Homeಕರ್ನಾಟಕಬಲಪಂಥೀಯ ಸಾಂಸ್ಕೃತಿಕ ರಾಜಕಾರಣದಲ್ಲಿ ಗಟ್ಟಿಗೊಳ್ಳುತ್ತಿರುವ ಜಾತಿಗಳು ಮತ್ತು ಬ್ರಾಹ್ಮಣ್ಯ

ಬಲಪಂಥೀಯ ಸಾಂಸ್ಕೃತಿಕ ರಾಜಕಾರಣದಲ್ಲಿ ಗಟ್ಟಿಗೊಳ್ಳುತ್ತಿರುವ ಜಾತಿಗಳು ಮತ್ತು ಬ್ರಾಹ್ಮಣ್ಯ

- Advertisement -
- Advertisement -

ನಟ ಚೇತನ್ ಬ್ರಾಹ್ಮಣ್ಯದ ಕುರಿತು ಮಾಡಿದ ಟಿಪ್ಪಣಿಗಳಿಂದಾಗಿ ಉಂಟಾಗಿರುವ ವಿವಾದವು ಸಾಮಾಜಿಕ
ತಾಣಗಳಲ್ಲಿ ಬಿರುಸಾಗಿ ಚರ್ಚೆಯಾಗುತ್ತಿದೆ. ಈ ವಿವಾದದ ನೆಪದಲ್ಲಿ ಪ್ರಸ್ತುತವಾದ ಅನೇಕ ಸಮಕಾಲೀನ ವಿದ್ಯಮಾನಗಳನ್ನು ಕುರಿತು ಗಂಭೀರವಾದ ಸಂವಾದವನ್ನು ನಿರೀಕ್ಷಿಸುತ್ತಿದ್ದೇನೆ. ಏಕೆಂದರೆ ಸದ್ಯದ ರಾಜಕೀಯದ ತಂತ್ರಗಾರಿಕೆಯೆಂದರೆ ಉದ್ದೇಶಪೂರ್ವಕವಾಗಿ ಅನವಶ್ಯಕ ವಿವಾದಗಳನ್ನು ಮಾಧ್ಯಮಗಳ ಮೂಲಕ ಮತ್ತು ಈಗಲೂ ಬ್ರಿಟಿಷ್ ವಸಾಹತುಶಾಹಿಯ ಜೀವಂತ ವಾರಸುದಾರರಾಗಿರುವ ಪೊಲೀಸ್ ಮತ್ತು ತಳಮಟ್ಟದ ನ್ಯಾಯಾಲಯಗಳ ಮೂಲಕ ಹುಟ್ಟಿಹಾಕುವುದು; ಇದರ ಮೂಲಕ ಈಗಾಗಲೇ ಧ್ರುವೀಕರಣವಾಗಿರುವ ನಾಗರಿಕ ಸಮುದಾಯವನ್ನು ಇನ್ನಷ್ಟು ಧ್ರುವೀಕರಣಗೊಳಿಸುವುದು. ಅಲ್ಲದೆ ಮೂಲ ಮಾತೃ ಸಂಸ್ಥೆಗೆ ಬೆಂಬಲವಾಗಲು ಹುಟ್ಟಿಕೊಂಡಿರುವ ಸಂಸ್ಥೆಗಳು ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಅವಕಾಶವಾಗುತ್ತದೆ.

ಎಲ್ಲಕ್ಕಿಂತ ಮುಖ್ಯ ಉದ್ದೇಶವೆಂದರೆ ಯಾವುದೇ ಟೀಕೆ ಅಥವಾ ಟಿಪ್ಪಣಿಗೆ ಪ್ರಜಾಪ್ರಭುತ್ವವಾದಿ ಅವಕಾಶಗಳಿರಕೂಡದು ಎನ್ನುವ ಫ್ಯಾಸಿಸ್ಟ್ ಸಂಸ್ಥೆ ಮತ್ತು ಅದರ ರಾಜಕೀಯ ಪಕ್ಷ ಹಾಗೂ ಸರಕಾರಗಳ ಒತ್ತಾಸೆಯನ್ನು ಸಮರ್ಥಿಸಿದ ಹಾಗೆ ಆಗುತ್ತದೆ. ಇವುಗಳ ಬೆಂಬಲಿಗರಾದ ಶಿಕ್ಷಿತ ಮಧ್ಯಮವರ್ಗ ಮತ್ತು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳ ಸೈದ್ಧಾಂತಿಕ ನಿಲುವುಗಳಿಗೆ ಪರೋಕ್ಷವಾಗಿ ಬೆಂಬಲವೂ ಸಿಕ್ಕುತ್ತದೆ. ಅಂದರೆ ಸಾಮಾಜಿಕ ತಾಣಗಳ ಹುಸಿ ಚರ್ಚೆಯಿಂದ ಭಾರತದ ಹಾಗೂ ವಿದೇಶೀಯ ಸಂಶೋಧನೆ, ಶಿಕ್ಷಣ ಸಂಸ್ಥೆಗಳವರೆಗೆ ಹಬ್ಬಿರುವ ಬಲಪಂಥೀಯ ಜಾಲವೊಂದು ಸದಾ ಉತ್ಸಾಹದಿಂದ ಕೆಲಸ ಮಾಡುತ್ತಿದ್ದು ಅದರ ಒಂದು ಕಾರ್ಯಾಚರಣೆಯಾಗಿ ಈಗಿನ ಈ ವಿವಾದವನ್ನು ನೋಡಬೇಕಾಗಿದೆ. ಇದು ಹೇಗೆ ಕೆಲಸಮಾಡುತ್ತಿದೆಯೆನ್ನುವುದಕ್ಕೆ ಉದಾಹರಣೆ ನೋಡಿ. ಕರ್ನಾಟಕದ ಯುವತಿಯೊಬ್ಬಳು ವಿಶ್ವವಿಖ್ಯಾತ ಆಕ್ಸ್‌ಫರ್ಡ್ ಸ್ಟೂಡೆಂಟ್ ಯೂನಿಯನ್‌ನ ಅಧ್ಯಕ್ಷೆಯಾಗಿ ಆಯ್ಕೆಯಾದ ಸುದ್ದಿ ಬಂದಾಗ ನಾನು ಕೂಡ ಸಾಮಾಜಿಕ ತಾಣದಲ್ಲಿ ಅದನ್ನು ಸಂಭ್ರಮಿಸಿದೆ. ಆದರೆ ಒಂದೆರಡು ದಿನಗಳಲ್ಲಿ, ಆ ಯುವತಿ ಜನಾಂಗೀಯ ನಿಂದನೆಯ (racist) ಪೋಸ್ಟ್‌ಗಳನ್ನು ಈ ಹಿಂದೆ ಹಾಕಿದ್ದು, ಆದರ ಬಗ್ಗೆ ಯಾವುದೇ ವಿಷಾದವನ್ನೂ ವ್ಯಕ್ತಪಡಿಸಿರದಿದ್ದರಿಂದ ಅವರನ್ನು ಈ ಸ್ಥಾನದಿಂದ ತೆಗೆಯಬೇಕೆಂದು ಚರ್ಚೆ ಶುರುವಾಯಿತು.

ಇದು ಭಾರತೀಯರಿಗೆ ಆದ ಅವಮಾನ, ಜನಾಂಗೀಯ ತಾರತಮ್ಯವೆಂದು ನಾನು ವಿವರಿಸಿದ ಜಾಲದಲ್ಲಿ ವಿವಾದ ಆರಂಭಿಸಲಾಯಿತು. ನಮ್ಮ ವಿದೇಶಾಂಗ ಮಂತ್ರಿ ಜಯಶಂಕರ ಕೂಡ ಆ ಯುವತಿಯ ಪರವಾಗಿ ಸಂಸತ್ತಿನಲ್ಲಿ ಮಾತನಾಡಿದರು. ಆದರೆ ಅಷ್ಟರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿರುವ Oxford University Hindu Society ಮತ್ತು ಇತರ ಸಂಸ್ಥೆಗಳು ಅವಳು ಮಾಡಿದ್ದು ತಪ್ಪು ಎಂದು ಹೇಳಿಕೆ ನೀಡಿದ ಮೇಲೆ ಮೆಲ್ಲಗೆ ಈ ವಿವಾದವು ಮರೆಯಾಯಿತು. ಈ ವಿವಾದದಲ್ಲಿ ಈ ಸಂಘಟನೆಗಳ ಜಾಲಕ್ಕೆ ಯಾವ ಹಾನಿಯೂ ಆಗಲಿಲ್ಲ. ಲಾಭವೇ ಆಯಿತು. ಏಕೆಂದರೆ ಅರ್ಥಹೀನ ವಿವಾದಗಳನ್ನು ಹುಟ್ಟಿಸುವುದೇ ಒಂದು ಸಾಂಸ್ಕೃತಿಕ ರಾಜಕೀಯವಾಗಿದೆ.

