ಬೆಂಗಳೂರಿನ ಐತಿಹಾಸಿಕ ಬೇಗೂರು ಕೆರೆ ಈಗ ವಿವಾದದ ಸ್ಥಳವಾಗಿ ರೂಪುಗೊಂಡಿದೆ. ಕೆರೆಯ ಬಳಿ ಬಿಗಿ ಪೊಲೀಸ್ ಪಹರೆಯನ್ನು ಹಾಕಲಾಗಿದೆ. ಕಾರಣ ಈ ಕೆರೆಯ ಅಭಿವೃದ್ಧಿಗೆ ಅಂಟಿಕೊಂಡಿರುವ ಕೋಮುವಾದದ ಬಣ್ಣ ಮತ್ತು ಬಿಬಿಎಂಪಿ ಮಾಡಿದ ಎಡವಟ್ಟು.
2018 ರಲ್ಲಿ ಬೇಗೂರು ಕೆರೆ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು. ಬಿಬಿಎಂಪಿ ಕೆರೆ ಮಧ್ಯ ಕೃತಕ ದ್ವೀಪ ಮತ್ತು ಶಿವನ ಮೂರ್ತಿ ಸ್ಥಾಪಿಸಲು ಆರಂಭಿಸಿತ್ತು. ಇಂತಹ ಕೆರೆ ಅಭಿವೃದ್ಧಿಯು ಕೆರೆಯ ಸ್ವರೂಪವನ್ನು ಹಾಳು ಮಾಡುವುದಲ್ಲದೆ, ಕೆರೆಯ ವಿಸ್ತೀರ್ಣ ಮತ್ತು ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂಬ ಆತಂಕದಿಂದ ಕೆಲ ಪರಿಸರ ಹೋರಾಟಗಾರರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಪ್ರಕರಣವನ್ನು ಆಲಿಸಿದ ಹೈಕೋರ್ಟ್ ಕೆರೆ ಪಾತ್ರವನ್ನು ಕಡಿಮೆ ಮಾಡುವ ಹಕ್ಕು ಯಾರಿಗೂ ಇಲ್ಲವೆಂದು ಸ್ಪಷ್ಟವಾಗಿ ತಿಳಿಸಿ ಶಿವನ ವಿಗ್ರಹ ಮತ್ತು ಕೃತಕ ದ್ವೀಪ ನಿರ್ಮಾಣಕ್ಕೆ ತಡೆ ನೀಡಿತ್ತು. ಆಗ ಕೋರ್ಟ್ ಆದೇಶದ ಮೇರೆಗೆ ನಿರ್ಮಾಣ ಹಂತದಲ್ಲಿದ್ದ ಶಿವನ ವಿಗ್ರಹವನ್ನು ನೀಲಿ ಬಣ್ಣದ ಟಾರ್ಪಲ್ನಿಂದ ಮುಚ್ಚಲಾಗಿತ್ತು.
ಆದರೆ ಪ್ರಕರಣ ಇನ್ನು ವಿಚಾರಣಾ ಹಂತದಲ್ಲಿರುವಾಗಲೇ ಮತ್ತು ತಡೆಯಾಜ್ಞೆಯಿದ್ದರೂ ಅದನ್ನು ಲೆಕ್ಕಿಸದೇ ಕೆಲ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಆ ಟಾರ್ಪಲ್ ಕಿತ್ತುಹಾಕಿ ವಿಗ್ರಹ ಅನಾವರಣ ಮಾಡಿದ್ದಾರೆ. ಅಲ್ಲದೆ ಕೇಸರಿ ಬಾವುಟಗಳನ್ನು ನೆಟ್ಟಿದ್ದಾರೆ.
ಇದನ್ನೂ ಓದಿ: ಸಭೆ ಸಮಾರಂಭಗಳಲ್ಲಿ ಪುಸ್ತಕ ಉಡುಗೊರೆ ಕೊಡಲು ಆದೇಶ; ಇಲ್ಲಿವೆ ಕೆಲವು ನಿರ್ದಿಷ್ಟ ಸಲಹೆಗಳು
ಬುಧವಾರ (ಆಗಸ್ಟ್ 11) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ಹೈಕೋರ್ಟ್ ವಿಭಾಗಿಯ ನ್ಯಾಯಪೀಠ, ದ್ವೀಪದಲ್ಲಿ ಪ್ರತಿಮೆ ಅನಾವರಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ನಗರ ಪೊಲೀಸ್ ಆಯುಕ್ತರಿಗೆ ಆದೇಶ ನೀಡಿತ್ತು. ಜೊತೆಗೆ ಕೆರೆ ಬಳಿ ಬಿಗೆ ಪೊಲೀಸ್ ಬಂದೋಬಸ್ತ್ ಮಾಡಲು ತಿಳಿಸಿತ್ತು. ಪೊಲೀಸರ ರಕ್ಷಣೆಯಲ್ಲಿ ಮತ್ತೆ ಪ್ರತಿಮೆಯನ್ನು ಮುಚ್ಚಬೇಕು ಎಂದು ತಿಳಿಸಿದೆ.
ಕೆರೆಯ ಮಧ್ಯದಲ್ಲಿ ದ್ವೀಪ ನಿರ್ಮಿಸಲು ಅವಕಾಶವಿದೇಯೇ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ. ಇದರಲ್ಲಿ ಯಾವುದೇ ಧಾರ್ಮಿಕ ಭಿನ್ನಾಭಿಪ್ರಾಯಗಳು ಇಲ್ಲ ಎಂದು ಹೈಕೋರ್ಟ್ ವಿಭಾಗಿಯ ಪೀಠ ತಿಳಿಸಿದೆ.
ಇಷ್ಟೇಲ್ಲಾ ಆದರೂ ಕೂಡ, ಹೈಕೋರ್ಟ್ ಆದೇಶದ ಬೆನ್ನಲ್ಲೇ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಪುನಿತ್ ಕೆರೆಹಳ್ಳಿ ನೇತೃತ್ವದಲ್ಲಿ ಕೆಲವರು ಮತ್ತೆ ಕೆರೆಗೆ ಹೋಗಿ ಪ್ರತಿಮೆಯ ಟಾರ್ಪಲ್ ತೆಗೆದು ದಾಂಧಲೆ ನಡೆಸಿದ್ದಾರೆ. ಸದ್ಯ ಕೆರೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ ಹಾಕಲಾಗಿದೆ. ಜೊತೆಗೆ ಇದಕ್ಕೆ ರಾಜಕೀಯ ಕೂಡ ಸೇರ್ಪಡೆಗೊಂಡಿದ್ದು ಪ್ರಕರಣ ಎಲ್ಲಿಗೆ ಮುಟ್ಟುತ್ತದೆಯೋ ಎಂಬ ಆತಂಕ ಎದುರಾಗಿದೆ.
ಕೆರೆಗಳ ಉಳಿವಿಗಾಗಿ ದಶಕಗಳಿಂದಲೂ ಹೋರಾಡುತ್ತಿರುವ ಪರಿಸರ ಹೋರಾಟಗಾರ ಲಿಯೋ ಸಾಲ್ಡಾನಾ, “ಕೆರೆ ಉಳಿವಿಗಾಗಿ, ಕೆರೆಯಲ್ಲಿ ಏನು ನಿರ್ಮಿಸಬೇಕು, ಏನು ನಿರ್ಮಿಸಬಾರದು ಎಂಬ ನಿಯಮಗಳಿವೆ. ಇದರ ಅಡಿಯಲ್ಲಿ ನಾವು ಅರ್ಜಿ ಸಲ್ಲಿಸಿದ್ದೇವೆ. ನಾವು ಸರಿಯಾದ ದಾರಿಯಲ್ಲಿದ್ದೇವೆ ಎಂಬುದು ಹೈಕೋರ್ಟ್ ಆದೇಶದಿಂದ ತಿಳಿದು ಬಂದಿದೆ” ಎಂದಿದ್ದಾರೆ.
ಒಟ್ಟಾರೆ, ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಇರುವ ಬೇಗೂರು ಕೆರೆಗೆ ಅಂಟಿಕೊಂಡಿರುವ ಕೋಮುವಾದದ ಬಣ್ಣ ತೊಲಗಿ ಆದಷ್ಟು ಬೇಗ ಅಭಿವೃದ್ಧಿ ಕಾರ್ಯ ನಡೆದು, ಐತಿಹಾಸಿಕ ಬೇಗೂರು ಕೆರೆ ಉಳಿಯಲಿ ಎಂಬುದಷ್ಟೇ ನಮ್ಮ ಆಶಯ.
ವಿಡಿಯೊ ನೋಡಿ….
ಇದನ್ನೂ ಓದಿ: ಬೇಗೂರು ಕೆರೆ ಉಳಿಸಿ ಹೋರಾಟಕ್ಕೆ ಕೋಮು ಬಣ್ಣ: ಹೈಕೋರ್ಟ್ ಆದೇಶ ಧಿಕ್ಕರಿಸಿ ಕೆರೆ ಮಧ್ಯೆ ಶಿವನ ವಿಗ್ರಹ ಅನಾವರಣ
ನಿಮ್ಮ ಕಮ್ಯೂನಿಸ್ಟ್ ರು ಯಾವಾಗಲಾದರು ಅಕ್ರಮ ವಾಗಿ ನಿರ್ಮಿಸಿರುವ ಚರ್ಚ್ ,ಮಸೀದಿಗಳ ಬಗ್ಗೆಯೂ ಮಾತನಾಡಿದ ಉದಾಹರಣೆಗಳು ಇತಿಹಾಸದಲ್ಲಿ ಇದಿಯಾ ,ನೀವು ನಿಮ್ಮ ನಿಲವು ದೇಶ ವಿರೋಧಿ ಚಟುವಟಿಕೆ ಕಡೆಗೆ ಇರುತ್ತದೆ ಬಿಡಿ ,ನಿಮ್ಮ ಪತ್ರಿಕೆಯು ಅದೇ ರೀತಿ ಕೆಲಸ ಮಾಡುತ್ತಿದೆ……