Homeಅಂಕಣಗಳುಕನ್ನಡ ಪುಸ್ತಕಾಲಯದ ನಡೆದಾಡುವ ಪುಸ್ತಕ ಬಿ.ಆರ್ ತುಬಾಕಿ

ಕನ್ನಡ ಪುಸ್ತಕಾಲಯದ ನಡೆದಾಡುವ ಪುಸ್ತಕ ಬಿ.ಆರ್ ತುಬಾಕಿ

- Advertisement -
- Advertisement -

ಎಲೆಮರೆ-25

ನಾನು ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದ 2002 ರಿಂದ ಈ ತನಕ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ಯಾಂಪಸ್ಸಿಗೆ ಪುಸ್ತಕಗಳನ್ನು ಹೊತ್ತು ತಂದು ಮಾರುವ ಆಪ್ತ ಸಂಗಾತಿಗಳ ಒಡನಾಟವಿದೆ. ಅವರುಗಳಲ್ಲಿ ಕೆಲವರು ವಿದ್ಯಾರ್ಥಿಸ್ನೇಹಿಗಳಾಗಿ ಬಹುಬೇಗ ಆಪ್ತರಾಗುತ್ತಾರೆ. ಅದರಲ್ಲಿ ಗುಲ್ಬರ್ಗಾ ಭಾಗದ ಪ್ರಭಾಕರ್ ಎನ್ನುವಾತ ವರ್ಣರಂಜಿತ ವ್ಯಕ್ತಿ. ಪುಸ್ತಕ ಖರೀದಿಗೆಂದು ಹೋದಾಗ ಇದನ್ನ ತಗಳ್ರಿ ಇದು ಬಾರಿ ಒಳ್ಳೇ ಪುಸ್ತಕ ಅಂತ ಆ ಪುಸ್ತಕದ ವಿಮರ್ಶೆ ಮಾಡುತ್ತಿದ್ದ. ಪ್ರಭಾಕರ್ ನಮಗೆ ಜಿಗರಿ ದೋಸ್ತ್ ಆಗಿದ್ದ. ಕ್ಯಾಂಪಸ್ಸಿಗೆ ಬಂದಾಗಲೆಲ್ಲಾ ಹಲವು ಬಾರಿ ನಮ್ಮ ರೂಮುಗಳಲ್ಲೆ ಉಳಿಯುತ್ತಿದ್ದ. ಆತನ ನಗು ಅರ್ದ ಊರಿಗೆ ಕೇಳಿಸುತ್ತಿತ್ತು. ರಾತ್ರಿಪೂರಾ ತಡೆರಹಿತ ಮಾತು ಮಾತು. ಈ ಕಾರಣಕ್ಕೆ ಆತನನ್ನು ರೂಮಲ್ಲಿ ಉಳಿಸಿಕೊಳ್ಳಲು ಭಯಪಡುತ್ತಿದ್ದೆವು. ಏನಾದರೂ ನೆಪಹೇಳಿ ಹೊರ ಹಾಕುವ ಉಪಾಯ ಮಾಡಿದರೂ, ಜಿಗಣಿಯಂತೆ ಅಂಟಿಕೊಂಡು ನಮ್ಮಲ್ಲೇ ಹೆಚ್ಚು ಉಳಿಯುತ್ತಿದ್ದ. ಕಳೆದ ಮೂರ್ನಾಲ್ಕು ವರ್ಷದ ಹಿಂದೆ ಪ್ರಭಾಕರ್ ಹಟಾತ್ತನೆ ಹೃದಯಾಘಾತದಿಂದ ಇಲ್ಲವಾದರು. ಈ ಸುದ್ದಿ ಕೇಳಿ ಆತನ ದೊಡ್ಡ ನಗು, ಜೋರು ಮಾತು ಒಂದು ಕ್ಷಣ ಸ್ತಬ್ಧವಾದಂತಾಯಿತು. ನಾವು ಆತನನ್ನು ಪುಸ್ತಕ ಪ್ರಭಾಕರ ಅಂತಲೇ ಕರೆಯುತ್ತಿದ್ದೆವು. ಪ್ರಭಾಕರ್ ಗಾಢ ವಿಷಾದ ಉಳಿಸಿ ಹೊರಟುಹೋದರು.

