ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ 70,000 ರೂಪಾಯಿ ದೇಣಿಗೆ ನೀಡಲು ನಿರಾಕರಿಸಿದ ಶಾಲಾ ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಂಡಿರುವ ಶಾಲೆಯೊಂದಕ್ಕೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಆರೆಸ್ಸೆಸ್ ಟ್ರಸ್ಟ್ನಿಂದ ನಡೆಯುವ ಸಮರ್ಥ ಶಿಕ್ಷಾ ಸಮಿತಿಯ ಶಾಲಾ ಅಧಿಕಾರಿಗಳು ಮತ್ತು ದೆಹಲಿ ಸರ್ಕಾರದ ಶಿಕ್ಷಣ ನಿರ್ದೇಶನಾಲಯಕ್ಕೆ ನ್ಯಾಯಮೂರ್ತಿ ಕಾಮೇಶ್ವರ್ ರಾವ್ ನೋಟಿಸ್ ಜಾರಿ ಮಾಡಿದ್ದಾರೆ.
ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿರುವ ಅರ್ಜಿಯ ಪ್ರಕಾರ, ಮಂದಿರದ ನಿರ್ಮಾಣಕ್ಕಾಗಿ ಈ ವರ್ಷದ ಫೆಬ್ರವರಿಯಲ್ಲಿ ಸಮಿತಿ ನಡೆಸುತ್ತಿರುವ ಎಲ್ಲಾ ಶಾಲೆಗಳಿಗೆ 70,000 ರಿಂದ 1,00,000 ರೂಪಾಯಿ ಸಂಗ್ರಹಿಸಲು ಅಥವಾ ದೇಣಿಗೆ ಸಂಗ್ರಹಿಸುವ ಗುರಿಯನ್ನು ನೀಡಿತ್ತು.
ಇದನ್ನೂ ಓದಿ: ರಾಮ ಮಂದಿರ ಟ್ರಸ್ಟ್ ಭೂ ದಂಧೆ – ಅಧರ್ಮ, ಪಾಪ ಮತ್ತು ಭಕ್ತರ ನಂಬಿಕೆಗೆ ಅಪಮಾನ ಎಂದ ಪ್ರಿಯಾಂಕ
ವಿದ್ಯಾರ್ಥಿಗಳು ಅಥವಾ ಅವರ ಪೋಷಕರಿಗೆ ಕೊಡುಗೆ ನೀಡಲು ಮನವೊಲಿಸುವಂತೆ ಮತ್ತು ಅಂಗಡಿಗಳ ಮಾಲೀಕರು ಮತ್ತು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಮಾರುಕಟ್ಟೆಗೆ ಭೇಟಿ ನೀಡುವಂತೆ ಸಿಬ್ಬಂದಿಗೆ ಹೇಳಲಾಗಿತ್ತು. ಇದಲ್ಲದೇ ಶಾಲೆಯು ಶಿಕ್ಷಣ ನಿಧಿ ಹೆಸರಿನಲ್ಲಿ ಶಿಕ್ಷಕರಿಂದ 15 ಸಾವಿರ ರೂಪಾಯಿ ವಸೂಲಿ ಮಾಡಲಾಗಿತ್ತು.
ರಿಟ್ ಅರ್ಜಿಯ ಪ್ರಕಾರ, ಶಾಲೆಯಿಂದ ಅಮಾನತಿಗೆ ಒಳಗಾಗಿರುವ ಮುಖ್ಯೋಪಾಧ್ಯಾಯಿನಿಯ ಪತಿ 2016 ರಲ್ಲಿ ಗಂಭೀರ ಅಪಘಾತಕ್ಕೆ ಒಳಗಾಗಿದ್ದು, ಅಂದಿನಿಂದ ಅವರು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ.
“ತೀವ್ರ ಆರ್ಥಿಕ ಬಿಕ್ಕಟ್ಟುಗಳ ನಡುವೆಯೂ, ಮಹಿಳೆ ರಾಮ ಮಂದಿರಕ್ಕಾಗಿ 2,100 ರೂಪಾಯಿ ದೇಣಿಗೆ ನೀಡಿದ್ದಾರೆ. ಹೀಗಾಗಿ 15,000 ರೂ ಪಾವತಿಸಲು ನಿರಾಕರಿಸಿದರು. ಅಂದಿನಿಂದ ಸಮಿತಿಯು ಆಕೆಯ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದೆ. ಆಕೆಗೆ ಕಿರುಕುಳ ನೀಡಲಾಗಿತ್ತು. ಆಕೆಯೇ ಸ್ವತಃ ರಾಜೀನಾಮೆ ನೀಡಿ ಹೋಗಬೇಕು ಅಥವಾ ವಜಾಗೊಳಿಸುವ ಪಿತೂರಿಗಳನ್ನು ರೂಪಿಸುತ್ತಿತ್ತು” ಎಂದು ರಿಟ್ ಅರ್ಜಿಯಲ್ಲಿ ತಿಳಿಸಲಾಗಿದೆ.
ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತು ಮಾನಸಿಕ ಹಿಂಸೆಯಿಂದ ಮುಖ್ಯಶಿಕ್ಷಕಿ ಶಿಕ್ಷಣ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಪತ್ರವನ್ನೂ ಬರೆದಿದ್ದಾರೆ. ಇದರಿಂದ ಶಾಲೆಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಅಮಾನತು ಆದೇಶಗಳನ್ನು ವಜಾಗೊಳಿಸಿ, ಸಹಾನುಭೂತಿಯ ಆಧಾರದ ಮೇಲೆ ತನ್ನ ನಿವಾಸದ ಸಮೀಪವಿರುವ ಸೊಸೈಟಿ ನಡೆಸುತ್ತಿರುವ ಶಾಲೆಗೆ ತನ್ನನ್ನು ವರ್ಗಾಯಿಸುವಂತೆ ಮುಖ್ಯೋಪಾಧ್ಯಾಯಿನಿ ವಿನಂತಿಸಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ಟ್ರಸ್ಟ್: ಭೂ ಕಬಳಿಕೆ ಆರೋಪ ಮಾಡಿದ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು