Homeಮುಖಪುಟಭಾರತ ಬುದ್ಧನನ್ನು ಹೆತ್ತು ಕೊಟ್ಟಿತೊ, ಬೆದರಿಸಿ ಓಡಿಸಿತೊ?

ಭಾರತ ಬುದ್ಧನನ್ನು ಹೆತ್ತು ಕೊಟ್ಟಿತೊ, ಬೆದರಿಸಿ ಓಡಿಸಿತೊ?

ಬುದ್ಧ, ಗಾಂಧಿ ವಿನಃ ಜಗತ್ತಿನ ಎದುರು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಅನ್ಯ ಪ್ರತಿಮೆಗಳು ಯಾವು ಇವೆ?

- Advertisement -
- Advertisement -

| ಪ್ರೊ. ಶಿವರಾಮಯ್ಯ |

ಬೌದ್ಧ ಧರ್ಮದ ಜನಪ್ರಿಯತೆ ಸಹಿಸದ ಬ್ರಾಹ್ಮಣ ವರ್ಗ ಬುದ್ಧನನ್ನು `ನಾಸ್ತಿಕ’ ಎಂದು ದೂರುತ್ತಲೇ, ವಿಷ್ಣುವಿನ ದಶಾವತಾರಗಳಲ್ಲಿ ಬುದ್ಧನ ಅವತಾರವೂ ಒಂದೆಂದು ಘೋಷಿಸಿ ಬುದ್ಧನನ್ನೇ ಹೈಜಾಕ್ ಮಾಡಿಕೊಳ್ಳಲೂ ಯತ್ನಿಸಿದರು…

ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತ ವಿಶ್ವಕ್ಕೆ `ಭಾರತದ ಕೊಡುಗೆ ಯುದ್ಧವಲ್ಲ; ಬುದ್ಧ’ ಎಂದಿದ್ದಾರೆ. ನಿಜ. ವಿಶ್ವಕ್ಕೆ ಭಾರತ ಬುದ್ಧನನ್ನು ಕೊಟ್ಟಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಭಾರತ ಬುದ್ಧನನ್ನು `ಹೆತ್ತು ಕೊಟ್ಟಿತೊ ಅಥವಾ ಬೆದರಿಸಿ ಓಡಿಸಿತೊ’ ಎಂಬ ಸತ್ಯ ತಿಳಿದು ಬರುತ್ತದೆ. ಅದಕ್ಕಾಗಿ ನಾವು ಕೊಂಚ ಇತಿಹಾಸದ ಪುಟಗಳನ್ನು ತಿರುವಬೇಕಿದೆ. ಕಳಿಂಗ ಯುದ್ಧದ ನಂತರ ಸಾಮ್ರಾಟ್ ಅಶೋಕ ಚಕ್ರವರ್ತಿ (ಕ್ರಿ.ಪೂ.273-236) ಬೌದ್ಧ ಮತಾವಲಂಬಿಯಾಗಿ ಆ ಧರ್ಮ ಪ್ರಚಾರಕ್ಕೆ ವಿಶೇಷ ಪ್ರೋತ್ಸಾಹವನ್ನು ಕೊಟ್ಟನಷ್ಟೆ. ದೇಶವ್ಯಾಪಿ ಸಿಕ್ಕಿರುವ ಅಶೋಕನ ಶಾಸನಗಳೇ ಇದಕ್ಕೆ ಸಾಕ್ಷಿಯಾಗಿವೆ. ಇದಾದ 700 ವರ್ಷಗಳ ನಂತರ, ಒಬ್ಬರಾದ ಮೇಲೊಬ್ಬರು ಚೀನಾದ ಬೌದ್ಧ ಭಿಕ್ಷುಗಳು ಬುದ್ಧ ಹುಟ್ಟಿದ ಪವಿತ್ರ ಭೂಮಿಯನ್ನು ಅನ್ವೇಷಿಸುತ್ತಾ ಬಂದರು. ಅವರಲ್ಲಿ ಬಹಳ ಮುಖ್ಯವಾದ ಹೆಸರು ಎಂದರೆ ಪಾಹಿಯಾನ್ (ಕ್ರಿ.ಶ.399-410) ಮತ್ತು ಹುಯೆನ್‍ತ್ಸಾಂಗ್ (ಕ್ರಿ.ಶ.600-664). ಪಾಹಿಯಾನ್ ಬಂದಾಗ ಭಾರತದಲ್ಲಿ ಬೌದ್ಧ ಧರ್ಮ ಬಹಳ ಉಚ್ಪ್ರಾಯ ಗತಿಯಲ್ಲಿತ್ತು. ಆದರೆ ಹುಯೆನ್‍ತ್ಸಾಂಗ್ ಬರುವ ವೇಳೆಗೆ ಅದು ಉತ್ತರದ ಕೆಲವು ದೇಶಗಳಲ್ಲಿ ಕೊಂಚ ಇಳಿಮುಖವಾಗುತ್ತಿತ್ತು. ಸ್ಥಾಣೇಶ್ವರದ ರಾಜ ಹರ್ಷವರ್ಧನನು ಪ್ರತಿ ಐದು ವರ್ಷಕ್ಕೊಮ್ಮೆ ತನ್ನ ರಾಜಧಾನಿಯಲ್ಲಿ `ಧರ್ಮಮೋಕ್ಷ’ವೆಂಬ ಸಮ್ಮೇಳನವನ್ನು ನಡೆಸುತ್ತಿದ್ದನು. ಅಲ್ಲಿ ಸರ್ವಧರ್ಮಗಳ ವಿದ್ವಾಂಸರು ತಂತಮ್ಮ ಮತ ದರ್ಶನದ ಬಗ್ಗೆ ವಾಗ್ವಾದ ಮಂಡಿಸುತ್ತಿದ್ದರು. ಇದು ಒಮ್ಮೊಮ್ಮೆ ತೀವ್ರ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿತ್ತು ಇತ್ಯಾದಿಯಾಗಿ ಹುಯೆನ್‍ತ್ಸಾಂಗ್ ದಾಖಲಿಸುತ್ತಾನೆ.

