Homeಕರ್ನಾಟಕದೌರ್ಜನ್ಯ 25% ಹೆಚ್ಚಳ: ಮಹಿಳೆಯರಿಗೆ ಕೊರೊನಾ ಲಾಕ್‌ಡೌನ್‌‌ ಕರಾಳ!

ದೌರ್ಜನ್ಯ 25% ಹೆಚ್ಚಳ: ಮಹಿಳೆಯರಿಗೆ ಕೊರೊನಾ ಲಾಕ್‌ಡೌನ್‌‌ ಕರಾಳ!

- Advertisement -
- Advertisement -

ಕೊರೊನಾ ಸಮಯದಲ್ಲಿ ಭಾರತೀಯ ಮಹಿಳೆಯರ ಮೇಲಿನ ದೌರ್ಜನ್ಯವು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಇತ್ತೀಚಿನ ವರದಿಯು ಹೇಳಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 25% ಕ್ಕಿಂತಲೂ ಹೆಚ್ಚು ಮಹಿಳಾ ದೌರ್ಜನ್ಯದ ದೂರು ಈ ವರ್ಷ ದಾಖಲಾಗಿದೆ ಎಂದು ವರದಿ ತಿಳಿಸಿದೆ.

ಮಹಿಳಾ ಆಯೋಗವು 2019-20 ರಲ್ಲಿ 20,309 ದೂರುಗಳನ್ನು ಸ್ವೀಕರಿಸಿತ್ತು, ಆದರೆ 2020-21ರಲ್ಲಿ 26,513 ಮಹಿಳೆಯರು ಆಯೋಗಕ್ಕೆ ದೂರುಗಳನ್ನು ನೀಡಿದ್ದಾರೆ. ಒಟ್ಟು ಕಳೆದ ವರ್ಷಕ್ಕಿಂತ ಈ ವರ್ಷ 25.09% ದಷ್ಟು ದೂರುಗಳು ಹೆಚ್ಚಳವಾಗಿದೆ. 2020-21ರಲ್ಲಿ ಆಯೋಗಕ್ಕೆ ಸಲ್ಲಿಸಲಾದ ಗರಿಷ್ಠ ಸಂಖ್ಯೆಯ ದೂರುಗಳು ಘನತೆಯಿಂದ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನೋಂದಾಯಿಸಲಾಗಿದೆ. ಒಟ್ಟು 8,688 ಮಹಿಳೆಯರು ಈ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಆಯೋಗವನ್ನು ಸಂಪರ್ಕಿಸಿದ್ದಾರೆ.

ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲೂ ತೀವ್ರ ಏರಿಕೆ ಕಂಡುಬಂದಿದ್ದು, ಈ ವಿಭಾಗದಲ್ಲಿ ಒಟ್ಟು 6,049 ಮಹಿಳೆಯರು 2020-21ರಲ್ಲಿ ದೂರು ದಾಖಲಿಸಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಮಹಿಳೆಯರ ವಿರುದ್ಧ ತೀವ್ರ ಏರಿಕೆ ಕಂಡ ಇತರ ವಿಭಾಗಗಳಲ್ಲಿ ಸೈಬರ್‌ ಅಪರಾಧ ಮತ್ತು ವರದಕ್ಷಿಣೆ ಕಿರುಕುಳ ಸೇರಿವೆ.

ಇದನ್ನೂ ಓದಿ: ಭಾರತಕ್ಕೆ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗುವ ಸಮಯ ದೂರವಿಲ್ಲ: ಜಸ್ಟಿಸ್ ಆರ್‌‌.ಎ‌ಫ್‌. ನಾರಿಮನ್

ಕೊರೊನಾ ಪ್ರೇರಿತ ಲಾಕ್‌ಡೌನ್‌ಗಳು, ಪುರುಷರು ಹೆಚ್ಚು ಕಾಲ ಮನೆಯಲ್ಲೆ ಇರುವುದು ಮತ್ತು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಕುಟುಂಬಗಳು ಅನುಭವಿಸಿದ ಆರ್ಥಿಕ ಹಿನ್ನಡೆಯು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಮಹಿಳಾ ಹಕ್ಕುಗಳ ಹೋರಾಟಗಾರರು ಹೇಳಿದ್ದಾರೆ.

ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಾತನಾಡಿ, ಮಹಿಳೆಯರ ವಿರುದ್ದ ನಡೆಯುವ ಅಪರಾಧಗಳಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ, ಆದರೆ ಆಯೋಗವು ಮಹಿಳೆಯರನ್ನು ತಲುಪಲು ಮತ್ತು ದೂರು ನೀಡುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ ಎಂದು ಹೇಳಿದ್ದಾರೆ.

