Homeಅಂಕಣಗಳುನೀರ ನಡೆ | ಡಾ : ವಿನಯಾ ಒಕ್ಕುಂದಹಿಂಸೆಯೆಂಬುದು ಹಾದಿ ಹಾಡು

ಹಿಂಸೆಯೆಂಬುದು ಹಾದಿ ಹಾಡು

- Advertisement -
- Advertisement -

ಇತ್ತೀಚಿನ ದಿನಮಾನಗಳು ಮನುಷ್ಯ ಸಮಾಜದಲ್ಲಿ ಹಬ್ಬುತ್ತಿರುವ ಹಿಂಸಾರತಿಗೆ ಪುರಾವೆಗಳಾಗುತ್ತಿವೆ ಆವತ್ತು, ದಾಂಡೇಲಿಯ ನಟ್ಟನಡುರಸ್ತೆ ಮನುಷ್ಯ ರಕ್ತವನ್ನು ಹೊಯ್ದುಕೊಂಡು ಜಿಗುಟಾದ, ಕಮಟು ವಾಸನೆಯ ಬೆಳಗು- ಕಾಲೇಜಿಗೆ ಬಂದ ಮಕ್ಕಳ ಮುಖವನ್ನು ತಡಕಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ನಿರ್ಣಯಾತ್ಮಕ ಅಧಿಕಾರವನ್ನು ಪಡೆದ ‘ದೊಡ್ಡ ಮಕ್ಕಳಿವರು’. ಇವರು ಸಮಾಜದ ನಡೆ-ನೀತಿಗಳನ್ನು ಸ್ಪಷ್ಟವಾಗಿ ಪ್ರತಿಫಲಿಸುವ ಕನ್ನಡಿಗಳು. ಹಾಗಾಗಿ ಇವರನ್ನು ‘ನನ್ನ ವಿಶ್ವವಿದ್ಯಾಲಯ’ಗಳು ಎಂದು ತಿಳಿಯುವುದು. ಈ ಮಕ್ಕಳಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳಲ್ಲಿ ಒಂದಿಷ್ಟು ಭಯ, ಅಚ್ಚರಿಗಳಿದ್ದ ಹಾಗಿತ್ತು. ಆದರೆ ಬಹುಪಾಲು ಹುಡುಗರು ಅದೆಂಥದೋ ಅವ್ಯಕ್ತ ಥ್ರಿಲ್‍ನಲ್ಲಿದ್ದರು. ಅದು ಖಂಡಿತ, ಮಜ ಉಡಾಯಿಸುವ ಸಂತಸವನ್ನು ವ್ಯಕ್ತಿಸುವ ಭಾವವಾಗಿರಲಿಲ್ಲ. ಆದರದು ಜೀವಕಲಕಿದ ವಿಷಾದವೂ ಆಗಿರಲಿಲ್ಲ. ಕಾಗೆಯೊಂದು ಸತ್ತುಬಿದ್ದರೆ, ಜೊತೆ ಕಾಗೆಗಳು ಕಾ ಕಾ ಎಂದು ವಾತಾವರಣವನ್ನು ಕಲಕಿಬಿಡುತ್ತವಲ್ಲ… ಅಂತಹ ಯಾವ ಗದ್ದಲವೂ ಅವರ ಮನಸ್ಸಿನಾಳದಲ್ಲಿರಲಿಲ್ಲ. ಆ ನಂತರದ ಪಿಸುಗುಡುವ ಮಾತುಗಳಲ್ಲಿ, ಕೊಲೆಯ ಕಾರಣವನ್ನು ತಿಳಿಯುವ, ಹೇಳುವ ಅವಸರವಿತ್ತು. ಅದು ಕೊಲೆಯ ಸಮರ್ಥನೆಯಾಗಿ ಅನುವಾದಗೊಳ್ಳುತ್ತಿತ್ತು. ವ್ಯಕ್ತಿಯೊಬ್ಬನ ಆರ್ಥಿಕ-ಸಾಮಾಜಿಕ-ಕಾನೂನಾತ್ಮಕ ದುಂದಾವರ್ತನೆಗಳಿದ್ದರೆ ಅದಕ್ಕೆ ಕೊಲೆಯನ್ನು ಪರಿಹಾರೋಪಾಯ ಎಂದು ರೂಪಿಸಬಹುದೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲು ಸಿದ್ಧರಿರಲಿಲ್ಲ. ಅನ್ಯಾಯವೊಂದು ನಡೆದಿದೆ ಎಂದಾದರೆ, ಅದನ್ನು ಎದುರಿಸುವ ಸರಿದಾರಿಗಳಿಲ್ಲವೆ? ಪ್ರಜಾಪ್ರಭುತ್ವ ವ್ಯವಸ್ಥೆಯು ಕೊಡಮಾಡಿದ ಸೌಲಭ್ಯ ಹಾಗೂ ಹಕ್ಕುಬಾಧ್ಯತೆಗಳ ಫಲಾನುಭವಿಗಳಾದ ವಿದ್ಯಾರ್ಥಿಗಳಿಗೆ, ಕಾನೂನನ್ನು ಕೈಗೆತ್ತಿಕೊಳ್ಳುವುದು ಸಾಮಾಜಿಕ ಅನ್ಯಾಯ ಅಲ್ಲವೇ, ಎಂಬ ಪ್ರಶ್ನೆ ಕಾಡುತ್ತಿರಲಿಲ್ಲ. ಇನ್ನೂ ಅವರ ಮನಸ್ಸನ್ನು ಎಬ್ಬಿದರೆ ಅಲ್ಲಿ, ಕೊಲೆಗಾರನ ಬಗ್ಗೆ ಅನುಕಂಪ ಮತ್ತು ಮೆಚ್ಚುಗೆಯ ಬೀಜಗಳಿದ್ದಂತಿತ್ತು. ಹೌದು, ಅನ್ಯಾಯವನ್ನು ಎದುರಿಸಲು ಸ್ವತಃ ಕಾನೂನನ್ನು ತರಾಟೆಗೆ ತೆಗೆದುಕೊಳ್ಳುವ ‘ಹಿರೋಯಿಸಂ’ನ ಕಲ್ಪಿತವನ್ನು ಸಿನಿಮಾಗಳಂತಹ ಮನರಂಜನಾ ಉದ್ಯಮಗಳು ಧಾರಾಳವಾಗಿ ಉಣಬಡಿಸುತ್ತವೆ. ಅದನ್ನು ಉಂಡುಟ್ಟು ಬೆಳೆದವರು ಪ್ರತಿಯೊಂದು ಹಿಂಸೆಯೂ ಸ್ವಸಮರ್ಥನೆಯ ಪೋಷಾಕು ತೊಟ್ಟಿರುತ್ತದೆನ್ನುವುದನ್ನು ಗ್ರಹಿಸುವುದು ಕಷ್ಟ. ತೀರಾ ಇತ್ತೀಚೆಗೆ ಬಯಲುಸೀಮೆಯ ಸಣ್ಣ ಪಟ್ಟಣವೊಂದರಲ್ಲಿ ವ್ಯಕ್ತಿಯೊಬ್ಬ ಹೆಂಡತಿಯನ್ನು ಶಂಕಿಸಿ ಕೊಲೆಗೈದು ನೆತ್ತರು ಬಸಿಯುತ್ತಿರುವ ರುಂಡವನ್ನು ಕೈಯಲ್ಲಿ ಹಿಡಿದು ಪೊಲೀಸ್ ಸ್ಟೇಷನ್ನಿಗೆ ಶರಣಾದ ಸುದ್ದಿ ಪ್ರಕಟವಾಗಿತ್ತು. ಕೊಲೆಯಾದ ಮತ್ತು ಕೊಲೆಗೈದವರ ನ್ಯಾಯ-ಅನ್ಯಾಯ, ಶೀಲ-ಅಶ್ಲೀಲಗಳ ನಿರೂಪಗಳು ಬೇರೆಬೇರೆಯೇ ಇದ್ದೀತು. ಆದರೆ ಆತನ ಧೈರ್ಯಕ್ಕೆ ಯುವಜನಾಂಗ ಬೇಸ್ತುಬಿದ್ದ ಹಾಗಿತ್ತು. ನ್ಯಾಯಕ್ಕಿರುವ ಬಹುಸಾಧ್ಯತೆಗಳ ಬೇರನ್ನು ಹೀಗೆ ಕತ್ತರಿಸುತ್ತಿದ್ದೇವೆ.
