Homeಅಂಕಣಗಳುಬಹುಜನ ಭಾರತ; ಮೋದಿ ಭಾರತಕ್ಕೆ ರಾಹುಲ್ ಹಿಡಿದ ಕನ್ನಡಿ

ಬಹುಜನ ಭಾರತ; ಮೋದಿ ಭಾರತಕ್ಕೆ ರಾಹುಲ್ ಹಿಡಿದ ಕನ್ನಡಿ

- Advertisement -
- Advertisement -

ಕಡು ಕೋಮುವಾದಿ ರಾಜಕಾರಣದ ವಿಜೃಂಭಣೆಯ ನಡುವೆ ಪ್ರತಿಪಕ್ಷಗಳು ನಿಸ್ತೇಜವಾಗಿ ಅಡ್ಡ ಮಲಗಿರುವ ದಿನಗಳಿವು. ನಿರಾಶೆ ನಿಸ್ತತ್ವಗಳ ಈ ಕಾಲಮಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊನ್ನೆ ಲೋಕಸಭೆಯಲ್ಲಿ ಮಾಡಿದ ವಿರಳ ಹೊಳಪಿನ ಭಾಷಣ ಜನಮನದ ಗಮನ ಸೆಳೆದಿದೆ.

ರಾಹುಲ್ ಅವರ ತೀವ್ರ ತೇಜೋವಧೆ ಮಾಡಿ, ಪಪ್ಪು ಎಂಬ ಸುಳ್ಳನ್ನೇ ಸಾವಿರ ಬಾರಿ ಹೇಳಿ ಸತ್ಯವಾಗಿಸುವ ಗೊಬೆಲ್ಸ್ ಪ್ರಚಾರ ತಂತ್ರ ಬಹುತೇಕ ಫಲ ನೀಡಿದೆ. ಈ ತೇಜೋವಧೆ ತಮ್ಮನ್ನು ತಾಕಿಯೇ ಇಲ್ಲವೆಂಬ ಮಾನಸಿಕ ಗಟ್ಟಿತನ ತೋರಿ ನೆಲಕಚ್ಚಿ ನಿಂತಿರುವ ಕಾಂಗ್ರೆಸ್ ತಲೆಯಾಳು ಸುಲಭವಾಗಿ ಸೋಲೊಪ್ಪುತ್ತಿಲ್ಲ.

ಮೊನ್ನೆ ಲೋಕಸಭೆ ಮತ್ತು ದೇಶ ರಾಹುಲ್ ಗಾಂಧಿ ಅವರಲ್ಲಿ ತುಳುಕಿದ್ದ ಹೊಸ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿತ್ತು. ಟೆಲಿಪ್ರಾಂಪ್ಟರ್ ನೆರವಿಲ್ಲದೆ ಅವರ ಸಹಜಸ್ವಾಭಾವಿಕ ಲೀಲಾಜಾಲ ಮಾತುಗಾರಿಕೆ ಬಿಜೆಪಿಯನ್ನೂ ದಂಗು ಬಡಿಸಿರುವುದುಂಟು.

ಒಂದೊಮ್ಮೆ ಹದಿನೆಂಟು ತಿಂಗಳುಗಳ ಕಾಲ ನಾಗರಿಕ ಹಕ್ಕುಗಳನ್ನು ತುಳಿದಿಟ್ಟ ಪಕ್ಷವೊಂದರ ನಾಯಕನಾಗಿ ರಾಹುಲ್ ಗಾಂಧಿ ಈ ಮಾತುಗಳ ಆಡತೊಡಗಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆ.

ಇಂದಿರಾಗಾಂಧಿ ಅವರ ಘೋಷಿತ ತುರ್ತುಪರಿಸ್ಥಿತಿ ಹದಿನೆಂಟು ತಿಂಗಳ ಅವಧಿಗೆ ಸೀಮಿತವಾಗಿತ್ತು. ಆದರೆ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನೆಲೆಸಿ ಏಳು ವರ್ಷಗಳೇ ಉರುಳಿವೆ. ಜನತಂತ್ರದ ಆರೋಗ್ಯ ತುರ್ತುಪರಿಸ್ಥಿತಿಗಿಂತ ಸಾವಿರ ಪಾಲು ಹದಗೆಟ್ಟಿದೆ. ಬಲಿಷ್ಠ ರಾಜ್ಯಗಳು- ಬಲಿಷ್ಠ ಕೇಂದ್ರ ಎಂಬ ತತ್ವವನ್ನು ಬಿಜೆಪಿ ಆರಂಭದಲ್ಲಿ ಸಾರಿತ್ತು. ಸಹಕಾರಿ ಒಕ್ಕೂಟ ವ್ಯವಸ್ಥೆಯ ಮಾತುಗಳನ್ನೂ ಆಡಿದ್ದರು ಮೋದಿ. ಆದರೆ ತತ್ವಗಳನ್ನು ಗಾಳಿಗೆ ತೂರಿ ಬಹಳ ಕಾಲವಾಗಿದೆ.

ಬಿಜೆಪಿ ಆಡಳಿತದಡಿ ದೇಶ ಹಿಡಿದಿರುವ ದುರ್ಗತಿಯ ಪಕ್ಷಿನೋಟವನ್ನು ರಾಹುಲ್ ಹೀಗೆ ಸಮರ್ಥವಾಗಿಯೇ ಬಿಡಿಸಿಟ್ಟರು.

ಭಾರತವೊಂದು ರಾಜ್ಯಗಳ ಒಕ್ಕೂಟ. ಇದೊಂದು ಅನುಸಂಧಾನ, ಸಂವಾದ, ಪಾಲುದಾರಿಕೆಯೇ ವಿನಾ ಅರಸೊತ್ತಿಗೆಯಲ್ಲ ಎಂಬುದನ್ನು ನೆನಪಿಡಿ. ಕೇಂದ್ರೀಕೃತ ನೋಟವು ಅರಸನ ನೋಟ. ಈ ಅರಸೊತ್ತಿಗೆಯ, ಪಾಳೇಗಾರಿಕೆಯ ನೋಟವನ್ನು ಕಾಂಗ್ರೆಸ್ 1947ರಲ್ಲೇ ಕಿತ್ತೆಸೆಯಿತು. ಅರಸೊತ್ತಿಗೆಯ, ಚಕ್ರವರ್ತಿಯ, ಶಹನಶಹಾ, ಗಂಡರ ಗಂಡನ, ಒಡೆಯರ ಒಡೆಯನ ಧೋರಣೆ ಇದೀಗ ಮತ್ತೆ ತಲೆಯೆತ್ತಿದೆ. ನಿರ್ದಿಷ್ಟ ವಿಚಾರ ಮತ್ತು ನಿರ್ದಿಷ್ಟ ಸಂಘಟನೆಯೊಂದು ಈ ದೇಶದ ಸಾಂಸ್ಥಿಕ ಸಂರಚನೆಯನ್ನು ಸೆರೆಹಿಡಿದು ಕೆಡವಿಕೊಂಡಿದೆ. ಮತ್ತು ಅದು ದೇಶದ ರಾಜ್ಯಗಳ ದನಿಗಳ ಮೇಲೆ ಆಕ್ರಮಣ ನಡೆಸಿ ಅಡಗಿಸಲು ತೊಡಗಿದೆ. ಈ ದನಿಗಳು ಪ್ರತಿಭಟಿಸಿ ಪ್ರತಿಕ್ರಿಯಿಸುವುದು ಖಚಿತ ಎಂಬುದು ನನ್ನ ಆತಂಕ. ತಮಿಳುನಾಡಿನಂತಹ ವಿಚಾರಕ್ಕೆ, ಅಸ್ಮಿತೆಗೆ, ಪಂಜಾಬಿನ ರೈತರ ದನಿಗೆ ನಿಮ್ಮ ಚೌಕಟ್ಟಿನಲ್ಲಿ ಜಾಗವೇ ಇಲ್ಲ. ರೈತರು ಕೊರೊನಾ ಕಾಲದಲ್ಲಿ ಬಯಲಿನಲ್ಲಿ ಕುಳಿತು ಸತ್ತರೂ ಅರಸನಿಗೆ ದರಕಾರಿಲ್ಲ. ರಾಜ ಹೇಳಿದ್ದೇ ಕಡೆಯ ಮಾತು. ಆತನದು ಮಾತ್ರವೇ ಗಟ್ಟಿ ದನಿ.