PC : Times of India

ಹೀಗೆಲ್ಲಾ ಆಗುತ್ತಿರುವುದಕ್ಕೆ ಎರಡು ಕಾರಣಗಳು. ಒಂದು ಬಹುಮತದ ಚುನಾವಣೆ ವಿಜಯವನ್ನು ಏಕವ್ಯಕ್ತಿ ಸರ್ವಾಧಿಕಾರಕ್ಕೆ ದೊರೆತ ಸಮ್ಮತಿಯೆಂದುಕೊಂಡು ಅತ್ಯಂತ ಅವಸರದಲ್ಲಿ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಹಾಗೂ ಅದರ ಮೌಲ್ಯಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಭುತ್ವವನ್ನು ಪ್ರಶ್ನಿಸುವ ಹಕ್ಕುಗಳನ್ನು ನಾಶಮಾಡಲಾಗುತ್ತಿದೆ. ಹೀಗೆ ಮಾಡಲು ಬ್ರಿಟಿಷ್ ವಸಾಹತುಶಾಹಿ ಕಾಲದ ಪೊಲೀಸರಿಗಿಂತ ಕ್ರೂರವಾಗಿರುವ ಪೊಲೀಸರನ್ನು ಬಳಸಿಕೊಳ್ಳಲಾಗುತ್ತದೆ. ರಾಷ್ಟ್ರದಲ್ಲಿಯೆ ಅತಿಹೆಚ್ಚು ದೇಶದ್ರೋಹ (Sedition) ಪ್ರಕರಣಗಳನ್ನು ದಾಖಲಿಸಿದ ಕುಖ್ಯಾತಿಯ ಕರ್ನಾಟಕ ರಾಜ್ಯದಲ್ಲಿ ಪೊಲೀಸರು ತಮ್ಮ mobile ವ್ಯಾನ್‌ಗಳಲ್ಲಿ F.I.R. ಅರ್ಜಿಗಳ ಪ್ರತಿಗಳನ್ನು ಹಂಚುತ್ತಾ ಒಡಾಡುತ್ತಿದ್ದಾರೆ! ರಾಜ್ಯ ಸರಕಾರವು ತಿಂಗಳಿಗೆ ಕನಿಷ್ಟ ಇಷ್ಟು F.I.R.ಗಳನ್ನು ದಾಖಲಿಸಿದಿದ್ದರೆ ಕೆಲಸದಲ್ಲಿ ಬಡ್ತಿ ಇಲ್ಲವೆಂದು ಪೊಲೀಸ್ ಇಲಾಖೆಗೆ ನಿರ್ದೇಶನ ಕೊಟ್ಟ ಹಾಗೆ ಕಾಣುತ್ತದೆ.

ಇದಕ್ಕೆ ಪೂರಕವಾಗಿ ಕರ್ನಾಟಕದ ಚರಿತ್ರೆಯಲ್ಲಿ ಕಂಡಿರದಂಥ ಮಹಾಭ್ರಷ್ಟ ಸರಕಾರವು ತನ್ನ ಉಳಿವಿಗಾಗಿ ರಾಜ್ಯದ ಎಲ್ಲಾ ಜಾತಿಸಂಸ್ಥೆಗಳಿಗೆ ಪ್ರಜೆಗಳು ಕೊಟ್ಟ ತೆರಿಗೆಯಿಂದ ಧನಸಹಾಯವನ್ನು ನೀಡಿ, ಅಸ್ತಿತ್ವದಲ್ಲಿ ಇಲ್ಲದಿದ್ದ ಪಕ್ಷದಲ್ಲಿ, ಜಾತಿಗಳಿಗೆ ಕಡ್ಡಾಯವಾಗಿ ಇಂಥ ಜಾತಿಸಂಸ್ಥೆಗಳನ್ನು ಸ್ಥಾಪಿಸಲು ಒತ್ತಾಯಿಸಿ ಧನಸಹಾಯ ನೀಡುತ್ತಿದೆ. ಇದು ಕರ್ನಾಟಕದ ರಾಜಕೀಯದ ಜಾತೀಕರಣದ ಭಾಗವಾಗಿದೆ. ಸೈದ್ಧಾಂತಿಕ ಬದ್ಧತೆ, ಕಾರ್ಯಕ್ಷಮತೆ ಮತ್ತು ಪ್ರಾಮಾಣಿಕತೆಗಳು ಇಲ್ಲದ ಈ ರಾಜಕೀಯವು ಪ್ರತಿಯೊಂದು ಜಾತಿಯನ್ನು ಸಂಘಟಿತವಾಗಿ Vote bank ಆಗುವಂತೆ ಪ್ರೇರೇಪಿಸುತ್ತ ಬಂದಿದೆ. ಇದರ ಜೊತೆಗೆ ಕಳೆದ ಒಂದು ದಶಕದಲ್ಲಿ ಸಾಂಕ್ರಾಮಿಕ ಪಿಡುಗಿನಂತೆ ಸ್ವಾಮಿಗಳು, ಮಠಗಳು ಹಬ್ಬುತ್ತ ಈಗ ಸಾವಿರಾರು ಸಂಖ್ಯೆಗಳಲ್ಲಿವೆ. ಇವುಗಳು ಧಾರ್ಮಿಕ ಸಂಸ್ಥೆಗಳಲ್ಲ; ರಾಜಕೀಯ ಸಂಸ್ಥೆಗಳು. ಹೀಗಾಗಿ ಈ ಎಲ್ಲಾ ಸಂಸ್ಥೆಗಳ ಕಾರ್ಯಸೂಚಿಯೆಂದರೆ ಸರಕಾರದಿಂದ ಆಯಾ ಜಾತಿಗೆ ಮೀಸಲಾತಿ, ಧನಸಹಾಯ ಕೊಡಿಸುವುದು. ತಮ್ಮ ಬಗ್ಗೆ ಅಥವಾ ತಮ್ಮ ಜಾತಿಯ ಬಗ್ಗೆ ಯಾವುದೇ ವಿಮರ್ಶೆ ಬಂದರೆ ಅದು “ಧಾರ್ಮಿಕ ಭಾವನೆಗಳಿಗೆ ನೋವು” ತಂದಿದೆ ಎನ್ನುವುದು. ಇತ್ತೀಚೆಗೆ ಬಲಪಂಥೀಯರ ಮಾದರಿಯಲ್ಲಿ “ಈ ಹೇಳಿಕೆ ರಾಷ್ಟ್ರದ ಭಾವೈಕ್ಯತೆಗೆ ಭಂಗ ತರುತ್ತಿದೆ” ಎನ್ನುವುದು. ಈ ಸಂಸ್ಥೆಗಳಿಗೆ ಯಾವುದೇ ಜಾತಿಯನ್ನು ಪ್ರತಿನಿಧಿಸುವ ಅಧಿಕಾರವನ್ನು ಯಾರು ಯಾವ ಆಧಾರದ ಮೇಲೆ ಕೊಟ್ಟಿದ್ದಾರೆ ಎನ್ನುವುದು ಚಿದಂಬರ ರಹಸ್ಯವಾಗಿದೆ. ಒಂದು ಸಮಾಜವಾದಿ, ಜಾತ್ಯತೀತ ರಾಷ್ಟ್ರವೊಂದರಲ್ಲಿ ಜಾತಿಸಂಸ್ಥೆಗಳಿಗೆ ಸರಕಾರವು ಅಧಿಕೃತ ಮನ್ನಣೆ ಹೇಗೆ ಕೊಡಬಲ್ಲದು ಎನ್ನುವುದನ್ನು ಯಾರೂ ಕೇಳಿಲ್ಲ.

ಈ ಸಂಸ್ಥೆಗಳಿಗೆ ನಿಜವಾದ ಸಾಮಾಜಿಕ ಬದಲಾವಣೆಗಳನ್ನು ತರುವ ಇಚ್ಛಾಶಕ್ತಿಯೂ ಇಲ್ಲ; ಸಾಮರ್ಥ್ಯವೂ ಇಲ್ಲ. ಹೀಗಾಗಿ soft target ಗಳಾದ ಪಠ್ಯಪುಸ್ತಕಗಳು, ಗ್ರಂಥಗಳು, ಚಲನಚಿತ್ರಗಳು ಇವುಗಳನ್ನು ಆಯ್ದುಕೊಂಡು ತಮ್ಮ ಜಾತಿಯ “ಘನತೆ”ಯನ್ನು ಕಾಪಾಡುವ ಕೆಲಸ ಮಾಡುತ್ತವೆ. ಈ ಕೆಲಸಕ್ಕಾಗಿ ಅವು ಜಾತಿವ್ಯವಸ್ಥೆ, ಶೋಷಣೆ, ಸಾಮಾಜಿಕ ನ್ಯಾಯ ಇವೇ ಮುಂತಾದವುಗಳ ಗಂಭೀರ ಚರ್ಚೆಯನ್ನು ಆಗದಂತೆ ನೋಡಿಕೊಳ್ಳುತ್ತವೆ. ಬ್ರಾಹ್ಮಣ್ಯದ ಬಗೆಗಿನ ವಿವಾದವು ಈ ಚೌಕಟ್ಟಿನಲ್ಲಿ ನಡೆಯುತ್ತಿದೆ. ಬ್ರಾಹ್ಮಣ್ಯ ಎನ್ನುವುದನ್ನು ಉದ್ದೇಶಪೂರ್ವಕವಾಗಿ ಬ್ರಾಹ್ಮಣ ಜಾತಿಗೆ ಅನ್ವಯಿಸಿ ವಿವಾದ ಸೃಷ್ಟಿಸಲಾಗುತ್ತಿದೆ. ಕಾರಣ ಸರಳವಾಗಿದೆ. ಕ್ರಿ.ಪೂ. 6ನೇ ಶತಮಾನದಿಂದ ಭಾರತದಲ್ಲಿ ಬೌದ್ಧ ಧರ್ಮವು ಪುರೋಹಿತಶಾಹಿಯನ್ನು ಪ್ರಶ್ನಿಸಿತು. ವೈದಿಕ ಪರಂಪರೆಯನ್ನು ಪ್ರಶ್ನಿಸಿತು.

ಪ್ರಾಯಶಃ ಅದೇ ಕಾಲದಿಂದ ಜೈನ ಧರ್ಮವು ದೇವರ ಅಸ್ತಿತ್ವ, ವರ್ಣಾಶ್ರಮ ಇವುಗಳನ್ನು ಪ್ರಶ್ನಿಸಿತು. ಮುಂದಿನ ಶತಮಾನಗಳಲ್ಲಿ ಕ್ರಮೇಣವಾಗಿ ಇವೆರಡೂ ಧರ್ಮಗಳು ಅವನತಿ ಹೊಂದಿ ರಾಜಪ್ರಭುತ್ವ, ವರ್ಣಾಶ್ರಮ, ಲಿಂಗ ಅಸಮಾನತೆ, ಮೂರ್ತಿಪೂಜೆ ಇವುಗಳನ್ನು ಸ್ವೀಕರಿಸಿ ಹೊಂದಾಣಿಕೆ ಮಾಡಿಕೊಂಡವು. ಈ ಪ್ರಧಾನ ಧರ್ಮಗಳಲ್ಲದೆ ಅನೇಕ ಶ್ರಮಣ ಪರಂಪರೆಯ, ತಾತ್ವಿಕ ಪರಂಪರೆಯ ಅನುಯಾಯಿಗಳೂ ಪುರೋಹಿತಶಾಹಿಯನ್ನು ತಿರಸ್ಕರಿಸಿದರು. ಚಾರ್ವಾಕರಂತೂ ಪರ್ಯಾಯವಾದ ಜ್ಞಾನಮಾರ್ಗ, ನೀತಿಶಾಸ್ತ್ರಗಳನ್ನು ಕಟ್ಟಿಕೊಂಡರು. ಹನ್ನೆರಡನೇ ಶತಮಾನದ ವಚನಕಾರರು ಭಾರತದ ಅನೇಕ ಭಕ್ತಿಪಂಥದ ಅನುಯಾಯಿಗಳ ಹಾಗೆ ಪುರೋಹಿತಶಾಹಿಯನ್ನು ಅಂದರೆ ಬ್ರಾಹ್ಮಣ್ಯವನ್ನು ಉಗ್ರವಾಗಿ ಟೀಕಿಸಿದರು.

ಭಾರತದಲ್ಲಿ ಭಕ್ತಿ ಪರಂಪರೆಗಳು 16, 17ನೇ ಶತಮಾನದವರೆಗೂ ಸಶಕ್ತವಾಗಿದ್ದವು. ಕಬೀರ್, ಸರ್ವಜ್ಞ, ವೇಮನ ಮತ್ತು ಇಂಥ ನೂರಾರು ಚಿಂತಕರು, ಕವಿಗಳು ಆ ಪರಂಪರೆಯನ್ನು ಮುಂದುವರೆಸಿದರು. ವಸಾಹತುಶಾಹಿಯ ಆಗಮನದೊಂದಿಗೆ ಹುಟ್ಟಿಕೊಂಡ ಸಮಾಜ ಸುಧಾರಣಾ ಚಳವಳಿಗಳು, ಬ್ರಾಹ್ಮಣೇತರ ಚಳವಳಿಗಳು ಪ್ರಬಲವಾಗಿ ಬೆಳೆದವು. ಅಂಬೇಡ್ಕರ್ ಪೂರ್ವದಲ್ಲಿ ಜೋತಿಬಾ ಫುಲೆ ಮಾತ್ರವಲ್ಲ ಅನೇಕ ಮಹಾರ್ ಜನಾಂಗದ ನಾಯಕರು, ಶೂದ್ರ ಜನಾಂಗಗಳ ನಾಯಕರು ಕೂಡ ಮುಕ್ತವಾಗಿ ಬ್ರಾಹ್ಮಣ್ಯ ವಿರೋಧಿ ಚಳವಳಿಗಳನ್ನು ಆರಂಭಿಸಿದರು. ಇವುಗಳಲ್ಲಿ ಅನೇಕ ಬ್ರಾಹ್ಮಣ ವ್ಯಕ್ತಿಗಳು ಭಾಗವಹಿಸಿದರು. ಉದಾಹರಣೆಗೆ ಮಹಾಡ್ ಸತ್ಯಾಗ್ರಹದಲ್ಲಿ ’ಮನುಸ್ಮೃತಿ’ಯನ್ನು ಸುಡುವ ಸೂಚನೆ ಬಂದಿದ್ದು ಸಹಸ್ರಬುದ್ಧೆ ಎನ್ನುವ ಬ್ರಾಹ್ಮಣ ವ್ಯಕ್ತಿಯಿಂದ.

ಅಂಬೇಡ್ಕರ್ ಮತ್ತು ಪೆರಿಯಾರ್ ಜಾತಿವ್ಯವಸ್ಥೆಯನ್ನು ಕುರಿತು ತಾತ್ವಿಕ ಚೌಕಟ್ಟುಗಳನ್ನು ರಚಿಸಿದರು. ವಾದ, ವಿವಾದಗಳು, ತೀವ್ರ ಮುಖಾಮುಖಿಗಳು ಮತ್ತು ಹಿಂಸೆ ಇವುಗಳು ಭಾರತದ ಚರಿತ್ರೆಯ sectarian ಜಗಳಗಳ ಭಾಗವಾಗಿವೆ. ಅದೇ ಹೊತ್ತಿಗೆ ಪುರೋಹಿತಶಾಹಿ, ಬ್ರಾಹ್ಮಣಶಾಹಿಯ ವಿರೋಧವನ್ನು ಕೇವಲ ಒಂದು ಜಾತಿಯ ವಿರೋಧವಾಗಿ ಪರಿಕಲ್ಪಿಸಲಾಗಲಿಲ್ಲ. ಇಲ್ಲದಿದ್ದರೆ ಸ್ವಾಮಿ ವಿವೇಕಾನಂದರು ಇಷ್ಟು ಉಗ್ರವಾಗಿ ಪುರೋಹಿತಶಾಹಿಯನ್ನು ಟೀಕಿಸುವುದು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಸೈದ್ಧಾಂತಿಕ ಜಗಳಗಳು ನಿತ್ಯ ಜೀವನದಲ್ಲಿಯ ಸಾಮರಸ್ಯಕ್ಕೆ ಅಡ್ಡಿಯಾಗಲಿಲ್ಲ. ಅಂಬೇಡ್ಕರ್, ಕುವೆಂಪು, ಚನ್ನಣ್ಣ ವಾಲೀಕಾರ್ ಹೀಗೆ ಎಲ್ಲ ತಲೆಮಾರುಗಳಲ್ಲಿ ವಿದ್ಯಾಗುರುಗಳಾಗಿ, ಪ್ರೇರಣೆಯಾಗಿ ಪ್ರಭಾವಿಸಿದವರು ಹುಟ್ಟಿನಿಂದ ಬ್ರಾಹ್ಮಣರೆ. ಹೀಗೆ ಹೇಳುವುದು ಕೂಡ ಅಸಹಜ ಮತ್ತು ಕೃತ್ರಿಮ. ಏಕೆಂದರೆ ಹುಟ್ಟಿನಿಂದ ಬಂದ ಜಾತಿ ಸೂತಕವನ್ನು ಮೀರಿದವರ ಸಂಖ್ಯೆಯೂ ಅಪಾರವಾಗಿದೆ. ಹೀಗಾಗಿ ಬ್ರಾಹ್ಮಣ್ಯ ಅಂದರೆ ಬ್ರಾಹ್ಮಣರಲ್ಲವೆ ಎನ್ನುವ ಚರ್ಚೆಯೇ ಅತಾರ್ಕಿಕ ಹಾಗೂ ಅನವಶ್ಯಕ.

ಅಂಬೇಡ್ಕರ್‌ರು ಹೇಳಿದ ಹಾಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ವಿರೋಧಿಸುವ ಶಕ್ತಿಯೇ ಬ್ರಾಹ್ಮಣ್ಯ. ಇದಕ್ಕೆ ಜಾತಿಯಿಲ್ಲ. ಜಗತ್ತಿನ ಶ್ರೇಷ್ಠ ನಾಗರೀಕತೆಯಾಗಬಹುದಾಗಿದ್ದ ಭಾರತೀಯ ನಾಗರೀಕತೆಯು ಅಸ್ಪೃಶ್ಯತೆ ಮತ್ತು ಬ್ರಾಹ್ಮಣ್ಯದಿಂದಾಗಿ ತನ್ನ ಜೀವಶಕ್ತಿಯನ್ನು ಕಳೆದುಕೊಂಡಿತು. ದುರಂತವೆಂದರೆ ಬಲಪಂಥೀಯ ರಾಜಕೀಯ ಹಾಗೂ ಸಾಂಸ್ಕೃತಿಕ ರಾಜಕೀಯದಿಂದಾಗಿ ಭಾರತೀಯ ಧರ್ಮ ಹಾಗೂ ಸಂಸ್ಕೃತಿಗಳನ್ನು ವೈದಿಕ ಧರ್ಮ ಹಾಗೂ ಸಂಸ್ಕೃತಿಗಳೊಂದಿಗೆ ಸಮೀಕರಿಸಲಾಗುತ್ತಿದೆ. ಇದನ್ನು ಒಂದು ಮಾತೃ ಸಂಸ್ಥೆ ಮತ್ತು ಅದರ ರಾಜಕೀಯ ಪಕ್ಷಗಳು ಅದೆಷ್ಟು ಪ್ರಬಲವಾಗಿ, ಫ್ಯಾಸಿಸ್ಟ್ ಮಾದರಿಯಲ್ಲಿ ಮಾಡುತ್ತಿವೆಯೆಂದರೆ ಅಷ್ಟೇ ತೀವ್ರವಾಗಿ ಬ್ರಾಹ್ಮಣ ವಿರೋಧವು ಬೆಳೆಯುತ್ತಿದೆ.

PC : DNA India

ಇದಕ್ಕೆ ಪರಿಹಾರವೆಂದರೆ ಜಾತಿವಿನಾಶವೇ ನಮ್ಮ ಉದ್ದೇಶ ಮತ್ತು ಮೌಲ್ಯವಾಗಬೇಕು. ಇದು ಎಷ್ಟೇ Utopian ಆಗಿ, ಅಪ್ರಾಯೋಗಿಕವಾಗಿ ಕಂಡರೂ ನಿರ್ವಾಹವಿಲ್ಲ. ಇಲ್ಲದಿದ್ದರೆ ಜಾತಿಗಳು ಜಾಗತೀಕರಣದ ಕಾಲದಲ್ಲಿ ಗಟ್ಟಿಗೊಳ್ಳುತ್ತವೆ. ತೀವ್ರ ಅಸಹನೆಯ majoritarian ಧರ್ಮ ಮತ್ತು ರಾಜಕೀಯಗಳು ಅಪಾರ ಹಿಂಸೆಯನ್ನು ತರುತ್ತವೆ. ಬಹುತ್ವ ಮತ್ತು ಪ್ರಜಾಪ್ರಭುತ್ವಗಳು ನಾಶವಾಗುತ್ತವೆ. ಒಂದು ಮಹಾನ್ ನಾಗರಿಕತೆಯು ಫ್ಯಾಸಿಸ್ಟ್ ರಾಜಕೀಯದಿಂದಾಗಿ ಮರಣಶಯ್ಯೆಯನ್ನು ತಲುಪುತ್ತದೆ. ಬ್ರಾಹ್ಮಣ್ಯದ ಚರ್ಚೆ ಮುನ್ನೆಲೆಗೆ ಬಂದಿರುವುದಕ್ಕೆ ಕಾರಣವೆಂದರೆ ಬಲಪಂಥೀಯ ಸಾಂಸ್ಕೃತಿಕ ರಾಜಕೀಯ ಭಾರತೀಯ ಧರ್ಮ ಹಾಗೂ ಸಂಸ್ಕೃತಿಗಳನ್ನು ಬ್ರಾಹ್ಮಣೀಕರಣಗೊಳಿಸುತ್ತಿರುವುದು. ಇದನ್ನು ಮೊದಲಿನಿಂದ ಮಾಡುತ್ತ ಬಂದಿರುವ ಸಂಸ್ಥೆಗಳು ಈಗಂತೂ ಅದನ್ನೇ ಪ್ರಧಾನ ಕಾರ್ಯಸೂಚಿಯನ್ನಾಗಿಸಿಕೊಂಡಿವೆ.

