Homeಬಹುಜನ ಭಾರತಬಹುಜನ ಭಾರತ: ಅಧೋಲೋಕದ ಈ ಲೇಖಕ ಇದೀಗ ಬಂಗಾಳದ ಶಾಸಕ

ಬಹುಜನ ಭಾರತ: ಅಧೋಲೋಕದ ಈ ಲೇಖಕ ಇದೀಗ ಬಂಗಾಳದ ಶಾಸಕ

- Advertisement -
- Advertisement -

ಎರಡು ತಿಂಗಳ ಹಿಂದೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಸರು ಪ್ರಕಟವಾಗುವ ತನಕ ಮನೋರಂಜನ್ ಬ್ಯಾಪಾರಿ ಯಾರೆಂದು ಬಾಲಾಗಢದ ಮತದಾರರಿಗೆ ತಿಳಿದಿರಲಿಲ್ಲ. ಸಾಮಾನ್ಯ ಮತದಾರರಿರಲಿ, ಪಕ್ಷದ ಕಾರ್ಯಕರ್ತರಿಗೂ ಗೊತ್ತಿರಲಿಲ್ಲ. ಅವರ ಬದುಕು-ಸಂಘರ್ಷ-ಸಾಧನೆಗಳ ಕುರಿತು ಕರಪತ್ರಗಳನ್ನು ಅಚ್ಚು ಮಾಡಿ ಹಂಚಲಾಯಿತು.

ರಿಕ್ಷಾ ತುಳಿಯುತ್ತಿದ್ದ, ಸ್ಮಶಾನ ಕಾಯುತ್ತಿದ್ದ, ಅಡುಗೆ ಮಾಡುತ್ತಿದ್ದ, ರೇಲ್ವೆ ವ್ಯಾಗನ್‌ಗಳಿಂದ ಕಲ್ಲಿದ್ದಲು ಕದಿಯುತ್ತಿದ್ದ ಆತನ ಹೆಸರು ಮನೋರಂಜನ್ ಬ್ಯಾಪಾರಿ. ಪಶ್ಚಿಮ ಬಂಗಾಳದ ಮೊದಲ ದಲಿತ ಲೇಖಕ. ಜೈಲಿನಲ್ಲಿ ಅಕ್ಷರ ಕಲಿತು ಹತ್ತಕ್ಕೂ ಹೆಚ್ಚು ಕಾದಂಬರಿಗಳು ಮತ್ತು ನೂರಾರು ಸಣ್ಣ ಕತೆಗಳು ಹಾಗೂ ಅಧೋಲೋಕದ ಯಾತನೆ ಕುರಿತ ಆತ್ಮಕತೆ ಬರೆದ ಜಗತ್ತಿನ ಮೊದಲ ಬರಹಗಾರ.

ಆದರೆ ಬದುಕು ಅವರನ್ನು ಇದೀಗ ಬಂಗಾಳದ ವಿಧಾನಸಭೆಯನ್ನು ತಲುಪಿಸಿದೆ. ಹೂಗ್ಲಿ ಜಿಲ್ಲೆಯ ಬಾಲಾಗಢ ಮೀಸಲು ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ.

ಇಂದು ಬಾಂಗ್ಲಾ ದೇಶವೆಂದು ಕರೆಯಲಾಗುವ ಅಂದಿನ ಪೂರ್ವ ಬಂಗಾಳದಿಂದ ಓಡಿಬಂದ ನಿರಾಶ್ರಿತ ನಾಮಶೂದ್ರ ಕುಟುಂಬ ಅವರದು. ದಶಕಗಳ ಅಲೆದಾಟದ ನಂತರ ಕೊಲ್ಕತ್ತಾದ ಹೊರವಲಯದ ಖುದಿರಾಬಾದ್ ಎಂಬಲ್ಲಿ ಕಲ್ನಾರಿನ ಛಾವಣಿಯ ಪುಟ್ಟ ಇಟ್ಟಿಗೆ ಮನೆಯನ್ನು ಕಟ್ಟಿಕೊಂಡರು.

ಈವರೆಗೆ 23 ಪುಸ್ತಕಗಳನ್ನು (ಹದಿಮೂರು ಕಾದಂಬರಿಗಳು ನೂರೈವತ್ತಕ್ಕೂ ಹೆಚ್ಚು ಸಣ್ಣ ಕತೆಗಳು) ರಚಿಸಿರುವ ಬ್ಯಾಪಾರಿ ಪಶ್ಚಿಮ ಬಂಗಾಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ರಾಜ್ಯ ಸರ್ಕಾರ ರಚಿಸಿರುವ ದಲಿತ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು. ಇಲ್ಲಿಯವರೆಗೂ ಅವರದು ಸರಳ ಬದುಕು ಮತ್ತು ಶ್ರಮಜೀವಿಗಳ ಅತಿ ಸಾಧಾರಣ ದಿರಿಸು.

ನೊಂದವರು ಅವಮಾನಿತರ ಅಮ್ಮನಾಗಿ ಅವರ ಬೆವರು ಕಣ್ಣೀರು ಅಪಮಾನಗಳು ಪ್ರತಿಭಟನೆಗಳಿಗೆ ಸಿಡಿಮದ್ದಿನಂತಹ ಅಕ್ಷರಗಳನ್ನು ತೊಡಿಸಿದವರು ಮಹಾಶ್ವೇತಾದೇವಿ. ವಿಶೇಷವಾಗಿ ಆದಿವಾಸಿಗಳು ದಲಿತರ ಕಣ್ಣೀರು ಒರೆಸಿದ ದೀದಿ. ಈಕೆ ‘ಸ್ಪರ್ಶಿಸಿದ’ ಸೈಕಲ್ ರಿಕ್ಷಾ ತುಳಿವ ಪಾತಕಲೋಕದ ಹಿನ್ನೆಲೆಯ ದಲಿತನೊಬ್ಬ ಬಂಗಾಳಿ ಸಾಹಿತ್ಯ ಲೋಕ ಎದ್ದು ಕುಳಿತು ಗಮನಿಸುವ ಲೇಖಕನಾದ ವಿದ್ಯಮಾನ ಬೆರಗು ಬಡಿಸುವಂತಹುದು.

ಇವರು 2012ರಲ್ಲಿ ಬಂಗಾಳಿಯಲ್ಲಿ ಬರೆದ ಆತ್ಮಕತೆ ‘ಇತಿಬ್ರಿತ್ತೆ ಚಾಂಡಾಲ ಜಿಬಾನ್’ (‘ನನ್ನ ಚಾಂಡಾಲ ಬದುಕು- ದಲಿತನೊಬ್ಬನ ಆತ್ಮಚರಿತ್ರೆ’) ಎಂಬ ಕೃತಿ 2018ರಲ್ಲಿ `Interrogating My Chandal Life’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಗೊಂಡು ಪ್ರಕಟವಾಗುತ್ತದೆ. 2018ರ ಸಾಲಿನ ದಿ ಹಿಂದೂ ಪ್ರಶಸ್ತಿಯನ್ನು ಪಡೆಯುತ್ತದೆ

