ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಕಠಿಣ ವಿಚಾರಣೆಯನ್ನು ಎದುರಿಸಬೇಕಾಯಿತು.
“ಸಚಿವರ ವಿರುದ್ಧದ ಆರೋಪದ ಮೇಲೆ ಏಕೆ ಎಫ್ಐಆರ್ ದಾಖಲಿಸಲಿಲ್ಲ” ಎಂದು ಪರಮ್ ಬೀರ್ ಸಿಂಗ್ ಅವರನ್ನು ಪದೇ ಪದೇ ಪ್ರಶ್ನೆ ಕೇಳಲಾಯಿತು ಎಂದು ಎನ್ಡಿಟಿವಿ ವರದಿ ಮಾಡಿದೆ.
“ನೀವು ಪೊಲೀಸ್ ಆಯುಕ್ತರಾಗಿದ್ದೀರಿ, ಕಾನೂನಿಗಿಂತ ನೀವು ದೊಡ್ಡವರ? ಪೊಲೀಸ್ ಅಧಿಕಾರಿಗಳು, ಮಂತ್ರಿಗಳು ಮತ್ತು ರಾಜಕಾರಣಿಗಳು ಕಾನೂನಿಗಿಂತ ಮೇಲಿರುವವರಾ? ನೀವು ಅಷ್ಟು ಎತ್ತರ ಎಂದು ಭಾವಿಸಬೇಡಿ; ಕಾನೂನು ನಿಮಗಿಂತ ದೊಡ್ಡದು” ಎಂದು ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಜೆ ದತ್ತಾ ವಿಚಾರಣೆಯ ವೇಳೆ ಹೇಳಿದ್ದಾರೆ.
“ಇವು ನಗರದಲ್ಲಿ ಪೊಲೀಸ್ ಪಡೆಯಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ, 30 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ವ್ಯಕ್ತಿಯಿಂದ ಬರುವ ಕಠಿಣ ಆರೋಪಗಳು” ಎಂದು ಪರಮ್ ಬೀರ್ ಸಿಂಗ್ ಹೈಕೋರ್ಟ್ಗೆ ತಿಳಿಸಿದರು.
ಇದಕ್ಕೆ ನ್ಯಾಯಾಲಯ, “ತನಿಖೆ ನಡೆಸಲು ಎಫ್ಐಆರ್ ಇರಬೇಕು. ನೀವು ಎಫ್ಐಆರ್ ದಾಖಲಿಸುವುದನ್ನು ಯಾರು ತಡೆದಿದ್ದರು? ಎಫ್ಐಆರ್ ಇಲ್ಲದೆ ಯಾವುದೇ ತನಿಖೆ ನಡೆಸಲು ಸಾಧ್ಯವಿಲ್ಲ” ಎಂದು ಪ್ರತಿಕ್ರಿಯಿಸಿತು.
“ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ನೀವು ನಿರ್ದೇಶನಗಳನ್ನು ಕೇಳುತ್ತಿದ್ದೀರಿ. ಅದನ್ನು ಸಿಬಿಐಗೆ ಹಸ್ತಾಂತರಿಸಲು ಎಫ್ಐಆರ್ ಮತ್ತು ತನಿಖೆ ಎಲ್ಲಿದೆ?” ಎಂದು ಕೋರ್ಟ್ ಪ್ರಶ್ನಿಸಿದೆ.