ಹೀಗಿರುತ್ತಾ ಒಮ್ಮೆ ದುಷ್ಕರ್ಮಿಗಳು ಆ ಧರ್ಮಸಭೆ ನಡೆಯುತ್ತಿದ್ದ ಚಪ್ಪರಕ್ಕೆ ಬೆಂಕಿಹಚ್ಚಿ ಸುಟ್ಟುಹಾಕುತ್ತಾರೆ. ಇದರಲ್ಲಿ ಬ್ರಾಹ್ಮಣ ವಿದ್ವಾಂಸರ ಕೈವಾಡ ಇದೆ ಎಂಬುದು ಗುಪ್ತಚರರಿಂದ ರಾಜನಿಗೆ ತಿಳಿದು ಬಂತು. ಆಗ ಹರ್ಷವರ್ಧ(ಶಿಲಾಧಿತ್ಯ)ನು ಅದಕ್ಕೆ ಸಂಬಂಧಪಟ್ಟ 500 ಜನ ಬ್ರಾಹ್ಮಣರಿಗೆ ಗಡಿಪಾರು ಶಿಕ್ಷೆ ವಿಧಿಸಿ, ಅವರ ಅನುಯಾಯಿಗಳನ್ನು ಕ್ಷಮಿಸಿ ಬಿಟ್ಟನು ಎಂದೂ ಹೇಳುತ್ತಾನೆ. (ನೋಡಿ: ಎಚ್.ಎಲ್.ನಾಗೇಗೌಡ. ಪ್ರವಾಸಿಕಂಡ ಇಂಡಿಯಾ. ಸಂ.1 ಪುಟ.223)

