Homeಅಂಕಣಗಳುಮನೆಗೆ ಬೆಂಕಿ ಬಿದ್ದಿದೆ ಸರ್, ಮಲಗಿದ್ದೀರಾ?

ಮನೆಗೆ ಬೆಂಕಿ ಬಿದ್ದಿದೆ ಸರ್, ಮಲಗಿದ್ದೀರಾ?

- Advertisement -
- Advertisement -

ಮೊನ್ನೆ ಹರಿದ್ವಾರದಲ್ಲಿ ಜರುಗಿದ ಸಾಧು ಸಂತರ ಧರ್ಮಸಂಸತ್ತು ದೇಶವಾಸಿ ಮುಸಲ್ಮಾನರನ್ನು ಕೊಂದು ಹಿಂದೂ ರಾಷ್ಟ್ರ ಸ್ಥಾಪಿಸಬೇಕೆಂಬುದಾಗಿ ಕರೆ ನೀಡಿದ್ದು ಮತ್ತು ಮಾಜಿ ಪ್ರಧಾನಿಗೆ ಸಂಸತ್ತಿನಲ್ಲೇ ಗೋಡ್ಸೆಯಂತೆ ಗುಂಡಿಕ್ಕಿ ಕೊಲ್ಲುವ ಮಾತುಗಳು ಅತ್ಯಂತ ಆಘಾತಕಾರಿ ವಿದ್ಯಮಾನ. ನರಮೇಧಕ್ಕೆ ನೀಡಿದ ನೇರ ಆಹ್ವಾನ. ಭವಿಷ್ಯದ ಭಯಾನಕ ಚಿತ್ರ. ವ್ಯಾಧಿ ಉಲ್ಬಣಿಸಿದ ಸಂಕೇತ.

ಸ್ವಚ್ಛಭಾರತದ ಆಂದೋಲನದ ಗೂಢಾರ್ಥ ಅಲ್ಪಸಂಖ್ಯಾತರು- ಆನಂತರ ದಲಿತ, ಆದಿವಾಸಿಗಳನ್ನು ಗುಡಿಸಿ ಹಾಕುವ ಆಂದೋಲನ ಎಂಬ ಗುಮಾನಿ ನೂರಕ್ಕೆ ನೂರು ನಿಜರೂಪ ಧರಿಸತೊಡಗಿದೆ.
ಹಿಂದೂ ರಾಷ್ಟ್ರ ನಿರ್ಮಿಸಲು ಹೋರಾಡಬೇಕು, ಸಾಯಬೇಕು ಅಗತ್ಯ ಬಿದ್ದರೆ ಕೊಲ್ಲಬೇಕು ಎಂಬುದಾಗಿ ನವದೆಹಲಿಯಲ್ಲಿ ನಡೆದ ಹಿಂದೂ ಯುವವಾಹಿನಿಯ ಸಮಾವೇಶ ಪಣ ತೊಟ್ಟಿತು.

ಮುಸಲರ ಹತ್ಯೆಗೆ ಕೇವಲ ಖಡ್ಗವನ್ನು ಬಳಸಿದರೆ ಸಾಲದು. ಅವರ ಬಳಿ ಅತ್ಯಾಧುನಿಕ ಹತಾರುಗಳಿವೆ. ಹೀಗಾಗಿ ತಾಂತ್ರಿಕವಾಗಿ ನಾವು ಮೇಲ್ದರ್ಜೆಗೇರಬೇಕಿದೆ ಎಂದು ಸರಸ್ವತಿಯವರು ಸಾರುವ ವಿಡಿಯೋ ವೈರಲ್ ಆಗಿದೆ. ’ಹೆಚ್ಚು ಹೆಚ್ಚು ಮಕ್ಕಳ ಹುಟ್ಟಿಸಿರಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಅತ್ಯುತ್ತಮ ಹತಾರುಗಳನ್ನು ಹೊಂದಿಸಿ ಇಟ್ಟುಕೊಳ್ಳಿರಿ’ ಎಂದು ಯತಿ ನರಸಿಂಘಾನಂದ ಸರಸ್ವತಿ ಎಂಬಾತ ಹೇಳುತ್ತಿದ್ದಾನೆ.

