಿತು. ಈ ಮೈತ್ರಿ ಗಡ್ಕರಿಯವರ ಫಲಶ್ರುತಿ ಎಂಬುದು ಬಹಿರಂಗವಾಗಿಬಿಟ್ಟರೆ ಪಕ್ಷದೊಳಗಿನ ಲೆಕ್ಕಾಚಾರಗಳು ಬಯಲಾಗುವುದಲ್ಲದೆ, ಕಾರ್ಯಕರ್ತರಲ್ಲಿ ಗೊಂದಲ ಮೂಡುವ, ಆತ್ಮವಿಶ್ವಾಸ ಕುಗ್ಗುವ ಸಾಧ್ಯತೆ ಇರುತ್ತೆ ಎಂಬುದೇ ಅವತ್ತಿನ ಗಡ್ಕರಿ ಅನುಪಸ್ಥಿತಿಯ ಅಸಲೀ ಕಾರಣ. ಇಲ್ಲವಾಗಿದ್ದರೆ ತನ್ನದೇ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಮಹತ್ವದ ಬೆಳವಣಿಗೆಗೆ ಅವರು ಗೈರು ಹಾಜರಾಗುವ ಕಾರಣವೇ ಇಲ್ಲ.

ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಇದು ಕೇವಲ ಮೈತ್ರಿ ಮಾತ್ರವಲ್ಲ. ಶಿವಸೇನೆಯ ಮುಂದೆ ಬಿಜೆಪಿ ಸಂಪೂರ್ಣವಾಗಿ ಮಂಡಿ ಊರಿದಂತ ಪರಿಸ್ಥಿತಿ. ಈಗಿನ ಹಂಚಿಕೆಯ ಪ್ರಕಾರ ಒಟ್ಟು ೪೮ ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 25 ಮತ್ತು ಶಿವಸೇನೆ 23 ಸ್ಥಾನಗಳಲ್ಲಿ ಸ್ಪರ್ಧಿಸುವುದೆಂದು ನಿಕ್ಕಿಯಾಗಿದೆ. ಶಿವಸೇನೆ ಭಾಳಾ ಠಾಕ್ರೆಯವರ ನೇತೃತ್ವದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೂ ಮೈತ್ರಿಯಲ್ಲಿ ಅದಕ್ಕೆ ಇಷ್ಟು ಸೀಟುಗಳು ಲಭಿಸಿದ್ದಿಲ್ಲ. ರಾಷ್ಟ್ರೀಯ ಪಕ್ಷವಾದ ಬಿಜೆಪಿ 26-28 ಸ್ಥಾನಗಳನ್ನಿಟ್ಟುಕೊಂಡರೆ ಶಿವಸೇನೆಗೆ 18-19 ಸ್ಥಾನಗಳಷ್ಟೇ ಸಿಗುತ್ತಿದ್ದವು. ಹಾಲಿ ಬಿಜೆಪಿ ಸಂಸದರೇ ಗೆದ್ದು ಪ್ರತಿನಿಧಿಸುತ್ತಿರುವ ಪಾಲ್ಗರ್ ಕ್ಷೇತ್ರವನ್ನೂ ಶಿವಸೇನೆ ಬಿಜೆಪಿಯಿಂದ ತನ್ನ ಪಾಲಿಗೆ ತೆಗೆದುಕೊಳ್ಳಲು ಯಶಸ್ವಿಯಾಗಿದ್ದು, ಇದರಿಂದ ಬೇಸರಗೊಂಡ ಸುಮಾರು 50 ಬಿಜೆಪಿ ಕಾರ್ಯಕರ್ತರು ಪಾರ್ಟಿಯಿಂದಲೇ ಹೊರನಡೆದಿದ್ದಾರೆ. ಕೇವಲ ಎಂಪಿ ಎಲೆಕ್ಷನ್‌ನಲ್ಲಿ ಮಾತ್ರವಲ್ಲ, ಅದು ಮುಗಿದು ಐದಾರು ತಿಂಗಳಿಗೆ ಎದುರಾಗುವ ವಿಧಾನಸಭಾ ಚುನಾವಣೆಗೂ ಸೀಟು ಹಂಚಿಕೆಗಳು ಅಂತಿಮವಾಗಿದ್ದು ಬಿಜೆಪಿ ಮತ್ತು ಶಿವಸೇನೆ ತಲಾ 144 ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿವೆ. ನೆನಪಿರಲಿ, ಕಳೆದ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಬಿಜೆಪಿ 122 ಸ್ಥಾನ ಗೆದ್ದಿದ್ದರೆ, ಶಿವಸೇನೆಯ 66 ಶಾಸಕರಷ್ಟೇ ಆಯ್ಕೆಯಾಗಿದ್ದರು. 122 ಸ್ಥಾನ ಗೆದ್ದ ಪಕ್ಷ ಈಗ 66 ಸ್ಥಾನ ಗೆದ್ದ ಪಕ್ಷಕ್ಕೆ ಸಮಪಾಲು ಕೊಡಲು ಸಮ್ಮತಿಸಿಯೆಂದರೆ ಬಿಜೆಪಿ ಮೈತ್ರಿಯಲ್ಲಿ ಸಂಪೂರ್ಣವಾಗಿ ಬಗ್ಗಿದೆ ಅಂತಲೇ ಅರ್ಥ. ಪಕ್ಕದ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಗಣನೀಯ ಸಂಖ್ಯೆಯಲ್ಲಿ ಸ್ಥಾನಗಳನ್ನು ಕಳೆದುಕೊಳ್ಳಲಿರುವುದು ಖಾತ್ರಿಯಾಗಿರುವುದರಿಂದಲೇ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಬಿಟ್ಟುಕೊಟ್ಟು ಉಳಿಸಿಕೊಳ್ಳುವ ರಕ್ಷಣಾತ್ಮಕ ಆಟ ಅನಿವಾರ್ಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...