Homeಕರ್ನಾಟಕಪಕ್ಷಾಂತರಗಳು: ಕಾಂಗ್ರೆಸ್ ಪಕ್ಷದವರಲ್ಲಿ ಪರಿಹಾರವಿದೆಯೇ?

ಪಕ್ಷಾಂತರಗಳು: ಕಾಂಗ್ರೆಸ್ ಪಕ್ಷದವರಲ್ಲಿ ಪರಿಹಾರವಿದೆಯೇ?

- Advertisement -
- Advertisement -

ಉಡುಪಿಯ ಮಾಜಿ ಶಾಸಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೆಲ ದಿನಗಳ ಹಿಂದೆ ಬಿಜೆಪಿ ಸೇರಿದರು. ಅದರಲ್ಲಿ ಏನೂ ಆಶ್ಚರ್ಯವಿಲ್ಲ. ಏಕೆಂದರೆ ಅವರು ಬಿಜೆಪಿ ಸೇರುತ್ತಾರೆಂಬ ಮಾತು ಈಗಿನದ್ದಲ್ಲ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರಾಗಿದ್ದಾಗಲೇ ಅವರು, ಬಿಜೆಪಿಗೆ ಸೇರಿ 2018ರ ಚುನಾವಣೆಯಲ್ಲಿ ಆ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎಂಬ ಮಾತಿತ್ತು. ಆ ವಿಚಾರ ಚರ್ಚೆಗೆ ಬಂದಾಗ ಪ್ರಮೋದ್ ಅಷ್ಟು ಗಟ್ಟಿಯಾಗಿ ಎಂದೂ ನಿರಾಕರಿಸಿರಲಿಲ್ಲ. ಅಂತಿಮವಾಗಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಸೋತರು. 2019ರಲ್ಲಿ ಲೋಕಸಭಾ ಚುನಾವಣೆ ಬಂದಾಗ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು. ಕಾಂಗ್ರೆಸ್‌ನ ಪ್ರಮೋದ್ ಜೆಡಿಎಸ್‌ಗೆ ಹೋಗಿ, ಟಿಕೆಟ್ ಪಡೆದುಕೊಂಡು ಸ್ಪರ್ಧಿಸಿದರು; ಸೋತರು. ಆಗಲೂ ಚುನಾವಣೆ ಮುಗಿದ ನಂತರ ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದಿದ್ದರು. ಕಾಂಗ್ರೆಸ್‌ನಲ್ಲೇ ’ಇದ್ದರು’. ಆ ನಂತರವೂ ’ಮುಂದಿನ ಚುನಾವಣೆಗೆ ಮುಂಚೆ ಬಿಜೆಪಿಗೆ ಹೋಗುತ್ತಾರೆ; ಈ ಸಾರಿ ಕಾಪುವಿನಿಂದ ಸ್ಪರ್ಧೆಯಂತೆ; ಲೋಕಸಭೆಗೆ ಅವರೇ ಸ್ಪರ್ಧಿಯಂತೆ ಇತ್ಯಾದಿ’ ಮಾತುಗಳು ಕೇಳಿಬರುತ್ತಲೇ ಇದ್ದವು. ಅಷ್ಟರಮಟ್ಟಿಗೆ ಅವರ ಕಾಂಗ್ರೆಸ್ ನಿಷ್ಠೆ ಎಂದೂ ಸಂಶಯಾತೀತ ಆಗಿರಲಿಲ್ಲ. ಇದೇ ಪ್ರಮೋದ್ 2018ರ ಚುನಾವಣೆಯಲ್ಲಿ ಉಡುಪಿಯಲ್ಲಿ ಪ್ರಚಾರಕ್ಕೆ ತನ್ನ ಜೊತೆ ಬರಬೇಡಿರಿ ಎಂದು ಮುಸ್ಲಿಮರಿಗೆ
ಹೇಳಿದ್ದರೆನ್ನಲಾದ ಮಾತು ಸುದ್ದಿಯಾಗಿತ್ತು.

ಕಾಂಗ್ರೆಸ್ ಸಂಘಟನೆಗೆ ಅಥವಾ ಸಿದ್ಧಾಂತಕ್ಕೆ ಅವರು ನಿಷ್ಠರಾಗಿದ್ದರೆನ್ನಲು ಯಾವ ಆಧಾರಗಳೂ ಇರಲಿಲ್ಲ.