ಮೊದಲಿನಿಂದಲೂ ನಮಗೆ ಆಪ್ತರಲ್ಲಿ ಕೊಪ್ಪಳದ ಪುಸ್ತಕದ ತುಬಾಕಿಯವರೂ ಒಬ್ಬರು. ಅವರು ಪ್ರಭಾಕರನಿಗೆ ವಿರುದ್ಧದ ಸ್ವಭಾವದವರು. ಪ್ರಭಾಕರ್ ಎತ್ತರದ ತೆಳ್ಳಗಿನ ವ್ಯಕ್ತಿಯಾಗಿದ್ದರೆ, ತುಬಾಕಿ ಕುಳ್ಳಗೆ ಚೂರು ದಪ್ಪನೆ ವ್ಯಕ್ತಿ. ಪ್ರಭಾಕರ್ ಮಾತಿನ ಸರದಾರನಾಗಿದ್ದರೆ, ತುಬಾಕಿ ಚುಟುಕು ಮಾತು, ಸಣ್ಣನೆಯ ದನಿ. ಮೆದುವಾಗಿ ಪುಸ್ತಕಗಳ ಮಹತ್ವ ಹೇಳುತ್ತಲೆ ಪುಸ್ತಕ ಓದುವ ಅಭಿರುಚಿ ಮೂಡಿಸುವವರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಕಾರಣ ಕ್ಯಾಂಪಸ್ಸಿಗೆ ಕೆಲವೊಮ್ಮೆ ಅವರ ತಮ್ಮನನ್ನು ಪುಸ್ತಕ ಹೊರಿಸಿ ಕಳಿಸುತ್ತಿದ್ದರು. ಇದೀಗ ಶಾಲಾ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಕಾರಣ ಪೂರ್ಣಪ್ರಮಾಣದ ಪುಸ್ತಕ ಸಂಗಾತಿಯಾಗಿ ಬದಲಾಗಿದ್ದಾರೆ.

ಬಿ.ಆರ್.ತುಬಾಕಿ ಅವರ ಪುಸ್ತಕ ಸಾಂಗತ್ಯದ ಪಯಣ ಕುತೂಹಲಕಾರಿಯಾಗಿದೆ. ಬಾಲಪ್ಪ ರಾಮಪ್ಪ ತುಬಾಕಿ ಅವರು ನಿಲೋಗಲ್ ಪಾಳೆಪಟ್ಟದಲ್ಲಿ ಇವರ ವಂಶಜರು ಸೈನಿಕರಾಗಿದ್ದು, ವಂಶದ ಹಿರಿಯ ಯುದ್ಧವೊಂದರಲ್ಲಿ ಮಡಿದ ಕಾರಣ ಒಂದಷ್ಟು ಹೊಲ ಸಿಕ್ಕು ಬದುಕು ಕಟ್ಟಿಕೊಂಡದ್ದಾಗಿಯೂ, ಈ ಹಿನ್ನೆಲೆಯಲ್ಲಿ ತಮ್ಮ ವಂಶಕ್ಕೆ ತುಬಾಕಿ ಎಂಬ ಹೆಸರು ಬಂದದ್ದಾಗಿಯೂ ಹೇಳುತ್ತಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಪುಟ್ಟ ಹಳ್ಳಿ ನಿಲೋಗಲ್‍ನ ಇವರು ಓದಿಗೆಂದು 1975 ರಲ್ಲಿ ರೋಣ ತಾಲೂಕಿನ ಹೊಳೆ ಆಲೂರಿನ ಖಾಸಗಿ ಪ್ರೌಢಶಾಲೆ ಸೇರುತ್ತಾರೆ. ಇಲ್ಲಿನ ಹಾಸ್ಟೆಲ್ ನಲ್ಲಿ ದಿನಕ್ಕೊಂದು ಪುಸ್ತಕ ಕೊಟ್ಟು ಆ ಪುಸ್ತಕದ ಬಗೆಗೆ ಒಂದು ಪುಟ ಬರೆಸುತ್ತಿದ್ದರು. ಈ ಬಗೆಯ ನಿರಂತರ ಚಟುವಟಿಕೆಯೇ ಪುಸ್ತಕದ ಓದು, ಗ್ರಹಿಕೆಗೆ ಬುನಾದಿಯಾಯಿತು. ಮುಂದೆ ಕಲ್ಮೇಶ್ವರ ಕಾಲೇಜಿನ ಲೈಬ್ರರಿಯಲ್ಲಿ ಇದೇ ಪ್ರವೃತ್ತಿ ಮುಂದುವರಿಯುತ್ತದೆ. ಆನಂತರ ನಿಧಾನಕ್ಕೆ ಎಲ್.ಆರ್ ಅನಂತರಾಮಯ್ಯ ಅವರು ತರುತ್ತಿದ್ದ `ಗ್ರಂಥಲೋಕ’ ಸಾಹಿತ್ಯ ಪತ್ರಿಕೆ ಓದುತ್ತಾ, ಇದರಲ್ಲಿ ಹಾ.ಮ.ನಾಯಕರು ಪರಿಚಯಿಸುತ್ತಿದ್ದ ಪುಸ್ತಕಗಳನ್ನು ಹುಡುಕಿ ಓದತೊಡಗುತ್ತಾರೆ. ಈ ಓದಿನ ಗೀಳಿಗೆ ಅಂಟಿಕೊಂಡಂತೆ ಪ್ರಕಾಶಕರು, ಮುದ್ರಕರು, ಪುಸ್ತಕ ಮಾರಾಟಗಾರರು, ಮುಖ್ಯವಾಗಿ ಆಯಾ ಪುಸ್ತಕದ ಲೇಖಕರ ಪರಿಚಯದ ಒಡನಾಟ ತುಬಾಕಿಯವರಿಗೆ ಸಿಗತೊಡಗಿತು. ಕಾರಣ ತಾನು ಓದಿದ ಪುಸ್ತಕದ ಬಗ್ಗೆ ಆಯಾ ಪುಸ್ತಕದ ಲೇಖಕ/ಲೇಖಕಿಯರಿಗೆ ತನ್ನ ಅಭಿಪ್ರಾಯದ ಪತ್ರ ಬರೆಯುತ್ತಿದ್ದರು. ಹೀಗೆ ತುಬಾಕಿಯವರಲ್ಲಿ ಸಾಹಿತಿಗಳ ಪತ್ರ ಒಡನಾಟದ ಒಂದು ಭಂಡಾರವೆ ಇದೆ. ಇದೇ ಹೊತ್ತಿಗೆ ಲಂಕೇಶ್ ಪತ್ರಿಕೆ ಓದು ಶುರುವಾಯಿತು. ಇದು ತುಬಾಕಿಯವರ ಓದಿನ ಹಸಿವಿಗೆ ಮತ್ತೊಂದು ರೆಕ್ಕೆ ಮೂಡಿಸಿತು. ತೊಂಬತ್ತರ ದಶಕದಲ್ಲಿ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಾರಂಭವಾದಾಗ ಚಂದ್ರಶೇಖರ ಕಂಬಾರ ಒಳಗೊಂಡಂತೆ ಹತ್ತಾರು ವಿದ್ವಾಂಸರು ಸಂಪರ್ಕಕ್ಕೆ ಬಂದರು. ಈ ಹೊತ್ತಿಗಾಗಲೆ ಸರಿಸುಮಾರು ಐವತ್ತು ಸಾವಿರದಷ್ಟು ದೊಡ್ಡ ಗ್ರಂಥಬಂಡಾರವನ್ನೆ ಸಂಗ್ರಹಿಸಿದ್ದರು. 1992 ರಲ್ಲಿ ಕನ್ನಡ ವಿಶ್ವವಿದ್ಯಾಲಯದ ಪುಸ್ತಕಗಳು ತುಂಗಾಭದ್ರ ನದಿಯಲ್ಲಿ ಹರಿದು ಹೋದವು. ಆ ಸಂದರ್ಭದಲ್ಲಿ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ನೀಡಿದ್ದೇನೆ ಎಂದು ತುಬಾಕಿ ಹೇಳುತ್ತಾರೆ.

ಪುಸ್ತಕದ ಹಸಿವು ತುಬಾಕಿಯವರನ್ನು ನಾಡಿನ ಗಡಿ ದಾಟಿಸಿತು. ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯ ಪಾ.ಶ.ಶ್ರೀನಿವಾಸ (ತಿರುಕ್ಕುರಳ್), ದೆಹಲಿ ವಿವಿಯ ವಿನೋದ ಬಾಯಿ, ಎನ್.ಬಿ.ಟಿಗೆ ಅಧ್ಯಕ್ಷರಾಗಿದ್ದ ಹಾ.ಮಾ.ನಾಯಕ, ಕೇಂದ್ರ ಸಾಹಿತ್ಯ ಅಕಾಡೆಮಿಯ ಶಾ.ಬಾಲುರಾವ್, ಕೇರಳದ ಆರ್.ರಾಮ್, ಮಧುರೈ ವಿವಿಯ ಪಿ.ಎಸ್.ಶ್ರೀನಿವಾಸ ಈ ಎಲ್ಲರ ಪರಿಚಯ ಬೇರೆ ಬೇರೆ ಭಾಷೆಯ ಅನುವಾದ ಕೃತಿಗಳ ಓದಿನ ರುಚಿ ಹತ್ತಿಸಿತು. ಹಾಗಾಗಿ ತುಬಾಕಿಯವರು ಕನ್ನಡ ಸಾಹಿತ್ಯದ ಗಡಿ ದಾಟಿ ಭಾರತೀಯ ಸಾಹಿತ್ಯ ಮತ್ತು ಲೇಖಕರ ವ್ಯಾಪ್ತಿಗೆ ತಮ್ಮನ್ನು ಹಿಗ್ಗಿಸಿಕೊಂಡರು. ಹೀಗಾಗಿ ಈ ಎಲ್ಲರ ಜತೆಗಿನ ಸ್ನೇಹ ಪುಸ್ತಕ ಓದು ಖರೀದಿಯನ್ನು ಮತ್ತಷ್ಟು ವಿಸ್ತರಿಸಿತು.

ಹೀಗೆ ಓದಲೆಂದು ಕೊಂಡ ಪುಸ್ತಕಗಳ ಸಂಖ್ಯೆ ಮನೆಯಲ್ಲಿ ಹೆಚ್ಚುತ್ತಾ ಹೋದವು. ಈ ಸಂದರ್ಭದಲ್ಲಿ ನವಕರ್ನಾಟಕದ ರಾಜಾರಾಂ ಅವರು, `ಅಲ್ಲಯ್ಯ ನೀನು ಓದಿದ ಪುಸ್ತಕಗಳನ್ನು ಏನು ಮಾಡುತ್ತಿ? ನೀಟಾಗಿ ಓದಿ ಅದೇ ಪುಸ್ತಕಗಳನ್ನು ಮಾರಾಟ ಮಾಡು, ಬೇಕಾದರೆ ನಮ್ಮ ನವಕರ್ನಾಟಕದ ಪುಸ್ತಕಗಳನ್ನು ಕೊಡುತ್ತೇವೆ’ ಎಂದು ಪ್ರೇರೇಪಿಸಿದರು. ಇದರಿಂದಾಗಿ ತುಬಾಕಿ ಪುಸ್ತಕಗಳ ಪ್ರಸಾರಕರಾಗಿ ಬದಲಾದರು. ಆಗ ರಾಜಾರಾಮರು ಸಾಹಿತ್ಯ ಸಮ್ಮೇಳನಗಳಿಗೆ ಮಳಿಗೆ ಬುಕ್ ಮಾಡುವಾದ ತುಬಾಕಿಯವರಿಗೊಂದು ಮಳಿಗೆ ಕಾಯ್ದಿರಿಸುತ್ತಿದ್ದರು. ಆ ಹೊತ್ತಿಗಾಗಲೆ ಬಹುತೇಕ ಪುಸ್ತಕ ಮುದ್ರಕರು, ಪ್ರಕಾಶಕರು ತುಬಾಕಿಯವರಿಗೆ ಪರಿಚಿತರಾಗಿದ್ದ ಕಾರಣ ಬರಿಗೈಲಿ ಸಮ್ಮೇಳನಕ್ಕೆ ಹೋಗಿ, ಎಲ್ಲಾ ಪ್ರಕಾಶಕರಿಂದ ಪುಸ್ತಕಗಳನ್ನು ಪಡೆದು ಸಮ್ಮೇಳನದಲ್ಲಿ ಮಾರಿ, ಪುಸ್ತಕದ ಮೊತ್ತವನ್ನು ಆಯಾ ಮುದ್ರಕರಿಗೆ ತಲುಪಿಸಿ ತಮ್ಮ ಪಾಲಿನ ಹಣವಿಟ್ಟುಕೊಂಡು ಮರಳುತ್ತಿದ್ದರು. ಇದು ತುಬಾಕಿಯವರನ್ನು ಪುಸ್ತಕದ ಸಾಂಗತ್ಯದ ಮತ್ತೊಂದು ಮಜಲಿಗೆ ಕೊಂಡೊಯ್ತು. ಪರಿಣಾಮವಾಗಿ 1998 ರ ಹೊತ್ತಿಗೆ ಕೊಪ್ಪಳದಲ್ಲಿ `ಕನ್ನಡ ಪುಸ್ತಕಾಲಯ’ವನ್ನು ತೆರೆದರು. ಮನೆಯಲ್ಲಿ ಓದಲೆಂದು ಗುಡ್ಡೆ ಹಾಕಿಕೊಂಡ ಪುಸ್ತಕಗಳೆಲ್ಲಾ ಕನ್ನಡ ಪುಸ್ತಕಾಲಯಕ್ಕೆ ಬಂದವು. ಹೈದರಾಬಾದ್ ಕರ್ನಾಟಕದಲ್ಲಿ ಗಮನಸೆಳೆಯ ಪುಸ್ತಕ ಮಳಿಗೆಗಳಲ್ಲಿ `ಕನ್ನಡ ಪುಸ್ತಕಾಲಯ’ಕ್ಕೆ ತನ್ನದೇ ಆದ ಮಹತ್ವವಿದೆ.

