ಬಂಧನಕ್ಕೊಳಗಾಗಿರುವ ಗೋರಖ್ಪುರದ ವೈದ್ಯ ಕಫೀಲ್ ಖಾನ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನಾ ಅಭಿಯಾನವನ್ನು ಪ್ರಾರಂಭಿಸಿದ್ದು, ಇದರಲ್ಲಿ ಸಹಿ ಸಂಗ್ರಹ, ಉಪವಾಸ ಸತ್ಯಾಗ್ರಹ, ಸಾಮಾಜಿಕ ಜಾಲತಾಣ ಅಭಿಯಾನಗಳು ಮತ್ತು ದರ್ಗಾಗಳಿಗೆ ಭೇಟಿ ನೀಡುವುದು ಮುಂತಾದವುಗಳು ಸೇರಿದೆ.
ಕಳೆದ ಡಿಸೆಂಬರ್ನಲ್ಲಿ ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆಯ ಪ್ರತಿಭಟನೆಯಲ್ಲಿ ಧ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ವೈದ್ಯ ಕಫಿಲ್ ಖಾನ್ ಅವರನ್ನು ಜನವರಿ 29 ರಂದು ಬಂಧಿಸಲಾಗಿತ್ತು.
“ಸಿಎಎ-ಎನ್ಆರ್ಸಿ ನೆಪದಲ್ಲಿ ಪೊಲೀಸರು ರಾಜ್ಯದ ಮುಸ್ಲಿಮರನ್ನು ಬಂಧಿಸುತ್ತಿದ್ದಾರೆ. ವೈದ್ಯ ಕಫೀಲ್ ಖಾನ್ ಅವರ ಬಂಧನ ವಿರೋಧಿಸಿ ಹೋರಾಡಲು ನಾವು ನಿರ್ಧರಿಸಿದ್ದೇವೆ” ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಷ್ಟ್ರೀಯ ಸಂಯೋಜರಾದ ಮಿನ್ನತ್ ರಹಮಾಣಿ ಹೇಳಿದ್ದಾರೆ.
ಪಕ್ಷದ ಅಲ್ಪಸಂಖ್ಯಾತ ಘಟಕವು ಕಫಿಲ್ ಖಾನ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಈಗಾಗಲೇ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಿಂದ ಸಹಿಯನ್ನು ಸಂಗ್ರಹಿಸಲು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.
ಮೀರತ್, ಮುಜಫರ್ನಗರ ಮತ್ತು ಸಂಭಾಲ್ ಸೇರಿದಂತೆ ಹೆಚ್ಚಿನ ಮುಸ್ಲಿಂ ಬಾಹುಲ್ಯವಿರುವ ಜಿಲ್ಲೆಗಳಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
“ನಾವು ಪ್ರತಿ ಜಿಲ್ಲೆಯಿಂದ ಸುಮಾರು 10,000 ಸಹಿಯನ್ನು ಸಂಗ್ರಹಿಸಿ ಮುಂದಿನ ಕೆಲವು ವಾರಗಳಲ್ಲಿ ಅವುಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಿದ್ದೇವೆ” ಎಂದು ಕಾಂಗ್ರೆಸ್ ಉತ್ತರ ಪ್ರದೇಶ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಶಹನವಾಜ್ ಆಲಮ್ ತಿಳಿಸಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನೆಯ ನಂತರ ಡಿಸೆಂಬರ್ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಹನವಾಜ್ ಆಲಂ ಅವರನ್ನು ಜೂನ್ 30 ರಂದು ಯುಪಿ ಪೊಲೀಸರು ಬಂಧಿಸಿದ್ದರು. ಜುಲೈ 14 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಈ ಹಿಂದೆ ಗೋರಖ್ಪುರದ ಬಿಆರ್ಡಿ ಆಸ್ಪತ್ರೆಯ ಮಕ್ಕಳ ಸಾವಿನ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ಕಫಿಲ್ ಖಾನ್ನನ್ನು ಆಗಸ್ಟ್ 2017 ರಲ್ಲಿ ಬಂಧಿಸಲಾಗಿತ್ತು. ತರುವಾಯ 2018 ರ ಏಪ್ರಿಲ್ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ನಂತರ ಆದಿತ್ಯನಾಥ್ ಸರ್ಕಾರವು ನಿಯೋಜಿಸಿದ ಇಲಾಖಾ ವಿಚಾರಣೆಯು 2019 ರ ಸೆಪ್ಟೆಂಬರ್ನಲ್ಲಿ ಅವರನ್ನು ಆರೋಪಗಳಿಂದ ಮುಕ್ತಗೊಳಿಸಿತು.
ಓದಿ: ಡಾ.ಕಫೀಲ್ ಖಾನ್ ಜೀವಕ್ಕೆ ಅಪಾಯವಿದೆ : ಖಾನ್ ಪತ್ನಿಯ ಆರೋಪ