ಸಾಧು ಧರ್ಮದಾಸ್ ಮಹಾರಾಜ್ ಮಾತುಗಳು ಹೀಗಿವೆ: ’ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸಲ್ಮಾನರದು ಎಂದು ನಮ್ಮ ಅಂದಿನ ಪ್ರಧಾನಮಂತ್ರಿ (ಮನಮೋಹನ ಸಿಂಗ್) ಹೇಳಿದ್ದು ಕೇಳಿದೆ. ನಾನೊಬ್ಬ ಸಂಸದನಾಗಿದ್ದು ನನ್ನ ಬಳಿ ರಿವಾಲ್ವರ್ ಇದ್ದಿದ್ದರೆ ನಾಥುರಾಮ್ ಗೋಡ್ಸೆಯಾಗಿ ಮನಮೋಹನ್ ಸಿಂಗ್ ಎದೆಗೆ ಆರು ಕಾಡತೂಸುಗಳನ್ನು ಸಿಡಿಸುತ್ತಿದ್ದೆ’. (ಆದರೆ ಮನಮೋಹನ ಸಿಂಗ್ ಇಂತಹ ಹೇಳಿಕೆ ನೀಡಿರುವ ಯಾವುದೇ ದಾಖಲೆಗಳಿಲ್ಲ. 2006ರಲ್ಲಿ ಜರುಗಿದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯನ್ನು ಉದ್ದೇಶಿಸಿ ಅವರು ಹೇಳಿದ್ದಿಷ್ಟೇ: ’ಅಭಿವೃದ್ಧಿಯ ಫಲಗಳನ್ನು ನ್ಯಾಯಯುತವಾಗಿ ಹಂಚಿಕೊಳ್ಳುವಂತೆ ಮುಸಲ್ಮಾನರಿಗೆ ಚೈತನ್ಯ ನೀಡುವ ನವೀನ ದಾರಿಗಳನ್ನು ಸರ್ಕಾರ ರೂಪಿಸಬೇಕಿದೆ’ ಎಂದು).

ಛತ್ತೀಸಗಢದಲ್ಲಿ ಜರುಗಿದ ಮತ್ತೊಂದು ಅಧರ್ಮಸಂಸತ್ತಿನ ವೇದಿಕೆಯಲ್ಲಿ ಗಾಂಧೀ ಹಂತಕ ನಾಥೂರಾಮ ಗೋಡ್ಸೆಗೆ ಕೈಯೆತ್ತಿ ಮುಗಿದು, ದೇಶದ ಸತ್ಯನಾಶ ಮಾಡಿದ ಹರಾಮಖೋರ ಎಂದು ಗಾಂಧೀಜಿಯನ್ನು ನಿಂದಿಸಲಾಯಿತು.

ಗಾಂಧೀಜಿಯ ಘೋರನಿಂದನೆ ಮಾಡಿದ ಕುರಿತು ತನಗೆ ಯಾವುದೇ ಪಶ್ಚಾತ್ತಾಪ ಇಲ್ಲವೆಂದು ಕಾಳೀಚರಣ ಮಹಾರಾಜ ಎಂಬ ತಥಾಕಥಿತ ಸಂತ ಸಾರಿದ್ದಾನೆ. ಕಾಂಗ್ರೆಸ್ ಆಡಳಿತವಿರುವ ಛತ್ತೀಸಗಢ ಸರ್ಕಾರ ಮತ್ತು ಶಿವಸೇನೆ-ಕಾಂಗ್ರೆಸ್-ಎನ್.ಸಿ.ಪಿ. ಸಮ್ಮಿಶ್ರ ಆಡಳಿತವಿರುವ ಮಹಾರಾಷ್ಟ್ರ ಸರ್ಕಾರ ಈ ಸಂತನ ವಿರುದ್ಧ ಕಾನೂನು ಕ್ರಮ ಜರುಗಿಸಿವೆ.

