ಪಾಸ್ ಇದ್ದರೂ ಸಹ ಶುಲ್ಕ ಪಾವತಿ ರಸೀದಿ ಜೆರಾಕ್ಸ್ ಪ್ರತಿ ಇಲ್ಲವೆಂಬ ಕಾರಣವೊಡ್ಡಿ ವಿದ್ಯಾರ್ಥಿನಿಯನ್ನು ರಾತ್ರಿ ವೇಳೆ ಬಸ್ನಿಂದ ಕೆಳಗಿಳಿಸಿದ ಬಿಎಂಟಿಸಿ ಕಂಡಕ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ. ನಂತರ ಕಂಡಕ್ಟರ್ ನೀಡಿದ ದೂರಿನ ಆಧಾರದಲ್ಲಿ ವಿದ್ಯಾರ್ಥಿನಿ ಮೇಲೂ ಸಹ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿದ್ಯಾರ್ಥಿನಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಜನನಿ ವತ್ಸಲ ಅವರು ಡಿ.3ರಂದು ರಾತ್ರಿ ಸುಮಾರು 9.30 ವೇಳೆಯಲ್ಲಿ ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್ನಿಂದ ಬಿಎಂಟಿಸಿ ಬಸ್ನಲ್ಲಿ (ಕೆಎ-57-ಎಫ್-3447) ಬೊಮ್ಮಸಂದ್ರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
“ಶಾಂತಿನಗರದ ಬಸ್ ನಿಲ್ದಾಣದ ಬಳಿ ನಿರ್ವಾಹಕರಾದ ಮನೋಜ್ ಅವರು ವಿದ್ಯಾರ್ಥಿನಿಯ ಬಸ್ ಪಾಸ್ ಕಿತ್ತುಕೊಂಡು, ಶುಲ್ಕ ರಸೀದಿ ಇಲ್ಲದ ಕಾರಣಕ್ಕೆ ಕೆಳಗೆ ಇಳಿಸಿ ಜಗಳ ಮಾಡಿದ್ದಾರೆ. ಬಳಿಕ ಅಲ್ಲಿದ್ದ ಕೆಲ ಯುವಕರು ಜನನಿಯವರನ್ನು ಎಳೆದಾಡಿ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದ್ದಾರೆ” ಎಂದು ಎಫ್ಐಆರ್ ಕಾಪಿಯಲ್ಲಿ ಉಲ್ಲೇಖಿಸಲಾಗಿದೆ.
“ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡುವುದಲ್ಲದೆ ನನ್ನ ಮೇಲೆ ಯುವಕರು ಹಲ್ಲೆ ನಡೆಸುತ್ತಿದ್ದವರಿಗೆ ಕಂಡಕ್ಟರ್ ಕುಮ್ಮಕ್ಕು ನೀಡಿದ್ದಾರೆ” ಎಂದು ವತ್ಸಲ ದೂರಿದ್ದು, ಅವರು ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್ 109, 34, 504, 393, 354 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನನ್ನ ಮೊಬೈಲ್ನಲ್ಲಿ ಶುಲ್ಕ ಪಾವತಿ ರಸೀದಿಯ ಪ್ರತಿ ಇದೆ. ಆದರೂ ಕಂಡಕ್ಟರ್ ಪಾಸ್ ಕಿತ್ತುಕೊಂಡಿದ್ದಾರೆಂದು ಫೇಸ್ಬುಕ್ನಲ್ಲಿ ಜನನಿಯವರು ಲೈವ್ ಮಾಡಿರುವುದು ವೈರಲ್ ಆಗಿದೆ. ಅದರಲ್ಲಿ “ನನ್ನ ಪಾಸ್ ಯಾಕೆ ಕಿತ್ತುಕೊಂಡಿರಿ” ಎಂದು ವತ್ಸಲ ಪ್ರಶ್ನಿಸಿದ್ದಾರೆ. ಆಗ ಕಂಡಕ್ಟರ್ “ಮೊಬೈಲ್ ಫೋಟೋ ಪ್ರತಿಯನ್ನು ಸ್ವೀಕರಿಸಲಾಗುವುದಿಲ್ಲ” ಎಂದು ಹೇಳುತ್ತಾರೆ.
“ಕಲರ್ ಜೆರಾಕ್ಸ್ ಕಾಪಿಯನ್ನು ಮೊಬೈಲ್ನಲ್ಲಿ ತೆಗೆದುಕೊಂಡು ಬಂದರೆ ಸಾಕು ಎನ್ನುತ್ತಾರೆ” ಎಂದು ಜನನಿ ತಿಳಿಸುತ್ತಾರೆ. ಬಸ್ ಸಿಬ್ಬಂದಿ ನಿರಾಕರಿಸುತ್ತಾರೆ. “ಇಷ್ಟು ಹೊತ್ತಲ್ಲಿ ಕೆಳಗೆ ಇಳಿಸುತ್ತೀರಲ್ಲ ಇದು ಸರಿಯೇ? ಏನಾದರೂ ಅನಾಹುತವಾದರೆ ಯಾರು ಹೊಣೆ?” ಎಂದು ಜನನಿ ಕೇಳುತ್ತಾರೆ. “ನೀನು ಯಾವ ಟೈಮ್ಗಾದರೂ ಬಾ ನನಗೇನು?” ಎಂದು ಕಂಡಕ್ಟರ್ ದಬಾಯಿಸುತ್ತಾರೆ.