ಕಾಂಗ್ರೆಸ್‌ಗೆ ಅಂತಹ ಸಿದ್ಧಾಂತ ಇದೆಯಾ ಎಂದು ಯಾರಾದರೂ ಕೇಳಬಹುದು. ಏಕೆಂದರೆ ಮೇಲೆ ಹೇಳಿದ ಅಷ್ಟೆಲ್ಲಾ ನಡೆದರೂ ಪ್ರಮೋದ್ ಮಧ್ವರಾಜ್‌ರು ತಾವಾಗಿಯೇ ಹೋಗುವತನಕ ಕಾಂಗ್ರೆಸ್ ಪಕ್ಷವು ಅವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಶಿಸ್ತು ಕ್ರಮ ಹೋಗಲಿ, ಅವರಿಗೆ ಪರ್ಯಾಯವಾಗಿ ಕ್ಷೇತ್ರದಲ್ಲಿ ಇನ್ನೊಬ್ಬ ಅಭ್ಯರ್ಥಿಯನ್ನು ಮುಂದೆ ತರುವುದನ್ನೂ ಮಾಡಲಿಲ್ಲ. ಮೊದಲಿಗೆ ಕ್ಷೇತ್ರಕ್ಕೊಬ್ಬರು ಗೆಲ್ಲುವ ಅಭ್ಯರ್ಥಿಯನ್ನು ಹುಟ್ಟಿ ಹಾಕುವ ಯೋಜನೆಯೂ ಕಾಂಗ್ರೆಸ್‌ಗೆ ಇರುವುದಿಲ್ಲ; ಎರಡನೆಯದಾಗಿ, ಆ ಕ್ಷೇತ್ರದಲ್ಲಿರುವ ಹಾಲಿ ನಾಯಕ ಎಷ್ಟೇ ಪಕ್ಷ ವಿರೋಧಿಯಾಗಿದ್ದರೂ ಅಲ್ಲಿ ಬದಲಿ ಪ್ರಯತ್ನಕ್ಕೆ ಆಸ್ಪದ ಕೊಟ್ಟರೆ ಈತ ಕೋಪಿಸಿಕೊಂಡು ಪಕ್ಷ ಬಿಟ್ಟುಬಿಡಬಹುದು ಎಂಬ ಆತಂಕವನ್ನೂ ನಿವಾರಿಸಿಕೊಳ್ಳುವುದಿಲ್ಲ.

ಇದು ಕಾಂಗ್ರೆಸ್ ಪಕ್ಷಕ್ಕೆ ಅಂಟಿರುವ ರೋಗದ ಒಂದು ಲಕ್ಷಣ ಅಷ್ಟೇ. ಇಲ್ಲದಿದ್ದರೆ ಸಾಲುಸಾಲಾಗಿ ಆ ಪಕ್ಷದಿಂದ ಹತ್ತಾರು ಶಾಸಕರು (ಅವರಲ್ಲಿ ಹಾಲಿ ಸಚಿವರಾಗಿದ್ದ ಎಂ.ಟಿ.ಬಿ.ನಾಗರಾಜ್ ಸಹಾ ಇದ್ದರು) ಬಿಜೆಪಿಗೆ ಹೋಗುತ್ತಿರಲಿಲ್ಲ. ಇನ್ನೂ ತಮಾಷೆಯೆಂದರೆ ರಾಜೀನಾಮೆ ಕೊಡಲು ರಾಜಭವನಕ್ಕೆ ಹೋಗಿದ್ದವರಲ್ಲಿ ಒಬ್ಬರಾದ ರಾಮಲಿಂಗಾರೆಡ್ಡಿಯವರು ಈಗ ಕಾಂಗ್ರೆಸ್‌ನ ರಾಜ್ಯ ಕಾರ್ಯಾಧ್ಯಕ್ಷರಲ್ಲಿ ಒಬ್ಬರು!

ಎಲ್ಲಾ ಸೆಕ್ಯುಲರ್ ಮತಗಳೂ ಕಾಂಗ್ರೆಸ್‌ಗೆ ಹೋಗಬೇಕು; ತಪ್ಪಬಾರದು ಎಂದು ಹಲವರು (ಕಾಂಗ್ರೆಸ್‌ನಲ್ಲಿ ಎಂದೂ ಇರದವರೂ ಸೇರಿ) ಬಲವಾಗಿ ಪ್ರತಿಪಾದಿಸುತ್ತಾರೆ. ಅವರ ಮಟ್ಟಿಗೆ ಅದು ಜೀವನ್ಮರಣದ ಪ್ರಶ್ನೆ. ಆದರೆ ಈ ಕಾಂಗ್ರೆಸ್‌ಗೆ ಹಾಕಿದ ’ಸೆಕ್ಯುಲರ್ ಮತ’ವು (ಅಂಥದ್ದೊಂದು ಇದೆಯಾ ಎಂಬ ಅನುಮಾನವಿದೆ) ’ಸೆಕ್ಯುಲರ್’ ಶಾಸಕನನ್ನೇ ಆಯ್ಕೆ ಮಾಡುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ಹೀಗೇಕೆ? ಹೀಗಿದ್ದೂ ಕಾಂಗ್ರೆಸ್ ಪಕ್ಷವು ತನ್ನ ಸಿದ್ಧಾಂತವೆಂದು ಹೇಳಿಕೊಳ್ಳುವ ವಿಚಾರಗಳಿಗೆ ಬದ್ಧವಾಗಿರುವವರನ್ನು ಏಕೆ ಗುರುತಿಸಿ ಬೆಳೆಸುವುದಿಲ್ಲ? ಏಕೆಂದರೆ ಆ ಸಿದ್ಧಾಂತದ ಕುರಿತು ನಾಯಕತ್ವ ವಹಿಸಿರುವ ಹೆಚ್ಚಿನವರಿಗೆ ಸಂಪೂರ್ಣ ವಿಶ್ವಾಸವಿಲ್ಲ. ಒಂದು ವೇಳೆ ಇದ್ದರೂ, ಇದು ಈ ಹೊತ್ತಿನಲ್ಲಿ ಬಲ ಹೊಂದಿಲ್ಲ ಎಂಬ ಭಯ ಅವರಿಗಿದೆ. ಅಷ್ಟೇ ಅಲ್ಲದೇ, ಕೋಮುವಾದಿ ಧ್ರುವೀಕರಣಕ್ಕೆ ಕೊಡಬೇಕಾದ ಪ್ರತಿಮದ್ದು ಯಾವುದು ಎಂಬುದರ ಕುರಿತು ಅವರಿಗೆ ಗೊತ್ತೇ ಇದ್ದಂತಿಲ್ಲ. ಹಾಗಿದ್ದರೂ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ರಂತಹವರು ತಮ್ಮ ಕರ್ತವ್ಯವೆಂದು ಭಾವಿಸಿ, ಮುಂದೊಂದು ದಿನ ’ಜನರೇ ಅರ್ಥ ಮಾಡಿಕೊಳ್ಳಬಹುದು’ ಎಂಬ ನಿರೀಕ್ಷೆಯಲ್ಲಿ ಗಟ್ಟಿದನಿಯಲ್ಲಿ ಮತೀಯ ರಾಜಕಾರಣದ ವಿರುದ್ಧ ಮಾತಾಡುತ್ತಿದ್ದಾರೆಂಬುದು ನಿಜ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆದರೆ ಅದನ್ನು – ಅಂದರೆ ಸೆಕ್ಯುಲರ್ ರಾಜಕಾರಣವನ್ನು – ಗೆಲ್ಲಿಸಲು ರಾಜ್ಯದ ಎಲ್ಲೆಡೆಯೂ ಸಲ್ಲಬಹುದಾದ ವೈಚಾರಿಕ, ಸಂಘಟನಾತ್ಮಕ ಹಾಗೂ ರಾಜಕೀಯ ಪ್ರತಿರೋಧವನ್ನು ಕಟ್ಟುವ ಪ್ರಯತ್ನ ಇಲ್ಲ. ಯಾವ ಪಕ್ಷವು ತಾನು ಸೋತ 2018ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರಿಗಿಂತ ಹೆಚ್ಚು – ಶೇ.35ಕ್ಕಿಂತ ಹೆಚ್ಚು – ಮತಗಳನ್ನು ಪಡೆದುಕೊಂಡಿತ್ತೋ, ಆ ಪಕ್ಷದ ಸ್ಥಿತಿ ಇದು. ಅಂದರೆ ಈ ರಾಜ್ಯದ ಜನರು ಕಾಂಗ್ರೆಸ್‌ಅನ್ನು ಪೂರ್ಣವಾಗಿ ತಿರಸ್ಕರಿಸಿಲ್ಲ. ಯಾವ ದಕ್ಷಿಣ ಕನ್ನಡದಲ್ಲಿ ಅತ್ಯಂತ ಹೆಚ್ಚು ಮತೀಯ ಧ್ರುವೀಕರಣ ಇದೆಯೆಂದು ಹೇಳಲಾಗುತ್ತಿದೆಯೋ, ಅಲ್ಲೇ 2013ರಲ್ಲಿ ಒಂದು ಕ್ಷೇತ್ರ ಬಿಟ್ಟರೆ (ಅದೂ ಕಡಿಮೆ ಅಂತರದಲ್ಲಿ ಸೋತಿದ್ದು) ಮಿಕ್ಕೆಲ್ಲಾ ಕಡೆ ಗೆದ್ದಿದ್ದ ಪಕ್ಷವಿದು. ಅದು ಹೇಗೆ ಸಾಧ್ಯವಾಯಿತು? ಕರ್ನಾಟಕದ ಇತರ ಭಾಗಗಳಲ್ಲಾದರೂ ಕೆಜೆಪಿ ಅಥವಾ ಬಿಎಸ್‌ಆರ್ ಪಕ್ಷಗಳು ಬಿಜೆಪಿಯ ಮತಗಳನ್ನು ಒಡೆದವು ಎಂದು ಹೇಳಬಹುದು. ಕರಾವಳಿಯಲ್ಲಿ ಅದೂ ಆಗಿರಲಿಲ್ಲ.

ತಾನು ತನ್ನದೆಂದು ಹೇಳಿಕೊಳ್ಳುವ ಸೆಕ್ಯುಲರ್ ರಾಜಕಾರಣದ ಕುರಿತು (ಒಂದಷ್ಟು ಜನರಿಗೆ ನಿಷ್ಠೆಯಿದೆ ಎನ್ನುವುದು ಹೌದಾದರೂ) ತನಗೇ ಖಚಿತ ಭರವಸೆಯಿರದ ಪಕ್ಷವು ಕನಿಷ್ಠ ಅಂಕಿ-ಅಂಶ ಅಥವಾ ಹಿಂದಿನ ಉದಾಹರಣೆಗಳನ್ನೂ ಗಮನಿಸಿಯಾದರೂ ಧೈರ್ಯ ತಂದುಕೊಳ್ಳುವುದಿಲ್ಲ. ಅದನ್ನು ಹೊರತುಪಡಿಸಿ ಪಕ್ಷದ ಗೆಲುವಿನಲ್ಲೇ ತಮ್ಮ ಗೆಲುವೂ ಇದೆ ಎಂಬ ಸ್ವಾರ್ಥದಿಂದಲಾದರೂ ಏನಾದರೂ ಮಾಡಬೇಕಲ್ಲವೇ? ಏಕೆಂದರೆ ಈ ಸದ್ಯ ಯಾರು ಮುಂದಿನ ಸಿಎಂ ಅಭ್ಯರ್ಥಿ ಎಂಬ ಘೋಷಣೆ (ಅಥವಾ ಕನಿಷ್ಠ ಕಾಂಗ್ರೆಸ್ ಹೈಕಮಾಂಡ್‌ನಿಂದ ಕಿವಿಯಲ್ಲಿ ಉಸುರುವಿಕೆ) ಆಗುತ್ತದೆ ಎಂಬುದರ ಮೇಲೆಯೇ ಕೆಲಸ ಮಾಡಬೇಕೇ ಇಲ್ಲವೇ ಎಂಬುದನ್ನು ತೀರ್ಮಾನಿಸುತ್ತೇವೆ ಅಥವಾ ತೀರ್ಮಾನವಾಗುತ್ತದೆ ಎಂದು ಕಾಂಗ್ರೆಸ್‌ನ ಶೇ.75 ಭಾಗದಷ್ಟು ನಾಯಕರು ಭಾವಿಸಿಕೊಂಡಿದ್ದಾರೆ. ಸರಿಯಾಗಿ ಇನ್ನೊಂದು ವರ್ಷಕ್ಕೆ ಕರ್ನಾಟಕ ವಿಧಾನಸಭೆಯ ಚುನಾವಣೆಯಿದೆ. ಸುಮಾರು 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದು ಬಹಳ ಕಷ್ಟ ಮತ್ತು ಅಲ್ಲಿ ತಮಗೆ ಸೂಕ್ತ ಅಭ್ಯರ್ಥಿಯೇ ಇಲ್ಲ ಎಂದು ಕಾಂಗ್ರೆಸ್‌ನ ಬಹುತೇಕ ದೊಡ್ಡ ನಾಯಕರು ಖಾಸಗಿಯಾಗಿ ಹೇಳುತ್ತಾರೆ. ಗೆಲ್ಲುವ ಸಾಧ್ಯತೆಯಿರುವ 125 ಕ್ಷೇತ್ರಗಳಲ್ಲಿ ಗಂಭೀರ ಪ್ರಯತ್ನ ಪಡುವುದರ ಜೊತೆಗೆ, ಉಳಿದ ಕ್ಷೇತ್ರಗಳಲ್ಲಿ ಗಂಭೀರ ಪ್ರತಿರೋಧ ಒಡ್ಡಬೇಕು; ರಾಜ್ಯಮಟ್ಟದಲ್ಲಿ ಜನರಿಗೆ ಅಹುದಹುದೆನಿಸುವ ರೀತಿಯ ರಾಜಕೀಯ ಒಲವು ಬೆಳೆಸಬೇಕು. ಆಗ ಮಾತ್ರ ಅದು ಗೆಲ್ಲಲು ಸಾಧ್ಯ. ಆ ರಾಜಕೀಯ ಕಥನ ಕಟ್ಟಲು ಸೂಕ್ತವಾದ ತರ್ಕ ಹಾಗೂ ರಾಜಕೀಯ ಮಥನದ ಅಗತ್ಯವಿದೆ.

ಇಂತಹ ಯಾವುದೂ ನಡೆಯದ ಪಕ್ಷದಲ್ಲಿ ಅವಕಾಶವಾದಿಗಳು, ಪಕ್ಷಾಂತರ ಪ್ರವೀಣರು, ಕಡುಭ್ರಷ್ಟರು, ಹೇಗೋ ಮಾಡಿ ಗೆಲ್ಲುವವರು, ಪಕ್ಷ ಮುಳುಗುತ್ತಿರುವ ಸಂದರ್ಭದಲ್ಲೂ ಕತ್ತು ಕೊಯ್ಯಬಲ್ಲವರು ಇಂಥವರೆಲ್ಲರೂ ಇರುತ್ತಾರೆ. ಕಡೆಯ ಘಳಿಗೆಯಲ್ಲಿ ಅಂಥವರಲ್ಲಿ ಯಾರಿಗೋ ಟಿಕೆಟ್ ಸಹಾ ಕೊಡುತ್ತಾರೆ. ಏಕೆಂದರೆ
ಅಂಥವರಿಗೇ ಗೆಲುವಿನ ಸಾಧ್ಯತೆ (Winnability) ಹೆಚ್ಚು ಎಂಬ ಅತಾರ್ಕಿಕ ನಂಬುಗೆ ರಾಜಕಾರಣದಲ್ಲಿದೆ. ಸಿದ್ಧಾಂತ ಹಾಳಾಗಲಿ, ಪಕ್ಷಕ್ಕಾಗಿ ದುಡಿಯುವವರಿಗೆ ಟಿಕೆಟ್ ಎಂಬ ನಿಯಮವೂ ಇಲ್ಲದಾದಾಗ ಬೇರೆ ಪಕ್ಷಗಳಿಂದ ಬರುವವರಿಗೂ ಸಲೀಸಾಗಿ ಟಿಕೆಟ್ ನೀಡಲಾಗುತ್ತದೆ. ಹೀಗಿದ್ದಾಗ ಪಕ್ಷ ಸಂಘಟನೆ ಬಲವಾಗುವುದಾಗಲೀ, ಕರ್ನಾಟಕದ ಜನರು ಇಂದೂ ತಿರಸ್ಕರಿಸದ ಸೆಕ್ಯುಲರ್ ರಾಜಕಾರಣವನ್ನು ಗಟ್ಟಿಗೊಳಿಸುವುದಾಗಲೀ ಹೇಗೆ ಸಾಧ್ಯ? ಇದು ಕೇವಲ ಕಾಂಗ್ರೆಸ್‌ಗೆ ಮಾತ್ರ ಸೀಮಿತವಲ್ಲ. ಜೆಡಿಎಸ್‌ನಲ್ಲಿ ಕುಟುಂಬದ ಪಾರುಪತ್ಯದ ಜೊತೆಗೆ ಇಂತಹುದೇ ರಾಜಕಾರಣ ನಡೆಯುತ್ತದೆ.