ತುಳಿದು ಆಳುವ ಬಣ್ಣದ ಕನಸುಗಳನ್ನು ಕಾಣಬೇಡಿ. ಮೂರು ಸಾವಿರ ವರ್ಷಗಳ ಇತಿಹಾಸದಲ್ಲಿ ಇಂತಹ ಪ್ರಯತ್ನಗಳು ಎಂದೂ ಸಫಲವಾಗಿಲ್ಲ. ದೇಶವನ್ನು ಆಳಿದ ಅಶೋಕ, ಮೌರ್ಯ, ಗುಪ್ತ ವಂಶಗಳ ಅರಸರು ತುಳಿದದ್ದು ಕೂಡ ಸಂವಾದ- ಸಂಭಾಷಣೆ, ಅನುಸಂಧಾನಗಳ ದಾರಿಯನ್ನು ಎಂಬುದ ಮರೆಯದಿರಿ. ಬಡಿಗೆ ಹಿಡಿದು ಆಳಲು ಬರುವುದಿಲ್ಲ. ಅಂತಹ ಪ್ರಯತ್ನಗಳು ನಡೆದಾಗಲೆಲ್ಲ ರಾಜ್ಯಶಕ್ತಿಯ ದೊಣ್ಣೆಯನ್ನು ಮುರಿದು ಬಿಸುಡಿದೆ ಜನಶಕ್ತಿ.

ಈ ದುಸ್ಸಾಹಸ ಕೈಬಿಡಿ. ಬಿಡದಿದ್ದರೆ ಸಮಸ್ಯೆ ಹುಟ್ಟಿಹಾಕುತ್ತೀರಿ. ಈಶಾನ್ಯ, ತಮಿಳುನಾಡು, ಜಮ್ಮು-ಕಾಶ್ಮೀರದಲ್ಲಿ ಈಗಾಗಲೆ ಸಮಸ್ಯೆಗಳು ತಲೆದೋರತೊಡಗಿವೆ. ನಿಮ್ಮ ಕಣ್ಣುಗಳು ಅವುಗಳನ್ನು ಕಾಣದಾಗಿವೆ. ಅಶೋಕ ಸಾಮ್ರಾಟ ಎಲ್ಲರನ್ನೂ ಗೌರವಿಸಿದ. ನೀವು ಅಗೌರವಿಸತೊಡಗಿದ್ದೀರಿ.

ಭಿನ್ನ ಭಾಷೆ, ಇತಿಹಾಸ, ಸಂಸ್ಕೃತಿಗಳ ಅದುಮಿಡಲು ಹೊರಟಿದ್ದೀರಿ. ತಮಿಳು ಭಾಷೆ, ತಮಿಳು ಸಂಸ್ಕೃತಿ, ತಮಿಳು ಅಸ್ಮಿತೆಯು ಭಾರತದ ಸಂಸ್ಕೃತಿ, ಭಾರತದ ಅಸ್ಮಿತೆಯೂ ಹೌದು. ರಾಜ್ಯಗಳ ಅಸ್ಮಿತೆಯೇ ಭಾರತದ ಅಸ್ಮಿತೆ. ಭಿನ್ನ ಭಾಷೆ ಸಂಸ್ಕೃತಿ ಅಸ್ಮಿತೆಗಳ ಸುಂದರ ಹೂಗುಚ್ಛ ನಮ್ಮ ದೇಶ. ವಿಶ್ವದ ಯಾವ ಶಕ್ತಿಗೂ ಸವಾಲೆಸೆಯಬಲ್ಲದು. ನಿಮ್ಮ ಇಡೀ ಜೀವಮಾನದಲ್ಲಿ ತಮಿಳುನಾಡಿನ ಜನರನ್ನು ಆಳಲಾರರಿ ನೀವು.

ನನ್ನ ಮುತ್ತಾತ ಸ್ವಾತಂತ್ರ್ಯ ಹೋರಾಟದಲ್ಲಿ 15 ವರ್ಷಗಳ ಕಾಲ ಜೈಲಲ್ಲಿದ್ದರು. ಅಜ್ಜಿಯ ಮೈಯನ್ನು 32 ಗುಂಡುಗಳು ಸೀಳಿದವು, ತಂದೆಯ ದೇಹ ಛಿದ್ರಛಿದ್ರವಾಯಿತು. ದೇಶಕ್ಕಾಗಿ ತ್ಯಾಗ ಮಾಡಿದ ಮನೆತನ ನನ್ನದು. ಆರೆಸ್ಸೆಸ್ ಮತ್ತು ಬಿಜೆಪಿ ನಮ್ಮ ದೇಶದ ತಳಪಾಯದ ಜೊತೆ ಆಟವಾಡುತ್ತಿದೆ, ಅದನ್ನು ದುರ್ಬಲಗೊಳಿಸುತ್ತಿದೆ. ದೇಶ ದುರ್ಬಲವಾಗಿದೆ. ಸಂವಾದ ಸತ್ತಿದೆ. ಸಂಸ್ಥೆಗಳು ಸತ್ವ ಕಳೆದುಕೊಂಡಿವೆ. ನೆರೆಯ ದೇಶಗಳು ನಮ್ಮನ್ನು ಮುತ್ತತೊಡಗಿವೆ. ಚೀನಾ-ಪಾಕಿಸ್ತಾನವನ್ನು ಇನ್ನಷ್ಟು ಒಟ್ಟುಗೂಡಿಸುವ ಅವಿವೇಕದ ವಿದೇಶನೀತಿಯನ್ನು ಅನುಸರಿಸಲಾಗಿದೆ.

ಎರಡು ಭಾರತಗಳನ್ನು ಹುಟ್ಟುಹಾಕಿದ್ದೀರಿ. ಅನಂತ ಅಧಿಕಾರ ಅಸೀಮಿತ ಸಂಪತ್ತು ಹೊಂದಿರುವ ಭಾರತ. ಮತ್ತೊಂದು ಬಡವರ ಭಾರತ. ಎರಡರ ನಡುವಣ ಕಂದಕ ಹೆಚ್ಚುತ್ತಲೇ ಇದೆ. ಬಡವರ ಭಾರತದಲ್ಲಿ ಉದ್ಯೋಗಗಳಿಲ್ಲ. ಭಾರತದಲ್ಲಿ ಐವತ್ತು ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗ ಇಂದು ಭಾರತದಲ್ಲಿ ನೆಲೆಸಿದೆ. 2021ರ ಒಂದೇ ವರ್ಷದಲ್ಲಿ ಮೂರು ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗಕ್ಕಾಗಿ ಹಾಹಾಕಾರ ನೆಲೆಸಿದೆ. ರಾಷ್ಟ್ರಪತಿ ಭಾಷಣದಲ್ಲಿ ಈ ಕುರಿತ ಚಕಾರವೂ ಇಲ್ಲ.

ಲಕ್ಷಾಂತರ ಕೋಟಿ ರುಪಾಯಿಗಳನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಅಸಂಘಟಿತ ವಲಯಗಳಿಂದ ಕಿತ್ತುಕೊಂಡು ಶತಕೋಟ್ಯಾಧಿಪತಿ ಉದ್ಯಮಿಗಳಿಗೆ ನೀಡಲಾಗಿದೆ. ಕನಿಷ್ಠ ಪಕ್ಷ ಸಂಘಟಿತ ವಲಯಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದ್ದರೆ ಎರಡು ಭಾರತಗಳು ಆಗುತ್ತಿರಲಿಲ್ಲ.

ಶೇ.84ರಷ್ಟು ಭಾರತೀಯರ ಆದಾಯ ಕುಸಿದಿದ್ದು, ಬಡತನಕ್ಕೆ ಕುಸಿಯುತ್ತಿದ್ದಾರೆ. 27 ಕೋಟಿ ಜನರನ್ನು ನಾವು ಬಡತನದಿಂದ ಮೇಲೆತ್ತಿದ್ದೆವು. ನೀವು 23 ಕೋಟಿ ಜನರನ್ನು ಬಡತನಕ್ಕೆ ಇಳಿಸಿದ್ದೀರಿ. ಗರೀಬ ಹಿಂದುಸ್ತಾನ ಇದೆಲ್ಲವನ್ನೂ ನೋಡುತ್ತಿದೆ. ಅದು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ದೇಶದ ಶೇ.55ರಷ್ಟು ಜನರು ಹೊಂದಿರುವುದಕ್ಕಿಂತ ಹೆಚ್ಚಿನ ಸಂಪತ್ತು ಕೇವಲ 100 ಮಂದಿ ಧನಿಕರ ಸಂದೂಕಗಳಲ್ಲಿದೆ.

ರಾಹುಲ್ ಆಡಿರುವ ಈ ಮಾತುಗಳು ಸಕಾಲಿಕ ಮತ್ತು ಸ್ವಾಗತಾರ್ಹವೆಂದು ಜನತಂತ್ರವಾದಿಗಳು ಪ್ರತಿಕ್ರಿಯಿಸಿದ್ದಾರೆ. ಸಂವಿಧಾನಿಕ ಸಂಸ್ಥೆಗಳನ್ನು ಬುಡಮೇಲು ಮಾಡಿರುವ ಮತ್ತು ಈ ಸಂಸ್ಥೆಗಳ ಸ್ವಾಯತ್ತತೆಯನ್ನು ಮುರಿದು ಕೆಡವಿ ತನ್ನ ಕಪಿಮುಷ್ಠಿಗೆ ತೆಗೆದುಕೊಂಡಿರುವ ಕುರಿತು ರಾಹುಲ್ ಮಾಡಿರುವ ಆಪಾದನೆಗಳು ಸತ್ಯದೂರವಲ್ಲ.

ಬಲಿಷ್ಠ ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನಲ್ಲಿ ರಾಜ್ಯಗಳು ಹೆಚ್ಚು ಸ್ವಾಯತ್ತತೆ ಕೇಳಿದರೆ ಅದು ಅವುಗಳ ಹಕ್ಕು. ಸಹಕಾರಿ ಒಕ್ಕೂಟ ವ್ಯವಸ್ಥೆಯು ಘನವಾಗಿ ಕೆಲಸ ಮಾಡಿದ್ದು, ಈ ಮಾತಿಗೆ ರಾಜ್ಯ ಸರ್ಕಾರಗಳು ಮತ್ತು ಒಕ್ಕೂಟ ಸರ್ಕಾರ ಒಟ್ಟಾಗಿ ಕೋವಿಡ್ ಸಂಕಟವನ್ನು ಎದುರಿಸಿದ ಉದಾಹರಣೆ ನೀಡುತ್ತಿದ್ದಾರೆ. ಕೋವಿಡ್ ಕಾಲದಲ್ಲಿ ಲಸಿಕೆಗಳನ್ನು ಮತ್ತು ಟೆಸ್ಟ್ ಕಿಟ್‌ಗಳನ್ನು ತಾವೇ ತರಿಸಿಕೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ನಿರಾಕರಿಸಲಾಗಿತ್ತು. ಈ ಧೋರಣೆ ಉಂಟು ಮಾಡಿದ ನಷ್ಟವನ್ನು, ಹೆಚ್ಚಿಸಿದ ಸಂಕಟವನ್ನು ಮರೆಯುವಂತಿಲ್ಲ.

