Homeಚಳವಳಿಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ಚಂಪಾರವರಿಗೆ 70 ವರ್ಷ ತುಂಬಿದ ಸಂದರ್ಭದಲ್ಲಿ ಬಿ.ಚಂದ್ರೇಗೌಡರು ಬರೆದ ಯಾಹೂ ಲೇಖನ

- Advertisement -
- Advertisement -

ಚಂಪಾರಿಗೆ ಎಪ್ಪತ್ತು! ನಂಬುವುದೇ ಕಷ್ಟ. ಅವರ ಬಂಡಾಯ, ಕಿಲಾಡಿ ಮತ್ತು ಕಿಡಿಗೇಡಿತನಕ್ಕೆ ಎಪ್ಪತ್ತು  ತುಂಬಲು ಸಾಧ್ಯವಿಲ್ಲ, ಅದು ಬಂಡಾಯ ಮತ್ತು ನವ್ಯದ ನಡುಕಾಲದಲ್ಲೇ ನಿಂತಿರಬೇಕು ಅನ್ನಿಸಿತು. ಆದರೂ ಅವರನ್ನು ಮಾತನಾಡಿಸಿ ಒಂದು ಹಾರೈಕೆ ಮಾತೇಳುವುದು ನಮ್ಮ ಕರ್ತವ್ಯವಲ್ಲವೆ. ಫೋನ್  ಮಾಡಿದ್ರೆ ಸಿಕ್ಕೇಬಿಟ್ರು.

“ಹಲೋ ನಮಸ್ಕಾರ ಸಾರ್, ನಾನು ಯಾಹೂ”

“ಯಾಹು ಅಂದ್ರ ಗೌರಿ ಲಂಕೇಶದಾಗ ಬರೀತಿರಲ್ಲಿ ಅವರ ಹೌದಲ್ಲೋ ?

“ಹೌದು ಸಾರ್”.

“ನಿಮ್ಮ ಹೆಸರೇನ್ರಿ ?”

“ಯಾಹೂ ಅಂತ ಸಾರ್ ?

“ಅದು ಖರೇರಿ, ತಂದಿ ತಾಯಿ ಇಟ್ಟ ಹೆಸರಿಲ್ಲೇನು ?”

“ಅದು ಕರಿಯಕ್ಕೆ ಚನ್ನಾಗಿಲ್ಲ ಅಂತ ಗೌರಿಮೇಡಂ ಯಾಹೂ ಅಂತ ಇಟ್ಟವರೆ ಸಾ”,

“ಅಂಗೆನ ಯದಕ ಫೋನ್ ಮಾಡಿದಿರಿ ಹೇಳ್ರಲ್ಲ ?”

“ಯಪ್ಪತ್ತು ವರ್ಸಾಯ್ತಂತಲ್ಲ ಸಾರ್ ನಿಮಗೆ ?”

 “ಅನಂತಮೂರ್ತಿಗಾಗ್ಲೆ ಎಪ್ಪತ್ತಾರಾತು ಗೊತ್ತೇನ ?”

“ಅವು ಎಪ್ಪತ್ತಾರಕ್ಕಿಂತ್ಲೂ ಜಾಸ್ತಿಯಾದಂಗೆ ಕಣ್ತಾರೆ. ಆದ್ರೆ ನೀವು ಮಾತ್ರ ಇನ್ನು ಐವತ್ತಾರು ವರ್ಷದಂಗೆ ಕಾಣ್ತೀರಿ. ಇದರ ಗುಟ್ಟೇನು ಸಾರ್ ?

“ಇದರಾಗ ಗುಟ್ಟೇನು ಬಂತ್ರಿ, ನನ್ನ ಮಾತುಕತಿ, ಬರವಣಿಗೆ, ನಡವಳಿಕೆ ಇವೇನದಾವು ಇವುಕೂ, ನನ್ನ ವಯಸಿಗೂ ಸಂಬಂದಿಲ್ಲ, ನಮ್ಮ ದೇಶದಾಗ ಒಂದೊಂದು ವಯೋಮಾನಕ್ಕೆ ಒಂದೊಂದು ನಡವಳಿಕೆ ಇರಾಕೆ ಬೇಕು ಅಂತ ಹೇಳಿ ನಿಯಮ ಮಾಡ್ಕಾರ, ಅದನ್ನ ಮುರಕೊಂಡ ಹೋದ್ರೆ ನಾವು ಅರಾಮಿರತೇವಿ, ಅಷ್ಟ”.

“ನೀವೀಗ ಯಾವುದನ್ನು ಮುರದಿದ್ದಿರಿ ಸಾರ್ ?”

“ಅರವತ್ತರ ಅರಳುಮರಳು ಮುರುದು ಹತ್ತು ವರ್ಸಾತು”

“ಈ ಎಪ್ಪತ್ತು ವರ್ಷದಲ್ಲಿ ಹಿಂತಿರುಗಿ ನೋಡಿದ್ರೆ ಏನನಸ್ತದೆ ಸಾರ್ ?

“ಭಾಳ ಮಂದಿ ಸಾವಿಗೆ ಸಂತಾಪ ಬರದೇನಿ, ಇನ್ನ ರಗಡ ಮಂದಿಗೆ ಬರಿಬೇಕಲ್ಲಪ್ಪಾ ಅನಸತೈತಿ.”

“ನೀವು ಸಂತಾಪ ಬರಿಯೋ ಮಂದಿ ಬಹಳ ಜನ ಉಳಿದಿಲ್ಲವಲ್ಲ ಸಾರ್ ?”

“ಏ, ಭಾಳ ಮಂದ್ಯದಾರ, ಪುರೋಹಿತರ ಪೈಕಿನ ಒಂದು ಡಜನ್ ಅದಾರ, ರಾಜಕಾರಣದಾಗ ಮೂರು ನಾಕು ಮಂದಿ ಆದಾರ, ಸಾಹಿತ್ಯ ಲೋಕದಾಗ ಆಯಸ್ಸು ಮುಗಿಸಿ ಹೋಗೋ ಮಂದಿಗಿಂತ ಲಬಕ್ಕನ ಹೋಗೋ ಮಂದಿ ಭಾಳದಾರ”.

“ಅದರಲ್ಲೂ ಬಂಡಾಯದೋರು ಬೇಗ ಹೋಗ್ತರಲ್ಲ ಸಾರ್ ?”

“ಹೌದ್ರಿ,  ನವೋದಯದವರು ಪಿಂಚಣಿ ತೊಗಂಡು ಆರಾಮವಾಗಿದ್ದಾರ. ನವ್ಯದವರು, ಬಂಡಾಯದವರು ಕೂಡೇ ಹೊಂಟ ಹೋದರ್‍ರಿ”.

“ಸಾಹಿತ್ಯ ಲೋಕದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಅಂತ ಕೆಲವು ಕಾಲಘಟ್ಟಗಳವಲ್ಲಾ ಸಾರ್, ನಿಮ್ಮ ಬರವಣಿಗೆ ಹೋರಾಟ, ಯಾವ ಘಟ್ಟದಲ್ಲಿ ತೀವ್ರವಾಗಿತ್ತು ಸಾರ್.

“ನೋಡಿ ಇವರೆ, ನಾವು ಯಾವ ಕಾಲಘಟ್ಟದಾಗೂ ಎರಡೂ ಕಾಲಿಟ್ಟವರಲ್ಲ. ಒಂದೊಂದೇ ಕಾಲಿಟ್ಟು ಹಿಂದ ತಗದೇವಿ”.

“ಯಾಕ್ ಸರ್ ?”

“ಯಾಕ್ ಅಂದ್ರ, ಒಂದು ಲೇಬಲ್ ಹಚಗೊಂಡು ಬರಿಯೂದಂದ್ರ ನನಗಾಗುದಿಲ್ರಿ,

ಮೊದಲಿಕ್ಕ ನವೋದಯದವರು ಬರಿಯಕ್ಕತ್ತಿದ್ರು. ಅವುರಿಗೆ ಆಗ ಲೇಬಲ್ ಇರಲಿಲ್ಲ. ಈ ನಮ್ಮ ಪಿತಾಮಹರಿಗೆ ಯಂಗೋ ಏನೋ ನವೋದಯದವರು ಅನ್ನೋ ಲೇಬಲ್ ಸಿಕ್ಕು ‘ಏ ನಮಗ ಲೇಬಲ್ ಸಿಕ್ತು’ ಅಂತೇಳಿ ಬರದು ಬರೆದು ಸುಸ್ತಾದರ್‍ರಿ.”

“ಆದ್ರು ಇವತ್ತಿಗೂ ಅವರನ್ನ ಓದಬವುದಲ್ಲ ಸಾರ್”…?

“ಕೆಲವು ಮಂದಿನ್ನ ಓದಬವುದು ಅಷ್ಟರಿ, ಇನ್ನ ಕೆಲವು ಮಂದಿ ಪುಸ್ತಕ ತೊಗಂಡು ಸಂತಾಪ ಸೂಚನೆ ಮಾಡಿ ಮುಂದೆ ಹೋಗಬಹುದು”.

“ಆ ತರ ಬರದಿರೋರು ಪ್ರಗತಿಶೀಲರಲ್ಲವ ಸಾರ್ ?”

“ಪ್ರಗತಿಶೀಲರು ಬರಕೊಂಡ್ ಬದುತ್ತೇವಿ ಅಂತ ಹೊಂಟರ್‍ರಿ. ಅದಕ ಅಂಗ ಬರದಾರ, ಪಾಪ ಮೊದಲಕ್ಕ ತಮ್ಮ ಸುತ್ತಮುತ್ತ ಕಾಣೋ ಸಮಾಜ ಕುರುತು ಬರದ್ರು. ಅದು ಖಾಲಿ ಆತು. ಅನಂತರ ಗಟಾರ ಜೀವನ ಬರಿಬೇಕು ಅಂತ ಹೊಂಟರ್‍ರಿ, ಅನುಭವದ ಸಲುವಾಗಿ ಗಟಾರಕ್ಕೋದ್ರು, ವಳ್ಳಿ ಬರಲಿಲ್ಲವರು. ‘ಏ ಇಲ್ಲಿ ಭಾಳ ಅರಾಮೈತ’ ಅಂತ ಅಲ್ಲೇ ಉಳುದ್ರು. “ಅಲ್ಲಿಂದ ಅಂಗೇ ಹೊಂಟೋದರಲ್ಲ?”

“ಹೌದ್ರಿ, ಇನ್ನ ನವ್ಯದವರಿಗೆ ಅನಾಥ ಪ್ರಜ್ಞೆ ಅಮರಿಕೊಂಡು ಏನು ನೋಡಿದ್ರೂ ಚಂದ ಕಾಣಿರಲಿಲ್ಲ ಅವರಿಗೆ. ಆದ್ರಿಂದ ಒಳಗೋದ್ರು. ವಳ್ಳಿ ಬರಲಿಲ್ಲವರು. ನಾವೊಂದಿಷ್ಟು ಮಂದಿ ಹೊರಬಂದು ಬಂಡಾಯದ ಕಡೆ ಹೊಂಟವಿ”.

“ಅಂಗಾದ್ರೆ ನಿಮ್ಮ ಬಂಡಾಯ ಮಧ್ಯಂತರದ್ದ ಸಾರ್ ?”

“ಇಲ್ರೀ, ಬಂಡಾಯ ನನ್ನ ಮನೋಧರ್ಮ, ನಾ ಪೆನ್ನ ತೊಗಂಡ ಕೂಡಲೇ ಹೊರಬಂದಿದ್ದೇ ಬಂಡಾಯ, ಧಾರವಾಡದಾಗ ಬೇಂದ್ರೆ, ಜೋಶಿ ಮತ್ತವರ ಬಳಗ, ಅನಂತರ ಸಿ.ಪ. ಶೆಟ್ಟಿ, ಗಿರಡ್ಡಿ, ಮಾಕು, ದೇಕು, ಗೋಕಾಕ್ ಇವರ ವಿರುದ್ಧ ನನ್ನ ಬಂಡಾಯ ಎಂದೂ ಇದ್ದದ್ದೆ. ಅದಕ ನೋಡ್ರಿ ಎಮರ್ಜೆನ್ಸಿಲಿ ನಾ ಒಬ್ಬವನೇ ಜೇಲಿಗೆ ಹೋದದ್ದು “.

“ಆಗ ಇಡೀ ಧಾರವಾಡ ಖುಷಿಪಡ್ತಾಂತಲ್ಲಾ ಸಾರ್?”

“ನಾ ಹೊರಬಂದಾಗ ಅಷ್ಟೇ ಬೇಸರಾತು ಅವರಿಗೆ”.

