Homeಅಂಕಣಗಳುಬಹುಜನ ಭಾರತ; ಬಸ್ತರ್ - ಹುಟ್ಟಿದ ನೆಲದಲ್ಲೇ ತಬ್ಬಲಿಗಳಾಗಿರುವ ಆದಿವಾಸಿಗಳು!

ಬಹುಜನ ಭಾರತ; ಬಸ್ತರ್ – ಹುಟ್ಟಿದ ನೆಲದಲ್ಲೇ ತಬ್ಬಲಿಗಳಾಗಿರುವ ಆದಿವಾಸಿಗಳು!

- Advertisement -
- Advertisement -

ಆದಿವಾಸಿ ನೆಲೆಯ ಅಡವಿ-ಗುಡ್ಡಗಳಡಿಯ ಖನಿಜ ಸಂಪತ್ತಿಗಾಗಿ ಜೊಲ್ಲು ಸುರಿಸುವ ಕಾರ್ಪೊರೇಟುಗಳಿವೆ. ಪ್ರಭುತ್ವಗಳು ಅವುಗಳಿಗೆ ನಡೆಮುಡಿ ಹಾಸುತ್ತಿವೆ.

ಭ್ರಮೆಯಲ್ಲಿ ಬದುಕುವ ಬಹುತೇಕ ಭಾರತವು ಬಸ್ತರ್ ಎಂಬ ಸೀಮೆಯ ಹೆಸರನ್ನು ಕೇಳಿರುವುದು ಅನುಮಾನ. ಮಧ್ಯಭಾರತದ ಕಾಡು ಕಣಿವೆ ಗುಡ್ಡಗಳಲ್ಲಿ ಹಲವು ಆದಿವಾಸಿ ನೆಲೆಗಳು ಹರಡಿ ಹಬ್ಬಿವೆ.

ಈ ಸೀಮೆಗಳ ಹೆಸರಾಂತ ತವರು ಛತ್ತೀಸಗಢದ ಬಸ್ತರ್. ಅಲ್ಲಿನ ಸುಕ್ಮಾ ಜಿಲ್ಲೆಯಲ್ಲಿ ಸಿಲ್ಗೆರ್ ಎಂಬುದೊಂದು ಗ್ರಾಮ. ತಿಂಗಳೊಪ್ಪತ್ತಿನಿಂದ ಅಲ್ಲಿನ ಆದಿವಾಸಿಗಳ ಬದುಕು ಸರ್ಕಾರಿ ದಮನದ ಬೆಂಕಿಯಲ್ಲಿ ಬೇಯತೊಡಗಿದೆ.

ರಾಜ್ಯ ಸರ್ಕಾರ ರಾತ್ರೋರಾತ್ರಿ ತಮ್ಮ ನೆಲದಲ್ಲಿ ಸುರಕ್ಷಾಬಲದ ಶಿಬಿರವೊಂದನ್ನು ಎಬ್ಬಿಸಿರುವ ಬೆಳವಣಿಗೆ ಈ ಬಡಪಾಯಿಗಳ ಬದುಕುಗಳನ್ನು ಬುಡಮೇಲು ಮಾಡಿದೆ. ತಿಂಗಳೊಪ್ಪತ್ತಿನಿಂದ ಸಾವಿರಾರು ಆದಿವಾಸಿಗಳು ಸಂಘರ್ಷಕ್ಕೆ ಇಳಿದಿದ್ದಾರೆ. ಪ್ರತಿಭಟನೆಯಲ್ಲಿ ಹೆಣ್ಣುಮಕ್ಕಳು, ಗಂಡಸರು, ವೃದ್ಧರು, ಬಾಲರೆಲ್ಲ ಸೇರಿದ್ದಾರೆ.

ಕಳೆದ ಮೇ 17ರಂದು ಆಂದೋಲನನಿರತ ಆದಿವಾಸಿಗಳ ಮೇಲೆ ಸುರಕ್ಷಾಬಲ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಅಸುನೀಗಿದ್ದು 18 ಮಂದಿ ಗಾಯಗೊಂಡಿದ್ದಾರೆ. ಗೋಲಿಬಾರಿನಿಂದ ಉಂಟಾದ ನೂಕುನುಗ್ಗಲಿಗೆ ಸಿಕ್ಕಿ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡ ಗರ್ಭಿಣಿ ಪುನೆಮ್ ಸುಕ್ಲಿ ಮೇ 23ರಂದು ಅಸುನೀಗಿದಳು. ಈ ನಾಲ್ವರು ಹುತಾತ್ಮರಿಗೆ ಸಿಲ್ಗೇರ್ ಶಿಬಿರದ ಎದುರಿನಲ್ಲಿ ಸ್ಮಾರಕಗಳನ್ನು ನಿರ್ಮಿಸಿದ್ದಾರೆ ಆದಿವಾಸಿಗಳು.

ಮೇ 17ರಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಆದಿವಾಸಿಗಳು ಮುಖಾಮುಖಿಯಾಗಿದ್ದಾರೆ. ಒಂದೆಡೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದ ಮೀಸಲು ಪೊಲೀಸರು. ಮತ್ತೊಂದೆಡೆ ಧರಣಿ ಪ್ರದರ್ಶನ ನಡೆಸಿರುವ ಸಾವಿರಾರು ಆದಿವಾಸಿಗಳು.

ಸರ್ಕಾರ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮೇ 12ರಂದು ರಾತ್ರೋರಾತ್ರಿ ಈ ಶಿಬಿರವನ್ನು ಎಬ್ಬಿಸಿ ನಿಲ್ಲಿಸಿದೆ. ಮರುದಿನ ಮಧ್ಯಾಹ್ನದ ವೇಳೆಗೆ ಈ ಸುದ್ದಿ ಸಿಲ್ಗೇರ್ ಸುತ್ತಮುತ್ತ ಹರಡಿದೆ. ಗ್ರಾಮೀಣರ ಸಮೂಹವೊಂದು ಅಧಿಕಾರಿಗಳೊಂದಿಗೆ ಮಾತುಕತೆಗೆ ಬಂದಿದ್ದಾರೆ. ಕೆಲ ಹೊತ್ತು ಚರ್ಚೆಯ ನಂತರ ಅವರನ್ನು ಗದರಿಸಿ ಓಡಿಸಲಾಗಿದೆ. ಸ್ವಾಭಾವಿಕವಾಗಿ ಆದಿವಾಸಿಗಳು ಸಿಟ್ಟಿಗೆದ್ದಿದ್ದಾರೆ. ಹಿಂದೆ ಸರಿಯಲು ಸಿದ್ಧರಿಲ್ಲ. ಸುತ್ತಮುತ್ತಲ ಹಲವಾರು ಪಂಚಾಯತಿಗಳ ಸಾವಿರಾರು ಮಂದಿ ಘಟನಾ ಸ್ಥಳದ ಬಳಿ ಸೇರಿದ್ದಾರೆ. ಈ ಜಮಾವಣೆಯ ಮುಂಚೂಣಿಯಲ್ಲಿ ನಿಂತಿರುವಾತ ಒಬ್ಬ ವೃದ್ಧ. ಆತನ ಹೆಸರು ಲಖಮಾ.

ಪೊಲೀಸ್ ಶಿಬಿರವನ್ನು ಹಿಂತೆಗೆದುಕೊಳ್ಳುವ ತನಕ ಪ್ರತಿಭಟನೆ ಕರಗುವುದಿಲ್ಲ ಎಂಬುದಾಗಿ ಆತ ಘೋಷಿಸಿದ್ದಾನೆ. ಸುರಕ್ಷಾ ಪಡೆಗಳ ಶಿಬಿರಗಳನ್ನು ಆದಿವಾಸಿಗಳು ವಿರೋಧಿಸಬೇಕಾದರೂ ಯಾಕೆ?

ಲಖಮಾ ನೀಡುವ ಉತ್ತರ ಹೀಗಿದೆ:

