ದೇಶದಲ್ಲಿ ಸುದ್ದಿಯಾಗುವ ಪ್ರಮುಖ ವಿಷಯಗಳು ಹೆಚ್ಚಿದ್ದರು ಕೂಡ ಹೆಚ್ಚಿಗೆ ಸುದ್ದಿಯಾಗುತ್ತಿರುವುದು ಮಾತ್ರ ಅಮಿರ್ ಖಾನ್ ಮತ್ತು ಕಿರಣ್ ರಾವ್ ಅವರ ವಿಚ್ಛೇದನದ ಸುದ್ದಿ. ಇದು ಈಗ ರಾಜಕೀಯ ಸಂಬಂಧಗಳನ್ನು ತಿಳಿಸಲು ಸಹ ಬಳಕೆಯಾಗುತ್ತಿದೆ. ಬಿಜೆಪಿ ಮತ್ತು ಶಿವಸೇನೆಯ ಸಂಬಂಧವನ್ನು ವಿವರಿಸುವಾಗ ನಮ್ಮ ಸಂಬಂಧ ಅಮಿರ್ ಖಾನ್ ಮತ್ತು ಕಿರಣ್ ರಾವ್ ಅವರ ಸಂಬಂಧದಂತೆ ಎಂದು ಶಿವಸೇನೆಯ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
ಬಿಜೆಪಿಯೊಂದಿಗೆ ಶಿವಸೇನೆ ಮತ್ತೆ ಒಂದಾಗಲಿದೆ ಎಂಬ ಮಾತುಕತೆ ರಾಜಕೀಯದಲ್ಲಿ ಚರ್ಚೆಯಾಗುತ್ತಿದ್ದು, ರಾಜಕೀಯವಾಗಿ ಎರಡು ಪಕ್ಷಗಳು ಭಿನ್ನವಾಗಿದ್ದರೂ, ಕ್ಷಗಳ ನಡುವಿನ ಬಾಂಧವ್ಯ ಉಳಿದಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರ ಹೇಳಿದ್ದಾರೆ.
ಇತ್ತ ಮಾಜಿ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಮತ್ತೆ ಒಟ್ಟಿಗೆ ಸೇರಲಿದ್ದಾರೆಯೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ದೇವೇಂದ್ರ ಫಡ್ನವಿಸ್, “ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಶಿವಸೇನೆ ಎಂದಿಗೂ ಬಿಜೆಪಿಯ ಶತ್ರುವಲ್ಲ’: ದೇವೇಂದ್ರ ಫಡ್ನವಿಸ್
We are not India-Pakistan. Look at Aamir Khan and Kiran Rao, it is like them. Our (Shiv Sena, BJP) political ways are different but the friendship will remain intact: Shiv Sena leader Sanjay Raut on BJP's Devendra Fadnavis' 'we are not enemies' remark pic.twitter.com/OUPdztS9Od
— ANI (@ANI) July 5, 2021
“ನಾವು ಭಾರತ-ಪಾಕಿಸ್ತಾನವಲ್ಲ. ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರನ್ನು ನೋಡಿ, ಅವರ ಸಂಬಂಧದಂತೆ ನಮ್ಮ ಬಂಧ ಕೂಡ ಇದೆ. ಶಿವಸೇನೆ ಮತ್ತು ಬಿಜೆಪಿಯ ರಾಜಕೀಯ ಮಾರ್ಗಗಳು ವಿಭಿನ್ನವಾಗಿವೆ ಆದರೆ ಸ್ನೇಹ ಮಾತ್ರ ಹಾಗೇ ಉಳಿದಿರುತ್ತದೆ” ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.
ಇದರೊಂದಿಗೆ ಮಹಾರಾಷ್ಟ್ರದ ಶಿವಸೇನೆ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ನ ‘ಮಹಾ ವಿಕಾಸ್ ಅಘಾಡಿ’’ ಸಮ್ಮಿಶ್ರ ಸರ್ಕಾರದ ಮೈತ್ರಿ ಒಡೆಯುವ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ ಎಂದು ಸಂಜಯ್ ರಾವತ್ ಸ್ಪಷ್ಟಪಡಿಸಿದ್ದಾರೆ. ‘ಮಹಾ ವಿಕಾಸ್ ಅಘಾಡಿ’’ ಸಮ್ಮಿಶ್ರ ಸರ್ಕಾರ ತನ್ನ ಸಂಪೂರ್ಣ ಅಧಿಕಾರವಧಿಯನ್ನು ಉಳಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರು 15 ವರ್ಷಗಳ ದಾಂಪತ್ಯದ ನಂತರ ಕಳೆದ ವಾರಾಂತ್ಯದಲ್ಲಿ ವಿಚ್ಛೇದನ ಘೋಷಿಸಿದರು. ನಂತರ ಭಾನುವಾರ ಇಬ್ಬರು ಒಟ್ಟಿಗೆ ಕುಳಿತು, ಅಭಿಮಾನಿಗಳೊಂದಿಗೆ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ. “ನಿಮಗೆ ಬೇಸರವಾಗಿರಬಹುದು, ಸಿಟ್ಟೂ ಬಂದಿರಬಹುದು. ಆಘಾತವಾಗಿರಬಹುದು. ಆದರೆ ನಮ್ಮ ನಿರ್ಧಾರದಿಂದ ನಾವಿಬ್ಬರೂ ಖುಷಿಯಾಗಿದ್ದೇವೆ. ಒಂದು ಕುಟುಂಬವಾಗಿ ಮುಂದುವರೆಯುತ್ತೇವೆ. ನಮ್ಮ ಸಂಬಂಧ ಬದಲಾಗಿದೆ ಆದರೆ ನಾವು ಇನ್ನೂ ಒಟ್ಟಿಗೆ ಇದ್ದೇವೆ” ಎಂದು ಹೇಳಿದ್ದರು.
ಇನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರು ದೇವೇಂದ್ರ ಫಡ್ನವಿಸ್ ’ನಾವು ಮತ್ತು ಶಿವಸೇನೆ ಎಂದಿಗೂ ಶತ್ರುಗಳಲ್ಲ. ಅವರು ನಮ್ಮ ಸ್ನೇಹಿತರು’ ಎಂದಿದ್ದಾರೆ.
ಒಟ್ಟಾರೆ, ಶಿವಸೇನೆ ನೇತೃತ್ವದ ಮಹಾರಾಷ್ಟ್ರದ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಯಲ್ಲಿ ಒತ್ತಡ ಉಂಟಾಗಿದೆ ಎಂಬ ವದಂತಿಗಳ ನಡುವೆಯೇ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ಕೆಲವು ಸಮಯದಿಂದ ಮಾತುಕತೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮುಂದಿನ ಭಾರೀ ಕಾಂಗ್ರೆಸ್ ಮುಖ್ಯಮಂತ್ರಿ ಚರ್ಚೆ!: ಮಹಾರಾಷ್ಟ್ರ ಮೈತ್ರಿ ಗಟ್ಟಿಯೆಂದ ಶಿವಸೇನೆ