ಶುಕ್ರವಾರ ಹೃದಯಘಾತದಿಂದ ನಿಧನರಾದ ಮೇರು ನಟ, ಕನ್ನಡಿಗರ ಕಣ್ಮಣಿ ಪುನೀತ್ ರಾಜ್ಕುಮಾರ್ ಭೂಮಿ ತಾಯಿಯ ಗರ್ಭ ಸೇರಿದರು. ಕನ್ನಡಿಗರ ಹೃದಯವಾಸಿ ಭೂಮಿ ತಾಯಿಯನ್ನು ಅಪ್ಪಿದರು.
ಕಂಠೀರವ ಸ್ಟುಡಿಯೊದಲ್ಲಿ ಅವರ ಅಂತ್ಯಕ್ರಿಯೆ ನೆರವೇರುತ್ತಿದೆ. ಡಾ.ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಅವರ ಸಮಾಧಿ ಕಂಠೀರವ ಸ್ಟುಡಿಯೊದಲ್ಲೇ ಇದ್ದು, ತಂದೆ- ತಾಯಿಯೊಂದಿಗೆ ಪುನೀತ್ ರಾಜ್ಕುಮಾರ್ ಚಿರನಿದ್ರೆಗೆ ಜಾರಿದರು.
ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಪಾರ್ಥೀವ ಶರೀರವನ್ನು ಇರಿಸಲಾಗಿತ್ತು. ಪ್ರೀತಿಯ ಅಪ್ಪುವನ್ನು ನೋಡಲು ರಾಜ್ಯ ಹಾಗೂ ದೇಶದ ಮೂಲೆಮೂಲೆಗಳಿಂದ ಜನಸಾಗರವೇ ಹರಿದುಬಂದಿತ್ತು.
ಭಾನುವಾರ ಮುಂಜಾನೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಕೈಗೊಳ್ಳಲಾಯಿತು. ಚಿತ್ರರಂಗದ ತಾರೆಯರು ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನ ಪಡೆದರು.
ಪುನೀತ್ ಅವರ ಇಬ್ಬರು ಪುತ್ರಿಯರು ತಮ್ಮ ತಾಯಿ ಅಶ್ವಿನಿ ಪುನೀತ್ರಾಜ್ಕುಮಾರ್ ಅವರನ್ನು ಅಪ್ಪಿ ಶೋಕತಪ್ತರಾದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪುನೀತ್ ಅವರ ಪಾರ್ಥೀವ ಶರೀರಕ್ಕೆ ಮುತ್ತಿಟ್ಟು ಭಾವುಕರಾದರು.
ಶುಕ್ರವಾರ ನಿಧನರಾದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಯಾತ್ರೆಯ ಮುನ್ನ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಭಾವಪೂರ್ಣ ವಿದಾಯ ಹೇಳಲಾಯಿತು.
ಮತ್ತೆ ಹುಟ್ಟಿ ಬನ್ನಿ ಅಪ್ಪು….#PuneethRajkumar pic.twitter.com/5doFPkSusM
— Basavaraj S Bommai (@BSBommai) October 31, 2021
ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ಮೊಳಗಿಸಲಾಯಿತು. ಮೂರು ಸುತ್ತು ಗುಂಡು ಸಿಡಿಸಿ ಗೌರವ ಸಲ್ಲಿಸಲಾಯಿತು. ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಈಡಿಗ ಸಮುದಾಯದ ಸಂಪ್ರದಾಯದಂತೆ ವಿಧಿವಿಧಾನಗಳನ್ನು ಕೈಗೊಳ್ಳಲಾಯಿದೆ. ರಾಘವೇಂದ್ರ ರಾಜ್ಕುಮಾರ್ ಅವರ ಹಿರಿಯ ಪುತ್ರ ವಿನಯ್ ಅವರು ವಿಧಿವಿಧಾನವನ್ನು ಪೂರೈಸುತ್ತಿದ್ದಾರೆ.
ಪುನೀತ್ ಅವರ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪುನೀತ್ ಅವರ ಪತ್ನಿ ಅಶ್ವಿನಿ, ಪುತ್ರಿ ದೃತಿ, ವಂದಿತಾ ಅವರಿಗೆ ಹಸ್ತಾಂತರಿಸಿದರು.
ಅಡ್ಡಪಲ್ಲಕ್ಕಿಯಲ್ಲಿ ತರಲಾಗಿದ್ದ ಪಾರ್ಥೀವ ಶರೀರವನ್ನು ಪ್ರದಕ್ಷಿಣೆ ಹಾಕಲಾಯಿತು. ಕಂಠೀರವ ಸ್ಟುಡಿಯೊದಲ್ಲಿ ಅತೀವ ದುಃಖ ಮಡುಗಟ್ಟಿತ್ತು. ಡಾ.ರಾಜ್ಕುಮಾರ್ ಕುಟುಂಬದ ಎಲ್ಲರೂ ಅಂತಿಮ ನಮನ ಸಲ್ಲಿಸಿದರು. ಪ್ರೀತಿಯ ಸಹೋದರನನ್ನು ನೋಡುತ್ತ ಡಾ.ಶಿವರಾಜ್ಕುಮಾರ್ ಬಿಕ್ಕಿ ಬಿಕ್ಕಿ ಅತ್ತರು.
ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಅವರ ಪತ್ನಿ ಮಂಗಳಾ, ಮಗ ಯುವ ರಾಜ್ಕುಮಾರ್, ಶ್ರೀಮುರಳಿ, ವಿಜಯ ರಾಘವೇಂದ್ರ ಸೇರಿದಂತೆ ರಾಜ್ ಕುಟುಂಬದ ಸದಸ್ಯರು ಅಂತಿಮ ನಮನ ಸಲ್ಲಿಸಿದರು.
ನಟರಾದ ಉಪೇಂದ್ರ, ರವಿಚಂದ್ರನ್, ಯಶ್, ಜಗ್ಗೇಶ್, ಡಾಲಿ ಧನಂಜಯ, ದುನಿಯಾ ವಿಜಯ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಆರ್.ಅಶೋಕ, ಆರಗ ಜ್ಞಾನೇಂದ್ರ ಸೇರಿದಂತೆ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದರು.
ಇದನ್ನೂ ಓದಿರಿ: ಪುನೀತ್ ನಿಧನ: ಅರ್ಧಕ್ಕೆ ನಿಂತು ಹೋಯಿತು ಸಾಲು ಸಾಲು ಸಿನಿಮಾ