Homeಅಂಕಣಗಳುಮತದಾರ ಕೊಟ್ಟ ಪೆಟ್ಟು ಮುಟ್ಟಿ ನೋಡಿಕೊಳ್ಳುವಂತಿದೆಯಲ್ಲಾ...

ಮತದಾರ ಕೊಟ್ಟ ಪೆಟ್ಟು ಮುಟ್ಟಿ ನೋಡಿಕೊಳ್ಳುವಂತಿದೆಯಲ್ಲಾ…

- Advertisement -
- Advertisement -

ಕರ್ನಾಟಕದ ಜನಸ್ತೋಮ ಮತಪೆಟ್ಟಿಗೆಯ ಮುಖಾಂತರ ಕೊಟ್ಟ ಏಟು ಮುಟ್ಟಿ ನೋಡಿಕೊಳ್ಳುವಂತಿದೆಯಲ್ಲಾ. ಹಾಗೆ ನೋಡಿದರೆ ಮುಟ್ಟಿ ನೋಡಿಕೊಳ್ಳುವವರ ಪಟ್ಟಿ ದೊಡ್ಡದಾಗಿದೆ. ಈ ಪೈಕಿ ಹೊಟ್ಟೆಪಾಡಿನ ಜ್ಯೋತಿಷಿಗಳು ಫಲಿತಾಂಶ ಬಂದಾಗ ಮನೆ ಬಾಗಿಲು ಹಾಕಿಕೊಂಡವರು ಇನ್ನೂ ತೆಗೆದಿಲ್ಲವಂತಲ್ಲಾ. ಆ ಪೈಕಿ ಪುರೋಹಿತಶಾಹಿ ಜ್ಯೋತಿಷಿಯೊಬ್ಬ ಹಣೆ ಮೈಗೆಲ್ಲಾ ತರೇವಾರಿ ಬಣ್ಣ ಬಳಿದುಕೊಂಡು, ’ಮೋದಿ ಜಾತಕ ಕುಂಡಲಿಯನ್ನು ನಾನು ಪರಿಶೀಲಿಸಿದಾಗ, ಅವರು ಹದಿನೆಂಟು ಗುಣಗಳುಳ್ಳ ನಾಯಕ, ಅವರು ಕರ್ನಾಟಕವನ್ನು ಪ್ರದಕ್ಷಿಣೆ ಮಾಡಿರುವುದರ ಪ್ರಯುಕ್ತ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗದ್ದುಗೆ ಏರಲಿದೆ’ ಎಂದಿದ್ದ. ಮತ್ತೊಬ್ಬ ನೆಲದ ಜಲ ಪತ್ತೆಹಚ್ಚುವಂತಹ ಸ್ಕೇಲು ತಯಾರಿಸಿಕೊಂಡು ಮೂರೂ ಪಾರ್ಟಿಯ ಚಿಹ್ನೆಯ ಮೇಲೆ ಹಿಡಿದಿದ್ದ ಆ ಸ್ಕೇಲು ಬಿಜೆಪಿಯ ಕಮಲದ ಎದುರು ಬಾಗಿತು ನೋಡಿ, ಬಿಜೆಪಿ ಬಿಟ್ಟು ಇನ್ನಾವ ಪಾರ್ಟಿಯೂ ಮೆಜಾರಿಟಿ ಪಡಿಯೋದಿಲ್ಲ ಎಂದ. ಮತ್ತೊಬ್ಬ ಹುಚ್ಚನಂತಿದ್ದ ಜ್ಯೋತಿಷಿ ಲಡಾಸು ಕಾರಿನ ಲೈಟಿನಂತಿದ್ದ ಎರಡು ಬಲ್ಪುಗಳ ಹಿಡಿಕೆ ತೋರಿಸಿ ತನ್ನ ಕಡೆಗೆ ತಿರುಗಿಸಿಕೊಂಡು ನೋಡಿ, ನನ್ನ ಅಂತರಾತ್ಮದಲ್ಲಿ ಕಮಲ ಮೂಡುತ್ತಿದೆ ಆದ್ದರಿಂದ ಈ ಚುನಾವಣೆ ನಂತರ ಕಮಲ ಅರಳಲಿದೆ ಎಂದ. ಈಗ ಇವರೆಲ್ಲರೂ ಬಾಗಿಲು ಬಂದ್ ಮಾಡಿಕೊಂಡು ಒಳಗಿದ್ದರೂ, ಯಾರಾದರೂ ಬಂದು ಬಾಗಿಲು ತಟ್ಟಿದರೆ ಧ್ವನಿ ಬದಲಿಸಿಕೊಂಡು ಅವರಿಲ್ಲಾ ಎನ್ನುತ್ತಿದ್ದಾರಲ್ಲಾ, ಥೂತ್ತೇರಿ.

