Homeಅಂಕಣಗಳುಬಹುಜನ ಭಾರತ; ಮೋದಿ ಭಾರತಕ್ಕೆ ರಾಹುಲ್ ಹಿಡಿದ ಕನ್ನಡಿ

ಬಹುಜನ ಭಾರತ; ಮೋದಿ ಭಾರತಕ್ಕೆ ರಾಹುಲ್ ಹಿಡಿದ ಕನ್ನಡಿ

- Advertisement -
- Advertisement -

ಕಡು ಕೋಮುವಾದಿ ರಾಜಕಾರಣದ ವಿಜೃಂಭಣೆಯ ನಡುವೆ ಪ್ರತಿಪಕ್ಷಗಳು ನಿಸ್ತೇಜವಾಗಿ ಅಡ್ಡ ಮಲಗಿರುವ ದಿನಗಳಿವು. ನಿರಾಶೆ ನಿಸ್ತತ್ವಗಳ ಈ ಕಾಲಮಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊನ್ನೆ ಲೋಕಸಭೆಯಲ್ಲಿ ಮಾಡಿದ ವಿರಳ ಹೊಳಪಿನ ಭಾಷಣ ಜನಮನದ ಗಮನ ಸೆಳೆದಿದೆ.

ರಾಹುಲ್ ಅವರ ತೀವ್ರ ತೇಜೋವಧೆ ಮಾಡಿ, ಪಪ್ಪು ಎಂಬ ಸುಳ್ಳನ್ನೇ ಸಾವಿರ ಬಾರಿ ಹೇಳಿ ಸತ್ಯವಾಗಿಸುವ ಗೊಬೆಲ್ಸ್ ಪ್ರಚಾರ ತಂತ್ರ ಬಹುತೇಕ ಫಲ ನೀಡಿದೆ. ಈ ತೇಜೋವಧೆ ತಮ್ಮನ್ನು ತಾಕಿಯೇ ಇಲ್ಲವೆಂಬ ಮಾನಸಿಕ ಗಟ್ಟಿತನ ತೋರಿ ನೆಲಕಚ್ಚಿ ನಿಂತಿರುವ ಕಾಂಗ್ರೆಸ್ ತಲೆಯಾಳು ಸುಲಭವಾಗಿ ಸೋಲೊಪ್ಪುತ್ತಿಲ್ಲ.

ಮೊನ್ನೆ ಲೋಕಸಭೆ ಮತ್ತು ದೇಶ ರಾಹುಲ್ ಗಾಂಧಿ ಅವರಲ್ಲಿ ತುಳುಕಿದ್ದ ಹೊಸ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿತ್ತು. ಟೆಲಿಪ್ರಾಂಪ್ಟರ್ ನೆರವಿಲ್ಲದೆ ಅವರ ಸಹಜಸ್ವಾಭಾವಿಕ ಲೀಲಾಜಾಲ ಮಾತುಗಾರಿಕೆ ಬಿಜೆಪಿಯನ್ನೂ ದಂಗು ಬಡಿಸಿರುವುದುಂಟು.

ಒಂದೊಮ್ಮೆ ಹದಿನೆಂಟು ತಿಂಗಳುಗಳ ಕಾಲ ನಾಗರಿಕ ಹಕ್ಕುಗಳನ್ನು ತುಳಿದಿಟ್ಟ ಪಕ್ಷವೊಂದರ ನಾಯಕನಾಗಿ ರಾಹುಲ್ ಗಾಂಧಿ ಈ ಮಾತುಗಳ ಆಡತೊಡಗಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆ.

ಇಂದಿರಾಗಾಂಧಿ ಅವರ ಘೋಷಿತ ತುರ್ತುಪರಿಸ್ಥಿತಿ ಹದಿನೆಂಟು ತಿಂಗಳ ಅವಧಿಗೆ ಸೀಮಿತವಾಗಿತ್ತು. ಆದರೆ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನೆಲೆಸಿ ಏಳು ವರ್ಷಗಳೇ ಉರುಳಿವೆ. ಜನತಂತ್ರದ ಆರೋಗ್ಯ ತುರ್ತುಪರಿಸ್ಥಿತಿಗಿಂತ ಸಾವಿರ ಪಾಲು ಹದಗೆಟ್ಟಿದೆ. ಬಲಿಷ್ಠ ರಾಜ್ಯಗಳು- ಬಲಿಷ್ಠ ಕೇಂದ್ರ ಎಂಬ ತತ್ವವನ್ನು ಬಿಜೆಪಿ ಆರಂಭದಲ್ಲಿ ಸಾರಿತ್ತು. ಸಹಕಾರಿ ಒಕ್ಕೂಟ ವ್ಯವಸ್ಥೆಯ ಮಾತುಗಳನ್ನೂ ಆಡಿದ್ದರು ಮೋದಿ. ಆದರೆ ತತ್ವಗಳನ್ನು ಗಾಳಿಗೆ ತೂರಿ ಬಹಳ ಕಾಲವಾಗಿದೆ.

ಬಿಜೆಪಿ ಆಡಳಿತದಡಿ ದೇಶ ಹಿಡಿದಿರುವ ದುರ್ಗತಿಯ ಪಕ್ಷಿನೋಟವನ್ನು ರಾಹುಲ್ ಹೀಗೆ ಸಮರ್ಥವಾಗಿಯೇ ಬಿಡಿಸಿಟ್ಟರು.

ಭಾರತವೊಂದು ರಾಜ್ಯಗಳ ಒಕ್ಕೂಟ. ಇದೊಂದು ಅನುಸಂಧಾನ, ಸಂವಾದ, ಪಾಲುದಾರಿಕೆಯೇ ವಿನಾ ಅರಸೊತ್ತಿಗೆಯಲ್ಲ ಎಂಬುದನ್ನು ನೆನಪಿಡಿ. ಕೇಂದ್ರೀಕೃತ ನೋಟವು ಅರಸನ ನೋಟ. ಈ ಅರಸೊತ್ತಿಗೆಯ, ಪಾಳೇಗಾರಿಕೆಯ ನೋಟವನ್ನು ಕಾಂಗ್ರೆಸ್ 1947ರಲ್ಲೇ ಕಿತ್ತೆಸೆಯಿತು. ಅರಸೊತ್ತಿಗೆಯ, ಚಕ್ರವರ್ತಿಯ, ಶಹನಶಹಾ, ಗಂಡರ ಗಂಡನ, ಒಡೆಯರ ಒಡೆಯನ ಧೋರಣೆ ಇದೀಗ ಮತ್ತೆ ತಲೆಯೆತ್ತಿದೆ. ನಿರ್ದಿಷ್ಟ ವಿಚಾರ ಮತ್ತು ನಿರ್ದಿಷ್ಟ ಸಂಘಟನೆಯೊಂದು ಈ ದೇಶದ ಸಾಂಸ್ಥಿಕ ಸಂರಚನೆಯನ್ನು ಸೆರೆಹಿಡಿದು ಕೆಡವಿಕೊಂಡಿದೆ. ಮತ್ತು ಅದು ದೇಶದ ರಾಜ್ಯಗಳ ದನಿಗಳ ಮೇಲೆ ಆಕ್ರಮಣ ನಡೆಸಿ ಅಡಗಿಸಲು ತೊಡಗಿದೆ. ಈ ದನಿಗಳು ಪ್ರತಿಭಟಿಸಿ ಪ್ರತಿಕ್ರಿಯಿಸುವುದು ಖಚಿತ ಎಂಬುದು ನನ್ನ ಆತಂಕ. ತಮಿಳುನಾಡಿನಂತಹ ವಿಚಾರಕ್ಕೆ, ಅಸ್ಮಿತೆಗೆ, ಪಂಜಾಬಿನ ರೈತರ ದನಿಗೆ ನಿಮ್ಮ ಚೌಕಟ್ಟಿನಲ್ಲಿ ಜಾಗವೇ ಇಲ್ಲ. ರೈತರು ಕೊರೊನಾ ಕಾಲದಲ್ಲಿ ಬಯಲಿನಲ್ಲಿ ಕುಳಿತು ಸತ್ತರೂ ಅರಸನಿಗೆ ದರಕಾರಿಲ್ಲ. ರಾಜ ಹೇಳಿದ್ದೇ ಕಡೆಯ ಮಾತು. ಆತನದು ಮಾತ್ರವೇ ಗಟ್ಟಿ ದನಿ.

ತುಳಿದು ಆಳುವ ಬಣ್ಣದ ಕನಸುಗಳನ್ನು ಕಾಣಬೇಡಿ. ಮೂರು ಸಾವಿರ ವರ್ಷಗಳ ಇತಿಹಾಸದಲ್ಲಿ ಇಂತಹ ಪ್ರಯತ್ನಗಳು ಎಂದೂ ಸಫಲವಾಗಿಲ್ಲ. ದೇಶವನ್ನು ಆಳಿದ ಅಶೋಕ, ಮೌರ್ಯ, ಗುಪ್ತ ವಂಶಗಳ ಅರಸರು ತುಳಿದದ್ದು ಕೂಡ ಸಂವಾದ- ಸಂಭಾಷಣೆ, ಅನುಸಂಧಾನಗಳ ದಾರಿಯನ್ನು ಎಂಬುದ ಮರೆಯದಿರಿ. ಬಡಿಗೆ ಹಿಡಿದು ಆಳಲು ಬರುವುದಿಲ್ಲ. ಅಂತಹ ಪ್ರಯತ್ನಗಳು ನಡೆದಾಗಲೆಲ್ಲ ರಾಜ್ಯಶಕ್ತಿಯ ದೊಣ್ಣೆಯನ್ನು ಮುರಿದು ಬಿಸುಡಿದೆ ಜನಶಕ್ತಿ.

ಈ ದುಸ್ಸಾಹಸ ಕೈಬಿಡಿ. ಬಿಡದಿದ್ದರೆ ಸಮಸ್ಯೆ ಹುಟ್ಟಿಹಾಕುತ್ತೀರಿ. ಈಶಾನ್ಯ, ತಮಿಳುನಾಡು, ಜಮ್ಮು-ಕಾಶ್ಮೀರದಲ್ಲಿ ಈಗಾಗಲೆ ಸಮಸ್ಯೆಗಳು ತಲೆದೋರತೊಡಗಿವೆ. ನಿಮ್ಮ ಕಣ್ಣುಗಳು ಅವುಗಳನ್ನು ಕಾಣದಾಗಿವೆ. ಅಶೋಕ ಸಾಮ್ರಾಟ ಎಲ್ಲರನ್ನೂ ಗೌರವಿಸಿದ. ನೀವು ಅಗೌರವಿಸತೊಡಗಿದ್ದೀರಿ.

ಭಿನ್ನ ಭಾಷೆ, ಇತಿಹಾಸ, ಸಂಸ್ಕೃತಿಗಳ ಅದುಮಿಡಲು ಹೊರಟಿದ್ದೀರಿ. ತಮಿಳು ಭಾಷೆ, ತಮಿಳು ಸಂಸ್ಕೃತಿ, ತಮಿಳು ಅಸ್ಮಿತೆಯು ಭಾರತದ ಸಂಸ್ಕೃತಿ, ಭಾರತದ ಅಸ್ಮಿತೆಯೂ ಹೌದು. ರಾಜ್ಯಗಳ ಅಸ್ಮಿತೆಯೇ ಭಾರತದ ಅಸ್ಮಿತೆ. ಭಿನ್ನ ಭಾಷೆ ಸಂಸ್ಕೃತಿ ಅಸ್ಮಿತೆಗಳ ಸುಂದರ ಹೂಗುಚ್ಛ ನಮ್ಮ ದೇಶ. ವಿಶ್ವದ ಯಾವ ಶಕ್ತಿಗೂ ಸವಾಲೆಸೆಯಬಲ್ಲದು. ನಿಮ್ಮ ಇಡೀ ಜೀವಮಾನದಲ್ಲಿ ತಮಿಳುನಾಡಿನ ಜನರನ್ನು ಆಳಲಾರರಿ ನೀವು.

ನನ್ನ ಮುತ್ತಾತ ಸ್ವಾತಂತ್ರ್ಯ ಹೋರಾಟದಲ್ಲಿ 15 ವರ್ಷಗಳ ಕಾಲ ಜೈಲಲ್ಲಿದ್ದರು. ಅಜ್ಜಿಯ ಮೈಯನ್ನು 32 ಗುಂಡುಗಳು ಸೀಳಿದವು, ತಂದೆಯ ದೇಹ ಛಿದ್ರಛಿದ್ರವಾಯಿತು. ದೇಶಕ್ಕಾಗಿ ತ್ಯಾಗ ಮಾಡಿದ ಮನೆತನ ನನ್ನದು. ಆರೆಸ್ಸೆಸ್ ಮತ್ತು ಬಿಜೆಪಿ ನಮ್ಮ ದೇಶದ ತಳಪಾಯದ ಜೊತೆ ಆಟವಾಡುತ್ತಿದೆ, ಅದನ್ನು ದುರ್ಬಲಗೊಳಿಸುತ್ತಿದೆ. ದೇಶ ದುರ್ಬಲವಾಗಿದೆ. ಸಂವಾದ ಸತ್ತಿದೆ. ಸಂಸ್ಥೆಗಳು ಸತ್ವ ಕಳೆದುಕೊಂಡಿವೆ. ನೆರೆಯ ದೇಶಗಳು ನಮ್ಮನ್ನು ಮುತ್ತತೊಡಗಿವೆ. ಚೀನಾ-ಪಾಕಿಸ್ತಾನವನ್ನು ಇನ್ನಷ್ಟು ಒಟ್ಟುಗೂಡಿಸುವ ಅವಿವೇಕದ ವಿದೇಶನೀತಿಯನ್ನು ಅನುಸರಿಸಲಾಗಿದೆ.

ಎರಡು ಭಾರತಗಳನ್ನು ಹುಟ್ಟುಹಾಕಿದ್ದೀರಿ. ಅನಂತ ಅಧಿಕಾರ ಅಸೀಮಿತ ಸಂಪತ್ತು ಹೊಂದಿರುವ ಭಾರತ. ಮತ್ತೊಂದು ಬಡವರ ಭಾರತ. ಎರಡರ ನಡುವಣ ಕಂದಕ ಹೆಚ್ಚುತ್ತಲೇ ಇದೆ. ಬಡವರ ಭಾರತದಲ್ಲಿ ಉದ್ಯೋಗಗಳಿಲ್ಲ. ಭಾರತದಲ್ಲಿ ಐವತ್ತು ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗ ಇಂದು ಭಾರತದಲ್ಲಿ ನೆಲೆಸಿದೆ. 2021ರ ಒಂದೇ ವರ್ಷದಲ್ಲಿ ಮೂರು ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗಕ್ಕಾಗಿ ಹಾಹಾಕಾರ ನೆಲೆಸಿದೆ. ರಾಷ್ಟ್ರಪತಿ ಭಾಷಣದಲ್ಲಿ ಈ ಕುರಿತ ಚಕಾರವೂ ಇಲ್ಲ.

ಲಕ್ಷಾಂತರ ಕೋಟಿ ರುಪಾಯಿಗಳನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಅಸಂಘಟಿತ ವಲಯಗಳಿಂದ ಕಿತ್ತುಕೊಂಡು ಶತಕೋಟ್ಯಾಧಿಪತಿ ಉದ್ಯಮಿಗಳಿಗೆ ನೀಡಲಾಗಿದೆ. ಕನಿಷ್ಠ ಪಕ್ಷ ಸಂಘಟಿತ ವಲಯಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದ್ದರೆ ಎರಡು ಭಾರತಗಳು ಆಗುತ್ತಿರಲಿಲ್ಲ.

ಶೇ.84ರಷ್ಟು ಭಾರತೀಯರ ಆದಾಯ ಕುಸಿದಿದ್ದು, ಬಡತನಕ್ಕೆ ಕುಸಿಯುತ್ತಿದ್ದಾರೆ. 27 ಕೋಟಿ ಜನರನ್ನು ನಾವು ಬಡತನದಿಂದ ಮೇಲೆತ್ತಿದ್ದೆವು. ನೀವು 23 ಕೋಟಿ ಜನರನ್ನು ಬಡತನಕ್ಕೆ ಇಳಿಸಿದ್ದೀರಿ. ಗರೀಬ ಹಿಂದುಸ್ತಾನ ಇದೆಲ್ಲವನ್ನೂ ನೋಡುತ್ತಿದೆ. ಅದು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ದೇಶದ ಶೇ.55ರಷ್ಟು ಜನರು ಹೊಂದಿರುವುದಕ್ಕಿಂತ ಹೆಚ್ಚಿನ ಸಂಪತ್ತು ಕೇವಲ 100 ಮಂದಿ ಧನಿಕರ ಸಂದೂಕಗಳಲ್ಲಿದೆ.

ರಾಹುಲ್ ಆಡಿರುವ ಈ ಮಾತುಗಳು ಸಕಾಲಿಕ ಮತ್ತು ಸ್ವಾಗತಾರ್ಹವೆಂದು ಜನತಂತ್ರವಾದಿಗಳು ಪ್ರತಿಕ್ರಿಯಿಸಿದ್ದಾರೆ. ಸಂವಿಧಾನಿಕ ಸಂಸ್ಥೆಗಳನ್ನು ಬುಡಮೇಲು ಮಾಡಿರುವ ಮತ್ತು ಈ ಸಂಸ್ಥೆಗಳ ಸ್ವಾಯತ್ತತೆಯನ್ನು ಮುರಿದು ಕೆಡವಿ ತನ್ನ ಕಪಿಮುಷ್ಠಿಗೆ ತೆಗೆದುಕೊಂಡಿರುವ ಕುರಿತು ರಾಹುಲ್ ಮಾಡಿರುವ ಆಪಾದನೆಗಳು ಸತ್ಯದೂರವಲ್ಲ.

ಬಲಿಷ್ಠ ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನಲ್ಲಿ ರಾಜ್ಯಗಳು ಹೆಚ್ಚು ಸ್ವಾಯತ್ತತೆ ಕೇಳಿದರೆ ಅದು ಅವುಗಳ ಹಕ್ಕು. ಸಹಕಾರಿ ಒಕ್ಕೂಟ ವ್ಯವಸ್ಥೆಯು ಘನವಾಗಿ ಕೆಲಸ ಮಾಡಿದ್ದು, ಈ ಮಾತಿಗೆ ರಾಜ್ಯ ಸರ್ಕಾರಗಳು ಮತ್ತು ಒಕ್ಕೂಟ ಸರ್ಕಾರ ಒಟ್ಟಾಗಿ ಕೋವಿಡ್ ಸಂಕಟವನ್ನು ಎದುರಿಸಿದ ಉದಾಹರಣೆ ನೀಡುತ್ತಿದ್ದಾರೆ. ಕೋವಿಡ್ ಕಾಲದಲ್ಲಿ ಲಸಿಕೆಗಳನ್ನು ಮತ್ತು ಟೆಸ್ಟ್ ಕಿಟ್‌ಗಳನ್ನು ತಾವೇ ತರಿಸಿಕೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ನಿರಾಕರಿಸಲಾಗಿತ್ತು. ಈ ಧೋರಣೆ ಉಂಟು ಮಾಡಿದ ನಷ್ಟವನ್ನು, ಹೆಚ್ಚಿಸಿದ ಸಂಕಟವನ್ನು ಮರೆಯುವಂತಿಲ್ಲ.

ಬ್ರಿಟಿಷ್ ವಸಾಹತುವಾದಿಗಳು ಭಾರತವು ಒಂದು ಒಕ್ಕೂಟ ರಚನೆಯೆಂದು ಒಪ್ಪಿಕೊಂಡಿದ್ದರು. ಒಂದು ಮೂಲೆಯಲ್ಲಿ ಕುಳಿತು ಕೈಯಲ್ಲಿ ಬಡಿಗೆ ಹಿಡಿದು, ತಾನು ಹೇಳಿದ್ದೇ ವೇದವಾಕ್ಯವೆಂದು ಈ ದೇಶವನ್ನು ಆಳುವುದು ಸಾಧ್ಯವಿಲ್ಲ. ಸಮಸ್ಯೆಯೆಂದರೆ ಕೇಂದ್ರದಲ್ಲಿ ಅಧಿಕಾರ ಹಿಡಿದವರು ಈ ಪರಿಕಲ್ಪನೆಯನ್ನು ಮರೆತೇಬಿಡುತ್ತಾರೆ ಎಂಬುವು ಖುದ್ದು ಮೋದಿಯವರೇ ಆಡಿದ್ದ ಮಾತುಗಳು. ಆಗ ಅವರು ಪ್ರಧಾನಿಯಾಗಿರಲಿಲ್ಲ, ಬದಲಿಗೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಮುಖ್ಯಮಂತ್ರಿಯಾಗಿ ತಾವೇ ಆಡಿದ್ದ ಇನ್ನೂ ಎಷ್ಟೋ ವಿಚಾರಗಳನ್ನು ಪ್ರಧಾನಮಂತ್ರಿಯಾಗಿ ಅವರು ವಿರೋಧಿಸಿದ್ದಾರೆ. ರಾಜ್ಯಗಳ ಸ್ವಾಯತ್ತತೆಯನ್ನು ತುಳಿದುಹಾಕಿದ್ದಾರೆ. ಈ ಮಾತಿನ ಸಮರ್ಥನೆಗೆ ನೂರಾರು ನಿದರ್ಶನಗಳನ್ನು ಪಟ್ಟಿ ಮಾಡಬಹುದು.

ರಾಜ್ಯಗಳ ಹಕ್ಕುಗಳು ಮತ್ತು ಸ್ವಾಯತ್ತತೆ ಕುರಿತು ರಾಹುಲ್ ಇನ್ನಷ್ಟು ನೇರ ಮತ್ತು ಖಚಿತ ನಿಲುವು ತಳೆಯಬೇಕಿದೆ. ಅದು ಇನ್ನಷ್ಟು ಮಾಗಿ ಹರಳುಗಟ್ಟಬೇಕಿದೆ. ಆಚರಣೆಗೆ ಇಳಿಯಬೇಕಿದೆ.


ಇದನ್ನೂ ಓದಿ: ಹಿಜಾಬ್ ವಿವಾದದ ಸುತ್ತ ದ್ವೇಷದ ಹುತ್ತ; ಹಿಂದುತ್ವದಲ್ಲಿ ಬಿರುಕು ಮತ್ತು ನಂಜಿನ ನೀರಡಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Why are you gloryfying congress only you are ony around the Sonia Gandhi& her family what they did to this country.even they are not Indian origin. But you people are adhoring them is it journalism in your view

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...