ಆದರೆ ಹರಿದ್ವಾರದಲ್ಲಿ ಕೋಮುವಾದಿ ವಿಷಕಾರಿದ ಕಾರ್ಕೋಟಕ ಸಂತರ ಕೂದಲೂ ಕೊಂಕಿಲ್ಲ. ಬಿಜೆಪಿ ಆಡಳಿತವಿರುವ ಉತ್ತರಾಖಂಡ ಸರ್ಕಾರವಾಗಲೀ, ಮೋದಿ ಸರ್ಕಾರವಾಗಲಿ, ಮುಸಲ್ಮಾನರ ನರಮೇಧದ ಕರೆ ಕುರಿತು ತುಟಿ ಬಿಚ್ಚಿಲ್ಲ.

“ಧರ್ಮಗಳು ಬೇರೆಬೇರೆಯಾದರೂ ಎಲ್ಲ ಭಾರತೀಯರದು ಒಂದೇ ರಕ್ತ, ಒಂದೇ ಡಿ.ಎನ್.ಎ. ಹೀಗಾಗಿ ಮುಸಲ್ಮಾನರು ಭಯದ ಆವರ್ತದಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ಪೂಜೆ ಪ್ರಾರ್ಥನೆಯ ಆಧಾರದ ಮೇಲೆ ಜನರ ನಡುವೆ ಭೇದಭಾವ ಎಣಿಸುವುದು ಸಲ್ಲದು. ಗುಂಪಾಗಿ ಬಡಿದು ಕೊಲ್ಲುವವರು ಹಿಂದುತ್ವದ ವಿರೋಧಿಗಳು. ಹಿಂದು-ಮುಸ್ಲಿಮ್ ಘರ್ಷಣೆಗಳಿಗೆ ಪರಿಹಾರ ಮಾತುಕತೆಯೇ ವಿನಾ ವೈಮನಸ್ಯ ಅಲ್ಲ” ಎಂಬ ಆರೆಸ್ಸೆಸ್ ಮುಖ್ಯಸ್ಥರ ಮಾತುಗಳಿಗೆ ಅರ್ಥವೇನು ಎಂದು ಜಗ್ಗಿಸಿ ಕೇಳಬೇಕಿದೆ.

ಮುಸಲ್ಮಾನರ ಸಂಹಾರಕ್ಕೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ನೀಡಿರುವ ಕರೆ ಹಿಂಸಾತ್ಮಕ ಮತ್ತು ಜನಾಂಗೀಯ ಹತ್ಯೆಗೆ ಆಹ್ವಾನ. ಉಳಿದೆಲ್ಲ ಧರ್ಮೀಯರಿಗೆ ಸಮಾನತೆಯನ್ನು ನಿರಾಕರಿಸಿ ಅಡಿಯಾಳುಗಳನ್ನಾಗಿಸುವ ಹಿಂದುರಾಷ್ಟ್ರದ ಪರಿಕಲ್ಪನೆ ಇದು. ನಮ್ಮ ಸಂವಿಧಾನದ ಸಹಬಾಳುವೆಯ ಆಶಯಕ್ಕೆ ಎಸೆದ ನೇರ ಸವಾಲು. ಕೋಮುವಾದಿ ಕಾರ್ಕೋಟಕ ವಿಷವನ್ನು ಕಾರುವ ಈ ಉನ್ಮಾದಕಾರಿ ಕೃತ್ಯಕ್ಕೆ ದೇಶವನ್ನು ಆಳುವವರು ಪ್ರತ್ಯಕ್ಷ ಪರೋಕ್ಷ ಕುಮ್ಮುಕ್ಕು ನೀಡತೊಡಗಿದ್ದಾರೆ. ರಕ್ಷಣೆಯನ್ನೂ ಒದಗಿಸುತ್ತಿದ್ದಾರೆ. ಹೀಗಾಗಿಯೇ ಈ ಶಕ್ತಿಗಳಿಗೆ ಕಾನೂನಿನ ಭಯವಿಲ್ಲ. ಏನು ಮಹಾ ಆದೀತು, ಹೆಚ್ಚೆಂದರೆ ಒಂದು ಎಫ್.ಐ.ಆರ್ ಎಂಬ ಉಡಾಫೆ ಮೂಡಿದೆ.

’ದೇಶ್ ಕೇ ಗದ್ದಾರೋಂ ಕೋ ಗೋಲಿ ಮಾರೋ ಸಾಲೋಂಕೋ’ ಎಂಬುದಾಗಿ ದೆಹಲಿಯ ಬಹಿರಂಗಸಭೆಯಲ್ಲಿ ಘೋಷಣೆ ಕೂಗಿಸಿದ ಕೇಂದ್ರ ರಾಜ್ಯ ಸಚಿವ ಅನುರಾಗ್ ಠಾಕೂರ್ ಎಂಬ ಕಿರಿಯ ಮಂತ್ರಿಯ ಮೇಲೆ ಕ್ರಮ ಜರುಗಲಿಲ್ಲ. ಬದಲಿಗೆ ಮೋದಿಯವರ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ದರ್ಜೆಗೆ ಬಡ್ತಿ ನೀಡಿ ಸಮ್ಮಾನಿಸಲಾಯಿತು.

ನೆರೆಹೊರೆಯ ಉತ್ತರಪ್ರದೇಶ, ಹಿಮಾಚಲಪ್ರದೇಶ ಹಾಗೂ ಪಂಜಾಬಿನ ಜೊತೆಗೆ ಉತ್ತರಾಖಂಡವೂ ಸದ್ಯದಲ್ಲೇ ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಮೂರೂ ರಾಜ್ಯಗಳಲ್ಲಿ ಕೋಮುವಾದಿ ಧ್ರುವೀಕರಣ ರಾಜಕಾರಣದ ವಿಷಸರ್ಪ ಭುಸುಗುಟ್ಟಿ ಫೂತ್ಕರಿಸಿದೆ. ಮುಸಲ್ಮಾನರ ನರಮೇಧಕ್ಕೆ ನೀಡಿದ ಕರೆಯು ಮುಸಲ್ಮಾನರಿಂದಲೂ ಇಂತಹುದೇ ವಿಪರೀತ ಪ್ರತಿಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿ ಬಯಸಿದೆ.

2013ರಲ್ಲಿ ಯುಪಿ ಬಿಹಾರದ ಉದ್ದಗಲಕ್ಕೆ ಬೀಸಿದ ಕೋಮುವಾದಿ ವಿಷಗಾಳಿ 2014ರ ಚುನಾವಣೆಗಳನ್ನು ಭರ್ಜರಿಯಾಗಿ ಬಿಜೆಪಿಗೆ ಗೆಲ್ಲಿಸಿಕೊಟ್ಟಿತ್ತಲ್ಲ. ಈ ಭೂಕಂಪನದ ಕಂಪನಕೇಂದ್ರ ಪಶ್ಚಿಮೀ ಉತ್ತರಪ್ರದೇಶವೇ ಆಗಿತ್ತು. ಈ ಸೀಮೆಯ ರೈತಶಕ್ತಿ ಇದೀಗ ಆಳುವವರ ಮಗ್ಗುಲ ಮುಳ್ಳಾಗಿ ಅವರ ಚಿಂತೆಗೆ ಕಾರಣವಾಗಿದೆ. ಹರಿದ್ವಾರ ಉತ್ತರಾಖಂಡದ ಭೂಭಾಗವೆನ್ನುವುದು ಹೌದು. ಆದರೆ ಪಶ್ಚಿಮೀ ಉತ್ತರಪ್ರದೇಶವೇ ಅದರ ನೆರೆಹೊರೆ. ಹೀಗಾಗಿ ಮುಸ್ಲಿಮ್ ನರಮೇಧದ ಕರೆ ಪಶ್ಚಿಮೀ ಉತ್ತರಪ್ರದೇಶದಲ್ಲಿ ಧ್ರುವೀಕರಣ ಬಿತ್ತುವ ನಿಚ್ಚಳ ಪ್ರಯತ್ನ.

ಮನೆಗಳನ್ನು ಮನಸುಗಳನ್ನು ಒಡೆಯುವ ಇಂತಹ ಅಪಾಯಕಾರಿ ಧ್ರುವೀಕರಣದ ರಾಜಕಾರಣದಿಂದ ಕೊಂಚ ಕಾಲ ಬಿಜೆಪಿ ಬಲಗೊಳ್ಳಬಹುದು. ಆದರೆ ದೇಶ ದುರ್ಬಲವಾಗುತ್ತದೆ. ಸಾಮರಸ್ಯದ ಸಾಮಾಜಿಕ ಹಂದರ ಚಿಂದಿಯಾಗುತ್ತದೆ. ದೇಶ ಮೊದಲು ಎಂದು ಸಾರುವವರು ಆಡಿದ ಮಾತನ್ನು ನಡೆಸಿಕೊಡಬೇಕು.

ರಾಜಕಾರಣದ ಹಿಂದೂಕರಣ ಮತ್ತು ಹಿಂದೂಕರಣದ ಸೈನ್ಯೀಕರಣ ಎಂಬುದೇ ಅತ್ಯುತ್ತಮ ಮತ್ತು ದೂರದರ್ಶಿತ್ವದ ಹಿಂದೂ ರಾಷ್ಟ್ರರಾಜಕಾರಣ ಎಂಬುದು ಸಾವರ್ಕರ್ ಪ್ರಣೀತ ಸಿದ್ಧಾಂತ. ದೇಶದಲ್ಲಿಂದು ಇದೇ ಸಿದ್ಧಾಂತವನ್ನು ಜಾರಿಗೆ ತರಲಾಗುತ್ತಿದೆ.

ಧರ್ಮದ ಹೆಸರಿನ ಧರ್ಮಾಂಧತೆ ಪ್ರತ್ಯೇಕವಾದಕ್ಕೆ ದಾರಿ ಮಾಡುತ್ತದೆ. ಪ್ರತ್ಯೇಕವಾದವು ಭಯೋತ್ಪಾದನೆಯನ್ನು ಹುಟ್ಟಿಹಾಕೀತು. ತಾಲೀಬಾನಿ, ಲಷ್ಕರ್ ಎ ತೊಯ್ಬಾ, ಐ.ಎಸ್.ಐ.ಎಸ್ ಮುಂತಾದ ಮತಾಂಧ ಮುಸ್ಲಿಮ್ ಸಂಘಟನೆಗಳೇ ಈ ಮಾತಿಗೆ ಉದಾಹರಣೆ.

ಅನುರಾಗ್ ಠಾಕೂರ್

ಕಡು ದ್ವೇಷವನ್ನು ಬಿತ್ತಿ ಕೋಮುಗಲಭೆಗಳಿಗೆ ಕಿಡಿ ಹೊತ್ತಿಸಿ ಚುನಾವಣೆ ಬೇಳೆ ಬೇಯಿಸಿಕೊಳ್ಳುವುದು ನಿಜ ಅರ್ಥದಲ್ಲಿ ದೇಶದ್ರೋಹದ ಕೃತ್ಯ. ಇದರ ವಿರುದ್ಧ ಗಣ್ಯ ವ್ಯಕ್ತಿಗಳು- ಪೌರಸಮಾಜ ಗಟ್ಟಿ ದನಿಯೆತ್ತಬೇಕಿದೆ.

ಹಿಂದಿಯ ಬಹುಮುಖ್ಯ ಕವಿಗಳಲ್ಲಿ ಒಬ್ಬರಾಗಿದ್ದ ಸರ್ವೇಶ್ವರ ದಯಾಳ ಸಕ್ಸೇನಾ ಅವರ ಈ ಕವಿತೆ ದಶಕಗಳ ಹಿಂದೆ ಬರೆದದ್ದು. ನನ್ನ ಅನುವಾದ ತೆಳುವೆನಿಸಿದರೆ ಕ್ಷಮಿಸಿ.

ದೇಶವೆಂಬುದು ಕಾಗದದ ಮೇಲೆ ಬಿಡಿಸಿದ ನಕ್ಷೆಯಲ್ಲ
ನಿಮ್ಮ ಮನೆಯ
ಒಂದು ಕೋಣೆಗೆ ಬೆಂಕಿ ಬಿದ್ದಿದೆಯಾದರೆ
ಮತ್ತೊಂದು ಕೋಣೆಯಲಿ
ಮಲಗಿ ನಿದ್ರಿಸಬಲ್ಲಿರಾ ನೀವು?

ನಿಮ್ಮ ಮನೆಯ ಒಂದು ಕೋಣೆಯಲಿ
ಹೆಣ ಬಿದ್ದು ಕೊಳೆಯುತ್ತಿದ್ದರೆ
ಇನ್ನೊಂದು ಕೋಣೆಯಲಿ ಪ್ರಾರ್ಥಿಸಬಲ್ಲಿರಾ
ನೀವು?

ಹೌದು ಎಂಬುದೇ ನಿಮ್ಮ ಉತ್ತರವಾಗಿದ್ದರೆ
ನಿಮ್ಮೊಡನೆ ಮಾತಾಡುವುದು
ಏನೂ ಉಳಿದಿಲ್ಲ ನನಗೆ.

ದೇಶವೆಂಬುದು ಬರಿದೇ ಕಾಗದದ ಮೇಲೆ
ಬರೆದ ನಕ್ಷೆಯಲ್ಲ
ಒಂದು ಹಿಸ್ಸೆ ಹರಿದುಹೋದರೆ
ಬಾಕಿ ಹಿಸ್ಸೆಯು ಬಾಧಿತವಾಗದೆ ಉಳಿದು
ಹೋಗುವುದಿಲ್ಲ ಮತ್ತು
ನದಿಗಳು ಪರ್ವತ ಶಹರು ಹಳ್ಳಿ
ತಮ್ಮ ತಮ್ಮ ಜಾಗೆಗಳಲ್ಲಿ ಹಾಗೇ
ಇಡಿಯಾಗಿ ಕಂಡು ಉದಾಸೀನ
ಉಳಿಯುವುದಿಲ್ಲ.

ಮಾನವ ಜೀವಕಿಂತ ಮಿಗಿಲೆನಿಸಿದ್ದು
ಇನ್ನೇನೂ ಇಲ್ಲ ಈ ಇಳೆಯೊಳಗೆ
ಈಶ್ವರ
ಜ್ಞಾನ
ಚುನಾವಣೆ
ಯಾವುದೂ ಅಲ್ಲ

ಕಾಗದದ ಮೇಲೆ ಗೀಚಿದ ಯಾವುದೇ ಅನುಲೇಖವ
ಹರಿದು ಒಗೆಯಲುಬಹುದು
ಮತ್ತು ನೆಲದಾಳದ ಏಳು ಪದರಗಳಡಿಯಲಿ
ಹುಗಿಯಲೂಬಹುದು ಅದನು.

ಕಣ್ಣಿಲ್ಲದ ಕಪೋತವದು
ಕಳೇಬರಗಳ ಮೇಲೆ ಕಾಲೂರಿ
ನಿಂತ ವಿವೇಕ
ಕೊಲೆಗಡುಕರ ದಂಧೆಯದು

ನೆನಪಿನಲಿಡಯ್ಯಾ
ಒಂದು ಕಂದನ ಹತ್ಯೆ
ಒಬ್ಬ ಮಹಿಳೆಯ ಮರಣ
ಕಾಡತೂಸುಗಳು ಚಿಂದಿಹೊಡೆದ
ಮನುಷ್ಯನೊಬ್ಬನ ಮೃತದೇಹ
ಸಂಪೂರ್ಣ ರಾಷ್ಟ್ರದ ಪತನವೇ
ವಿನಾ ಕೇವಲ
ಯಾವುದೊಂದು ಆಡಳಿತ ಮಾತ್ರದ್ದಲ್ಲ

ಇಂತಹ ನೆತ್ತರು ಹರಿದು
ಇಳೆಗಿಳಿದು ತೋಯಿಸಿ ಹಿಂಗುವುದಿಲ್ಲ
ಬದಲಿಗೆ

ಆಗಸದಲಿ ಪಟಪಟಿಸುವ ಪತಾಕೆಗಳ

ಮೆತ್ತಲಿದೆ ಕಪ್ಪಾಗಿ
ಫೌಜು ಬೂಟುಗಳ ನಿಶಾನೆ ಬಿದ್ದ ನೆಲ

ಮತ್ತು ಅದರ ಮೇಲೆ ಹೆಣಗಳು ಉರುಳುತಿರುವ
ಆ ಅದೇ ನೆಲ
ಬೆಂಕಿಯಾಗಿ ನಿಮ್ಮ ನೆತ್ತರ ಸೇರಿ ಬೆರೆತು ಓಡದಿದ್ದರೆ
ಇಕೋ ತಿಳಿದುಕೊಳ್ಳಿರಿ
ನೀವು ಬಂಜರು ಬಿದ್ದಿರುವಿರಿ
ಉಸಿರಾಡುವ ಅಧಿಕಾರವೂ ಇಲ್ಲ ನಿಮಗೆ ಇಲ್ಲಿ
ಸತ್ತೇ ಹೋಗಿದೆ ನಿಮ್ಮ ಪಾಲಿನ ಇಹದ ವ್ಯಾಪಾರ

ಕಟ್ಟಕಡೇ ಮಾತು
ಅಗದೀ ನೇರ ನಿಚ್ಚಳ
ಎಂದೆಂದಿಗೂ ಕ್ಷಮಿಸಿದಿರಿ
ಯಾವನೇ ಹಂತಕನನ್ನು
ಆಗಿರವಲ್ಲನ್ಯಾಕೆ ಅವನು
ನಿಮ್ಮ ಜಿಗರೀ ದೋಸ್ತ
ದುರಂಧರ ಧರ್ಮದ ಗುತ್ತಿಗೆದಾರ,
ಲೋಕತಂತ್ರದ
ಸ್ವನಾಮಧನ್ಯ ಪಹರೆದಾರ


ಇದನ್ನೂ ಓದಿ: ಕೋಮುವಾದಿ ಕೊಪ್ಪರಿಗೆಗೆ ರಿಝ್ವಿ ಮತಾಂತರದ ಬೆಂಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Dr. ಆನಂದ್ ರಂಗನಾಥನ್ ಎಂಬ ಲೇಖಕ, ವಿಜ್ಞಾನಿ ಈ ಕಾಲಿಚರಣ್ ಎಂಬಾತನ ಹೇಳಿಕೆಯನ್ನು ಸಮರ್ಥಿಸುತ್ತಾ Dr. B R ಅಂಬೇಡ್ಕರ್ ಅವರು ಮರಾಠಿ ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕಕ್ಕೆ ಬರೆದ ಲೇಖನವನ್ನು ಉಲ್ಲೇಖಸಿ, ಅಂಬೇಡ್ಕರ್ ರವರು ಗಾಂಧೀಜಿಯವರನ್ನು ಅವಹೇಳನಕಾರಿ ಆಗಿ ಟೀಕಿಸಿರುವ ಸಾಲುಗಳನ್ನು tag ಮಾಡಿ “ಗಾಂಧಿ ಭಕ್ತರಿಗೆ ” ಸವಾಲೆಸಿದಿರುತ್ತಾರೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...