*****

ಕರ್ನಾಟಕದ ಮತದಾರ ಕೊಟ್ಟ ಉತ್ತರದಲ್ಲಿ ಪ್ರಧಾನಿಯಾದವರು ಹೀಗೆ ನಡೆದುಕೊಳ್ಳಬಾರದೆಂಬ ಎಚ್ಚರಿಕೆಯಿದ್ದರೆ, ಇನ್ನು ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚಲು ಬಂದ ಶಾ, ಚುನಾವಣೆ ನಂತರ ಇಲ್ಲಿ ಗಲಭೆ ಏಳುತ್ತದೆ ಎಂದು ಧಮಕಿ ಹಾಕಿದ್ದರು. ಗೆಲ್ಲಲೋಸ್ಕರ ಯಾವ ಮಾತನ್ನಾದರೂ ಆಡುವ, ಏನನ್ನಾದರೂ ಮಾಡುವ ಶಾನ ಮಾತಾಗಲಿ, ತಂತ್ರವಾಗಲಿ ಕರ್ನಾಟಕದಲ್ಲಿ ಕೆಲಸ ಮಾಡಲಿಲ್ಲ. ಇನ್ನು ಚುನಾವಣೆ ಮುಗಿದ ಕೂಡಲೇ ತನ್ನನ್ನು ಯಾರಾದರೂ ಕರೆಸಿಕೊಳ್ಳುತ್ತಾರೆ ಎಂದು ಭಾವಿಸಿ ಸಿಂಗಾಪುರಕ್ಕೆ ಹಾರಿದ್ದ ಕುಮಾರಣ್ಣನಿಗೆ ಯಾವ ಜ್ಞಾನೋದಯವಾಯ್ತೋ ಏನೋ, ಒಂದೇ ಉಸುರಿಗೆ ಓಡಿಬಂದರೆ ಯಾರೂ ಮನೆಬಾಗಿಲಿಗೆ ಬಾರದಂತಾಗಿತ್ತಲ್ಲಾ. ಬಿಜೆಪಿಗಳು ಆಪರೇಷನ್ ಕಮಲದ ಸೊಲ್ಲೆತ್ತದಂತೆ ಮಾಡಿ, ಕುಮಾರಣ್ಣನ ಮನೆ ಬಾಗಿಲಿಗೆ ಯಾರೂ ಬರದಂತೆ ಮಾಡಿರುವ ಕರ್ನಾಟಕದ ಮತದಾರ ಇಡೀ ದೇಶಕ್ಕೆ ಬಂದು ದಿಕ್ಸೂಚಿಯನ್ನೆ ನೀಡಿದ್ದಾನಲ್ಲಾ. ಯಾವುದೇ ಚುನಾವಣೆಯಲ್ಲಿ ಕೆಲ ಅನಾಹುತಗಳು ನಡೆಯುತ್ತವೆ, ಅಂತಹ ಅನಾಹುತಗಳ ಪೈಕಿ ಶೆಟ್ಟರ್, ರಮೇಶ್‌ಕುಮಾರ್ ಮತ್ತು ಕಿಮ್ಮನೆ ರತ್ನಾಕರ್ ಸೋಲು ಕೂಡ ಸೇರಿವೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಬೇರೂರುವಂತೆ ಮಾಡಿದ ಶೆಟ್ಟರ್‌ಗೆ ಬಿಜೆಪಿ ಬೇರನ್ನು ಅಲ್ಲಾಡಿಸಲಾಗಲಿಲ್ಲ, ಆದರೂ ಅವರ ಬಂಡಾಯ ಬೇರೆ ತರದ ಕೆಲಸ ಮಾಡಿದೆ. ಇನ್ನು ರಮೇಶ್ ಕುಮಾರ್ ಸೋಲಿಸಲು ಬಹಳ ದಿನಗಳಿಂದ ಕೆಲವರು ಕಾಯುತ್ತಿದ್ದರು. ಇನ್ನು ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಸೋಲೂ ಇಡೀ ಕ್ಷೇತ್ರದ ಸೋಲಾಯಿತಂತಲ್ಲಾ, ಥೂತ್ತೇರಿ.

*****

ಈ ಚುನಾವಣೆಯ ಫಲಿತಾಂಶದಲ್ಲಿ ನಗಾಡುವ ಪ್ರಸಂಗಗಳೂ ನಡೆದಿವೆಯಲ್ಲಾ. ಹಿಂದಿನ ಸರಕಾರನ ಹ್ಯಂಗೋ ನಿಭಾಯಿಸಿ ದಡ ಮುಟ್ಟಿಸಿ ಮನಿಗೋಗನ ಎಂದಿದ್ದ ಮಾಧುಸ್ವಾಮಿಯನ್ನು ಜನ ಮನೆಗೆ ಕಳಿಸಿದ್ದಾರೆ. ಹಾಗೆಯೇ ಮುಸ್ಲಿಮರ ವಿಷಯದಲ್ಲಿ ತೀರ ತಲೆಕೆಡಿಸಿಕೊಂಡಿದ್ದ ಸಿ.ಟಿ ರವಿ, ಸಿದ್ದರಾಮಯ್ಯನವರನ್ನ ಸಿದ್ರಾಮುಲ್ಲಖಾನ್ ಎಂದು ಹೋದಲೆಲ್ಲಾ ಟೀಕಿಸಿ ಚಪ್ಪಾಳೆ ಗಿಟ್ಟಿಸುತ್ತಿದ್ದ. ಆ ಸಮಯದಲ್ಲಿ ಯಾರೋ ಒಬ್ಬ, ಕುಡಿದು ಚಿತ್ತಾಗಿ ರಸ್ತೆ ಬದಿಯಲ್ಲಿ ಅಂಗಾತ ಕುಸಿದಿದ್ದ ವ್ಯಕ್ತಿಯೊಬ್ಬನ ತಲೆಗೆ ಸಿ.ಟಿ ರವಿ ತಲೆ ಅಂಟಿಸಿ ವಾಟ್ಸಾಪಿಗೆ ಬಿಟ್ಟು ಮೆಚ್ಚುಗೆಗಳಿಸಿದ್ದ. ಆ ಸಮಯದಲ್ಲೇ ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಈಗಲೂ ಸಿ.ಟಿ ರವಿ ಆರು ಸಾವಿರ ಓಟಿನಲ್ಲಿ ಗೆಲ್ಲುತ್ತಾರೆ ಎಂದಿದ್ದ. ಅದೇ ಆರುಸಾವಿರ ವೋಟಿನಲ್ಲಿ ಸಿ.ಟಿ ರವಿ ಸೋತಿದ್ದಕ್ಕೆ ಚಿಕ್ಕಮಗಳೂರಿನ ಕಾರ್ಯಕರ್ತರು ಗೆದ್ದ ಅಭ್ಯರ್ಥಿ ತಮ್ಮಯ್ಯನಿಗೆ ಕ್ಷೀರಾಭಿಷೇಕ ಮಾಡುವುದು ಬಿಟ್ಟು, ಭೊಜೇಗೌಡರಿಗೆ ಹಾಲಿನಾಭಿಷೇಕ ಮಾಡಿದ್ದಾರಲ್ಲಾ. ಏಕೆಂದರೆ ಕುಮಾರಣ್ಣನ ಬಲಗೈಯಾಗಿರುವ ಭೊಜೇಗೌಡರಿಗೆ ಚುನಾವಣೆಯಲ್ಲಿ ಗೆಲ್ಲುವ ಶಕ್ತಿಯಿಲ್ಲ, ಆದರೆ ಯಾರನ್ನಾದರೂ ಸೋಲಿಸುವ ಶಕ್ತಿಯಿದೆ. ಇದನ್ನರಿತ ಚಿಕ್ಕಮಗಳೂರು ಜನ ಭೋಜೇಗೌಡರಿಗೆ ಕ್ಷೀರಾಭಿಷೇಕ ಮಾಡಿದ್ದಾರಲ್ಲಾ, ಥೂತ್ತೇರಿ.

ಇದನ್ನೂ ಓದಿ: ಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

ಚಿಕ್ಕಮಗಳೂರು ಪ್ರದೇಶದಲ್ಲಿ ಕುಡಚಿ ಕ್ಷೇತ್ರದ ಶಾಸಕ ಶಾನೆ ಓಡಾಡುತ್ತಿದ್ದ; ಆತನ ಸುದ್ದಿ ಶಾನೆ ಕುತೂಹಲವಾಗಿದೆ. ಕುಡಚಿ ಕ್ಷೇತ್ರದ ರಾಜಕಾರಣ ಗ್ರಹಿಸಿದ ಆತ ತನ್ನ ಪೊಲೀಸ್ ಕೆಲಸಕ್ಕೆ ರಾಜೀನಾಮೆ ಬರೆದು ಚುನಾವಣೆಗೆ ನಿಂತ ಸೋತ ನಂತರ ರಾಮುಲು ಪಕ್ಷದಿಂದ ಗೆದ್ದು ನಂತರ ಬಿಜೆಪಿ ಸೇರಿದ. ಆಗ ಆತನಿಗೆ ಇನ್ನಿಲ್ಲದ ಉತ್ಸಾಹ ಅಮಲೇರಿ ಲಂಬಾಣಿಗರನ್ನೆಲ್ಲಾ ಸಂಘಟಿಸಿ ಬಿಜೆಪಿಗೆ ಎಳೆಯತೊಡಗಿದ. ಇದನ್ನರಿತ ಸಿ.ಟಿ ರವಿ ಕುಡಚಿ ಶಾಸಕನನ್ನು ಚಿಕ್ಕಮಗಳೂರಿಗೆ ಕರೆಸಿ ಲಂಬಾಣಿಗರ ಭೇಟಿ ಮಾಡಿಸಿದ ಮೇಲೆ ಅವರೆಲ್ಲಾ ಬಿಜೆಪಿಗೆ ಓಟು ಮಾಡುತ್ತಾರೆಂದು ಭಾವಿಸಿದ. ಆದರೆ ಈಗ ಕುಡಚಿ ಶಾಸಕ ರಾಜೀವ್‌ನನ್ನು ಜನ ಮನೆಗೆ ಕಳಿಸಿದ್ದಾರೆ. ಶತಮಾನಗಳಿಂದ ಪಾಂಡ್ಯಾದಲ್ಲಿ ಬದುಕಿದ್ದ ಲಂಬಾಣಿಗರ ತಾಂಡಾಗಳನ್ನು ರೆವಿನ್ಯೂ ಗ್ರಾಮ ಮಾಡಿದ್ದು ಕಾಂಗ್ರೆಸ್ ಸರಕಾರ. ಆದರೆ ಎಲ್ಲಾ ದಮನಿತ ಜಾತಿಗಳ ಬಗ್ಗೆಯೂ ಹುಸಿಯಾದ ಕಾಳಜಿ ತೋರಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ಪಡಸಾಲೆಯಲ್ಲಿ ಮಫ್ತಿ ಪೊಲೀಸನಂತೆ ಓಡಾಡುತ್ತಿದ್ದ ರಾಜೀವನನ್ನು ಜನ ಆತನ ಊರಿಗೆ ಕಳಿಸಿದ್ದಾರೆ. ಏಕೆಂದರೆ ಈತ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡಿದ್ದು ಸುದ್ದಿಯಾಗಿತ್ತು. ಈತ ಇಷ್ಟು ಬೇಗೆ ಹಾಳಾಗಬಾರದಿತ್ತು ಎಂಬುದು ಕುಡಚಿ ಜನರ ಕುಹಕವಾಗಿದೆಯಲ್ಲಾ, ಥೂತ್ತೇರಿ.

*****

ಈ ನಡುವೆ ಹರಪ್ಪನಹಳ್ಳಿ ಜನ ಎಂ.ಪಿ ಪ್ರಕಾಶ್ ಮಗಳಾದ ಲತಾರನ್ನು ಗೆಲ್ಲಿಸಿ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ. ಹಿಂದೆ ಹರಪ್ಪನಹಳ್ಳಿ ಜನ ಎಂ.ಪಿ ಪ್ರಕಾಶರನ್ನು ಸೋಲಿಸಿದ್ದರು ಅವರ ಮಗ ಎಂ.ಪಿ ರವಿಯನ್ನು ಸೋಲಿಸಿದ್ದರು. ಆಸ್ಪತ್ರೆಯಲ್ಲಿದ್ದರೂ ಹರಪ್ಪನಹಳ್ಳಿಯನ್ನು 371(ಜೆ)ಗೆ ಸೇರಿಸಲು ಹೋರಾಡಿ ಕೊನೆಯುಸಿರೆಳೆದ ರವಿಯ ಬಗ್ಗೆ ಹರಪ್ಪನಹಳ್ಳಿ ಜನಕ್ಕೆ ಏನನ್ನಿಸಿತೋ ಏನೋ ಕಾಂಗ್ರೆಸ್ ಟಿಕೆಟ್ ಸಿಗದೆ ಪಕ್ಷೇತರವಾಗಿ ನಿಂತ ಲತಾರನ್ನ ಗೆಲ್ಲಿಸಿದ್ದಾರೆ. ಹರಪ್ಪನಹಳ್ಳಿ ಸೊಸೆಯಾದ ಲತಾರಲ್ಲಿ ಪ್ರಕಾಶರ ಗುಣಗಳಿವೆ, ಆದ್ದರಿಂದಲೇ ಗೆದ್ದು ಬಂದಿರುವುದು. ಇನ್ನು ಮಡಿಕೇರಿ ವಿರಾಜಪೇಟೆಯ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಈ ನೆಲದಿಂದ ಬಂದ ಅಡ್ಡಂಡ ಹೆಸರಿನ ವ್ಯಕ್ತಿಯೊಬ್ಬ ಆಘಾತಗೊಂಡು ರಾಜೀನಾಮೆ ಬರೆದಿದ್ದಾನೆ. ಮೈಸೂರು ರಂಗಾಯಣದ ಪಾವಿತ್ರ್ಯ ಕಾಪಾಡುವುದು ಕಲಾವಿದರ ಕರ್ತವ್ಯ. ಐದು ವರ್ಷಗಳ ನಂತರ ಮುಸ್ಲಿಂ ರಾಜಕಾರಣಿಗಳು ವಿಧಾನಸೌಧದ ಕಾರಿಡಾರ್‌ನಲ್ಲಿ ಕಾಣುತ್ತಿದ್ದಾರೆ. ಎಲ್ಲರನ್ನೂ ಒಳಗೊಂಡು ಬೆಳೆಸಬೇಕಾದ ಪ್ರಜಾಪ್ರಭುತ್ವದ ಮಹಾವೃಕ್ಷದಲ್ಲಿ ಮುಸ್ಲಿಮರು ಬಾರದಂತೆ ನೋಡಿಕೊಂಡ ಬಿಜೆಪಿಗಳು ಇತಿಹಾಸದಲ್ಲಿ ಅಕ್ಷಮ್ಯ ಅಪರಾಧವೆಸಗಿದ್ದಾರೆ. ಈ ಬಿಜೆಪಿಗಳ ಮನಸ್ಸಿನಾಳದಲ್ಲಿ ದಲಿತರ ದ್ವೇಷವೂ ಇದೆ. ಆದರೆ ಸದ್ಯಕ್ಕೆ ಅದನ್ನ ತೋಗೊಡುವುದಿಲ್ಲ. ಈಗ ಹಠಾತ್ತನೆ ಕಲೆ, ಸಾಹಿತ್ಯ, ಸಂಗೀತ ಪುಸ್ತಕಗಳೆಲ್ಲಾ ಅರ್ಥಪೂರ್ಣವಾಗಿ ಕಾಣತೊಡಗಿವೆಯಲ್ಲಾ, ಈ ಯಕ್ಷಣಿಗೆ ವಿಸ್ಮಯವಾಗುತ್ತಿದೆಯಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...