ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ದ ದೇಶದ ರಾಜಧಾನಿಯ ಗಡಿಗಳಲ್ಲಿ ರೈತರು ನಿರಂತರವಾಗಿ ಹೋರಾಡುತ್ತಿದ್ದಾರೆ. ಈ ನಡುವೆ ರಾಯಚೂರಿನಲ್ಲಿ ರಿಲಾಯನ್ಸ್ ಗ್ರೂಪ್ ಭತ್ತಕ್ಕೆ ಬೆಂಬಲ ಬೆಲೆಗಿಂತಲೂ ಹೆಚ್ಚಿನ ಬೆಲೆ ನೀಡಿ ಕೊಂಡುಕೊಂಡಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿದೆ. ಈ ಹಿನ್ನಲೆಯಲ್ಲಿ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು “ಬೆಂಬಲ ಬೆಲೆ”ಗಳ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದ ಬರಹ ನಾನುಗೌರಿ.ಕಾಮ್ ಓದುಗರಿಗಾಗಿ…
ಅಂಬಾನಿ ಬಳಗ ಕರ್ನಾಟಕದಲ್ಲಿ ಒಂದು ಜಿಲ್ಲೆಯಲ್ಲಿ (ರಾಯಚೂರಿನ ಸಿಂಧನೂರಿನಲ್ಲಿ) ಕನಿಷ್ಠ ಬೆಂಬಲ ಬೆಲೆ (MSP)ಗಿಂತ ಕಿಂಚಿತ್ ಹೆಚ್ಚು (ಕ್ವಿಂಟಾಲಿಗೆ ನೂರು ರೂ. ಹೆಚ್ಚು) ಕೊಟ್ಟು ಭತ್ತ ಖರೀದಿಸಿರುವುದು, ಹೊಸ ಕೃಷಿ ಕಾನೂನುಗಳು ರೈತರ ಪರವಾಗಿರುವುದರ ದ್ಯೋತಕ ಎಂದು ಭಜನೆ ಶುರುವಾಗಿದೆ. ಈ ಮೂರ್ಖತನವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ.
ಇದನ್ನೂ ಓದಿ: ಹಾಗಾದರೆ ರಿಲಾಯನ್ಸ್ನಿಂದ MSP ಗಿಂತಲೂ ಅಧಿಕ ಬೆಲೆಗೆ ಭತ್ತ ಕೊಳ್ಳುವಿಕೆ: ವಾಸ್ತವವೇನು?
ಮೊದಲಿಗೆ, ಕನಿಷ್ಠ ಬೆಂಬಲ ಬೆಲೆ (MSP) ನಿರ್ಧಾರ ಹೇಗಾಗುತ್ತದೆ ತಿಳಿದುಕೊಳ್ಳಿ. ಅದನ್ನು ನಿರ್ಧರಿಸುವುದು ಕಮಿಷನ್ ಫಾರ್ ಅಗ್ರಿಕಲ್ಚರ್ ಕೋಸ್ಟ್ ಆಂಡ್ ಪ್ರೈಸ್ (CACP).
ಸ್ವಾಮಿನಾಥನ್ ಸಮಿತಿ ವರದಿಯ ಪ್ರಕಾರ ಒಂದು ಕೃಷಿ ಉತ್ಪಾದನೆಯ ವೆಚ್ಚ ನಿರ್ಧಾರಕ್ಕೆ ಮೂರು ಅಂಶಗಳಿವೆ:
- A2► ಸಾಲ, ಗೊಬ್ಬರ,ಇಂಧನ, ಯಂತ್ರ, ನೀರಾವರಿ, ಭೂಮಿಯ ಲೀಸ್ ವೆಚ್ಚ… ಇತ್ಯಾದಿ ಕೈಯಿಂದಾದ ವೆಚ್ಚಗಳು.
- A2+FL► ಕೈಯಿಂದಾದ ವೆಚ್ಚಗಳ ಜೊತೆ ರೈತನ ಮನೆಯವರು, ಕುಟುಂಬಿಕರು ನೀಡಿದ ಉಚಿತ ಶ್ರಮದ ಮೌಲ್ಯ.
- C2► ಇದು ವಾಸ್ತವ ಉತ್ಪಾದನಾ ವೆಚ್ಚದ ಸಮಗ್ರ ಲೆಕ್ಕಾಚಾರ ( ವೆಚ್ಚಗಳ ಜೊತೆ ಬಾಡಿಗೆ, ಬಡ್ಡಿ, ಯಂತ್ರಗಳ ಸವಕಳಿ ಎಲ್ಲ ಸೇರಿ)
ಸ್ವಾಮಿನಾಥನ್ ಕಮಿಟಿ ಹೇಳಿದ್ದು► MSP = C2+ 50%of C2
ಆದರೆ, 2018-19 ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಉತ್ಪಾದನಾ ವೆಚ್ಚದ 1.5 ಪಾಲು MSP ಕೊಡುತ್ತೇವೆ ಎಂದು ಹೇಳಿತ್ತು. ಆದರೆ ಈ ಉತ್ಪಾದನಾ ವೆಚ್ಚದ ಲೆಕ್ಕಾಚಾರ ಹೇಗೆಂದು ಸ್ಪಷ್ಟಪಡಿಸಿರಲಿಲ್ಲ.
ಆದರೆ CACP ತಾನು ಅದನ್ನು ಲೆಕ್ಕ ಹಾಕಿದ್ದು ಹೀಗೆ ಎಂದು ಹೇಳಿಕೊಂಡಿದೆ ► 1.5 X A2+FL
ಅಂದರೆ, ಸರ್ಕಾರ C2 ಪರಿಗಣನೆಗೆ ತೆಗೆದುಕೊಂಡಿಲ್ಲ. ಅರ್ಥಾತ್, ಉತ್ಪಾದನೆಯ ಎಲ್ಲ ವೆಚ್ಚಗಳು ಇನ್ನೂ MSP ಯಲ್ಲಿ ಒಳಗೊಂಡಿಲ್ಲ.
ಇದನ್ನೂ ಓದಿ: ಎಂಎಸ್ಪಿ ಖಾತರಿ ಕೊಡಿಸಲಾಗದಿದ್ದರೆ ರಾಜಕೀಯ ನಿವೃತ್ತಿ: ಹರಿಯಾಣ ಸಿಎಂ ಖಟ್ಟರ್
ವಾಸ್ತವದಲ್ಲಿ ರೈತನ ಖರ್ಚುಗಳು ಎಷ್ಟಿರುತ್ತವೆ ಎಂದರೆ ಸರ್ಕಾರಿ ಲೆಕ್ಕಾಚಾರದ C2 ಗಿಂತ ಎರಡು ಮೂರು ಪಟ್ಟು ಹೆಚ್ಚಿರುತ್ತದೆ. ಹೆಚ್ಚಿನ ಅಧ್ಯಯನಗಳು ಇದನ್ನು ಬೊಟ್ಟು ಮಾಡುತ್ತವೆ. ಇದು ಹೇಗೆಂದರೆ ನಿಮ್ಮೂರಿನಲ್ಲಿ ಸರ್ಕಾರಿ ಕೃಷಿ ಮಜೂರಿ ದರ ಎಷ್ಟು- ಖಾಸಗಿ ಕೃಷಿ ಮಜೂರಿ ಎಷ್ಟು ಎಂದು ಲೆಕ್ಕ ಹಾಕಿಕೊಳ್ಳಿ. ಆ ವ್ಯತ್ಯಾಸ ಈ MSPಯಲ್ಲೂ ತೋರಬೇಕಲ್ಲವೆ?
ಹಾಗಿರುವಾಗ, ಅಂಬಾನಿಗಳು ಕ್ವಿಂಟಾಲಿಗೆ MSP ಮೇಲೆ ಅಂದಾಜು 100 ರೂಪಾಯಿ ಜಾಸ್ತಿ ಕೊಟ್ಟು ಭತ್ತ ಖರೀದಿಸಿದರು ಎಂದರೆ ಅದರಲ್ಲಿ ಸಂಭ್ರಮಿಸುವುದು ಏನಿದೆಯೋ ಕಾಣೆ. ನಾಳೆ ಇದೇ ಬೆಂಚ್ ಮಾರ್ಕ್ ಆಗತೊಡಗಿದರೆ, ಬಹುಬೇಗ ರೈತ ಕೃಷಿಯನ್ನು ಸೂಟುಬೂಟಿನವರಿಗೆ ಬಿಟ್ಟುಕೊಡಲೇಬೇಕಾದ ಸ್ಥಿತಿ ಬರುವುದರಲ್ಲಿ ಸಂಶಯ ಬೇಡ.
ಇದನ್ನೂ ಓದಿ: ದೆಹಲಿ ಪೂರ್ವಭಾಗದಲ್ಲಿ ಭುಗಿಲೆದ್ದ ಮತ್ತೊಂದು ’ರೈತ ಪ್ರತಿಭಟನೆ’