Homeಚಳವಳಿಎಡಪಂಥ ಇನ್ನಿಲ್ಲ! ಅಮರವಾಗಲಿ ಎಡಪಂಥ.... : ಯೋಗೇಂದ್ರ ಯಾದವ್

ಎಡಪಂಥ ಇನ್ನಿಲ್ಲ! ಅಮರವಾಗಲಿ ಎಡಪಂಥ…. : ಯೋಗೇಂದ್ರ ಯಾದವ್

- Advertisement -
- Advertisement -

ಇತ್ತೀಚಿನ ಲೋಕಸಭೆ ಚುನಾವಣೆಗಳಲ್ಲಿ ಎಡಪಕ್ಷಗಳ ನಿರಾಶಾದಾಯಕ ಪ್ರದರ್ಶನವನ್ನು ನೋಡಿದ ನಂತರ ನನ್ನ ಮೊದಲ ಪ್ರತಿಕ್ರಿಯೆ ಇದಾಗಿತ್ತು. ಬಹಳ ಸಮಯದಿಂದಲೇ ಇದ್ದ ಅನುಮಾನವನ್ನು ಈ ಫಲಿತಾಂಶ ಗಟ್ಟಿಗೊಳಿಸಿತು; ಒಂದು ಸಂಘಟನೆಯಾಗಿ, ಒಂದು ಸಂಘಟಿತ ಬೌದ್ಧಿಕ ಮತ್ತು ರಾಜಕೀಯ ಘಟಕವಾಗಿ ಸತ್ತುಹೋಗಿದೆ. ಆದರೂ, ಈ ಫಲಿತಾಂಶವು ಎಡಪಂಥದ ಮುಂದುವರೆಯುತ್ತಿರುವ ಪ್ರಸ್ತುತತೆಯನ್ನು ಒತ್ತಿಹೇಳುತ್ತದೆ ಹಾಗೂ ಒಂದು ರಾಜಕೀಯ ದೃಷ್ಟಿಕೋನ ಮತ್ತು ಚಳವಳಿಗಾಗಿ ಎಡಪಂಥ ಅವಶ್ಯಕ ಎನ್ನುವುದನ್ನೂ ಎತ್ತಿಹಿಡಿದಿದೆ. ಇದರಿಂದ ಏಳುವ ದೊಡ್ಡ ಪ್ರಶ್ನೆ : ಸಾಂಪ್ರದಾಯಿಕ ಎಡಪಂಥದ ಈ ಸಾವು ಒಂದು ಹೊಸ ಎಡಪಂಥದ ಹುಟ್ಟಿಗೆ ಕಾರಣವಾಗಬಲ್ಲದೇ?

ಕಳೆದ ಸುಮಾರು ನೂರು ವರ್ಷಗಳಿಂದ, ಎಡಪಂಥ ಅಂದರೆ ಒಂದು ರಿಜಿಡ್ ಆದ ಸೈದ್ಧಾಂತಿಕ ರಾಜಕಾರಣವೆಂದೇ ತೋರುತ್ತದೆ. ಎಡಪಂಥ ಎಂದರೆ ಮಾಕ್ರ್ಸ್‍ವಾದಕ್ಕೆ ಬದ್ಧತೆ, ಅಥವಾ ಮಾಕ್ರ್ಸ್‍ವಾದದ ಬಗ್ಗೆ ಲೆನಿನ್‍ನ ಸಂಕುಚಿತವಾದ ವಿಶ್ಲೇಷಣೆ. ಈ ಸಿದ್ಧಾಂತವು ಕ್ರಾಂತಿಯ ಅನಿವಾರ್ಯತೆಯಲ್ಲಿ ನಂಬಿಕೆ, ಒಂದು ಸಮಾಜವಾದ ನೋಟ ಹಾಗೂ ಸಾಮಾನ್ಯ ಜನರ ಸರ್ವಾಧಿಕಾರವನ್ನು ಒಳಗೊಂಡಿತ್ತು. ಹೆಚ್ಚಿನ ಎಡಪಂಥೀಯರಿಗೆ ಸೋವಿಯತ್ ಒಕ್ಕೂಟ ಮತ್ತು ಇತರ ಕಮ್ಯೂನಿಸ್ಟ್ ಆಳ್ವಿಕೆಗಳು ಭವಿಷ್ಯದ ಸಮಾಜ ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಗಳು. ಈ ರಾಜಕೀಯವನ್ನೇ ಭಾರತೀಯ ಕಮ್ಯೂನಿಸ್ಟ್ ಪಕ್ಷ ಪ್ರತಿನಿಧಿಸಿತ್ತು. ತದನಂತರ ಆ ಪಕ್ಷವು ಸಿಪಿಐ-ಎಮ್, ಸಿಪಿಐ-ಮಾವೋವಾದಿ ಹಾಗೂ ಸಿಪಿಐ-ಎಮ್‍ಎಲ್‍ನ ಇತರ ಹಲವಾರು ಗುಂಪುಗಳಾಗಿ ವಿಭಜನೆಯಾಯಿತು.

ಈಗಾಗಲೇ ಬಹಳ ಸಮಯದಿಂದ ಎಡಪಂಥವು ತನ್ನ ಕೊನೆಯ ಗಳಿಗೆಯಲ್ಲಿದೆ. ಲೋಕಸಭೆಯ ಚುನಾವಣೆ ಅದು ಎಲ್ಲರಿಗೂ ಸ್ಪಷ್ಟವಾಯಿತು. 5 ಸ್ಥಾನಗಳು; ಇದು ಎಡಪಂಥ ಈ ದೇಶದಲ್ಲಿ ಇಲ್ಲಿಯವರೆಗೆ ಪಡೆದ ಅತ್ಯಂತ ಕಡಿಮೆ ಸ್ಥಾನಗಳು. (ಡಿಎಮ್‍ಕೆಯ ಸಹಾಯದಿಂದ ತಮಿಳುನಾಡಿನಲ್ಲಿ ಗೆದ್ದ 4 ಸೀಟುಗಳಿಂದ ಸ್ವಲ್ಪ ಗೌರವಾನ್ವಿತವಾಯಿತು.) ಈ 5 ಸ್ಥಾನಗಳ ಪ್ರದರ್ಶನವು ಬರೀ ಚುನಾವಣಾ ಸೋಲಿಗಿಂತ ಆಳವಾದ ಸಮಸ್ಯೆ ಇದೆ ಎಂದು ತೋರಿಸಿತು. ಕೇರಳದಲ್ಲಿ ಎಲ್‍ಡಿಎಫ್ ಗೆ ಆದ ಆಘಾತದ ಸೋಲು ಒಂದು ಆವರ್ತಕ ವಿದ್ಯಮಾನ ಎನ್ನಬಹುದು. ಆದರೆ ಪಶ್ಚಿಮ ಬಂಗಾಳದ ಮತ್ತು ತ್ರಿಪುರಾದ ಸೋಲುಗಳನ್ನು ಹಾಗೆನ್ನಲಾಗುವುದಿಲ್ಲ. ಅಲ್ಲಿ ಸಿಪಿಐ (ಎಮ್)ನ ಮಾಜಿ ಕಾರ್ಯಕರ್ತರು ಬಿಜೆಪಿಯನ್ನು ಸೇರಿದ ರೀತಿಯನ್ನು ನೋಡಿದಾಗ ಪಾರ್ಲಿಮೆಂಟರಿ(ಸಂಸದೀಯ) ಎಡಪಂಥದ ರಾಜಕೀಯ ಆಳದಲ್ಲಿಯೇ ಟೊಳ್ಳಾಗಿರುವುದು ಕಾಣಿಸುತ್ತದೆ. ಚುನಾವಣೆಗಳಲ್ಲಿ ಭಾಗವಹಿಸದ, ಭಾರತ ಸರಕಾರದ ವಿರುದ್ಧ ಸಶಸ್ತ್ರ ಹೋರಾಟವನ್ನು ಮುಂದುವರೆಸಿರುವ ಎಡಪಂಥೀಯರ ಸಣ್ಣ ಗುಂಪು ತಮ್ಮ ಗುರಿಯ ಪ್ರಜ್ಞೆಯನ್ನು ಕಳೆದುಕೊಂಡು ಬಹಳ ಸಮಯವಾಗಿದೆ ಹಾಗೂ ಭದ್ರತಾ ಪಡೆಗಳಿಂದ ಆಗಬಹುದಾದ ಅಂತಿಮ ನಿರ್ನಾಮಕ್ಕೆ ಕಾಯುತ್ತಿದ್ದಾರೆ. ಎಡಪಂಥೀಯರ ಕೊನೆಯ ತಾಣವಾಗಿರುವ ಜೆಎನ್‍ಯುನಲ್ಲಿ ಕೂಡ ಎಬಿವಿಪಿ ಮತ್ತು ಎನ್‍ಎಸ್‍ಯುಐ ಗಳನ್ನು ಸೋಲಿಸಲು ಎಲ್ಲಾ ಎಡಪಂಥೀಯ ರಚನೆಗಳೊಂದಿಗೆ ಮಹಾಘಟಬಂಧನ ಮಾಡಿಕೊಂಡೇ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ.

