Homeಮುಖಪುಟಭಾರತ್ ಜೋಡೋ ಯಾತ್ರೆ; ಬೋಣಿ ಅಂತೂ ಚೆನ್ನಾಗಾಯ್ತು, ಆದರೆ ಮುಂದಿನ ದಾರಿ ದೊಡ್ಡದಿದೆ!

ಭಾರತ್ ಜೋಡೋ ಯಾತ್ರೆ; ಬೋಣಿ ಅಂತೂ ಚೆನ್ನಾಗಾಯ್ತು, ಆದರೆ ಮುಂದಿನ ದಾರಿ ದೊಡ್ಡದಿದೆ!

- Advertisement -
- Advertisement -

ಯಾತ್ರೆ ಹೇಗೆ ನಡೀತಿದೆ? ಏನಾದರೂ ಪರಿಣಾಮ ಆಯ್ತಾ? ಚುನಾವಣೆಯಲ್ಲಿ ಲಾಭ ಆಗಲುಂಟಾ? ಏನಾದರೂ ಸಾಧಿಸ್ತೀರೋ ಇಲ್ವೋ? ಯಾವಾಗ ಕನ್ಯಾಕುಮಾರಿಯಿಂದ ’ಭಾರತ ಜೋಡೊ ಯಾತ್ರಾ’ ಶುರುವಾಯ್ತೋ, ಆವಾಗಿನಿಂದ ಕರೆಗಳು ಬರುತ್ತಲೇ ಇವೆ. ಇಂತಹ ಪರಿಚಿತ ಪ್ರಶ್ನೆಗಳ ಸುರಿಮಳೆಯೇ ಆಗುತ್ತಿದೆ. ಟಿವಿಯಲ್ಲೂ ಕೋಳಿಜಗಳ ಶುರುವಾಗಿದೆಯಂತೆ. ಯಾತ್ರೆಯ ಹಿಂದಿನ ಇರಾದೆ ಏನಿದೆ ಎಂಬುದರ ಮೇಲೆ ಈ ಯಾತ್ರೆ ಏನು ಸಾಧಿಸುವುದು ಎಂಬುದು ನಿಂತಿದೆ. ಪಾದಯಾತ್ರೆಗಳ ಅನೇಕ ರೀತಿಯದ್ದಾಗಬಹುದು; ಕೆಲವರಿಗೆ ನಡಿಗೆಯಾದರೆ, ಕೆಲವರಿಗೆ ಕಸರತ್ತು. ಅಲೆಮಾರಿ ಸಮಾಜದವರಿಗೆ ಜೀವನಶೈಲಿ; ಹಾಗೂ ಬೀದಿ ಸುತ್ತಿ ಸರಕು ಮಾರಾಟ ಮಾಡುವವರಿಗೆ ವ್ಯಾಪಾರ. ಕೆಲವರು ಹರಕೆ ಹೊತ್ತು ನಡೆದರೆ, ಕೆಲವರು ದೇವರ ದರ್ಶನದ ಆಕಾಂಕ್ಷೆಯಿಟ್ಟು ನಡೆಯುತ್ತಾರೆ. ಕೆಲವೇ ಕೆಲವರು ತನ್ನೊಳಗಿನ ದೇವರನ್ನು ಹುಡುಕುತ್ತ ಕಾಲ್ನಡಿಗೆಯ ಯಾತ್ರೆ ಮಾಡುತ್ತಾರೆ.

ಇದೇ ಮಾತು ರಾಜಕೀಯ ಪಾದಯಾತ್ರೆಗಳಿಗೂ ಅನ್ವಯಿಸುತ್ತದೆ. ಇಲ್ಲಿಯೂ ಕೆಲವರು ಪ್ರವಾಸಿಗಳಿದ್ದಾರೆ, ಕೆಲವರಿಗೆ ದರ್ಶನದ ಆಕಾಂಕ್ಷೆಯಿದ್ದರೆ ಕೆಲವರಿಗೆ ಟಿಕೆಟ್‌ದ್ದು. ನಮ್ಮಲ್ಲಿ ಚುನಾವಣಾ ಪಾದಯಾತ್ರೆಗಳ ಇತಿಹಾಸವೂ ತುಂಬಾ ಹಳೆಯದು. ನಮ್ಮಲ್ಲಿ ಆದ ಕೆಲವು ಪಾದಯಾತ್ರೆಗಳಿಂದ ದೇಶವು ತನ್ನನ್ನು ತಾನು ಗುರುತಿಸಿಕೊಂಡಿದೆ, ಕಳೆದುಕೊಂಡ ತನ್ನ ಆತ್ಮಬಲವನ್ನು ಪಡೆದುಕೊಂಡಿದೆ.