ಶಿಬಿರವೊಂದು ಎದ್ದಿತೆಂದರೆ ಪೊಲೀಸರು ಸುತ್ತಮುತ್ತಲ ಅಡವಿಯಲ್ಲಿ ಅಡ್ಡಾಡುವ ಆದಿವಾಸಿಗಳನ್ನು ಹಿಡಿದು ಬಡಿದು ಹಿಂಸಿಸುತ್ತಾರೆ. ಹಿಡಿದೊಯ್ದು ಜೈಲಿಗೆ ನೂಕುತ್ತಾರೆ. ಅಡವಿಯೇ ಆದಿವಾಸಿಗಳ ಅನ್ನ-ಉಸಿರು. ಉರುವಲು, ತೆಂದು ಎಲೆ (ಬೀಡಿ ಕಟ್ಟಲು ಬಳಸುವ ಎಲೆ) ತರಲು ಅಡವಿಗೆ ಹೋಗುತ್ತೇವೆ. ಕೆಲವೊಮ್ಮೆ ಶಿಕಾರಿಗಾಗಿ ಕೈಯಲ್ಲಿ ಬಿಲ್ಲು ಬಾಣ ಹಿಡಿದಿರುತ್ತೇವೆ. ಈ ಕಾರಣಕ್ಕಾಗಿಯೂ ನಮ್ಮನ್ನು ಗುಂಡುಹಾರಿಸಿ ಕೊಲ್ಲಲಾಗುತ್ತದೆ. ಈಗಷ್ಟೇ ಈ ಶಿಬಿರವನ್ನು ಎಬ್ಬಿಸಲಾಗಿದೆ. ವಿರೋಧ ಮಾಡಿದ ಕಾರಣಕ್ಕಾಗಿ ನಮ್ಮನ್ನು ಲಾಠಿಗಳಿಂದ ಬಡಿಯಲಾಗುತ್ತಿದೆ. 17ರಂದು ನಮ್ಮ ಮೇಲೆ ಗಂಡು ಹಾರಿಸಲಾಯಿತು. ನಮ್ಮ ಮೂವರು ಬಂಧುಗಳು ಬಲಿಯಾಗಿದ್ದಾರೆ. ನಮ್ಮ ನಡುವೆ ಮಾವೋವಾದಿಗಳಿದ್ದಾರೆ ಎನ್ನುತ್ತಾರೆ ಪೊಲೀಸರು. ಹಸಿ ಹಸಿ ಸುಳ್ಳು ಮಾತಿದು. ಈ ಆಂದೋಲನದಲ್ಲಿ ಗ್ರಾಮೀಣ ಆದಿವಾಸಿಗಳ ವಿನಾ ಬೇರೆ ಯಾರೊಬ್ಬರೂ ಇಲ್ಲ.

ಆಂದೋಲನಿರತ ಯುವತಿ ಸರಸಿತಾ ಹೇಳುವ ಪ್ರಕಾರ ಗುಂಡು ತಗುಲಿ ಸತ್ತ ಯುವಕರ ಪೈಕಿ ಒಬ್ಬಾತ ತನ್ನ ಗ್ರಾಮ ತಿಮಾಪುರಮ್‌ಗೆ ಸೇರಿದವನು. ಶಿಬಿರಗಳ ಯೋಧರು ಆದಿವಾಸಿ ಹೆಣ್ಣುಮಕ್ಕಳೊಂದಿಗೆ ಅಶ್ಲೀಲವಾಗಿ ವ್ಯವಹರಿಸುತ್ತಾರೆ. ಇಲ್ಲಿ ಶಿಬಿರ ಎದ್ದಿತೆಂದರೆ ಪುನಃ ಅದೇ ಗೋಳು. ಹೀಗಾಗಿ ನಾವು ವಿರೋಧಿಸುತ್ತಿದ್ದೇವೆ ಎನ್ನುವ. ಆದಿವಾಸಿಗಳ ಹಕ್ಕುಗಳ ಹೋರಾಟಗಾರ್ತಿ ಸೋನಿ ಸೋರಿ ಬಸ್ತರ್ ಪೊಲೀಸರ ದೌರ್ಜನ್ಯವನ್ನು ಖಂಡಿಸಿದ್ದಾರೆ. ಪೊಲೀಸರದೇ ತಪ್ಪು. ಈ ಕಾರಣದಿಂದಾಗಿಯೇ ಘಟನಾ ಸ್ಥಳವನ್ನು ತಾವು ಸೇರಿದಂತೆ ಯಾವುದೇ ಹೋರಾಟಗಾರರು ತಲುಪದಂತೆ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿದ್ದಾರೆ.

ಪಾಲಾಗುಡಾದಿಂದ ಬಂದಿರುವ ಯುವಕ ಐತೂನ ಪ್ರಕಾರ- ನಮಗೆ ರಸ್ತೆ ಬೇಕು, ಆದರೆ ಶಿಬಿರ ಬೇಡ. ನಮ್ಮ ಹಳ್ಳಿಗಳಲ್ಲಿ ವಿಕಾಸ ಬೇಕು, ಆದರೆ ಸರ್ಕಾರ ಹೇರುವ ಮಾದರಿಯ ವಿಕಾಸ ಅಲ್ಲ. ಅಂಗನವಾಡಿ, ಶಾಲೆ, ಆಸ್ಪತ್ರೆ, ನ್ಯಾಯಬೆಲೆ ದಿನಸಿ ಅಂಗಡಿ, ರಸ್ತೆ ಬೇಕು. ಇಷ್ಟು ಭಾರೀ ಅಗಲದ ರಸ್ತೆ ಬೇಕಿಲ್ಲ. ರಸ್ತೆ ಕೆಲಸವನ್ನು ಆದಿವಾಸಿಗಳಿಗೇ ಕೊಡಲಿ. ನಮ್ಮ ಜರೂರತ್ತಿಗೆ ತಕ್ಕಂತೆ ರಸ್ತೆಗಳನ್ನು ನಾವೇ ನಿರ್ಮಿಸಿಕೊಳ್ಳುತ್ತೇವೆ. ರಸ್ತೆಯೂ ಆಗುತ್ತದೆ, ನಮ್ಮ ಯುವಕರಿಗೆ ಉದ್ಯೋಗವೂ ಸಿಗುತ್ತದೆ.

ಬಸ್ತರ್ ಸೀಮೆಯ ನಾನಾ ಭಾಗಗಳಲ್ಲಿ ಪೊಲೀಸ್ ಶಿಬಿರಗಳನ್ನು ಎಬ್ಬಿಸುವ ಕುರಿತು ಆದಿವಾಸಿಗಳ ವಿರೋಧ ಹೊಸದೇನಲ್ಲ. ಪೊಲೀಸರು ಈ ವಿರೋಧಗಳಿಗೆ ನಕ್ಸಲೀಯ ಪ್ರಾಯೋಜಿತ ಎಂಬ ಹಣೆಪಟ್ಟಿ ಹಚ್ಚಿದ್ದಾರೆ. ಸಿಲ್ಗೇರ್‌ನ ಈ ಆಂದೋಲನವನ್ನೂ ಮಾವೋವಾದಿಗಳ ಪ್ರಚಾರ ಎಂಬುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಕರೆದಿದ್ದಾರೆ.

ಸಿಲ್ಗೇರ್ ಬಳಿ ಪೊಲೀಸ್ ಶಿಬಿರ ನೆಲೆಯೂರಿತೆಂದರೆ ತಮ್ಮ ಮೇಲೆ ಅತ್ಯಾಚಾರ ನಿಶ್ಚಿತ ಎಂಬುದು ಆದಿವಾಸಿಗಳ ಅಳಲು. ಅವರು ಈ ಹಿಂದೆ ಅನುಭವಿಸಿರುವ ಕಷ್ಟನಷ್ಟ ಹಿಂಸೆಗಳೇ ಈ ಅಳಲಿಗೆ ಆಧಾರ.

ಮೇ 17ರಂದು ಪೊಲೀಸರ ಗೋಲಿಬಾರಿನಲ್ಲಿ ಅಸುನೀಗಿದ ಮೂವರು ಆದಿವಾಸಿ ಯುವಕರು ಮಾವೋವಾದಿಗಳು ಎಂಬುದು ಪೊಲೀಸರ ಹೇಳಿಕೆ. ಆದರೆ ಆದಿವಾಸಿಗಳು ಮತ್ತು ಮಾನವ ಹಕ್ಕು ಹೋರಾಟಗಾರರ ಪ್ರಕಾರ ಈ ಮೂವರು ಯುವಕರಿಗೂ ಮಾವೋವಾದಿಗಳಿಗೂ ದೂರ ದೂರದ ಸಂಬಂಧವೂ ಇರಲಿಲ್ಲ. ಪೊಲೀಸರಿಂದ ಬಂದೂಕು ಮತ್ತು ವೈರ್‌ಲೆಸ್ ಉಪಕರಣ ಕಿತ್ತುಕೊಳ್ಳುವ ಪ್ರಯತ್ನದ ಆರೋಪದ ಮೇರೆಗೆ ಎಂಟು ಮಂದಿ ಆದಿವಾಸಿಗಳನ್ನು ಬಂಧಿಸಲಾಗಿದೆ.