“ಸಂತ್ರಸ್ತ ಮಹಿಳೆಯರ ದೂರುಗಳನ್ನು ದಾಖಲಿಸಲು ಮತ್ತು ಪರಿಹರಿಸಲು ಲಾಕ್‌ಡೌನ್ ಸಮಯದಲ್ಲಿ ನಮ್ಮ ತಂಡವು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿತ್ತು. ಆಯೋಗವು ಪ್ರತಿಯೊಂದು ದೂರುಗಳ ಬಗ್ಗೆ ನಿಗಾ ಇಟ್ಟಿದ್ದು, ಎಲ್ಲಾ ಸಂದರ್ಭಗಳಲ್ಲಿಯೂ ಸೂಕ್ತವಾದ ಅನುಸರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ರೇಖಾ ಹೇಳಿದ್ದಾರೆ.

“ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಕೌಟುಂಬಿಕ ಹಿಂಸಾಚಾರ, ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಾಣಿಕೆ ಹಠಾತ್ ಏರಿಕೆ ಕಂಡುಬಂದಿದೆ ಎಂದು ಸಮಿತಿ ಹೇಳುತ್ತದೆ. ಇದಕ್ಕೆ ಕಾರಣ, ಮುಖ್ಯವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಅಡ್ಡಿ, ವರ್ಕ್‌ ಫ್ರಂ ಹೋಂ ಮತ್ತು ಲಾಕ್‌ಡೌನ್‌‌ನಲ್ಲಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು” ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಯುವ ಕಾರ್ಮಿಕರಿಗೆ ಭಾರಿ ಹೊಡೆತ ನೀಡಿದ ಕೊರೋನಾ ಸಾಂಕ್ರಾಮಿಕ: ಮತ್ತಷ್ಟು ದಯನೀಯ ಸ್ಥಿತಿಗೆ ತಲುಪಿದ ಮಹಿಳಾ ಕಾರ್ಮಿಕರ ಸ್ಥಿತಿ

ಮಹಿಳಾ ದೌರ್ಜನ್ಯ ಹೆಚ್ಚಳದ ಬಗ್ಗೆ “ನಾನುಗೌರಿ.ಕಾಂ” ಜೊತೆ ಮಾತನಾಡಿದ ಹೈಕೋರ್ಟ್‌‌ ವಕೀಲೆ ರಾಜಲಕ್ಷ್ಮಿ ಅಂಕಲಗಿ, “ಇದಕ್ಕೆ ಮೊದಲ ಕಾರಣ ಕೆಲಸಕ್ಕೆ ಹೋಗುವ ಮಹಿಳೆಗೆ ‘ವರ್ಕ್‌ ಫ್ರಂ ಹೋಂ’ ಪ್ರಾರಂಭ ಆಗಿದ್ದು. ಈ ಮಹಿಳೆಯರು ಸಾಮಾನ್ಯವಾಗಿ ಕೆಲಸಕ್ಕೆ ತೆರಳುತ್ತಿದ್ದ ಸಮಯದಲ್ಲಿ ಹೊರಗಿನ ವಾತಾವರಣದಿಂದ ಒಂದಷ್ಟು ನಿರಾಳತೆಯನ್ನು ಮತ್ತು ಸ್ವಾತಂತ್ಯ್ರವನ್ನು ಅನುಭವಿಸುತ್ತಿದ್ದರು. ಆದರೆ ಈಗ ಹೊರ ವಾತಾವಣದಲ್ಲಿ ಸಿಗುತ್ತಿದ್ದ ನಿರಾಳತೆ ಸಿಗುತ್ತಿಲ್ಲ. ಆಫೀಸ್‌ ಕೆಲಸ ಮುಗಿಯುವ ಹೊತ್ತಿಗೆ ಮನೆಯ ಕೆಲಸ, ಮನೆ ಕೆಲಸ ಮುಗಿಯುವ ಹೊತ್ತಿಗೆ ಆಫೀಸ್‌ ಕೆಲಸ ಮಾಡುತ್ತಲೆ ಇರಬೇಕಾಗುತ್ತದೆ.

