Homeಮುಖಪುಟಬಿಹಾರದಲ್ಲಿ ಎಡಪಕ್ಷಗಳ ಗೆಲುವು: ಒಂದು ವಿಶ್ಲೇಷಣೆ

ಬಿಹಾರದಲ್ಲಿ ಎಡಪಕ್ಷಗಳ ಗೆಲುವು: ಒಂದು ವಿಶ್ಲೇಷಣೆ

ಸ್ವತಃ ರಾಹುಲ್‌ಗಾಂಧಿ ಜನಿವಾರ ಹಾಕುವುದು, ಆಮ್ ಆದ್ಮಿ ಪಕ್ಷ ಮೃದು ಹಿಂದುತ್ವ ಪಾಲಿಸುವುದು ನೋಡಿದರೆ ಗೊತ್ತಾಗುತ್ತದೆ ಈ ಬಲಬಿಡಂಗಿತನ ಇರುವುದೂ ವಾಸ್ತವ ಎಂದು.

- Advertisement -
- Advertisement -

2015ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಬಿಟ್ಟರೆ ಬಿಹಾರದಲ್ಲಿ ಹೆಚ್ಚಿನ ಸೀಟುಗಳನ್ನು ಗೆದ್ದಿರುವ ಪಕ್ಷಗಳೆಂದರೆ ಎಡಪಕ್ಷಗಳು. ಸಿಪಿಐ (ಎಂಎಲ್) 12, ಸಿಪಿಐ 02 ಮತ್ತು ಸಿಪಿಐ (ಎಂ) 02. ಮೂರೂ ಪಕ್ಷಗಳೂ ಇತ್ತೀಚಿನ ಚುನಾವಣೆಗಳಲ್ಲೇ ಅತೀ ಹೆಚ್ಚು ಸೀಟುಗಳನ್ನು ಗೆದ್ದಿವೆ. 2010ರಲ್ಲಿ ಸಿಪಿಐ ಒಂದು ಸೀಟು ಗೆದ್ದಿತ್ತು. 2015ರಲ್ಲಿ ಸಿಪಿಐ(ಎಂಎಲ್) 3 ಸೀಟುಗಳನ್ನು ಗೆದ್ದಿತ್ತು. ಅದಕ್ಕೂ ಹಿಂದೆ ಯಾವಾಗ ಇಷ್ಟು ಸೀಟುಗಳನ್ನು ಗೆದ್ದಿರಬಹುದೆಂದು ಹುಡುಕಲು ಬಹಳ ಅಧ್ಯಯನ ಮಾಡಬೇಕು. ಹಾಗೆ ನೋಡಿದರೆ ಅಖಿಲ ಭಾರತ ಮಟ್ಟದಲ್ಲೂ 2004ರ ಲೋಕಸಭಾ ಚುನಾವಣೆಯು ಕಳೆದ ಕೆಲವು ದಶಕಗಳಲ್ಲೇ ಎಡಪಕ್ಷಗಳು ಅತೀ ದೊಡ್ಡ ಸಾಧನೆ ಮಾಡಿದ (59 ಲೋಕಸಭಾ ಸ್ಥಾನಗಳು) ಸಂದರ್ಭವಾಗಿತ್ತು. ಬಿಹಾರದಲ್ಲಿ ಬಿಜೆಪಿಯೇ ಅತೀ ದೊಡ್ಡ ಪಕ್ಷವಾಗಿ, ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬರಬಹುದಾದರೂ ಎಡ ಪಕ್ಷಗಳ ಈ ಸಾಧನೆಗೆ ಕಾರಣವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಕಾಲಾವಕಾಶ ಬೇಕು.

ಅಮೆರಿಕದಲ್ಲಾದಂತೆ ಜನಸಾಮಾನ್ಯರಲ್ಲಿ ದೊಡ್ಡ ಮಟ್ಟದ ಧ್ರುವೀಕರಣ ಉಂಟಾಗಿ ಸೆಂಟ್ರಿಸ್ಟ್ ಪಕ್ಷಗಳಿಗಿಂತ ಎರಡು ತುದಿಗಳಲ್ಲಿರುವ ಪಕ್ಷಗಳಿಗೆ ಹೆಚ್ಚು ಮತ ಹಾಕುತ್ತಿದ್ದಾರೆಯೇ? ಏಕೆಂದರೆ ಬಿಹಾರದಲ್ಲಿ ಅತೀ ಹಳೆಯ ಸಿಪಿಐ ಅಥವಾ ಸಿಪಿಎಂಗಿಂತ ಹೆಚ್ಚಿನ ಸ್ಥಾನ ಪಡೆಯುತ್ತಿರುವುದು ನಕ್ಸಲೈಟ್ ಧಾರೆಯ ಸಿಪಿಐ(ಎಂಎಲ್). ಈ ರೀತಿಯ ಮಾತುಗಳನ್ನು ಕೇಳಿದರೆ ಎಡಪಕ್ಷಗಳು ಸಿಟ್ಟಿಗೇಳುವುದು ಖಚಿತ. ಏಕೆಂದರೆ ಅಮೆರಿಕಾದಲ್ಲಿ ಧ್ರುವೀಕರಣ ಉಂಟಾಗಿರುವುದು ಅತೀ ಬಲಪಂಥೀಯ ಟ್ರಂಪ್ ಮತ್ತು ಬಲಪಂಥೀಯ ಜೋ ಬೈಡೆನ್ ಮಧ್ಯೆ ಮಾತ್ರ ಎಂಬುದು ಎಲ್ಲಾ ಎಡಪಂಥೀಯರ ವಿಶ್ಲೇಷಣೆ. ಹಾಗಾಗಿಯೇ ಎಡ-ಮಧ್ಯದ ಬರ್ನಿ ಸ್ಯಾಂಡರ್ಸ್ರನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿಯೇ ಹಿಂದಕ್ಕೆ ಸರಿಯಲು ಸೂಚಿಸಲಾಯಿತು. ಅದು ಬಹುಮಟ್ಟಿಗೆ ನಿಜವಾದರೂ, ಬ್ಲಾಕ್ ಲೈವ್ಸ್ ಮ್ಯಾಟರ್ ಚಳವಳಿ, ದುಡಿಯುವ ಜನರ ಚಳವಳಿಯಲ್ಲೂ ಪಾಲ್ಗೊಳ್ಳುವ ಮತ್ತು ಆಕ್ಯುಪೈ ಚಳವಳಿಯ ಘೋಷಣೆಯಾದ 1% ವರ್ಸಸ್ 99% ಮಾತನಾಡುವ ಕಮಲಾ ಹ್ಯಾರಿಸ್‌ರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಳ್ಳಲೂ ಕಾರಣವಿತ್ತು. ಅತೀ ಕೆಡುಕನ್ನು ವಿರೋಧಿಸುವ ಸಂದರ್ಭದಲ್ಲಿ ವಿವಿಧ ರಂಗಿನ, ಶ್ರೇಣಿಯ ಜನರು ಒಂದೆಡೆಗೆ ಸರಿಯುತ್ತಾರೆ. ಅಂತಹ ಧ್ರುವೀಕರಣವು ಏರ್ಪಡುತ್ತಿರುವುದು ವಾಸ್ತವ. ದೇಶದ ದೊಡ್ಡ ಬಂಡವಾಳಸ್ಥರ ಬೆಂಬಲವನ್ನು ದೀರ್ಘಾವಧಿಗೆ ಪಡೆದಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ನೇರವಾಗಿ ಅಂಬಾನಿ-ಅದಾನಿಗಳ ಹೆಸರನ್ನು ಹೇಳಿ ಟೀಕೆ ಮಾಡುವ ಮಟ್ಟಿಗೆ ಎಡ ಪರಿಭಾಷೆ ಬಳಸುತ್ತಿರುವುದಕ್ಕೆ ಕಾರಣವಿದೆ.


ಇದನ್ನೂ ಓದಿ: ಬಿಹಾರ ಫಲಿತಾಂಶ ವಿಶ್ಲೇಷಣೆ: ನಿತೀಶ್ ಕಳೆದುಕೊಂಡದ್ದೇನು? ತೇಜಸ್ವಿ ಗಳಿಸಿದ್ದೇನು?

