Homeಕರ್ನಾಟಕಪಕ್ಷಾಂತರಗಳು: ಕಾಂಗ್ರೆಸ್ ಪಕ್ಷದವರಲ್ಲಿ ಪರಿಹಾರವಿದೆಯೇ?

ಪಕ್ಷಾಂತರಗಳು: ಕಾಂಗ್ರೆಸ್ ಪಕ್ಷದವರಲ್ಲಿ ಪರಿಹಾರವಿದೆಯೇ?

- Advertisement -
- Advertisement -

ಉಡುಪಿಯ ಮಾಜಿ ಶಾಸಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೆಲ ದಿನಗಳ ಹಿಂದೆ ಬಿಜೆಪಿ ಸೇರಿದರು. ಅದರಲ್ಲಿ ಏನೂ ಆಶ್ಚರ್ಯವಿಲ್ಲ. ಏಕೆಂದರೆ ಅವರು ಬಿಜೆಪಿ ಸೇರುತ್ತಾರೆಂಬ ಮಾತು ಈಗಿನದ್ದಲ್ಲ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರಾಗಿದ್ದಾಗಲೇ ಅವರು, ಬಿಜೆಪಿಗೆ ಸೇರಿ 2018ರ ಚುನಾವಣೆಯಲ್ಲಿ ಆ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎಂಬ ಮಾತಿತ್ತು. ಆ ವಿಚಾರ ಚರ್ಚೆಗೆ ಬಂದಾಗ ಪ್ರಮೋದ್ ಅಷ್ಟು ಗಟ್ಟಿಯಾಗಿ ಎಂದೂ ನಿರಾಕರಿಸಿರಲಿಲ್ಲ. ಅಂತಿಮವಾಗಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಸೋತರು. 2019ರಲ್ಲಿ ಲೋಕಸಭಾ ಚುನಾವಣೆ ಬಂದಾಗ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು. ಕಾಂಗ್ರೆಸ್‌ನ ಪ್ರಮೋದ್ ಜೆಡಿಎಸ್‌ಗೆ ಹೋಗಿ, ಟಿಕೆಟ್ ಪಡೆದುಕೊಂಡು ಸ್ಪರ್ಧಿಸಿದರು; ಸೋತರು. ಆಗಲೂ ಚುನಾವಣೆ ಮುಗಿದ ನಂತರ ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದಿದ್ದರು. ಕಾಂಗ್ರೆಸ್‌ನಲ್ಲೇ ’ಇದ್ದರು’. ಆ ನಂತರವೂ ’ಮುಂದಿನ ಚುನಾವಣೆಗೆ ಮುಂಚೆ ಬಿಜೆಪಿಗೆ ಹೋಗುತ್ತಾರೆ; ಈ ಸಾರಿ ಕಾಪುವಿನಿಂದ ಸ್ಪರ್ಧೆಯಂತೆ; ಲೋಕಸಭೆಗೆ ಅವರೇ ಸ್ಪರ್ಧಿಯಂತೆ ಇತ್ಯಾದಿ’ ಮಾತುಗಳು ಕೇಳಿಬರುತ್ತಲೇ ಇದ್ದವು. ಅಷ್ಟರಮಟ್ಟಿಗೆ ಅವರ ಕಾಂಗ್ರೆಸ್ ನಿಷ್ಠೆ ಎಂದೂ ಸಂಶಯಾತೀತ ಆಗಿರಲಿಲ್ಲ. ಇದೇ ಪ್ರಮೋದ್ 2018ರ ಚುನಾವಣೆಯಲ್ಲಿ ಉಡುಪಿಯಲ್ಲಿ ಪ್ರಚಾರಕ್ಕೆ ತನ್ನ ಜೊತೆ ಬರಬೇಡಿರಿ ಎಂದು ಮುಸ್ಲಿಮರಿಗೆ
ಹೇಳಿದ್ದರೆನ್ನಲಾದ ಮಾತು ಸುದ್ದಿಯಾಗಿತ್ತು.

ಕಾಂಗ್ರೆಸ್ ಸಂಘಟನೆಗೆ ಅಥವಾ ಸಿದ್ಧಾಂತಕ್ಕೆ ಅವರು ನಿಷ್ಠರಾಗಿದ್ದರೆನ್ನಲು ಯಾವ ಆಧಾರಗಳೂ ಇರಲಿಲ್ಲ.
ಕಾಂಗ್ರೆಸ್‌ಗೆ ಅಂತಹ ಸಿದ್ಧಾಂತ ಇದೆಯಾ ಎಂದು ಯಾರಾದರೂ ಕೇಳಬಹುದು. ಏಕೆಂದರೆ ಮೇಲೆ ಹೇಳಿದ ಅಷ್ಟೆಲ್ಲಾ ನಡೆದರೂ ಪ್ರಮೋದ್ ಮಧ್ವರಾಜ್‌ರು ತಾವಾಗಿಯೇ ಹೋಗುವತನಕ ಕಾಂಗ್ರೆಸ್ ಪಕ್ಷವು ಅವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಶಿಸ್ತು ಕ್ರಮ ಹೋಗಲಿ, ಅವರಿಗೆ ಪರ್ಯಾಯವಾಗಿ ಕ್ಷೇತ್ರದಲ್ಲಿ ಇನ್ನೊಬ್ಬ ಅಭ್ಯರ್ಥಿಯನ್ನು ಮುಂದೆ ತರುವುದನ್ನೂ ಮಾಡಲಿಲ್ಲ. ಮೊದಲಿಗೆ ಕ್ಷೇತ್ರಕ್ಕೊಬ್ಬರು ಗೆಲ್ಲುವ ಅಭ್ಯರ್ಥಿಯನ್ನು ಹುಟ್ಟಿ ಹಾಕುವ ಯೋಜನೆಯೂ ಕಾಂಗ್ರೆಸ್‌ಗೆ ಇರುವುದಿಲ್ಲ; ಎರಡನೆಯದಾಗಿ, ಆ ಕ್ಷೇತ್ರದಲ್ಲಿರುವ ಹಾಲಿ ನಾಯಕ ಎಷ್ಟೇ ಪಕ್ಷ ವಿರೋಧಿಯಾಗಿದ್ದರೂ ಅಲ್ಲಿ ಬದಲಿ ಪ್ರಯತ್ನಕ್ಕೆ ಆಸ್ಪದ ಕೊಟ್ಟರೆ ಈತ ಕೋಪಿಸಿಕೊಂಡು ಪಕ್ಷ ಬಿಟ್ಟುಬಿಡಬಹುದು ಎಂಬ ಆತಂಕವನ್ನೂ ನಿವಾರಿಸಿಕೊಳ್ಳುವುದಿಲ್ಲ.

ಇದು ಕಾಂಗ್ರೆಸ್ ಪಕ್ಷಕ್ಕೆ ಅಂಟಿರುವ ರೋಗದ ಒಂದು ಲಕ್ಷಣ ಅಷ್ಟೇ. ಇಲ್ಲದಿದ್ದರೆ ಸಾಲುಸಾಲಾಗಿ ಆ ಪಕ್ಷದಿಂದ ಹತ್ತಾರು ಶಾಸಕರು (ಅವರಲ್ಲಿ ಹಾಲಿ ಸಚಿವರಾಗಿದ್ದ ಎಂ.ಟಿ.ಬಿ.ನಾಗರಾಜ್ ಸಹಾ ಇದ್ದರು) ಬಿಜೆಪಿಗೆ ಹೋಗುತ್ತಿರಲಿಲ್ಲ. ಇನ್ನೂ ತಮಾಷೆಯೆಂದರೆ ರಾಜೀನಾಮೆ ಕೊಡಲು ರಾಜಭವನಕ್ಕೆ ಹೋಗಿದ್ದವರಲ್ಲಿ ಒಬ್ಬರಾದ ರಾಮಲಿಂಗಾರೆಡ್ಡಿಯವರು ಈಗ ಕಾಂಗ್ರೆಸ್‌ನ ರಾಜ್ಯ ಕಾರ್ಯಾಧ್ಯಕ್ಷರಲ್ಲಿ ಒಬ್ಬರು!

ಎಲ್ಲಾ ಸೆಕ್ಯುಲರ್ ಮತಗಳೂ ಕಾಂಗ್ರೆಸ್‌ಗೆ ಹೋಗಬೇಕು; ತಪ್ಪಬಾರದು ಎಂದು ಹಲವರು (ಕಾಂಗ್ರೆಸ್‌ನಲ್ಲಿ ಎಂದೂ ಇರದವರೂ ಸೇರಿ) ಬಲವಾಗಿ ಪ್ರತಿಪಾದಿಸುತ್ತಾರೆ. ಅವರ ಮಟ್ಟಿಗೆ ಅದು ಜೀವನ್ಮರಣದ ಪ್ರಶ್ನೆ. ಆದರೆ ಈ ಕಾಂಗ್ರೆಸ್‌ಗೆ ಹಾಕಿದ ’ಸೆಕ್ಯುಲರ್ ಮತ’ವು (ಅಂಥದ್ದೊಂದು ಇದೆಯಾ ಎಂಬ ಅನುಮಾನವಿದೆ) ’ಸೆಕ್ಯುಲರ್’ ಶಾಸಕನನ್ನೇ ಆಯ್ಕೆ ಮಾಡುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ಹೀಗೇಕೆ? ಹೀಗಿದ್ದೂ ಕಾಂಗ್ರೆಸ್ ಪಕ್ಷವು ತನ್ನ ಸಿದ್ಧಾಂತವೆಂದು ಹೇಳಿಕೊಳ್ಳುವ ವಿಚಾರಗಳಿಗೆ ಬದ್ಧವಾಗಿರುವವರನ್ನು ಏಕೆ ಗುರುತಿಸಿ ಬೆಳೆಸುವುದಿಲ್ಲ? ಏಕೆಂದರೆ ಆ ಸಿದ್ಧಾಂತದ ಕುರಿತು ನಾಯಕತ್ವ ವಹಿಸಿರುವ ಹೆಚ್ಚಿನವರಿಗೆ ಸಂಪೂರ್ಣ ವಿಶ್ವಾಸವಿಲ್ಲ. ಒಂದು ವೇಳೆ ಇದ್ದರೂ, ಇದು ಈ ಹೊತ್ತಿನಲ್ಲಿ ಬಲ ಹೊಂದಿಲ್ಲ ಎಂಬ ಭಯ ಅವರಿಗಿದೆ. ಅಷ್ಟೇ ಅಲ್ಲದೇ, ಕೋಮುವಾದಿ ಧ್ರುವೀಕರಣಕ್ಕೆ ಕೊಡಬೇಕಾದ ಪ್ರತಿಮದ್ದು ಯಾವುದು ಎಂಬುದರ ಕುರಿತು ಅವರಿಗೆ ಗೊತ್ತೇ ಇದ್ದಂತಿಲ್ಲ. ಹಾಗಿದ್ದರೂ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ರಂತಹವರು ತಮ್ಮ ಕರ್ತವ್ಯವೆಂದು ಭಾವಿಸಿ, ಮುಂದೊಂದು ದಿನ ’ಜನರೇ ಅರ್ಥ ಮಾಡಿಕೊಳ್ಳಬಹುದು’ ಎಂಬ ನಿರೀಕ್ಷೆಯಲ್ಲಿ ಗಟ್ಟಿದನಿಯಲ್ಲಿ ಮತೀಯ ರಾಜಕಾರಣದ ವಿರುದ್ಧ ಮಾತಾಡುತ್ತಿದ್ದಾರೆಂಬುದು ನಿಜ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆದರೆ ಅದನ್ನು – ಅಂದರೆ ಸೆಕ್ಯುಲರ್ ರಾಜಕಾರಣವನ್ನು – ಗೆಲ್ಲಿಸಲು ರಾಜ್ಯದ ಎಲ್ಲೆಡೆಯೂ ಸಲ್ಲಬಹುದಾದ ವೈಚಾರಿಕ, ಸಂಘಟನಾತ್ಮಕ ಹಾಗೂ ರಾಜಕೀಯ ಪ್ರತಿರೋಧವನ್ನು ಕಟ್ಟುವ ಪ್ರಯತ್ನ ಇಲ್ಲ. ಯಾವ ಪಕ್ಷವು ತಾನು ಸೋತ 2018ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರಿಗಿಂತ ಹೆಚ್ಚು – ಶೇ.35ಕ್ಕಿಂತ ಹೆಚ್ಚು – ಮತಗಳನ್ನು ಪಡೆದುಕೊಂಡಿತ್ತೋ, ಆ ಪಕ್ಷದ ಸ್ಥಿತಿ ಇದು. ಅಂದರೆ ಈ ರಾಜ್ಯದ ಜನರು ಕಾಂಗ್ರೆಸ್‌ಅನ್ನು ಪೂರ್ಣವಾಗಿ ತಿರಸ್ಕರಿಸಿಲ್ಲ. ಯಾವ ದಕ್ಷಿಣ ಕನ್ನಡದಲ್ಲಿ ಅತ್ಯಂತ ಹೆಚ್ಚು ಮತೀಯ ಧ್ರುವೀಕರಣ ಇದೆಯೆಂದು ಹೇಳಲಾಗುತ್ತಿದೆಯೋ, ಅಲ್ಲೇ 2013ರಲ್ಲಿ ಒಂದು ಕ್ಷೇತ್ರ ಬಿಟ್ಟರೆ (ಅದೂ ಕಡಿಮೆ ಅಂತರದಲ್ಲಿ ಸೋತಿದ್ದು) ಮಿಕ್ಕೆಲ್ಲಾ ಕಡೆ ಗೆದ್ದಿದ್ದ ಪಕ್ಷವಿದು. ಅದು ಹೇಗೆ ಸಾಧ್ಯವಾಯಿತು? ಕರ್ನಾಟಕದ ಇತರ ಭಾಗಗಳಲ್ಲಾದರೂ ಕೆಜೆಪಿ ಅಥವಾ ಬಿಎಸ್‌ಆರ್ ಪಕ್ಷಗಳು ಬಿಜೆಪಿಯ ಮತಗಳನ್ನು ಒಡೆದವು ಎಂದು ಹೇಳಬಹುದು. ಕರಾವಳಿಯಲ್ಲಿ ಅದೂ ಆಗಿರಲಿಲ್ಲ.

ತಾನು ತನ್ನದೆಂದು ಹೇಳಿಕೊಳ್ಳುವ ಸೆಕ್ಯುಲರ್ ರಾಜಕಾರಣದ ಕುರಿತು (ಒಂದಷ್ಟು ಜನರಿಗೆ ನಿಷ್ಠೆಯಿದೆ ಎನ್ನುವುದು ಹೌದಾದರೂ) ತನಗೇ ಖಚಿತ ಭರವಸೆಯಿರದ ಪಕ್ಷವು ಕನಿಷ್ಠ ಅಂಕಿ-ಅಂಶ ಅಥವಾ ಹಿಂದಿನ ಉದಾಹರಣೆಗಳನ್ನೂ ಗಮನಿಸಿಯಾದರೂ ಧೈರ್ಯ ತಂದುಕೊಳ್ಳುವುದಿಲ್ಲ. ಅದನ್ನು ಹೊರತುಪಡಿಸಿ ಪಕ್ಷದ ಗೆಲುವಿನಲ್ಲೇ ತಮ್ಮ ಗೆಲುವೂ ಇದೆ ಎಂಬ ಸ್ವಾರ್ಥದಿಂದಲಾದರೂ ಏನಾದರೂ ಮಾಡಬೇಕಲ್ಲವೇ? ಏಕೆಂದರೆ ಈ ಸದ್ಯ ಯಾರು ಮುಂದಿನ ಸಿಎಂ ಅಭ್ಯರ್ಥಿ ಎಂಬ ಘೋಷಣೆ (ಅಥವಾ ಕನಿಷ್ಠ ಕಾಂಗ್ರೆಸ್ ಹೈಕಮಾಂಡ್‌ನಿಂದ ಕಿವಿಯಲ್ಲಿ ಉಸುರುವಿಕೆ) ಆಗುತ್ತದೆ ಎಂಬುದರ ಮೇಲೆಯೇ ಕೆಲಸ ಮಾಡಬೇಕೇ ಇಲ್ಲವೇ ಎಂಬುದನ್ನು ತೀರ್ಮಾನಿಸುತ್ತೇವೆ ಅಥವಾ ತೀರ್ಮಾನವಾಗುತ್ತದೆ ಎಂದು ಕಾಂಗ್ರೆಸ್‌ನ ಶೇ.75 ಭಾಗದಷ್ಟು ನಾಯಕರು ಭಾವಿಸಿಕೊಂಡಿದ್ದಾರೆ. ಸರಿಯಾಗಿ ಇನ್ನೊಂದು ವರ್ಷಕ್ಕೆ ಕರ್ನಾಟಕ ವಿಧಾನಸಭೆಯ ಚುನಾವಣೆಯಿದೆ. ಸುಮಾರು 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದು ಬಹಳ ಕಷ್ಟ ಮತ್ತು ಅಲ್ಲಿ ತಮಗೆ ಸೂಕ್ತ ಅಭ್ಯರ್ಥಿಯೇ ಇಲ್ಲ ಎಂದು ಕಾಂಗ್ರೆಸ್‌ನ ಬಹುತೇಕ ದೊಡ್ಡ ನಾಯಕರು ಖಾಸಗಿಯಾಗಿ ಹೇಳುತ್ತಾರೆ. ಗೆಲ್ಲುವ ಸಾಧ್ಯತೆಯಿರುವ 125 ಕ್ಷೇತ್ರಗಳಲ್ಲಿ ಗಂಭೀರ ಪ್ರಯತ್ನ ಪಡುವುದರ ಜೊತೆಗೆ, ಉಳಿದ ಕ್ಷೇತ್ರಗಳಲ್ಲಿ ಗಂಭೀರ ಪ್ರತಿರೋಧ ಒಡ್ಡಬೇಕು; ರಾಜ್ಯಮಟ್ಟದಲ್ಲಿ ಜನರಿಗೆ ಅಹುದಹುದೆನಿಸುವ ರೀತಿಯ ರಾಜಕೀಯ ಒಲವು ಬೆಳೆಸಬೇಕು. ಆಗ ಮಾತ್ರ ಅದು ಗೆಲ್ಲಲು ಸಾಧ್ಯ. ಆ ರಾಜಕೀಯ ಕಥನ ಕಟ್ಟಲು ಸೂಕ್ತವಾದ ತರ್ಕ ಹಾಗೂ ರಾಜಕೀಯ ಮಥನದ ಅಗತ್ಯವಿದೆ.

ಇಂತಹ ಯಾವುದೂ ನಡೆಯದ ಪಕ್ಷದಲ್ಲಿ ಅವಕಾಶವಾದಿಗಳು, ಪಕ್ಷಾಂತರ ಪ್ರವೀಣರು, ಕಡುಭ್ರಷ್ಟರು, ಹೇಗೋ ಮಾಡಿ ಗೆಲ್ಲುವವರು, ಪಕ್ಷ ಮುಳುಗುತ್ತಿರುವ ಸಂದರ್ಭದಲ್ಲೂ ಕತ್ತು ಕೊಯ್ಯಬಲ್ಲವರು ಇಂಥವರೆಲ್ಲರೂ ಇರುತ್ತಾರೆ. ಕಡೆಯ ಘಳಿಗೆಯಲ್ಲಿ ಅಂಥವರಲ್ಲಿ ಯಾರಿಗೋ ಟಿಕೆಟ್ ಸಹಾ ಕೊಡುತ್ತಾರೆ. ಏಕೆಂದರೆ
ಅಂಥವರಿಗೇ ಗೆಲುವಿನ ಸಾಧ್ಯತೆ (Winnability) ಹೆಚ್ಚು ಎಂಬ ಅತಾರ್ಕಿಕ ನಂಬುಗೆ ರಾಜಕಾರಣದಲ್ಲಿದೆ. ಸಿದ್ಧಾಂತ ಹಾಳಾಗಲಿ, ಪಕ್ಷಕ್ಕಾಗಿ ದುಡಿಯುವವರಿಗೆ ಟಿಕೆಟ್ ಎಂಬ ನಿಯಮವೂ ಇಲ್ಲದಾದಾಗ ಬೇರೆ ಪಕ್ಷಗಳಿಂದ ಬರುವವರಿಗೂ ಸಲೀಸಾಗಿ ಟಿಕೆಟ್ ನೀಡಲಾಗುತ್ತದೆ. ಹೀಗಿದ್ದಾಗ ಪಕ್ಷ ಸಂಘಟನೆ ಬಲವಾಗುವುದಾಗಲೀ, ಕರ್ನಾಟಕದ ಜನರು ಇಂದೂ ತಿರಸ್ಕರಿಸದ ಸೆಕ್ಯುಲರ್ ರಾಜಕಾರಣವನ್ನು ಗಟ್ಟಿಗೊಳಿಸುವುದಾಗಲೀ ಹೇಗೆ ಸಾಧ್ಯ? ಇದು ಕೇವಲ ಕಾಂಗ್ರೆಸ್‌ಗೆ ಮಾತ್ರ ಸೀಮಿತವಲ್ಲ. ಜೆಡಿಎಸ್‌ನಲ್ಲಿ ಕುಟುಂಬದ ಪಾರುಪತ್ಯದ ಜೊತೆಗೆ ಇಂತಹುದೇ ರಾಜಕಾರಣ ನಡೆಯುತ್ತದೆ.

ಇನ್ನು ಅತ್ಯಂತ ಕಡುಭ್ರಷ್ಟರು ಇರುವ ಪಕ್ಷವಾದ ಬಿಜೆಪಿಯು ದುಷ್ಟ ಸಿದ್ಧಾಂತವೊಂದನ್ನು ಹೊಂದಿದ್ದು ಅದಕ್ಕೆ ನಿಷ್ಠವಾಗಿದೆ. ಅದೊಂದಕ್ಕೆ ಪರಮ ನೀಚರು, ಲಂಪಟರು, ಭ್ರಷ್ಟಾತಿಭ್ರಷ್ಟರು ಯಾರೇ ಬಂದರೂ ಅಲ್ಲಿ ಸ್ವಾಗತವಿರುತ್ತದೆ. ಯಾವ ಸಿದ್ಧಾಂತವೂ ಇಲ್ಲದ, ಹಣ ಮಾಡುವುದು ಮತ್ತು ರಾಜ್ಯವನ್ನು ಎಲ್ಲಾ ರೀತಿಯಲ್ಲೂ ಕಲುಷಿತಗೊಳಿಸುವುದರಲ್ಲಿ ಪರಿಣಿತಿ ಸಾಧಿಸಿರುವ ಯಾರೇ ಇದ್ದರೂ, ಮತೀಯ ರಾಜಕಾರಣದ ಅಜೆಂಡಾಕ್ಕೆ ವಿರೋಧ ವ್ಯಕ್ತಪಡಿಸದೇ ಇದ್ದರೆ ಸಾಕು; ಗೆಲ್ಲುವ ಸಾಧ್ಯತೆ ಇದ್ದರೆ ಕರೆದುಕೊಳ್ಳುತ್ತಾರೆ. ಹೀಗಾಗಿ ಪ್ರಮೋದ್ ಮಧ್ವರಾಜ್‌ರಂತಹವರ ಪಕ್ಷಾಂತರವು ಯಾವ ರೀತಿಯಲ್ಲೂ ಆಶ್ಚರ್ಯಕರವಲ್ಲ. ಪ್ರಶ್ನೆಯಿರುವುದು ಕರ್ನಾಟಕದ ಪ್ರಜ್ಞಾವಂತ ಮತದಾರರು ಈ ಪರಿಸ್ಥಿತಿಯನ್ನು ನಿಭಾಯಿಸಲು ಯಾವ ದಾರಿಯನ್ನು ಹುಡುಕಿಕೊಳ್ಳಬೇಕೆಂಬುದರಲ್ಲಿ.

ಅಂತಿಮವಾಗಿ ಷರಾ ಹೀಗೆ ಬರೆಯಬಹುದೇನೋ: ಈ ಪ್ರಜಾತಂತ್ರವು ಬಿಜೆಪಿಯ ಕಾರಣಕ್ಕೆ ಅಪಾಯದಲ್ಲಿದೆ; ಆದರೆ ಕಾಂಗ್ರೆಸ್ ಒಂದೇ ಅದನ್ನು ರಕ್ಷಿಸಲಾರದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಕರಾಳ ದೇಶದ್ರೋಹ ಕಾನೂನು ಕೊನೆಗೊಳ್ಳಬಹುದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...