ಬ್ರಿಟಿಷ್ ವಸಾಹತುವಾದಿಗಳು ಭಾರತವು ಒಂದು ಒಕ್ಕೂಟ ರಚನೆಯೆಂದು ಒಪ್ಪಿಕೊಂಡಿದ್ದರು. ಒಂದು ಮೂಲೆಯಲ್ಲಿ ಕುಳಿತು ಕೈಯಲ್ಲಿ ಬಡಿಗೆ ಹಿಡಿದು, ತಾನು ಹೇಳಿದ್ದೇ ವೇದವಾಕ್ಯವೆಂದು ಈ ದೇಶವನ್ನು ಆಳುವುದು ಸಾಧ್ಯವಿಲ್ಲ. ಸಮಸ್ಯೆಯೆಂದರೆ ಕೇಂದ್ರದಲ್ಲಿ ಅಧಿಕಾರ ಹಿಡಿದವರು ಈ ಪರಿಕಲ್ಪನೆಯನ್ನು ಮರೆತೇಬಿಡುತ್ತಾರೆ ಎಂಬುವು ಖುದ್ದು ಮೋದಿಯವರೇ ಆಡಿದ್ದ ಮಾತುಗಳು. ಆಗ ಅವರು ಪ್ರಧಾನಿಯಾಗಿರಲಿಲ್ಲ, ಬದಲಿಗೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಮುಖ್ಯಮಂತ್ರಿಯಾಗಿ ತಾವೇ ಆಡಿದ್ದ ಇನ್ನೂ ಎಷ್ಟೋ ವಿಚಾರಗಳನ್ನು ಪ್ರಧಾನಮಂತ್ರಿಯಾಗಿ ಅವರು ವಿರೋಧಿಸಿದ್ದಾರೆ. ರಾಜ್ಯಗಳ ಸ್ವಾಯತ್ತತೆಯನ್ನು ತುಳಿದುಹಾಕಿದ್ದಾರೆ. ಈ ಮಾತಿನ ಸಮರ್ಥನೆಗೆ ನೂರಾರು ನಿದರ್ಶನಗಳನ್ನು ಪಟ್ಟಿ ಮಾಡಬಹುದು.

ರಾಜ್ಯಗಳ ಹಕ್ಕುಗಳು ಮತ್ತು ಸ್ವಾಯತ್ತತೆ ಕುರಿತು ರಾಹುಲ್ ಇನ್ನಷ್ಟು ನೇರ ಮತ್ತು ಖಚಿತ ನಿಲುವು ತಳೆಯಬೇಕಿದೆ. ಅದು ಇನ್ನಷ್ಟು ಮಾಗಿ ಹರಳುಗಟ್ಟಬೇಕಿದೆ. ಆಚರಣೆಗೆ ಇಳಿಯಬೇಕಿದೆ.


ಇದನ್ನೂ ಓದಿ: ಹಿಜಾಬ್ ವಿವಾದದ ಸುತ್ತ ದ್ವೇಷದ ಹುತ್ತ; ಹಿಂದುತ್ವದಲ್ಲಿ ಬಿರುಕು ಮತ್ತು ನಂಜಿನ ನೀರಡಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Why are you gloryfying congress only you are ony around the Sonia Gandhi& her family what they did to this country.even they are not Indian origin. But you people are adhoring them is it journalism in your view

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...