ನಿರ್ದೇಶಕ, ನಿರ್ಮಾಪಕ ಪ್ರಕಾಶ್ ಝಾ ಅವರ ‘ಆಶ್ರಮ್-3’ ವೆಬ್ ಸೀರೀಸ್ ಚಿತ್ರೀಕರಣದ ವೇಳೆ ದಾಳಿ ಪ್ರಕರಣದಲ್ಲಿನ ಪ್ರಮುಖ ಆರೋಪಿ ಕೊಲೆ ಪ್ರಕರಣದ ಅಪರಾಧಿಯೂ ಆಗಿದ್ದು, ಆತ ಬಿಜೆಪಿ ನಾಯಕರ ಒಡನಾಡಿಯಾಗಿದ್ದಾನೆ ಎಂದು ‘ದಿ ವೈರ್’ ಜಾಲತಾಣ ವರದಿ ಮಾಡಿದೆ.
ಅಕ್ಟೋಬರ್ 24ರಂದು ಭೋಪಾಲ್ನಲ್ಲಿ ಆಶ್ರಮ್ ಚಿತ್ರೀಕರಣದ ವೇಳೆ ಬಜರಂಗದಳದ ಕಾರ್ಯಕರ್ತರು ದಾಳಿ ಮಾಡಿದ್ದರು. ದಾಳಿ ಕೃತ್ಯದ ಪ್ರಮುಖ ಆರೋಪಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಭಾಗಿಯಾಗಿದ್ದು, ಬಿಜೆಪಿ ಮತ್ತು ಆರ್ಎಸ್ಎಸ್ ಉನ್ನತ ನಾಯಕರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾನೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೂ ಸಂಪರ್ಕದಲ್ಲಿದ್ದಾನೆ ಎಂಬ ಸಂಗತಿ ಬಹಿರಂಗವಾಗಿದೆ.
ಬಲಪಂಥೀಯ ಸಂಘಟನೆಯಾದ ಬಜರಂಗದಳ ಕೇಂದ್ರ ಘಟಕದ ಸಂಚಾಲಕರಾಗಿರುವ ಸುಶೀಲ್ ಸುದೇಲೆ, ಮಧ್ಯಪ್ರದೇಶ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಭೋಪಾಲ್ ಮೇಯರ್ ಅಲೋಕ್ ಶರ್ಮಾ ಅವರ ಸಂಬಂಧಿಯೂ ಹೌದು. 2011ರ ಕೊಲೆ ಪ್ರಕರಣದಲ್ಲಿ ಸುದೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದು, ಸೆಪ್ಟೆಂಬರ್ 2015ರಿಂದ ಜಾಮೀನಿನ ಮೇಲೆ ಹೊರಗಿದ್ದಾನೆ.
ಇದನ್ನೂ ಓದಿರಿ: ಬಜರಂಗದಳದ ದುಷ್ಕಮಿಗಳಿಂದ ‘ಆಶ್ರಮ್-3’ ಸೆಟ್ ಮೇಲೆ ದಾಳಿ; ಇನ್ನೂ ದೂರು ನೀಡದ ನಿರ್ಮಾಪಕ!
ವೆಬ್ ಸರಣಿಯ ಸೆಟ್ ಮೇಲೆ ದಾಳಿ ನಡೆದ ಒಂದು ದಿನದ ನಂತರ (ಅಕ್ಟೋಬರ್ 25ರಂದು), ಭೋಪಾಲ್ ಪೊಲೀಸರು ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಹಾಗೂ ಆರ್ಎಸ್ಎಸ್ನ ಯುವ ಘಟಕವಾಗಿ ಕಾರ್ಯ ನಿರ್ವಹಿಸುತ್ತಿರುವ ಬಜರಂಗದಳದ ಹಿರಿಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147, 148, 149, 323, 336 ಮತ್ತು 427ರ ಅಡಿಯಲ್ಲಿ ಪೊಲೀಸರು ಸುದೇಲೆ, ಜೀವನ್ ಶರ್ಮಾ, ಅಭಿಜಿತ್, ದೀಲಿಪ್, ಕರಣ್, ಶರ್ವಾನ್ ಬೋಥಮ್ ಮತ್ತು ಸುನೀಲ್ ಸೋನಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಎಲ್ಲಾ ಸೆಕ್ಷನ್ಗಳು ಜಮೀನು ಪಡೆಯಲು ಅವಕಾಶ ನೀಡುತ್ತವೆ.
ಭೋಪಾಲ್ನ ಅರೇರಾ ಹಿಲ್ಸ್ ಪೊಲೀಸ್ ಠಾಣೆಯ ಪಟ್ಟಣ ನಿರೀಕ್ಷಕ ಆರ್.ಕೆ.ಸಿಂಗ್ ಪ್ರಕರಣ ದಾಖಲಿಸಿರುವ ಸಂಬಂಧ ತಿಳಿಸಿದ್ದು, “ಆಶ್ರಮದ ಮೂರನೇ ಸೀಸನ್ ಚಿತ್ರೀಕರಣದ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಸುದೇಲೆ ಸೇರಿದಂತೆ ಏಳು ಮಂದಿ ಬಜರಂಗದಳ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ. ಘಟನೆಯ ಒಂದು ದಿನದ ನಂತರ ಐಪಿಸಿಯ ಆರು ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಯಾರನ್ನಾದರೂ ಬಂಧಿಸಲಾಗಿದೆಯೇ ಎಂದು ಕೇಳಿದಾಗ, “ಯಾರನ್ನೂ ಬಂಧಿಸಲಾಗಿಲ್ಲ. ಆದರೆ, ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸಮನ್ಸ್ ಬಂದಾಗ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ” ಎಂದು ಇನ್ಸ್ಪೆಕ್ಟರ್ ಹೇಳಿದ್ದಾರೆ.
ಇದನ್ನೂ ಓದಿರಿ: ದಕ್ಷಿಣ ಕನ್ನಡ: BJP ನಾಯಕನ ಮೇಲೆ ಬಜರಂಗ ದಳದ ಕಾರ್ಯಕರ್ತರಿಂದ ತಲವಾರು ದಾಳಿ
ಅಕ್ಟೋಬರ್ 24ರಂದು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಭೋಪಾಲ್ ಪೊಲೀಸರು ನಾಲ್ವರು ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿ, ಸಿಆರ್ಪಿಸಿಯ ಸೆಕ್ಷನ್ 151ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಮರುದಿನ ಆರೋಪಿಗಳು ಭೋಪಾಲ್ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಪಡೆದರು.
Director Prakash Jha, Crew Manhandled, Bajrang Dal Shuts Down Shooting https://t.co/CRhX0594oD pic.twitter.com/RhimfUPTDI
— NDTV News feed (@ndtvfeed) October 24, 2021
ಇದರ ನಡುವೆ ಪೊಲೀಸ್ ಭದ್ರತೆಯ ನಡುವೆ ವೆಬ್ ಸರಣಿಯ ಶೂಟಿಂಗ್ ಮುಂದುವರೆದಿದೆ ಎಂದು ಭೋಪಾಲ್ ಡಿಐಜಿ ಇರ್ಷಾದ್ ವಾಲಿ ತಿಳಿಸಿದ್ದಾರೆ. “ನಾವು ಪ್ರಕಾಶ್ ಝಾ ಮತ್ತು ಆಶ್ರಮ್ ವೆಬ್ ಸೀರೀಸ್ ಸಿಬ್ಬಂದಿಗೆ ರಕ್ಷಣೆಯ ಭರವಸೆ ನೀಡಿದ್ದೇವೆ. ಯಾವುದೇ ಘಟನೆಗಳು ನಡೆಯದಂತೆ ಶೂಟಿಂಗ್ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ” ಎಂದು ವಾಲಿ ಸ್ಪಷ್ಟಪಡಿಸಿದ್ದಾರೆ.
ಅಪರಾಧಿ ಸುಶೀಲ್ ಸುದೇಲೆ ಹಿನ್ನೆಲೆ
2011ರ ಫೆಬ್ರವರಿ 5ರಂದು ಭೋಪಾಲ್ ಮೂಲದ ಗುರುಕಿರ್ಪಾ ಟ್ರಾವೆಲ್ಸ್ನ ಮಾಲೀಕ ಭಾಗ್ಚಂದ್ ಅಲಿಯಾಸ್ ಪಪ್ಪು ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ದಾಳಿಯ ಪ್ರಮುಖ ಆರೋಪಿ ಸುದೇಲೆ ಅವರನ್ನು ಭೋಪಾಲ್ ನ್ಯಾಯಾಲಯವು 2014ರಲ್ಲಿ ದೋಷಿ ಎಂದು ತೀರ್ಪು ನೀಡಿದೆ.
ಐಪಿಸಿಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿಯ ಶಿಕ್ಷೆ) ಅಡಿಯಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಲಾಯಿತು ಮತ್ತು 1,000 ರೂಪಾಯಿಗಳ ದಂಡದ ಜೊತೆಗೆ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು.
“ಸುದೇಲೆ ಭಾಗ್ಚಂದ್ನಿಂದ ಹಣ ವಸೂಲಿ ಮಾಡುತ್ತಿದ್ದ. ಭಾಗ್ಚಂದ್ ಅವರು ಸುದೇಲೆ ವಿರುದ್ಧ ಹನುಮಾನ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸುದೇಲೆ ಹಣಕ್ಕಾಗಿ ಬೇಡಿಕೆಯಿಡುತ್ತಿರುವ ವಿಡಿಯೊ ಕ್ಲಿಪ್ಅನ್ನು ಭಾಗ್ಚಂದ್ ಸಲ್ಲಿಸಿದ್ದರು. ಈ ವಿಡಿಯೋವನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಲಾಗಿದೆ” ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿರಿ: ಹನುಮ ಜಯಂತಿ ದಿನ ಪೂರ್ತಿ ಪಿಕ್ಚರ್ ತೋರಿಸುತ್ತೇವೆ: ಪ್ರಚೋದನಕಾರಿ ಹೇಳಿಕೆ ನೀಡಿದ ಬಜರಂಗದಳ ಮುಖಂಡ
ಭಾಗ್ಚಂದ್ ದೂರು ನೀಡಿದ ಬಳಿಕ ಕುಪಿತರಾದ ಸುದೇಲೆಯ ಐವರು ಸಹಚರರು 2011ರ ಫೆಬ್ರವರಿ 5ರಂದು ಭಾಗ್ಚಂದ್ ಮೇಲೆ ದೊಣ್ಣೆ ಮತ್ತು ಕತ್ತಿಗಳಿಂದ ಹಲ್ಲೆ ನಡೆಸಿ, ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು. ಭಾಗ್ಚಂದ್ ತೀವ್ರ ಗಾಯಾಳುವಾಗಿಯೇ ತಪ್ಪಿಸಿಕೊಂಡು ಬಂದು ಹನುಮಂಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ತಲೆಗೆ ಪೆಟ್ಟಾಗಿದ್ದರಿಂದ ನಾಲ್ಕು ದಿನಗಳ ನಂತರ ಮೃತಪಟ್ಟರು.
ಭಾಗ್ಚಂದ್ನ ಸಾವಿನ ನಂತರ ಪೊಲೀಸರು, ಸುದೇಲೆ, ನೀಲೇಶ್ ಖಟಿಕೆ, ರಾಜ್ಕುಮಾರ್ ಚೌರಾಸಿಯಾ, ಅರವಿಂದ್ ನರ್ವಾರಿಯಾ, ವೀರೇಂದ್ರ ಯಾದವ್, ಗೋಪಾಲ್ ಯಾದವ್ ವಿರುದ್ಧ ಸೆಕ್ಷನ್ 294, 147, 148, 148, 506-ಬಿ, 427, 302, 120-ಬಿ ಪ್ರಕರಣ ದಾಖಲಿಸಿದರು.
ನ್ಯಾಯಾಲಯವು ಅವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಭೋಪಾಲ್ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಅಮಿತಾಭ್ ಮಿಶ್ರಾ ಅವರ ಏಕಸದಸ್ಯ ಪೀಠವು ಫೆಬ್ರವರಿ 5, 2014ರಂದು ನಡೆದ ಘಟನೆಯ ಸುಮಾರು ಮೂರು ವರ್ಷಗಳ ನಂತರ ಸುದೇಲೆ ಸೇರಿದಂತೆ ಎಲ್ಲಾ ಆರೋಪಿಗಳಿಗೆ 14 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿತು. ಆದರೆ ಇಬ್ಬರು ಆರೋಪಿಗಳು (ಸುದೇಲೆ ಮತ್ತು ಬಜರಂಗದಳದ ರಾಜಕುಮಾರ ಚೌರಾಸಿಯಾ) ಸೆಪ್ಟೆಂಬರ್ 28, 2015ರಂದು ಜಾಮೀನು ಪಡೆದರು.
ರಾಜಕುಮಾರ್ ಅವರು ಪ್ರಸ್ತುತ ಭೋಪಾಲ್ ಮುನ್ಸಿಪಲ್ ಕಾರ್ಪೊರೇಶನ್ಗೆ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದರೆ, ಬಜರಂಗದಳದ ಕಾರ್ಯಕರ್ತನಾಗಿದ್ದ ಸುದೇಲೆಯನ್ನು ಬಜರಂಗದಳ ಕೇಂದ್ರ ಘಟಕದ ಸಂಚಾಲಕ ಸ್ಥಾನದಲ್ಲಿ ಕೂರಿಸಲಾಗಿದೆ.
‘ದಿ ವೈರ್’ ಜಾಲತಾಣವು ಸುದೇಲೆ ಅವರ ಹಲವಾರು ಫೋಟೋಗಳನ್ನು ಕಲೆ ಹಾಕಿದೆ. ಸುದೇಲೆ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧಿಕೃತ ನಿವಾಸದಲ್ಲಿ ಗೃಹ ಸಚಿವ ನರೋತ್ತಮ್ ಮಿಶ್ರಾ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಇತರ ಬಿಜೆಪಿ, ಆರ್ಎಸ್ಎಸ್ ನಾಯಕರೊಂದಿಗೆ ಇರುವುದನ್ನು ಫೋಟೋಗಳಲ್ಲಿ ಕಾಣಬಹುದು.
ಇದನ್ನೂ ಓದಿರಿ: ಆಶ್ರಮ್-3 ಚಿತ್ರೀಕರಣದ ವೇಳೆ ಬಜರಂಗದಳ ದಾಳಿ: ಮಧ್ಯಪ್ರದೇಶ ಗೃಹಸಚಿವ ಸಮರ್ಥನೆ