ಶಿವಸೇನೆ ಸಂಸದ ಸಂಜಯ್ ರಾವತ್ ಮತ್ತು ಆಕೆಯ ಪತಿಯ ಆಜ್ಞೆಯ ಮೇರೆಗೆ ಕೆಲವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದ 39 ವರ್ಷದ ಮಹಿಳೆಯ ಮನವಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಮುಂಬೈ ನಿವಾಸಿಯಾಗಿರುವ ಮಹಿಳೆ ಅಪರಿಚಿತ ವ್ಯಕ್ತಿಗಳ ವಿರುದ್ಧ 2013 ಮತ್ತು 2018 ರಲ್ಲಿ ಸಲ್ಲಿಸಿರುವ ಮೂರು ದೂರುಗಳನ್ನು ತನಿಖೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಹೈಕೋರ್ಟ್ಗೆ ಒತ್ತಾಯಿಸಿದ್ದರು. ಜೊತೆಗೆ ವಲಯ VIII ನ ಉಪ ಪೊಲೀಸ್ ಆಯುಕ್ತರ (ಡಿಸಿಪಿ) ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ನ್ಯಾಯಮೂರ್ತಿ ಎಸ್.ಎಸ್ ಶಿಂಧೆ ಮತ್ತು ನ್ಯಾಯಮೂರ್ತಿ ಎನ್.ಜೆ ಜಮಾದಾರ್ ಅವರ ವಿಭಾಗೀಯ ಪೀಠವು ಜುಲೈ 22 ರಂದು ಮಹಿಳೆಯ ಅರ್ಜಿ ತೀರ್ಪನ್ನು ಕಾಯ್ದಿರಿಸಿತ್ತು.
ಇದನ್ನೂ ಓದಿ: ಮಹಾ ಸಿಎಂಗೆ ಕಪಾಳಮೋಕ್ಷ ಹೇಳಿಕೆ: ಒಕ್ಕೂಟ ಸರ್ಕಾರದ ಸಚಿವ ಅರೆಸ್ಟ್!
ಎರಡು ಪ್ರಕರಣಗಳಲ್ಲಿ ಪೊಲೀಸರು ಸಲ್ಲಿಸಿರುವ ‘ಎ-ಸಾರಾಂಶ’ ವರದಿ ಮತ್ತು ಮೂರನೇ ದೂರಿನಲ್ಲಿ ದೋಷಾರೋಪ ಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು “ಕಾನೂನಿನ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ಸೂಕ್ತ ಅಧೀನ ನ್ಯಾಯಾಲಯವನ್ನು ಸಂಪರ್ಕಿಸಿ” ಎಂದು ಬುಧವಾರ ಸೂಚಿಸಿದೆ.
ತಾನು ದೂರು ದಾಖಲಿಸಿದ ವಲಯ VIII ನ ಡಿಸಿಪಿ, ರಾಷ್ಟ್ರೀಯ ಮಹಿಳಾ ಆಯೋಗದ ನಿರ್ದೇಶನಗಳನ್ನು ಅನುಸರಿಸಲು ವಿಫಲರಾಗಿದ್ದಾರೆ ಎಂದು ಮಹಿಳೆಯ ತನ್ನ ವಕೀಲೆ ಅಭಾ ಸಿಂಗ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನನ್ನನ್ನು ಹಿಂಬಾಲಿಸಿದ ಮತ್ತು ನನಗೆ ಕಿರುಕುಳ ನೀಡಿದ ಜನರು ಸಂಸದ ಸಂಜಯ್ ರಾವತ್ ಜೊತೆಗೆ ಗುರುತಿಸಿಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಜೂನ್ 22 ರಂದು ಹೈಕೋರ್ಟ್ ಮುಂಬೈ ಪೊಲೀಸ್ ಆಯುಕ್ತರಿಗೆ ಮಹಿಳೆಯ ದೂರಿನ ಬಗ್ಗೆ ಪರಿಶೀಲಿಸಲು ಮತ್ತು ಈ ಕುರಿತು ವರದಿಯನ್ನು ಸಲ್ಲಿಸಲು ಸೂಚಿಸಿತ್ತು.
ಇದನ್ನೂ ಓದಿ: ಮುಸ್ಲಿಂ ಬಳೆ ವ್ಯಾಪಾರಿ ಮೇಲೆ ಗುಂಪು ಹಲ್ಲೆ; ‘ಬಳೆ ಜಿಹಾದ್’ ಎಂದ ಝೀ ಮತ್ತು ನ್ಯೂಸ್ 18!