ಸ್ವಾಭಾವಿಕವಾಗಿಯೇ ’ಭಾರತ ಜೋಡೊ ಯಾತ್ರೆ’ಯಲ್ಲಿ ಇವೆಲ್ಲವುಗಳ ಒಂದಿಷ್ಟು ಅಂಶಗಳಿವೆ. ಹಾಗಾಗಿ ದೇಶದ ಒಂದು ದೊಡ್ಡ ಪಕ್ಷದಿಂದ ಪ್ರಾಯೋಜಿತವಾದ ಇಂತಹ ಯಾತ್ರೆಗಳಲ್ಲಿ ಪ್ರವಾಸಿಗರೂ ಇರುತ್ತಾರೆ, ಅವರೊಂದಿಗೆ ಪೈಲ್ವಾನರೂ ಇರುತ್ತಾರೆ, ಟಿಕೆಟ್ ಆಕಾಂಕ್ಷಿಗಳೂ ಇರುತ್ತಾರೆ ಹಾಗೂ ದರ್ಶನಾರ್ಥಿಗಳೂ ಇರುತ್ತಾರೆ. ಈ ಯಾತ್ರೆಯ ಯಶಸ್ಸು, ವಿಫಲತೆಗಳನ್ನು ಈ ಸಣ್ಣ ಆಕಾಂಕ್ಷೆಗಳ ತಕ್ಕಡಿಯಲ್ಲಿ ಅಳೆಯಲು ಸಾಧ್ಯವಿಲ್ಲ. ಎಂದಿನಂತೆಯೇ ರಾಜಕೀಯ ಪಂಡಿತರು ಇದನ್ನು ಕಾಂಗ್ರೆಸ್ ಪಕ್ಷ ಅಥವಾ ರಾಹುಲ್ ಗಾಂಧಿಯ ಲಾಭ-ನಷ್ಟಗಳ ಲೆಕ್ಕದಲ್ಲಿ ಒರೆಗೆ ಹಚ್ಚಲಿದ್ದಾರೆ. ಆದರೆ, ಒಂದು ಪಕ್ಷದ ಅಥವಾ ಒಬ್ಬ ನಾಯಕನ ಲಾಭವು ರಾಷ್ಟ್ರದ ಹಿತಾಸಕ್ತಿಯ ಅಳತೆಗೋಲಾಗಲು ಸಾಧ್ಯವಿಲ್ಲ.

ಇಂದಿನ ಸಂದರ್ಭದಲ್ಲಿ ಭಾರತ ಜೋಡೊ ಯಾತ್ರೆಯ ಸಫಲತೆಯ ಒಂದೇ ಒಂದು ಅಳತೆ ಆಗಿರಬಹುದು. ಅದು, ದೇಶದ ಭವಿಷ್ಯದ ಮೇಲೆ ಕವಿದಿರುವ ಕಾರ್ಮೋಡಗಳನ್ನು ಇಲ್ಲವಾಗಿಸುವಲ್ಲಿ ಈ ಯಾತ್ರೆ ಸಹಕಾರಿಯಾಗುವುದೇ? ನಮ್ಮ ಪ್ರಜಾಪ್ರಭುತ್ವ, ಸಂವಿಧಾನ, ಸ್ವಾತಂತ್ರ್ಯ ಆಂದೋಲನ ಹಾಗೂ ಸಭ್ಯತೆಯ ಪರಂಪರೆಯನ್ನು ಉಳಿಸುವಲ್ಲಿ ಏನಾದರೂ ಯೋಗದಾನ ನೀಡುವುದೇ? ರಾಜಕೀಯ ಶಕ್ತಿಯ ಸಮತೋಲನವನ್ನು ಸ್ವಲ್ಪ ಮಟ್ಟಿಗಾದರೂ, ದೇಶವನ್ನು ಜೋಡಿಸುವ ಕಡೆಗೆ ತಿರುಗಿಸಬಲ್ಲದೇ? ನನ್ನಂತಹ ಜನರು ಇದೇ ನಿರೀಕ್ಷೆಯಲ್ಲಿ ಈ ಯಾತ್ರೆಯಲ್ಲಿ ಸೇರಿಕೊಂಡಿದ್ದೇವೆ. ದೇಶದ ಇತಿಹಾಸದಲ್ಲಿ ಸೂಕ್ಷ್ಮವಾದ ಮತ್ತು ನಿರ್ಣಾಯಕವಾದ ಸಮಯದಲ್ಲಿ ನಡೆಯುತ್ತಿರುವ ಈ ಯಾತ್ರೆಯನ್ನು ಬೇರೆ ಯಾವುದೇ ದೃಷ್ಟಿಕೋನದಲ್ಲಿ ನೋಡುವುದು ಒಂದು ದೊಡ್ಡ ಅಸಡ್ಡೆಯೆನಿಸುತ್ತದೆ.

