ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ದೇಶದ ಬಹುದೊಡ್ಡ ಪಾದಾಯಾತ್ರೆಗೆ ಸಜ್ಜಾಗಿದ್ದಾರೆ. ಐಕ್ಯ ಭಾರತದ ಉದ್ದೇಶದೊಂದಿಗೆ ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆಗೆ ಬರೋಬ್ಬರಿ 3,500 ಕಿ.ಮೀ ಹೆಜ್ಜೆಹಾಕುವ ಭಾರತ್ ಜೋಡೋ ಯಾತ್ರೆಯನ್ನು (ಭಾರತ ಐಕ್ಯತಾ ಯಾತ್ರೆ) ಸೆಪ್ಟಂಬರ್ 07ರಿಂದ ಆರಂಭಿಸಲಿದ್ದಾರೆ. ಈ ಯಾತ್ರೆಗೆ ಉತ್ತಮ ಸ್ಪಂದನೆ ದೊರೆತಿದ್ದು ಕಾಂಗ್ರೆಸ್ ಮಾತ್ರವಲ್ಲದೆ ಇತರ ಪಕ್ಷಗಳ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರ ಸಹ ಬೆಂಬಲ ಘೋಷಿಸಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
4 ತಿಂಗಳುಗಳ ಕಾಲ ನಡೆಯುವ ಸುಧೀರ್ಘ ಪಾದಯಾತ್ರೆಯಲ್ಲಿ ಪ್ರತಿ ದಿನ 25 ಕಿ.ಮೀ ನಡೆಯುವ ಗುರಿ ಹೊಂದಲಾಗಿದ್ದು, 12 ರಾಜ್ಯಗಳು ಮತ್ತು 02 ಕೇಂದ್ರಾಡಳಿತ ಪ್ರದೇಶಗಳನ್ನು ಯಾತ್ರೆ ತಲುಪಲಿದೆ. ಕರ್ನಾಟಕದಲ್ಲಿ 21 ದಿನಗಳ ಕಾಲ ಯಾತ್ರೆ ನಡೆಯಲಿದ್ದು, ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸ್ವಾಗತಿಸಿ ರಾಯಚೂರು ಜಿಲ್ಲೆ ನಂತರ ತೆಲಂಗಾಣಕ್ಕೆ ಕಳಿಸಿಕೊಡಲಾಗುತ್ತದೆ ಎನ್ನಲಾಗಿದೆ.
“ಈ ಯಾತ್ರೆ ನನಗೆ ತಪಸ್ಸು ಇದ್ದಂತೆ. ಭಾರತವನ್ನು ಒಟ್ಟುಗೂಡಿಸುವುದು ಧೀರ್ಘಾವಧಿ ಹೋರಾಟ ಎಂಬುದು ನನಗೆ ತಿಳಿದಿದೆ ಮತ್ತು ಅದಕ್ಕೆ ನಾನು ತಯಾರಾಗಿದ್ದೇನೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
“ಹೆಜ್ಜೆಗಳು ಜೊತೆಗೂಡಲಿ, ದೇಶ ಒಂದಾಗಲಿ” ಎಂಬ ಟ್ಯಾಗ್ಲೈನ್ನೊಂದಿಗೆ ನಡೆಯುವ ಈ ಯಾತ್ರೆಯ ಹಲವು ಕಾರ್ಯಕ್ರಮಗಳಿಗೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರ ಜೊತೆಗೂಡಲಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು #BharatJodoYatra ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದೆ. ಉದಯಪುರದಲ್ಲಿ ನಡೆದ ಚಿಂತನ ಶಿಬಿರದಲ್ಲಿ ಕೈಗೊಂಡ ನಿರ್ಣಯದಂತೆ ಶ್ರೀ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳುತ್ತಿದ್ದು 12 ರಾಜ್ಯಗಳನ್ನು ಈ ಯಾತ್ರೆ ಹಾದುಹೋಗಲಿದೆ.
1/4 pic.twitter.com/xO1GAK0SZI— DK Shivakumar (@DKShivakumar) August 28, 2022
1991ರಲ್ಲಿ ಹತ್ಯೆಯಾದ ರಾಜೀವ್ ಗಾಂಧಿಯವರ ಸ್ಮಾರಕವಿರುವ ಶ್ರೀಪೆರಂಬದೂರ್ನಲ್ಲಿ ನಮನ ಸಲ್ಲಿಸಿದ ನಂತರ ಸೆಪ್ಟಂಬರ್ 07ರಂದು ಕನ್ಯಾಕುಮಾರಿಯಲ್ಲಿ ಭಾರತ್ ಜೋಡೋ ಯಾತ್ರೆ ಉದ್ಘಾಟನೆಯಾಗಲಿದೆ. ಅಲ್ಲಿಂದು ತಿರುವಂತನಪುರಂ, ಕೊಚ್ಚಿ, ನಿಲಾಂಬುರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕಾರಾಬಾದ್, ನಾಂದೇಡ್, ಜಾಲಗೂನ್, ಇಂದೋರ್, ಕೋಟಾ, ದುಸ್ಸಾ, ಅಲ್ವರ್, ಬುಲಂದಶಹರ್, ದೆಹಲಿ, ಅಂಬಾಲ, ಜಮ್ಮುಗಳಲ್ಲಿ ಬಹಿರಂಗ ಸಮಾವೇಶಗಳನ್ನು ನಡೆಸುವುದರ ಜೊತೆಗೆ ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಯಾತ್ರೆಯ ಸಮಾರೋಪ ನಡೆಯಲಿದೆ.
3500 ಕಿಲೋಮೀಟರ್ಗಳು, ಲಕ್ಷಾಂತರ ಜನ ಒಂದೇ ಗುರಿಯೊಂದಿಗೆ ಭಾರತವನ್ನು ಒಂದುಗೂಡಿಸಲು ಜೊತೆಯಾಗಿ ಹೆಜ್ಜೆ ಹಾಕಲಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 'ಭಾರತ್ ಜೋಡೋ ಯಾತ್ರೆ'ಯ ಮಾರ್ಗ ನಕ್ಷೆ.#BharatJodoYatra pic.twitter.com/SGoTlHNED2
— Karnataka Congress (@INCKarnataka) August 25, 2022
ಪಾದಯಾತ್ರೆಗೆ ವಿವಿಧ ಪಕ್ಷದ ಮುಖಂಡರ ಬೆಂಬಲ
ಯೋಗೇಂದ್ರ ಯಾದವ್
ಹಿರಿಯ ಚಿಂತಕ, ರಾಜಕೀಯ ತಜ್ಞ, ಆಪ್ ತೊರೆದು ಸ್ವರಾಜ್ಯ ಇಂಡಿಯಾ ಪಕ್ಷ ಕಟ್ಟಿರುವ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರಾಗಿರುವ ಯೋಗೇಂದ್ರ ಯಾದವ್ರವರು ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದ್ದು, ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದೇನೆ ಎಂದಿದ್ದಾರೆ.
ಅರುಣಾ ರಾಯ್
ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತರಾದ ಅರುಣಾ ರಾಯ್ರವರು 1990ರ ದಶಕದಲ್ಲಿ ನಾಗರೀಕ ಸೇವೆ ತೊರೆದು ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ ಕಟ್ಟಿದ್ದರು. ನರೇಗಾ ಯೋಜನೆಗಾಗಿ ಸಾಕಷ್ಟು ದುಡಿದಿರುವ ಅವರು, ದಿನಗೂಲಿ ಕಾರ್ಮಿಕರ ಪರವಾಗಿ ದಿಟ್ಟ ಹೋರಾಟ ನಡೆಸಿದ್ದರು. ಆರ್ಟಿಐ ಕಾರ್ಯಕರ್ತರಾಗಿ ಅರವಿಂದ್ ಕೇಜ್ರಿವಾಲ್ ಜೊತೆಗೂಡಿ ಕೆಲಸ ಮಾಡಿದ್ದರು. ಲೋಕಪಾಲ್ ಮಸೂದೆ ಸಂಬಂಧ ಆಪ್ ತೊರೆದು ಹೊರಬಂದ ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ.
ದೇವನೂರ ಮಹದೇವ
ಕನ್ನಡದ ಮಹತ್ವದ ಲೇಖಕರು, ಚಿಂತಕರು ಮತ್ತು ಹೋರಾಟಗಾರರಾದ ದೇವನೂರ ಮಹದೇವರವರು ತಮ್ಮ ಕಥೆಗಳಿಗಾಗಿ ಪ್ರಸಿದ್ದರು. ಅವರ ಇತ್ತೀಚಿಗಿನ ಆರ್ಎಸ್ಎಸ್ ಆಳ ಮತ್ತು ಅಗಲ ಕೃತಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿ ಚರ್ಚೆಗೆ ಕಾರಣವಾಗಿತ್ತು. ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆಯಾಗಿ ಸಾಹಿತ್ಯ ಅಕಾಡೆಮಿ ಮತ್ತು ಪ್ರದ್ಮಶ್ರೀ ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದ ಅವರು ಸ್ವರಾಜ್ ಇಂಡಿಯಾ ಮತ್ತು ಜನಾಂದೋಲನಗಳ ಮಹಾಮೈತ್ರಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಗಣೇಶ್ ದೇವಿ
ಭಾಷಾ ತಜ್ಞರು ಮತ್ತು ಸಾಂಸ್ಕೃತಿಕ ಚಿಂತಕರಾದ ಜಿ.ಎನ್ ದೇವಿಯವರು ಭಾರತ್ ಜೋಡೊ ಯಾತ್ರೆ ಜೊತೆ ಕೈಜೋಡಿಸಿದ್ದಾರೆ.
ಅಲ್ಲದೆ ಸಫಾಯಿ ಕರ್ಮಚಾರಿಗಳ ಪರ ಹೋರಾಟ ನಡೆಸಿದ ಬೆಜವಾಡ ವಿಲ್ಸನ್, ಗಾಂಧಿ ಶಾಂತಿ ಪ್ರತಿಷ್ಠಾನದ ಪಿ.ವಿ ರಾಜಗೋಪಾಲ್, ನಿವೃತ್ತ ಐಎಎಸ್ ಅಧಿಕಾರಿ ಶಾರದ್ ಬೆಹರ್, ಮಹಿಳಾವಾದಿ ಹೋರಾಟಗಾರ್ತಿ ಸೈದಾ ಹಮೀದ್, ಆರ್ಟಿಐ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ ಸೇರಿದಂತೆ ಹಲವರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ರಾಹುಲ್ ಜೊತೆ 100 ಪಾದಯಾತ್ರಿಗಳು ಆರಂಭದಿಂದ ಅಂತ್ಯದವರೆಗೂ ಹೆಜ್ಜೆ ಹಾಕಲಿದ್ದಾರೆ. ಅವರನ್ನು ಭಾರತ್ ಯಾತ್ರಿಗಳು ಎಂದು ಕರೆಯಲಾಗುತ್ತದೆ. ಅಲ್ಲದೆ ಈ ಯಾತ್ರೆ ಯಾವ ರಾಜ್ಯಗಳನ್ನು ತಲುಪುದಿಲ್ಲವೋ ಅಂತಹ ರಾಜ್ಯಗಳಿಂದ ತಲಾ 100 ಜನ ಅತಿಥಿ ಪಾದಯಾತ್ರಿಗಳು ಸಹ ಸೇರಿಕೊಳ್ಳಲಿದ್ದಾರೆ. ಅಲ್ಲದೆ ಪ್ರತಿ ರಾಜ್ಯದ 100 ಪಾದಯಾತ್ರಿಗಳು ಆಯಾ ರಾಜ್ಯದಲ್ಲಿ ಯಾತ್ರೆ ನಡೆಯುವ ಸಂದರ್ಭದಲ್ಲಿ ಜೊತೆಗಿರುತ್ತಾರೆ. ಒಟ್ಟಾರೆಯಾಗಿ ಸ್ಥಳೀಯ ಜನರು, ಹೋರಾಟಗಾರರ ಜೊತೆಗೆ 300 ಜನ ಪಾದಯಾತ್ರಿಗಳು ಪ್ರತಿ ದಿನ ನಡೆಯಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ದೇಶದಲ್ಲಿ ದ್ವೇಷ ಹರಡಲಾಗುತ್ತಿದೆ. ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂವಿಧಾನವನ್ನ ಅಪಮಾನಿಸಲಾಗುತ್ತಿದೆ. ಇದನ್ನು ವಿರೋಧಿಸುತ್ತಾ ಆರ್ಥಿಕ ಅಸಮಾನತೆ ನಿವಾರಣೆಗಾಗಿ, ಸಾಮಾಜಿಕ ದ್ರುವೀಕರಣ ತಪ್ಪಿಸಲು ಭಾರತವನ್ನು ಐಕ್ಯ ದೇಶವನ್ನಾಗಿ ಕಟ್ಟಲು ಭಾರತ್ ಜೋಡೋ ಯಾತ್ರೆ ನಡೆಸಲಾಗುತ್ತಿದೆ ಎಂದು ಸಂಸದರಾದ ಜೈರಾಂ ರಮೇಶ್ ತಿಳಿಸಿದ್ದಾರೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಅಥವಾ ರಾಹುಲ್ ಗಾಂಧಿಯವರ ಪಾದಯಾತ್ರೆಯಲ್ಲ ಬದಲಿಗೆ ದೇಶದ ಒಳಿತಿಗಾಗಿ ನಡೆಯುತ್ತಿರುವ ಸರ್ವರ ಯಾತ್ರೆ ಎಂದು ಅವರು ಹೇಳಿದ್ದಾರೆ.
150 ಸಂಘಟನೆಗಳು ಬೆಂಬಲ
ಭಾರತ್ ಜೋಡೋ ಯಾತ್ರೆಗೆ ವಿವಿಧ ಪಕ್ಷಗಳು ಸೇರಿದಂತೆ 150 ಸಂಘಟನೆಗಳು, ವ್ಯಕ್ತಿಗಳು ಬೆಂಬಲ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಸಮಾಜದ ವಿವಿಧ ವರ್ಗದ ಜನ ದೇಶದ ಉಳಿವಿಗಾಗಿ ಜೊತೆಗೂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ; ‘ಕರ್ನಾಟಕ ಬಿಲ್ಕಿಸ್ ಜೊತೆಗಿದೆ’: ಬಿಜೆಪಿ ಸರ್ಕಾರದ ನಡೆ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ


