Homeಕರ್ನಾಟಕಶ್ರದ್ಧಾಂಜಲಿ; ಬಿಡುಗಡೆಯ ಕನಸುಗಾರ ಪ್ರೊ.ಗಂಗಾಧರಮೂರ್ತಿ

ಶ್ರದ್ಧಾಂಜಲಿ; ಬಿಡುಗಡೆಯ ಕನಸುಗಾರ ಪ್ರೊ.ಗಂಗಾಧರಮೂರ್ತಿ

- Advertisement -
- Advertisement -

70ರ ದಶಕದಲ್ಲಿ ಇಡೀ ಕರ್ನಾಟಕ ರಾಜ್ಯದಲ್ಲಿ ಸಂಚಲನವನ್ನುಂಟುಮಾಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮತ್ತೊಬ್ಬ ಹಿರಿಯ ಒಡನಾಡಿ ಪ್ರೊ. ಗಂಗಾಧರ ಮೂರ್ತಿ ಅವರು ಸೆಪ್ಟಂಬರ್ 10ರಂದು ನಮ್ಮನ್ನಗಲಿದ್ದಾರೆ. ನಮಗೆಲ್ಲ ಈ ಸಮಯದಲ್ಲಿ ಅವರು ಇನ್ನಷ್ಟು ಕಾಲ ಇರಬೇಕಿತ್ತು ಎಂದು ಅನಿಸುವುದೊಂದು ಸಹಜ ಭಾವನೆ. ಕನ್ನಡದ ಮಹತ್ವದ ಕವಿಗಳಾದ ಮತ್ತು ಹಿರಿಯ ದಲಿತ ಚಳವಳಿಯ ನೇತಾರರಾಗಿದ್ದ ಡಾ. ಸಿದ್ದಲಿಂಗಯ್ಯ, ಪ್ರೊ. ಕೆ.ಬಿ ಸಿದ್ದಯ್ಯ ನಮ್ಮನ್ನು ಅಗಲಿದಾಗಲೂ ಅನೇಕರಲ್ಲಿ ಈ ರೀತಿಯ ಭಾವನೆ ಮೂಡಿತ್ತು.

ದಲಿತ ಸಂಘರ್ಷ ಸಮಿತಿಯು ಸಾಮಾಜಿಕವಾಗಿ ತುಳಿಯಲ್ಪಟ್ಟ ಅಥವಾ ಬಂಧಿಸಲ್ಪಟ್ಟ ಸಮಾಜದ ಬಿಡುಗಡೆಗಾಗಿ ಹಂಬಲಿಸಿ ಈ ನೆಲದಲ್ಲಿ ರೂಪುಗೊಂಡ ಒಂದು ಮಹತ್ವದ, ಐತಿಹಾಸಿಕ ಚಳವಳಿ. ಸಾಮಾನ್ಯವಾಗಿ ದಲಿತ ಚಳವಳಿಯೆಂದರೆ ತಮ್ಮ ಹಕ್ಕುಗಳಿಗಾಗಿ ದಲಿತರೇ ನಡೆಸಿದ ಹೋರಾಟ ಎಂಬ ಭಾವನೆ ನಮ್ಮ ಸಮಾಜದ ಅನೇಕರಲ್ಲಿದೆ. ಕೆಲವೊಮ್ಮೆ ಈ ಭಾವನೆ ಸಹಜವೂ ಇರಬಹುದು. ಆದರೆ ಕರ್ನಾಟಕದ ದಲಿತ ಚಳವಳಿ ಸ್ವರೂಪ ಈ ನಿಟ್ಟಿನಲ್ಲಿ ಬಹಳ ಭಿನ್ನವಾದುದು. ಕನ್ನಡದ ನೆಲದಲ್ಲಿ ಮೊದಲ ತಲೆಮಾರಿನ ದಲಿತರು ತಮ್ಮ ನೋವು ನಲಿವುಗಳನ್ನ, ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ದಬ್ಬಾಳಿಕೆಗಳನ್ನು ಪ್ರಶ್ನೆ ಮಾಡುವಂತಹ, ಅಭಿವ್ಯಕ್ತಿಸುವಂತಹ ಸಾಹಿತ್ಯವನ್ನು ಬರೆದಾಗ ಅದನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿ, ಸ್ವೀಕರಿಸಿ, ಪ್ರೋತ್ಸಾಹಿಸಿದ ಅನೇಕ ಪ್ರಜ್ಞಾವಂತರು ಈ ನಾಡಿನಲ್ಲಿ ಬದುಕಿ ಹೋಗಿದ್ದಾರೆ ಮತ್ತು ಇನ್ನು ಬದುಕುತ್ತಿದ್ದಾರೆ. ಅದೇ ರೀತಿ ದಲಿತರು ಸಂಘಟಿತರಾಗಿ ಚಳವಳಿಯನ್ನು ರೂಪಿಸಿದಾಗ ದಲಿತ ಸಮುದಾಯಕ್ಕೆ ಅದರ ನೇತೃತ್ವವನ್ನು ಕೊಟ್ಟು ಚಳವಳಿಗೆ ಬೆನ್ನೆಲುಬಾಗಿ ನಿಂತ ಅನೇಕ ದಲಿತೇತರ ಸಂಗಾತಿಗಳು ಈ ನಾಡಿನಲ್ಲಿ ಇದ್ದಾರೆ ಅಂತಹ ಮಹತ್ವದ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದವರು ಪ್ರೊ. ಗಂಗಾಧರ ಮೂರ್ತಿಯವರು. ಇಂಗ್ಲಿಷ್ ಸಾಹಿತ್ಯದ ಮೇಷ್ಟ್ರಾಗಿ ಅಧ್ಯಾಪನದ ಜೊತೆಗೆ ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರಿನ ಸುತ್ತಮುತ್ತ ದಲಿತ ಚಳವಳಿಯ ಸಂಗಾತಿಗಳ ಜೊತೆಗೂಡಿ ಅದನ್ನು ಕಟ್ಟಿ ಬೆಳೆಸಿದವರು. ಹಾಗೆಯೇ ಈ ಚಳವಳಿಯು ನಡೆಸಿದ ಮಹತ್ವದ ಭೂಮಿ ಹೋರಾಟಗಳಲ್ಲಿ ಒಂದಾದ ನಾಗಸಂದ್ರ ಭೂ ಹೋರಾಟದ ಮುಂಚೂಣಿಯಲ್ಲಿದ್ದವರು.

ಈ ಕುರಿತು ಅವರು ’ನಾಗಸಂದ್ರ ಭೂ ಆಕ್ರಮಣ ಚಳವಳಿ’ ಎಂಬ ಮಹತ್ವದ ಪುಸ್ತಕವನ್ನು ಬರೆದು ದಾಖಲಿಸಿದ್ದಾರೆ.ಇದು ಒಂದು ಭಾಗವಾದರೆ, ಪ್ರೊ ಗಂಗಾಧರಮೂರ್ತಿಯಂತವರ ವ್ಯಕ್ತಿತ್ವ ಈ ದೇಶಕ್ಕೆ, ಈ ಸಮಾಜಕ್ಕೆ ಯಾಕೆ ಬಹಳ ಅವಶ್ಯಕ ಎಂಬುದನ್ನು ಈ ಸಮಯದಲ್ಲಿ ನಾವು ಗಂಭೀರವಾಗಿ ಅವಲೋಕಿಸಬೇಕಾಗಿದೆ. ಅವರು ಬದುಕಿದ್ದಷ್ಟು ಕಾಲ ತಾವು ನಂಬಿದ ವಿಚಾರಗಳಿಗೆ ಬದ್ಧರಾಗಿ ಜನ ಚಳವಳಿಗಳ ಜೊತೆಗೆ ಬದುಕಿ ಮಾದರಿಯಾದರು. ಮೊದಲ ಬಾರಿಗೆ ನಾನು ಅವರನ್ನು ಭೇಟಿಯಾಗಿದ್ದು 2011ರ ಇಸವಿ. ಭಾರತದ ಮೊದಲ ತಲೆಮಾರಿನ ಸ್ತ್ರೀವಾದಿ ಚಿಂತಕಿ ಮತ್ತು ಬರಹಗಾರ್ತಿ ಪ್ರೊ. ಸೂಸಿಥಾರು ಅವರ ಜೊತೆಗೆ ’ದಕ್ಷಿಣ ಭಾರತದ ದಲಿತ ಬರಹಗಳು’ ಎಂಬ ಯೋಜನೆಗೆ ಕಾರ್ಯನಿರ್ವಹಿಸುವಾಗ ಅವರನ್ನು ಸಂದರ್ಶಿಸಲು ಗೌರಿಬಿದನೂರಿನ ಅವರ ಮನೆಗೆ ಭೇಟಿ ನೀಡಿದ್ದೆವು. ಆ ದಿನ ಅವರು ದಲಿತ ಸಂಘರ್ಷ ಸಮಿತಿಯ ಜೊತೆಗಿನ ತಮ್ಮ ಒಡನಾಟ ಹಾಗೂ ಜೀತ ವಿಮುಕ್ತರಿಗೆ ಸರ್ಕಾರದಿಂದ ಪ್ರತ್ಯೇಕ ಜಾಗವನ್ನು ಮಂಜೂರು ಮಾಡಿಸಿ ಶಂಭೂಕ ನಗರ ಎಂಬ ಹೊಸ ಹಳ್ಳಿಯನ್ನೇ ಕಟ್ಟಿದ ಸಂಗತಿಗಳನ್ನು ಹಂಚಿಕೊಂಡಿದ್ದು ಮಾತ್ರವಲ್ಲದೆ ಅಂದು ಶಂಭೂಕ ನಗರ ಎಂಬ ಆ ಕಾಲೋನಿಗೆ ನಮ್ಮನ್ನೆಲ್ಲ ಕರೆದುಕೊಂಡು ಹೋಗಿದ್ದರು.

ಪ್ರೊ.ಗಂಗಾಧರ ಮೂರ್ತಿಯವರು ಅಂದು ಕಾಲೋನಿಗೆ ಭೇಟಿ ನೀಡಿದ ಕೂಡಲೇ ಅಲ್ಲಿದ್ದ ಜನರು ’ಸರ್ ಬಂದಿದ್ದಾರೆ’ ಎಂದು ಒಬ್ಬರಿಗೊಬ್ಬರು ಮಾಹಿತಿಯನ್ನು ನೀಡಿಕೊಂಡು ಅವರ ಜೊತೆಗೆ ಖುಷಿಯಿಂದ ನೆರೆದದ್ದನ್ನು ನಾವು ಕಂಡೆವು. ಕಾಲೋನಿಯ ಜನರ ಕಷ್ಟ ಸುಖಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಅವರ ಕೊನೆಯ ದಿನಗಳವರೆಗೂ ಶಂಭೂಕ ನಗರದ ಜನರ ಸಂಪರ್ಕವನ್ನು ಉಳಿಸಿಕೊಂಡಿದ್ದ ರೀತಿ ಅವರ ಚಳವಳಿಯ ಬದ್ಧತೆಯ ಮಾದರಿ.

1938ರಲ್ಲಿ ಗೌರಿಬಿದನೂರಿನ ವಿದುರಾಶ್ವತ್ಥದಲ್ಲಿ ನಡೆದ ಧ್ವಜ ಸತ್ಯಾಗ್ರಹ ಹತ್ಯಾಕಾಂಡದ (ದಕ್ಷಿಣದ ಜಲಿಯನ ವಾಲಾಬಾಗ್ ಎಂದೇ ಪ್ರಖ್ಯಾತವಾಗಿದೆ) ನೆನಪಿಗಾಗಿ ಸ್ಮಾರಕ ಮತ್ತು ಗ್ರಂಥಾಲಯ ರೂಪಿಸಿ ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು ಪ್ರೊ.ಗಂಗಾಧರ ಮೂರ್ತಿಯವರು. ಜನಪರ ಚಳವಳಿಗಳಲ್ಲಿ ತೊಡಗಿಸಿಕೊಂಡೇ ಜತೆಜತೆಗೆ ಅತ್ಯುತ್ತಮವಾದ ಸಾಹಿತ್ಯ ಕೃತಿಗಳ ಅನುವಾದ ಮತ್ತು ರಚನೆಯಲ್ಲಿ ತೊಡಗಿ ಅಕ್ಷರದ ಮೂಲಕವೂ ಜಾಗೃತಿಯನ್ನು ಬಿತ್ತಿದರು. ಇಂದು ಜಾಗತಿಕ ಹಳ್ಳಿ ಎಂಬ ಹೆಬ್ಬಾವು ಚಳವಳಿಗಳನ್ನು ಸ್ವಲ್ಪಸ್ವಲ್ಪವೇ ನುಂಗಿಕೊಳ್ಳುತ್ತಿರುವ, ಬಂಡವಾಳಶಾಹಿಗಳು ಕೋಮುವಾದಿಗಳೊಂದಿಗೆ ಕೈಜೋಡಿಸಿರುವ ಈ ದುರಿತಕಾಲದಲ್ಲಿ ಪ್ರೊ. ಗಂಗಾಧರ ಮೂರ್ತಿಯವರು ನಮ್ಮೊಟ್ಟಿಗೆ ಇನ್ನಷ್ಟು ಕಾಲ ಇರಬೇಕಿತ್ತು ಎಂಬ ಭಾವನೆ ಮೂಡುವುದು ಈಗ ಸಹಜ. ಆದರೆ ಅವರು ಸದ್ಯ ಸ್ವಲ್ಪ ವಿಶ್ರಾಂತಿಯಲ್ಲಿದ್ದಾರೆಂದು ಭಾವಿಸಿ ನಾವೆಲ್ಲರೂ ಅವರ ಕೆಲಸಗಳನ್ನು ಮುಂದುವರಿಸೋಣ ಎಂಬುದಷ್ಟೇ ಈಗ ನಮಗೆ ನಾವೇ ಮಾಡಿಕೊಳ್ಳುವ ಸಾಂತ್ವನ.


ಇದನ್ನೂ ಓದಿ: ಚಕ್ರತೀರ್ಥನ ರೋಗ ಜೋಷಿಗೂ ಬಡಿಯಿತಂತಲ್ಲಾ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...