ದೇಶವೀಗ ಹಿಂಸಾರತಿಯಲ್ಲಿ ನಿರತವಾಗಿದೆ. ಜಾತಿಉಲ್ಲಂಘನೆಯನ್ನು ಒಪ್ಪಿಕೊಳ್ಳದ ಮೂಲಭೂತವಾದ, ಮರ್ಯಾದಾ ಹತ್ಯೆಯ ರೂಪ ಪಡೆದಿದೆ. ಕೋಮುವಾದ ಎಂಬ ಜನಾಂಗೀಯ ಭೇದವು ಆಹಾರವನ್ನು, ಆಚರಣೆಯನ್ನು, ಸೌಹಾರ್ದತೆಯನ್ನು ನೆಪ ಮಾಡಿಕೊಂಡು ನಿರ್ಲಜ್ಜವಾದ ಹತ್ಯಾಕಾಂಡಗಳನ್ನು ನಡೆಸಿದೆ. ಈಗ ಅದರ ಮುಂದುವರಿಕೆಯು ಶಂಕಿತರ ಮೇಲಿನ ಗುಂಪುದಾಳಿಯ ವಿರೂಪವನ್ನು ಪಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಸುಶಿಕ್ಷಿತ ನಾಗರಿಕರೆನ್ನಿಸಿಕೊಂಡವರು ಉದ್ದೇಶಪೂರ್ವಕವಾಗಿಯೇ ಸುಳ್ಳು ಸುದ್ದಿಗಳನ್ನು ಹರಡುತ್ತಾರೆ.ಇಂತಹ ಸುದ್ದಿಗಳಿಗೆ, ಅವುಗಳ ಕ್ರಿಯಾತ್ಮಕ ಚಟುವಟಿಕೆಗಳಿಗೆ ಜನರು ಕ್ಷಣಾರ್ಧದಲ್ಲಿ ಸೇರಿಬಿಡುತ್ತಾರೆ. ಶಂಕೆಯೊಂದೇ ಕಾರಣವಾಗಿ, ಬಡಪಾಯಿ ಜೀವಗಳು ಮನುಷ್ಯಕ್ರೌರ್ಯದ ದಾಖಲೆಗಳಾಗಿ ನರಳಿ ಸಾಯುತ್ತವೆ. ದೇಶದಾದ್ಯಂತ ಮರಮರಳಿ ಇಂತಹ ಘಟನೆಗಳು ನಡೆದವು. ಮೇಲ್ನೋಟಕ್ಕೆ ಇವು ಜನರ ಸಹಜ ಆಕ್ರೋಶದ ಆಕಸ್ಮಿಕಗಳು ಎಂಬಂತೆ ಕಾಣುತ್ತವೆ. ಆದರೆ ವಸ್ತುಸ್ಥಿತಿ ಇಷ್ಟು ಸರಳವಾಗಿಲ್ಲ. ಅಕಾರಣವಾಗಿ ಮರಣ ಹೊಂದಿದ ಜೀವಗಳ ಹಿನ್ನೆಲೆಯಲ್ಲಿ ನೋಡಿದಾಗ-ಹಲ್ಲೆಗೀಡಾದ ಬಹುತೇಕರು ದಲಿತರು, ಮುಸ್ಲಿಮರು, ಮಹಿಳೆಯರು ಮತ್ತು ಬಡವರು ಎಂಬುದು ಸಾಮಾಜಿಕ ಆಕ್ರೋಶವು ಯಾರತ್ತ ಮತ್ತು ಯಾಕೆ ಹೊರಳಿದೆಯೆಂದು ಖಚಿತಪಡಿಸುತ್ತಿದೆ. ಇವರಲ್ಲದೆ, ಸಮಾಜದ ಹರಕು ಹೊಲಿಯಲು ತಮ್ಮ ಜೀವವನ್ನು ದಾರವಾಗಿ ಪೋಣಿಸುತ್ತಿರುವವರ ಮೇಲಿನ ಹಲ್ಲೆ-ಹತ್ಯೆಗಳು ಈ ಹಿಂಸೋನ್ಮಾದದ ಮತ್ತೊಂದು ಮಾದರಿಗಳು. ಸ್ವಾಮಿ ಅಗ್ನಿವೇಶ್ ಮೇಲೆ ನಡೆದ ಹಲ್ಲೆ ಇಂತಹ ಇತ್ತೀಚಿನ ನಿದರ್ಶನ. ಇಂತಹ ದಾಳಿಗಳನ್ನು ತಡೆಯಬಹುದಾದ, ತಪ್ಪಿತಸ್ಥರನ್ನು ಶಿಕ್ಷಿಸಬೇಕಾದ ಕಾನೂನು ಪಾಲಕರು ತೋರುತ್ತಿರುವ ಅಸಡ್ಡೆ ಕೂಡ ಗಾಬರಿ ಬೀಳಿಸುವಂತಿದೆ. ತಮ್ಮ ಮೇಲೆ ಹಲ್ಲೆ ನಡೆದ 18 ದಿನಗಳ ನಂತರವೂ ಹಲ್ಲೆಗಾರರು ಯಾರು ಎಂಬ ಸರಿಯಾದ ಅಂದಾಜು ಇದ್ದರೂ ಅವರನ್ನು ಬಂಧಿಸಲಾಗಿಲ್ಲ ಎಂದು ಪ್ರತಿಭಟಿಸಿ ಸ್ವಾಮಿ ಅಗ್ನಿವೇಶ ಸುಪ್ರಿಂಕೋರ್ಟಿನ ಮೊರೆ ಹೋಗಲಿದ್ದಾರೆ. ಕಾನೂನು ಪಾಲಕರ ಕರ್ತವ್ಯಲೋಪವು ಬರಿಯ ಅಸಡ್ಡೆಯಿಂದ ನಡೆಯುವುದಿಲ್ಲ. ಅದರ ಬೆನ್ನಿಗೆ ಕಾನೂನು ರೂಪಿಸಿದ ಶಾಸಕಾಂಗದ ರಾಜಕಾರಣದ ದಾಳಗಳಿರುತ್ತವೆ. ನಾಗರಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಒಪ್ಪಲಾಗದು ಎಂದು ಸುಪ್ರೀಂಕೋರ್ಟು ಜುಲೈ 17 ರಂದು ಎಚ್ಚರಿಸಿದೆ. ಆದರೆ…
ಅಧಿಕಾರ ರಾಜಕಾರಣವೇ, ಹಿಂಸೋನ್ಮಾದದ ನೇರ ಹೊಣೆಯಾಗಿದೆ. ಸಾಮಾಜಿಕ ಸಹಜೀವನವನ್ನು ಛಿದ್ರಗೊಳಿಸುವುದು ರಾಜಕಾರಣಿಗಳಿಂದ ಮುಲಾಜಿಲ್ಲದಂತೆ ನಡೆಯುತ್ತಿದೆ. ನಮ್ಮದೇ ರಾಜ್ಯದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು- ತಾನೇನಾದರೂ ಗೃಹಮಂತ್ರಿಯಾದರೆ, ಬುದ್ಧಿಜೀವಿಗಳನ್ನು ನಿಲ್ಲಿಸಿ ಗುಂಡು ಹಾಕಿಸುತ್ತಿದ್ದೆ- ಎಂದು ಭವಿಷ್ಯತ್ತಿನ ಹಿಟ್ಲರ್‍ತನವನ್ನು ಹೇಳಿಕೊಂಡರು. ತಮ್ಮ ಕ್ಷೇತ್ರದ ಕಾರ್ಪೊರೇಟರುಗಳಿಗೆ, ನೀವು ಟೊಪ್ಪಿಗೆಯವರು, ಬುರ್ಖಾದವರ ಪರವಾಗಿ ಕೆಲಸ ಮಾಡಬೇಡಿ, ಹಿಂದೂಗಳ ಪರವಾಗಿ ಕೆಲಸ ಮಾಡಿರಿ- ಎಂದು ಫರ್ಮಾನು ಹೊರಡಿಸಿದರು. ಶಾಸಕರು, ಸಂಸದರು ಹೀಗೆ ತಮ್ಮನ್ನು ಒಂದುಜಾತಿ-ಧರ್ಮದ ಹುರಿಯಾಳುಗಳು ಎನ್ನುವಂತೆ ಬಿಂಬಿಸಿಕೊಳ್ಳಲು ಅವರಿಗೆ ಯಾವುದೇ ಮುಜುಗರವಿಲ್ಲದ ವಾತಾವರಣ, ತಡೆಯುವವರಿಲ್ಲದ ಪರಿಸ್ಥಿತಿ ಖಂಡಿತವಾಗಿಯೂ ಮತೀಯ ಅರಾಜಕತೆಯೇ ಆಗಿದೆ. ಸಮಾಜವು ಜಾತಿ, ಧರ್ಮ, ವರ್ಗಗಳಲ್ಲಿ ಛಿದ್ರವಾಗುವುದರಿಂದಲೇ ಹಿಂಸಾಪ್ರವೃತ್ತಿ ತೀವ್ರಗೊಳ್ಳುತ್ತದೆ. ನಮ್ಮವರು, ನಮ್ಮವರಲ್ಲದವರು- ಎಂಬ ಒಡಕಿನ ಭಾಷೆ ಬಲುಬೇಗ ಮನದಟ್ಟಾಗುತ್ತದೆ. ಈ ನಂಬಿಕೆಯ ಆಧಾರದಲ್ಲಿ ಒಡೆಯುವುದನ್ನು ಕಾನೂನುಬದ್ಧಗೊಳಿಸಲಾಗುತ್ತದೆ. ಬಡ ದಮನಿತ ಸಮುದಾಯಗಳು ಅಕಾರಣ ಆರೋಪಿಗಳಾಗುತ್ತಾರೆ. ರೊಹಿಂಗ್ಯಾ ಮುಸ್ಲಿಮರ ಕಥನದಂತೆಯೇ, ಭಾರತದಲ್ಲೀಗ ಬಾಂಗ್ಲಾ ನುಸುಳುಕೋರರ ಅಧ್ಯಾಯ ಪ್ರಾರಂಭವಾಗಿದೆ. ಇಲ್ಲಿಯೇ ಜನಿಸಿ, ಇಲ್ಲಿಯೇ ಬದುಕಿ, ಬದುಕಿಗೆ ನೆಲೆಯರಸುತ್ತಿರುವ ಬಡವರನ್ನು ದೇಶದ್ರೋಹಿಗಳೆಂದು, ಉಗ್ರಗಾಮಿಗಳೆಂದು, ದಂಗೆಕೋರರೆಂದು ಬಿಂಬಿಸಲಾಗುತ್ತಿದೆ. ಸಾಮಾಜಿಕ ಆತಂಕದ ಎಲ್ಲ ಬೆಳವಣಿಗೆಗಳೂ ಇವರಿಂದಲೇ ಸಂಭವಿಸಿದ್ದೆಂದು ನಂಬಿಸಲಾಗುತ್ತದೆ. ಮಾಧ್ಯಮಗಳು ಈ ಊಹಾಪೋಹಗಳನ್ನೇ ಕಲ್ಪಿತವಾಗಿಸಿ, ಕೂಗುಮಾರಿಯಂತೆ ಕೂಗುತ್ತವೆ. ದ್ರೋಹಿಗಳೆಂಬ ನಂಬಿಕೆಯನ್ನು ಉತ್ಪಾದಿಸುತ್ತವೆ. ಜನರ ವಿಚಾರ ಸಾಧ್ಯತೆಯನ್ನು ಬೇರೊಂದು ನೆಲೆಯಲ್ಲಿ ಮುನ್ನಡೆಸುವುದರಿಂದ; ವಲಸೆ-ವಲಸಿಗರ ಪ್ರಶ್ನೆಯ ಚರಿತ್ರೆಯನ್ನಾಗಲೀ ಭಾರತೀಯರು ಅಮೆರಿಕಾದಂತಹ ದೇಶದ ರಾಜಕೀಯ ತೀರ್ಮಾನಕ್ಕೆ ಬೆಲೆ ತೆತ್ತಬೇಕಾದ ಕಾಲ ಹತ್ತಿರದಲ್ಲಿಯೇ ಇದೆಯೆಂಬ ವಿಸ್ತರಣೆಯನ್ನಾಗಲೀ ಗಮನಿಸುವ ಪುರುಸೊತ್ತು ಒದಗುವುದಿಲ್ಲ. ಜಾತಿ-ಧರ್ಮಗಳಿಗೆ ಅಂಟಿಕೊಂಡ ಮನಸ್ಸಿಗೆ ನ್ಯಾಯ-ಅನ್ಯಾಯಗಳ ವೈರುಧ್ಯಗಳು ಗೋಚರಿಸುವುದಿಲ್ಲ. ಅಪರಾಧಕೃತ್ಯದಲ್ಲಿ ಅರೆಸ್ಟಾದ ಆರೋಪಿಯನ್ನು ಸೃಷ್ಟಿಸಿದ ಸಮಕಾಲೀನ ದುರಂತಗಳನ್ನು ಪ್ರಶ್ನಿಸಬೇಕಾದ, ಅದರ ವಿರುದ್ಧ ಸಂಘಟಿತರಾಗಬೇಕಿದ್ದ ಜನರು, ಯೋಚನಾ ಸಾಮಥ್ರ್ಯವನ್ನು ಕಳೆದುಕೊಂಡವರ ಹಾಗೆ ‘ಆರೋಪಿ ನಮ್ಮಜಾತಿಯವನು, ಆದ್ದರಿಂದ ಆರೋಪಿಯಲ್ಲ’ ಎಂದು ವಾದಿಸುತ್ತಿದ್ದಾರೆ, ಬೀದಿಗಿಳಿಯುತ್ತಿದ್ದಾರೆ. ತಮ್ಮ ಮಕ್ಕಳು ನಿರಪರಾಧಿಗಳು ಅವರ ಪರವಾಗಿ ಹಿಂದೂ ಸಂಘಟನೆಗಳು ವಕೀಲರನ್ನಿಟ್ಟು ವಾದಿಸುತ್ತವೆ- ಎಂದು ಒಪ್ಪಿಕೊಳ್ಳುವ ಹಿರಿಯರು; ಗುಣ-ಸ್ವಭಾವಗಳು ಜಾತಿವಾಚಕಗಳು ಎಂದು ನಂಬುವವರು- ತಮ್ಮ ಕಣ್ಣೆದುರೇ ನಡೆಯುತ್ತಿರುವ ಅಪಾಯವನ್ನು ಕಾಣಲಾರರು. ಯಾರು ತಮ್ಮ ಕೌಟುಂಬಿಕ ಸ್ವಾಸ್ಥ್ಯವನ್ನು ಲೂಟಿಗೈದವರು- ಎಂಬುದನ್ನು ತಿಳಿಯಲಾರದಷ್ಟು ಮುಗ್ಧತೆಯನ್ನು ತೋರುತ್ತಾರೆ. ಹಿಂಸೆಯೀಗ ದಶಾವತಾರವನ್ನೆತ್ತಿದೆ. ಅದರ ಮೈತುಂಬ ಕಣ್ಣು, ಬಾಯಿಗಳೆದ್ದಿವೆ. ಬಿಹಾರದ ಹಾಸ್ಟೆಲ್ಲಿನ ಬಡ-ಎಳೆಯ ಹೆಣ್ಣುಮಕ್ಕಳ ದೇಹವನ್ನು ಹುರಿದು ಮುಕ್ಕಿದ ಕರಾಳ ಹಿಂಸೆಯು, ಹೆಣ್ಣುಮಕ್ಕಳಿಗೆ ಹಾಸ್ಟೆಲ್ ಸುರಕ್ಷಿತವಲ್ಲ; ಮದುವೆಯೊಂದೇ ಸುರಕ್ಷಿತ- ಎಂಬ ಭಾವನೆಯನ್ನು ಬಲಿಸುತ್ತದೆ ಎಂದಾದರೆ ಸಂವಹನದ ಯಾವ ಸಾಧ್ಯತೆಯನ್ನು ಆಯ್ದುಕೊಂಡೇವು?
