ದಲಿತ ಮಹಿಳೆಯೊಬ್ಬರನ್ನು ದೇವಸ್ಥಾನದ ಒಳಗಿನ ವೇದಿಕೆಯ ಮೇಲೆ ನಿಂತು ಪ್ರಾರ್ಥನೆ ಮಾಡುವುದನ್ನು ತಡೆದಿದ್ದಕ್ಕಾಗಿ ತಮಿಳುನಾಡಿನ ಚಿದಂಬರಂ ನಟರಾಜರ ದೇವಸ್ಥಾನದ 20 ಅರ್ಚಕರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ-1989 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫೆಬ್ರವರಿ 15ರ ಮಂಗಳವಾರದಂದು ಈ ಘಟನೆ ನಡೆದಿದೆ. ಸ್ಥಳೀಯವಾಗಿ ದೀಕ್ಷಿತರೆಂದು ಕರೆಯಲ್ಪಡುವ ಅರ್ಚಕರು, ದೇವಸ್ಥಾನ ಪ್ರವೇಶಿಸಿದ ಎಸ್ಸಿ ಸಮುದಾಯಕ್ಕೆ ಸೇರಿರುವ ಜಯಶೀಲಾಳ ಎಂಬ ಮಹಿಳೆಯನ್ನು ಸುತ್ತುವರೆದರು ‘ಕನಗಸಬೈ ಮೇಡೈ’ಗೆ ಎಂಬ ವೇದಿಕೆಗೆ ಬರದಂತೆ ತಡೆದಿದ್ದರು.
ಇದನ್ನೂ ಓದಿ: ಯುಪಿ: ಮಾಜಿ ಸಚಿವರ ಮಗನ ಆಶ್ರಮದಲ್ಲಿ ದಲಿತ ಯುವತಿಯ ಶವ ಪತ್ತೆ, ಮಾಯಾವತಿ ಆಕ್ರೋಶ
ಜಯಶೀಲ ಅವರು ವೇದಿಕೆ ಏರಲು ಬೇಕಾಗಿ ಮೆಟ್ಟಿಲು ಹತ್ತಲು ಯತ್ನಿಸುತ್ತಿದ್ದಾಗ ಅರ್ಚಕರು ಮಹಿಳೆಯನ್ನು ಸುತ್ತುವರೆದು ಕಿರುಚಾಡಿದ್ದಾರೆ. ಈ ಘಟನೆಯ ಹಲವು ವಿಡಿಯೋಗಳು ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ. ಅರ್ಚಕರೊಬ್ಬರು ಜಯಶೀಲಾ ಅವರನ್ನು ಕೈ ಹಿಡಿದು ಎಳೆದುಕೊಂಡು ಹೋಗಲು ಯತ್ನಿಸುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ.
ತಮಿಳುನಾಡಿನ ಚಿದಂಬರಂನಲ್ಲಿ ದಲಿತ ಮಹಿಳೆಯೊಬ್ಬರನ್ನು ದೇವಸ್ಥಾನ ಪ್ರವೇಶಿಸದಂತೆ ಬ್ರಾಹ್ಮಣ ಅರ್ಚಕರು ತಡೆದಿದ್ದು ಮತ್ತು ಅನುಚಿತವಾಗಿ ವರ್ತಿಸಿದ್ದಾರೆ.#NaanuGauri #Tamilnadu #Chidambaram @tnpoliceoffl @mkstalin pic.twitter.com/OpdtA1KGvq
— Naanu Gauri (@naanugauri) February 19, 2022
ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಅರ್ಚಕರು ತನಗೆ ಬೆದರಿಕೆ ಹಾಕಿದ್ದಾರೆ ಮತ್ತು ಪಾತ್ರೆಗಳನ್ನು ಕದ್ದಿದ್ದಾಗಿ ತನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾಗಿ ಜಯಶೀಲಾ ಅವರು ದೂರು ದಾಖಲಿಸಿದ್ದಾರೆ.
ಈ ದೇವಸ್ಥಾನದಲ್ಲಿ ಇತ್ತೀಚೆಗೆ ವರದಿಯಾದ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮುನ್ನ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ಗಣೇಶ್ ಎಂಬವರು ಕನಗಸಬೈ ವೇದಿಕೆಯಿಂದ ಪ್ರಾರ್ಥನೆ ಸಲ್ಲಿಸಲು ಯತ್ನಿಸಿದ್ದರು. ಆದರೆ, ಅವರನ್ನು ತಡೆದು ದೇವಸ್ಥಾನ ಪ್ರವೇಶಿಸದಂತೆ ಅಮಾನತುಗೊಳಿಸಲಾಗಿತ್ತು.
ಇದನ್ನೂ ಓದಿ: ಗುಜರಾತ್: ಮದುವೆಯಲ್ಲಿ ಸಾಂಪ್ರದಾಯಿಕ ಪೇಟ ಧರಿಸಿದ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ
ಜಯಶೀಲ ಅವರ ದೂರಿನ ಆಧಾರದ ಮೇಲೆ 20 ಅರ್ಚಕರ ವಿರುದ್ಧ ಎಸ್ಸಿ/ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಜಯಶೀಲ ಅವರ ಜೊತೆಗಿದ್ದ ಅರ್ಚಕ ದರ್ಶನ್ ಅವರು ಹೇಳುವಂತೆ, ಕನಗಸಬೈ ವೇದಿಕೆಯಿಂದ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡದಿವ ನಿಯಮ ತಪ್ಪಾಗಿದ್ದು, ದೇವಸ್ಥಾನದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಚಿದಂಬರಂ ನಟರಾಜನ ದೇಗುಲದಲ್ಲಿ ಇಂತಹ ಹಲವಾರು ಅಕ್ರಮಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಕಾರಣಕ್ಕಾಗಿ ಈ ವೇದಿಕೆಯ ಮೇಲೆ ಅರ್ಚಕರು ಮಾತ್ರ ನಿಂತು ಪ್ರಾರ್ಥಿಸಬಹುದು ಎಂದು ನಿಯಮವನ್ನು ಮಾಡಲಾಗಿತ್ತು ಎಂದು ವರದಿಯಾಗಿದೆ. ಹಿಂದಿನ ಎಐಎಡಿಎಂಕೆ ಸರ್ಕಾರವು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಡಿಯಲ್ಲಿದ್ದ ದೇವಾಲಯವನ್ನು ಅರ್ಚಕರಿಗೆ ಹಿಂತಿರುಗಿಸಿತ್ತು.
ಇದನ್ನೂ ಓದಿ: ಯುಪಿ ಚುನಾವಣೆ: ಬದಲಾವಣೆ ಎದುರು ನೋಡುತ್ತಿರುವ ‘ದಲಿತ ರಾಜಧಾನಿ’ ಆಗ್ರಾ