Homeಅಂಕಣಗಳುಬಹುಜನ ಭಾರತ; ಬಿಜೆಪಿಗೆ ಉಳಿಗಾಲವಿಲ್ಲವೇ ಯುಪಿಯಲ್ಲಿ?

ಬಹುಜನ ಭಾರತ; ಬಿಜೆಪಿಗೆ ಉಳಿಗಾಲವಿಲ್ಲವೇ ಯುಪಿಯಲ್ಲಿ?

- Advertisement -
- Advertisement -

ಉತ್ತರಪ್ರದೇಶದ ಮೊದಲ ಎರಡು ಹಂತಗಳ ಮತದಾನದಲ್ಲಿ ಬಿಜೆಪಿ ಮುಳುಗುವ ನಿಶ್ಚಿತ ಸುಳಿವುಗಳು ಮೇಲೆ ತೇಲಿವೆ. ಮೋದಿ-ಶಾ-ಯೋಗಿ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ರಾಜ್ಯವು ಬಿಜೆಪಿ ಬಡಿದೆಬ್ಬಿಸಬಹುದಾದ ಭಾವೋದ್ವೇಗದ ಬಿರುಗಾಳಿಗೆ ಸಿಕ್ಕರೆ ಅಚ್ಚರಿಪಡಬೇಕಿಲ್ಲ.

ಹಾಲಿ ಯೋಗಿ ಸರ್ಕಾರ ಮಾತ್ರವಲ್ಲ, ಎರಡು ವರ್ಷಗಳ ನಂತರ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರದ ಅಳಿವು ಉಳಿವನ್ನೂ ಪ್ರಭಾವಿಸುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಏಳು ಹಂತದ ಮತದಾನ ಜರುಗಿದೆ. ಸೋಮವಾರ ಎರಡನೆಯ ಹಂತದ ಮತದಾನ ಮುಗಿದಿದ್ದು ಬಿಜೆಪಿಯನ್ನು ಕಳವಳಕ್ಕೆ ತಳ್ಳಿದೆ.

ಕಳೆದ ಸಲ ಬೀಸಿದ್ದ ಬಿಜೆಪಿ ಪರ ಗಾಳಿ ಈ ಸಲ ಕಂಡುಬಂದಿಲ್ಲ. ಪರವಾದ ಗಾಳಿ ಒತ್ತಟ್ಟಿಗಿರಲಿ, ಮೊದಲ ಎರಡು ಹಂತಗಳಲ್ಲಿ ಎದುರು ಗಾಳಿ ಬೀಸಿರುವ ಸೂಚನೆಗಳಿವೆ. ಬಿಜೆಪಿ ಬೆಂಬಲಿಗರು ಉತ್ಸಾಹ ಕಳೆದುಕೊಂಡಿದ್ದು ಮತಗಟ್ಟೆಯಿಂದ ದೂರ ಉಳಿದಿದ್ದಾರೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ತನ್ನ ಸರ್ಕಾರಗಳನ್ನು ಕಳೆದುಕೊಳ್ಳುವ ದುಸ್ಥಿತಿ ಎದುರಿಸಿದೆ.

ಜಯಂತ್ ಚೌಧರಿ

ಉತ್ತರಪ್ರದೇಶದಲ್ಲಿ ಉಳಿದ ಆರು ಹಂತಗಳಲ್ಲಿ ತಡವಾಗಿಯಾದರೂ ತನ್ನ ರಣತಂತ್ರ ಬದಲಿಸಿ ಬಿಜೆಪಿಗೆ ಚುನಾವಣೆಗಳನ್ನು ಗೆದ್ದುಕೊಡುವ ಜಾದೂಗಾರ ಅಮಿತ್ ಶಾ ’ಚಮತ್ಕಾರ’ ಮಾಡದೆ ಹೋದರೆ ಸೋಲು ಗೋಡೆ ಮೇಲಿನ ಬರೆಹ.

ಹಿಂದೂ-ಮುಸ್ಲಿಮ್ ಧ್ರುವೀಕರಣ, ಯಾದವೇತರ ಹಿಂದುಳಿದ ಜಾತಿಗಳು ಮತ್ತು ಮೇಲ್ಜಾತಿಗಳ ಸಾಮಾಜಿಕ ಎಂಜಿನಿಯರಿಂಗ್‌ನ ಬಿಜೆಪಿ ತಂತ್ರಗಳು ಶಿಖರ ಮುಟ್ಟಿಬಿಟ್ಟಿವೆ. ಅಲ್ಲಿಂದ ಕೆಳಗೆ ಇಳಿಯಬೇಕೇ ವಿನಾ ಮೇಲೇರುವ ಸಾಧ್ಯತೆ ಇಲ್ಲ. ಶಿಖರದಲ್ಲೇ ಉಳಿಯುವ ಶಕ್ತಿಯೂ ಬಿಜೆಪಿಗೆ ಉಳಿದಿಲ್ಲ. ಧ್ರುವೀಕರಣದ ಹೊಸ ಪ್ರಯತ್ನಗಳು ಫಲ ನೀಡುತ್ತಿಲ್ಲ. ಧ್ರುವೀಕರಣದ ಬೆಂಕಿಗೆ ಅರಿವಿಲ್ಲದೆ ತುಪ್ಪ ಸುರಿಯುವ ತಪ್ಪುಗಳನ್ನು ಪ್ರತಿಪಕ್ಷಗಳು ಮಾಡುತ್ತಿಲ್ಲ.

ಯೋಗಿ-ಮೋದಿ ಅವರನ್ನು ಅಭಿವೃದ್ಧಿ ಕಾರ್ಯಗಳ ತಕ್ಕಡಿಯಲ್ಲಿಟ್ಟು ನೋಡಲಾಗುತ್ತಿದೆ. ಈ ದಿಸೆಯಲ್ಲಿ ಇಬ್ಬರ ಸಾಧನೆಗಳೂ ನಿರಾಶಾದಾಯಕ.

2014ರ ಲೋಕಸಭೆ, 2017ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆಗಳಲ್ಲಿ ಉತ್ತರಪ್ರದೇಶದ ಮತದಾರರು ನರೇಂದ್ರ ಮೋದಿ ಮತ್ತು ಬಿಜೆಪಿಗೆ ಅಭೂತಪೂರ್ವ ಗೆಲುವು ಗಳಿಸಿಕೊಟ್ಟಿದ್ದಾರೆ. ಮೂರು ಚುನಾವಣೆಗಳ ಸತತ ಗೆಲುವು ಆಳುವ ಪಕ್ಷ ಬಿಜೆಪಿಯಲ್ಲಿ ಅತಿಯಾದ ಆತ್ಮವಿಶ್ವಾಸ ಮೂಡಿಸಿದ್ದುಂಟು.

ಆದರೆ ಇತ್ತೀಚೆಗೆ ಸಿಡಿದಿರುವ ಸಂಕೇತಗಳು ಬಿಜೆಪಿಯ ನಿದ್ದೆ ಕೆಡಿಸಿವೆ. ದೆಹಲಿಯ ಗಡಿಗಳಲ್ಲಿ ಹದಿಮೂರು ತಿಂಗಳ ಕಾಲ ಜರುಗಿದ ರೈತ ಚಳವಳಿ ವಿಶೇಷವಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಬಿಜೆಪಿಯ ಕಾಲಕೆಳಗಿನ ನೆಲವನ್ನು ನಡುಗಿಸಿದೆ. ಚುನಾವಣೆಗಳಲ್ಲಿ ಪಶ್ಚಿಮ ಉತ್ತರಪ್ರದೇಶದಲ್ಲಿ ಬೀಸುವ ಗಾಳಿ ಈ ದೈತ್ಯ ರಾಜ್ಯದ ಇತರೆ ಸೀಮೆಗಳ ಮೇಲೂ ಪ್ರಭಾವ ಬೀರುತ್ತದೆಂಬ ನಂಬಿಕೆಗೆ ಆಧಾರಗಳಿವೆ.

ಸಾಮಾಜಿಕ-ಆರ್ಥಿಕ-ರಾಜಕೀಯ ನೆಲೆಗಳಲ್ಲಿ ಕರ್ನಾಟಕದ ಒಕ್ಕಲಿಗ ಜನಾಂಗಕ್ಕೆ ಹೋಲಿಸಬಹುದಾದ ಉತ್ತರ ಭಾರತದ ಬಲಿಷ್ಠ ಜಾತಿ ಜಾಟರದು. ವಿಶೇಷವಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಅವರ ಜನಸಂಖ್ಯಾ ಪ್ರಮಾಣ ಶೇ.20ಕ್ಕೂ ಹೆಚ್ಚು. ರಾಜ್ಯದಲ್ಲಿ ಇವರ ಪ್ರಮಾಣ ಶೇ.2ರಷ್ಟು. ಮೊದಲ ಹಂತದ ಮತದಾನ ಜರುಗಿರುವ ಪಶ್ಚಿಮ ಉತ್ತರಪ್ರದೇಶದಲ್ಲಿ ಈ ಜನಾಂಗದ ಪ್ರಭಾವ ಮಾಮೂಲಾಗಿಯೇ ಬಲು ದಟ್ಟ.

ಮೋದಿಯವರು ಮೂರು ಕೃಷಿ ಕಾನೂನುಗಳನ್ನು ವಾಪಸು ತೆಗೆದುಕೊಂಡ ನಂತರ ರೈತರ ನೈತಿಕ ಸ್ಥೈರ್ಯ ಎತ್ತರದಲ್ಲಿದೆ. ಗೋರಕ್ಷಣೆಯ ಹೆಸರಿನಲ್ಲಿ ಯೋಗಿ ಸರ್ಕಾರ ತಂದಿರುವ ಕಾನೂನಿನ ಫಲವಾಗಿ ಬೀಡಾಡಿ ದನಗಳು ಹಿಂಡುಹಿಂಡಾಗಿ ಹೊಲಗಳನ್ನು ನುಗ್ಗಿ ಮೇಯುತ್ತಿವೆ. ಅಡುಗೆ ಅನಿಲ ಸಿಲಿಂಡರ್ ದರ, ಟ್ರ್ಯಾಕ್ಟರುಗಳಿಗೆ ತುಂಬಿಸಬೇಕಿರುವ ಡೀಸೆಲ್ ದರ ಮುಗಿಲು ಮುಟ್ಟಿರುವ ಕುರಿತು ಭಾರೀ ಅಸಮಾಧಾನ ನೆಲೆಸಿದೆ. ಮೂರೂ ಚುನಾವಣೆಗಳಲ್ಲಿ ಬಲವಾಗಿ ಬಿಜೆಪಿಯ ಕೈಹಿಡಿದಿದ್ದ ಯುವಜನರು ನಿರುದ್ಯೋಗ ಸಮಸ್ಯೆಯಿಂದ ಭ್ರಮನಿರಸನ ಹೊಂದಿದ್ದಾರೆ.

ಇದೇ ಹತ್ತರಂದು ನಡೆದ ಮೊದಲ ಹಂತದ ಮತದಾನ ಹನ್ನೊಂದು ಜಿಲ್ಲೆಗಳಲ್ಲಿ ಹಂಚಿ ಹೋಗಿರುವ 58 ಸೀಟುಗಳಲ್ಲಿ ಪಕ್ಷಗಳ ಹಣೆಬರೆಹ ಬರೆಯಲಿದೆ. ಕಳೆದ ಬಾರಿ ಮೊದಲ ಹಂತದ ಈ 58 ಸೀಟುಗಳ ಪೈಕಿ 53ನ್ನು ಮತ್ತು ಎರಡನೆಯ ಹಂತದ 55 ಸೀಟುಗಳ ಪೈಕಿ 38ನ್ನು ಗೆದ್ದು ವಿಕ್ರಮ ಸ್ಥಾಪಿಸಿತ್ತು ಬಿಜೆಪಿ. ಕಳೆದ ಮೂರು ಚುನಾವಣೆಗಳಲ್ಲಿ ಜಾಟರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯತ್ತ ಸರಿದಿದ್ದರು. ಚರಣಸಿಂಗ್ ನಿಧನದ ನಂತರ ಅವರ ಮಗ ಅಜಿತ್ ಸಿಂಗ್ ಬಿಜೆಪಿಯೊಂದಿಗೆ ಸರಸವಾಡಿದ ಕಾರಣ ಮುಸ್ಲಿಮರು ಲೋಕದಳದಿಂದ ದೂರವಾಗಿದ್ದರು. ಅಜಿತ್ ಸಿಂಗ್ ನಿಧನದ ನಂತರ ಪಕ್ಷದ ಆಡಳಿತಸೂತ್ರ ಅವರ ಮಗ ಜಯಂತ್ ಚೌಧರಿ ಕೈಯಲ್ಲಿದೆ. ಸಮಾಜವಾದಿ ಪಕ್ಷದ ತಲೆಯಾಳು ಅಖಿಲೇಶ್ ಸಿಂಗ್ ಈ ಸಲ ಹಲವು ಸಣ್ಣ ಪಕ್ಷಗಳನ್ನು ಸೆಳೆದು ಬಣ್ಣಬಣ್ಣದ ಬೆಚ್ಚನೆಯ ಕೌದಿ ಹೊಲಿದಿದ್ದಾರೆ. ಪಕ್ಷ ಕಳೆದುಕೊಂಡಿರುವ ಜನಾಧಾರವನ್ನು ಮರಳಿ ಗಳಿಸಲು ಹಗಲಿರುಳು ಶ್ರಮಿಸಿರುವ ಜಯಂತ್ ಮತ್ತು ಅಖಿಲೇಶ್ ಚುನಾವಣಾ ಮೈತ್ರಿ ಮಾಡಿಕೊಂಡಿರುವುದು ಇಬ್ಬರ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ದೆಹಲಿ ಗಡಿಗಳಲ್ಲಿ ಜರುಗಿದ ರೈತ ಚಳವಳಿಯು ಅವರ ಈ ಪ್ರಯತ್ನಕ್ಕೆ ಅನುಕೂಲಕರವಾಗಿ ಪರಿಣಮಿಸಿದೆ. ಅಜಿತ್ ಸಿಂಗ್ ಮತ್ತು ಜಯಂತ್ ಚೌಧರಿ ಅವರ ಲೋಕದಳವನ್ನು ಸೋಲಿಸಿದ್ದ ಜಾಟ ಜನಾಂಗ ಅದಕ್ಕಾಗಿ ಪಶ್ಚಾತ್ತಾಪಪಡುತ್ತಿದೆ. ಬಿಜೆಪಿ ಹುಟ್ಟಿ ಹಾಕಿದ ಹಿಂದೂ-ಮುಸ್ಲಿಮ್ ಧ್ರುವೀಕರಣದ ಅಲೆಯಲ್ಲಿ ತೇಲಿಹೋಗಿದ್ದ ಬಹುತೇಕ ಜಾಟರು ಈ ಸಲ ಬಿಜೆಪಿಗೆ ಎದುರಾಗಿ ನಿಂತಿದ್ದಾರೆ.

ಉತ್ತರಪ್ರದೇಶದಲ್ಲಿ ಯಾದವರದು ಸಂಖ್ಯಾಬಾಹುಳ್ಯದಲ್ಲಿ ಪ್ರಭಾವೀ ಹಿಂದುಳಿದ ಜಾತಿ. ಇವರ ಪ್ರಾಬಲ್ಯದಿಂದ ಅಸಮಾಧಾನಗೊಂಡ ಇತರೆ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಾಂಗಗಳನ್ನು ಒಲಿಸಿಕೊಂಡಿದ್ದು ಬಿಜೆಪಿಗೆ ಕಳೆದ ಮೂರು ಚುನಾವಣೆಗಳಲ್ಲಿ ಭಾರೀ ಶಕ್ತಿ ನೀಡಿತ್ತು. ಮುಖ್ಯಮಂತ್ರಿ ಆದಿತ್ಯನಾಥ ಅವರ ಕಾರ್ಯವೈಖರಿಯಿಂದ ಕುದಿಯುತ್ತಿದ್ದ ಕೆಲ ಪ್ರಮುಖ ಓ.ಬಿ.ಸಿ. ನಾಯಕರು ಪಕ್ಷ ತೊರೆದು ಅಖಿಲೇಶ್ ಅವರೊಂದಿಗೆ ಕೈ ಜೋಡಿಸಿರುವ ವಿದ್ಯಮಾನ ಬಿಜೆಪಿಯ ಶಕ್ತಿಯನ್ನು ಕುಂದಿಸಿರುವುದರಲ್ಲಿ ಅನುಮಾನವಿಲ್ಲ. ತಮ್ಮ ಜಾತಿ ರಜಪೂತರ ಪಕ್ಷಪಾತಿಯೆಂದು ಆಡಳಿತದಲ್ಲಿ ಢಾಳಾಗಿ ತೋರಿಸಿಕೊಂಡಿರುವ ಮುಖ್ಯಮಂತ್ರಿ ಆದಿತ್ಯನಾಥ ಅವರು ಬಿಜೆಪಿಯ ಕಟ್ಟರ್ ಬೆಂಬಲಿಗರಾಗಿದ್ದ ಬ್ರಾಹ್ಮಣರನ್ನೂ ಸಾಕಷ್ಟು ಎದುರು ಹಾಕಿಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಶೇ.12ಕ್ಕೂ ಹೆಚ್ಚು ಪ್ರಮಾಣದಲ್ಲಿರುವ ಬ್ರಾಹ್ಮಣರು ಈಗಲೂ ಬಿಜೆಪಿಯ ಬೆಂಬಲಿಗರೇ. ಆದರೆ ಕಳೆದ ಮೂರೂ ಚುನಾವಣೆಗಳಲ್ಲಿ ಕಂಡುಬಂದಿದ್ದ ಅವರ ಅಖಂಡ ಬೆಂಬಲದಲ್ಲಿ ಈ ಸಲ ಬಿರುಕುಗಳು ಮೂಡಿವೆ.

ಪಶ್ಚಿಮ ಉತ್ತರಪ್ರದೇಶ ಸೀಮೆಯಲ್ಲಿ ಮುಸಲ್ಮಾನರ ಪ್ರಮಾಣ ರಾಜ್ಯದಲ್ಲೇ ಅತಿ ಹೆಚ್ಚು. ಹನ್ನೆರಡು ಜಿಲ್ಲೆಗಳ ಲೆಕ್ಕ ಹಿಡಿದರೆ ಈ ಪ್ರಮಾಣ ಶೇ.35. ಲಾಗಾಯತಿನಿಂದ ಚೌಧರಿ ಚರಣಸಿಂಗ್ ಅವರ ಅನುಯಾಯಿಗಳು. ಜಯಂತ್ ಚೌಧರಿ ಕಾಲದಲ್ಲಿ ಲೋಕದಳದಿಂದ ದೂರ ಸರಿದಿದ್ದರು. 2013ರಲ್ಲಿ ಬಿಜೆಪಿ ಬಡಿದೆಬ್ಬಿಸಿದ್ದ ಕೋಮುವಾದಿ ಧ್ರುವೀಕರಣವನ್ನು ರೈತ ಚಳವಳಿ ಕರಗಿಸಿರುವ ನಿಚ್ಚಳ ಸೂಚನೆಗಳಿವೆ. ಜಾಟರು ಮತ್ತು ಮುಸಲ್ಮಾನರು ಪುನಃ ಹತ್ತಿರವಾಗಿದ್ದಾರೆ. ಇಬ್ಬರ ಸಂಯುಕ್ತ ಶಕ್ತಿ ಬಿಜೆಪಿಗೆ ಮುಳುವಾಗಬಲ್ಲದು. ಮಾಯಾವತಿ ಅವರ ಬಿ.ಎಸ್.ಪಿ. ಮತ್ತು ಅಖಿಲೇಶ್-ಜಯಂತ್ ಅವರ ಮೈತ್ರಿಕೂಟದ ನಡುವೆ ಅವರು ಆಯ್ಕೆ ಮಾಡಿಕೊಳ್ಳಬೇಕಿದೆ. ಬಿಜೆಪಿ ವಿರುದ್ಧ ಮಾಯಾವತಿ ಅವರ ವಿರೋಧ ಇತ್ತೀಚಿನ ದಿನಗಳಲ್ಲಿ ಮೊಂಡಾಗಿರುವ ಬೆಳವಣಿಗೆಯನ್ನು ಮುಸಲ್ಮಾನರು ಗಮನಿಸಿದ್ದಾರೆ.

