Homeಚಳವಳಿಶ್ರದ್ಧಾಂಜಲಿ; ಗಾಂಧಿವಾದಿಗಳ ಬಗ್ಗೆ ಇದ್ದ ತಕರಾರುಗಳಿಗೆ ಉತ್ತರ ನೀಡುತ್ತಿದ್ದ ದೊರೆಸ್ವಾಮಿಯವರು..

ಶ್ರದ್ಧಾಂಜಲಿ; ಗಾಂಧಿವಾದಿಗಳ ಬಗ್ಗೆ ಇದ್ದ ತಕರಾರುಗಳಿಗೆ ಉತ್ತರ ನೀಡುತ್ತಿದ್ದ ದೊರೆಸ್ವಾಮಿಯವರು..

- Advertisement -
- Advertisement -

ವಿದ್ಯಾರ್ಥಿ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು ಎಂದರೆ ಅವರು ಭೂಮಿಯ ಮೇಲೆ ಬದುಕುತ್ತಿರುವ ದೇವರುಗಳು; ಅವರನ್ನೆಲ್ಲಾ ನಮ್ಮಂಥವರು ನೋಡಲೂ ಸಾಧ್ಯವಿಲ್ಲ ಎಂದು ತಿಳಿದಿದ್ದವನಿಗೆ ಡಿಗ್ರಿ ಓದುವ ಸಮಯಕ್ಕೆ ಅವರ ಬಗ್ಗೆ ಇದ್ದ ಪೂಜ್ಯಭಾವ ದೂರವಾಗಿತ್ತು. ಅದು ಗಾಂಧಿ ಮತ್ತು ಗಾಂಧಿವಾದದ ಬಗ್ಗೆ ಅಸಡ್ಡೆ ಮೂಡುತ್ತಿದ್ದ ಕಾಲ. ಮೊದಲೇ ಎಚ್. ನರಸಿಂಹಯ್ಯನವರನ್ನು ಹತ್ತಿರದಿಂದ ನೋಡಿದ್ದ ನನಗೆ ಎಚ್.ಎಸ್ ದೊರೆಸ್ವಾಮಿಯವರು ಸಿಕ್ಕಿದ್ದು ಗಾಂಧಿವಾದವನ್ನು ಕಂಠಪೂರ್ತಿ ವಿರೋಧಿಸುತ್ತಿದ್ದ ದಿನಗಳಲ್ಲಿ. ಅದು 2002. ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯ ವಿರುದ್ಧ ನಾವು ದೊಡ್ಡಬಳ್ಳಾಪುರದ ಯುವಜನರು ’ಜನಧ್ವನಿ ಯುವ ವೇದಿಕೆಯ’ ಅಡಿಯಲ್ಲಿ ಒಂದು ಸೈಕಲ್ ಜಾಥಾ ಹಮ್ಮಿಕೊಂಡಿದ್ದೆವು. ಬೆಂಗಳೂರಿನ ಕೆ.ಆರ್.ಸರ್ಕಲ್ಲಿನಲ್ಲಿ ಜಾಥಾ ಉದ್ಘಾಟನೆ. ಉದ್ಘಾಟಿಸಿದವರು ಹಿರಿಯ ಗಾಂಧಿವಾದಿ ಎಚ್.ಎಸ್ ದೊರೆಸ್ವಾಮಿಯವರು. ಅರವತ್ತು ಸೈಕಲ್‌ಗಳು ಬೆಂಗಳೂರಿನಿಂದ ಮೈಸೂರು ಮತ್ತು ಮೈಸೂರಿನಿಂದ ಬೆಂಗಳೂರಿಗೆ ಸುತ್ತಿದವು. ಆ ಜಾಥಾ ನಮ್ಮ ಬದುಕಿನಲ್ಲಿ ಬಹಳ ಮಹತ್ತರವಾದದ್ದು. ದೊರೆಸ್ವಾಮಿಯವರ ಹೆಸರನ್ನಷ್ಟೇ ಕೇಳುತ್ತಿದ್ದ ನಮ್ಮೆದುರಿಗೆ ಅವರು ನಿಂತು ಮಾತನಾಡಿದರು. ಇಪ್ಪತ್ತರ ಆಸುಪಾಸಿನ ನಮ್ಮೆಲ್ಲರ ಕಾರ್ಯವನ್ನು ಮಹತ್ವದ ಸಾಧನೆಯೆಂಬಂತೆ ಬೆನ್ನು ತಟ್ಟಿದರು; ಹುರಿದುಂಬಿಸಿದರು. ಬಿಎಂಐಸಿ ಯೋಜನೆಯ ಕುತಂತ್ರವನ್ನು, ರೈತರ ವಿರುದ್ಧದ ದ್ರೋಹವನ್ನು ನಮ್ಮೆಲ್ಲರ ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದರು.

ಅದಾದಮೇಲೆ ನಾನು ಅವರನ್ನು ಬಹಳ ಸಲ ಭೇಟಿ ಮಾಡಿದ್ದೇನೆ. ಅವರಿರುವ ವೇದಿಕೆಯಲ್ಲಿ ಕೂತು ಭಾಷಣ ಮಾಡಿದ್ದೇನೆ. ಅವರು ಮಾಡುತ್ತಿದ್ದ ಭಾಷಣವನ್ನು ಕುತೂಹಲ, ಶ್ರದ್ಧೆಯಿಂದ ಕೇಳಿಸಿಕೊಂಡಿದ್ದೇನೆ. ಎಲ್ಲಿ ಪ್ರಗತಿಪರ ಆಶಯಗಳ ಕಾರ್ಯಕ್ರಮಗಳಿರುತ್ತಿದ್ದವೋ, ಎಲ್ಲಿ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಗಳಿರುತ್ತಿದ್ದವೋ ಅಲ್ಲಿ ದೊರೆಸ್ವಾಮಿಯವರು ಇರುತ್ತಿದ್ದರು. ನಾವು ಸ್ನೇಹಿತರು ಅವರನ್ನು ಹೀಗೆ ಎಲ್ಲಾ ಕಡೆ ಕಂಡಾಗ ’ಪಾಪ ಈ ವಯಸ್ಸಿನಲ್ಲಿ ಇವರನ್ನು ಯಾಕೆ ಎಳೆದಾಡುತ್ತಾರೆ’ ಅಂದುಕೊಳ್ಳುತ್ತಿದ್ದೆವು. ’ಚಲೋ ಉಡುಪಿ’ಯ ಸಮಯದಲ್ಲಿ ಅವರ ಮನೆಗೆ ಹೋಗುವ ಅವಕಾಶ ಸಿಕ್ಕಿತು. ಅವರು ನಮ್ಮನ್ನು ಆದರದಿಂದ ಮಾತನಾಡಿಸಿದರು. ಚಲೋ ಉಡುಪಿ ಆಂದೋಲನದ ಜೊತೆಯಾದರು.

