ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ನಡೆಯುವ ಗುಜರಾತ್ ಚುನಾವಣೆ ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟಿಸಿದೆ. ಈ ಬಾರಿ ಬಿಜೆಪಿಯು 38 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸುವುದು ದುಬಾರಿ ಆಗಿ ಪರಿಣಮಿಸುವ ಸಾಧ್ಯತೆಯಿದೆ. ಅವರಲ್ಲಿ 7 ಶಾಸಕರು ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದು, ಹಿಂತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ. ಬಿಜೆಪಿಯು ಅವರೆಲ್ಲರನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ಇಂದು ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ನ ಸೌರಾಷ್ಟ್ರದ ದೊರಾಜಿಯಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವಾಗಲೇ ಈ ಘಟನೆ ನಡೆದಿದೆ.
ಗಾಂಧಿನಗರದ ಬಿಜೆಪಿ ಕಚೇರಿ ಕಮಲಂ ಎದರು ಬಿಜೆಪಿ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರಿಗೆ ಟಿಕೆಟ್ ನೀಡದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದರ ನಡುವೆ ಈ ಬೆಳವಣಿಗೆಗಳು ನಡೆದಿವೆ. ರಾಜ್ಯದ ಗೃಹ ಸಚಿವ ಹರ್ಷ ಸಂಘ್ವಿ ಹಲವು ಬಂಡಾಯ ಶಾಸಕರ ಜೊತೆ ಸಂಧಾನ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜವಾಗಿಲ್ಲ.
ಇದನ್ನೂ ಓದಿ; ಗುಜರಾತ್ ಚುನಾವಣೆ: ನಗರಗಳಲ್ಲಿ ಪ್ರಬಲವಾಗಿರುವ ಬಿಜೆಪಿ ಮತ ಕಬಳಿಸಲಿದೆಯೇ ಆಪ್?
20 ವರ್ಷಗಳ ಹಿಂದೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಒತ್ತಾಯದ ಮೇರೆಗೆ ಬಿಜೆಪಿಗೆ ಸೇರಿದ್ದೆ ಎಂದು ಹೇಳಿಕೊಂಡಿರುವ ಆರು ಬಾರಿ ಶಾಸಕರಾಗಿರುವ ಟಿಕೆಟ್ ವಂಚಿತ ಮಧುಭಾಯಿ ಶ್ರೀವಾಸ್ತವ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಅತೃಪ್ತರ ಬಂಡಾಯ ಶಮನಗೊಳಿಸಲು ಗುಜರಾತ್ಗೆ ತೆರಳಿರುವ ಗೃಹ ಸಚಿವ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರೊಂದಿಗೆ 5 ಗಂಟೆಗಳ ಸುದೀರ್ಘ ಸಭೆ ನಡೆಸಿದ್ದಾರೆ. ಬಂಡಾಯವೆದ್ದಿರುವವರು ಬಹಳ ವರ್ಷಗಳಿಂದ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಅವರೊಂದಿಗೆ ಪ್ರೀತಿ ಮತ್ತು ಸಹಾನುಭೂತಿಯಿಂದ ಅವರೊಂದಿಗೆ ವ್ಯವಹರಿಸಿ ಎಂದು ಅಮಿತ್ ಶಾ ಹೇಳಿದ್ದರು.
ಇದೇ ರೀತಿಯ ಬಂಡಾಯವನ್ನು ಬಿಜೆಪಿ ಹಿಮಾಚಲ ಪ್ರದೇಶದಲ್ಲಿಯೂ ಸಹ ಅನುಭವಿಸಿತ್ತು. ಅಲ್ಲಿನ 68 ವಿಧಾನಸಭಾ ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಫೋನ್ ಕರೆ ಮಾಡಿ ಮಾತನಾಡಿದರೂ ಸಹ ಒಬ್ಬ ಬಂಡಾಯಗಾರನನ್ನು ಸಹ ಮನವೊಲಿಸಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ; ಹಿಮಾಚಲ ಪ್ರದೇಶ ಚುನಾವಣೆ: ಬಿಜೆಪಿ ವಿರುದ್ಧ ಸಿಡಿಮಿಡಿಗೊಂಡಿರುವ ಸೇಬು ಬೆಳೆಗಾರರು