ನಿರಾಯುಧ ಆಂದೋಲನನಿರತರ ಮೇಲೆ ಗುಂಡು ಹಾರಿಸುವ ಅಗತ್ಯವಾದರೂ ಏನಿತ್ತು? ಆಂದೋಲನ ನಿರತ ಆದಿವಾಸಿಗಳ ನಡುವೆ ಅಡಗಿಕೊಂಡು ಮಾವೋವಾದಿಗಳು ಪೊಲೀಸರತ್ತ ಗುಂಡು ಹಾರಿಸಿದ್ದಾರೆ ಎಂದೂ ಪೊಲೀಸರು ಆರೋಪಿಸಿದ್ದಾರೆ. ಆದರೆ ಈ ಸಂಬಂಧದ ವಿಡಿಯೋ ಹೊರಬಿದ್ದಿದ್ದು, ಪೊಲೀಸರ ಆರೋಪ ನಿರಾಧಾರವೆಂದು ನಿಚ್ಚಳವಾಗಿದೆ. ಒಂದು ವೇಳೆ ಆದಿವಾಸಿಗಳು ಮಾವೋವಾದಿಗಳ ಒತ್ತಡಕ್ಕೆ ಒಳಗಾಗಿ ಆಂದೋಲನ ನಡೆಸುತ್ತಿದ್ದಾರೆಂದು ವಾದಕ್ಕಾಗಿ ಒಪ್ಪಿಕೊಂಡರೂ, ನಿರಾಯುಧ ಆದಿವಾಸಿಗಳನ್ನು ಪೊಲೀಸರು ರಕ್ಷಿಸಬೇಕೇ ವಿನಾ ಗುಂಡು ಹೊಡೆದು ಕೊಲ್ಲುವುದು ಯಾವ ನ್ಯಾಯ ಎಂಬ ಪ್ರಶ್ನೆಗಳೆದ್ದಿವೆ.

ಪ್ರತಿಪಕ್ಷದಲ್ಲಿದ್ದಾಗ ಆದಿವಾಸಿಗಳ ಹಿತದ ಪರವಾಗಿ ಮಾತನಾಡುತ್ತಿದ್ದ ಕಾಂಗ್ರೆಸ್ ಪಕ್ಷ ಈಗ ಆಡಳಿತ ನಡೆಸಿದೆ. ಕಾಂಗ್ರೆಸ್ ಪಕ್ಷದ ಎರಡೆಳೆ ನಾಲಗೆಯ ಕುರಿತು ಆದಿವಾಸಿಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಅವರು ಆಂದೋಲನದಿಂದ ಹಿಂದೆ ಸರಿಯುವ ಸೂಚನೆಗಳಿಲ್ಲ.

ಆದಿವಾಸಿಗಳ ಮೇಲೆ ನಡೆಯುವ ದಾಳಿಗಳ ಹಿಂದೆ ಅವರು ವಾಸಿಸುವ ಅಡವಿಗಳಲ್ಲಿ ಗುಡ್ಡಗಳಲ್ಲಿ ಅಡಗಿರುವ ಖನಿಜ ಸಂಪತ್ತಿಗಾಗಿ ಜೊಲ್ಲು ಸುರಿಸುವ ಕಾರ್ಪೊರೇಟುಗಳಿವೆ. ಅವುಗಳಿಗೆ ನಡೆಮುಡಿ ಹಾಸುವ ಪ್ರಭುತ್ವಗಳಿವೆ.

ತಮ್ಮ ನೆಲದಲ್ಲೇ ತಬ್ಬಲಿಗಳಾಗಿ ಬದುಕಿಯೂ ಸತ್ತಂತಾಗಿರುವ, ಸತ್ತು ಬದುಕುತ್ತಿರುವ ಆದಿವಾಸಿಗಳಿಗಾಗಿ ತಾಯಿ ಭಾರತಿಯ ಕಣ್ಣೀರು ಇಂಗಿ ಹೋಗಿದೆ. ಆದಿವಾಸಿಗಳ ಪಾಲಿಗೆ ಆಕೆ ಕಿವುಡಿಯೂ ಕುರುಡಿಯೂ ಮೂಕಿಯೂ ಆಗಿ ಹೋಗಿರುವುದು ಬಹುದೊಡ್ಡ ದುರಂತ.


ಇದನ್ನೂ ಓದಿ: ಬಹುಜನ ಭಾರತ: ತುಕ್ಕು ತಗುಲಿತೇ ಉಕ್ಕಿನ ರಕ್ಷಾ ಕವಚಕ್ಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...