ಬ್ರಾಹ್ಮಣರ ಟೆರರಿಸ್ಟ್ ವರ್ತನೆಗೆ ಇದು ಕೈಗನ್ನಡಿ. ಬೌದ್ಧ ಧರ್ಮದ ಏಳಿಗೆಯನ್ನು ನೋಡಿ ಬ್ರಾಹ್ಮಣರಲ್ಲಿ ಅಸಹನೆಯ ಬೀಜ ಆ ಸುಮಾರಿಗಾಗಲೇ ಮೊಳೆಯುತ್ತಿತ್ತು. ಇದಾದ ನೂರು ವರ್ಷ ಕಳೆಯುವುದರಲ್ಲಿ ಹೀಗೇ ಮೊಳೆತ ಆ ಅಸಹನೆಯ ವಿಷವೃಕ್ಷ ಗಿಡವಾಗಿ ಮರವಾಗಿ ಬೆಳೆದು ಶಂಕರಾಚಾರ್ಯ(ಕ್ರಿ.ಶ. ಎಂಟನೆಯ ಶತಮಾನ)ರ ಕಾಲಕ್ಕೆ ಫಲ ನೀಡುವಂತಾಯಿತು. ಅದು ಹೇಗೆ ಆ ಮೇಲೆ ಭಾರತದ ಧಾರ್ಮಿಕ ಇತಿಹಾಸದ ಕಾಲ್ತೊಡರಿನ ಕರುಣ ಕಥೆಯಾಗಿ ಪರಿಣಮಿಸಿತು ಎಂಬುದನ್ನು ಪ್ರೊ.ಕೆ.ಎಸ್.ಭಗವಾನರು ತಮ್ಮ `ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ ಎಂಬ ಪುಸ್ತಕದಲ್ಲಿ ಆಧಾರ ಸಹಿತ ನಿಖರವಾಗಿ ದಾಖಲಿಸುತ್ತಾರೆ.

ಬೌಧ್ಧರ ಧ್ವಂಸ ನಡೆದದ್ದು :

