ನ್ಯಾಯಾಧೀಶರ ವರ್ಗಾವಣೆಯ ಬಗ್ಗೆ ಧರಣಿ ನಡೆಸುತ್ತಿರುವ ಗುಜರಾತ್ ಹೈಕೋರ್ಟ್ನ ವಕೀಲರನ್ನು ಭೇಟಿ ಮಾಡಲು ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂದ್ ಅವರು “ನ್ಯಾಯ ಕೇಳಿಕೊಂಡು ಬರುವವರು ಬಳಲುತ್ತಿದ್ದಾರೆ” ಎಂದು ಶನಿವಾರ ಹೇಳಿದ್ದಾರೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಆಯೋಜಿಸಿದ್ದ ಸನ್ಮಾನ ಕಾರ್ಯದಲ್ಲಿ ಮಾತನಾಡಿದ ಚಂದ್ರಚೂಡ್, ನ್ಯಾಯಾಂಗ ನೇಮಕಾತಿ ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ಒಕ್ಕೂಟ ಸರ್ಕಾರದ ಕಾನೂನು ಮಂತ್ರಿ ಕಿರಣ್ ರಿಜಿಜಿ ಮುಂದೆಯೆ ಸಮರ್ಥಿಸಿಕೊಂಡಿದ್ದಾರೆ. ಕೊಲೆಜಿಯಂ “ರಾಷ್ಟ್ರೀಯ ದೃಷ್ಟಿಕೋನ”ವನ್ನು ಗಮನದಲ್ಲಿಟ್ಟುಕೊಂಡು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಒಕ್ಕೂಟ ಸರ್ಕಾರದ ಕಾನೂನು ಸಚಿವ ಕಿರಣ್ ರಿಜಿಜು ಮಾತನಾಡಿ, ವರ್ಗಾವಣೆ ಪ್ರಕರಣದ ವಿಚಾರದಲ್ಲಿ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಪ್ರತಿಭಟನಾ ವಕೀಲರನ್ನು ಟೀಕಿಸಿದ್ದಾರೆ.
ಇದನ್ನೂ ಓದಿ: ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಕೊಲಿಜಿಯಂ ವ್ಯವಸ್ಥೆ ಅತ್ಯಗತ್ಯ: ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್
“ಇದೊಂದು ವೈಯಕ್ತಿಕ ಸಮಸ್ಯೆಯಾಗಿರಬಹುದು, ಆದರೆ ಸರ್ಕಾರ ಬೆಂಬಲಿಸುವ ಕೊಲಿಜಿಯಂನ ಪ್ರತಿ ನಿರ್ಧಾರಕ್ಕೂ ಇದೇ ರೀತಿ ಪುನರಾವರ್ತನೆಯಾದರೆ, ಇದು ಎಲ್ಲಿಗೆ ಹೋಗಿ ಮುಗಿಯುತ್ತದೆ? ಇಡೀ ಆಯಾಮವು ಬದಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯು ಬಹಳ ಹಿಂದಿನಿಂದಲೂ ಪ್ರಶ್ನಾರ್ಹವಾಗಿದೆ. ಈ ಕೊಲೆಜಿಯಂ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕಾಗಿದೆ ಎಂದು ಕಾನೂನು ಸಚಿವ ಕಿರೆನ್ ರಿಜಿಜು ಈ ಹಿಂದೆ ಹೇಳಿದ್ದರು.
ನ್ಯಾಯಮೂರ್ತಿ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರವು ಕನಿಷ್ಠವಾಗಿದೆ. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ನಲ್ಲಿ ವಕೀಲರನ್ನು ನ್ಯಾಯಾಧೀಶರಾಗಿ ಉನ್ನತೀಕರಿಸಬೇಕಾದರೆ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ನಡೆಸಿದ ವಿಚಾರಣೆಯನ್ನು ಪಡೆಯಲು ಮಾತ್ರ ಸರ್ಕಾರ ಸೀಮಿತವಾಗಿದೆ. ಈ ಪ್ರಕ್ರಿಯೆಯಲ್ಲಿ ಸರ್ಕಾರವು ಆಕ್ಷೇಪಣೆಗಳನ್ನು ಎತ್ತಬಹುದು ಮತ್ತು ಕೊಲೆಜಿಯಂನ ಆಯ್ಕೆಗಳ ಬಗ್ಗೆ ಸ್ಪಷ್ಟೀಕರಣಗಳನ್ನು ಪಡೆಯಬಹುದು. ಆದರೆ ಕೊಲೆಜಿಯಂ ಅದೇ ಹೆಸರುಗಳನ್ನು ಪುನರುಚ್ಚರಿಸಿದರೆ, ಸಂವಿಧಾನ ನ್ಯಾಯಪೀಠದ ತೀರ್ಪುಗಳ ಅಡಿಯಲ್ಲಿ, ಅವರನ್ನು ನ್ಯಾಯಾಧೀಶರನ್ನಾಗಿ ನೇಮಿಸಲು ಸರ್ಕಾರ ಬದ್ಧವಾಗಿರುತ್ತದೆ.
ಇದನ್ನೂ ಓದಿ: ಕೊಲಿಜಿಯಂ ಶಿಫಾರಸು: ಕೇಂದ್ರ ಸರ್ಕಾರ ನಿರ್ಲಕ್ಷ್ಯ
ಕೆಲವು ಶಿಫಾರಸುಗಳ ಬಗ್ಗೆ ಅಸಮಾಧಾನಗೊಂಡು ಸರ್ಕಾರವು ನೇಮಕಾತಿಗಳನ್ನು ವಿಳಂಬಗೊಳಿಸಿದ ಉದಾಹರಣೆಗಳಿವೆ. ಇದು ಒಕ್ಕೂಟ ಸರ್ಕಾರ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷದ ಕೇಂದ್ರವಾಗಿದ್ದು, ಸುಪ್ರೀಂಕೋರ್ಟ್ನಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹೆಣಗಾಡುವಂತಾಗುತ್ತದೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ಕಳೆದ ವಾರ ಸುಪ್ರಿಂಕೋರ್ಟ್ನ ಉನ್ನತ ಹುದ್ದೆಗೆ ಏರಿಸಲಾಗಿತ್ತು. ನವೆಂಬರ್ 16 ರಂದು ಅವರ ಮೊದಲ ಕೊಲೆಜಿಯಂ ಸಭೆ ನಡೆಸಿದ್ದರು. ಅದರಲ್ಲಿ ಅವರು ಮೂರು ಹೈಕೋರ್ಟ್ ನ್ಯಾಯಾಧೀಶರನ್ನು – ಒಬ್ಬರು ಮದ್ರಾಸ್, ಗುಜರಾತ್ ಮತ್ತು ತೆಲಂಗಾಣ- ವರ್ಗಾಯಿಸಲು ನಿರ್ಧರಿಸಿದ್ದರು.
ಐವರು ಸದಸ್ಯರಿರುವ ಈ ಕೊಲೆಜಿಯಂ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ. ರಾಜಾ ಅವರನ್ನು ರಾಜಸ್ಥಾನ ಹೈಕೋರ್ಟ್ಗೆ ವರ್ಗಾಯಿಸಲು ಶಿಫಾರಸು ಮಾಡಿತು. ಜೊತೆಗೆ ನ್ಯಾಯಮೂರ್ತಿ ನಿಖಿಲ್ ಕರಿಯೆಲ್ ಮತ್ತು ನ್ಯಾಯಮೂರ್ತಿ ಎ. ಅಭಿಷೇಕ್ ರೆಡ್ಡಿ ಅವರನ್ನು ಪಾಟ್ನಾ ಹೈಕೋರ್ಟ್ಗೆ ವರ್ಗಾಯಿಸಲು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: 12 ಹೈಕೋರ್ಟ್ಗಳಿಗೆ 68 ನ್ಯಾಯಮೂರ್ತಿಗಳ ಹೆಸರು ಶಿಫಾರಸು ಮಾಡಿದ ಕೊಲಿಜಿಯಂ
ನ್ಯಾಯಮೂರ್ತಿ ರಾಜಾ ಅವರನ್ನು ಮಾರ್ಚ್ 31, 2009 ರಂದು ಮದ್ರಾಸ್ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಿಸಲಾಯಿತು. ಸೆಪ್ಟೆಂಬರ್ 22, 2022 ರಿಂದ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಭಡ್ತಿ ಪಡೆದರು.
ನ್ಯಾಯಮೂರ್ತಿ ನಿಖಿಲ್ ಕರಿಯೆಲ್ ಪ್ರಸ್ತುತ ಗುಜರಾತ್ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಯಾಗಿದ್ದರೆ, ನ್ಯಾಯಮೂರ್ತಿ ಅಬಿಷೇಕ್ ರೆಡ್ಡಿ ಅವರನ್ನು ತೆಲಂಗಾಣ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಯಾಗಿ ಇದ್ದಾರೆ.
ಈ ವರ್ಗಾವನೆಯ ವಿರುದ್ಧ ವಕೀಲರು ಮುಷ್ಕರ ನಡೆಸಿದ್ದು, ವರ್ಗಾವಣೆ ಪ್ರಸ್ತಾಪವನ್ನು ಚರ್ಚಿಸಲು ಗುಜರಾತ್ ಬಾರ್ ಅಸೋಶಿಯೇಷನ್ನಿಂದ ನಿಯೋಗವನ್ನು ಭೇಟಿ ಮಾಡಲು ಸಿಜೆಐ ಒಪ್ಪಿಕೊಂಡಿದ್ದಾರೆ.
ಆಗಾಗ್ಗೆ ನಡೆಯುವ ಇಂತಹ ಮುಖಾಮುಖಿಗಳು ಆತಂಕಕ್ಕೀಡು ಮಾಡುತ್ತದೆ. ನ್ಯಾಯಾಲಯಕ್ಕೆ ಯಾವುದು ಒಳ್ಳೆಯದು ಎಂದು ಎಲ್ಲಾ ಕಡೆಯವರು ನಿರ್ಧರಿಸಬೇಕು ಎಂದು ಕಾನೂನು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ನಾನು ‘ಗೆ’ ಎಂಬ ಕಾರಣಕ್ಕೆ ನ್ಯಾಯಾಧೀಶರಾಗಿ ನೇಮಿಸುತ್ತಿಲ್ಲ: ವಕೀಲ ಸೌರಭ್ ಕಿರ್ಪಾಲ್
ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ನಿಖಿಲ್ ಕರಿಯೆಲ್ ಅವರ ವರ್ಗಾವಣೆಯ ಬಗ್ಗೆ ಗುಜರಾತ್ ಬಾರ್ ಪ್ರತಿನಿಧಿಗಳು ಸೋಮವಾರ ಸಿಜೆಐ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ನವೆಂಬರ್ 9 ರಂದು ಸಿಜೆಐ ಚಂದ್ರಚೂಡ್ ಅವರು ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದರು. ಅವರು ನವೆಂಬರ್ 10, 2024 ರವರೆಗೆ ಅಧಿಕಾರಾವಧಿಯನ್ನು ಹೊಂದಿರುತ್ತಾರೆ.