Homeಮುಖಪುಟರಾಜಕೀಯ ಅಸ್ತ್ರವಾಗಿ ಅತ್ಯಾಚಾರವನ್ನು ಸಮರ್ಥಿಸಿದ್ದ ಸಾವರ್ಕರ್!

ರಾಜಕೀಯ ಅಸ್ತ್ರವಾಗಿ ಅತ್ಯಾಚಾರವನ್ನು ಸಮರ್ಥಿಸಿದ್ದ ಸಾವರ್ಕರ್!

ಹಿಂದೂಗಳು ಮುಸ್ಲಿಂ ಮಹಿಳೆಯರನ್ನು ಸುಲಭದಲ್ಲಿ ಬಿಟ್ಟುಬಿಟ್ಟು ಅವರ ಮೇಲೆ ಕರುಣೆ ತೋರುವುದರ ಮೂಲಕ ಸದ್ಗುಣಶೀಲತೆ ಮತ್ತು ಶೌರ್ಯದ "ಆತ್ಮಹತ್ಯಾತ್ಮಕ" ಮನೋಭಾವದಿಂದ ಬಾಧಿತರಾಗಿದ್ದರು - ಸಾವರ್ಕರ್

- Advertisement -
- Advertisement -

ಜಮ್ಮುವಿನ ಕಥುವಾದಲ್ಲಿ ಎಂಟು ವರ್ಷ ಪ್ರಾಯದ ಬಾಲಕಿಯನ್ನು ಅಪಹರಿಸಿ, ಮೂರು ದಿನಗಳ ಕಾಲ ದೇವಾಲಯವೊಂದರಲ್ಲಿ ಕೂಡಿಹಾಕಿ ಅತ್ಯಾಚಾರ ಮಾಡಿ ಕೊಂದ ಎಂಟು ಮಂದಿ ದುಷ್ಟರ ಕ್ರೂರತೆಯು ದೇಶವನ್ನು ದಂಗುಬಡಿಸಿತ್ತು. ದೇಶದಾದ್ಯಂತ ಪ್ರತಿಭಟನೆಗಳೂ ನಡೆದಿದ್ದವು. ಈ ಘಟನೆಯ ಚಿತ್ರದಿಂದ ನಿಧಾನವಾಗಿ ಅಳಿಸಲು ಪ್ರಯತ್ನಿಸಲಾಗುತ್ತಿದ್ದ ಒಂದು ಸತ್ಯವೆಂದರೆ, ಮುಸ್ಲಿಂ ಅಲೆಮಾರಿ ಬಾಕರ್ವಾಲ್ ಸಮುದಾಯದ ಹುಡುಗಿಯನ್ನು ಅಪಹರಿಸುವ ಸಂಚನ್ನು ಈ ವ್ಯಕ್ತಿಗಳು ಅವರನ್ನು ಆ ಪರಿಸರದಿಂದ ಓಡಿಸುವ ಉದ್ದೇಶದಿಂದ ರೂಪಿಸಿದ್ದರು ಎಂಬುದು. ಇದನ್ನು ಅಡ್ಡಕ್ಕೆ, ಉದ್ದಕ್ಕೆ ಹೇಗೆ ಬೇಕಾದರೂ ಕೊಯ್ದು ನೋಡಿದರೂ, ಮುಸ್ಲಿಂ ಸಮುದಾಯದ ವಿರುದ್ಧ ಹಿಂದೂ ಮತಾಂಧರ ಸಂಚು ಇದಾಗಿತ್ತೆಂಬ ಸತ್ಯವು ಉಳಿದುಕೊಳ್ಳುತ್ತದೆ. ಇದು ವರ್ಷಗಳಿಂದ ಜಮ್ಮು ಪ್ರದೇಶದಲ್ಲಿ ಸಂಘಪರಿವಾರವು ಹಿಂದೂ ಸಮುದಾಯದಲ್ಲಿ ಬಿತ್ತಿ ಬೆಳೆಸಿಕೊಂಡು ಬರುತ್ತಿರುವ ವಿಷಕಾರಿ ದ್ವೇಷದ ಅಂತಿಮ ಪರಿಣಾಮವಾಗಿತ್ತು.

ಈ ಸಂಪರ್ಕದ ಪರಿಣಾಮವಾಗಿಯೇ ಆರ್‌ಎಸ್‌ಎಸ್/ ಬಿಜೆಪಿ ಬೆಂಬಲಿಗರು ಹಿಂದೂ ಸೇನಾ ಎಂಬ ಮುಸುಕಿನಲ್ಲಿ, ಆರೋಪಿಗಳ ಬಂಧನದ ವೇಳೆ ಪ್ರತಿಭಟನೆಗಳನ್ನು ನಡೆಸಿದರು; ಕಥುವಾ ಸೆಷನ್ಸ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸುವುದಕ್ಕೆ ವಕೀಲರು ಅಡ್ಡಿ ಮಾಡಿದರು; ಜಮ್ಮು ಬಂದ್‌ಗೆ ಕರೆ ನೀಡಲಾಯಿತು (ಆದರೆ, ಅದು ತೋಪಾಯಿತು) ಮತ್ತು ಬಿಜೆಪಿಯ ಇಬ್ಬರು ಶಾಸಕರು ಆರೋಪಿಗಳ ಬೆಂಬಲದಲ್ಲಿ ನಡೆದ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದರು.

ಕಥುವಾ ಮತ್ತು ಉನಾವ್‌ನಲ್ಲಿ ನಡೆದ ಇನ್ನೊಂದು ಅತ್ಯಾಚಾರ ಪ್ರಕರಣಕ್ಕೂ ಸಾಮ್ಯವಿದೆ. ಇಲ್ಲಿ ಸಂತ್ರಸ್ತೆ ಮುಸ್ಲಿಂ ಆಗಿರಲಿಲ್ಲ. ಆದರೆ, ಇದನ್ನು ಮಾಡಿದಾತ ಒಬ್ಬ ಚುನಾಯಿತ ಬಿಜೆಪಿ ಶಾಸಕನಾಗಿದ್ದ. ಸಾಮ್ಯ ಇರುವುದು ಎಲ್ಲಿ ಎಂದರೆ, ಅತ್ಯಾಚಾರಿಗಳು ಮತ್ತು ಕೊಲೆಗಡುಕರಿಗೆ ತಕ್ಷಣವೇ ಬೆಂಬಲವನ್ನು ಆಯೋಜಿಸುವುದರಲ್ಲಿ; ಕಾನೂನಿನ ಸಹಜ ಪ್ರಕ್ರಿಯೆಯನ್ನು ಬುಡಮೇಲು ಮಾಡುವುದರಲ್ಲಿ; ಗಮನವನ್ನು ಬೇರೆಡೆ ಸೆಳೆಯುವ ಕುಟಿಲ ತಂತ್ರ ಅನುಸರಿಸುವುದರಲ್ಲಿ ಮತ್ತು ತಪ್ಪಿತಸ್ಥರನ್ನು ರಕ್ಷಿಸಲು ರಾಜಕೀಯ ಬಲದ ದುರುಪಯೋಗ ಮಾಡುವುದರಲ್ಲಿ. ಇದು ಕೆಲವು ಅಧಿಕಾರದ ಮದವೇರಿದ ವ್ಯಕ್ತಿಗಳು ಕಾನೂನಿನ ಭಯವಿಲ್ಲದೆ ನಡೆಸಿದ ಕೃತ್ಯ ಎಂದಾಗಲೀ, ಒಂದು ರೀತಿಯ ಹುಚ್ಚು ಉನ್ಮಾದದ ಪರಿಣಾಮ ಎಂದಾಗಲೀ ಭಾವಿಸಿದರೆ ಅದು ಉನಾವ್ ಅತ್ಯಾಚಾರ ಸಂತ್ರಸ್ತೆಗೆ ಮಾಡಿದ ಅನ್ಯಾಯವಾದೀತು.

ರಾಜಕೀಯ ಅಥವಾ ಇತರ ವಿರೋಧಿಗಳ ಮೇಲೆ ಅಧಿಕಾರದ ಬಲವನ್ನು ಹೇರುವ ವಿಧಾನವಾಗಿ ಅತ್ಯಾಚಾರದ ಸಿದ್ಧಾಂತ, ಅಥವಾ ಬಲಪ್ರಯೋಗದ ಮೂಲಕ ತಮ್ಮ ಸಿದ್ಧಾಂತವನ್ನು ಬೆಳೆಸುವ ಅಸ್ತ್ರವಾಗಿ ಅತ್ಯಾಚಾರವನ್ನು ಬಳಸುವ ಪರಿಕಲ್ಪನೆಯನ್ನು ಸಂಘಪರಿವಾರದ ಒಳಗೆ ತುಂಬಿಸಿದವರು, ಅವರ ಆರಾಧ್ಯ ದೈವ ಎನಿಸಿದ “ವೀರ” ಸಾವರ್ಕರ್ ಅವರಲ್ಲದೇ ಬೇರಾರೂ ಅಲ್ಲ. ಆರೆಸ್ಸೆಸ್ ಮತ್ತೆಮತ್ತೆ ಅವರ ಹೆಸರನ್ನು ಉಲ್ಲೇಖಿಸುತ್ತದೆ ಮತ್ತು ಪ್ರಧಾನಿಯಾಗಿದ್ದಾಗ 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನೇತುಹಾಕಿದ ಸಾವರ್ಕರ್ ಭಾವಚಿತ್ರಕ್ಕೆ ಸ್ವತಃ ಪ್ರಧಾನಿ ಮೋದಿ ಹಾರ ಹಾಕಲು ಹೋಗುತ್ತಾರೆ.

ವಿನಾಯಕ ದಾಮೋದರ ಸಾವರ್ಕರ್, ತನ್ನ ಪುಸ್ತಕಗಳಲ್ಲಿ ಒಂದಾದ “ಸಿಕ್ಸ್ ಗ್ಲೋರಿಯಸ್ ಎಪೋಕ್ಸ್ ಆಫ್ ಇಂಡಿಯನ್ ಹಿಸ್ಟರಿ” (ಭಾರತದ ಇತಿಹಾಸದ ಆರು ಮಹತ್ವದ ಪರ್ವಗಳು) ಎಂಬ ಪುಸ್ತಕದಲ್ಲಿ ಮುಸ್ಲಿಂ ಮಹಿಳೆಯನ್ನು ಅತ್ಯಾಚಾರ ಮಾಡುವುದು ಏಕೆ ಸಮರ್ಥನೀಯ ಎಂದು ಸ್ಪಷ್ಟವಾಗಿ ವಿವರಿಸುತ್ತಾರೆ ಮತ್ತು ಅವಕಾಶ ಸಿಕ್ಕಾಗ ಅದನ್ನು ಮಾಡದೇ ಇರುವುದು ಸದ್ಗುಣವಾಗಲೀ, ಶೌರ್ಯವಾಗಲೀ ಅಲ್ಲ; ಬದಲಾಗಿ ಹೇಡಿತನ ಎಂದು ಪ್ರತಿಪಾದಿಸುತ್ತಾರೆ. (ಮುಂಬಯಿ ಮೂಲದ ‘ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ್’ ಬಿಡುಗಡೆ ಮಾಡಿರುವ ಆನ್ಲೈನ್ ಆವೃತ್ತಿಯ ಅಧ್ಯಾಯ VIII ನೋಡಿ.)

ಹಿಂದೆ ಹಿಂದೂಗಳು ಮುಸ್ಲಿಂ ಮಹಿಳೆಯರನ್ನು ಸುಲಭದಲ್ಲಿ ಬಿಟ್ಟುಬಿಟ್ಟು ಅವರ ಮೇಲೆ ಕರುಣೆ ತೋರುವುದರ ಮೂಲಕ ಸದ್ಗುಣಶೀಲತೆ ಮತ್ತು ಶೌರ್ಯದ “ಆತ್ಮಹತ್ಯಾತ್ಮಕ” (ಪ್ಯಾರಾ 452) ಮನೋಭಾವದಿಂದ ಬಾಧಿತರಾಗಿದ್ದರು ಎಂದು ಸಾವರ್ಕರ್ ವಿವರಿಸುತ್ತಾರೆ. ಅವರು ಛತ್ರಪತಿ ಶಿವಾಜಿಯಂತಹ ಪ್ರಖ್ಯಾತ ವ್ಯಕ್ತಿ ಕಲ್ಯಾಣ್‌ನ ಮುಸ್ಲಿಂ ರಾಜ್ಯಪಾಲನ ಸೊಸೆಯನ್ನು ಬಿಟ್ಟುಬಿಟ್ಟ ಮತ್ತು ಅದೇ ರೀತಿಯಲ್ಲಿ ಪೇಶ್ವೆ ಚಿಮಾಜಿ ಅಪ್ಟೆ ಬೇಸ್ಸಿನ್‌ನ ಪೋರ್ಚುಗೀಸ್ ಗವರ್ನರ್‌ನ ಹೆಂಡತಿಯನ್ನು ಯಾವುದೇ ಹಾನಿ ಮಾಡದೆ ಬಿಟ್ಟುಬಿಟ್ಟ ಉದಾಹರಣೆಗಳನ್ನು ನೀಡುತ್ತಾರೆ. (ಪ್ಯಾರ 450)

ಮುಸ್ಲಿಂ ದಮನಕೋರರು ಹಿಂದೂ ಮಹಿಳೆಯರನ್ನು ಅದೇ ರೀತಿ ಶಿಕ್ಷಿಸುತ್ತಿದ್ದರಿಂದ, ಅದೇ ನಡವಳಿಕೆಯನ್ನು ವಿಜಯಿ ಹಿಂದೂಗಳು ಪರಾಜಿತ ಮುಸ್ಲಿಂ ಮಹಿಳೆಯರಿಗೆ ತೋರಬೇಕು ಎಂದು ಸಾವರ್ಕರ್ ಭಾವೋದ್ರಿಕ್ತ ಧ್ವನಿಯಲ್ಲಿ ವಾದಿಸಿದ್ದಾರೆ.

ಇದನ್ನೂ ಓದಿ: ಸಾವರ್ಕರ್:‌ ಸಂಘಪರಿವಾರಕ್ಕೆ ಅಸ್ತ್ರವೋ, ದೌರ್ಬಲ್ಯವೋ – ಕ್ಷಮಾಪಣೆ ಪತ್ರಗಳು ಹೇಳುವ ಸತ್ಯಗಳು

“ಹಿಂದೂಗಳು ಗೆದ್ದ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು ಕೂಡಾ ಅದೇ ವಿಪತ್ತಿನಲ್ಲಿ ಇರುತ್ತಾರೆ ಎಂಬ ಈ ಘೋರ ಆತಂಕದಿಂದ ಒಮ್ಮೆ ಅವರು ಪೀಡಿತರಾದರೆ, ಭವಿಷ್ಯದ ಮುಸ್ಲಿಂ ವಿಜಯಿಗಳು ಹಿಂದೂ ಮಹಿಳೆಯರ ಮೇಲೆ ಅಂತಹ ಅತ್ಯಾಚಾರದ ಯೋಚನೆ ಮಾಡುವ ಧೈರ್ಯವನ್ನು ಎಂದಿಗೂ ತೋರುವುದಿಲ್ಲ” ಎಂದು ಅವರು ಬರೆದಿದ್ದಾರೆ. (ಪ್ಯಾರಾ 452) ಹಿಂದೂಗಳು ಹಿಂದಿನ ಕಾಲದಿಂದಲೂ ಮುಸ್ಲಿಂ ಮಹಿಳೆಯರನ್ನು ಅನುಭೋಗಿಸುವ ಧೋರಣೆಯನ್ನು ಅನುಸರಿಸುತ್ತಿದ್ದರೆ, ಪರಿಸ್ಥಿತಿ ಈಗಿರುವುದಕ್ಕಿಂತ ಚೆನ್ನಾಗಿರುತ್ತಿತ್ತು ಎಂದು ಅವರು ವಾದಿಸುತ್ತಾರೆ:

“ಒಂದು ವೇಳೆ ಭಾರತದ ಮೇಲೆ ಹಿಂದಿನ ಮುಸ್ಲಿಂ ಆಕ್ರಮಣಗಳ ಕಾಲದಲ್ಲಿ ಹಿಂದೂಗಳು ಕೂಡಾ, ಯುದ್ಧಭೂಮಿಯಲ್ಲಿ ಜಯಶೀಲರಾದಾಗಲೆಲ್ಲಾ, ಮುಸ್ಲಿಂ ಮಹಿಳೆಯರಿಗೆ ಅದೇ ರೀತಿಯಲ್ಲಿ ಉತ್ತರ ನೀಡುತ್ತಿದ್ದರೆ, ಅಥವಾ ಅವರನ್ನು ಯಾವುದಾದರೂ ಬೇರೆ ರೀತಿಯಲ್ಲಿ ಶಿಕ್ಷಿಸುತ್ತಿದ್ದರೆ; ಅಂದರೆ, ಬಲವಂತವಾಗಿಯಾದರೂ ಮತಾಂತರ ಮಾಡುವುದು, ಮತ್ತು ಅವರನ್ನು ನಂತರ ತಮ್ಮ ತೆಕ್ಕೆಯೊಳಗೆ ಸೇರಿಸಿಕೊಳ್ಳುವುದು ಮಾಡುತ್ತಿದ್ದರೆ, ಆಗ? ಆಗ, ಅವರ ಹೃದಯದಲ್ಲಿ ಈ ಭಯಾನಕ ಭೀತಿ ಇರುವಾಗ, ಯಾವುದೇ ಹಿಂದೂ ಮಹಿಳೆಯ ವಿರುದ್ಧ ಅವರ ದುಷ್ಟ ಯೋಚನೆಯಿಂದ ದೂರ ಉಳಿಯುತ್ತಿದ್ದರು.” (ಪ್ಯಾರಾ 455) ಎಂದು ಸಾವರ್ಕರ್ ಬರೆದಿದ್ದಾರೆ.

“ಪ್ರತಿ ಹಿಂದೂವೂ ತನ್ನ ತಾಯಿಯ ಹಾಲು ಹೀರುವುದರ ಜೊತೆಗೆಯೇ, ಧಾರ್ಮಿಕ ಸಹಿಷ್ಣುತೆಯು ಒಂದು ಸದ್ಗುಣ ಎಂಬುದನ್ನು ಹೀರುವಂತೆ ಮಾಡಿರುವಂತೆ ಕಾಣುತ್ತದೆ” (ಪ್ಯಾರಾ 429-430) ಎಂಬ ತಪ್ಪು ಕಲ್ಪನೆಯ ಹೊರತಾಗಿ ಸಾವರ್ಕರ್, “ಮುಸ್ಲಿಂ ಮಹಿಳೆಯೊಂದಿಗೆ ಯಾವುದೇ ರೀತಿಯ ಸಂಬಂಧವು ತಾವೇ ಇಸ್ಲಾಮಿಗೆ ಮತಾಂತರವಾದಂತೆ ಆಗುವುದು” ಎಂಬ “ಮೂರ್ಖ ಕಲ್ಪನೆ”ಯು ಹಿಂದೂಗಳಲ್ಲಿ ಇರುವುದನ್ನು ಮತ್ತು ಇದುವೇ ಅವರು ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರ ಮಾಡದಿರುವುದಕ್ಕೆ ಕಾರಣ ಎಂದು ಗುರುತಿಸುತ್ತಾರೆ.
(ಪ್ಯಾರಾ 453). ಈ ಕಲ್ಪನೆಯು, “ಮುಸ್ಲಿಂ ಸ್ತ್ರೀ ವರ್ಗ”ವನ್ನು ಶಿಕ್ಷಿಸದಂತೆ ಹಿಂದೂ ಪುರುಷರನ್ನು ತಡೆದಿದೆ ಎಂದು ಅವರು ಬರೆಯುತ್ತಾರೆ. (ಪ್ಯಾರಾ 454)

ಇದನ್ನೂ ಓದಿ: ಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ

ಒಂದು ವೇಳೆ ಯಾರಾದರೂ ಮುಸ್ಲಿಂ ಮಹಿಳೆಯರ ಬಗ್ಗೆ ಸಹಾನುಭೂತಿ ತೋರುವುದಾದಲ್ಲಿ, ಸಾವರ್ಕರ್ ನಮ್ಮನ್ನು ಮುಸ್ಲಿಂ ಮಹಿಳೆಯರು ಮಾಡಿದ ಯಾವುದೇ ಆಧಾರವಿಲ್ಲದ “ತಪ್ಪು”ಗಳ ಯಾತ್ರೆಗೆ ಕೊಂಡೊಯ್ಯುತ್ತಾರೆ. ಅವುಗಳಲ್ಲಿ ಹಿಂದೂ ಹುಡುಗಿಯರನ್ನು ಪುಸಲಾಯಿಸುವುದು ಮತ್ತು ಅವರನ್ನು “ಮಸೀದಿಗಳಲ್ಲಿ ಇರುವ ಮುಸ್ಲಿಂ ಕೇಂದ್ರಗಳಿಗೆ” ಕಳುಹಿಸುವುದು ಮತ್ತು ಹಿಂದೂಗಳ ವಿರುದ್ಧ ಹಿಂಸಾಚಾರದಲ್ಲಿ ಮುಸ್ಲಿಂ ಪುರುಷರನ್ನು ಬೆಂಬಲಿಸುವುದು ಸೇರಿದೆ.

ವರ್ಷಗಳಿಂದ ಆರ್‌ಎಸ್‌ಎಸ್ ಮತ್ತು ಅದರ ಮುಂಚೂಣಿ ಸಂಘಟನೆಗಳು ಪ್ರಚಾರ ಮಾಡುತ್ತಿರುವುದು ಇಂತಹಾ ವಿಚಾರಗಳನ್ನೇ ಮತ್ತು ಸಾವರ್ಕರ್ ಸಂಘ ಪರಿವಾರದ ಹಿಂಬಾಲಕರ ನಡುವೆ ಬಹಳ ಗೌರವ ಹೊಂದಿರುವ ನಾಯಕನಾಗಿ ಉಳಿದುಕೊಂಡಿದ್ದಾರೆ. ಇದು 2002ರಲ್ಲಿ ಗುಜರಾತಿನಲ್ಲಿ ಮತ್ತು 2013ರಲ್ಲಿ ಮುಜಾಫರ್‌ನಗರದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಭಯಾನಕವಾದ ದೌರ್ಜನ್ಯಗಳನ್ನು ನಡೆಸುವಂತೆ ಹಿಂದೂ ಗಲಭೆಕೋರರನ್ನು ಮತ್ತು ಇನ್ನೂ ಅನೇಕರನ್ನು ಪ್ರೇರೇಪಿಸಿದೆ.

ಆದುದರಿಂದ, ಕಥುವಾ ಅಥವಾ ಉನಾವ್‌ನ ಅತ್ಯಾಚಾರಿಗಳು ಮತ್ತು ಕೊಲೆಗಡುಕರು- ಅವರ ಮಾನಸಿಕವಾಗಿ ಪ್ರಚೋದನೆಗಳು ಏನೇ ಇರಲಿ, ಅವರ ನೈತಿಕ ಮತ್ತು ಸೈದ್ಧಾಂತಿಕ ಸಮರ್ಥನೆಗಳು ಬರುತ್ತಿರುವುದು ಸಾವರ್ಕರ್ ಅವರಿಂದಲೇ ಹೊರತು ಬೇರಾರಿಂದಲೂ ಅಲ್ಲ. ಇಂತಹ ಕೃತ್ಯಗಳನ್ನು ಖಂಡಿಸುವುದು ಮತ್ತು ಆ ಕುರಿತು ಕ್ರಮ ಕೈಗೊಳ್ಳುವುದು ಸಂಘಪರಿವಾರಕ್ಕೆ ಕಷ್ಟವಾಗುತ್ತಿರುವುದರಲ್ಲಿ ದೊಡ್ಡ ಆಶ್ಚರ್ಯವೇನಿಲ್ಲ. ಮಹಿಳೆಯರ ವಿರುದ್ಧದ ಅಪರಾಧದಲ್ಲಿ ತೊಡಗಿದ ಬಿಜೆಪಿ/ ಸಂಘಪರಿವಾರದ ಸದಸ್ಯರ ಪಟ್ಟಿ ಬೆಳೆಯುತ್ತಾ ಹೋಗುತ್ತಿರುವುದರಲ್ಲಿ ಕೂಡಾ ದೊಡ್ಡ ಆಶ್ಚರ್ಯವೇನಿಲ್ಲ.

ಸುಬೋಧ್ ವರ್ಮಾ
ಅನುವಾದ: ನಿಖಿಲ್ ಕೋಲ್ಪೆ
ಕೃಪೆ: ‘ನ್ಯೂಸ್ ಕ್ಲಿಕ್’


ಇದನ್ನೂ ಓದಿ: ರಾಜಕೀಯ ಸಾಧನವಾಗಿ ಅತ್ಯಾಚಾರದ ಕಲ್ಪನೆಯನ್ನು ಸಾವರ್ಕರ್ ಸಮರ್ಥಿಸಿಕೊಂಡಿದ್ದು ಹೀಗೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...