ಇದನ್ನೂ ಓದಿ:ತಿಂಗಳಿಗೆ 100 ಕೋಟಿ ಲಂಚ ಸಂಗ್ರಹಕ್ಕೆ ಗೃಹ ಸಚಿವರ ಸೂಚನೆ- ಪರಮ್ ಬೀರ್ ಸಿಂಗ್ ಆರೋಪ
“ನೀವು ಪೊಲೀಸ್ ಅಧಿಕಾರಿ. ಅಪರಾಧ ಎಸಗಲಾಗಿದೆ ಎಂಬುದು ನಿಮಗೆ ತಿಳಿದುಬಂದಿದ್ದರೆ ನೀವು ಎಫ್ಐಆರ್ ಹಾಕಬಹುದಿತ್ತು. ನೀವು ಅದನ್ನು ಏಕೆ ಮಾಡಲಿಲ್ಲ? ಅಪರಾಧ ಎಸಗಲಾಗಿದೆ ಎಂದು ನಿಮಗೆ ತಿಳಿದಾಗ ನೀವು ಎಫ್ಐಆರ್ ದಾಖಲಿಸದಿದ್ದರೆ ನಿಮ್ಮ ಕರ್ತವ್ಯದಲ್ಲಿ ನೀವು ವಿಫಲರಾಗಿದ್ದೀರಿ ಎಂದರ್ಥ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಂಬಯಿ ನಗರದ ಪೊಲೀಸ್ ಆಯುಕ್ತರಾಗಿದ್ದ ಪರಮ್ ಬೀರ್ ಸಿಂಗ್ ಅವರನ್ನು ಮಹಾರಾಷ್ಟ್ರ ಹೋಮ್ ಗಾರ್ಡ್ ನ ಡಿಜಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಏಕಾಏಕಿ ಎತ್ತಂಗಡಿ ಮಾಡಿರುವುದರ ಹಿಂದೆ ಭಾರೀ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ. ಸಚಿನ್ ವಾಜೆ ಪ್ರಕರಣದ ಬಗ್ಗೆ ತಿಳಿದಿರುವ ಹಿನ್ನೆಲೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿರುವ ಸಿಂಗ್, ಕೋರ್ಟ್ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.
ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಭಾರೀ ಭ್ರಷ್ಟಚಾರ ಆರೋಪ ಮಾಡಿರುವ ಪರಮ್ ಬೀರ್ ಸಿಂಗ್ ಈ ಸಂಬಂಧ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಫೆ.22 ರಂದು ನಡೆದ ಎಂಪಿ ಮೋಹನ್ ದೆಲ್ಕರ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕೇಸ್ ದಾಖಲಿಸುವಂತೆ, ಗೃಹ ಸಚಿವ ಅನಿಲ್ ದೇಶ್ ಮುಖ್ ಆದೇಶಿಸಿದ್ದರು. ಈ ರೀತಿ ಎಫ್ಐಆರ್ ದಾಖಲಿಸುವುದಕ್ಕೆ ಕಾನೂನು ತಜ್ಞರು ವಿರೋಧ ವ್ಯಕ್ತಪಡಿಸಿದ್ದರೂ ಸಹ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಎಫ್ಐಆರ್ ದಾಖಲಿಸಲು ಗೃಹ ಸಚಿವರು ಸೂಚಿಸಿದ್ದರು ಎಂದು ಪರಮ್ ಬೀರ್ ಸಿಂಗ್ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಮುಂಬಯಿ ಆಯುಕ್ತನಾಗಿದ್ದ ವೇಳೆ, ಪ್ರತಿ ತಿಂಗಳೂ 100 ಕೋಟಿ ರೂಪಾಯಿ ಸಂಗ್ರಹಿಸುವಂತೆ ಗೃಹ ಸಚಿವ ಅನಿಲ್ ದೇಶ್ ಮುಖ್ ತಮಗೆ ಟಾರ್ಗೆಟ್ ನೀಡುತ್ತಿದ್ದರು ಎಂದು ಪತ್ರದಲ್ಲಿ ಆರೋಪಿಸಿದ್ದಾರೆ, ಈ ಎರಡು ವಿಚಾರಗಳ ಸಂಬಂಧ ಕೋರ್ಟ್ನಲ್ಲಿ ಸಿಂಗ್ ಅರ್ಜಿ ಸಲ್ಲಿಸಿದ್ದರು.
ಈ ಹಿಂದೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ಮುಂಬೈ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಅಗ್ಗದ ಪ್ರಚಾರಕ್ಕಾಗಿ ಅರ್ಜಿ ಸಲ್ಲಿಕೆ ಎಂದು ಬಾಂಬೆ ಹೈಕೋರ್ಟ್ ಹೇಳಿದ್ದು, ವಕೀಲರನ್ನು ತರಾಟೆಗೆ ತೆಗೆದುಕೊಂಡಿತ್ತು.
ಇದನ್ನೂ ಓದಿ: ಮಹಾರಾಷ್ಟ್ರ ಸಚಿವರ ವಿರುದ್ಧ ಸಿಬಿಐ ತನಿಖೆ ಕೋರಿ ಅರ್ಜಿ: ಅಗ್ಗದ ಪ್ರಚಾರಕ್ಕಾಗಿ ಅರ್ಜಿ ಎಂದ ಬಾಂಬೆ ಹೈಕೋರ್ಟ್