ಪೊಲೀಸರ ಕೊಲೆ ಪ್ರಕರಣವೊಂದರಲ್ಲಿ ಆರೋಪಿಗಳಾಗಿರುವ ದಲಿತ ಮಹಿಳೆ ಮತ್ತು ಆಕೆಯ ಸಂಬಂಧಿಯಾದ ಅಪ್ರಾಪ್ತ ಯುವತಿಯ ಮೇಲೆ ಕಸ್ಟಡಿಯಲ್ಲಿಯೇ ಹರಿಯಾಣ ಪೊಲೀಸರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಅಪ್ರಾಪ್ತೆಯ ತಾಯಿ ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ವಿಚಾರಣೆ ನಡೆಸುತ್ತಿದೆ.
ಜುಲೈ 30 ರಂದು ಸೋನಿಪತ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಯುವತಿಯ ತಾಯಿ ದಾಖಲಿಸಿದ ಎಫ್ಐಆರ್ ಪ್ರಕಾರ, “3 ಜನ ಆರೋಪಿಗಳಾದ ಸಹಾಯಕ ಸಬ್ಇನ್ಸ್ಪೆಕ್ಟರ್ ಸಂಜಯ್, ವಿಶೇಷ ಪೊಲೀಸ್ ಅಧಿಕಾರಿ ರಾಢೆ ಮತ್ತು ಕಾನ್ಸ್ಟಬಲ್ ಸಂದೀಪ್ ಸೇರಿದಂತೆ 7-9 ಪೊಲೀಸರು ಬಂಧನದಲ್ಲಿದ್ದ ಇಬ್ಬರನ್ನು ಜುಲೈ 3-5ರ ನಡುವೆ ರೋಡಾ ಪೊಲೀಸ್ ಠಾಣೆ ಕಸ್ಟಡಿಯಲ್ಲಿಯೇ ಅತ್ಯಾಚಾರ ಮಾಡಿದ್ದಾರೆ” ಎಂದು ಆರೋಪಿಸಲಾಗಿದೆ.
ಎಫ್ಐಆರ್ನಲ್ಲಿ ಹೆಸರಿಸಿರುವ ಆರೋಪಿಗಳ ಮೇಲೆ ಪೋಕ್ಸೋ ಕಾಯ್ದೆ ಮತ್ತು ಐಪಿಸಿ 376(2)(ಎ,ಡಿ) ಮತ್ತು ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಗಸ್ಟ್ 22 ರಂದು 18 ನೇ ವರ್ಷಕ್ಕೆ ಕಾಲಿಟ್ಟ ಅಪ್ರಾಪ್ತ ಬಾಲಕಿ ಮತ್ತು ದಲಿತ ಮಹಿಳೆ ಜುಲೈ 5 ರಿಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಲ್ ಜೈಲಿನಲ್ಲಿದ್ದರು ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಇದನ್ನೂ ಓದಿ: ದೆಹಲಿ: ಆಸ್ಪತ್ರೆ ಪಾರ್ಕಿಂಗ್ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಕಳೆದ ಹದಿನೈದು ದಿನಗಳಲ್ಲಿ ಈ ಪ್ರಕರಣವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಗಮನ ಸೆಳೆದಿದ್ದು, ಈ ಪ್ರಕರಣದ ತನಿಖೆ ನಡೆಸಲು ಅಕ್ಟೋಬರ್ 22 ರಂದು ಹರಿಯಾಣ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಇಬ್ಬರು ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಮತ್ತು ಆರೋಪಿ ಪೊಲೀಸರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಹಲವಾರು ದಲಿತ ಸಂಘಟನೆಗಳು ಕೂಡ ಈ ವಿಷಯದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.
“ನಾವು ಎಎಸ್ಪಿ ನಿಕಿತಾ ಖಟ್ಟರ್ ಅವರ ಮುಂದಾಳತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದೇವೆ. ಇದು ಪ್ರಕರಣದ ತನಿಖೆ ನಡೆಸುತ್ತಿದೆ. ಮಹಿಳಾ ಠಾಣಾಧಿಕಾರಿ ಇನ್ಸ್ಪೆಕ್ಟರ್ ಪ್ರಮಿಳಾ ಸಹ ಈ ತಂಡಕ್ಕೆ ಸಹಾಯ ಮಾಡುತ್ತಿದ್ದಾರೆ” ಎಂದು ಸೋನಿಪತ್ನ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಶಂದೀಪ್ ಸಿಂಗ್ ರಾಂಧವಾ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ನವರಾತ್ರಿ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ
ಇಬ್ಬರು ಪೊಲೀಸರ ಹತ್ಯೆಯೊಂದಿಗೆ ಪ್ರಾರಂಭವಾದ ಪ್ರಕರಣ!