ಕಿವುಡ-ಮೂಗ ಮಕ್ಕಳ ಸರ್ಕಾರ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಬಾಣಸಿಗನಾಗಿ 23 ವರ್ಷಗಳ ಕಾಲ ದುಡಿದರು. ಮೊಣಕಾಲ ಶಸ್ತ್ರಚಿಕಿತ್ಸೆಯ ನಂತರ ಭಾರೀ ದೊಡ್ಡ ಭಾಂಡೆಗಳನ್ನು ಎತ್ತಿ ಇಳಿಸುವುದು ಕಷ್ಟಕರವೆನಿಸಿತು. ಗ್ರಂಥಾಲಯಕ್ಕೆ ವರ್ಗ ಮಾಡಿ ಹಗುರ ಕೆಲಸ ನೀಡುವಂತೆ ಕೋರಿ ನಾಲ್ಕು ವರ್ಷಗಳ ಕಾಲ ಸರ್ಕಾರಿ ಕಚೇರಿಗಳಿಗೆ ಅಲೆದರು. ಕಡೆಗೆ ಖುದ್ದು ಮಮತಾ ಬ್ಯಾನರ್ಜಿಯವರೇ ಈ ವಿನಂತಿಯನ್ನು ಈಡೇರಿಸಿದರು. 2020ರ ಆಗಸ್ಟ್ ತಿಂಗಳಲ್ಲಿ ದಕ್ಷಿಣ 24 ಪರಗಣದ ಅಮಟಾಲದ ಗ್ರಂಥಾಲಯದಲ್ಲಿ ಪುಸ್ತಕಗಳ ಧೂಳು ಝಾಡಿಸಿ ಒರೆಸಿ ಇಡುವ ಕೆಲಸಕ್ಕೆ ವರ್ಗಾವಣೆ ಆಯಿತು. ಆದರೆ ಕೋವಿಡ್ ಕಾರಣ ಗ್ರಂಥಾಲಯ ಬಹುಪಾಲು ಮುಚ್ಚಿಯೇ ಇತ್ತು.

“ತಮ್ಮ ಬರೆಹಗಳಲ್ಲಿ ರೂಪು ತಳೆಯವ ಪಾತ್ರಗಳಿಗೆ ಪ್ರೇರಣೆಯಾಗುವ ಜನರಿಗಾಗಿ ಏನಾದರೂ ಮಾಡಲು ಸಾಧ್ಯವಿರುವ ವೇದಿಕೆ ರಾಜಕಾರಣ. ಜನರ ತಬ್ಬಲಿ ಬದುಕುಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅವರ ಸಂಕಟ ವ್ಯಥೆ ವಿಷಾದಗಳ ಕುರಿತು ಬರೆದಿದ್ದೇನೆ. ನನ್ನದೇ ಬದುಕಿನ ಅನುಭವಗಳು ಮತ್ತು ಇತರರ ಬವಣೆಗಳನ್ನು ಬೆರೆಸಿ ಪುಸ್ತಕಗಳ ಬರೆದು ಪ್ರಕಟಿಸಿದೆ. ರಾಯಲ್ಟಿ ಸಂಪಾದಿಸಿದೆ. ಆದರೆ ಅವರಿಗಾಗಿ ಏನನ್ನೂ ಮಾಡಲಾರದಾಗಿದ್ದೆ. ನನ್ನ ಬದುಕೇ ಹಾಗಿತ್ತು” ಎನ್ನುತ್ತಾರೆ ಮನೋರಂಜನ್ ಬ್ಯಾಪಾರಿ.

“ಪಶ್ಚಿಮ ಬಂಗಾಳದ ಸಂಸ್ಕೃತಿ, ಭಾಷೆ, ಜನಸಮುದಾಯಗಳನ್ನು ಧ್ವಸ್ತಗೊಳಿಸಲು ದಂಡೆತ್ತಿ ಬಂದಿದ್ದಾರೆ ಶತ್ರುಗಳು. ಬ್ರಿಟಿಷ್ ವರ್ತಕರು ಭಾರತಕ್ಕೆ ಬಂದು 200 ವರ್ಷ ಕಾಲ ನಮ್ಮನ್ನು ಗುಲಾಮಗಿರಿಗೆ ತಳ್ಳಿದರು. ಇದೀಗ ಗುಜರಾತಿ ವರ್ತಕರು ಅದೇ ಇರಾದೆಯೊಂದಿಗೆ ನುಗ್ಗಿದ್ದಾರೆ. ವ್ಯಾಪಾರೋದ್ಯಮದ ಹಿತಾಸಕ್ತಿಗಳೇ ಅವರಿಗೆ ಪರಮ. ಇಂತಹ ಹೊತ್ತಿನಲ್ಲಿ ‘ನೀನು ತೆಪ್ಪಗೆ ಕತೆ ಬರೆಯಪ್ಪಾ’ ಎಂದು ನನ್ನ ಲೇಖನಿಗೆ ಹೇಳಲಾರೆ. ಬಂಗಾಳದ ಆತ್ಮಕ್ಕಾಗಿ ನಡೆದಿರುವ ಹೋರಾಟವಿದು.

“ಸಾಧಾರಣ ಸಂದರ್ಭಗಳೇ ಆಗಿದ್ದಲ್ಲಿ ತಾವು ರಾಜಕಾರಣಕ್ಕೆ ಎಂದೆಂದಿಗೂ ಕಾಲಿಡುತ್ತಿರಲಿಲ್ಲ. ವ್ಯವಸ್ಥೆ ಅಷ್ಟೊಂದು ಕೊಳೆತು ಹೋಗಿದೆ. ಆದರೆ ಈಗ ಹೊರಗಿನ ಶಕ್ತಿಗಳು ಬಂಗಾಳದ ಭಾಷೆ, ಸಂಸ್ಕೃತಿ, ಪರಂಪರೆಗೆ ಗಂಡಾಂತರ ಒಡ್ಡಿವೆ. ಬಂಗಾಳವನ್ನು ತಮ್ಮ ನಿಯಂತ್ರಣದ ಕಪಿಮುಷ್ಠಿಗೆ ಸಿಕ್ಕಿಸಿಕೊಳ್ಳಲು ಮುಂದಾಗಿವೆ.. ಹೀಗಾಗಿ ಪ್ರತಿರೋಧ ಒಡ್ಡದೆ ಬೇರೆ ದಾರಿಯೇ ಇಲ್ಲ” ಎಂದು ತಮ್ಮ ರಾಜಕಾರಣ ಪ್ರವೇಶವನ್ನು ಸಮರ್ಥಿಸಿಕೊಳ್ಳುತ್ತಾರೆ ಅವರು.

ಚುನಾವಣೆಯ ಪ್ರಚಾರದ ದಿನಗಳಲ್ಲಿ ಅವರಿಗೆ ದೊರೆತ ಜನಪ್ರೀತಿ ‘ಊಹಾತೀತ’. ಸಿಪಿಐ(ಎಂ) ಮತ್ತು ಬಿಜೆಪಿಯ ಜನರೂ ತಮ್ಮನ್ನು ಭೇಟಿಯಾಗಿ ಬೆಂಬಲ ಪ್ರಕಟಿಸಿದ್ದನ್ನು ಕೃತಜ್ಞತೆಯಿಂದ ನೆನೆಯುತ್ತಾರೆ. ಆರಂಭದಲ್ಲಿ ಬಾಲಾಗಢಕ್ಕೆ ಹೊರಗಿನವರೆಂದು ಅವರ ಉಮೇದುವಾರಿಕೆಗೆ ವಿರೋಧ ಎದುರಾಗಿತ್ತು. ನಾನೊಬ್ಬ ನಿರಾಶ್ರಿತ. ಹೀಗಾಗಿ ದೇಶದ ಯಾವ ಭಾಗಕ್ಕೆ ಹೋದರೂ ನಾನು ಹೊರಗಿನವನೇ. ಆದರೆ ನಿಜವಾಗಿಯೂ ನಾನು ನಿಮ್ಮೊಳಗೊಬ್ಬನು. ಚಿಂದಿ ಆಯುವ, ರಿಕ್ಷಾ ತುಳಿಯುವ, ಚಹಾ ಮಾರುವ, ರಸ್ತೆ ಬದಿ ಮಲಗುವ ಜನರ ನೋವನ್ನು ಅರ್ಥ ಮಾಡಿಕೊಂಡವನು. ಯಾಕೆಂದರೆ ವರ್ಷಗಳ ಕಾಲ ನಾನು ಇವೇ ಬದುಕುಗಳನ್ನು ಬದುಕಿದ್ದವನು ಎಂದು ವಿರೋಧಿಗಳನ್ನು ಒಲಿಸಿಕೊಳ್ಳುತ್ತಾರೆ.

ಕ್ಷೇತ್ರಕ್ಕೆ ಹೊರಗಿನಿಂದ ಬಂದು ಸ್ಪರ್ಧಿಸುವ ಬಹುತೇಕ ಹುರಿಯಾಳುಗಳು ಗೆದ್ದರೆ ಅಲ್ಲಿಯೇ ಮನೆ ಮಾಡುವುದಾಗಿ ಸಾರುವುದುಂಟು. ಆದರೆ ಗೆದ್ದರೂ ಸೋತರೂ ತಾವು ಇಲ್ಲಿಯೇ ನೆಲೆಸುವುದಾಗಿ ಹೇಳಿದ್ದಾರೆ ಬ್ಯಾಪಾರಿ. ನಿವೇಶನ ನೀಡಲು ಬಂದವರನ್ನು ನಯವಾಗಿಯೇ ದೂರವಿರಿಸಿದ್ದಾರೆ. ಬದಲಿಗೆ ಈ ಕ್ಷೇತ್ರದ ಮನೆ ಮನೆಯಿಂದ ಅರ್ಧ ಇಟ್ಟಿಗೆ ದಾನ ಪಡೆದು ಮನೆ ಕಟ್ಟಿಕೊಳ್ಳುತ್ತೇನೆ ಎಂದಿದ್ದರು.

“ಭಾರತದ ಸಂವಿಧಾನವನ್ನು ಮೂಲೆಗೆ ತಳ್ಳಿ ಮನುಸ್ಮೃತಿಯನ್ನು ಜಾರಿಗೊಳಿಸುವ ಪಕ್ಷವಿದು. ದಲಿತರು ಮತ್ತು ಮುಸಲ್ಮಾನರನ್ನು ಗುಲಾಮರಂತೆ ಕಾಣಲಿದೆ. ಬ್ರಾಹ್ಮಣವಾದದ ತಳಹದಿಯ ಸಮಾಜವನ್ನು ಕಟ್ಟುವುದು ಅವರ ಹುನ್ನಾರ. ಧರ್ಮ ಮತ್ತು ಜಾತಿಗಳ ಆಧಾರದ ಮೇಲೆ ನಮ್ಮ ಸಮಾಜವನ್ನು ಹರಿದು ಸೀಳುವ ವಿಭಜಕ ಶಕ್ತಿಯಿದು” ಎಂಬುದು ಬಿಜೆಪಿಯ ಬಗ್ಗೆ ಅವರ ನಿಚ್ಚಳ ನಿಲುವು.

ಎಪ್ಪತ್ತರ ದಶಕದ ಆರಂಭದಲ್ಲಿ ನಕ್ಸಲೀಯ ಆಂದೋಲನ ಉತ್ತುಂಗದಲ್ಲಿತ್ತು. ಅದರೊಂದಿಗೆ ಗುರುತಿಸಿಕೊಂಡಿದ್ದ ಬ್ಯಾಪಾರಿ 26 ತಿಂಗಳು ಜೈಲಿನಲ್ಲಿದ್ದರು. ವರ್ಷಗಟ್ಟಲೆ ಜಾಧವಪುರದ ರೇಲ್ವೆ ಪ್ಲಾಟ್‌ಫಾರ್ಮ್‌ಗಳ ಮೇಲೆ ಇರುಳು ಕಳೆದರು. ಕೊಲ್ಕತ್ತ ಇವರನ್ನು ತೆರೆದ ಬಾಹುಗಳಿಂದೇನೂ ಕರೆದುಕೊಳ್ಳಲಿಲ್ಲ.

ಜೈಲಿನಿಂದ ಬಿಡುಗಡೆಯಾಗಿ ಹೊಟ್ಟೆಪಾಡಿಗಾಗಿ ಜಾಧವಪುರದಲ್ಲಿ ಸೈಕಲ್ ರಿಕ್ಷಾ ತುಳಿಯಲಾರಂಭಿಸಿದರು. ಬಿಸಿಲು ಧಗೆಯ ಒಂದು ಮಧ್ಯಾಹ್ನ ಜ್ಯೋತಿಷ್ ರಾಯ್ ಕಾಲೇಜಿನ ಹೊರಗೆ ಸವಾರಿಗಾಗಿ ಕಾಯುತ್ತಿದ್ದರು. ಹಿರಿಯ ಮಹಿಳಾ ಪ್ರೊಫೆಸರೊಬ್ಬರು ರಿಕ್ಷಾ ಹತ್ತಿದರು.

ರಿಕ್ಷಾವಾಲನ ಹೆಸರು ಮನೋರಂಜನ್ ಬ್ಯಾಪಾರಿ. ರಿಕ್ಷಾ ಏರಿ ಕುಳಿತು ಆತನನ್ನು ಮನೆಗೆ ಊಟಕ್ಕೆ ಕರೆದು ಅಕ್ಕರೆ ತೋರಿದ ಆ ಅಮ್ಮ ಮಹಾಶ್ವೇತಾದೇವಿ. ಆದಿವಾಸಿಗಳು-ದಲಿತರ ಪಾಲಿನ ದೀದಿ ಎಂದು ಕರೆಯಿಸಿಕೊಂಡ ಜೀವ ಕಾರುಣ್ಯದ ತಾಯಿ.

“ಮಹಾಶ್ವೇತಾ ತಾಯಿ ಬದುಕಿದ್ದರೆ ನನ್ನ ಚುನಾವಣೆ-ಗೆಲುವು ಕುರಿತು ಸಂತಸಪಡುತ್ತಿದ್ದರು. ಜೈಲಿನಲ್ಲಿ ತಮಗೆ ಓದು ಬರೆಹ ಕಲಿಸಿದ ಸಹಖೈದಿ ಮತ್ತು ಮಹಾಶ್ವೇತಾ ಅವರಂತಹ ಉತ್ತಮಾತ್ಮರು ನನಗೆ ಸಿಕ್ಕಿದ್ದು ತಮ್ಮ ಸುಕೃತ” ಎನ್ನುತ್ತಾರೆ.

1974ರಲ್ಲಿ ನಕ್ಸಲ್ಬರಿಯ ಸಿಲಿಗುಡಿಯ ಬಳಿಯಿದ್ದಾಗ ಜರುಗಿದ ರೈತ ಬಂಡಾಯದಲ್ಲಿ ಭಾಗಿಯಾಗುತ್ತಾರೆ. ಬಿಡುಗಡೆಯಾಗಿ ರಿಕ್ಷಾ ತುಳಿದು ಅನ್ನ ಸಂಪಾದಿಸುತ್ತಾರೆ. 1989ರಲ್ಲಿ ಸಿ.ಐ.ಟಿ.ಯು. ಜೊತೆಗೆ ಘರ್ಷಣೆ ಜರುಗಿ ಬಸ್ತರ್‌ಗೆ ತೆರಳುತ್ತಾರೆ. ದಂತಕತೆಯೇ ಆಗಿ ಹೋಗಿರುವ ಕಾರ್ಮಿಕ ನಾಯಕ ಶಂಕರಗುಹಾ ನಿಯೋಗಿಯ ಸಂಪರ್ಕಕ್ಕೆ ಬರುತ್ತಾರೆ. ಛತ್ತೀಸಗಢ ಮುಕ್ತಿ ಮೋರ್ಚಾ ಟ್ರೇಡ್ ಯೂನಿಯನ್ ಕಟ್ಟಲು ಕೈ ಜೋಡಿಸುತ್ತಾರೆ. ವರ್ಷಗಳ ನಂತರ ಮತ್ತೆ ಜಾಧವಪುರಕ್ಕೆ ಮರಳುತ್ತಾರೆ. ಅವರ ಬದುಕಿಗೆ ಹೊಸ ತಿರುವ ನೀಡಿದ ಮಹಾಶ್ವೇತ ತಾಯಿಯ ಭೇಟಿ ಜರುಗಿದ ಹಂತವಿದು.

ಅವರು 2010ರಲ್ಲಿ ‘ನಿಶ್ಯಬ್ದ ಬಾಣ’ ಎಂಬ ಸಣ್ಣಕತೆಯ ರಿಕ್ಷಾ ಚಾಲಕ ನಾಯಕ ಸಿಪಿಐ(ಎಂ) ಮತ್ತು ತೃಣಮೂಲ ಎರಡರಿಂದಲೂ ಮತ ನೀಡಲು ಹಣ ಪಡೆಯುತ್ತಾನೆ. ಮೀನು ಕೊಳಗಳಿದ್ದ ಜೌಗು ಪ್ರದೇಶವನ್ನು ಮಣ್ಣು ತುಂಬಿ ಮುಚ್ಚಿ ಬಡಜನರ ವಸತಿಗೆ ನಿವೇಶನಗಳನ್ನು ಮಾಡಿ ಮಾರಾಟ ಮಾಡಲಾದ ಕೊಲ್ಕತ್ತಾದ ಹೊರವಲಯದ ಪ್ರದೇಶ ಖುದಿರಾಬಾದ್. ಅಲ್ಲಿನ ನೀರು ತುಂಬಿದ ಜೌಗು-ಕೆಸರು ರೊಜ್ಜೆಯ ರಸ್ತೆಗಳಲ್ಲಿ ರಿಕ್ಷಾ ತುಳಿದು ರೋಸಿರುತ್ತಾನೆ. ಮತಗಟ್ಟೆಗೆ ತೆರಳಿ ಮತಪತ್ರದಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಹೆಸರಿನ ಮುಂದೆ ಮುದ್ರೆಯೊತ್ತಿ ಮತವನ್ನು ವ್ಯರ್ಥಗೊಳಿಸಿ ಪ್ರತಿಭಟಿಸುತ್ತಾನೆ. ಯಾವ ಪಕ್ಷದ ಸರ್ಕಾರ ಬಂದರೇನು, ಬಡವರು ದೀನ ದಲಿತರ ಬದುಕುಗಳು ಬದಲಾಗುವುದಿಲ್ಲ ಎನ್ನುತ್ತದೆ ಅವರ ‘ಪೊರಿಬೊರ್ತನ್ ಚಾಯ್’ ಎಂಬ ಮತ್ತೊಂದು ಸಣ್ಣ ಕತೆ. ಚಿಂದಿ ಆಯುವವನು ಆ ಕತೆಯ ನಾಯಕ. ರಾಜಕೀಯ ಗೂಂಡಾಗಳು ಮತ್ತು ಪೊಲೀಸರು ಜನಸಾಮಾನ್ಯರನ್ನು ಸುಲಿದು ತಿನ್ನುವುದು ಅವರ ‘ಟೋಲಾಬಾಜ್’ ಕತೆಯ ವಸ್ತು.

“ಬದುಕೆಲ್ಲ ಅಲೆಮಾರಿಯಾಗಿ ಕಳೆದವರು ತಾವು. ಬಾಳ ಸಂಗಾತಿಯ ವಿನಾ ತಮ್ಮದೆಂಬುದು ಇನ್ನೇನೂ ಇಲ್ಲ” ಎಂದು ಪತ್ನಿಯ ಕುರಿತು ಮೈಯೆಲ್ಲ ಕೃತಜ್ಞತೆಯಾಗುತ್ತಾರೆ. ಪತ್ನಿಯ ಆಸರೆ ಇಲ್ಲದೆ ಹೋಗಿದ್ದರೆ ಬದುಕಿನ ಈ ಯಾನ ಸಾಧ್ಯವಿರಲಿಲ್ಲ. ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ನಿತ್ಯ 20 ಕಿ.ಮೀ. ಸೈಕಲ್ ತುಳಿಯಬೇಕಿತ್ತು. ಆಕೆ ತರುತ್ತಿದ್ದ 225 ರುಪಾಯಿಗಳ ಮಾಸಿಕ ಸಂಬಳವೇ ಜೀವನಾಧಾರ. ನನಗೆ ಸಂಪಾದನೆ ಇರದಿದ್ದಾಗಲೂ ಆಕೆ ದೂರಲಿಲ್ಲ. ಈಗಲೂ ಮನೆ ವ್ಯವಹಾರವೆಲ್ಲ ಆಕೆಯದೇ. ನಾನು ಆಕೆಗೆ ಎಣೆಯಿಲ್ಲದಷ್ಟು ಋಣಿಯಾಗಿದ್ದೇನೆ. ಮನೆಯ ಒಳಗಣ ಈ ನೆಮ್ಮದಿ ನೆರವು ಹೊರಗೆ ಸಿಗಲಿಲ್ಲ. ವಾತಾವರಣ ಸಹಕಾರಿಯಾಗಿರಲಿಲ್ಲ. ಬಹಿಷ್ಕೃತರು ಮತ್ತು ದಿಕ್ಕಿಲ್ಲದ ಪರದೇಸಿಗಳ ಛೋಟಾಲೋಕ ಮತ್ತು ಸಜ್ಜನರ ಭದ್ರಲೋಕವಾಗಿ ನಮ್ಮ ಸಮಾಜ ಇಬ್ಭಾಗವಾಗಿ ಹೋಗಿದೆ. ನನ್ನಂತಹವನು ಮನ್ನಣೆ ಗಳಿಸುವುದನ್ನು ಭದ್ರಲೋಕ ಇಷ್ಟಪಡುವುದಿಲ್ಲ” ಎನ್ನುತ್ತಾರೆ.

ಮನೋರಂಜನ್ ಅವರ ಬದುಕಿನ ಭಾಗವಾಗಿ ಪರಿಣಮಿಸಿದೆ ಸೈಕಲ್ ರಿಕ್ಷಾ. ನಾಮಪತ್ರ ಸಲ್ಲಿಕೆ, ಚುನಾವಣಾ ಪ್ರಚಾರಕ್ಕೆ ಅವರು ತೆರಳಿದ್ದು ರಿಕ್ಷಾ ತುಳಿದುಕೊಂಡೇ.

ಇವರ ‘ಜಿಜೀವಿಷ’ ಈಗಲೂ ಕುಂದಿಲ್ಲ. ಬೆರಳಲ್ಲಿ ಅವರು ಸದಾ ಧರಿಸುವ ಉಂಗುರದಲ್ಲಿ ಬರೆದಿರುವ ಪದ ‘ಜಿಜೀವಿಷ’. ಮಹಾಶ್ವೇತಾ ತಾಯಿಯ ಭೇಟಿಯ ನಂತರ ಲೇಖಕನಾಗಿ ತಾವು ‘ಮರುಹುಟ್ಟು’ ಪಡೆದೆನೆಂಬುದು ಅವರ ನಂಬಿಕೆ.


ಇದನ್ನೂ ಓದಿ: ಹೆಚ್ಚುತ್ತಿರುವ ಸಾಂಕ್ರಾಮಿಕ: ಕುಸಿಯುತ್ತಿರುವ ನರೇಂದ್ರ ಮೋದಿ ಜನಪ್ರಿಯತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...