Homeಅಂಕಣಗಳುಬಹುಜನ ಭಾರತ; ಬಿಜೆಪಿಗೆ ಉಳಿಗಾಲವಿಲ್ಲವೇ ಯುಪಿಯಲ್ಲಿ?

ಬಹುಜನ ಭಾರತ; ಬಿಜೆಪಿಗೆ ಉಳಿಗಾಲವಿಲ್ಲವೇ ಯುಪಿಯಲ್ಲಿ?

- Advertisement -
- Advertisement -

ಉತ್ತರಪ್ರದೇಶದ ಮೊದಲ ಎರಡು ಹಂತಗಳ ಮತದಾನದಲ್ಲಿ ಬಿಜೆಪಿ ಮುಳುಗುವ ನಿಶ್ಚಿತ ಸುಳಿವುಗಳು ಮೇಲೆ ತೇಲಿವೆ. ಮೋದಿ-ಶಾ-ಯೋಗಿ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ರಾಜ್ಯವು ಬಿಜೆಪಿ ಬಡಿದೆಬ್ಬಿಸಬಹುದಾದ ಭಾವೋದ್ವೇಗದ ಬಿರುಗಾಳಿಗೆ ಸಿಕ್ಕರೆ ಅಚ್ಚರಿಪಡಬೇಕಿಲ್ಲ.

ಹಾಲಿ ಯೋಗಿ ಸರ್ಕಾರ ಮಾತ್ರವಲ್ಲ, ಎರಡು ವರ್ಷಗಳ ನಂತರ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರದ ಅಳಿವು ಉಳಿವನ್ನೂ ಪ್ರಭಾವಿಸುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಏಳು ಹಂತದ ಮತದಾನ ಜರುಗಿದೆ. ಸೋಮವಾರ ಎರಡನೆಯ ಹಂತದ ಮತದಾನ ಮುಗಿದಿದ್ದು ಬಿಜೆಪಿಯನ್ನು ಕಳವಳಕ್ಕೆ ತಳ್ಳಿದೆ.

ಕಳೆದ ಸಲ ಬೀಸಿದ್ದ ಬಿಜೆಪಿ ಪರ ಗಾಳಿ ಈ ಸಲ ಕಂಡುಬಂದಿಲ್ಲ. ಪರವಾದ ಗಾಳಿ ಒತ್ತಟ್ಟಿಗಿರಲಿ, ಮೊದಲ ಎರಡು ಹಂತಗಳಲ್ಲಿ ಎದುರು ಗಾಳಿ ಬೀಸಿರುವ ಸೂಚನೆಗಳಿವೆ. ಬಿಜೆಪಿ ಬೆಂಬಲಿಗರು ಉತ್ಸಾಹ ಕಳೆದುಕೊಂಡಿದ್ದು ಮತಗಟ್ಟೆಯಿಂದ ದೂರ ಉಳಿದಿದ್ದಾರೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ತನ್ನ ಸರ್ಕಾರಗಳನ್ನು ಕಳೆದುಕೊಳ್ಳುವ ದುಸ್ಥಿತಿ ಎದುರಿಸಿದೆ.

ಜಯಂತ್ ಚೌಧರಿ

ಉತ್ತರಪ್ರದೇಶದಲ್ಲಿ ಉಳಿದ ಆರು ಹಂತಗಳಲ್ಲಿ ತಡವಾಗಿಯಾದರೂ ತನ್ನ ರಣತಂತ್ರ ಬದಲಿಸಿ ಬಿಜೆಪಿಗೆ ಚುನಾವಣೆಗಳನ್ನು ಗೆದ್ದುಕೊಡುವ ಜಾದೂಗಾರ ಅಮಿತ್ ಶಾ ’ಚಮತ್ಕಾರ’ ಮಾಡದೆ ಹೋದರೆ ಸೋಲು ಗೋಡೆ ಮೇಲಿನ ಬರೆಹ.

ಹಿಂದೂ-ಮುಸ್ಲಿಮ್ ಧ್ರುವೀಕರಣ, ಯಾದವೇತರ ಹಿಂದುಳಿದ ಜಾತಿಗಳು ಮತ್ತು ಮೇಲ್ಜಾತಿಗಳ ಸಾಮಾಜಿಕ ಎಂಜಿನಿಯರಿಂಗ್‌ನ ಬಿಜೆಪಿ ತಂತ್ರಗಳು ಶಿಖರ ಮುಟ್ಟಿಬಿಟ್ಟಿವೆ. ಅಲ್ಲಿಂದ ಕೆಳಗೆ ಇಳಿಯಬೇಕೇ ವಿನಾ ಮೇಲೇರುವ ಸಾಧ್ಯತೆ ಇಲ್ಲ. ಶಿಖರದಲ್ಲೇ ಉಳಿಯುವ ಶಕ್ತಿಯೂ ಬಿಜೆಪಿಗೆ ಉಳಿದಿಲ್ಲ. ಧ್ರುವೀಕರಣದ ಹೊಸ ಪ್ರಯತ್ನಗಳು ಫಲ ನೀಡುತ್ತಿಲ್ಲ. ಧ್ರುವೀಕರಣದ ಬೆಂಕಿಗೆ ಅರಿವಿಲ್ಲದೆ ತುಪ್ಪ ಸುರಿಯುವ ತಪ್ಪುಗಳನ್ನು ಪ್ರತಿಪಕ್ಷಗಳು ಮಾಡುತ್ತಿಲ್ಲ.

ಯೋಗಿ-ಮೋದಿ ಅವರನ್ನು ಅಭಿವೃದ್ಧಿ ಕಾರ್ಯಗಳ ತಕ್ಕಡಿಯಲ್ಲಿಟ್ಟು ನೋಡಲಾಗುತ್ತಿದೆ. ಈ ದಿಸೆಯಲ್ಲಿ ಇಬ್ಬರ ಸಾಧನೆಗಳೂ ನಿರಾಶಾದಾಯಕ.

2014ರ ಲೋಕಸಭೆ, 2017ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆಗಳಲ್ಲಿ ಉತ್ತರಪ್ರದೇಶದ ಮತದಾರರು ನರೇಂದ್ರ ಮೋದಿ ಮತ್ತು ಬಿಜೆಪಿಗೆ ಅಭೂತಪೂರ್ವ ಗೆಲುವು ಗಳಿಸಿಕೊಟ್ಟಿದ್ದಾರೆ. ಮೂರು ಚುನಾವಣೆಗಳ ಸತತ ಗೆಲುವು ಆಳುವ ಪಕ್ಷ ಬಿಜೆಪಿಯಲ್ಲಿ ಅತಿಯಾದ ಆತ್ಮವಿಶ್ವಾಸ ಮೂಡಿಸಿದ್ದುಂಟು.

ಆದರೆ ಇತ್ತೀಚೆಗೆ ಸಿಡಿದಿರುವ ಸಂಕೇತಗಳು ಬಿಜೆಪಿಯ ನಿದ್ದೆ ಕೆಡಿಸಿವೆ. ದೆಹಲಿಯ ಗಡಿಗಳಲ್ಲಿ ಹದಿಮೂರು ತಿಂಗಳ ಕಾಲ ಜರುಗಿದ ರೈತ ಚಳವಳಿ ವಿಶೇಷವಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಬಿಜೆಪಿಯ ಕಾಲಕೆಳಗಿನ ನೆಲವನ್ನು ನಡುಗಿಸಿದೆ. ಚುನಾವಣೆಗಳಲ್ಲಿ ಪಶ್ಚಿಮ ಉತ್ತರಪ್ರದೇಶದಲ್ಲಿ ಬೀಸುವ ಗಾಳಿ ಈ ದೈತ್ಯ ರಾಜ್ಯದ ಇತರೆ ಸೀಮೆಗಳ ಮೇಲೂ ಪ್ರಭಾವ ಬೀರುತ್ತದೆಂಬ ನಂಬಿಕೆಗೆ ಆಧಾರಗಳಿವೆ.

