Homeಚಳವಳಿಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ಚಂಪಾರವರಿಗೆ 70 ವರ್ಷ ತುಂಬಿದ ಸಂದರ್ಭದಲ್ಲಿ ಬಿ.ಚಂದ್ರೇಗೌಡರು ಬರೆದ ಯಾಹೂ ಲೇಖನ

- Advertisement -
- Advertisement -

ಚಂಪಾರಿಗೆ ಎಪ್ಪತ್ತು! ನಂಬುವುದೇ ಕಷ್ಟ. ಅವರ ಬಂಡಾಯ, ಕಿಲಾಡಿ ಮತ್ತು ಕಿಡಿಗೇಡಿತನಕ್ಕೆ ಎಪ್ಪತ್ತು  ತುಂಬಲು ಸಾಧ್ಯವಿಲ್ಲ, ಅದು ಬಂಡಾಯ ಮತ್ತು ನವ್ಯದ ನಡುಕಾಲದಲ್ಲೇ ನಿಂತಿರಬೇಕು ಅನ್ನಿಸಿತು. ಆದರೂ ಅವರನ್ನು ಮಾತನಾಡಿಸಿ ಒಂದು ಹಾರೈಕೆ ಮಾತೇಳುವುದು ನಮ್ಮ ಕರ್ತವ್ಯವಲ್ಲವೆ. ಫೋನ್  ಮಾಡಿದ್ರೆ ಸಿಕ್ಕೇಬಿಟ್ರು.

“ಹಲೋ ನಮಸ್ಕಾರ ಸಾರ್, ನಾನು ಯಾಹೂ”

“ಯಾಹು ಅಂದ್ರ ಗೌರಿ ಲಂಕೇಶದಾಗ ಬರೀತಿರಲ್ಲಿ ಅವರ ಹೌದಲ್ಲೋ ?

“ಹೌದು ಸಾರ್”.

“ನಿಮ್ಮ ಹೆಸರೇನ್ರಿ ?”

“ಯಾಹೂ ಅಂತ ಸಾರ್ ?

“ಅದು ಖರೇರಿ, ತಂದಿ ತಾಯಿ ಇಟ್ಟ ಹೆಸರಿಲ್ಲೇನು ?”

“ಅದು ಕರಿಯಕ್ಕೆ ಚನ್ನಾಗಿಲ್ಲ ಅಂತ ಗೌರಿಮೇಡಂ ಯಾಹೂ ಅಂತ ಇಟ್ಟವರೆ ಸಾ”,

“ಅಂಗೆನ ಯದಕ ಫೋನ್ ಮಾಡಿದಿರಿ ಹೇಳ್ರಲ್ಲ ?”

“ಯಪ್ಪತ್ತು ವರ್ಸಾಯ್ತಂತಲ್ಲ ಸಾರ್ ನಿಮಗೆ ?”

 “ಅನಂತಮೂರ್ತಿಗಾಗ್ಲೆ ಎಪ್ಪತ್ತಾರಾತು ಗೊತ್ತೇನ ?”

“ಅವು ಎಪ್ಪತ್ತಾರಕ್ಕಿಂತ್ಲೂ ಜಾಸ್ತಿಯಾದಂಗೆ ಕಣ್ತಾರೆ. ಆದ್ರೆ ನೀವು ಮಾತ್ರ ಇನ್ನು ಐವತ್ತಾರು ವರ್ಷದಂಗೆ ಕಾಣ್ತೀರಿ. ಇದರ ಗುಟ್ಟೇನು ಸಾರ್ ?

“ಇದರಾಗ ಗುಟ್ಟೇನು ಬಂತ್ರಿ, ನನ್ನ ಮಾತುಕತಿ, ಬರವಣಿಗೆ, ನಡವಳಿಕೆ ಇವೇನದಾವು ಇವುಕೂ, ನನ್ನ ವಯಸಿಗೂ ಸಂಬಂದಿಲ್ಲ, ನಮ್ಮ ದೇಶದಾಗ ಒಂದೊಂದು ವಯೋಮಾನಕ್ಕೆ ಒಂದೊಂದು ನಡವಳಿಕೆ ಇರಾಕೆ ಬೇಕು ಅಂತ ಹೇಳಿ ನಿಯಮ ಮಾಡ್ಕಾರ, ಅದನ್ನ ಮುರಕೊಂಡ ಹೋದ್ರೆ ನಾವು ಅರಾಮಿರತೇವಿ, ಅಷ್ಟ”.

“ನೀವೀಗ ಯಾವುದನ್ನು ಮುರದಿದ್ದಿರಿ ಸಾರ್ ?”

“ಅರವತ್ತರ ಅರಳುಮರಳು ಮುರುದು ಹತ್ತು ವರ್ಸಾತು”

“ಈ ಎಪ್ಪತ್ತು ವರ್ಷದಲ್ಲಿ ಹಿಂತಿರುಗಿ ನೋಡಿದ್ರೆ ಏನನಸ್ತದೆ ಸಾರ್ ?

“ಭಾಳ ಮಂದಿ ಸಾವಿಗೆ ಸಂತಾಪ ಬರದೇನಿ, ಇನ್ನ ರಗಡ ಮಂದಿಗೆ ಬರಿಬೇಕಲ್ಲಪ್ಪಾ ಅನಸತೈತಿ.”

“ನೀವು ಸಂತಾಪ ಬರಿಯೋ ಮಂದಿ ಬಹಳ ಜನ ಉಳಿದಿಲ್ಲವಲ್ಲ ಸಾರ್ ?”

“ಏ, ಭಾಳ ಮಂದ್ಯದಾರ, ಪುರೋಹಿತರ ಪೈಕಿನ ಒಂದು ಡಜನ್ ಅದಾರ, ರಾಜಕಾರಣದಾಗ ಮೂರು ನಾಕು ಮಂದಿ ಆದಾರ, ಸಾಹಿತ್ಯ ಲೋಕದಾಗ ಆಯಸ್ಸು ಮುಗಿಸಿ ಹೋಗೋ ಮಂದಿಗಿಂತ ಲಬಕ್ಕನ ಹೋಗೋ ಮಂದಿ ಭಾಳದಾರ”.

“ಅದರಲ್ಲೂ ಬಂಡಾಯದೋರು ಬೇಗ ಹೋಗ್ತರಲ್ಲ ಸಾರ್ ?”

“ಹೌದ್ರಿ,  ನವೋದಯದವರು ಪಿಂಚಣಿ ತೊಗಂಡು ಆರಾಮವಾಗಿದ್ದಾರ. ನವ್ಯದವರು, ಬಂಡಾಯದವರು ಕೂಡೇ ಹೊಂಟ ಹೋದರ್‍ರಿ”.

“ಸಾಹಿತ್ಯ ಲೋಕದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಅಂತ ಕೆಲವು ಕಾಲಘಟ್ಟಗಳವಲ್ಲಾ ಸಾರ್, ನಿಮ್ಮ ಬರವಣಿಗೆ ಹೋರಾಟ, ಯಾವ ಘಟ್ಟದಲ್ಲಿ ತೀವ್ರವಾಗಿತ್ತು ಸಾರ್.

“ನೋಡಿ ಇವರೆ, ನಾವು ಯಾವ ಕಾಲಘಟ್ಟದಾಗೂ ಎರಡೂ ಕಾಲಿಟ್ಟವರಲ್ಲ. ಒಂದೊಂದೇ ಕಾಲಿಟ್ಟು ಹಿಂದ ತಗದೇವಿ”.

“ಯಾಕ್ ಸರ್ ?”

“ಯಾಕ್ ಅಂದ್ರ, ಒಂದು ಲೇಬಲ್ ಹಚಗೊಂಡು ಬರಿಯೂದಂದ್ರ ನನಗಾಗುದಿಲ್ರಿ,

ಮೊದಲಿಕ್ಕ ನವೋದಯದವರು ಬರಿಯಕ್ಕತ್ತಿದ್ರು. ಅವುರಿಗೆ ಆಗ ಲೇಬಲ್ ಇರಲಿಲ್ಲ. ಈ ನಮ್ಮ ಪಿತಾಮಹರಿಗೆ ಯಂಗೋ ಏನೋ ನವೋದಯದವರು ಅನ್ನೋ ಲೇಬಲ್ ಸಿಕ್ಕು ‘ಏ ನಮಗ ಲೇಬಲ್ ಸಿಕ್ತು’ ಅಂತೇಳಿ ಬರದು ಬರೆದು ಸುಸ್ತಾದರ್‍ರಿ.”

