ರಾಜ್ಯದಲ್ಲಿ ವಿಧಿಸಲಾಗಿರುವ ಕೊರೊನಾ ಲಾಕ್ಡೌನ್ನಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ರಂಗ ಕಲಾವಿದರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದು, ನೀಡುತ್ತಿರುವ ಅಲ್ಪ ನೆರವಿನಲ್ಲಿಯೂ ವಯಸ್ಸಿನ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋವಿಡ್ ಲಾಕ್ಡೌನ್ನಿಂದ ಸಂಕಷ್ಟ ಎದುರಿಸುತ್ತಿರುವ ಕೂಲಿ ಕಾರ್ಮಿಕರಿಗೆ, ಕ್ಷೌರಿಕರಿಗೆ, ಆಟೋ ಚಾಲಕರಿಗೆ ಹಾಗೂ ಕಲಾವಿದರಿಗೆ ಆರ್ಥಿಕ ನೆರವು ಪ್ಯಾಕೇಜ್ನ್ನು ಘೋಷಣೆ ಮಾಡಿದ್ದರು. ಕಲಾವಿದರಿಗೆ 3,000 ರೂಪಾಯಿ ಘೋಷಿಸಿದ್ದರು.
ಸರ್ಕಾರ ಘೋಷಿಸಿರುವ 3,000 ರೂಪಾಯಿಗಳನ್ನು ಪಡೆಯಲು ಕಲಾವಿದರು ಅರ್ಜಿ ಸಲ್ಲಿಸಲು ಪಡುವ ಪಡಿಪಾಟಲಿಗೆ ಅರ್ಧ ಖರ್ಚು ಆಗುತ್ತದೆ. ಸಾಕಷ್ಟು ಕಲಾವಿದರು ಸರ್ಕಾರ ಹಣವನ್ನು ತೆಗೆದುಕೊಳ್ಳಲು ಮುಜುಗರ ಇರುತ್ತದೆ ಅಂಥ ಸಮಯದಲ್ಲಿ, ಕಲಾವಿದರು ಹಣ ಪಡೆಯಲು ಸರ್ಕಾರ ವಯಸ್ಸಿನ ತಾರತಮ್ಯ ಮಾಡಿ ಮತ್ತಷ್ಟು ಅವಮಾನ ಮಾಡುತ್ತಿದೆ ಎಂದು ಕಲಾವಿದ ಲಕ್ಷ್ಮಣ್ ಮಂಡಲಗೇರಾ ಆರೋಪಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಅಕಾಡೆಮಿ ಅಧ್ಯಕ್ಷರು, ಸದಸ್ಯರುಗಳು ಮತ್ತು ಸರ್ಕಾರ ಎಲ್ಲರೂ ಸೇರಿ ಕಲಾವಿದರಿಗೆ ವಯಸ್ಸಿನ ತಾರತಮ್ಯವನ್ನು ಏರ್ಪಡಿಸಿ 35 ವಯಸ್ಸಿನ ಮೇಲ್ಪಟ್ಟವರು ಮಾತ್ರ ಅರ್ಜಿ ಹಾಕಬೇಕು, 35 ವರ್ಷದೊಳಗಿನವರಿಗೆ, ಮಾಶಾಸನ ಪಡೆಯುವವರಿಗೆ ಹಾಗೂ ಧನಸಹಾಯ ಪಡೆಯುವ ಸಂಘ – ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಅಂತ ಪತ್ರಿಕೆ ವರದಿ ಮೂಲಕ ಘೋಷಿಸಿ ಅವಮಾನ ಮಾಡಿದ್ದಿರಾ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಸಿದ ಅಲೆಮಾರಿಗಳಿಗೂ ವಿಶೇಷ ಪ್ಯಾಕೇಜ್ ನೀಡಿ: ಮುಖ್ಯಮಂತ್ರಿಗೆ ಸಿ.ಎಸ್.ದ್ವಾರಕಾನಾಥ್ ಆಗ್ರಹ
ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ, ಸಾಹಿತ್ಯ ಪರಿಷತ್ತುಗಳಿಗೆ, ಇಲಾಖೆಗಳಿಗೆ ಕಳೆದ ಎರಡು ಮೂರು ವರ್ಷಗಳಿಂದ ಕೊರೊನಾ ನೆಪ ಹೇಳಿ ಬಿಡುಗಡೆ ಆಗಬೇಕಾದ ಸುಮಾರು 200 ರಿಂದ 300 ಕೋಟಿ ರೂಪಾಯಿ ಹಣ ಎಲ್ಲಿ ಹೋಯಿತು..? ಎಂದು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ರಂಗಭೂಮಿಯನ್ನೇ ನಂಬಿ ತಮ್ಮ ಬದುಕನ್ನಾಗಿಸಿಕೊಂಡು ಅದನ್ನೇ ಜೀವನವಾಗಿ ಇಟ್ಟುಕೊಂಡು ರಂಗ ಚಟುವಟಿಕೆಗಳು ಇಲ್ಲದೇ ಮನೆ ಸೇರಿರುವ ಈ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಸಹ ಸರ್ಕಾರ ಕಲಾವಿದರ ಸಹಾಯಕ್ಕೆ ನಿಲ್ಲದಿರುವಂತಹ ದುಸ್ಥಿತಿ ಈ ರಾಜ್ಯದಲ್ಲಿ ಇದೆ. ಘೋಷಿಸಿರುವ ಅಲ್ಪ ನೆರವನ್ನು ಪಡೆಯಲು ಸಹ ವಯಸ್ಸಿನ ಮಿತಿ ಇಟ್ಟಿರುವುದು ಏಕೆ ಎಂದಿದ್ದಾರೆ.
“ಇಡೀ ಕರ್ನಾಟಕದಲ್ಲಿ ರಂಗಭೂಮಿ ಕ್ರಿಯಾಶೀಲವಾಗಿ ಕೆಲಸ ಮಾಡಲು ಜೀವಂತವಾಗಿರುವುದಕ್ಕೆ 35 ವಯಸ್ಸಿನ ಒಳಗಿರುವ ಯುವ ರಂಗ ಕಲಾವಿದರು ಕಾರಣ. ಬೇಸಿಗೆ ಶಿಬಿರಗಳಲ್ಲಿ, ದೊಡ್ಡ ದೊಡ್ಡ ರೆಪರ್ಟರಿಗಳಲ್ಲಿ , ಸಣ್ಣ ಸಣ್ಣ ರಂಗತಂಡಗಳಲ್ಲಿ ಕ್ರಿಯಾಶೀಲವಾಗಿ ಹೊಸ ಹೊಸ ಯೋಚನೆಗಳೊಂದಿಗೆ ನಾಟಕಗಳನ್ನು ನಿರ್ದೇಶಿಸಿ ನಟಿಸಿ, ಸಂಘಟಿಸುವುದರ ಮೂಲಕ ಇಂದು ಯುವರಂಗ ಕಲಾವಿದರು ರಂಗಭೂಮಿಯನ್ನು , ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿದ್ದಾರೆ ಮತ್ತು ರಂಗಭೂಮಿಯನ್ನೇ ಬದುಕನ್ನಾಗಿಸಿಕೊಂಡಿದ್ದಾರೆ. ಆದರೆ ಈ ಕಲಾವಿದರನ್ನು ಸರ್ಕಾರಗಳು ಕಡೆಗಣಿಸುತ್ತಿರುವುದು ವಿಷಾದನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
’ಸರ್ಕಾರದ ರಂಗಭೂಮಿಯಲ್ಲಿ ನಡೆಯುತ್ತಿರುವ ದೊಡ್ಡ ರೆಪರ್ಟರಿಗಳು ಎನಿಸಿಕೊಂಡಿರುವ ರಂಗಾಯಣಗಳಿಗೆ ಕಲಾವಿದರ ಆಯ್ಕೆ ಮಾಡುವಾಗ ಇದೇ 35 ವರ್ಷದ ಒಳಗಿರುವ ಯುವ ರಂಗ ಕಲಾವಿದರೇ ಬೇಕು ಎಂದು ರಂಗಾಯಣಗಳಿಗೆ ದುಡಿಸಿಕೊಳ್ಳುವ ಸರ್ಕಾರ, ಕೋವಿಡ್ ಆರ್ಥಿಕ ನೆರವು ಪ್ಯಾಕೇಜ್ ತೆಗೆದುಕೊಳ್ಳಲು ಅರ್ಹರಲ್ಲ ಎನ್ನುತ್ತದೆ ಇದ್ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಯುವ ರಂಗಕಲಾವಿದರು ಬೀದಿಗಿಳಿಯುವ ಮುಂಚೆ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಿ ಮತ್ತೆ ಆರ್ಥಿಕ ನೆರವನ್ನು 10,000 ರೂಪಾಯಿಗೆ ಏರಿಸಿ, 10 ವರ್ಷಗಳ ಕಲಾಸೇವೆಯನ್ನು 5 ವರ್ಷಕ್ಕೆ ಇಳಿಸಿ ಕಲಾವಿದರಿಗೆ ಗೌರವಧನವಾಗಿ ತಲುಪುವಂತೆ ಮಾಡಬೇಕು. ಆನ್ ಲೈನ್ ಮೂಲಕ ಅರ್ಜಿ ಹಾಕುವ ಕೊನೆಯ ದಿನಾಂಕವನ್ನು ಮುಂದೂಡಬೇಕು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲದವರಿಗೆ ಜಿಲ್ಲಾ ಕಛೇರಿಗಳಲ್ಲಿ ಇರುವ ಕಲಾವಿದರ ಮಾಹಿತಿ ಆಧರಿಸಿ ಅರ್ಜಿ ಹಾಕಿಸಿ ಎಲ್ಲಾ ಕಲಾವಿದರಿಗೆ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮಂಗಳವಾರವಷ್ಟೇ ಚಿತ್ರರಂಗದ 3,000 ಕಾರ್ಮಿಕರಿಗೆ ತಲಾ 5,000 ರೂಪಾಯಿ ನೀಡುವುದಾಗಿ ನಟ ಯಶ್ ಘೋಷಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿಗೂ ಲಸಿಕೆಗೂ ಮುಗಿಯದ ನಂಟು, ಮತ್ತೆ ವಿವಾದದಲ್ಲಿ ಬಿಜೆಪಿ ಶಾಸಕ