ವತ್ಸಲ ಅವರ ಪ್ರಶ್ನೆಗಳಿಗೆ ಉತ್ತರ ನೀಡದ ಸಿಬ್ಬಂದಿ ಬಸ್ನಿಂದ ಇಳಿಸುವ ಯತ್ನ ಮಾಡಿದ್ದಾರೆ. ಆಗ ಬಸ್ ಮುಂದಕ್ಕೆ ಹೋಗಲು ಬಿಡದೆ ಜನನಿಯವರು ಪ್ರತಿಭಟಿಸಿದ್ದಾರೆ. ಕೆಲವು ಯುವಕರು ಕಂಡಕ್ಟರ್ ಪರ ವಾದಿಸುತ್ತಾ, ಜನನಿಯವರ ಮೇಲೆ ಜಗಳವಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಒಂದು ರಸೀದಿ ಕಾರಣಕ್ಕೆ ರಸ್ತೆ ಮಧ್ಯೆಯಲ್ಲಿ ಕೆಳಗಿಳಿಸಲು ಯತ್ನಿಸಿದ ಬಿಎಂಟಿಸಿ ಸಿಬ್ಬಂದಿಯ ನಡೆಯನ್ನು ಖಂಡಿಸಿ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಜನನಿ ವತ್ಸಲ ಅವರು ಪ್ರಕರಣ ದಾಖಲಿಸಿದ್ದಾರೆ. ಜನನಿಯವರ ಲೈವ್ ನೋಡಿ, ಜನನಿಯವರ ಸ್ನೇಹಿತರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಾಗುವವರೆಗೂ ಸಹಾಯ ಮಾಡಿದ್ದಾರೆ ಎಂದು ಅವರು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.
ಇದನ್ನೂ ಓದಿರಿ: ದಕ್ಷಿಣ ಕನ್ನಡ: ಯುವಕರ ಮೇಲೆ ತಲವಾರ್ ದಾಳಿ; ಐವರಿಗೆ ಗಾಯ
ಪ್ರತಿ ದೂರು ದಾಖಲು
ನಂತರ ಕಂಡಕ್ಟರ್ ಮನೋಜ್ರವರು ನನ್ನ ಮೇಲೆ ಹಲ್ಲೆಯಾಗಿದೆ ಎಂದು ಪ್ರತಿದೂರು ದಾಖಲಿಸಿದ್ದಾರೆ. ಅದರ ಆಧಾರದಲ್ಲಿ ಜನನಿಯವರ ಮೇಲೆ ಎಫ್ಐಆರ್ ದಾಖಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಠಪತಿ ಅವರನ್ನು ನಾನುಗೌರಿ.ಕಾಂ ಸಂಪರ್ಕಿಸಿದಾಗ, “ಕೌಂಟರ್ ಕೇಸ್ ದಾಖಲಾಗಿರುವುದು” ಖಚಿತವಾಗಿದೆ ಎಂದರು. “ಕೌಂಟರ್ ಕೇಸ್ಗೆ ಆಧಾರವೇನು?” ಎಂದು ಕೇಳಿದ್ದಕ್ಕೆ ಉತ್ತರಿಸಲು ನಿರಾಕರಿಸಿದರು.
ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಆರೋಪದ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಜನನಿಯವರು, “ವಿಜಯ ಕರ್ನಾಟಕ ಪತ್ರಿಕಾ ವರದಿ ಸುಳ್ಳುಗಳಿಂದ ಕೂಡಿದೆ. ನಾನು ಜೋರು ದನಿಯಲ್ಲಿ ಪ್ರಶ್ನಿಸಿದ್ದು ನಿಜ. ಇಡೀ ಘಟನೆ ಫೇಸ್ಬುಕ್ನಲ್ಲಿ ಲೈವ್ ಆಗಿದೆ. ನಾನು ಕರೆ ಮಾಡಿ ನನ್ನ ಸ್ನೇಹಿತರನ್ನು ಕರೆಸಿಕೊಂಡಿರುವುದಾಗಿ ಪತ್ರಿಕೆಯಲ್ಲಿ ಆರೋಪಿಸಲಾಗಿದೆ. ನನ್ನ ಸ್ನೇಹಿತರು ನನ್ನ ಲೈವ್ ನೋಡಿ ಸ್ಥಳಕ್ಕೆ ಧಾವಿಸಿದರೆ ಹೊರತು ನಾನು ಯಾರಿಗೂ ಫೋನ್ ಮಾಡಿಲ್ಲ. ಇಡೀ ಘಟನೆ ಅರ್ಧ ಗಂಟೆಗೂ ಹೆಚ್ಚು ಸಮಯ ಲೈವ್ ಆಗುತ್ತಿದ್ದಾಗ ನಾನು ಹೇಗೆ ಫೋನ್ ಮಾಡಲು ಸಾಧ್ಯ? ಇನ್ನು ನಾನು ಯಾರಿಗೂ ಹಲ್ಲೆ ನಡೆಸಿಲ್ಲ. ಬೇಕಾದರೆ ಲೈವ್ ಪೂರ್ತಿ ನೋಡಿ. ಆದರೆ ಸುಳ್ಳು ವರದಿ ಮಾಡಲಾಗಿದೆ” ಎಂದರು.
ಒಂದು ಬಟ್ಟೆ ಅಭಿಯಾನದ ಕರ್ತೃ ಜನನಿ
ಜನನಿ ವತ್ಸಲ ಅವರು ಮೊದಲಿನಿಂದಲೂ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಕೆಆರ್ಎಸ್ ಪಕ್ಷದ ಕಾರ್ಯಕರ್ತರೂ ಹೌದು. ಈ ಹಿಂದೆಯೂ ಹಲವು ದೌರ್ಜನ್ಯಗಳನ್ನು ಪ್ರಶ್ನಿಸಿ ವಿಡಿಯೊಗಳನ್ನು ಮಾಡಿದ್ದಾರೆ. ಮುಖ್ಯವಾಗಿ ಜನನಿಯವರು ಕಳೆದ ಎರಡು ವರ್ಷಗಳಿಂದ ಮಾಡುತ್ತಿರುವ ಸಾಮಾಜಿಕ ಸೇವೆಯು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಬಡವರಿಗಾಗಿ “ಒಂದು ಬಟ್ಟೆ ಅಭಿಯಾನ, ಮತ್ತು ಒಂದು ಜೊತೆ ಚಪ್ಪಲಿ ಅಭಿಯಾನ”ವನ್ನು ನಿರಂತವಾಗಿ ಜನನಿ ನಡೆಸುತ್ತಿದ್ದಾರೆ. ಈಗ ಮನೆ ಇಲ್ಲದೆ ರಸ್ತೆ ಬದಿ ವಾಸಿಸುವವರಿಗೆ `ಒಂದು ಹೊದಿಗೆ ನೀಡುವ ಅಭಿಯಾನ’ ಸಹ ಮಾಡುತ್ತಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
“ಹೆಣ್ಣು ಮಕ್ಕಳನ್ನು ಈ ಸಣ್ಣಪುಟ್ಟ ಕಾರಣ ನೀಡಿ ರಾತ್ರಿ ವೇಳೆ ಬಸ್ನಿಂದ ಕೆಳಗಿಳಿಸಿದರೆ ಏನಾದರೂ ಅನಾಹುತವಾದರೆ ಯಾರು ಹೊಣೆಯಾಗುತ್ತಾರೆ?” ಎಂಬ ಪ್ರಶ್ನೆಯಲ್ಲಿ ಅರ್ಥವಿದೆ. ಈ ನಿಟ್ಟಿನಲ್ಲಿ ದೆಹಲಿ, ತಮಿಳುನಾಡು, ತೆಲಂಗಾಣ ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಿರ್ಧಾರವನ್ನು ನಮ್ಮ ರಾಜ್ಯ ಸರ್ಕಾರವೂ ತೆಗೆದುಕೊಳ್ಳುವುದು ಸೂಕ್ತ. ದೆಹಲಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇವೆ ಇದೆ. ಇನ್ನು ತೆಲಂಗಾಣ ಸರ್ಕಾರ, “ಸಂಜೆ ಏಳು ಗಂಟೆಯ ಬಳಿಕ ಮಹಿಳೆಯರು ಕೇಳಿದ ಕಡೆ ಹತ್ತಿಸಿಕೊಳ್ಳಬೇಕು ಮತ್ತು ಇಳಿಸಬೇಕು” ಎಂದು ತಿಳಿಸಿದೆ. ಇಂತಹ ನಿರ್ಧಾರಗಳನ್ನು ನಮ್ಮ ರಾಜ್ಯ ಸರ್ಕಾರ ತೆಗೆದುಕೊಂಡರೆ ಮಹಿಳೆಯರಿಗೆ ಬಹಳ ಅನುಕೂಲವಾಗುತ್ತದೆ.
ಇದನ್ನೂ ಓದಿರಿ: ರಂಗಾಯಣ ನಿರ್ದೇಶಕರ ವಜಾಕ್ಕೆ ಪ್ರಗತಿಪರ ಚಿಂತಕರ ಆಗ್ರಹ; ಬಹುರೂಪಿ ಬಹಿಷ್ಕರಿಸಲು ನಿರ್ಧಾರ