ಭಾರತದ ಇತಿಹಾಸದ ಪುನರ್‌ರಚನೆ, ಅದಕ್ಕೆ ಅನುಗುಣವಾಗಿ ಪಠ್ಯಗಳ ರಚನೆ, ಮಾರ್ಕ್ಸ್‌ವಾದಿ ಇತಿಹಾಸಕಾರರು ಬರೆದ ಇತಿಹಾಸಗಳನ್ನು ಸಂಪೂರ್ಣ ತಿರಸ್ಕರಿಸುವುದು, ಜಾತಿವ್ಯವಸ್ಥೆ ದಲಿತರ ಶೋಷಣೆಗಳನ್ನು ವಿಶೇಷವಾಗಿ ಅಮೆರಿಕದ ಅನೇಕ ರಾಜ್ಯಗಳ ಪಠ್ಯಗಳಿಂದ ಕೈಬಿಡುವಂತೆ ಒತ್ತಾಯ ಮಾಡುವುದು, ಅಲ್ಲಿಯ ಪ್ರಗತಿಪರ ಚಿಂತಕರನ್ನು ಸತತವಾಗಿ ಕಿರಿಕಿರಿಗೆ ಒಳಪಡಿಸುವುದು, ಬ್ರಾಹ್ಮಣಪರವಾದ ಸಂಶೋಧಕರನ್ನು ಎಲ್ಲಾ ಮಾಧ್ಯಮಗಳ ಮೂಲಕ ಸಮರ್ಥಿಸುವುದು, ಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ವಿದ್ಯಾರ್ಥಿ ಸಂಘಟನೆಗಳ ಮೂಲಕ ಏಕಮಾದರಿಯ ಭಾರತೀಯ ಚರಿತ್ರೆಯ ಪ್ರಚಾರಕ್ಕೆ ಒತ್ತಾಯಿಸುವುದು ಇವೆಲ್ಲ ಈ ಕಾರ್ಯಸೂಚಿಯ
ಭಾಗಗಳಾಗಿವೆ. ಭಾರತದಲ್ಲಿ ಅಂಬೇಡ್ಕರ್ ಚಿಂತನೆಯ ಬಹುಮುಖ್ಯ ಪ್ರತಿನಿಧಿಯಾದ ಆನಂದ ತೇಲ್ತುಂಬ್ಡೆ ಅವರನ್ನು ಹಾಸ್ಯಾಸ್ಪದ ಆರೋಪದ ಮೇಲೆ ಜೈಲಿನಲ್ಲಿಡಲಾಗಿದೆ.

ಈ ಎಲ್ಲಾ ಚಟುವಟಿಕೆಗಳಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಬ್ರಾಹ್ಮಣ್ಯವನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಹಾಗೆಯೆ ಮುಸ್ಲಿಮ್‌ರನ್ನು ಮತ್ತು ದಲಿತರನ್ನು ಅಮಾನವೀಯ ಹಿಂಸೆಗೆ ಗುರಿಪಡಿಸಲಾಗುತ್ತಿದೆ. ಈ ಕಾರ್ಯಸೂಚಿಯಿಂದಾಗಿ ಅತ್ಯಂತ ಉತ್ತೇಜಿತರಾದ ಅನೇಕ ಬ್ರಾಹ್ಮಣರು ತಮ್ಮ ಶ್ರೇಷ್ಠತೆ, ಪಾರಮ್ಯದ ಬಗ್ಗೆ ಮಾತನಾಡುವುದು ಮಾತ್ರವಲ್ಲ ಸಾವಿರಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿರುವ ಬ್ರಾಹ್ಮಣ್ಯದ ವಿಮರ್ಶೆಯು ಈಗ ನಿಲ್ಲಬೇಕೆಂದು ಸರ್ವಪ್ರಯತ್ನವನ್ನು ಮಾಡುತ್ತಿದ್ದಾರೆ. ಇದು ಅಸಾಧ್ಯದ ಮಾತು. ಏಕೆಂದರೆ ಹಾಗೆ ಮಾಡಬೇಕೆಂದರೆ ಭಾರತದ ಇತಿಹಾಸವನ್ನೇ ತಿರಸ್ಕರಿಸಬೇಕು. ಇಲ್ಲಿಯ ತಾತ್ವಿಕ ಪರಂಪರೆಗಳನ್ನು ತಿರಸ್ಕರಿಸಬೇಕು. ವ್ಯರ್ಥ ಪ್ರಯತ್ನದಿಂದಾಗಿ ಅನಾವಶ್ಯಕವಾದ ವಿವಾದವು ನಡೆಯುತ್ತಿದೆ.

ಪ್ರೊ. ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು


ಇದನ್ನೂ ಓದಿ: ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ; ಬ್ರಾಹ್ಮಣ್ಯ ಎಂದರೆ ಜಾತಿ ಆಧಾರಿತ ತಾರತಮ್ಯಗಳನ್ನು ಜೀವಂತವಾಗಿಡುವುದು..

ಇದನ್ನೂ ಓದಿ: ಸಂಪಾದಕೀಯ; ಮೈಮನಸ್ಸುಗಳಲ್ಲಿ ನಾಟಿರುವ ಜಾತಿಯೆಂಬ ಅಪಾಯಕಾರಿ ಸುಳಿಯಲ್ಲಿ ಬ್ರಾಹ್ಮಣ್ಯದ ಪಾಳೆಗಾರಿಕೆ

ಇದನ್ನೂ ಓದಿ: ಹಂತಹಂತವಾಗಿ ತೊರೆಯಬೇಕಾದ ಜಾಡ್ಯ ಬ್ರಾಹ್ಮಣ್ಯದ ಗರ್ಭದೊಳಗೆ ಒಂದಿಷ್ಟು ಹೊತ್ತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...