ಸುಮಾರು 5 ತಿಂಗಳು ನಡೆಯಲಿರುವ ಈ ಯಾತ್ರೆಯ ಬಗ್ಗೆ ಮೊದಲ 5 ದಿನದ ಆಧಾರದ ಮೇಲೆ ಯಾವುದೇ ತೀರ್ಮಾನಕ್ಕೆ ಬರುವುದು ಹಾಸ್ಯಾಸ್ಪದವಾಗುವುದು; ಆದರೆ ಈ ಮೊದಲ ಝಲಕ್‌ನಿಂದ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಮೊದಲ ವಾರದಲ್ಲಿ ಈ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿ ಹಾಗೂ ಕೇರಳದ ತಿರುವನಂತಪುರಂ ಜಿಲ್ಲೆಗಳಿಂದ ಹಾದುಹೋಗುತ್ತಿದೆ. ಇವೆರಡೂ ತುಲನಾತ್ಮಕವಾಗಿ ಕಾಂಗ್ರಸ್‌ನ ಪ್ರಬಲ ಕ್ಷೇತ್ರಗಳಾಗಿವೆ. ಹಾಗಾಗಿ ಯಾತ್ರೆಗೆ ಇಷ್ಟು ಬೃಹತ್ತಾಗಿ ಸಿಕ್ಕ ಜನರ ಸಮರ್ಥನೆಯಿಂದ ಅಚ್ಚರಿಯಾಗಲಾರದು. ಆದರೆ, ಗಮನಿಸಬೇಕಾದ ಅಂಶವೇನೆಂದರೆ, ಹೆಚ್ಚುಕಡಿಮೆ ಎಲ್ಲಾ ಸಮಯದಲ್ಲೂ ರಸ್ತೆಯ ಎರಡೂ ಬದಿಗಳಲ್ಲಿ ಈ ಯಾತ್ರೆಯನ್ನು ಸ್ವಾಗತಿಸಲು ಜನರ ನಿಂತಿದ್ದರು, ಹಾಗೂ ಅವರಲ್ಲಿ ಅನೇಕರು ಗಂಟೆಗಳವರೆಗೆ ನಿಂತಿದ್ದರು. ಸ್ವಾಭಾವಿಕವಾಗಿಯೇ, ಈ ಜನಸಮೂಹದಲ್ಲಿ ಹೆಚ್ಚಿನ ಜನರನ್ನು ಪಕ್ಷದ ಕಾರ್ಯಕರ್ತರು ಸೇರಿಸಿರಬಹುದು. ಹಾಗೆ ನೋಡಿದರೂ ಇದೂ ಒಂದು ಸಾಧನೆಯೇ.

ಕೆಲವರು ಕೇವಲ ನೋಡುಗರಾಗಿಯೂ ಇದ್ದರು. ಆದರೆ ಈ ಜನಸಮೂಹದಲ್ಲಿ ಸಾಧಾರಣ ಜನರು ಒಂದು ಭಾಗವೂ ಇತ್ತು, ಅವರನ್ನು ಯಾವುದೇ ಪಕ್ಷದವರು ಅಲ್ಲಿ ಸೇರಿಸಿದ್ದಲ್ಲ, ಅವರು ಖುದ್ದಾಗಿ ಬಂದಿದ್ದರು. ಕತ್ತಲೆಯಲ್ಲಿ ಒಂದು ಪುಟ್ಟ ಆಸೆಯ ಬೆಳಕನ್ನು ಕಂಡಾಗ ಕಾಣುವ ಒಂದು ಹೊಳಪು ಇವರ ಕಣ್ಣುಗಳಲ್ಲಿತ್ತು. ಇವರನ್ನು ಈಗಾಗಲೇ ಕಾಂಗ್ರೆಸ್ ಸಮರ್ಥಕ ಅಥವಾ ಮತದಾರರೆಂಬ ಹೆಸರು ಕೊಡುವುದು ಬೇಡ. ಒಂದು ಪಾದಯಾತ್ರೆಯ ಬಗ್ಗೆ ಗೌರವ ಭಾವನೆ ಇರಲೂ ಸಾಧ್ಯ ಮತ್ತು ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎನ್ನಬಹುದು. ಮುಂದಿನ ಕೆಲವು ದಿನಗಳಲ್ಲೇ ತಿಳಿಯುವುದಾದರೂ, ಈ ಯಾತ್ರೆಯು ಒಂದು ಸಕಾರಾತ್ಮಕವಾದ ಜಾಗೃತಿಯನ್ನು ಮೂಡಿಸುತ್ತಿದೆ ಎಂಬುದನ್ನು ಅಲ್ಲಗಳೆಯಲಾಗದು.

ಚುನಾವಣೆಗಳಲ್ಲಿ ಇದರ ಪರಿಣಾಮ ಏನಾಗುವುದು ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಮೇಲೆ ಏನು ಪರಿಣಾಮ ಎಂಬ ಬಗ್ಗೆಯೂ ಸ್ವಲ್ಪವೂ ಅಂದಾಜು ಮಾಡಲಾಗುವುದಿಲ್ಲ. ಆದರೆ ಈ ಸಕಾರಾತ್ಮಕತೆಯಿಂದ ಈಗಿರುವ ವಿಕಲ್ಪವಿಲ್ಲದಿರುವ ರಾಜಕೀಯ ವಾತಾವರಣವನ್ನು ಎಲ್ಲಿಯಾದರೂ ಒಡೆಯುವ ಸಾಮರ್ಥ್ಯವಂತೂ ಇದೆ.

ಈಗಲೇ ಈ ಯಾತ್ರೆಯು ದೇಶದ ಮನಸ್ಥಿತಿಯ ಮೇಲೆ ಬೀರುವ ಪರಿಣಾಮದ ಬಗ್ಗೆ ಮಾತನಾಡುವುದೂ ಹುಚ್ಚುತನವಾಗುತ್ತದೆ. ಆದರೆ ಒಂದಂತೂ ಸತ್ಯ; ಕಾಂಗ್ರೆಸ್ ಪಕ್ಷ ಕೈಗೆತ್ತಿಕೊಂಡಿರುವ ಈ ನಡಿಗೆ ದೇಶದ ಮೌನ ಮತ್ತು ಏಕತಾನತೆಯ ಭಾವನೆಯನ್ನು ಮುರಿದುಹಾಕಿದೆ. ತಾವೆಂದೂ ಕಾಂಗ್ರೆಸ್‌ನ ಬೆಂಬಲ ನೀಡದೇ ಇರುವ ಹಾಗೂ ಬೀದಿಗಳಲ್ಲಿ ಕಾಂಗ್ರೆಸ್‌ಅನ್ನು ವಿರೋಧಿಸಿದ ಅನೇಕರು ಈ ಯಾತ್ರೆಗೆ ಸಮರ್ಥನೆ ಮಾಡುತ್ತಿದ್ದಾರೆ. ದೇಶದ ಜನಾಂದೋಲನಗಳ ಒಂದು ಭಾಗವು ಕನ್ಯಾಕುಮಾರಿಯಿಂದಲೇ ಈ ಯಾತ್ರೆಯಲ್ಲಿ ಕೂಡಿಕೊಂಡಿದೆ.

ಹೊರಗಿನಿಂದ ಬಂದ ಈ ಅನಿರೀಕ್ಷಿತ ಸಮರ್ಥನೆಯಿಂದ ಕಾಂಗ್ರೆಸ್‌ನ ಪಾದಯಾತ್ರಿಗಳ ಆತ್ಮಸ್ಥೈರ್ಯವು ಹೆಚ್ಚಿದೆ. ಕಳೆದ ಇಡೀ ವಾರದಲ್ಲಿ ಈ ಯಾತ್ರೆಯಲ್ಲಿ ಜೊತೆಗೂಡುವ ಆಕಾಂಕ್ಷೆ ಇಟ್ಟುಕೊಂಡವರ ಸಂದೇಶಗಳು ಹೆಚ್ಚುತ್ತಿವೆ. ಕನಿಷ್ಠ ಒಂದು ಮಟ್ಟಕ್ಕಂತೂ ನಾವು ಒಬ್ಬಂಟಿಗಳಲ್ಲ ಎಂಬ ಭಾವನೆ ಮೂಡುತ್ತಿದೆ. ದೇಶ ಬದಲಿಸುವ ಮಾತು ಈಗ ಹೇಳಿದರೆ ದೊಡ್ಡ ಮಾತಾಗುತ್ತದೆ, ಆದರೆ ದೇಶವನ್ನು ಜೋಡಿಸುವ ಇಚ್ಛೆ ಹೊಂದಿದ್ದವರಲ್ಲಿ ತಮ್ಮನ್ನು ತಾವು ಬದಲಿಸಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಬೋಣಿ ತುಂಬಾ ಚೆನ್ನಾಗಾಗಿದೆ.

ಯೋಗೇಂದ್ರ ಯಾದವ್

(ಕನ್ನಡಕ್ಕೆ): ರಾಜಶೇಖರ ಅಕ್ಕಿ


ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ; ಭಾರತದ ಬಹುತ್ವದ ಉಳಿವಿಗೆ ದಾರಿ ಮಾಡಿಕೊಡಬಲ್ಲುದೇ?

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಬಿಜೆಪಿ ಮಾಡಿದ ಹಾನಿಯನ್ನು ಸರಿಪಡಿಸುವ ಪ್ರಯತ್ನ: ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...