ಶಂಕರಾಚಾರ್ಯ ಶೂದ್ರರಿಗೆ ಜ್ಞಾನವನ್ನು ನಿರಾಕರಿಸಿದ್ದಷ್ಟೇ ಅಲ್ಲ ಅವನು ಮಾಡಿದ ಮಹಾಪರಾಧ ಎಂದರೆ ತನ್ನ ಸಿದ್ಧಾಂತಕ್ಕೆ ಬೃಹತ್ ಪ್ರಮಾಣದಲ್ಲಿ ಎದುರಾದ, ಬಲವಾಗಿ ಬೇರೂರಿದ್ದ ಬುದ್ಧ ಧಮ್ಮವನ್ನು ನಾಶಮಾಡಲು ಅವನು ತುಂಬಾ ಅನಾಗರಿಕ, ಅಸಂಸ್ಕೃತ, ಬರ್ಬರ, ಹೇಯ ವಿಧಾನಗಳನ್ನು ಅನುಸರಿಸಿದ. ಅವನು ತನ್ನ ವಿದ್ವತ್ತು ಮತ್ತು ವಾದದ ಮೂಲಕ ಬೌದ್ಧರನ್ನು ಸೋಲಿಸಿದ ಎಂಬುದು ಕೇವಲ ಬೂಟಾಟಿಕೆ. ವಾದದಲ್ಲಿ ಸೋಲುವುದು ಎಂದರೆ ಏನರ್ಥ? ವಾದಗಳು ಭಿನ್ನಾಭಿಪ್ರಾಯ ಮತ್ತು ಭಿನ್ನ ದೃಷ್ಟಿಕೋನಗಳಲ್ಲವೆ? ಹಾಗಿರುವಾಗ ಗೆಲ್ಲುವುದಾಗಲೀ ಸೋಲುವುದಾಗಲೀ ಎಲ್ಲಿ ಬಂತು? ಇದು ಘನ ಮೋಸದ ದೊಡ್ಡ ಕಥೆ. ಆಳುವ ವರ್ಗದ ಬೆಂಬಲದಿಂದ ಜನಪರವಾಗಿದ್ದ ಬೌದ್ಧರನ್ನು ಅವನು ನಿರ್ನಾಮ ಮಾಡಿದನು. ದಕ್ಷಿಣದಲ್ಲಿ ಪಲ್ಲವರೂ ಪಶ್ಚಿಮದಲ್ಲಿ ಚಾಲುಕ್ಯರೂ ಬ್ರಾಹ್ಮಣಧರ್ಮವನ್ನು ನಿಷ್ಠೆಯಿಂದ ಪೋಷಿಸುತ್ತಿದ್ದ ಪ್ರಬಲ ರಾಜ ಮನೆತನಗಳಾಗಿದ್ದವು ಆಗ. ಅವರ ಅಭಯ ಹಸ್ತವಿಲ್ಲದಿದ್ದರೆ ಶಂಕರಾಚರ್ಯ ಮುಂದೆ ಹೇಳುವಂತ ದುಸ್ತರವಾದ ಹೀನಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲ. ಬುದ್ಧ ಧಮ್ಮದ ಒಂದು ಗಟ್ಟಿ ನೆಲೆಯಾಗಿದ್ದ ನಾಗಾರ್ಜುನ ಕೊಂಡವನ್ನು ತನ್ನ ಅಸಂಖ್ಯಾತ ಅನುಯಾಯಿಗಳ ಜೊತೆ ಹೋಗಿ ಸ್ವಂತ ಮೇಲ್ವಿಚಾರಣೆಯಲ್ಲಿ ಧ್ವಂಸಪಡಿಸಿದನು. ಬೌದ್ಧರು, ಬೌದ್ಧ ವಿಗ್ರಹಗಳು, ಸ್ತೂಪಗಳು, ಸ್ಮಾರಕಗಳನ್ನು ನಿರ್ನಾಮ ಮಾಡಿದ ಎಂದು ನಾಗಾರ್ಜುನ ಕೊಂಡದಲ್ಲಿ ಮೊಟ್ಟಮೊದಲಿಗೆ ಭೂಶೋಧನೆ ನಡೆಸಿದ ಭಾರತ ಮತ್ತು ಸಿಲೋನಿನ ಪ್ರಾಚ್ಯಶಾಸ್ತ್ರ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಎ.ಎಚ್.ಲಾಂಗ್ ಹಸ್ಟ್ ಅವರು `ನಾಗಾರ್ಜುನಕೊಂಡದ ಬೌದ್ಧಾವಶೇಷಗಳು’ ಎಂಬ ತಮ್ಮ ಅಮೂಲ್ಯ ಗ್ರಂಥದಲ್ಲಿ ದಾಖಲು ಮಾಡಿದ್ದಾರೆ [ಕೆ.ಎಸ್.ಭಗವಾನ್. ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಪುಟ.32-33].

ಎಂ.ಮೊನಿಯರ್ ವಿಲಿಯಮ್ಸ್ ಅವರ ಹಿಂದೂಯಿಸಂ (ಪುಟ.144) ಪ್ರಕಾರ ಅವೈದಿಕವಾದ ಬುದ್ಧ ಧರ್ಮಕ್ಕೆ ವಿರುದ್ಧವಾಗಿ ಶಂಕರಾಚಾರ್ಯ ಬ್ರಾಹ್ಮಣ ಮತದ ಪುನರುತ್ಥಾನಕಾರನಾಗಿದ್ದನು. ಹಾಗೆಯೇ ಮತ್ತೊಬ್ಬ ಪ್ರಾಕ್ತನಶಾಸ್ತ್ರ ವಿದ್ವಾಂಸನಾದ ಬೆ.ಗ್ಯಾರೆಟ್‍ನ ಪ್ರಕಾರ `ಶಂಕರಾಚಾರ್ಯನು ಅಧಿಕಾರಸ್ಥರಿಂದ ಬಾಧೆಕೊಡಿಸಿ ಬೌದ್ಧ ಮತವನ್ನು ಈ ದೇಶದಲ್ಲಿ (ನಾಸ್ತಿಕವೆಂದು) ಬಹಳ ಹಳಿದು ಬ್ರಾಹ್ಮಣರ ಮತವನ್ನು ತಿರುಗಿ ಸ್ಥಾಪಿಸಿದನು ಎಂದು ಆಧಾರದ ಸಹಿತ ಮಂಡಿಸುವನು.

ಪುರಾತತ್ವ ವಿಜ್ಞಾನಿ ಲಾಂಗ್ ಹಸ್ಟ್‍ನ ಅಭಿಪ್ರಾಯ ಹೀಗಿದೆ: ನಾಗಾರ್ಜುನಕೊಂಡದಲ್ಲಿ ಎಲ್ಲಾ ಕಟ್ಟಡಗಳೂ ಕ್ರೂರ ರೀತಿಯಲ್ಲಿ ಧ್ವಂಸವಾಗಿರುವುದನ್ನು ನೋಡಿದರೆ ಎದೆ ನಡುಗುತ್ತದೆ. ಅದು ಕೇವಲ ನಿಧಿ ಅನ್ವೇಷಕರ ಕೆಲಸವೆಂದು ಹೇಳುವಂತಿಲ್ಲ; ಏಕೆಂದರೆ ಬಹುಪಾಲು ಸ್ತಂಭಗಳು, ವಿಗ್ರಹಗಳು ಮತ್ತು ಶಿಲ್ಪಗಳನ್ನು ಮನಸೇಚ್ಛೆ ಒಡೆದು ಚೂರು ಚೂರು ಮಾಡಿದ್ದಾರೆ. ಅಮರಾವತಿಯಲ್ಲಿ ಇರುವಂತೆ ಅದರ ಸನಿಹದಲ್ಲಿ ಪಟ್ಟಣ ಇದ್ದಿದ್ದರೆ ಆಧುನಿಕ ನಿರ್ಮಾಪಕರು ಈ ಜಾಗವನ್ನು ಭಾರತದಲ್ಲಿ ಬಹುತೇಕ ಆಗಿರುವಂತೆ ಲೂಟಿ ಮಾಡಿದ್ದಾರೆಂದು ಭಾವಿಸಬಹುದಿತ್ತು. ಆದರೆ ಇದು ನಾಗಾರ್ಜುನಕೊಂಡದಲ್ಲಿ ಎಂದೂ ನಡೆಯಲಿಲ್ಲ; ಏಕೆಂದರೆ ಅದರ ಆಜುಬಾಜಿನಲ್ಲಿ ಯಾವ ಪಟ್ಟಣಗಳಿರಲಿಲ್ಲ; ಆ ಕಣಿವೆಯೊಳಕ್ಕೆ ಹೋಗಿ ಬರಲು ಗಾಡಿ ದಾರಿಗಳಿಲ್ಲ. ಮಧ್ಯಯುಗದ ಮಹಾ ಹಿಂದೂ ತತ್ವಜ್ಞಾನಿ ಮತ್ತು ಗುರು ಶಂಕರಾಚಾರ್ಯ ತನ್ನ ಹಿಂಬಾಲಕರ ಹಿಂಡಿನೊಡನೆ ಅಲ್ಲಿಗೆ ಬಂದು ಬೌದ್ಧ ಸ್ಮಾರಕಗಳನ್ನು ನಾಶಪಡಿಸಿದನೆಂದು ಸ್ಥಳೀಯ ಐತಿಹ್ಯ ಹೇಳುತ್ತದೆ. ಇದು ಹಾಗಿರಲಿ; ಹಾಳಾದ ಕಟ್ಟಡಗಳಿರುವ ಈ ಕಣಿವೆಯ ಸಾಗುವಳಿ ಜಮೀನನ್ನು ಶಂಕರಾಚಾರ್ಯನಿಗೆ ಉಂಬಳಿಯಾಗಿ ಕೊಟ್ಟ ವಾಸ್ತವ ಸಂಗತಿ ಇಂದಿಗೂ ಉಳಿದಿದೆ. ಆ ಮಹಾ ಗುರುವಿನ ಅನುಯಾಯಿಗಳ ಧಾರ್ಮಿಕ ಮುಖಂಡನ ಅನುಮತಿಯಿಂದ ನಾನು ಇಲ್ಲಿ ಭೂಶೋಧನೆಗಳನ್ನು ಮಾಡಲು ಸಾಧ್ಯವಾಯಿತು. ಗುಂಟೂರು ಜಿಲ್ಲೆ ಪುಷ್ಪಗಿರಿಯಲ್ಲಿ ವಾಸಿಸುವ ಬ್ರಾಹ್ಮಣ ಜಗದ್ಗುರು ನಲ್ಲಮಲೈನಲ್ಲಿರುವ ಶ್ರೀಶೈಲಂ ದೇವಾಲಯದ ವಾರಸುದಾರನಾಗಿದ್ದಾನೆ. ಎಂದರೆ ಇದು ಮೂಲತಃ ಒಂದು ಬೌದ್ಧ ತಾಣವಾಗಿದ್ದಂತೆ ಕಾಣುವ ಈ ದೇವಸ್ಥಾನವನ್ನು ಅದೇ ರೀತಿಯಲ್ಲಿ ನಿಸ್ಸಂದೇಹವಾಗಿ ವಶಪಡಿಸಿಕೊಳ್ಳಲಾಯಿತು.

ಸಾರಾಂಶವಾಗಿ ಹೇಳುವುದಾದರೆ ಬೌದ್ಧ ಧರ್ಮದ ಜನಪ್ರಿಯತೆಗೆ ಸಹಿಸದ ಬ್ರಾಹ್ಮಣ ವರ್ಗ, ದೇವರ ವಿಚಾರವಾಗಿ ಮೌನಧರಿಸಿದ ಗೌತಮ ಬುದ್ಧನನ್ನು `ನಾಸ್ತಿಕ’ ಎಂದು ದೂರಿದ್ದಲ್ಲದೆ, ಅವನ ಕೆಲವು ವೈಚಾರಿಕ ನಿಲುವುಗಳನ್ನು ತಮ್ಮ ವೇದಾಂತಗಳಾದ ಉಪನಿಷತ್ತುಗಳಲ್ಲಿ ಅಳವಡಿಸಿಕೊಂಡರು. ಅಷ್ಟೇ ಅಲ್ಲ, ವಿಷ್ಣುವಿನ ದಶಾವತಾರಗಳಲ್ಲಿ ಬುದ್ಧನ ಅವತಾರವೂ ಒಂದೆಂದು ಘೋಷಿಸಿ ಬುದ್ಧನನ್ನೇ ಹೈಜಾಕ್ ಮಾಡಿಕೊಳ್ಳಲಾಯಿತು. ಮತ್ತು ಶಂಕರಾಚಾರ್ಯರ ಮಿಲಿಟೆಂಟ್ ಶಿಷ್ಯರು ಬುದ್ಧನ ಅಹಿಂಸಾವಾದಿ ಅನುಯಾಯಿಗಳನ್ನು ಹಿಮಾಲಯದ ಆಚೆ ದೇಶಾಂತರ ಅಟ್ಟಿಬಿಟ್ಟರು. ಈ ಕಾರಣದಿಂದಾಗಿ ಬೌದ್ಧಧರ್ಮ ತನ್ನ ಜನ್ಮಭೂಮಿಯನ್ನು ಕಳೆದುಕೊಂಡು ಪರದೇಶಗಳಾದ ಚೀನಾ, ಜಪಾನ್, ಇಂಡೋನೇಷಿಯಾ, ಕಾಂಬೋಡಿಯಾ ಮುಂತಾದ ಕಡೆ ತನ್ನ ನೆಲೆಕಂಡು ಕೊಳ್ಳಬೇಕಾಯಿತು.

ಹೀಗಿರುತ್ತಾ ಹುಯೆನ್‍ತ್ಸಾಂಗ್(ಕ್ರಿ.ಶ.600-604)ನ ಕಾಲಕ್ಕಾಗಲೇ ಅವನತಿಯತ್ತ ಸಾಗುತ್ತಿದ್ದ ಬುದ್ಧ ಧರ್ಮ ಮೌರ್ಯ ಸಾಮ್ರಾಜ್ಯದ ಅವನತಿಯೊಂದಿಗೆ ತನ್ನ ಕೊನೆಯುಸಿರೆಳೆಯಿತು. ಇತ್ತ ವೈದಿಕ ಹಿಂದೂ ಧರ್ಮವು ಪುನರುತ್ತಾನಗೊಂಡಿತು. ಪುನಃ ಅದೇ ಕರ್ಮಸಿದ್ಧಾಂತ, ಅದೇ ಜಾತಿಪದ್ದತಿ, ಅದೇ ವರ್ಗತಾರತಮ್ಯ ನೀತಿ ಬೇರೂರಿತು. ಇವತ್ತಿಗೂ ಮನುಧರ್ಮಶಾಸ್ತ್ರ ಬಿತ್ತಿದ ಮೌಢ್ಯಾಚಾರಣೆಗಳು ಜನರನ್ನು ಸುಲಿದು ಮುಕ್ಕುತ್ತಿವೆ ಎಂಬುದು ಸೂರ್ಯ ಸತ್ಯ. ಆದ್ದರಿಂದಲೇ `ಇಂಥ ಶೋಷಕ ಧರ್ಮದಲ್ಲಿ ನಾನು ಸಾಯಲಾರೆ’ ಎಂದು ಡಾ.ಅಂಬೇಡ್ಕರ್ ತಮ್ಮ ಕೊನೆಗಾಲದಲ್ಲಿ ಬೋಧಿವೃಕ್ಷದ ನೆರಳಿಗೆ ಹೋದರು.

ಇತಿಹಾಸ ಹೀಗಿದ್ದರೂ ಸಹ ಸನಾತನ ಹಿಂದುತ್ವವಾದಿಗಳು ವಿದೇಶಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ತಮ್ಮ ಐಡೆಂಟಿಟಿಯನ್ನು ಸ್ಥಾಪಿಸಿಕೊಳ್ಳಲು ಬುದ್ಧ ಗಾಂಧಿ ಇವರ ಹೆಸರನ್ನೆತ್ತದೆ ವಿಧಿ ಇಲ್ಲ. ಬುದ್ಧ ಗಾಂಧಿ ಇವರಿಗೆ ಸಾವಿಲ್ಲ. ದೇವನೂರ ಮಹಾದೇವ ಎಂದಂತೆ ವಿದೇಶಕ್ಕೆ ಹೋದ ಗೋಡ್ಸೆಯ ಪ್ರೇತಕೂಡ ಗಾಂಧಿ ಜಪಮಾಡದೆ ವಿಧಿ ಇಲ್ಲ. ಯಾಕೆಂದರೆ ಜಗತ್ತಿಗೆ ಭಾರತ ನೀಡಿದ ಮಹಾನ್ ಕೊಡುಗೆ ಎಂದರೆ ಸತ್ಯ ಮತ್ತು ಅಹಿಂಸೆ. ಈ ದಿವ್ಯಾಸ್ತ್ರಗಳ ಜನಕರು ಬುದ್ಧ ಮತ್ತು ಗಾಂಧಿ. ಬುದ್ಧನ ನಾಡು, ಗಾಂಧಿಯ ನಾಡು ಎಂದೇ ವಿದೇಶಿಯರು ನಮ್ಮನ್ನು ಗುರ್ತಿಸುವುದು. ಕಣ್ಣೆದುರಿನ ಈ ಸತ್ಯ ಇರುವುದರಿಂದಲೇ ವಿದೇಶಿ ಪ್ರವಾಸಿಗರು ಸಾಲುಗಟ್ಟಿ ಇಲ್ಲಿಗೆ ಬಂದು ಹೋದದ್ದು. ಪಾಹಿಯಾನ್ ಮತ್ತು ಹುಯೇನ್‍ತ್ಸಾಂಗ್ ಎಂಬ ಬೌದ್ಧ ಭಿಕ್ಷುಗಳು 1500 ವರ್ಷಗಳ ಹಿಂದೆಯೇ ಹಿಮಾಲಯ ದಾಟಿ ನಮ್ಮೀ ಪವಿತ್ರನಾಡಿಗೆ ಯಾತ್ರೆ ಬಂದಿದ್ದರು. ಅಷ್ಟೇ ಅಲ್ಲ, ಬುದ್ಧನ ಕಾಲಕ್ಕೆ ನಾವು ಹುಟ್ಟಲಿಲ್ಲವಲ್ಲ ಎಂದು ಕೊರಗಿದರು ಸಹ.

ಈಚೆಗೆ ಪ್ರಧಾನಿ ನರೇಂದ್ರಮೋದಿ ವಿಶ್ವಸಂಸ್ಥೆ ವೇದಿಕೆಯಿಂದ `ಭಾರತದ ಕೊಡುಗೆ ಯುದ್ಧವಲ್ಲ; ಬುದ್ಧ’ ಎಂದು ಹೇಳಿರುವುದು ಈ ಅರ್ಥದಲ್ಲಿಯೇ ಎಂದು ತಿಳಿಯಬೇಕಾಗಿದೆ. ಆದರೆ, ಇದೇ ಮೋದಿ 2002ರಲ್ಲಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ್ಯೆ ಅಲ್ಪಸಂಖ್ಯಾತ ಕೋಮಿನವರ, ಪೂರ್ವಯೋಜಿತವೆಂಬತೆ, ಮಾರಣಹೋಮ ನಡೆದುಹೋಯಿತು. ಆಗ ಸು.2000ಕ್ಕೂ ಹೆಚ್ಚು ಜನ ಅಸು ನೀಗಿದರು. ಆದರೂ ಅದಕ್ಕೆಲ್ಲ ಉತ್ತರದಾಯಿತ್ವವುಳ್ಳ ಆಗಿನ ಮುಖ್ಯಮಂತ್ರಿ, ಈಗಿನ ನಮ್ಮ ಪ್ರಧಾನಮಂತ್ರಿ ಮೋದಿಯವರ ಬಾಯಿಂದ ಇದುವರೆಗೆ ಒಂದೇ ಒಂದು ಪಶ್ಚಾತ್ತಾಪದ ನುಡಿಯಾಗಲಿ ಕೇಳಿ ಬಂದಿಲ್ಲ. ಇದು ನಮ್ಮ ಹಿಂದುತ್ವವಾದಿಗಳಿಗೆ ಬುದ್ಧ ಮತ್ತು ಗಾಂಧೀ ಮೇಲಿನ ಭಕ್ತಿ ಮತ್ತು ಪ್ರೇಮ!

ಬುದ್ಧ, ಗಾಂಧಿ ವಿನಃ ಜಗತ್ತಿನ ಎದುರು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಅನ್ಯ ಪ್ರತಿಮೆಗಳು ಯಾವು ಇವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...