ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ, ರೈತರು ಪ್ರಾರಂಭಿಸುವ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿದೆ. ಈ ಹಿನ್ನಲೆಯಲ್ಲಿ ರೈತ ಹೋರಾಟದ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಸೆಪ್ಟೆಂಬರ್ 27 ಕ್ಕೆ ‘ಭಾರತ ಬಂದ್’ಗೆ ಕರೆ ನೀಡಿದೆ. ಇದಕ್ಕಾಗಿ ಒಕ್ಕೂಟವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಬಂದ್ ಶಾಂತಿಯುತವಾಗಿರುತ್ತದೆ ಮತ್ತು ಜನರು ಯಾವುದೇ ಅನಾನುಕೂಲತೆಯನ್ನು ಅನುಭವಿಸದಂತೆ ರೈತರು ನೋಡಿಕೊಳ್ಳುತ್ತಾರೆ ಎಂದು ಹೇಳಿದೆ.
“ಎಸ್ಕೆಎಂ ಎಲ್ಲಾ ಸಂಘಟನೆಗಳಿಗೆ ರೈತರೊಂದಿಗೆ ಕೈಜೋಡಿಸುವಂತೆ ಕೇಳಿಕೊಂಡಿದೆ. ಜೊತೆಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುಂಚಿತವಾಗಿಯೆ ‘ಭಾರತ ಬಂದ್’ ಅನ್ನು ಪ್ರಚಾರ ಮಾಡುವಂತೆ ಮನವಿ ಮಾಡಿದೆ. ಬಂದ್ ಶಾಂತಿಯುತವಾಗಿರುತ್ತದೆ ಹಾಗೂ ಸ್ವಯಂಪ್ರೇರಿತವಾಗಿರುತ್ತದೆ. ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ” ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಯಲಹಂಕ – ತಮ್ಮ ‘ನೆಲದ ಹಕ್ಕು’ಗಳಿಗಾಗಿ ಬಿಡಿಎ ವಿರುದ್ದ 17 ಹಳ್ಳಿಗಳ ರೈತರಿಂದ ಬೃಹತ್ ಪ್ರತಿಭಟನೆ
“ಒಕ್ಕೂಟ ಸರ್ಕಾರದ ರಾಜ್ಯ ಕಚೇರಿಗಳು, ಮಾರುಕಟ್ಟೆಗಳು, ಅಂಗಡಿಗಳು, ಕಾರ್ಖಾನೆಗಳು, ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಅಂದು ಬಂದ್ ಆಗಲಿದೆ. ಬಂದ್ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಿ ಸಂಜೆ 4 ಗಂಟೆಯವರೆಗೆ ಜಾರಿಯಲ್ಲಿರುತ್ತದೆ” ಎಂದು ಎಸ್ಕೆಎಂ ಶುಕ್ರವಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ಕೂಡಾ ಬಂದ್ ಆಗಲಿದೆ ಎಂದು ಎಸ್ಕೆಎಂ ಹೇಳಿದ್ದು, ಆಂಬುಲೆನ್ಸ್ ಮತ್ತು ಅಗ್ನಿಶಾಮಕ ಸೇವೆಗಳು ಸೇರಿದಂತೆ ತುರ್ತು ಸೇವೆಗಳು ಮಾತ್ರ ಬಂದ್ ಸಮಯದಲ್ಲಿ ಕಾರ್ಯನಿರ್ವಸಲಿದೆ ಎಂದು ಅದು ತಿಳಿಸಿದೆ.
ಬಂದ್ಗೆ ಸಂಬಂಧಿಸಿದಂತೆ ಮುಂದಿನ ಯೋಜನೆಗಾಗಿ ಸೆಪ್ಟೆಂಬರ್ 20 ರಂದು ಮುಂಬೈನಲ್ಲಿ “ರಾಜ್ಯ ಮಟ್ಟದ ಪೂರ್ವಸಿದ್ಧತಾ ಸಭೆ” ನಡೆಯಲಿದೆ ಎಂದು ಎಸ್ಕೆಎಂ ಹೇಳಿದೆ.
ಅದೇ ದಿನ ಉತ್ತರ ಪ್ರದೇಶದ ಸೀತಾಪುರದಲ್ಲಿ ‘ಕಿಸಾನ್ ಮಜ್ದೂರ್ ಮಹಾಪಂಚಾಯತ್’ ಆಯೋಜಿಸಲಾಗುವುದು ಮತ್ತು ಅದರ ನಂತರ ಸೆಪ್ಟೆಂಬರ್ 22 ರಂದು ಉತ್ತರಾಖಂಡದ ರೂರ್ಕಿಯಲ್ಲಿ ‘ಕಿಸಾನ್ ಮಹಾಪಂಚಾಯತ್’ ನಡೆಯಲಿದೆ.
ಇದನ್ನೂ ಓದಿ: ರಾಕೇಶ್ ಟಿಕಾಯತ್ ‘ಅಲ್ಲಾಹು ಅಕ್ಬರ್ ಎಂದರೆ.. ರೈತರು ಕೋಪದಿಂದ ‘ಹರಹರ ಮಹಾದೇವ’ ಎಂದು ಕೂಗಿದ್ದು ನಿಜವೇ..?
ಪ್ರತಿಭಟನಾ ನಿರತ ರೈತರು ಸೆಪ್ಟೆಂಬರ್ 22 ರಿಂದ ಟಿಕ್ರಿ ಮತ್ತು ಸಿಂಘು ಗಡಿಯ ಪ್ರತಿಭಟನಾ ಸ್ಥಳಗಳಲ್ಲಿ ಐದು ದಿನಗಳ ಕಬಡ್ಡಿ ಲೀಗ್ ಅನ್ನು ಆಯೋಜಿಸಲಿದೆ. ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಕಳೆದ ಒಂದು ವರ್ಷದಿಂದ ದೆಹಲಿಯ ಗಡಿಗಲು ಸೇರಿದಂತೆ ದೇಶದ ಇತರ ಭಾಗಗಳಲ್ಲೂ ಹೋರಾಟ ಮಾಡುತ್ತಿದ್ದಾರೆ.
ರೈತರು ಒಕ್ಕೂಟ ಸರ್ಕಾರದೊಂದಿಗೆ 10 ಕ್ಕೂ ಹೆಚ್ಚು ಬಾರಿ ಮಾತುಕತೆ ನಡೆದಿದ್ದು, ಯಾವುದು ಸಫಲವಾಗಿಲ್ಲ. ಕೃಷಿ ಕಾನೂನನ್ನು ಸರ್ಕಾರ ಹಿಂಪಡೆಯುವವರೆಗೂ ಹೋರಾಟ ವಾಪಾಸು ಪಡೆಯುವುದಿಲ್ಲ ಎಂದು ರೈತ ಸಂಘಟನೆಗಳು ಹೇಳಿವೆ.
ಇದನ್ನೂ ಓದಿ: ಕರ್ನಾಲ್ ರೈತ ಹೋರಾಟಕ್ಕೆ ಜಯ: ಐಎಎಸ್ ಅಧಿಕಾರಿಯ ವಿರುದ್ಧ ತನಿಖೆಗೆ ಒಪ್ಪಿದ ಸರ್ಕಾರ