ನಾನು ಗ್ರಹಿಸಿದ ಹಾಗೆ ದೊರೆಸ್ವಾಮಿಯವರು ’ಗಾಂಧಿವಾದಿಗಳ’ ಕರ್ಮಠತನವನ್ನು ಕೊಂಚಮಟ್ಟಿಗೆ ಮೀರಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರನ್ನೆಲ್ಲಾ ಗಾಂಧಿವಾದಿ ಎಂದು ಗುರುತಿಸುವುದರಿಂದ ಅವರನ್ನು ಎಲ್ಲರೂ ಗಾಂಧಿವಾದಿ ಎಂದೇ ನೋಡುತ್ತಿದ್ದರು. ಆದರೆ, ನಾಗಲಾಪಲ್ಲಿಯ ರಕ್ತದ ಕಲೆಗಳ ಮೇಲೆ ಕುಳಿತು ಮೌನ ಪ್ರತಿಭಟನೆ ಮಾಡಿ ’ಕೊಂದವರನ್ನೂ ನಾವು ಅಹಿಂಸಾತ್ಮಕವಾಗಿ ಎದುರುಗೊಳ್ಳಬೇಕು’ ಎಂದಿದ್ದ ಗಾಂಧಿವಾದಿ ಸತ್ಯವ್ರತ ಅಂಥವರನ್ನು ಕಂಡಿದ್ದ ನನಗೆ, ದೌರ್ಜನ್ಯದ ವಿಷಯ ಕಿವಿಗೆ ಬಿದ್ದರೆ ಮನುಷ್ಯ ಸಹಜವಾಗಿ ಸಿಟ್ಟಿಗೇಳುತ್ತಿದ್ದ ದೊರೆಸ್ವಾಮಿಯವರು ಕೊಂಚ ಭಿನ್ನವಾಗಿ ಕಂಡರು. ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಅವರು ನಕ್ಸಲ್ ಚಳವಳಿಯಿಂದ ಹೊರಗೆ ಬಂದ ನಂತರದ ಕಾಲದಲ್ಲಿ ದೊರೆಸ್ವಾಮಿ ಮತ್ತು ಪ್ರಗತಿಪರರ ಸಖ್ಯ ಹೆಚ್ಚಾಯಿತು. ಅದಕ್ಕೆ ಮೊದಲು ’ಎಲ್ಲಾಕಡೆ’ ಇರುತ್ತಿದ್ದರು. ಮತ್ತು ಅಲ್ಲಿಯವರೆಗೆ ಅವರು ಕರ್ನಾಟಕದ ದಲಿತ ಚಳವಳಿಯೊಂದಿಗೆ ಕಾಯ್ದುಕೊಂಡಿದ್ದ ಅಂತರಕ್ಕೆ ನಾವು ಈಗ ಕಾರಣಗಳನ್ನು ಹುಡುಕುವುದು ಅಷ್ಟು ಒಳ್ಳೆಯದಲ್ಲ. ದಿಡ್ಡಳ್ಳಿ ಆದಿವಾಸಿಗಳ ಹೋರಾಟದಲ್ಲಿ ಹಾಗೂ ನಾಡಿನ ಭೂಮಿ ಮತ್ತು ವಸತಿ ವಂಚಿತರ ಹೋರಾಟದಲ್ಲಿ ಅವರು ಅಷ್ಟು ದೃಢವಾಗಿ ನಿಂತಿದ್ದು ನಮ್ಮಂಥವರಿಗೆ ಅವರ ಮೇಲಿನ ಗೌರವ ಹೆಚ್ಚುವಂತೆ ಮಾಡಿತು. ಇದೆಲ್ಲದರ ನಡುವೆ ನನಗೆ ದೊರೆಸ್ವಾಮಿ ಎಂದತಕ್ಷಣ ಎರಡು ಘಟನೆಗಳು ಥಟ್ಟನೆ ನೆನಪಿಗೆ ಬರುತ್ತವೆ.

ಮೊದಲನೆಯದ್ದನ್ನು ನಂತರ ಹೇಳುತ್ತೇನೆ. ನಂತರದ್ದು ನಡೆದದ್ದು 2017ರಲ್ಲಿ. ದೊಡ್ಡಬಳ್ಳಾಪುರದ ಗಾಂಧಿವಾದಿಗಳಾದ ಮೇಷ್ಟ್ರು ಎಂ.ಜಿ ಚಂದ್ರಶೇಖರಯ್ಯನವರ ಸೇವಾ ನಿವೃತ್ತಿಯ ಕಾರಣಕ್ಕೆ ಅವರ ಶಿಷ್ಯಂದಿರೆಲ್ಲಾ ಸೇರಿ ಅಭಿನಂದನೆ ಸಮಾರಂಭ ಇಟ್ಟುಕೊಂಡಿದ್ದೆವು. ದೊರೆಸ್ವಾಮಿಯವರನ್ನು ಮುಖ್ಯ ಅತಿಥಿಗಳಾಗಿ ಕರೆಯಲಾಗಿತ್ತು. ಅವರು ದೊಡ್ಡಬಳ್ಳಾಪುರದ ಪ್ರವಾಸಿಮಂದಿರದಲ್ಲಿ ನಮ್ಮೊಂದಿಗೇ ಊಟ ಮಾಡಿದರು. ಹೊರಡುವಾಗ ಅವರನ್ನು ಕರೆದುಕೊಂಡು ಬಂದಿದ್ದ ಟ್ಯಾಕ್ಸಿ ಡ್ರೈವರ್‌ಗೆ ಸಮಾರಂಭದ ಮುಂದಾಳತ್ವ ವಹಿಸಿದ್ದ ಪತ್ರಕರ್ತ ಮಂಜುನಾಥ ಅದ್ದೆಯವರು ಹಣ ಕೊಡಲು ಹೋದರು. ಸುಮಾರು ಐವತ್ತೈದು ವಯಸ್ಸಿನ ಆ ಡ್ರೈವರ್ ಹಣ ತೆಗೆದುಕೊಳ್ಳಲು ನಿರಾಕರಿಸಿದರು. ನಮಗೆ ಆಶ್ಚರ್ಯವಾಯಿತು. ಬೆಂಗಳೂರಿಂದ ನಲವತ್ತು ಕಿಲೋಮೀಟರ್ ಬಂದು ಕಾರಿನ ಬಾಡಿಗೆ ತೆಗೆದುಕೊಳ್ಳದಿದ್ದರೆ ಹೇಗೆಂದು ಕೇಳಿದೆವು. ಅದಕ್ಕವರು: ’ಬೆಂಗಳೂರು ಏರ್‌ಪೋರ್ಟಿಗೆ ಖಾಸಗಿ ಟ್ಯಾಕ್ಸಿಯವರಿಗೆ ಮಾತ್ರ ಅವಕಾಶ ಕೊಟ್ಟು ಕೆಎಸ್‌ಟಿಡಿಸಿ ಕಾರುಗಳಿಗೆ ನಿರ್ಬಂಧ ಹೇರಲಾಗಿತ್ತು. ಆಗ ದೊರೆಸ್ವಾಮಿಯವರು ದೆಹಲಿಗೆ ಹೋಗಿ ಹೋರಾಟ ಮಾಡಿ ನಮಗೂ ಏರ್‌ಪೋರ್ಟಿನಲ್ಲಿ ಬಾಡಿಗೆ ಓಡಿಸಲು ಅವಕಾಶ ಕೊಡಿಸಿದರು. ಅವರಿಂದ ಇವತ್ತು ಸುಮಾರು ಮೂರ್‍ನಾಲ್ಕು ಸಾವಿರ ಚಾಲಕರ ಕುಟುಂಬಗಳು ಊಟ ಮಾಡ್ತಿದಿವಿ. ಅವರು ನನ್ನ ಕಾರಿನಲ್ಲಿ ಬಂದಿರೋದೇ ನನ್ನ ಪುಣ್ಯ. ಅವರ ಹತ್ರ ಹಣ ಹೇಗೆ ತಗೊಳ್ಳಲಿ ಸ್ವಾಮಿ’ ಅಂದರು. ಅಲ್ಲಿದ್ದವರ ಕಣ್ಣುಗಳು ಒದ್ದೆಯಾಗಿದ್ದವು. ಎಷ್ಟು ಪ್ರಯಾಸಪಟ್ಟರೂ ಅವರು ಹಣ ತೆಗೆದುಕೊಳ್ಳಲಿಲ್ಲ. ಮತ್ತು ಇದನ್ನೆಲ್ಲಾ ಅವರು ದೊರೆಸ್ವಾಮಿಯವರ ಮುಂದೆ ಹೇಳಲಿಲ್ಲ.

ಮೊದಲನೆಯ ಘಟನೆ ನಡೆದದ್ದು 2016ರಲ್ಲಿ. ದೊರೆಸ್ವಾಮಿಯವರನ್ನು ಯಾವುದೋ ಕಾರ್ಯಕ್ರಮದ ನಿಮಿತ್ತ ಭೇಟಿ ಮಾಡಲು ಹೋಗಿದ್ದೆವು. ಮನೆಯ ಒಳಗೆ ಹೋಗುವ ಮೊದಲು ಚಪ್ಪಲಿಗಳನ್ನು ಬಿಡುವ ಜಾಗದಲ್ಲಿ ಒಂದು ಕುರ್ಚಿಯ ಮೇಲೆ ಅಂಬೇಡ್ಕರ್ ಫೋಟೋ ಇರುವ ದೊಡ್ಡ ಮೊಮೆಂಟೋ, ಅವರ ಬರಹ ಭಾಷಣಗಳ ಯಾವುದೋ ಒಂದು ಸಂಪುಟ ಮತ್ತು ಗಂಧದ ಹಾರಗಳಿದ್ದವು. ದೊರೆಸ್ವಾಮಿಯವರು ಯಾವುದೋ ದಲಿತ ಸಂಘಟನೆಯ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದರು. ಮತ್ತವರು ಮನೆಗೆ ಹಿಂದಿರುಗಿ ತುಂಬಾ ಸಮಯವೇ ಆಗಿತ್ತು. ಅವರು ಮನೆಗೆ ಬಂದಾಗ ಅವುಗಳನ್ನೆಲ್ಲಾ ಒಳಗೆ ತೆಗೆದುಕೊಂಡು ಹೋಗುವುದನ್ನು ಮರೆತಿರಬಹುದು. ಆಮೇಲೆ ಒಳಗೆ ಎತ್ತಿಕೊಂಡಿರಬಹುದು. ಮತ್ತು ಇದು ಗಮನಾರ್ಹ ವಿಷಯವೇ ಅಲ್ಲದಿರಬಹುದು. ಆದರೆ, ಈ ಘಟನೆ ನನ್ನೊಳಗೆ ಉಂಟುಮಾಡಿದ ಭಾವನೆಯನ್ನು ಹೇಗೆ ಹೇಳಲಿ.. ಇದಾದ ಮೇಲೆ ನಾನವರ ಮನೆಗೆ ಹೋಗುವ ಸಂದರ್ಭ ಒದಗಲಿಲ್ಲ.

ಕರ್ನಾಟಕದ ಜನಹೋರಾಟಗಳಿಗೆ ಇನ್ನೂ ದೊರೆಸ್ವಾಮಿಯವರ ಅಗತ್ಯವಿತ್ತು.

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ ಕನ್ನಡ ಅಧ್ಯಾಪಕರು. ಬೆಂಗಳೂರಿನ ವಿ.ವಿಯಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಯಲ್ಲಿ ಕ್ರಿಯಾಶ್ರೀಲರು, ನೀಲಗ್ಯಾನನ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದಾರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.


ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯನ್ನು ಟೀಕಿಸಿದ್ದಕ್ಕೆ ಸ್ವಪಕ್ಷದ ನಾಯಕನ ಬಂಧನ: ಮೌನಕ್ಕೆ ಶರಣಾದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು

0
ಪ್ರಧಾನಿ ನರೇಂದ್ರ ಮೋದಿ ಭಾರತದ ಮುಸ್ಲಿಮರನ್ನು ಅವಮಾನಿಸಬಾರದು. ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆಯುವ ಬಗ್ಗೆ ಕೂಡ ಯೋಚನೆ ಮಾಡುತ್ತಿದ್ದೇನೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಕಾರಣಕ್ಕೆ ಬಿಜೆಪಿ...