ರಾಜ್ಯದ ಬೆಳಗಾವಿ, ಹಾವೇರಿ, ಚಿತ್ರದುರ್ಗ ಸೇರಿದಂತೆ ಎಂಟು-ಹತ್ತು ಜಿಲ್ಲೆಗಳಲ್ಲಿ ಜವಳಿ ಉದ್ದಿಮೆಯು ಅತ್ಯಾಧುನಿಕಗೊಂಡು ಬೃಹದಾಕಾರವಾಗಿ ಬೆಳೆದು ನಿಂತಿದೆ. ಆದರೆ ಮಗ್ಗಗಳಲ್ಲಿ ದುಡಿಯುವ ಕೂಲಿ ನೇಕಾರ ಕಾರ್ಮಿಕರ ಪರಿಸ್ಥಿತಿ ಮಾತ್ರ ಶೋಚನೀಯವಾಗಿದೆ. ದಶಕಗಳಿಂದ ದುಡಿದರೂ ಯಾವುದೇ ಸಾಮಾಜಿಕ ಭದ್ರತೆ ಇಲ್ಲದ ಈ ಜನರಿಗಾಗಿ ಕೂಲಿ ನೇಕಾರ ಕಾರ್ಮಿಕರ ಬಳಗ ಸತತ ದನಿಯೆತ್ತುತ್ತಲೇ ಬಂದಿದೆ.
ರಾಜ್ಯದಲ್ಲಿ ಸರ್ಕಾರದ ಮಾಹಿತಿ ಪ್ರಕಾರ ಒಂದು ಲಕ್ಷದ ಐವತ್ತು ಸಾವಿರ ಮಗ್ಗಗಳು ಕಾರ್ಯನಿರ್ವಹಿಸುತ್ತಿವೆ. ಅಂದರೆ ಎರಡೂವರೆ ಲಕ್ಷ ಕೂಲಿ ನೇಕಾರ ಕಾರ್ಮಿಕಕರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಲ್ಲಿಯವರೆಗೂ ಒಂದು ಕಲ್ಯಾಣ ಮಂಡಳಿ ಇಲ್ಲ. ಸರ್ಕಾರ ಯಾವುದೇ ಕಾರ್ಮಿಕ ಯೋಜನೆಗಳು ಇವರಿಗೆ ತಲುಪುತ್ತಿಲ್ಲ. ಏಕೆಂದರೆ ಇವರನ್ನು ಕಾರ್ಮಿಕರು ಎಂದು ಪರಿಗಣಿಸಲು ಯಾವುದೇ ಆಧಾರವಿಲ್ಲ!
ಕೂಲಿ ನೇಕಾರ ಕಾರ್ಮಿಕ ಎಂದು ಗುರುತಿಸಲು ಬೇಕಾದ ಒಂದು ಗುರುತಿನ ಚೀಟಿ ಕೂಡ ಈ ಇವರಿಗೆ ದೊರೆತಿಲ್ಲ. ಕೆಲಸ ನಿರ್ವಹಿಸುವ ಮಗ್ಗಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ತೋರಿಸಲು ಹಾಜರಿ ಪುಸ್ತಕ ಕೂಡ ಇಲ್ಲ. ಇನ್ನೂ ಸರ್ಕಾರದ ಪಿಎಫ್ ಯೋಜನೆ ಇವರಿಗೆ ಸಿಗುವುದು ಕನಸಿನ ಮಾತು. ಇಂತಹ ಸಂಕಷ್ಟದಲ್ಲಿ ರಾಜ್ಯದ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಕಾರ್ಮಿಕರು ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲದೆ ಬದುಕುತ್ತಿರುವುದು ದುರಂತ.
ಲಾಕ್ಡೌನ್ ಸಮಯದಲ್ಲಿ ಈ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ದನಿಯೆತ್ತಿದ್ದರು. “ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬೆಳಗಾವಿ, ದೊಡ್ಡಬಳ್ಳಾಪುರ, ಧಾರವಾಡ ಮೊದಲಾದ ಜಿಲ್ಲೆಗಳ 6 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರೆ ಹೊಣೆ. ನೇಕಾರರ ಬದುಕು ಸಂಕಷ್ಟದಲ್ಲಿದೆ. ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರದ ಪ್ಯಾಕೇಜ್ ಇನ್ನೂ ಬಿಡುಗಡೆಯಾಗಿಲ್ಲ. ಆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಕೂಡಲೇ ಸ್ಪಂದಿಸಬೇಕು” ಎಂದು ಅವರು ಆಗ್ರಹಿಸಿದ್ದರು.
ಇದನ್ನೂ ಓದಿ: 6 ಜನ ನೇಕಾರರ ಆತ್ಮಹತ್ಯೆಗೆ ಮುಖ್ಯಮಂತ್ರಿಗಳೆ ಹೊಣೆ: ಸಿದ್ದರಾಮಯ್ಯ
“ನಮ್ಮನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಪರಿಗಣಿಸಿ, ಕಾರ್ಮಿಕ ಇಲಾಖೆ ಅಡಿಯಲ್ಲಿ ತಂದು, ಕಟ್ಟಡ ಕೂಲಿ ಕಾರ್ಮಿಕರಿಗೆ ಇರುವಂತೆಯೇ ನಮಗೂ ಒಂದು ಕಲ್ಯಾಣ ಮಂಡಳಿ ಸ್ಥಾಪಿಸಿ ಎಂಬುದು ನಮ್ಮ 6-7 ದಶಕಗಳ ಒತ್ತಾಯ ಎನ್ನುತ್ತಾರೆ ಕೂಲಿ ನೇಕಾರ ಕಾರ್ಮಿಕರ ಬಳಗ ಸಂಚಾಲಕ ರವಿ ಪಾಟೀಲ್.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, ’ಮಗ್ಗ ಎಂದರೇ ಮಾಲಿಕ ಒಬ್ಬನೇ ಅಲ್ಲ. ಅಲ್ಲಿ ಕಾರ್ಮಿಕರು ಮುಖ್ಯವಾಗಿರುತ್ತಾರೆ. ಒಂದು ಸೀರೆ ತಯಾರಿಸಲು ಸುಮಾರು 10 ಮಂದಿ ಕಾರ್ಮಿಕರ ಶ್ರಮ ಇರುತ್ತದೆ. ಸೀರೆಗಳ ವಿನ್ಯಾಸದ ಆಧಾರದ ಮೇಲೆ ಕೂಲಿ ನೀಡಲಾಗುತ್ತದೆ. ಆದರೆ ನೀಡುವ ಕೂಲಿ ಮಾತ್ರ ಯಾವುದಕ್ಕೂ ಸಾಲದು. ಕಾರ್ಮಿಕರ ಕಲ್ಯಾಣಕ್ಕೆ ಇರುವ ಸರ್ಕಾರಿ ಯೋಜನೆಗಳಾದರೂ ನಮಗೆ ಸಿಗಲಿ ಎನ್ನುವುದಕ್ಕಾಗಿ ನಮ್ಮ ಪ್ರತಿಭಟನೆ’ ಎನ್ನುತ್ತಾರೆ.
’ಈ ನೇಕಾರ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕೆಂದು ಕಾನೂನು ಬದ್ಧ ಕಾರ್ಮಿಕ ಹಕ್ಕುಗಳು ಸಿಗಬೇಕೆಂದು, 5-6 ದಶಕಗಳಿಂದ ರಾಜ್ಯದ ಕಾರ್ಮಿಕ ಸಂಘಟನೆಗಳು, ಕಾರ್ಮಿಕ ಪರ ವ್ಯಕ್ತಿಗಳು, ಕೂಲಿ ನೇಕಾರ ಕಾರ್ಮಿಕರ ಬಳಗ ಒಳಗೊಂಡಂತೆ ಹಲವು ಸಂಘಟನೆಗಳು ಇಂದಿನವರೆಗೂ ಹೋರಾಡುತ್ತಿವೆ’ ಎಂದರು.
’ನೇಕಾರ ಸಮ್ಮಾನ್ ಯೋಜನೆಯನ್ನು ವಿದ್ಯುತ್ ಚಾಲಿತ ಮಗ್ಗಗಳಲ್ಲೂ ಕೆಲಸ ಮಾಡುವ ಕಾರ್ಮಿಕರಿಗೆ ವಿಸ್ತರಿಸಬೇಕು. ತಿಂಗಳಿಗೆ 5,000 ರೂಪಾಯಿ ನೀಡುವ ಈ ಯೋಜನೆಯನ್ನು ಇವರಿಗೂ ವಿಸ್ತರಿಸಬೇಕು. ಲಾಕ್ಡೌನ್ ವೇಳೆ 2,000 ರೂಪಾಯಿ ನೀಡಲಾಯಿತು. ಆದರೆ ಎಷ್ಟೋ ಕಾರ್ಮಿಕರಿಗೆ ಅದು ಸಿಗಲಿಲ್ಲ. ಕಾರ್ಮಿಕರ ಹೆಸರಿನಲ್ಲಿ ಮಾಲೀಕರು ಅದನ್ನು ಪಡೆದುಕೊಂಡರು. ಏಕೆಂದರೆ ನಾನು ಕೂಲಿ ನೇಕಾರ ಕಾರ್ಮಿಕ ಎಂದು ಹೇಳಲು ಕಾರ್ಮಿಕರ ಬಳಿ ಗುರುತಿನ ಚೀಟಿ ಕೂಡ ಇಲ್ಲ’ ಎಂದು ರವಿ ಪಾಟೀಲ್ ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಜಾರಿಯಲ್ಲಿರುವುದು ನಾಚಿಕೆಗೇಡಿನ ವಿಷಯ: ಜಯಾಬಚ್ಚನ್