“ಜೈಲಲ್ಲಿ ನೀವು ಆರೆಸೆನ್ಸಿನವರ ಜೊತೆಗಿದ್ರಂತೆ ?”

“ಜೈಲಂದ್ರ ಮುಗಿತಲ್ರೀ ಅದು ಪಬ್ಲಿಕ್ ಪಡಖಾನಿ ಇದ್ದಂಗ, ಅಲ್ಲಿಗೆ ದರವೊಬ್ಬರೂ ಬರತಾರ, ಅಂಗ ಚೆಡ್ಡಿ ಹುಡ್ರು ಬಂದಿದ್ದು, ಕೆಲವುರು ನಾ ಆರೆಸ್ಸೆಸ್ಸಲ್ಲ ಅಂತ ಅಳಾಕತ್ತಿದ್ರು.”

“ಆದ್ರಿವತ್ತು ಯಂಗೆ ನಗ್ತಾರೆ ನೋಡಿ ಸಾರ್”

“ಇಲ್ಲಿ ಯಾರ ನಗೂನೂ ಶಾಶ್ವತ ಅಲ್ಲರೀ. ಒಂದು ಕಾಲಕ್ಕೆ ಕಾಂಗ್ರೆಸ್‌ನವರು ಅಂದ್ರೆ ಮಂದಿ ಹೆದರುತಿದ್ದರು. ಆದ್ರ ಇವತ್ತು ಕಾಂಗ್ರೆಸ್ಸಿನವರು ಅಂದ್ರೆ ಒಂದೀಟು ಡುಬ್ಬು ಕೆರೆದು ಹೋಕ್ಯೇನಾ ಅನ್ನಂಗಾಗೇರೆ. ಅಂಗ ಈ ಚೆಡ್ಡಿಗಳ ನಗು ಎಡೂರಪ್ಪ ಲಗಾಟ ಹೊಡೆದ ನಂತರ ಹಿಂಗೇ ಇರುತ್ತೆ ಅಂತ ಹೇಳಾಕ ಬರೂದಿಲ್ಲ”.

“ಇದೊಂತರ ಹತಾಶೆ ಮುಚ್ಚಿಡೋ ಅಭಿಪ್ರಾಯದಂಗೆ ಇದೆಯಲ್ಲ ಸಾರ್”.

“ಹತಾಶ ಅನ್ನದು ನನ್ನ ಸನೇಕ ಸುಳೆದಿಲ್ಲರಿ. ಹತಾಶ ಏನಾರ ನನಗೆ ಇದ್ದಿದ್ರೆ ನನ್ನ ಅರವತ್ತನೇ ವರ್ಷದ ಅದ್ದೂರಿಯಿಂದೆ ಆಚರಿಸೊ ಏರ್ಪಾಡು ಮಾಡತಿದ್ವೆ. “

“ಹೌದ ಸಾರ್?”

“ಹೌದ್ರಿ, ನನಗೆ ಕೆಲವರ ನೋಡಿದ ಕೂಡ್ಳೆ ಬ್ಯಾಟ್ರಿ ಚಾರ್ಜಾಕ್ಕಿತಿ. ಚಡ್ಡಿಗಳ ನೋಡಿದ್ರೆ, ಪುರೋಹಿತರ ನೋಡಿದ್ರೆ, ಪೊಲೀಸರ ನೋಡಿದ್ರೆ, ಇನ್ನು ಕೆಲವರದಾರ ಅವರನ್ನ ನೋಡಿದ್ರೆ, ಅವರ ಬರದದ್ದನ್ನ ಓದಿದ್ರೆ ನನ್ನ ಬ್ಯಾಟರಿ ಚಾರ್ಜ್ ! ಅದಕ ನೋಡ್ರಿ ನನಗೆ ಎಪ್ಪತ್ತಾದದ್ದು ನನಗೇ ಗುರುತಾಗಲಿಲ್ಲ”.

  • ಬಿ. ಚಂದ್ರೇಗೌಡ

(ಚಂಪಾರವರಿಗೆ 70 ವರ್ಷ ತುಂಬಿದ ಸಂದರ್ಭದಲ್ಲಿ ಬಿ.ಚಂದ್ರೇಗೌಡರು ಬರೆದ ಯಾಹೂ ಲೇಖನ)


ಇದನ್ನೂ ಓದಿ; ಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...