ತೀವ್ರ ಬಲಪಂಥೀಯರನ್ನು ಎದುರಿಸುವಾಗ ಸೆಂಟ್ರಿಸ್ಟ್ ಪಕ್ಷಗಳೂ ಎಡ-ಮಧ್ಯದ ಅಥವಾ ಒಮ್ಮೊಮ್ಮೆ ಎಡ ಎಂದು ತೋರಬಹುದಾದ ಭಾಷೆಯನ್ನು ಬಳಸುತ್ತಾರೆ, ರಾಹುಲ್ ಗಾಂಧಿ ಅದಕ್ಕೊಂದು ನಿದರ್ಶನ. ತಾವು ತೀರಾ ಎಡಕ್ಕೆ ವಾಲಿಬಿಟ್ಟೆವೇನೋ ಎನಿಸಿದಾಗ ಬಲದ ಭಾಷೆ, ಆಚಾರಗಳಿಗೂ ವಾಲುತ್ತಾರೆ. ಸ್ವತಃ ರಾಹುಲ್‌ಗಾಂಧಿ ಜನಿವಾರ ಹಾಕುವುದು, ಆಮ್ ಆದ್ಮಿ ಪಕ್ಷ ಮೃದು ಹಿಂದುತ್ವ ಪಾಲಿಸುವುದು ಮತ್ತು ಇವೆರಡೂ ಪಕ್ಷಗಳು ಮುಸ್ಲಿಂ ಮತದಾರರು ಇಲ್ಲವೇ ಇಲ್ಲವೇನೋ ಎಂಬಂತೆ ವರ್ತಿಸುವುದನ್ನು ನೋಡಿದರೆ ಅದು ಗೊತ್ತಾಗುತ್ತದೆ. ಈ ಬಲಬಿಡಂಗಿತನ ಇರುವುದೂ ವಾಸ್ತವವೇ.

ಇಂತಹ ವಾಲಾಟಗಳು ನಡೆಯುತ್ತಿರುವ ಹೊತ್ತಿನಲ್ಲೇ ಎಡ ಪಕ್ಷಗಳಿಗೂ ಬೆಂಬಲ ಹೆಚ್ಚಾಗುತ್ತದೆ. ತೀವ್ರ ಬಲಪಂಥವು ಯಾವಾಗ ಜನರನ್ನು ಯಾಮಾರಿಸಲು ಸಾಧ್ಯವಾಗುವುದಿಲ್ಲವೋ ಅಥವಾ ಜನರಿಗೆ ತಮ್ಮ ನಿತ್ಯದ ಬದುಕಿನ ಸಮಸ್ಯೆಗಳೇ ದೊಡ್ಡ ಐಡೆಂಟಿಟಿಗಿಂತ ಮುಖ್ಯ ಎನಿಸುತ್ತದೋ ಆಗ ಅವರು ನಿತ್ಯದ ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವವರ ಕಡೆಗೇ ವಾಲುತ್ತಾರೆ. ದೇಶವು ಸಂಕಷ್ಟದಲ್ಲಿದ್ದಾಗ ವಾಜಪೇಯಿ ನೇತೃತ್ವದ ಬಿಜೆಪಿಯು ‘ಭಾರತ ಪ್ರಕಾಶಿಸುತ್ತಿದೆ’ ಎಂದು ಆತ್ಮವಿಶ್ವಾಸದಿಂದ ಚುನಾವಣೆಗೆ ಹೋದಾಗ, ಜನರು ಅಷ್ಟು ಆತ್ಮವಿಶ್ವಾಸ ಹೊಂದಿರದಿದ್ದ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಕೊಟ್ಟರು. ಆಗಲೇ ಎಡ ಪಕ್ಷಗಳೂ 50ಕ್ಕೂ ಹೆಚ್ಚು ಸೀಟುಗಳನ್ನು ಪಡೆದುಕೊಂಡಿದ್ದು!

ಗಮನಿಸಬೇಕಾದ ಒಂದು ಸಂಗತಿಯೇನೆಂದರೆ, ಜೋ ಬೈಡೆನ್-ಕಮಲಾರು ಒಂದಾಗಿ ನಿಂತಾಗ ಆದಂತೆ, ಎಡಪಕ್ಷಗಳು-ಆರ್‌ಜೆಡಿ-ಕಾಂಗ್ರೆಸ್ ಘಟಬಂಧನದಲ್ಲಿ ಎಡವು ಹೆಚ್ಚಿನ ಸ್ಥಾನಗಳನ್ನು ಪಡೆಯಲು ಶಕ್ತವಾಗಿದೆ. ಅಂದರೆ ಎಡವು ಇಲ್ಲಿ ಸ್ವತಂತ್ರವಾಗಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಲಪಂಥೀಯ (ಸೆಕ್ಯುಲರ್ ಬಲಪಂಥೀಯ ಎಂದು ಬೇಕಾದರೆ ಸೀಮಿತ ಅರ್ಥದಲ್ಲಿ ಹೇಳಬಹುದು) ಟಿಎಂಸಿಯನ್ನು ಎದುರಿಸಲು ಪ.ಬಂಗಾಳದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಾಗ ಸಿಪಿಎಂ ಪೆಟ್ಟು ತಿಂದಿದ್ದೇನೋ ನಿಜ (ಆಗ ಕಾಂಗ್ರೆಸ್ ಸಿಪಿಎಂಗಿಂತ ಹೆಚ್ಚಿನ ಸೀಟುಗಳನ್ನು ಗೆದ್ದುಕೊಂಡಿತ್ತು); ಆದರೆ ಬಿಹಾರದಲ್ಲಿ ಆರ್‌ಜೆಡಿ ಅಥವಾ ಕಾಂಗ್ರೆಸ್‌ನ ಬೆಂಬಲವಿಲ್ಲದೇ ತನ್ನಂತೆ ತಾನೇ ಎಡಪಕ್ಷಗಳು ಸ್ಪರ್ಧಿಸಿದ್ದರೆ ಈಗ ಗೆದ್ದಿರುವುದರಲ್ಲಿ ಕಾಲು ಭಾಗವನ್ನೂ ಗೆಲ್ಲುತ್ತಿರಲಿಲ್ಲ ಎಂಬುದೂ ನಿಜ. ಎಡಪಕ್ಷಗಳ ಬೆಂಬಲವೂ ಘಟಬಂಧನಕ್ಕೆ ಶಕ್ತಿ ತಂದುಕೊಟ್ಟಿರುತ್ತದೆ ಎಂಬುದರಲ್ಲೂ ಸಂಶಯವಿಲ್ಲ. ಈ ಶಕ್ತಿಯು ಕೇಡರ್, ಜನಸಮೂಹದಲ್ಲಿರುವ ಸಂಘಟನಾ ಬಲವೇ ಆಗಿರಬೇಕಿಲ್ಲ. ಜನಸಾಮಾನ್ಯರಿಗೆ ಅಪ್ಯಾಯವೆನಿಸುವ ಕಥನದ ಬಲವೂ ಆಗಿರಬಹುದು.

ಅಂದರೆ ಬಿಜೆಪಿಗೆದುರಾಗಿ ಇತರ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಕೇವಲ ಚುನಾವಣಾ ರಾಜಕಾರಣದ ಗೆಲುವು-ಸೋಲುಗಳ ಲೆಕ್ಕಾಚಾರದ ಕಾರಣಕ್ಕೆ ಮಾತ್ರವಲ್ಲಾ; ಧ್ರುವೀಕರಣವು ಏರ್ಪಟ್ಟಾಗ ಜನರ ಪರವಾದ ನೆರೇಟಿವ್‌ಅನ್ನು ಸೆಂಟ್ರಿಸ್ಟ್ ಶಕ್ತಿಗಳೇ ಪ್ರಧಾನವಾಗಿ ಮುಂದಕ್ಕೆ ಒಯ್ಯುವ ಸಾಧ್ಯತೆ ಇದ್ದಾಗ, ಎಡಚಳವಳಿಯು ಇನ್ನೂ ಬಲವಾಗಿರದಿದ್ದಾಗ ‘ಘಟಬಂಧನ’ದೊಳಗೆ ಇರುವುದೇ ಎಡಶಕ್ತಿಗಳು ಪ್ರಸ್ತುತವಾಗುಳಿಯುವುದಕ್ಕೆ ಇರುವ ಅವಕಾಶವಾಗಿರುತ್ತದೆ. ಇಲ್ಲದಿದ್ದರೆ ಅದರ ಲಾಭವನ್ನು ಸೆಂಟ್ರಿಸ್ಟ್ ಶಕ್ತಿಗಳು ಪಡೆದುಕೊಳ್ಳಬಹುದು; ಇಲ್ಲವೇ ಅದೂ ದುರ್ಬಲವಾಗಿ ಬಲಪಂಥೀಯ ಶಕ್ತಿಗಳೇ ಗೆಲ್ಲಬಹುದು. ಈ ಸದ್ಯ ಎಡ-ಆರ್‌ಜೆಡಿ ಮೈತ್ರಿಕೂಟದಿಂದ ಪರಸ್ಪರ ಲಾಭವೇ ಆಗಿರುವುದು ಕಾಣುತ್ತದೆ.

  • ನೀಲಗಾರ

ಇದನ್ನೂ ಓದಿ: ಉಪಚುನಾವಣೆ: ಗಾಳಿ ಬೀಸಿದತ್ತ ಹೋದ ಅಲೆಯಷ್ಟೇ ಅಲ್ಲ, ಆಡಳಿತದ ವಿರುದ್ಧದ ಭಾವನೆ ಘನೀಭವಿಸಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...