ನೇಕಾರರು ಎಂದರೆ ಎರಡು ವರ್ಗಳಿವೆ. ಒಂದು ಮಾಲೀಕ ವರ್ಗ ಮತ್ತೊಂದು ಕಾರ್ಮಿಕ ವರ್ಗ. ಆದರೆ ಸರ್ಕಾರ ನೀಡುವ ಯೋಜನೆಗಳ ಪಾಲು ಹೋಗುತ್ತಿರುವುದು ಮಾಲೀಕ ವರ್ಗಕ್ಕೆ. ಸಾಲ ಮನ್ನಾ, ಸಬ್ಸಿಡಿ, ಯಂತ್ರಗಳ ಖರೀದಿಗೆ ಧನಸಹಾಯ ಎಲ್ಲವೂ ಮಾಲೀಕರ ಪರವಾಗಿವೆ. ಕಾರ್ಮಿಕ ವರ್ಗ ಎಂಬ ಒಂದು ವರ್ಗವಿದೆ. ಅವರಿಗೂ ಸರ್ಕಾರಿ ಸೌಲಭ್ಯಗಳು ಬೇಕು ಎಂದು ತಿಳಿಸುವ ಪ್ರಯತ್ನ ನಾವು ಮಾಡುತ್ತಿದ್ದೆವೆ ಎಂದು ಹೇಳುತ್ತಾರೆ ರವಿ ಪಾಟೀಲ್.
’ಕಾರ್ಮಿಕರಿಗೆ ದಿನೇ ದಿನೇ ಕೂಲಿ ಹೆಚ್ಚು ಮಾಡುವ ಬದಲು ಕಡಿಮೆ ಮಾಡುತ್ತಿದ್ದಾರೆ. ಉದ್ಯಮ ಚೆನ್ನಾಗಿ ನಡೆಯುತ್ತಿದ್ದರೂ, ಸೀರೆ ವ್ಯಾಪಾರವಾಗುತ್ತಿಲ್ಲ ಎಂದು ನೆಪ ಹೇಳುತ್ತಾ ಕೂಲಿ ಕಡಿಮೆ ನೀಡುತ್ತಾರೆ. ಲಾಕ್ಡೌನ್ ಸಮಯದಲ್ಲಿ ಹಲವಾರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸರ್ಕಾರ ಮಾತ್ರ ನಮ್ಮತ್ತ ತಿರುಗಿ ನೋಡುತ್ತಿಲ್ಲ, ನಾವು ಹೇಗೆ ಬದುಕಬೇಕು? ಎಂಬುದು ಕಾರ್ಮಿಕರ ಅಳಲು.
ಕೂಲಿ ನೇಕಾರರ ಕಾರ್ಮಿಕ ಬಳಗದ ಬೇಡಿಕೆಗಳ ಮನವಿ ಪತ್ರ ಇಲ್ಲಿದೆ.
’ಈ ಬೇಡಿಕೆಗಳ ಮೇಲೆ ಪ್ರತಿಭಟನೆ ಮಾಡಿ, ಸದನದಲ್ಲಿ ಈ ಬಗ್ಗೆ ಮಾತನಾಡಲು ಮನವಿ ಪತ್ರಗಳನ್ನು ಜಿಲ್ಲಾಡಳಿತ, ಜವಳಿ ಸಚಿವರು, ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಎಲ್ಲರಿಗೂ ಮನವಿ ಕೊಟ್ಟಿದ್ದೇವು. ಬೆಳಗಾವಿ ದಕ್ಷಿಣದ ಶಾಸಕ ಅಭಯ ಪಾಟೀಲರು ಮಾತ್ರ ಮಾತನಾಡಿದರು. ಆದರೂ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ’ ಎನ್ನುತ್ತಾರೆ ರವಿ ಪಾಟೀಲ್.
ದಶಕಗಳಿಂದ ದುಡಿಯುತ್ತಾ ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಿ, ಕಷ್ಟದಲ್ಲಿರುವ ನೇಕಾರರ ಕಲ್ಯಾಣಕ್ಕಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವ ಮೂಲಕ ಮಾನವೀಯತೆ ಮೆರೆಯಬೇಕಿದೆ.
ಇದನ್ನೂ ಓದಿ: ತಮಿಳುನಾಡು: ಚುನಾವಣಾ ಪ್ರಚಾರದ ವೇಳೆ ಜನರ ಬಟ್ಟೆ ಒಗೆದ ಎಐಎಡಿಎಂಕೆ ಅಭ್ಯರ್ಥಿ