ಹತ್ಯೆಯಾದ ಹರಿಯಾಣದ ಪೊಲೀಸ್ ಸಿಬ್ಬಂದಿಯೊಬ್ಬರು, ಸಾಯುವ ಮುನ್ನ ತನ್ನ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಾಹನ ಸಂಖ್ಯೆಯನ್ನು ತನ್ನ ಅಂಗೈಯಲ್ಲೇ ಬರೆದುಕೊಂಡಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದರು.
ಸೋನಿಪತ್ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದ 43 ವರ್ಷದ ವಿಶೇಷ ಪೊಲೀಸ್ ಅಧಿಕಾರಿ ಕಪ್ತಾನ್ ಸಿಂಗ್ ಮತ್ತು ರವೀಂದ್ರ ಕುಮಾರ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಹತ್ಯೆಯಾದ ಪೊಲೀಸ್ ಸಿಬ್ಬಂದಿ ಪೈಕಿ 28 ವರ್ಷದ ರವೀಂದ್ರ ಕುಮಾರ್, ಸಾವಿಗೂ ಮುನ್ನ ತಮ್ಮ ಅಂಗೈಯಲ್ಲಿ ಆರೋಪಿಗಳ ವಾಹನ ಸಂಖ್ಯೆಯಲ್ಲಿ ಬರೆದಿದ್ದರು. ಈ ಸಂಖ್ಯೆಯನ್ನೇ ಬಳಸಿಕೊಂಡು ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು. ಇದರ ಆಧಾರದ ಮೇಲೆ ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ಜಿಂದ್ ಜಿಲ್ಲೆಯಲ್ಲಿ ಪೊಲೀಸರ ಎನ್ಕೌಂಟರ್ನಲ್ಲಿ ಸಾವನ್ನಪಿದ್ದಾನೆ ಎಂದು ಎನ್ಡಿಟಿವಿ ವರದಿ ಮಾಡಿತ್ತು.
ಇದನ್ನೂ ಓದಿ: ಯುಪಿ: ಬಂದೂಕು ತೋರಿಸಿ 22 ವರ್ಷದ ದಲಿತ ಯುವತಿ ಮೇಲೆ ಅತ್ಯಾಚಾರ
ಮೃತದೇಹದ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ರವೀಂದ್ರ ಕುಮಾರ್ ಅಂಗೈಯಲ್ಲಿದ್ದ ಸಂಖ್ಯೆ ಬೆಳಕಿಗೆ ಬಂದಿತ್ತು. ಮರಣೋತ್ತರ ಪೊಲೀಸ್ ಪದಕಕ್ಕೆ ರವೀಂದ್ರ ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಲಾಗುವುದು’ ಎಂದು ಹರಿಯಾಣ ಪೊಲೀಸ್ ಮುಖ್ಯಸ್ಥ ಮನೋಜ್ ಯಾದವ್ ತಿಳಿಸಿದ್ದರು.
ಸೋನಿಪತ್–ಜಿಂದ್ ರಸ್ತೆಯಲ್ಲಿ ಕಾರಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ಆರೋಪಿಗಳನ್ನು ರವೀಂದ್ರ ಕುಮಾರ್ ಹಾಗೂ ಕಪ್ತಾನ್ ಸಿಂಗ್ ತಡೆದಿದ್ದರು. ಅದರಲ್ಲಿ ಅಪ್ರಾಪ್ತ ಬಾಲಕಿ ಸೇರಿದಂತೆ ಆರೋಪಿಗಳ ಸಂಬಂಧಿಕರು ಇದ್ದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದ್ದು, ಆರೋಪಿಗಳು ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿ, ಜಿಂದ್ ಕಡೆಗೆ ಪರಾರಿಯಾಗಿದ್ದರು. ಅದೇ ದಿನ ಅಮಿತ್ ಎಂಬುವವನನ್ನು ಎನ್ಕೌಂಟರ್ ಮೂಲಕ ಹತ್ಯೆ ಮಾಡಲಾಗಿತ್ತು. ಈತನೂ ಸೇರಿದಂತೆ 3 ಜನರ ಮೇಲೆ ಎಫ್ಐಆರ್ ದಾಖಲಾಗಿತ್ತು. ಇದಾದ ನಂತರ ಅಪ್ರಾಪ್ತ ಬಾಲಕಿ ಮತ್ತು ಮಹಿಳೆಯನ್ನು ಬಂಧಿಸಲಾಗಿತ್ತು” ಎಂದು ಪೊಲಿಸರು ಹೇಳಿದ್ದರು.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ದೇಹಕ್ಕೆ ಕಬ್ಬಿಣದ ಮುಳ್ಳುತಂತಿ ಸುತ್ತಿಕೊಂಡು ಅತ್ಯಾಚಾರದ ವಿರುದ್ಧ ಪ್ರತಿಭಟನೆ?- ವಾಸ್ತವವೇನು?
ಇದನ್ನು ನಿರಾಕರಿಸಿದ ಅಪ್ರಾಪ್ತ ಬಾಲಕಿಯ ತಾಯಿ, “ಪ್ರಕರಣದ ಪ್ರಮುಖ ಆರೋಪಿ ಅಮಿತ್ ಮತ್ತು ತನ್ನ ಮಗಳಿಗೆ ಮದುವೆ ನಿಶ್ಚಯವಾಗಿತ್ತು. ಅವನನ್ನು ಭೇಟಿ ಮಾಡಲು ತನ್ನ ಸಂಬಂಧಿಯೊಂದಿಗೆ ಹೋಗಿದ್ದಳು. ಆ ಸಂದರ್ಭದಲ್ಲಿ, ಯುವತಿಯನ್ನು ತಮ್ಮೊಟ್ಟಿಗೆ ಕಳುಹಿಸುವಂತೆ ಪೊಲೀಸರು ಒತ್ತಾಯಿಸಿದ್ದರು. ಇದರಿಂದ ಪರಿಸ್ಥಿತಿ ಉಲ್ಬಣವಾಯಿತು. ಪೊಲೀಸರು ಈ ಪ್ರಕರಣದಲ್ಲಿ ನಮಗೆ ಕಿರುಕುಳ ನೀಡುತ್ತಿದ್ದರು. ಹಾಗಾಗಿ ತನ್ನ ಮಗಳನ್ನು ಜುಲೈ 2 ರಂದು ಶರಣಾಗಲು ಠಾಣೆಗೆ ಕರೆದೊಯ್ದಿದ್ದೆ. ಅಲ್ಲಿ ಕಸ್ಟಡಿಯಲ್ಲಿಯೇ ಅವರ ಮೇಲೆ ದೌರ್ಜನ್ಯ ಎಸಗಿ, ಬರ್ಬರವಾಗಿ ಅತ್ಯಾಚಾರ ಮಾಡಲಾಗಿದೆ. ಆದರೆ ವೈದ್ಯಕೀಯ ಪರೀಕ್ಷೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ” ಎಂದು ಆರೋಪಿಸಿದ್ದಾರೆ.
ಸಂತ್ರಸ್ತೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತನಿಖಾ ತಂಡ ಹೇಳಿದೆ. ಆದರೆ ಅದರಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ಸಾಕ್ಷ್ಯಗಳಿಲ್ಲ. ಆದರೆ ದೈಹಿಕ ಹಿಂಸೆ ನೀಡಿರುವುದರ ಬಗ್ಗೆ ಗುರುತುಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರ ಕುರಿತು ಸಂತ್ರಸ್ತರ ಹೇಳಿಕೆಗಳು ಬಹುತೇಕ ಒಂದೇ ರೀತಿಯಲ್ಲಿವೆ. ಹಾಗಾಗಿ ಇದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ಅವರನ್ನು ಅಪರಾಧ ಸ್ಥಳಕ್ಕೆ ವಿಚಾರಣೆಗೆಂದು ಕರೆದೊಯ್ಯಲಾಗುತ್ತಿದೆ ಎಂದು ತನಿಖಾ ತಂಡ ಹೇಳಿದೆ.
ಇದನ್ನೂ ಓದಿ: ರಾಜಕೀಯ ಅಸ್ತ್ರವಾಗಿ ಅತ್ಯಾಚಾರವನ್ನು ಸಮರ್ಥಿಸಿದ್ದ ಸಾವರ್ಕರ್!