ಇನ್ನು ಅತ್ಯಂತ ಕಡುಭ್ರಷ್ಟರು ಇರುವ ಪಕ್ಷವಾದ ಬಿಜೆಪಿಯು ದುಷ್ಟ ಸಿದ್ಧಾಂತವೊಂದನ್ನು ಹೊಂದಿದ್ದು ಅದಕ್ಕೆ ನಿಷ್ಠವಾಗಿದೆ. ಅದೊಂದಕ್ಕೆ ಪರಮ ನೀಚರು, ಲಂಪಟರು, ಭ್ರಷ್ಟಾತಿಭ್ರಷ್ಟರು ಯಾರೇ ಬಂದರೂ ಅಲ್ಲಿ ಸ್ವಾಗತವಿರುತ್ತದೆ. ಯಾವ ಸಿದ್ಧಾಂತವೂ ಇಲ್ಲದ, ಹಣ ಮಾಡುವುದು ಮತ್ತು ರಾಜ್ಯವನ್ನು ಎಲ್ಲಾ ರೀತಿಯಲ್ಲೂ ಕಲುಷಿತಗೊಳಿಸುವುದರಲ್ಲಿ ಪರಿಣಿತಿ ಸಾಧಿಸಿರುವ ಯಾರೇ ಇದ್ದರೂ, ಮತೀಯ ರಾಜಕಾರಣದ ಅಜೆಂಡಾಕ್ಕೆ ವಿರೋಧ ವ್ಯಕ್ತಪಡಿಸದೇ ಇದ್ದರೆ ಸಾಕು; ಗೆಲ್ಲುವ ಸಾಧ್ಯತೆ ಇದ್ದರೆ ಕರೆದುಕೊಳ್ಳುತ್ತಾರೆ. ಹೀಗಾಗಿ ಪ್ರಮೋದ್ ಮಧ್ವರಾಜ್‌ರಂತಹವರ ಪಕ್ಷಾಂತರವು ಯಾವ ರೀತಿಯಲ್ಲೂ ಆಶ್ಚರ್ಯಕರವಲ್ಲ. ಪ್ರಶ್ನೆಯಿರುವುದು ಕರ್ನಾಟಕದ ಪ್ರಜ್ಞಾವಂತ ಮತದಾರರು ಈ ಪರಿಸ್ಥಿತಿಯನ್ನು ನಿಭಾಯಿಸಲು ಯಾವ ದಾರಿಯನ್ನು ಹುಡುಕಿಕೊಳ್ಳಬೇಕೆಂಬುದರಲ್ಲಿ.

ಅಂತಿಮವಾಗಿ ಷರಾ ಹೀಗೆ ಬರೆಯಬಹುದೇನೋ: ಈ ಪ್ರಜಾತಂತ್ರವು ಬಿಜೆಪಿಯ ಕಾರಣಕ್ಕೆ ಅಪಾಯದಲ್ಲಿದೆ; ಆದರೆ ಕಾಂಗ್ರೆಸ್ ಒಂದೇ ಅದನ್ನು ರಕ್ಷಿಸಲಾರದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಕರಾಳ ದೇಶದ್ರೋಹ ಕಾನೂನು ಕೊನೆಗೊಳ್ಳಬಹುದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...