ಚೋಮನದುಡಿಯಲ್ಲಿ, ಚೋಮನ ಗುಡಿಸಲಲ್ಲಿ ದನದ ಮಾಂಸದೂಟದ ಪ್ರಸಂಗ ಬಂದೊಡನೆ ‘ಶ್ಶೀ’ ಎಂದು ತನ್ನ ಜಾತಿನಿಷ್ಠೆಯನ್ನು ಪ್ರಕಟಪಡಿಸುವ ಹುಡುಗಿಯರು ಬೇರೆಲ್ಲ ವಿಷಯದಲ್ಲಿ ಬೆಳ್ಳಿಯಂಥವರೇ. ಭಿತ್ತಿ ಪತ್ರಿಕೆಗೆ ಬರಹ ಕೇಳಿದರೆ, ಗೋಮಾತೆಯ ಮಹತ್ವವನ್ನು ಬರೆದು ತರುವವರಿಗೆ, ಇಂದಿನ ಪತ್ರಿಕೆಯಲ್ಲಿ ನಿಮ್ಮನ್ನು ಸತಾಯಿಸಿದ ಸುದ್ದಿ ಯಾವುದು? ಎಂದು ಕೇಳಿದರೆ ಮೌನವಾಗುವ; ಏನು ಓದಿದಿರಿ? ಎಂದರೆ ಸಿನಿಮಾದ,ಕ್ರೀಡೆಯ ಸುದ್ದಿಯನ್ನು ಹೇಳುವ ‘ದೊಡ್ಡ ಮಕ್ಕಳನ್ನು’ ವರ್ತಮಾನದ ಕುದಿ ಕುಲುಮೆಯ ಸ್ಪರ್ಶಕ್ಕೆ ತರುವ ಹಾದಿ ಕಾಣದೆ ಕಂಗಾಲಾಗುತ್ತೇನೆ. ಅವರ ಕಣ್ಣೊಳಗೆ ಆಗಾಗ ಹಿಂಸಾರತಿಯ ಉನ್ಮತ್ತ ಎಳೆಯೊಂದು ಹಾರಾಡಿದಂತಾಗಿ ದಿಕ್ಕೆಡುತ್ತಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...

ಉತ್ತರ ಪ್ರದೇಶ SIR : ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರು ಡಿಲೀಟ್

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐರ್‌) ಬಳಿಕ ಸುಮಾರು 2.89 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್ ರಿನ್ವಾ...

ಕರೂರ್ ಕಾಲ್ತುಳಿತ ಪ್ರಕರಣ: ಟಿವಿಕೆ ನಾಯಕ ವಿಜಯ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್

ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಟಿವಿಕೆ ನಾಯಕ ವಿಜಯ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ. ಸೆಪ್ಟೆಂಬರ್ 27 ರಂದು ನಟ-ರಾಜಕಾರಣಿ ವಿಜಯ್ ಅವರ ತಮಿಳಗ...

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ರಾಯಭಾರ ಕಚೇರಿ ಉದ್ಘಾಟನೆ : ‘ಐತಿಹಾಸಿಕ ಕ್ಷಣ’ ಎಂದ ರಾಯಭಾರಿ ಹುಸಾಮ್ ಝೊಮ್ಲೋಟ್

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ದೇಶದ ರಾಯಭಾರಿ ಕಚೇರಿ ಅಧಿಕೃತವಾಗಿ ಉದ್ಘಾಟನೆಯಾಗಿದ್ದು, ಯುಕೆಯ ಪ್ಯಾಲೆಸ್ತೀನ್‌ ರಾಯಭಾರಿ ಇದನ್ನು 'ಐತಿಹಾಸಿಕ ಕ್ಷಣ' ಎಂದು ಬಣ್ಣಿಸಿದ್ದಾರೆ. ಸೋಮವಾರ (ಜ.5) ಪಶ್ಚಿಮ ಲಂಡನ್‌ನ ಹ್ಯಾಮರ್‌ಸ್ಮಿತ್‌ನಲ್ಲಿ ನಡೆದ ರಾಯಭಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ...

ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಮತ್ತು ಪತ್ರಕರ್ತನಾಗಿದ್ದ ರಾಣಾ ಪ್ರತಾಪ್ ಬೈರಾಗಿ ತಲೆಗೆ ಗುಂಡಿಕ್ಕಿ ಹತ್ಯೆ 

ಬಾಂಗ್ಲಾದೇಶದ ಜೆಸ್ಸೋರ್ ಜಿಲ್ಲೆಯಲ್ಲಿ ಸೋಮವಾರ 38 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರ ತಲೆಗೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.  ಬೈರಾಗಿ ಒಬ್ಬ ಹಿಂದೂ ಉದ್ಯಮಿ ಮತ್ತು...

ತಿರುಪರನ್‌ಕುಂದ್ರಂ ಬೆಟ್ಟದ ಮೇಲೆ ದೀಪ ಬೆಳಗಿಸುವ ಆದೇಶ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ಮಧುರೈನ ತಿರುಪರನ್‌ಕುಂದ್ರಂ ಬೆಟ್ಟದ ಮೇಲಿರುವ ಕಲ್ಲಿನ ಕಂಬದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠದ ಏಕ ಸದಸ್ಯ ನ್ಯಾಯಾಧೀಶರು ನೀಡಿದ ಆದೇಶವನ್ನು ವಿಭಾಗೀಯ ಪೀಠ ಎತ್ತಿಹಿಡಿದಿದೆ. ನ್ಯಾಯಮೂರ್ತಿ ಜಿ. ಜಯಚಂದ್ರನ್...

ಕರ್ನಾಟಕದ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ದಾಖಲೆ ಸೃಷ್ಟಿಸಿದ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಿವಂಗತ ಡಿ.ದೇವರಾಜ್ ಅರಸ್ ಅವರ ದಾಖಲೆಯನ್ನು (7 ವರ್ಷ 239 ದಿನಗಳು) ಸಿದ್ದರಾಮಯ್ಯ ಮುರಿದಿದ್ದಾರೆ.  ದೇವರಾಜು ಅರಸು ಮತ್ತು ಸಿದ್ದರಾಮಯ್ಯ ಅವರು ಸಾಮಾಜಿಕ...

ಅಜ್ಮೀರ್ ದರ್ಗಾಕ್ಕೆ ಪ್ರಧಾನಿ ಚಾದರ್ ಅರ್ಪಿಸುವುದನ್ನು ತಡೆಯುವಂತೆ ಅರ್ಜಿ : ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಉರೂಸ್ ಪ್ರಯುಕ್ತ ಅಜ್ಮೀರ್‌ನ ಸೂಫಿ ಸಂತ ಖ್ವಾಜಾ ಮುಯೀನುದ್ದೀನ್ ಹಸನ್ ಚಿಸ್ತಿ ಅವರ ದರ್ಗಾಕ್ಕೆ ಪ್ರಧಾನಿ ಚಾದರ್ ಅರ್ಪಿಸುವುದನ್ನು ಮತ್ತು ದರ್ಗಾಕ್ಕೆ ಸರ್ಕಾರದ ವತಿಯಿಂದ ನೀಡಲಾಗುವ ಗೌರವಗಳನ್ನು ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು...