Homeಕರ್ನಾಟಕಲಿಂಗಾಯತ ಧರ್ಮ ಮಾನ್ಯತೆ ಹೋರಾಟದ ಅಸ್ಮಿತೆಯ ಪ್ರಶ್ನೆ ಮತ್ತೆ ಗರಿಗೆದರಿದೆ

ಲಿಂಗಾಯತ ಧರ್ಮ ಮಾನ್ಯತೆ ಹೋರಾಟದ ಅಸ್ಮಿತೆಯ ಪ್ರಶ್ನೆ ಮತ್ತೆ ಗರಿಗೆದರಿದೆ

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ಇದುವರೆಗೆ ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೆ ಸುಳಿಯುತ್ತಿದ್ದ ಲಿಂಗಾಯತ ಧರ್ಮ ಹೋರಾಟದ ಅಸ್ಮಿತೆಯ ಪ್ರಶ್ನೆ ಮತ್ತೆ ಬುಗಿಲೆದ್ದಿದೆ. ತೀರಾ ಇತ್ತೀಚೆಗೆ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ ಹಾಗೂ ಕೆಲವು ಜನ ಶಾಸಕರು ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯನ್ನು ಭೇಟಿಯಾಗಿ ವೀರಶೈವ/ಲಿಂಗಾಯತ ಧರ್ಮದ ಜನಾಂಗಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಬೇಕೆಂದು ಮನವಿ ಮಾಡಿದರು.

ಸರಕಾರಕ್ಕೆ ಸಲ್ಲಿಸಿದ ಮನವಿಯವನ್ನು ಗಮನಿಸಿದ ಜಾಗತಿಕ ಲಿಂಗಾಯತ ಮಹಾಸಭೆ ದಿಡೀರನೆ ತನ್ನ ಮಹಾಮಂಡಳದ ಸಭೆಯನ್ನು ಬೆಂಗಳೂರಿನಲ್ಲಿ ಕರೆದು ಪತ್ರಿಕಾ ಹೇಳಿಕೆ ನೀಡಿದೆ. ವೀರಶೈವ ಮಹಾಸಭೆ ಸರಕಾರಕ್ಕೆ ಸಲ್ಲಿಸಿರುವ ಬೇಡಿಕೆಯ ಬಗೆಗೆ ನಮಗೆ ಯಾವುದೆ ತಕರಾರು ಇಲ್ಲ. ಆದರೆ ಆ ಬೇಡಿಕೆಯಲ್ಲಿ ವೀರಶೈವ ಪದ ಸೇರಿಸಿದ್ದನ್ನು ಜಾಗತಿಕ ಲಿಂಗಾಯತ ಮಹಾಸಭೆ ಕಟುವಾಗಿ ಟೀಕಿಸಿದೆ.

2002 ಕ್ಕೂ ಪೂರ್ವದಲ್ಲಿ ಸರಕಾರದ ಯಾವುದೆ ದಾಖಲೆಯಲ್ಲಿ ಇಲ್ಲದ ವೀರಶೈವ ಪದವನ್ನು ಸೇರಿಸಿ ಸಮಾಜದಲ್ಲಿ ಗೊಂದಲವನ್ನುಂಟು ಮಾಡಿದೆ. ನಿಜಕ್ಕೂ ಬ್ರಿಟಿಷ್ ಆಡಳಿತದ ಸಂದರ್ಭದಿಂದ ಹಿಡಿದು ಸರಕಾರದ ಯಾವ ದಾಖಲೆಯಲ್ಲಿಯೂ ಇಲ್ಲದ ವೀರಶೈವ ಪದವನ್ನು ಅಂದಿನ ವೀರಶೈವ ಮಹಾಸಭೆಯ ಅಧ್ಯಕ್ಷ ಭೀಮಣ್ಣ ಖಂಡ್ರೆಯವರ ಕುತಂತ್ರದಿಂದ ಸರಕಾರದ ನೋಟಿಫಿಕೇಶನ್ ಪಡೆಯಿತು. ಇದಕ್ಕೆ ಬಹು ಮುಖ್ಯ ಕಾರಣ ಭೀಮಣ್ಣ ಖಂಡ್ರೆ ಹಾಗೂ ವೀರಶೈವ ಮಹಾಸಭೆಯೇ ಆಗಿದೆ.

ವೀರಶೈವ ಎಂಬುದು ಲಿಂಗಾಯತ ಧರ್ಮದಲ್ಲಿ ಕೇವಲ ಒಂದು ಮತ. ಮತ ಹೇಗೆ ಧರ್ಮವಾಗುತ್ತದೆ? ಎಂಬುದು ಬಹಳಷ್ಟು ಜನ ಹೋರಾಟಗಾರರ ಪ್ರಶ್ನೆಯಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ವಚನಗಳ ಎಳೆಯನ್ನು ಇಟ್ಟುಕೊಂಡು ಜನ್ಮ ತಳೆದ ಲಿಂಗಾಯತ ಧರ್ಮ, ಕರ್ಮಠರ ಕಪಿಮುಷ್ಠಿ ಮತ್ತು ಧಾರ್ಮಿಕ ಅತ್ಯಾಚಾರಿಗಳ ಕೈಯಲ್ಲಿ ನಲುಗಿ ಹೋದದ್ದು ಸುಳ್ಳಲ್ಲ. ಬಸವಣ್ಣನವರು ಇದ್ದಾಗ ಹೇಗೆ ಪುರೋಹಿತಶಾಹಿ ಅವರ ವಿಚಾರಗಳ ಮೇಲೆ ಬರ್ಬರ ಹತ್ಯೆ ನಡೆಸಲು ಯತ್ನಿಸಿದಂತೆ, ಈಗಲೂ ಅದನ್ನು ದಮನ ಮಾಡಲು ಸನ್ನದ್ದವಾಗಿ ನಿಂತುಕೊಂಡಿದೆ.

ಲಿಂಗಾಯತ ಧರ್ಮಕ್ಕೆ ಸಂಬಂಧವೇ ಪಡದ ಕಲ್ಲಡ್ಕ ಪ್ರಭಾಕರ ಭಟ್ಟ, ಆರ್.ಎಸ್.ಎಸ್.ನ ಸಂತೋಷ್, ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಹಾಗೂ ಪೇಜಾವರ ಮಹಾಸ್ವಾಮಿಗಳು ಸುಖಾ ಸುಮ್ಮನೆ ಮಾತನಾಡುತ್ತಾರೆ. ಲಿಂಗಾಯತ ಧರ್ಮ ಅಥವಾ ವಚನ ಸಾಹಿತ್ಯದ ಬಗೆಗೆ ಎಳ್ಳಷ್ಟು ಗೊತ್ತಿಲ್ಲದ ಇವರುಗಳು ತಲೆ ಬುಡವಿಲ್ಲದೆ ಆಳಿಗೊಂದು ಮಾತಾಡಿ ಲಿಂಗಾಯತರ ದಿಕ್ಕು ತಪ್ಪಿಸಲು ಹೊರಟಿದ್ದಾರೆ.

ಕೆಲವು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಂತೂ ಕೈತೊಳೆದುಕೊಂಡು ಬೆನ್ನು ಹತ್ತಿದವರಂತೆ ಮತ್ತೆ ಶುರುವಾದ ಪ್ರತ್ಯೇಕ ಧರ್ಮದ ಕೂಗು ಎಂದು ಉಯಿಲೆಬ್ಬಿಸಿ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಲಿಂಗಾಯತ ಧರ್ಮದ ಗಂಧಗಾಳಿ ಗೊತ್ತಿಲ್ಲದ ಇವು ಕಾಕೊಳಿಯಾಗಿಯೂ ನವಿಲಿನಂತೆ ನರ್ತಿಸುವ ಸೋಜಿಗ ಎಂಥವರಿಗೂ ಗೊತ್ತಾಗುತ್ತಿದೆ.

ಇಷ್ಟಕ್ಕೂ ಲಿಂಗಾಯತ ಧರ್ಮದ ಹೋರಾಟಕ್ಕೆ ಬಹುತೇಕ ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಸ್ವಹಿತಾಸಕ್ತಿ ಗುಂಪುಗಳು ಯಾಕೆ ವಿರೋಧಿಸುತ್ತಿವೆ? ಎಂಬ ಪ್ರಶ್ನೆಯನ್ನು ಎತ್ತಿಕೊಂಡರೆ ಅದಕ್ಕೊಂದು ತಾರ್ಕಿಕ ಉತ್ತರ ದೊರೆಯುತ್ತದೆ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಕಟ್ಟಿದ ಲಿಂಗಾಯತ ಧರ್ಮ ಕಾಯಕ ಜೀವಿಗಳ ಸಂಘಟನೆ. ಇಲ್ಲಿ ಅವರವರ ಕಾಯಕದ ಅನುಭವವೆ ಪ್ರಮಾಣು. ಶಾಸ್ತ್ರ, ಪುರಾಣ, ವೇದಾಂತಗಳೆಲ್ಲ ಕಟ್ಟುಕತೆಗಳು ಎಂಬುದು ಅವರಿಗೆಲ್ಲ ಮನದಟ್ಟಾಗಿತ್ತು. ವೇದವೆಂಬುದು ಓದಿನ ಮಾತು ಎಂಬುದು ಖಚಿತ. ವೇದ ಶಾಸ್ತ್ರ ಪುರಾಣ ಪ್ರಾಮಣ್ಯ ಒಪ್ಪದ ದುಡಿಯುವ ಜನ ತಮಗಾಗಿ ಕಟ್ಟಿಕೊಂಡ ಚಳುವಳಿಯ ಹೆಸರು ಲಿಂಗಾಯತ.

ಹೀಗಾಗಿ ಹನ್ನೆರಡನೆಯ ಶತಮಾನದಿಂದ ಇಲ್ಲಿಯವರೆಗೂ ಲಿಂಗಾಯತ ಧರ್ಮದ ಅಸ್ಮಿತೆಯನ್ನು ಮರೆ ಮಾಡುತ್ತಲೆ ಬಂದಿದೆ. ತೀರಾ ಇತ್ತೀಚೆಗೆ ಲಿಂಗಾಯತ ಧರ್ಮಿಯರಿಗೆ ವಚನ ಪ್ರಜ್ಞೆ ಮೂಡುತ್ತಿರುವಂತೆ ಮತ್ತೆ ಮತ್ತೆ ಹೋರಾಟದ ಕಿಚ್ಚು ಹುಟ್ಟಿಕೊಂಡಿದೆ. ಇದು ಯಾವುದೋ ರಾಜಕೀಯ ಒತ್ತಡಗಳಿಂದ ಪ್ರೇರಿತವಾದ ಕಿಚ್ಚಾಗಿದ್ದರೆ ಇಷ್ಟೊತ್ತಿಗೆ ಅದು ತಣ್ಣಗಾಗಿ ಹಳೆ ಕತೆಯಾಗುತ್ತಿತ್ತು. ಒಡಲಿನಿಂದ ಹೊಮ್ಮಿದ ಹೋರಾಟ ಯಾರೋ ನಾಲ್ಕು ಜನ ಪಡಪೋಶಿಗಳ ಮಾತಿಗೆ ತಲೆ ಬಾಗಿಸುವುದಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದ ಮೊಟ್ಟ ಮೊದಲ ಕನ್ನಡದ ಧರ್ಮ ಲಿಂಗಾಯತ. ಈ ಲಿಂಗಾಯತಕ್ಕೆ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ, ಹೊಲಿಯರ ನಾಗಿದೇವ, ಸೂಳೆ ಸಂಕವ್ವೆ, ಅಕ್ಕಮಹಾದೇವಿ, ಅಲ್ಲಮಪ್ರಭು,ಚೆನ್ನಬಸವಣ್ಣ, ಕದಿರೆಯ ರೆಮ್ಮವ್ವ ಮುಂತಾದವರೆಲ್ಲ ಬಸವಣ್ಣನವರ ನೇತೃತ್ವದಲ್ಲಿ ಕಟ್ಟಿದ ಅನುಭಾವಿಕ ಚಳುವಳಿ. ನಮ್ಮ ನಾಡಿದ ವಿಸ್ಮೃತಿ ಅಡಗಿರುವುದು ವಚನ ಸಾಹಿತ್ಯದ ಅನುಭಾವದ ಒಡಲಲ್ಲಿ ಎಂಬುದನ್ನು ಯಾರೂ ಮರೆಯುವಂತೆ ಇಲ್ಲ.

ಏಕಕಾಲಕ್ಕೆ ಪುರೋಹಿತಶಾಹಿ, ರಾಜಶಾಹಿ, ಮತ್ತು ಪಟ್ಟಭದ್ರರ ವಿರುದ್ಧ ಸಿಡಿದ ಸಿಡಿಗುಂಡುಗಳು ವಚನ ಸಾಹಿತ್ಯ. ವಚನ ಸಾಹಿತ್ಯದ ಪ್ರಜ್ಞೆ ಎಂದರೆ ಅದು ಸಕಲ ಜೀವಾತ್ಮರಿಗೆ ಲೇಸ ಬಯಸುವ ಪ್ರಜ್ಞೆ. ಈ ಪ್ರಜ್ಞೆ ಎಲ್ಲರಲ್ಲಿ ಮೂಡಿದರೆ ತಮ್ಮ ಕರಾಳ ಕೆಲಸಗಳಿಗೆ, ಧರ್ಮದ ಹೆಸರಿನ ನಂಗಾನಾಚ ಬಯಲಾಗಬಾರದು ಎಂಬುದು ಬಹುತೇಕರ ವಾಂಛೆ. ಆದ್ದರಿಂದಲೆ ಲಿಂಗಾಯತ ಧರ್ಮದ ಹೋರಾಟವನ್ನು ರಾಜಕೀಯ ಹೋರಾಟ ಎಂದು ದಿಕ್ಕು ತಪ್ಪಿಸಲು ಯತ್ನಿಸಿದರು. ಕೆಲವರಂತೂ ಧರ್ಮ ಒಡೆಯುವ ಷಡ್ಯಂತ್ರ ಎಂದೂ ದೂರಿದರು. ಇದರಲ್ಲಿ ಯಶಸ್ವಿಯೂ ಆದರು.

ಆದರೆ ಸತ್ಯಕ್ಕೆ ಶಕ್ತಿ ಹೆಚ್ಚು ಮತ್ತು ಅದು ಸಶಕ್ತವಾಗಿ ಪೆಡಸಿನಿಂದ ಹೊರ ಹೊಮ್ಮುತ್ತದೆ ಎಂಬುದಕ್ಕೆ ಸಾಕ್ಷಿಯಂತೆ ಬೆಂಗಳೂರಿನ ಬಸವ ಸಮಿತಿಯ ಅರಿವಿನ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಮೀಟಿಂಗ್ ಸಾಕ್ಷಿಯಾಗಿತ್ತು. ರಾಷ್ಟ್ರೀಯ ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯದರ್ಶಿ ಶಿವಾನಂದ ಜಾಮದಾರ ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಅಪೀಲು ಹೋಗುವ ಕುರಿತು ವಿವರವಾಗಿ ಮಾಹಿತಿ ಒದಗಿಸಿದರು.

ಲಿಂಗಾಯತ ಜನ ಸಮುದಾಯದಲ್ಲಿ ಇಂದಿಗೂ ಇರಬಹುದಾದ ಕೆಲವು ಗೊಂದಲಗಳಿಗೆ ಉತ್ತರವಾಗಿ 7-8 ಪುಸ್ತಕಗಳನ್ನು ಸಾವಿರ ಸಾವಿರ ಪ್ರತಿಗಳಲ್ಲಿ ಮುದ್ರಿಸುವುದಾಗಿ ಹೇಳಿದರು. ಸಭೆಯಲ್ಲಿ ಭಾಗವಹಿಸಿದ್ದ ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮಿಗಳು, ಡಾ.ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮದ ಜಯ ಮೃತ್ಯುಂಜಯ ಜಗದ್ಗುರುಗಳು, ಚೆನ್ನಬಸವಾನಂದ ಸ್ವಾಮೀಜಿ ಕೂಡಲ ಸಂಗಮ ಮುಂತಾದ ಮಠಾಧೀಶರು ನೂರಾರು ಜನ ಪ್ರಗತಿ ಪರರು, ವಿಚಾರವಾದಿಗಳು, ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ತೊಡೆತಟ್ಟಿ ನಿಂತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...