ಓದಿನ ಹಸಿವಿದ್ದ ಯಾರೇ ಆದರೂ, ಕನ್ನಡದ ಯಾವುದೇ ಪುಸ್ತಕವಾದರೂ ಅವರಿಗೆ ಒದಗಿಸುತ್ತಾರೆ. ಪುಸ್ತಕ ಓದಿನ ಮೂಲಕ ರೂಪಗೊಂಡ ಸಾಹಿತಿ ಸಂಶೋಧಕರ ನಂಟು ತುಬಾಕಿಯವರನ್ನು ಸಂಶೋಧನ ಸಹಾಯಕರನ್ನಾಗಿಯೂ ಬದಲಿಸಿತು. ಹುಲ್ಲೂರು ಶ್ರೀನಿವಾದ ಜೋಯಿಸರು, ವರದರಾಜ ರಾಯರು ಕೊಪ್ಪಳ ಭಾಗದ ಶಾಸನಾಧ್ಯಯನಕ್ಕೆ ಬಂದರೆ ಅವರಿಗೆ ತುಬಾಕಿ ಜೊತೆಗಾರರಾಗಿದ್ದರು. ಶಾಸನದ ಅಚ್ಚುತೆಗೆಯುವುದನ್ನು ಕಲಿತ ತುಬಾಕಿಯವರು ಈ ಬಾಗದ ಶಾಸನ ಅಧ್ಯಯನಕ್ಕೆ ತಮ್ಮದೇ ಆದ ಮಹತ್ವದ ನೆರವನ್ನು ವಿದ್ವಾಂಸರಿಗೆ ನೀಡಿದ್ದಾರೆ. ಹೀಗಾಗಿ ಎಂ.ಎಂ,ಕಲ್ಬುರ್ಗಿ, ದೇವರಕೊಂಡಾರೆಡ್ಡಿ, ಲಕ್ಷ್ಮಣ ತೆಲಗಾವಿ, ಕೃಷ್ಣಮೂರ್ತಿ, ಸೀತಾರಾಮ ಜಹಗೀರದಾರ, ಎಂ.ಜಿ.ಮಂಜುನಾಥ ಮೊದಲಾದವರು ತುಬಾಕಿಯವರ ನೆರವನ್ನು ನೆನೆಯುತ್ತಾರೆ.

ತುಬಾಕಿಯವರು ಕೇವಲ ಪುಸ್ತಕ ವ್ಯಾಪಾರಿಯಾಗಿದ್ದರೆ ಈ ಕಾಲಂ ನಲ್ಲಿ ಬರೆಯುವ ಅಗತ್ಯವಿರಲಿಲ್ಲ. ಆದರೆ ಕನ್ನಡದ ಬಹುಮುಖ್ಯ ಪಠ್ಯಗಳನ್ನು ಓದುತ್ತಾ, ಆ ಪಠ್ಯಗಳನ್ನು ಓದುಗರಿಗೆ ಪರಿಚಯಿಸಿ, ಅವರನ್ನು ಓದಿಗೆ ಆಹ್ವಾನಿಸಿ, ಓದಿನ ಅಭಿರುಚಿ ಮೂಡಿಸುತ್ತ ಕನ್ನಡದ ವೈಚಾರಿಕೆ ನೆಲೆಯನ್ನು ವಿಸ್ತರಿಸುತ್ತಿದ್ದಾರೆ. ಹೀಗಾಗಿ ತುಬಾಕಿಯವರ ಪುಸ್ತಕ ಪ್ರಸರಣದ ಕಾರ್ಯ ಕನ್ನಡದ ವಿವೇಕದ ಪ್ರಸರಣವೂ ಆಗಿದೆ. ತನ್ನ ಮಿತಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿಯೋ, ನಗದು ಇಲ್ಲದೆಯೋ ಪುಸ್ತಕಗಳನ್ನು ಕೊಟ್ಟು ಓದಿಸುತ್ತಾರೆ. ಅಂತೆಯೇ ಸದಭಿರುಚಿಯ ಪುಸ್ತಕಗಳ ಸಂಗಾತಿಯಾಗಿ ಇಂದಿಗೂ ಪುಸ್ತಕ ಪ್ರಸರಣದಲ್ಲಿ ದಣಿವಿಲ್ಲದೆ ದುಡಿಯುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...