“ಆದ್ರು ಇವತ್ತಿಗೂ ಅವರನ್ನ ಓದಬವುದಲ್ಲ ಸಾರ್”…?

“ಕೆಲವು ಮಂದಿನ್ನ ಓದಬವುದು ಅಷ್ಟರಿ, ಇನ್ನ ಕೆಲವು ಮಂದಿ ಪುಸ್ತಕ ತೊಗಂಡು ಸಂತಾಪ ಸೂಚನೆ ಮಾಡಿ ಮುಂದೆ ಹೋಗಬಹುದು”.

“ಆ ತರ ಬರದಿರೋರು ಪ್ರಗತಿಶೀಲರಲ್ಲವ ಸಾರ್ ?”

“ಪ್ರಗತಿಶೀಲರು ಬರಕೊಂಡ್ ಬದುತ್ತೇವಿ ಅಂತ ಹೊಂಟರ್‍ರಿ. ಅದಕ ಅಂಗ ಬರದಾರ, ಪಾಪ ಮೊದಲಕ್ಕ ತಮ್ಮ ಸುತ್ತಮುತ್ತ ಕಾಣೋ ಸಮಾಜ ಕುರುತು ಬರದ್ರು. ಅದು ಖಾಲಿ ಆತು. ಅನಂತರ ಗಟಾರ ಜೀವನ ಬರಿಬೇಕು ಅಂತ ಹೊಂಟರ್‍ರಿ, ಅನುಭವದ ಸಲುವಾಗಿ ಗಟಾರಕ್ಕೋದ್ರು, ವಳ್ಳಿ ಬರಲಿಲ್ಲವರು. ‘ಏ ಇಲ್ಲಿ ಭಾಳ ಅರಾಮೈತ’ ಅಂತ ಅಲ್ಲೇ ಉಳುದ್ರು. “ಅಲ್ಲಿಂದ ಅಂಗೇ ಹೊಂಟೋದರಲ್ಲ?”

“ಹೌದ್ರಿ, ಇನ್ನ ನವ್ಯದವರಿಗೆ ಅನಾಥ ಪ್ರಜ್ಞೆ ಅಮರಿಕೊಂಡು ಏನು ನೋಡಿದ್ರೂ ಚಂದ ಕಾಣಿರಲಿಲ್ಲ ಅವರಿಗೆ. ಆದ್ರಿಂದ ಒಳಗೋದ್ರು. ವಳ್ಳಿ ಬರಲಿಲ್ಲವರು. ನಾವೊಂದಿಷ್ಟು ಮಂದಿ ಹೊರಬಂದು ಬಂಡಾಯದ ಕಡೆ ಹೊಂಟವಿ”.

“ಅಂಗಾದ್ರೆ ನಿಮ್ಮ ಬಂಡಾಯ ಮಧ್ಯಂತರದ್ದ ಸಾರ್ ?”

“ಇಲ್ರೀ, ಬಂಡಾಯ ನನ್ನ ಮನೋಧರ್ಮ, ನಾ ಪೆನ್ನ ತೊಗಂಡ ಕೂಡಲೇ ಹೊರಬಂದಿದ್ದೇ ಬಂಡಾಯ, ಧಾರವಾಡದಾಗ ಬೇಂದ್ರೆ, ಜೋಶಿ ಮತ್ತವರ ಬಳಗ, ಅನಂತರ ಸಿ.ಪ. ಶೆಟ್ಟಿ, ಗಿರಡ್ಡಿ, ಮಾಕು, ದೇಕು, ಗೋಕಾಕ್ ಇವರ ವಿರುದ್ಧ ನನ್ನ ಬಂಡಾಯ ಎಂದೂ ಇದ್ದದ್ದೆ. ಅದಕ ನೋಡ್ರಿ ಎಮರ್ಜೆನ್ಸಿಲಿ ನಾ ಒಬ್ಬವನೇ ಜೇಲಿಗೆ ಹೋದದ್ದು “.

“ಆಗ ಇಡೀ ಧಾರವಾಡ ಖುಷಿಪಡ್ತಾಂತಲ್ಲಾ ಸಾರ್?”

“ನಾ ಹೊರಬಂದಾಗ ಅಷ್ಟೇ ಬೇಸರಾತು ಅವರಿಗೆ”.