ಜೊತೆಗೆ ಗಂಡನಿಗೂ ವರ್ಕ್‌ ಫ್ರಂ ಹೋಮ್‌ ಇರುತ್ತದೆ. ಹೆಚ್ಚಿನ ಮನೆಗಳಲ್ಲಿ ಗಂಡನಿಗೆ ಬೇಕಾದ ಅಡುಗೆ ಹಾಗೂ ಗಂಡನ ಇನ್ನಿತರ ಕೆಲಸಗಳನ್ನೂ ಹೆಂಡತಿಯೆ ನಿರ್ವಹಿಸಬೇಕಾಗುತ್ತದೆ. ಗಂಡನ ಬೇಡಿಕೆಗಳೂ ನಿರಂತರವಾಗಿ ಇರುತ್ತದೆ. ಇದರ ಜೊತೆಗೆ ಮಕ್ಕಳು ಕೂಡಾ ಮನೆಯಲ್ಲೆ ಇರುತ್ತಾರೆ. ಅವರನ್ನು ನೋಡಿ ಕೊಳ್ಳುವುದು ಮಹಿಳೆಯೆ ಆಗಿರುವುದರಿಂದ ಅವರ ಕೆಲಸಗಳೂ ಸೇರಿ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಈ ಒತ್ತಡ, ಸುಸ್ತು, ಎಲ್ಲಾ ಸೇರಿಕೊಂಡು ಮಾನಸಿಕ ಒತ್ತಡಕ್ಕೊಳಗಾಗಿ ಅದು ಮನಸ್ತಾಪವಾಗಿ ರೂಪುಗೊಂಡು ಕೊನೆಗೆ ಜಗಳದಲ್ಲೇ ಕೊನೆಯಾಗುತ್ತದೆ. ಅದರಲ್ಲೂ ಹೆಚ್ಚಿನ ಕಡೆಗಳಲ್ಲಿ ಹೊಡೆದಾಟ ಮತ್ತು ದೌರ್ಜನ್ಯಗಳಲ್ಲೆ ಮುಗಿಯುತ್ತದೆ” ಎಂದು ಅವರು ಹೇಳಿದರು.

“ಗೃಹಿಣಿಯಾಗಿ ಮನೆಯಲ್ಲೇ ಇರುವ ಮಹಿಳೆಯರು ಈ ಹಿಂದೆ ಸಾಮಾನ್ಯವಾಗಿ ಮನೆಗೆಲಸಗಳನ್ನು ಮುಗಿಸಿಕೊಂಡು ಒಂದಷ್ಟು ಹೊತ್ತು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಲಾಕ್‌ಡೌನ್‌ ನಂತರ ತನ್ನ ಕೆಲಸ ಕಳೆದುಕೊಂಡ ಗಂಡ ಹಾಗೂ ಮನೆಯಲ್ಲೇ ಇರುವ ಮಕ್ಕಳ ಕೆಲಸಗಳನ್ನು ಮತ್ತು ಬೇಡಿಕೆಗಳನ್ನು ಪೂರೈಸುತ್ತಲೆ ಇರಬೇಕಾಗುತ್ತದೆ. ಜೊತೆಗೆ ಆರ್ಥಿಕ ಮುಗ್ಗಟ್ಟು ಕೂಡಾ ಇರುವುದರಿಂದ ಗಂಡನ ಕೋಪ ಕೊನೆಯದಾಗಿ ಕೊನೆಗೊಳ್ಳುವುದು ಸುಲಭವಾಗಿ ಸಿಗುವ ತನ್ನ ಹೆಂಡತಿಯ ಮೇಲೆಯೆ ಆಗಿದೆ” ಎಂದು ರಾಜಲಕ್ಷ್ಮಿ ಹೇಳಿದರು.

“ಮನಸ್ತಾಪಗಳು ಬಂದಾಗ ನಿರಾಳವಾಗಲು ಹೊರ ಹೋಗಿ ಬರುತ್ತೇನೆ ಎಂಬ ಸ್ಥಿತಿ ಲಾಕ್‌ಡೌ‌ನ್‌ನಿಂದಾಗಿ ಇಲ್ಲ. ಏನೇ ಆದರೂ ಅವರು ಮನೆಯಲ್ಲೆ ಎದುರುಗೊಳ್ಳುತ್ತಲೆ ಇರಬೇಕಾಗುತ್ತದೆ. ಹಾಗಾಗಿಯೆ ದೌರ್ಜನ್ಯಗಳು ಹೆಚ್ಚಾಗಿದೆ” ಎಂದು ರಾಜಲಕ್ಷ್ಮಿ ಅಂಕಲಗಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಸಾಯುತ್ತೇವೆ ವಿನಃ ಹೋರಾಟದಿಂದ ಹಿಂದೆ ಸರಿಯುವುದಿಲ್ಲ: ಲಾಲು ಪ್ರಸಾದ್ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...