Homeನ್ಯಾಯ ಪಥಮೋದಿ ಮತ್ತೆ ಪ್ರಧಾನಿಯಾಗಲಾರರು ಎಂಬ ಸುಳಿವು ನೀಡುತ್ತಿದೆಯೇ ಬಿಜೆಪಿ-ಶಿವಸೇನೆ ಮೈತ್ರಿ?

ಮೋದಿ ಮತ್ತೆ ಪ್ರಧಾನಿಯಾಗಲಾರರು ಎಂಬ ಸುಳಿವು ನೀಡುತ್ತಿದೆಯೇ ಬಿಜೆಪಿ-ಶಿವಸೇನೆ ಮೈತ್ರಿ?

- Advertisement -
- Advertisement -

ಗಿರೀಶ್ ತಾಳಿಕಟ್ಟೆ |

ಬಿಜೆಪಿ ಮತ್ತು ಶಿವಸೇನೆ ಮತ್ತೆ ಮೈತ್ರಿ ಮಾಡಿಕೊಂಡಿವೆ. ಇವೆರಡೂ ಅವಲಂಬಿಸಿರುವ ವೋಟ್ ಬ್ಯಾಂಕ್ ರಾಜಕಾರಣ ಬಲ್ಲವರಿಗೆ ಇದರಲ್ಲಿ ಅಚ್ಚರಿ ಪಡುವಂತದ್ದೇನೂ ಇಲ್ಲ. ಯಾಕೆಂದರೆ ಈ ಎರಡೂ ಪಕ್ಷಗಳಿಗೆ ‘ಹಿಂದೂತ್ವ’ವೇ ಬಂಡವಾಳ. ಒಂದೇ ಬಂಡವಾಳವನ್ನು ಇಬ್ಬರು ಹಂಚಿಕೊಂಡರೆ ಬರುವ ಲಾಭವೂ ಕಡಿಮೆ ಎಂಬುದು ಕಾಮನ್‌ಸೆನ್ಸ್. ಆ ನಿಟ್ಟಿನಿಂದ ಸುಮಾರು ಎರಡು ದಶಕಗಳ ಈ ಹಳೇ ಮಿತ್ರರ ಮರುಮೈತ್ರಿ ಅಚ್ಚರಿ ಹುಟ್ಟಿಸುವುದಿಲ್ಲ. ಆದಾಗ್ಯೂ ಬಿಜೆಪಿ-ಶಿವಸೇನೆ ಮೈತ್ರಿ ರಾಷ್ಟ್ರ ರಾಜಕಾರಣದಲ್ಲಿ ಬೇರೊಂದು ಆಯಾಮದಿಂದ ಗಮನ ಸೆಳೆಯುತ್ತದೆ. ಅದು ಮೋದಿಯವರ ರಾಜಕೀಯ ಭವಿಷ್ಯಕ್ಕೆ ಸಂಬಂಧಪಟ್ಟದ್ದು.

ಬಹುಶಃ ಇತ್ತೀಚಿನ ವರ್ಷಗಳಲ್ಲಿ ಮೋದಿಯವರನ್ನು ಮತ್ತು ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗಿಂತಲೂ ಕಟುವಾಗಿ ಟೀಕಿಸುತ್ತಾ ಬಂದದ್ದು ಶಿವಸೇನೆ. ರಾಮಮಂದಿರ ನಿರ್ಮಾಣದ ವಿಚಾರ ಇರಬಹುದು, ರಫೇಲ್ ಹಗರಣವಿರಬಹುದು, ಪಾಕಿಸ್ತಾನದೊಂದಿಗೆ ವಿದೇಶಾಂಗ ನೀತಿಗಳಿರಬಹುದು ಎಲ್ಲಾ ವಿಚಾರಗಳಲ್ಲೂ ಶಿವಸೇನೆ ಮೋದಿಯವರ ಕಾಲೆಳೆಯುವ ಅವಕಾಶವನ್ನು ಮಿಸ್ ಮಾಡಿಕೊಂಡಿಲ್ಲ. ಎಷ್ಟರಮಟ್ಟಿಗೆ ಅಂದರೆ, ರಾಹುಲ್ ಗಾಂಧಿಯವರ ಪಾಪ್ಯುಲರ್ ಸ್ಲೋಗನ್ ಆದ ‘ಚೌಕಿದಾರ್ ಹೀ ಚೋರ್ ಹೈ’ ಹೇಳಿಕೆಯನ್ನು ಶಿವಸೇನೆಯ ಸುಪ್ರಿಮೋ ಉದ್ಧವ್ ಠಾಕ್ರೆ ಬಹಿರಂಗವಾಗಿ ಪುನರುಚ್ಚರಿಸಿ ಬಿಜೆಪಿಯನ್ನು ಹಂಗಿಸಿದ್ದರು. ಮಹಾರಾಷ್ಟ್ರದ ಬಿಜೆಪಿ ಸಿಎಂ ದೇವೇಂದ್ರ ಫಡ್ನವೀಸ್‌ರವರು ‘ಪ್ರಧಾನಿ ಮೋದಿಯನ್ನು ಟೀಕಿಸುವುದೆಂದರೆ ಸೂರ್ಯನಿಗೆ ಉಗಿದಂತೆ. ಉಗಳು ಯಾರ ಮೇಲೆ ಬೀಳುತ್ತೆ ಅಂತ ಟೀಕಿಸುವವರಿಗೆ ಗೊತ್ತಿರಬೇಕು’ ಎಂದು ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದರು. ಇದೆಲ್ಲ ನಡೆದದ್ದು ತೀರಾ ಇತ್ತೀಚೆಗಷ್ಟೆ. ಇನ್ನು ತೆಲುಗುದೇಶಂ ಪಾರ್ಟಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧದ ಎಲ್ಲಾ ಪಕ್ಷಗಳ ಪ್ರತಿಭಟನೆಗೂ ಶಿವಸೇನೆ ತನ್ನ ಪ್ರತಿನಿಧಿಯನ್ನು ಕಳಿಸಿಕೊಟ್ಟಿತ್ತು. ಅಷ್ಟೆಲ್ಲಾ ಯಾಕೆ, ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ‘ಉಗ್ರರನ್ನು ಮಟ್ಟಹಾಕಲು ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ’ ಎಂದು ಬಿಜೆಪಿ ಪ್ರಚಾರಕ್ಕೆ ಮುಂದಾದಾಗ ಇದೇ ಉದ್ಧವ್ ಠಾಕ್ರೆ ’ಸೈನಿಕರ ಬಲಿದಾನವನ್ನು ಬಿಜೆಪಿ ಹೀಗೆ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಹೇಯ ಕೃತ್ಯ’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಉದ್ದವ್ ಠಾಕ್ರೆ, ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಮತ್ತು ದೇವೇಂದ್ರ ಫಡ್ನವೀಸ್ ಕೈಕೈಹಿಡಿದು ಮೈತ್ರಿಯನ್ನು ಸಾರಿದರು!

ಇಲ್ಲಿ ಶಿವಸೇನೆ ಎಂಬ ಪ್ರಾದೇಶಿಕ ಪಕ್ಷವೊಂದರ sudden shift over, ಅದರ ನುಡಿ ಮತ್ತು ನಡೆಗಳಿಗಿಂತಲೂ ಹೆಚ್ಚಾಗಿ, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷವೊಂದು ತನ್ನನ್ನು ಮತ್ತು ತನ್ನ ಪ್ರಧಾನಿಯನ್ನು ಕೊನೇ ಕ್ಷಣದವರೆಗು ಕಾಡಿದ ಪಾರ್ಟಿಯನ್ನು ಸಹಿಸಿಕೊಳ್ಳುವ ತೀರ್ಮಾನ ಕೈಗೊಂಡಿದ್ದೇಕೆ? ಎಂಬುದು ಇಂಟರೆಸ್ಟಿಂಗ್ ವಿಷಯ. ನೋ ಡೌಟ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಂತಹ ‘ಹಿಂದಿ ಹಾರ್ಟ್‌ಲ್ಯಾಂಡ್’ ಚುನಾವಣೆಗಳಲ್ಲಿ ಸೋತ ನಂತರ ಬಿಜೆಪಿಗೆ ರಾಜಕೀಯ ಪರಿಸ್ಥಿತಿಯ ಅಂದಾಜು ಸಿಕ್ಕಿದೆ ಮತ್ತು ಆ ಅಂದಾಜಿನ ಪ್ರಕಾರ 2019ರ ಎಲೆಕ್ಷನ್‌ನಲ್ಲಿ ಕಳೆದ ಸಾರಿಯಂತೆ ತಾನು ಒಂಟಿಯಾಗಿ ಅಧಿಕಾರ ರಚಿಸಲು ಸಾಧ್ಯವಿಲ್ಲ ಎಂಬುದು ಮನದಟ್ಟಾಗಿದೆ. ಮಿತ್ರಪಕ್ಷಗಳ ಮೈತ್ರಿ ಅನಿವಾರ್ಯತೆ ಬಿಜೆಪಿಗೆ ಮನದಟ್ಟಾಗಿರುವುದರಿಂದಲೇ ಈಗ ಶಿವಸೇನೆ, ಎಐಎಡಿಎಂಕೆಗಳ ಜೊತೆ ಕೈಜೋಡಿಸುತ್ತಿದೆ. ಇದು ಬಿಜೆಪಿ-ಶಿವಸೇನೆ ಮೈತ್ರಿಗೆ ಸಿಗುವ ಸೀದಾಸಾದಾ ಪೊಲಿಟಿಕಲ್ ವಿಶ್ಲೇಷಣೆ. ನಿರ್ದಿಷ್ಟವಾಗಿ ಶಿವಸೇನೆಯ ವಿಚಾರಕ್ಕೆ ಬಂದರೆ, ಇದನ್ನೂ ಮೀರಿದ ರಾಜಕೀಯ ಲೆಕ್ಕಾಚಾರವೊಂದು ನಮ್ಮ ಗಮನಕ್ಕೆ ಬರುತ್ತದೆ. ಅದು ನಮಗೆ ಅರ್ಥವಾಗಬೇಕೆಂದರೆ ಶಿವಸೇನೆ-ಬಿಜೆಪಿ ನಡುವಿನ ಮೈತ್ರಿ ಯಾಕೆ ಮುರಿದುಬಿದ್ದಿತ್ತು ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು.

1960ರಲ್ಲಿ ಮಹಾರಾಷ್ಟ್ರ ಸ್ವತಂತ್ರ ರಾಜ್ಯವಾಗಿ ಉದಯಿಸಿದ ಮೇಲೆ ಬಹುಪಾಲು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮಿತ್ರಕೂಟಗಳೇ ಆ ರಾಜ್ಯವನ್ನು ಆಳಿವೆ. ಅಂಥಾ ಪ್ರತಿಕೂಲ ಪರಿಸ್ಥಿತಿ ನಡುವೆಯೂ 1995ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಲು ಶಿವಸೇನೆಗೆ ಸಾಧ್ಯವಾದದ್ದು ಬಿಜೆಪಿ ಜೊತೆಗಿನ ಮೈತ್ರಿಯಿಂದ. ಅಲ್ಲಿಂದ ಶುರುವಾದ ಆ ದೋಸ್ತಿ ಎರಡು ದಶಕಗಳ ಕಾಲ ನಿರಾತಂಕವಾಗಿ ಮುಂದುವರೆದಿತ್ತು. ಹಾಗೆ ನೋಡಿದರೆ, ಶಿವಸೇನೆಯ ಹೆಗಲೇರಿಕೊಂಡೇ ಬಿಜೆಪಿ ಮಹಾರಾಷ್ಟ್ರದಲ್ಲಿ ಗಟ್ಟಿ ನೆಲೆಕಂಡುಕೊಳ್ಳಲು ಸಾಧ್ಯವಾದದ್ದು. ಆದರೆ 2014ರ ಲೋಕಸಭಾ ಚುನಾವಣೆಯ ತರುವಾಯ ದೋಸ್ತಿಯೊಳಗೆ ಹಳೆಯ ವಿಶ್ವಾಸ ಉಳಿದುಕೊಳ್ಳಲಿಲ್ಲ. ಅದಕ್ಕೆ ಕಾರಣವಾದದ್ದು ಮೋದಿಯವರ Personal ego!

ಎಂಪಿ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿ ಬಿಜೆಪಿ ಪ್ರಚಂಡ ಜಯಸಾಧಿಸಿದ್ದು ಮೋದಿ ಕೇಂದ್ರಿತ ಚುನಾವಣಾ ಪ್ರಚಾರದಿಂದ. ಹಾಗಾಗಿ ಮೋದಿ ಪಕ್ಷದೊಳಗೆ ಬಲಾಢ್ಯವಾಗುತ್ತಾ ಬಂದರು. ಅಡ್ವಾಣಿಯಂತಹ ಹಿರಿಯ ನಾಯಕರೂ ದನಿ ಕಳೆದುಕೊಂಡರು. ಪಕ್ಷದೊಳಗಿನ ನಾಯಕರೇ ಮಂಕಾಗಿರಬೇಕೆಂದು ಬಯಸುತ್ತಿದ್ದ ಮೋದಿಯವರಲ್ಲಿ ಮಿತ್ರಪಕ್ಷಗಳ ಬಗ್ಗೆಯೂ ಆದರ ಉಳಿಯಲಿಲ್ಲ. ಅದರ ಮೊದಲ ಬಲಿಪಶು ಈ ಶಿವಸೇನೆ. ಎಂಪಿ ಎಲೆಕ್ಷನ್ ಗೆಲುವಿನ ಹ್ಯಾಂಗ್‌ಹೋವರ್ ಇಳಿಯುವ ಮುನ್ನವೇ ಅಂದರೆ, ಆರು ತಿಂಗಳ ಒಳಗೇ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಎದುರಾಯ್ತು. ಇದೇ ಗೆಲುವಿನ ಅಲೆಯಲ್ಲಿ, ಸ್ವತಂತ್ರವಾಗಿ ಸ್ಪರ್ಧಿಸಿದರೂ ಮಹಾರಾಷ್ಟ್ರದಲ್ಲಿ ಸುಸೂತ್ರವಾಗಿ ಅಧಿಕಾರ ಹಿಡಿದುಬಿಡುತ್ತೇವೆ ಎಂಬ ಲೆಕ್ಕಾಚಾರದಲ್ಲಿ ಮೋದಿ-ಶಾ ಜೋಡಿ ಶಿವಸೇನೆ ಜೊತೆಗಿನ ಸೀಟು ಹೊಂದಾಣಿಕೆಯಲ್ಲಿ ತಕರಾರು ಬರುವಂತೆ ನೋಡಿಕೊಂಡಿತು. ಒಳಗೊಳಗೇ ಸ್ವತಂತ್ರವಾಗಿ ಚುನಾವಣೆ ಎದುರಿಸಲು ಏನೆಲ್ಲ ತಯಾರಿಗಳು ಬೇಕೊ ಅದನ್ನೆಲ್ಲ ಬಿಜೆಪಿ ಮಾಡಿಕೊಳ್ಳುತ್ತಿದ್ದರೂ ಸೀಟು ಹಂಚಿಕೆಯ ಮಾತುಕತೆಯನ್ನು ಚಾಲ್ತಿಯಲ್ಲಿಟ್ಟಯ. ಚುನಾವಣೆ ಘೋಷಣೆಗೆ ಇನ್ನು ಹದಿನೈದು ದಿನ ತಾನೇ  ಅಧಿಕೃತವಾಗಿ ಮೈತ್ರಿಯನ್ನು ಮುರಿದುಕೊಳ್ಳುವಂಥ ಪರಿಸ್ಥಿತಿ ಬರುವವರೆಗೂ ಶಿವಸೇನೆ ಸೀಟು ಹಂಚಿಕೆ ಕಗ್ಗಂಟು ಬಗೆಹರಿಯುತ್ತೆ ಎಂಬ ವಿಶ್ವಾಸದಲ್ಲೇ ಇತ್ತು. ಆದರೆ ಅದು ಸುಳ್ಳಾಯ್ತು. ಮೈತ್ರಿ ಮುರಿದುಬಿತ್ತು. ಇಂಥಾ ಪರಿಸ್ಥಿತಿಗೆ ಸಿದ್ಧವಾಗಿದ್ದ ಬಿಜೆಪಿ ಒಟ್ಟು 288 ಕ್ಷೇತ್ರಗಳ ಪೈಕಿ 262ರಲ್ಲಿ ಸ್ಪರ್ಧಿಸಿ 122 ಸ್ಥಾನ ಗೆದ್ದು ಬಹುದೊಡ್ಡ ಪಕ್ಷವಾಗಿ ಹೊಮ್ಮಿದರೆ, ಸ್ವತಂತ್ರ ಸ್ಪರ್ಧೆಗೆ ಯಾವ ತಯಾರಿಯನ್ನೂ ಮಾಡಿಕೊಳ್ಳದ ಶಿವಸೇನೆ 282 ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಗೆದ್ದದ್ದು 66 ಸ್ಥಾನ ಮಾತ್ರ!

ಆನಂತರವೂ ಸಂಖ್ಯಾಬಲವಿಲ್ಲದ ಬಿಜೆಪಿ ಮೈತ್ರಿಗಾಗಿ ಎನ್.ಸಿ.ಪಿ.ಯ ಶರದ್ ಪವಾರ್‌ರನ್ನು ವಿಶ್ವಾಸಕ್ಕೆ ತೆಗೆದುಕೊಂಡಿತೇ ವಿನಾಃ ಶಿವಸೇನೆಯನ್ನಲ್ಲ. ‘ಯಜಮಾನಿಕೆ’ ಧೋರಣೆ ಮೇಲೆಯೇ ಪಕ್ಷ ಕಟ್ಟಿಕೊಂಡ ಶಿವಸೇನೆ ನಾಯಕರಿಗೆ ಇದು ತಮಗೆ ಮಾಡಿದ ದೊಡ್ಡ ಅವಮಾನದಂತೆ ಭಾಸವಾದುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅಲ್ಲಿಂದಾಚೆಗೆ ಮೋದಿ ಮತ್ತು ಶಿವಸೇನೆಯ ಸಂಬಂಧ ಬಿಗಡಾಯಿಸುತ್ತಲೇ ಬಂದಿತು. ‘ಹಿಂದೂತ್ವ’ವನ್ನೇ ತನ್ನ ಅಜೆಂಡಾವಾಗಿಸಿಕೊಂಡಿರುವ ಶಿವಸೇನೆಗೆ ಅದೇ ಸಿದ್ಧಾಂತದ ಬಿಜೆಪಿ ಜೊತೆ ಮುನಿಸಿಕೊಳ್ಳಲು ಬೇರಾವ ಕಾರಣಗಳೂ ಇಲ್ಲ, ಏಕೈಕ ಕಾರಣ ಅದು ಮೋದಿಯವರ egoistic ವರ್ತನೆ! ಪ್ರಧಾನಿ ಭೇಟಿಗೆ ದಿನಾಂಕಕ್ಕಾಗಿ ಸತತ ಒಂದು ತಿಂಗಳು ಸತಾಯಿಸಿಕೊಂಡು ಸಿಟ್ಟಿಗೆದ್ದು ಮೈತ್ರಿಯಿಂದ ಹೊರಬಂದ ಚಂದ್ರಬಾಬು ನಾಯ್ಡು ಒಳಗೊಂಡು ಬಹುತೇಕ ಮಿತ್ರ ಪಕ್ಷಗಳು ಎನ್ ಡಿ ಎ ತೊರೆಯಲು ಇದೇ ಮುಖ್ಯ ಕಾರಣ. ಸ್ವತಃ ಬಿಜೆಪಿ ನಾಯಕರೇ ಮೋದಿಯವರ ಈ ಆಟಿಟ್ಯೂಡ್ ಬಗ್ಗೆ ಅಸಮಾಧಾನ ಹೊಂದಿರುವುರಾದರು ಪಕ್ಷಕ್ಕೆ ಡ್ಯಾಮೇಜ್ ಮಾಡಬಾರದೆನ್ನುವ ಉದ್ದೇಶದಿಂದ, (ಅಥವಾ ಅಸಹಾಯಕತೆಯಿಂದಲೂ ಇರಬಹುದು), ಸಹಿಸಿಕೊಂಡಿದ್ದಾರೆ.

ಈಗ ಪ್ರಸ್ತುತ ವಿದ್ಯಮಾನದ ಒಳಗುಟ್ಟು ನಮಗೆ ಅರ್ಥವಾಗುತ್ತೆ. ಯಾವ ಮೋದಿಯವರನ್ನು ಶಿವಸೇನೆ ವಿರೋಧಿಸುತ್ತಿತ್ತೊ ಅದೇ ಮೋದಿಯ ಕೈಬಲಪಡಿಸಲು ಮೈತ್ರಿ ಮಾಡಿಕೊಳ್ಳುತ್ತದಾ? ಯಾವ ಲಾಜಿಕ್ಕೂ ಇದನ್ನು ಸಮರ್ಥಿಸುವುದಿಲ್ಲ. ಆದರೆ ಈ ಗೊಂದಲಕ್ಕೆ ಉತ್ತರವಾಗಿ ನಿಲ್ಲುವ ಹೆಸರು ನಿತಿನ್ ಗಡ್ಕರಿ! ಬಿಜೆಪಿಯೊಳಗೆ ನಿತಿನ್ ಗಡ್ಕರಿ ಹೆಸರು ಮುನ್ನೆಲೆಗೆ ಬರುತ್ತಿರುವ ಕಾಲದಲ್ಲೇ ಶಿವಸೇನೆ ಮೈತ್ರಿಗೆ ಓಕೆ ಎಂದಿರುವುದು ಕೇವಲ ಕಾಕತಾಳೀಯವಲ್ಲ. ಅದರ ಹಿಂದೆ ಸ್ಪಷ್ಟ ಲೆಕ್ಕಾಚಾರಗಳಿವೆ. ಮೋದಿ-ಶಾ ವಿರುದ್ಧ ಬಿಜೆಪಿಯಲ್ಲಿ ಅಪಸ್ವರಕ್ಕೆ ಆಸ್ಪದವೇ ಇಲ್ಲ ಎನ್ನುವಂತಿದ್ದ ವಾತಾವರಣದಲ್ಲಿ ನಿತಿನ್ ಗಡ್ಕರಿ ‘ಮೂರು ರಾಜ್ಯಗಳ ಚುನಾವಣಾ ಸೋಲಿಗೆ ಬಿಜೆಪಿ ಅಧ್ಯಕ್ಷರೇ ಹೊಣೆ ಹೊತ್ತುಕೊಳ್ಳಬೇಕು’, ‘ತನ್ನ ಸಂಸಾರವನ್ನು ಸಾಕಲಾಗದ ವ್ಯಕ್ತಿ ದೇಶವನ್ನು ಹೇಗೆ ಮುನ್ನಡೆಸಿಯಾನು’ ಎಂಬಿತ್ಯಾದಿ ಕಾಂಟ್ರವರ್ಸಿ ಹೇಳಿಕೆಗಳ ಮೂಲಕ ರೆಬೆಲ್ ಆದದ್ದು ಒಂದು ನಿರ್ದಿಷ್ಟ, ನಿರ್ದೇಶಿತ ಉದ್ದೇಶಕ್ಕೆ. 2019ರಲ್ಲಿ ಸರ್ಕಾರ ರಚನೆಗೆ ಮಿತ್ರಪಕ್ಷಗಳು ಅನಿವಾರ್ಯ ಎನಿಸಿದಾಗ, ಯಾವ ಮೋದಿಯವರ ವರ್ತನೆಯನ್ನು ವಿರೋಧಿಸಿ ಅವರೆಲ್ಲ ಹಿಂದೆ ಸರಿದಿದ್ದವೋ ಅದೇ ಮೋದಿಯನ್ನು ಮುಂದಿಟ್ಟುಕೊಂಡು ಬೆಂಬಲ ಕೇಳಿದರೆ ಒಪ್ಪಲಾರವು. ಒಂದು ತಟಸ್ಥ, ಸರ್ವಸಮ್ಮತ ಮುಖವನ್ನು ಮುಂದಿಟ್ಟುಕೊಂಡು ಮೈತ್ರಿಗೆ ಮುಂದಾಗಬೇಕು ಎನ್ನುವ ಯೋಚನೆಯಿಂದಲೇ ಮೋದಿಗೆ ಪರ್ಯಾಯವಾಗಿ ನಾಗ್ಪುರದ ಲಿಂಕುಗಳು ಚೆನ್ನಾಗಿರುವ ನಿತಿನ್ ಗಡ್ಕರಿಯನ್ನು ಪೋಷಿಸಲಾಗುತ್ತಿದೆ. ಇದು ಈಗ ರಹಸ್ಯವಾಗೇನೂ ಉಳಿದಿಲ್ಲ.

‘ಮುಂದಿನ ಸಲ ಯಾರ ಹಂಗೂ ಇಲ್ಲದ ಸ್ಥಿರ ಸರ್ಕಾರ ರಚಿಸಲು ಸಾಧ್ಯವಾಗದೇ ಹೋದರೆ (ಮಿತ್ರ ಪಕ್ಷಗಳ ಮರ್ಜಿ ಇಲ್ಲದೆ) ಭಾರತದ ಘನತೆ ವಿಶ್ವದ ಮುಂದೆ ಕುಸಿದು ಬೀಳಲಿದೆ’ ಎಂಬರ್ಥದಲ್ಲಿ ಮೋದಿಯವರು ಇತ್ತೀಚೆಗೆ ಜನರನ್ನು ಅಪ್ರೋಚ್ ಮಾಡಿದ್ದು ಸಹಾ ಸಮ್ಮಿಶ್ರ ಸರ್ಕಾರ ರಚನೆಯಾದರೆ ತನಗೆ ಪ್ರಧಾನಿಯಾಗುವ ಅವಕಾಶ ಸಿಕ್ಕುವುದಿಲ್ಲ ಎಂಬ ಸ್ಪಷ್ಟ ಇರಾದೆಯಿಂದ. ಇತ್ತ ಮೋದಿಯವರು ಮಿತ್ರಪಕ್ಷಗಳ ಮುಲಾಜಿಲ್ಲದ ಸ್ವತಂತ್ರ ಬಿಜೆಪಿಯ ಸರ್ಕಾರಕ್ಕಾಗಿ ಜನರ ಬಳಿ ಬೇಡಿಕೆ ಇಡುತ್ತಿದ್ದರೆ, ಅತ್ತ ಅವರ ಆಪ್ತರಾದ ಅಮಿತ್ ಶಾ ಪಕ್ಷದ ಅಧ್ಯಕ್ಷಾಗಿರುವ ಕಾರಣಕ್ಕೆ ಅನಿವಾರ್ಯವಾಗಿ ತಾನೆ ಮುಂದೆ ನಿಂತು ಮಿತ್ರಪಕ್ಷಗಳ ಜೊತೆಗೆ ಹೊಂದಾಣಿಕೆಗೆ ಓಡಾಡಬೇಕಿದೆ.

ಶಿವಸೇನೆಗು ಸಹಾ ಪ್ರಧಾನಿ ಹುದ್ದೆಯಿಂದ ಮೋದಿಯವರನ್ನು ದೂರ ಇರಿಸುವ ಭರವಸೆ ಕೊಟ್ಟು, ಉದ್ಧವ್ ಠಾಕ್ರೆ ಸೇರಿದಂತೆ ಬಹುಪಾಲು ಮಿತ್ರಪಕ್ಷಗಳ ಜೊತೆ ಒಳ್ಳೆಯ ಒಡನಾಟವಿರುವ ಗಡ್ಕರಿಯವರನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಪ್ರಪೋಸ್ ಮಾಡಿರುವುದರಿಂದಲೇ ಹಳೆಯ ಸಿಟ್ಟನ್ನೆಲ್ಲ ಮರೆತು ಮೈತ್ರಿಗೆ ಸಮ್ಮತಿಸಿದೆ ಎಂದು ಶಿವಸೇನೆಯ ಒಳಮೂಲಗಳೇ ತಿಳಿಸುತ್ತಿವೆ. ಇಂತಹ ಒಂದು ಸ್ಪಷ್ಟ ನೀಲನಕ್ಷೆ ಇರುವ ಕಾರಣಕ್ಕೇ ಅವತ್ತು ಮೈತ್ರಿಯನ್ನು ಘೋಷಿಸುವ ಸಮಯದಲ್ಲಿ ಉದ್ದೇಶಪೂರ್ವಕವಾಗಿ ನಿತಿನ್ ಗಡ್ಕರಿಯವರ ಮುಖ ಕಾಣದಂತೆ ನೋಡಿಕೊಳ್ಳಲಾಯಿತು. ಈ ಮೈತ್ರಿ ಗಡ್ಕರಿಯವರ ಫಲಶ್ರುತಿ ಎಂಬುದು ಬಹಿರಂಗವಾಗಿಬಿಟ್ಟರೆ ಪಕ್ಷದೊಳಗಿನ ಲೆಕ್ಕಾಚಾರಗಳು ಬಯಲಾಗುವುದಲ್ಲದೆ, ಕಾರ್ಯಕರ್ತರಲ್ಲಿ ಗೊಂದಲ ಮೂಡುವ, ಆತ್ಮವಿಶ್ವಾಸ ಕುಗ್ಗುವ ಸಾಧ್ಯತೆ ಇರುತ್ತೆ ಎಂಬುದೇ ಅವತ್ತಿನ ಗಡ್ಕರಿ ಅನುಪಸ್ಥಿತಿಯ ಅಸಲೀ ಕಾರಣ. ಇಲ್ಲವಾಗಿದ್ದರೆ ತನ್ನದೇ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಮಹತ್ವದ ಬೆಳವಣಿಗೆಗೆ ಅವರು ಗೈರು ಹಾಜರಾಗುವ ಕಾರಣವೇ ಇಲ್ಲ.

ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಇದು ಕೇವಲ ಮೈತ್ರಿ ಮಾತ್ರವಲ್ಲ. ಶಿವಸೇನೆಯ ಮುಂದೆ ಬಿಜೆಪಿ ಸಂಪೂರ್ಣವಾಗಿ ಮಂಡಿ ಊರಿದಂತ ಪರಿಸ್ಥಿತಿ. ಈಗಿನ ಹಂಚಿಕೆಯ ಪ್ರಕಾರ ಒಟ್ಟು ೪೮ ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 25 ಮತ್ತು ಶಿವಸೇನೆ 23 ಸ್ಥಾನಗಳಲ್ಲಿ ಸ್ಪರ್ಧಿಸುವುದೆಂದು ನಿಕ್ಕಿಯಾಗಿದೆ. ಶಿವಸೇನೆ ಭಾಳಾ ಠಾಕ್ರೆಯವರ ನೇತೃತ್ವದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೂ ಮೈತ್ರಿಯಲ್ಲಿ ಅದಕ್ಕೆ ಇಷ್ಟು ಸೀಟುಗಳು ಲಭಿಸಿದ್ದಿಲ್ಲ. ರಾಷ್ಟ್ರೀಯ ಪಕ್ಷವಾದ ಬಿಜೆಪಿ 26-28 ಸ್ಥಾನಗಳನ್ನಿಟ್ಟುಕೊಂಡರೆ ಶಿವಸೇನೆಗೆ 18-19 ಸ್ಥಾನಗಳಷ್ಟೇ ಸಿಗುತ್ತಿದ್ದವು. ಹಾಲಿ ಬಿಜೆಪಿ ಸಂಸದರೇ ಗೆದ್ದು ಪ್ರತಿನಿಧಿಸುತ್ತಿರುವ ಪಾಲ್ಗರ್ ಕ್ಷೇತ್ರವನ್ನೂ ಶಿವಸೇನೆ ಬಿಜೆಪಿಯಿಂದ ತನ್ನ ಪಾಲಿಗೆ ತೆಗೆದುಕೊಳ್ಳಲು ಯಶಸ್ವಿಯಾಗಿದ್ದು, ಇದರಿಂದ ಬೇಸರಗೊಂಡ ಸುಮಾರು 50 ಬಿಜೆಪಿ ಕಾರ್ಯಕರ್ತರು ಪಾರ್ಟಿಯಿಂದಲೇ ಹೊರನಡೆದಿದ್ದಾರೆ. ಕೇವಲ ಎಂಪಿ ಎಲೆಕ್ಷನ್‌ನಲ್ಲಿ ಮಾತ್ರವಲ್ಲ, ಅದು ಮುಗಿದು ಐದಾರು ತಿಂಗಳಿಗೆ ಎದುರಾಗುವ ವಿಧಾನಸಭಾ ಚುನಾವಣೆಗೂ ಸೀಟು ಹಂಚಿಕೆಗಳು ಅಂತಿಮವಾಗಿದ್ದು ಬಿಜೆಪಿ ಮತ್ತು ಶಿವಸೇನೆ ತಲಾ 144 ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿವೆ. ನೆನಪಿರಲಿ, ಕಳೆದ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಬಿಜೆಪಿ 122 ಸ್ಥಾನ ಗೆದ್ದಿದ್ದರೆ, ಶಿವಸೇನೆಯ 66 ಶಾಸಕರಷ್ಟೇ ಆಯ್ಕೆಯಾಗಿದ್ದರು. 122 ಸ್ಥಾನ ಗೆದ್ದ ಪಕ್ಷ ಈಗ 66 ಸ್ಥಾನ ಗೆದ್ದ ಪಕ್ಷಕ್ಕೆ ಸಮಪಾಲು ಕೊಡಲು ಸಮ್ಮತಿಸಿಯೆಂದರೆ ಬಿಜೆಪಿ ಮೈತ್ರಿಯಲ್ಲಿ ಸಂಪೂರ್ಣವಾಗಿ ಬಗ್ಗಿದೆ ಅಂತಲೇ ಅರ್ಥ. ಪಕ್ಕದ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಗಣನೀಯ ಸಂಖ್ಯೆಯಲ್ಲಿ ಸ್ಥಾನಗಳನ್ನು ಕಳೆದುಕೊಳ್ಳಲಿರುವುದು ಖಾತ್ರಿಯಾಗಿರುವುದರಿಂದಲೇ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಬಿಟ್ಟುಕೊಟ್ಟು ಉಳಿಸಿಕೊಳ್ಳುವ ರಕ್ಷಣಾತ್ಮಕ ಆಟ ಅನಿವಾರ್ಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...