“ಜೈಲಲ್ಲಿ ನೀವು ಆರೆಸೆನ್ಸಿನವರ ಜೊತೆಗಿದ್ರಂತೆ ?”

“ಜೈಲಂದ್ರ ಮುಗಿತಲ್ರೀ ಅದು ಪಬ್ಲಿಕ್ ಪಡಖಾನಿ ಇದ್ದಂಗ, ಅಲ್ಲಿಗೆ ದರವೊಬ್ಬರೂ ಬರತಾರ, ಅಂಗ ಚೆಡ್ಡಿ ಹುಡ್ರು ಬಂದಿದ್ದು, ಕೆಲವುರು ನಾ ಆರೆಸ್ಸೆಸ್ಸಲ್ಲ ಅಂತ ಅಳಾಕತ್ತಿದ್ರು.”

“ಆದ್ರಿವತ್ತು ಯಂಗೆ ನಗ್ತಾರೆ ನೋಡಿ ಸಾರ್”

“ಇಲ್ಲಿ ಯಾರ ನಗೂನೂ ಶಾಶ್ವತ ಅಲ್ಲರೀ. ಒಂದು ಕಾಲಕ್ಕೆ ಕಾಂಗ್ರೆಸ್‌ನವರು ಅಂದ್ರೆ ಮಂದಿ ಹೆದರುತಿದ್ದರು. ಆದ್ರ ಇವತ್ತು ಕಾಂಗ್ರೆಸ್ಸಿನವರು ಅಂದ್ರೆ ಒಂದೀಟು ಡುಬ್ಬು ಕೆರೆದು ಹೋಕ್ಯೇನಾ ಅನ್ನಂಗಾಗೇರೆ. ಅಂಗ ಈ ಚೆಡ್ಡಿಗಳ ನಗು ಎಡೂರಪ್ಪ ಲಗಾಟ ಹೊಡೆದ ನಂತರ ಹಿಂಗೇ ಇರುತ್ತೆ ಅಂತ ಹೇಳಾಕ ಬರೂದಿಲ್ಲ”.

“ಇದೊಂತರ ಹತಾಶೆ ಮುಚ್ಚಿಡೋ ಅಭಿಪ್ರಾಯದಂಗೆ ಇದೆಯಲ್ಲ ಸಾರ್”.

“ಹತಾಶ ಅನ್ನದು ನನ್ನ ಸನೇಕ ಸುಳೆದಿಲ್ಲರಿ. ಹತಾಶ ಏನಾರ ನನಗೆ ಇದ್ದಿದ್ರೆ ನನ್ನ ಅರವತ್ತನೇ ವರ್ಷದ ಅದ್ದೂರಿಯಿಂದೆ ಆಚರಿಸೊ ಏರ್ಪಾಡು ಮಾಡತಿದ್ವೆ. “

“ಹೌದ ಸಾರ್?”

“ಹೌದ್ರಿ, ನನಗೆ ಕೆಲವರ ನೋಡಿದ ಕೂಡ್ಳೆ ಬ್ಯಾಟ್ರಿ ಚಾರ್ಜಾಕ್ಕಿತಿ. ಚಡ್ಡಿಗಳ ನೋಡಿದ್ರೆ, ಪುರೋಹಿತರ ನೋಡಿದ್ರೆ, ಪೊಲೀಸರ ನೋಡಿದ್ರೆ, ಇನ್ನು ಕೆಲವರದಾರ ಅವರನ್ನ ನೋಡಿದ್ರೆ, ಅವರ ಬರದದ್ದನ್ನ ಓದಿದ್ರೆ ನನ್ನ ಬ್ಯಾಟರಿ ಚಾರ್ಜ್ ! ಅದಕ ನೋಡ್ರಿ ನನಗೆ ಎಪ್ಪತ್ತಾದದ್ದು ನನಗೇ ಗುರುತಾಗಲಿಲ್ಲ”.

  • ಬಿ. ಚಂದ್ರೇಗೌಡ

(ಚಂಪಾರವರಿಗೆ 70 ವರ್ಷ ತುಂಬಿದ ಸಂದರ್ಭದಲ್ಲಿ ಬಿ.ಚಂದ್ರೇಗೌಡರು ಬರೆದ ಯಾಹೂ ಲೇಖನ)


ಇದನ್ನೂ ಓದಿ; ಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...