ಮೋದಿ ಮತ್ತು ಶಾ ಕ್ರೊನಾಲಜಿಸೋಮವಾರ ಮತದಾನ ನಡೆದ ಉತ್ತರಪ್ರದೇಶದ ಹನ್ನೊಂದು ಜಿಲ್ಲೆಯ ಐದರಲ್ಲಿ ಮುಸಲ್ಮಾನರ ಮತದಾರರ ಪ್ರಮಾಣ ಶೇ.40ರಿಂದ 50. ರಾಂಪುರದಲ್ಲಿ ಶೇ.60. ಮುರಾದಾಬಾದಿನಲ್ಲಿ ಶೇ.47, ಬಿಜನೂರಿನಲ್ಲಿ ಶೇ.43, ಶಹಜಹಾನಪೂರ ಮತ್ತು ಮುಝಫ್ಫರ್ ಪುರದಲ್ಲಿ ಶೇ.41. ಈ ಮತಗಳು ಕಳೆದ ಸಲದಂತೆ ಬಿ.ಎಸ್.ಪಿ. ಮತ್ತು ಸಮಾಜವಾದಿ ಪಾರ್ಟಿಯ ನಡುವೆ ದೊಡ್ಡ ಪ್ರಮಾಣದಲ್ಲಿ ಚದುರಿರುವ ಸಂಕೇತಗಳಿಲ್ಲ. ಈ ಬೆಳವಣಿಗೆ ಬಿಜೆಪಿಗೆ ಒಳ್ಳೆಯ ಸುದ್ದಿಯೇನೂ ಅಲ್ಲ. ಕಡೆಯ ಗಳಿಗೆಯ ತನಕ ಯಾವ ಪಕ್ಷಕ್ಕೆ ಮತ ನೀಡಬೇಕೆಂದು ನಿರ್ಧರಿಸದೆ ಗೋಡೆಯ ಮೇಲೆ ಕುಳಿತುಕೊಳ್ಳುವ ಮತದಾರರ ಸಂಖ್ಯೆ ಸಣ್ಣದೇನೂ ಅಲ್ಲ. ಅವರು ಕಡೆಯ ನಿಮಿಷಗಳಲ್ಲಿ ಗೆಲ್ಲುವ ಪಕ್ಷದತ್ತ ವಾಲುತ್ತಾರೆ. ಈ ಬಾಬತ್ತಿನಲ್ಲಿಯೂ ಬಿಜೆಪಿ ಏಟು ತಿನ್ನುವ ಸಾಧ್ಯತೆಯೇ ಹೆಚ್ಚು.

ರಾಜ್ಯದ ಉಳಿದ ಭಾಗಗಳಾದ ಬುಂದೇಲಖಂಡ ಮತ್ತು ಅವಧದಲ್ಲಿ ಬಿಜೆಪಿ ಅಷ್ಟಾಗಿ ಶಕ್ತಿಗುಂದಿಲ್ಲ. ಪೂರ್ವಾಂಚಲದಲ್ಲಿ ಸಮಸಮ ಸ್ಪರ್ಧೆ ಏರ್ಪಡುವ ಸೂಚನೆಗಳಿವೆ. ಒಂದು ಮತ್ತು ಎರಡನೆಯ ಹಂತದ ಒಟ್ಟು ಸೀಟುಗಳ ಸಂಖ್ಯೆ 113. ಈ ಪೈಕಿ 91 ಸೀಟು ಬಾಚಿದ್ದ ಬಿಜೆಪಿ ಈ ಸಲ ಭಾರೀ ನಷ್ಟ ಎದುರಿಸಲಿದೆ.

ಪಶ್ಚಿಮ ಯುಪಿಯ ಗಾಳಿ ಇತರೆಡೆಗೆ ಬೀಸಿದ್ದನ್ನು ಕಳೆದ ಚುನಾವಣೆಗಳಲ್ಲಿ ಕಂಡುಬಂದಿದೆ. ಈ ಗಾಳಿಯನ್ನು ತಡೆದು ನಿಲ್ಲಿಸಲು ಬಿಜೆಪಿ ಯಾವ ತಂತ್ರ ಬಳಸಲಿದೆಯೆಂದು ಕಾದು ನೋಡಬೇಕಿದೆ.


ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ -2022: ಬಿಜೆಪಿ ಸೋಲಿನ ಭವಿಷ್ಯ ನುಡಿದ ನಾಯಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...