ಒಕ್ಕೂಟ ಸರ್ಕಾರ ವಿವಾದಿತ ಕೃಷಿ ಕಾನೂನುಗಳನ್ನು ಜಾರಿಗೊಳಿಸಿ ಒಂದು ವರ್ಷವಾಗುತ್ತಿರುವ ಹಿನ್ನೆಲೆ ರೈತ ಸಂಘಟನೆಗಳು ಸೆಪ್ಟಂಬರ್ 27ಕ್ಕೆ ಭಾರತ್ ಬಂದ್ಗೆ ಕರೆ ನೀಡಿವೆ. ರೈತರ ಕರೆಗೆ ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ.
ರಾಜ್ಯದಲ್ಲೂ ಭಾರತ್ ಬಂದ್ಗೆ ಬೆಂಬಲವಾಗಿ ಸೆಪ್ಟಂಬರ್ 27ಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಯ ಕ್ಯಾಮ್ಸ್ ಕೂಡ ಈ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ.
“ನಮ್ಮ ನೆಲ, ಜಲ, ಸಂಸ್ಕಾರ, ಸಂಸ್ಕೃತಿಗೆ ದಕ್ಕೆ ಉಂಟಾದಾಗ ಸಂದರ್ಭಕ್ಕನುಗುಣವಾಗಿ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಯವರು ತಮ್ಮದೇ ಆದ ರೀತಿಯಲ್ಲಿ ಭಾಗವಹಿಸುವಿಕೆ ಹಾಗು ಬೆಂಬಲ ವ್ಯಕ್ತಪಡಿಸಿರುವುದು ತಿಳಿದಿರುವ ವಿಷಯ, ಪ್ರಸ್ತುತ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವಂಚಿತವಾಗಿ ಮಕ್ಕಳ ನಿರಂತರ ಕಲಿಕೆಯಲ್ಲಿ ಹೆಚ್ಚಿನ ಅನ್ಯಾಯವಾಗಿದ್ದು, ಇಂತಹ ಸಂದರ್ಭದಲ್ಲಿ ಶಾಲೆಗೆ ರಜೆ ಕೊಟ್ಟು ಹೋರಾಟಕ್ಕೆ ಭಾಗವಹಿಸಲು ಕಷ್ಟಸಾಧ್ಯ ಎಂಬುವ ಅಭಿಪ್ರಾಯದೊಂದಿಗೆ, ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ವ್ಯವಸ್ಥಾಪಕರು ಸಾಂಕೇತಿಕ ಬೆಂಬಲ ನೀಡಲು ಕ್ಯಾಮ್ಸ್ ಮನವಿ ಮಾಡಿದೆ” ಎಂದಿದೆ.
ಇದನ್ನೂ ಓದಿ: ಸೆಪ್ಟೆಂಬರ್ 27 ರಂದು ‘ಭಾರತ ಬಂದ್’ ಕರೆ ನೀಡಿದ ರೈತ ಒಕ್ಕೂಟ; ಮಾರ್ಗಸೂಚಿ ಬಿಡುಗಡೆ
ಜೊತೆಗೆ ಸೆಪ್ಟಂಬರ್ 27ರ ದಿನ ಹಸಿರು ಉಡುಪು ಅಥವಾ ಹಸಿರು ಪಟ್ಟಿಯನ್ನು ಧರಿಸುವ ಮುಖಾಂತರ ಈ ಒಂದು ಹೋರಾಟಕ್ಕೆ ನೈತಿಕ ಬೆಂಬಲ ಕೊಡಬೇಕಾಗಿ ತಮ್ಮಲ್ಲಿ ಮನವಿ ಮಾಡಲಾಗಿದೆ. ನಮ್ಮ ಸಂಘಟನೆಯ ಎಲ್ಲಾ ಸದಸ್ಯರು ರೈತರ ಹೋರಾಟಕ್ಕೆ ತಾವುಗಳು ನೈತಿಕ ಬೆಂಬಲ ಕೊಟ್ಟು ಸಂಘಟನೆಯ ನಿಲುವನ್ನು ಆದರಿಸುತ್ತೀರ ಎಂದು ನಂಬಿರುತ್ತೇವೆ ಎಂದು ಕಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಮನವಿ ಮಾಡಿದ್ದಾರೆ.
ಕರ್ನಾಟಕ ಬಂದ್ ಅಂಗವಾಗಿ “ ಕರ್ನಾಟಕದ ಎಲ್ಲಾ ಚಳುವಳಿಗಾರರು ರೈತ, ಕಾರ್ಮಿಕ, ಮಹಿಳಾ, ಕನ್ನಡಪರ, ವಿದ್ಯಾರ್ಥಿ, ಜನಪರ ಸಂಘಟನೆಗಳು ಈ ಬಂದ್ನಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಧ್ವಜಗಳನ್ನು ಹಿಡಿದು ಪ್ರತಿಭಟನೆಗೆ ಸಾಥ್ ನೀಡಬೇಕು” ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದ್ದರು. ಇದಕ್ಕೆ ಹಲವು ಸಂಘ, ಸಂಸ್ಥೆಗಳು ಬೆಂಬಲ ನೀಡಿವೆ.
ಇದನ್ನೂ ಓದಿ: ಸೆ.27ಕ್ಕೆ ಭಾರತ್ ಬಂದ್: ಕರ್ನಾಟಕದಲ್ಲಿ ಬಂದ್ ಸಿದ್ಧತೆ ಬಗ್ಗೆ ಸಂಯುಕ್ತ ಹೋರಾಟದ ಬಹಿರಂಗ ಸಭೆ