ಸಾಂಪ್ರದಾಯಿಕ ಎಡಪಂಥದ ಈ ಸಾವು ಆಕಸ್ಮಿಕವಲ್ಲ. ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ಎಡಪಂಥೀಯ ಆಳ್ವಿಕೆಯ ಕುಸಿತವು ಕಮ್ಯೂನಿಸ್ಟ್ ಎಡಪಂಥದ ಸಿದ್ಧಾಂತ ಮತ್ತು ಆಚರಣೆಗಳ ಮಧ್ಯದ ಆಳವಾದ ವೈರುಧ್ಯಗಳನ್ನು ಈಗಾಗಲೇ ತೋರಿಸಿಕೊಟ್ಟಿತ್ತು; ಸ್ವಾತಂತ್ರಕ್ಕೆ ಇರುವ ಮಾನವನ ಬಯಕೆಗೆ ಗೌರವ ನೀಡುವಲ್ಲಿ ವಿಫಲವಾದದ್ದು, ಆರ್ಥಿಕ ಉತ್ತೇಜನ ಮತ್ತು ಉದ್ಯಮಶೀಲತೆಯ ಅವಶ್ಯಕತೆಯನ್ನು ಗುರುತಿಸಲು ವಿಫಲವಾದದ್ದು ಹಾಗೂ ಸಮಾಜವಾದಿ ರಾಷ್ಟ್ರದ ಹೆಸರಿನಲ್ಲಿ ಒಂದು ಬೃಹತ್ ದೈತ್ಯಾಕಾರದ ಅಧಿಕಾರಶಾಹಿಯನ್ನು ರಚಿಸಿದ್ದು, ಇದರೊಂದಿಗೆ ಭಾರತೀಯ ಸಮಾಜವನ್ನು ಭಾರತೀಯ ಎಡಪಂಥ ಎಂದೂ ಸರಿಯಾಗಿ ಅರ್ಥೈಸಿಕೊಳ್ಳಲೇ ಇಲ್ಲದ್ದು; ಅವರ ಯುರೋಪ್‍ಕೇಂದ್ರಿತ ಚೌಕಟ್ಟು ಭಾರತೀಯ ಸ್ವಾತಂತ್ರ ಚಳವಳಿಯಲ್ಲಿ, ಭಾರತೀಯ ಸಂಪ್ರದಾಯಗಳಲ್ಲಿ ಹಾಗೂ ಧರ್ಮಗಳಲ್ಲಿ ಅಥವಾ ಜಾತಿ ಪದ್ಧತಿಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸದಂತೆ ಮಾಡಿತು. ಈ ಸಾಂಪ್ರದಾಯಿಕ ಎಡಪಂಥ ಡೆಡ್-ಎಂಡ್‍ಗೆ ಬಂದು ನಿಂತಿರುವುದು ಆಶ್ಚರ್ಯಕರವಲ್ಲ; ಆಶ್ಚರ್ಯಕರವಾಗಿರುವುದು ಸೋವಿಯತ್ ಒಕ್ಕೂಟವು ಕುಸಿದ ನಂತರವೂ ಮೂರು ದಶಕಗಳವರೆಗೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದು.

ಇವೆಲ್ಲವುಗಳ ಹೊರತಾಗಿಯೂ ನಮ್ಮ ಸಾರ್ವಜನಿಕ ಜೀವನದಿಂದ ಎಡಪಂಥ ಕಾಣೆಯಾದರೆ ಅದೊಂದು ದುರಂತ. ತನ್ನ ಎಲ್ಲಾ ವಿಫಲತೆಗಳ ಹೊರತಾಗಿ ಭಾರತೀಯ ಪ್ರಜಾಪ್ರಭುತ್ವದ ಪ್ರಜಾತಾಂತ್ರಿಕ ಸ್ವರೂಪವನ್ನು ಕಾಪಾಡಿಕೊಂಡು ಬರುವಲ್ಲಿ ಎಡಪಂಥವು ನಿರ್ಣಾಯಕ ಪಾತ್ರವನ್ನು ವಹಿಸಿತ್ತು. ಅತ್ಯಂತ ಗಂಭೀರ ಪ್ರಮಾಣದ ಆರ್ಥಿಕ ಅಸಮಾನತೆಯ ಮೇಲೆ ಎಡಪಂಥದ ನಿಲುವು ನಮ್ಮ ಬಂಡವಾಳಶಾಹಿ ವ್ಯವಸ್ಥೆಯ ಭ್ರಷ್ಟಾಚಾರ ಮತ್ತು ಅಮಾನವೀಯತೆಯನ್ನು ಹದ್ದುಬಸ್ತಿನಲ್ಲಿಟ್ಟಿತ್ತು. ಪಶ್ಚಿಮ ಬಂಗಾಳದ ಎಡಪಕ್ಷದ ಆಳ್ವಿಕೆಯ ಬಗ್ಗೆ ಹೆಚ್ಚೇನೂ ಹೇಳಲಿಕ್ಕೆ ಇಲ್ಲದಿದ್ದರೂ ಕೋಮು ಗಲಭೆಗಳು ತಾಂಡವವಾಡುತ್ತಿದ್ದ ಪ್ರದೇಶದಲ್ಲಿ ಹಿಂದು-ಮುಸ್ಲಿಮ್ ಐಕ್ಯತೆಯನ್ನು ಕಾಪಾಡಿಕೊಂಡು ಬರುವಲ್ಲಿ ಅವರ ಪಾತ್ರ ಅದ್ಭುತವಾಗಿತ್ತು. ಭಾರತದ ಹಲವಾರು ಅತ್ಯುತ್ತಮ, ನಿಸ್ವಾರ್ಥ ಮತ್ತು ಆಳವಾದ ಜ್ಞಾನವಿರುವ ನಾಯಕರನ್ನು ಸೃಷ್ಟಿಸಿದಷ್ಟೇ ಅಲ್ಲದೇ, ಎಡಪಂಥವು ಅಸಂಖ್ಯಾತ ಕಲಾವಿದರು, ಕವಿಗಳು, ಲೇಖಕರು, ಶಿಕ್ಷಕರು, ಪತ್ರಕರ್ತರು, ವಿಜ್ಞಾನಿಗಳು, ಚಿಂತಕರು ಮತ್ತು ಹೋರಾಟಗಾರರನ್ನೂ ಸೃಷ್ಟಿಸಿದೆ. ಭಾರತದ ರಾಜಕೀಯ ಮತ್ತು ಭಾರತದ ಆಧುನಿಕ ಸಂಸ್ಕೃತಿ ಎಡಪಂಥ ಇಲ್ಲವಾದಲ್ಲಿ ಬಡತನವನ್ನು ಕಾಣಬೇಕಾಗುತ್ತದೆ.

ಇದೇ ಕಾರಣದಿಂದ ನಾವು ಒಂದು ಹೊಸ ಎಡಪಂಥದ ಹುಟ್ಟಿನ ಕಡೆಗೆ ನೋಡಬೇಕಿದೆ, ನಮ್ಮ ಶ್ರಮ ಹಾಕಬೇಕಿದೆ. ಎಡಪಂಥದ ಆಳವಾದ ಅರ್ಥದಲ್ಲಿ ಎಡಪಂಥ ಎಂದರೆ, ರಾಜಪ್ರಭುತ್ವ ವಿರೋಧಿ ಅಥವಾ ಸ್ಥಾಪಿತ ಹಿತಾಸಕ್ತಿ ವಿರೋಧಿ ಎಂದು ಪರಿಗಣಿಸಲಾಗಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಸಮಾನತೆಯಲ್ಲಿ ನಂಬಿಕೆಯಿಟ್ಟವರನ್ನು ಎಡಪಂಥೀಯರು ಎಂದು ಗುರುತಿಸಲಾಗಿತ್ತು, ಇದು ಎಡಪಂಥೀಯ ಅಭಿವ್ಯಕ್ತಿಯನ್ನು ರಷಿಯಾ ಕ್ರಾಂತಿಯ ನಂತರ ಕಮ್ಯುನಿಸ್ಟ್ ಎಡಪಂಥವು ಆಕ್ರಮಿಸಿಕೊಳ್ಳುವುದಕ್ಕಿಂತ ಮುಂಚೆಯ ಮಾತು. 20ನೇ ಶತಮಾನದ ಉತ್ತರಾರ್ಧದಲ್ಲಿ ಎಡಪಂಥ ಎನ್ನುವ ಲೆಬೆಲ್ ಅನ್ನು ಆಗಾಗ ಇತರೆ ಚಳವಳಿಗೆ ಮತ್ತು ರಾಜಕೀಯ ಸಾಮಾಜಿಕ ಒಲವುಗಳಿಗೂ ಬಳಸಲಾಯಿತು; ನಾಗರಿಕ ಹಕ್ಕುಗಳ ಚಳವಳಿಗಳು, ಮಹಿಳಾವಾದಿಗಳು ಹಾಗೂ ಪರಿಸರವಾದಿಗಳು. ಒಂದು ವಿಶಾಲ ಅರ್ಥದಲ್ಲಿ ಎಡ ಎಂದರೆ ಸಮಾನತೆಯ ಪರಿಕಲ್ಪನೆ, ಸಾಮಾಜಿಕ ನ್ಯಾಯ, ಎಲ್ಲರೂ ಪಾಲ್ಗೊಳ್ಳುವ ಪ್ರಜಾಪ್ರಭುತ್ವ, ಸುಸ್ಥಿರ ಪರಿಸರ ಎಂದೇ ಅರ್ಥೈಸಲಾಗುತ್ತದೆ. ಇದು ಸ್ಥಾಪಿತ ರಾಜಕೀಯ ಹಿತಾಸಕ್ತಿಗೆ, ಜಾತಿ ಶ್ರೇಣೀಕರಣಕ್ಕೆ, ಪಿತೃಪ್ರಾಧಾನ್ಯಕ್ಕೆ ಹಾಗೂ ಸಹಜವಾಗಿಯೇ ಬಂಡವಾಳಶಾಹೀ ಕ್ರಮಕ್ಕೆ ಎಡಭಾಗದಲ್ಲಿದ್ದು ಮತ್ತು ಅವೆಲ್ಲವುಗಳಿಗೆ ವಿರುದ್ಧವಾಗಿದೆ.

ಎಡಪಂಥದ ಈ ರೀತಿ ಮರುವ್ಯಾಖ್ಯಾನ ಮಾಡುವುದಕ್ಕೆ ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಅತ್ಯಂತ ಶ್ರೀಮಂತ ಬೌದ್ಧಿಕ ಹಾಗೂ ರಾಜಕೀಯ ಪರಂಪರೆ ಇದೆ. ಈ ಅರ್ಥದಲ್ಲಿ ಭಾರತೀಯ ಸಂವಿಧಾನದ ಪ್ರಸ್ತಾವನೆ (ಪ್ರಿಆ್ಯಂಬಲ್) ಎಡಪಂಥೀಯವಾಗಿದೆ. ಭಾರತೀಯ ಸಮಾಜವಾದಿ ಪರಂಪರೆ-ಕಮ್ಯುನಿಸ್ಟರಲ್ಲದ ಪ್ರಜಾತಾಂತ್ರಿಕ ಸಮಾಜವಾದಿಗಳಾದ ನರೇಂದ್ರ ದೇವ, ಜಯಪ್ರಕಾಶ್ ನಾರಾಯಣ ಹಾಗೂ ರಾಮಮನೋಹರ ಲೋಹಿಯಾ ಅವರುಗಳು ಹೊಸ ಎಡಪಂಥಕ್ಕೆ ವಿಚಾರಗಳ, ಪರಿಕಲ್ಪನೆಗಳ ಸಿದ್ಧ ಸಂಗ್ರಹವನ್ನೇ ನೀಡುತ್ತಾರೆ. ಅವರ ರಾಜಕೀಯ ಪರಂಪರೆ- ಜನತಾ ಕುಟುಂಬದ ಅನೇಕ ಬಣಗಳು ಇಂದು ಆಕರ್ಷಕವಾಗಿ ಉಳಿದಿಲ್ಲ. ಆದರೆ ಈ ಕೊರತೆಯನ್ನು ಬೇರೆ ಬೇರೆ ಬಣ್ಣಗಳ, ಒಲವುಗಳ ಜನರ ಚಳವಳಿಗಳು ನೀಗಿಸಬಹುದು; ಆಹಾರ, ಶಿಕ್ಷಣ, ಮಾಹಿತಿ ಮತ್ತು ಜೀವನೋಪಾಯದ ಹಕ್ಕಿಗಾಗಿ ನಡೆಸುವ ಚಳವಳಿಗಳಿಂದ ಜೆಂಡರ್ (ಲಿಂಗ) ಸಮಾನತೆ ಮತ್ತು ಜಾತಿ ಸಮಾನತೆಗಾಗಿ ನಡೆಸುವ ಚಳವಳಿಗಳು ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ನಡೆಸುವ ಚಳವಳಿಗಳು. ಈ ಚಳವಳಿಗಳು ಮತ್ತು ಹೋರಾಟಗಾರರು ಹಲವಾರು ಸಿದ್ಧಾಂತಗಳಿಂದ ಪಡೆದುಕೊಂಡಿದ್ದಾರೆ; ಪರಿಸರವಾದ, ಮಹಿಳಾವಾದ, ಸಮಾಜವಾದ, ಮಾಕ್ರ್ಸ್‍ವಾದ, ಫುಲೆ-ಅಂಬೇಡ್ಕರ್‍ವಾದ, ಗಾಂಧೀವಾದ ಹಾಗೂ ಇನ್ನಿತರ ಸಿದ್ಧಾಂತಗಳು. ಇವರಿಗೆ ವಿವಿಧ ರಾಜಕೀಯ ಒಲವುಗಳಿವೆ. ಈ ಗುಂಪುಗಳಲ್ಲಿಯ ಹೆಚ್ಚಿನ ಚಿಂತಕರು ಸಾಂಪ್ರದಾಯಿಕ ಎಡಪಂಥದ ಹಲವಾರು ಕವಲುಗಳಿಂದ ಬಂದಿರುವರಾಗಿದ್ದಾರೆ. ತಮ್ಮಷ್ಟಕ್ಕೇ ತಾವೇ ಇವರಲ್ಲಿ ಯಾರೂ ಒಂದು ಹೊಸ ಎಡವನ್ನು ಸೃಷ್ಟಿಸುವ ಸಾಮಥ್ರ್ಯವನ್ನು ಹೊಂದಿಲ್ಲ. ಆದರೆ ಅವರನ್ನು ಒಂದೆಡೆಗೆ ಸೇರಿಸಿದರೆ, ಸದ್ಯದ ಸಮಯದ ಅತ್ಯಂತ ಶಕ್ತಿಶಾಲಿಯಾದ ಪರಿಕಲ್ಪನೆಗಳು, ಕಾರ್ಯಕ್ರಮಗಳು ಹಾಗೂ ಹೋರಾಟಗಾರರನ್ನು ಹೊಂದಿದಂತಾಗುತ್ತದೆ.

ಒಂದು ಹೊಸ ಎಡ ಸೃಷ್ಟಿಯಾಗಬೇಕಾದರೆ, ಹಳೆಯ ಎಡದಿಂದ ಉಳಿದುಕೊಂಡಿರುವ ಅಮೂಲ್ಯ ಅವಶೇಷಗಳ ಮೊತ್ತವಾದರೆ ಆಗದು. ಅಂತಹ ಒಂದು ಐಕ್ಯತೆ ಅವಶ್ಯಕವಾದರೂ ಅದು ಸಾಕಾಗುವುದಿಲ್ಲ. ಹೊಚ್ಚಹೊಸದಾಗಿ ಯೋಚಿಸಲು, ಒಂದು ನ್ಯಾಯಯುತ ಮತ್ತು ಸಮಾನತೆಯ ಸಮಾಜವನ್ನು ಹೇಗೆ ಸೃಷ್ಟಿಸಬೇಕು ಎನ್ನುವ ಹಳೆಯ ಪರಿಕಲ್ಪನೆಗಳನ್ನು ತ್ಯಜಿಸಲು ಧೈರ್ಯ ಬೇಕು, ಹೊಸ ನೀತಿಗಳನ್ನು, ತಂತ್ರಗಾರಿಕೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಹಾಗೂ ಹೊಸ ಭಾಷೆಯನ್ನು ಮಾತನಾಡಲು ಧೈರ್ಯ ಬೇಕು. ಇದರರ್ಥ ಹೊಸ ಹೆಸರುಗಳೆಂತಲೂ ಆಗಬಹುದು.
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...