ಸಾಮಾಜಿಕ-ಆರ್ಥಿಕ-ರಾಜಕೀಯ ನೆಲೆಗಳಲ್ಲಿ ಕರ್ನಾಟಕದ ಒಕ್ಕಲಿಗ ಜನಾಂಗಕ್ಕೆ ಹೋಲಿಸಬಹುದಾದ ಉತ್ತರ ಭಾರತದ ಬಲಿಷ್ಠ ಜಾತಿ ಜಾಟರದು. ವಿಶೇಷವಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಅವರ ಜನಸಂಖ್ಯಾ ಪ್ರಮಾಣ ಶೇ.20ಕ್ಕೂ ಹೆಚ್ಚು. ರಾಜ್ಯದಲ್ಲಿ ಇವರ ಪ್ರಮಾಣ ಶೇ.2ರಷ್ಟು. ಮೊದಲ ಹಂತದ ಮತದಾನ ಜರುಗಿರುವ ಪಶ್ಚಿಮ ಉತ್ತರಪ್ರದೇಶದಲ್ಲಿ ಈ ಜನಾಂಗದ ಪ್ರಭಾವ ಮಾಮೂಲಾಗಿಯೇ ಬಲು ದಟ್ಟ.

ಮೋದಿಯವರು ಮೂರು ಕೃಷಿ ಕಾನೂನುಗಳನ್ನು ವಾಪಸು ತೆಗೆದುಕೊಂಡ ನಂತರ ರೈತರ ನೈತಿಕ ಸ್ಥೈರ್ಯ ಎತ್ತರದಲ್ಲಿದೆ. ಗೋರಕ್ಷಣೆಯ ಹೆಸರಿನಲ್ಲಿ ಯೋಗಿ ಸರ್ಕಾರ ತಂದಿರುವ ಕಾನೂನಿನ ಫಲವಾಗಿ ಬೀಡಾಡಿ ದನಗಳು ಹಿಂಡುಹಿಂಡಾಗಿ ಹೊಲಗಳನ್ನು ನುಗ್ಗಿ ಮೇಯುತ್ತಿವೆ. ಅಡುಗೆ ಅನಿಲ ಸಿಲಿಂಡರ್ ದರ, ಟ್ರ್ಯಾಕ್ಟರುಗಳಿಗೆ ತುಂಬಿಸಬೇಕಿರುವ ಡೀಸೆಲ್ ದರ ಮುಗಿಲು ಮುಟ್ಟಿರುವ ಕುರಿತು ಭಾರೀ ಅಸಮಾಧಾನ ನೆಲೆಸಿದೆ. ಮೂರೂ ಚುನಾವಣೆಗಳಲ್ಲಿ ಬಲವಾಗಿ ಬಿಜೆಪಿಯ ಕೈಹಿಡಿದಿದ್ದ ಯುವಜನರು ನಿರುದ್ಯೋಗ ಸಮಸ್ಯೆಯಿಂದ ಭ್ರಮನಿರಸನ ಹೊಂದಿದ್ದಾರೆ.

ಇದೇ ಹತ್ತರಂದು ನಡೆದ ಮೊದಲ ಹಂತದ ಮತದಾನ ಹನ್ನೊಂದು ಜಿಲ್ಲೆಗಳಲ್ಲಿ ಹಂಚಿ ಹೋಗಿರುವ 58 ಸೀಟುಗಳಲ್ಲಿ ಪಕ್ಷಗಳ ಹಣೆಬರೆಹ ಬರೆಯಲಿದೆ. ಕಳೆದ ಬಾರಿ ಮೊದಲ ಹಂತದ ಈ 58 ಸೀಟುಗಳ ಪೈಕಿ 53ನ್ನು ಮತ್ತು ಎರಡನೆಯ ಹಂತದ 55 ಸೀಟುಗಳ ಪೈಕಿ 38ನ್ನು ಗೆದ್ದು ವಿಕ್ರಮ ಸ್ಥಾಪಿಸಿತ್ತು ಬಿಜೆಪಿ. ಕಳೆದ ಮೂರು ಚುನಾವಣೆಗಳಲ್ಲಿ ಜಾಟರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯತ್ತ ಸರಿದಿದ್ದರು. ಚರಣಸಿಂಗ್ ನಿಧನದ ನಂತರ ಅವರ ಮಗ ಅಜಿತ್ ಸಿಂಗ್ ಬಿಜೆಪಿಯೊಂದಿಗೆ ಸರಸವಾಡಿದ ಕಾರಣ ಮುಸ್ಲಿಮರು ಲೋಕದಳದಿಂದ ದೂರವಾಗಿದ್ದರು. ಅಜಿತ್ ಸಿಂಗ್ ನಿಧನದ ನಂತರ ಪಕ್ಷದ ಆಡಳಿತಸೂತ್ರ ಅವರ ಮಗ ಜಯಂತ್ ಚೌಧರಿ ಕೈಯಲ್ಲಿದೆ. ಸಮಾಜವಾದಿ ಪಕ್ಷದ ತಲೆಯಾಳು ಅಖಿಲೇಶ್ ಸಿಂಗ್ ಈ ಸಲ ಹಲವು ಸಣ್ಣ ಪಕ್ಷಗಳನ್ನು ಸೆಳೆದು ಬಣ್ಣಬಣ್ಣದ ಬೆಚ್ಚನೆಯ ಕೌದಿ ಹೊಲಿದಿದ್ದಾರೆ. ಪಕ್ಷ ಕಳೆದುಕೊಂಡಿರುವ ಜನಾಧಾರವನ್ನು ಮರಳಿ ಗಳಿಸಲು ಹಗಲಿರುಳು ಶ್ರಮಿಸಿರುವ ಜಯಂತ್ ಮತ್ತು ಅಖಿಲೇಶ್ ಚುನಾವಣಾ ಮೈತ್ರಿ ಮಾಡಿಕೊಂಡಿರುವುದು ಇಬ್ಬರ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ದೆಹಲಿ ಗಡಿಗಳಲ್ಲಿ ಜರುಗಿದ ರೈತ ಚಳವಳಿಯು ಅವರ ಈ ಪ್ರಯತ್ನಕ್ಕೆ ಅನುಕೂಲಕರವಾಗಿ ಪರಿಣಮಿಸಿದೆ. ಅಜಿತ್ ಸಿಂಗ್ ಮತ್ತು ಜಯಂತ್ ಚೌಧರಿ ಅವರ ಲೋಕದಳವನ್ನು ಸೋಲಿಸಿದ್ದ ಜಾಟ ಜನಾಂಗ ಅದಕ್ಕಾಗಿ ಪಶ್ಚಾತ್ತಾಪಪಡುತ್ತಿದೆ. ಬಿಜೆಪಿ ಹುಟ್ಟಿ ಹಾಕಿದ ಹಿಂದೂ-ಮುಸ್ಲಿಮ್ ಧ್ರುವೀಕರಣದ ಅಲೆಯಲ್ಲಿ ತೇಲಿಹೋಗಿದ್ದ ಬಹುತೇಕ ಜಾಟರು ಈ ಸಲ ಬಿಜೆಪಿಗೆ ಎದುರಾಗಿ ನಿಂತಿದ್ದಾರೆ.

ಉತ್ತರಪ್ರದೇಶದಲ್ಲಿ ಯಾದವರದು ಸಂಖ್ಯಾಬಾಹುಳ್ಯದಲ್ಲಿ ಪ್ರಭಾವೀ ಹಿಂದುಳಿದ ಜಾತಿ. ಇವರ ಪ್ರಾಬಲ್ಯದಿಂದ ಅಸಮಾಧಾನಗೊಂಡ ಇತರೆ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಾಂಗಗಳನ್ನು ಒಲಿಸಿಕೊಂಡಿದ್ದು ಬಿಜೆಪಿಗೆ ಕಳೆದ ಮೂರು ಚುನಾವಣೆಗಳಲ್ಲಿ ಭಾರೀ ಶಕ್ತಿ ನೀಡಿತ್ತು. ಮುಖ್ಯಮಂತ್ರಿ ಆದಿತ್ಯನಾಥ ಅವರ ಕಾರ್ಯವೈಖರಿಯಿಂದ ಕುದಿಯುತ್ತಿದ್ದ ಕೆಲ ಪ್ರಮುಖ ಓ.ಬಿ.ಸಿ. ನಾಯಕರು ಪಕ್ಷ ತೊರೆದು ಅಖಿಲೇಶ್ ಅವರೊಂದಿಗೆ ಕೈ ಜೋಡಿಸಿರುವ ವಿದ್ಯಮಾನ ಬಿಜೆಪಿಯ ಶಕ್ತಿಯನ್ನು ಕುಂದಿಸಿರುವುದರಲ್ಲಿ ಅನುಮಾನವಿಲ್ಲ. ತಮ್ಮ ಜಾತಿ ರಜಪೂತರ ಪಕ್ಷಪಾತಿಯೆಂದು ಆಡಳಿತದಲ್ಲಿ ಢಾಳಾಗಿ ತೋರಿಸಿಕೊಂಡಿರುವ ಮುಖ್ಯಮಂತ್ರಿ ಆದಿತ್ಯನಾಥ ಅವರು ಬಿಜೆಪಿಯ ಕಟ್ಟರ್ ಬೆಂಬಲಿಗರಾಗಿದ್ದ ಬ್ರಾಹ್ಮಣರನ್ನೂ ಸಾಕಷ್ಟು ಎದುರು ಹಾಕಿಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಶೇ.12ಕ್ಕೂ ಹೆಚ್ಚು ಪ್ರಮಾಣದಲ್ಲಿರುವ ಬ್ರಾಹ್ಮಣರು ಈಗಲೂ ಬಿಜೆಪಿಯ ಬೆಂಬಲಿಗರೇ. ಆದರೆ ಕಳೆದ ಮೂರೂ ಚುನಾವಣೆಗಳಲ್ಲಿ ಕಂಡುಬಂದಿದ್ದ ಅವರ ಅಖಂಡ ಬೆಂಬಲದಲ್ಲಿ ಈ ಸಲ ಬಿರುಕುಗಳು ಮೂಡಿವೆ.

ಪಶ್ಚಿಮ ಉತ್ತರಪ್ರದೇಶ ಸೀಮೆಯಲ್ಲಿ ಮುಸಲ್ಮಾನರ ಪ್ರಮಾಣ ರಾಜ್ಯದಲ್ಲೇ ಅತಿ ಹೆಚ್ಚು. ಹನ್ನೆರಡು ಜಿಲ್ಲೆಗಳ ಲೆಕ್ಕ ಹಿಡಿದರೆ ಈ ಪ್ರಮಾಣ ಶೇ.35. ಲಾಗಾಯತಿನಿಂದ ಚೌಧರಿ ಚರಣಸಿಂಗ್ ಅವರ ಅನುಯಾಯಿಗಳು. ಜಯಂತ್ ಚೌಧರಿ ಕಾಲದಲ್ಲಿ ಲೋಕದಳದಿಂದ ದೂರ ಸರಿದಿದ್ದರು. 2013ರಲ್ಲಿ ಬಿಜೆಪಿ ಬಡಿದೆಬ್ಬಿಸಿದ್ದ ಕೋಮುವಾದಿ ಧ್ರುವೀಕರಣವನ್ನು ರೈತ ಚಳವಳಿ ಕರಗಿಸಿರುವ ನಿಚ್ಚಳ ಸೂಚನೆಗಳಿವೆ. ಜಾಟರು ಮತ್ತು ಮುಸಲ್ಮಾನರು ಪುನಃ ಹತ್ತಿರವಾಗಿದ್ದಾರೆ. ಇಬ್ಬರ ಸಂಯುಕ್ತ ಶಕ್ತಿ ಬಿಜೆಪಿಗೆ ಮುಳುವಾಗಬಲ್ಲದು. ಮಾಯಾವತಿ ಅವರ ಬಿ.ಎಸ್.ಪಿ. ಮತ್ತು ಅಖಿಲೇಶ್-ಜಯಂತ್ ಅವರ ಮೈತ್ರಿಕೂಟದ ನಡುವೆ ಅವರು ಆಯ್ಕೆ ಮಾಡಿಕೊಳ್ಳಬೇಕಿದೆ. ಬಿಜೆಪಿ ವಿರುದ್ಧ ಮಾಯಾವತಿ ಅವರ ವಿರೋಧ ಇತ್ತೀಚಿನ ದಿನಗಳಲ್ಲಿ ಮೊಂಡಾಗಿರುವ ಬೆಳವಣಿಗೆಯನ್ನು ಮುಸಲ್ಮಾನರು ಗಮನಿಸಿದ್ದಾರೆ.

ಮೋದಿ ಮತ್ತು ಶಾ ಕ್ರೊನಾಲಜಿಸೋಮವಾರ ಮತದಾನ ನಡೆದ ಉತ್ತರಪ್ರದೇಶದ ಹನ್ನೊಂದು ಜಿಲ್ಲೆಯ ಐದರಲ್ಲಿ ಮುಸಲ್ಮಾನರ ಮತದಾರರ ಪ್ರಮಾಣ ಶೇ.40ರಿಂದ 50. ರಾಂಪುರದಲ್ಲಿ ಶೇ.60. ಮುರಾದಾಬಾದಿನಲ್ಲಿ ಶೇ.47, ಬಿಜನೂರಿನಲ್ಲಿ ಶೇ.43, ಶಹಜಹಾನಪೂರ ಮತ್ತು ಮುಝಫ್ಫರ್ ಪುರದಲ್ಲಿ ಶೇ.41. ಈ ಮತಗಳು ಕಳೆದ ಸಲದಂತೆ ಬಿ.ಎಸ್.ಪಿ. ಮತ್ತು ಸಮಾಜವಾದಿ ಪಾರ್ಟಿಯ ನಡುವೆ ದೊಡ್ಡ ಪ್ರಮಾಣದಲ್ಲಿ ಚದುರಿರುವ ಸಂಕೇತಗಳಿಲ್ಲ. ಈ ಬೆಳವಣಿಗೆ ಬಿಜೆಪಿಗೆ ಒಳ್ಳೆಯ ಸುದ್ದಿಯೇನೂ ಅಲ್ಲ. ಕಡೆಯ ಗಳಿಗೆಯ ತನಕ ಯಾವ ಪಕ್ಷಕ್ಕೆ ಮತ ನೀಡಬೇಕೆಂದು ನಿರ್ಧರಿಸದೆ ಗೋಡೆಯ ಮೇಲೆ ಕುಳಿತುಕೊಳ್ಳುವ ಮತದಾರರ ಸಂಖ್ಯೆ ಸಣ್ಣದೇನೂ ಅಲ್ಲ. ಅವರು ಕಡೆಯ ನಿಮಿಷಗಳಲ್ಲಿ ಗೆಲ್ಲುವ ಪಕ್ಷದತ್ತ ವಾಲುತ್ತಾರೆ. ಈ ಬಾಬತ್ತಿನಲ್ಲಿಯೂ ಬಿಜೆಪಿ ಏಟು ತಿನ್ನುವ ಸಾಧ್ಯತೆಯೇ ಹೆಚ್ಚು.

ರಾಜ್ಯದ ಉಳಿದ ಭಾಗಗಳಾದ ಬುಂದೇಲಖಂಡ ಮತ್ತು ಅವಧದಲ್ಲಿ ಬಿಜೆಪಿ ಅಷ್ಟಾಗಿ ಶಕ್ತಿಗುಂದಿಲ್ಲ. ಪೂರ್ವಾಂಚಲದಲ್ಲಿ ಸಮಸಮ ಸ್ಪರ್ಧೆ ಏರ್ಪಡುವ ಸೂಚನೆಗಳಿವೆ. ಒಂದು ಮತ್ತು ಎರಡನೆಯ ಹಂತದ ಒಟ್ಟು ಸೀಟುಗಳ ಸಂಖ್ಯೆ 113. ಈ ಪೈಕಿ 91 ಸೀಟು ಬಾಚಿದ್ದ ಬಿಜೆಪಿ ಈ ಸಲ ಭಾರೀ ನಷ್ಟ ಎದುರಿಸಲಿದೆ.

ಪಶ್ಚಿಮ ಯುಪಿಯ ಗಾಳಿ ಇತರೆಡೆಗೆ ಬೀಸಿದ್ದನ್ನು ಕಳೆದ ಚುನಾವಣೆಗಳಲ್ಲಿ ಕಂಡುಬಂದಿದೆ. ಈ ಗಾಳಿಯನ್ನು ತಡೆದು ನಿಲ್ಲಿಸಲು ಬಿಜೆಪಿ ಯಾವ ತಂತ್ರ ಬಳಸಲಿದೆಯೆಂದು ಕಾದು ನೋಡಬೇಕಿದೆ.


ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ -2022: ಬಿಜೆಪಿ ಸೋಲಿನ ಭವಿಷ್ಯ ನುಡಿದ ನಾಯಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...