ರಾಜಸ್ಥಾನ ರಾಜಕೀಯ ಬಿಕ್ಕಟ್ಟುಗಳ ಮಧ್ಯೆ ವಿಧಾನಸಭಾ ಅಧಿವೇಶನ ಕರೆಯಲು ರಾಜ್ಯಪಾಲರು ನಿರಾಕರಿಸುತ್ತಿದ್ದಾರೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಪ್ರಧಾನಿ ಮೋದಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಅಲ್ಲದೇ ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ತದನಂತರ ರಾಜಸ್ಥಾನ ರಾಜ್ಯಪಾಲರಾದ ಕಾಳ್ರಾಜ್ ಮಿಶ್ರಾ ವಿಧಾನಸಭಾ ಅಧಿವೇಶನ ಕರೆಯುವುದಾಗಿ ಘೋಷಿಸಿದ್ದಾರೆ. ತಾವು ಯಾವುದೇ ವಿಳಂಬ ಮಾಡಿಲ್ಲ ಎಂಬ ಸಮರ್ಥನೆ ನೀಡಿದ್ದಾರೆ.
ನಿನ್ನೆ ಪ್ರಧಾನಿ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ರಾಜ್ಯಪಾಲರ ವರ್ತನೆ ಬಗ್ಗೆ ವಿವರಿಸಲಾಗಿದೆ. ವಿಧಾನಸಭಾ ಅಧಿವೇಶನ ಕರೆಯಲು 7 ದಿನಗಳ ಹಿಂದೆ ಬರೆದ ಪತ್ರದ ಬಗ್ಗೆಯೂ ಉಲ್ಲೇಖಿಸಿದ್ದೇನೆ. ರಾಷ್ಟ್ರಪತಿಗಳಿಗೂ ಪತ್ರ ಬರೆದು ರಾಜ್ಯದ ಸ್ಥಿತಿಯನ್ನು ವಿವರಿಸುತ್ತೇನೆ ಎಂದು ಅಶೋಕ್ ಗೆಹ್ಲೋಟ್ ತಿಳಿಸಿದ್ದರು.
ಇಂದು ವಿಧಾನಸಭಾ ಅಧಿವೇಶನ ಕರೆಯಲು ಕೊನೆಗೂ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಜೊತೆಗೆ ಮೂರು ಷರತ್ತುಗಳನ್ನು ಸಹ ಅವರು ವಿಧಿಸಿದ್ದಾರೆ. ಗೆಹ್ಲೋಟ್ ಇಚ್ಚೆಯಂತೆ ಜುಲೈ 31 ರಿಂದಲೇ ಅಧಿವೇಶನ ಆರಂಭಕ್ಕೆ ಸಿದ್ದತೆ ನಡೆಸಿ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ರಾಜ್ಯಪಾಲರ 3 ಪ್ರಶ್ನೆಗಳು
1 ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುತ್ತೀರಾ? ಏಕೆಂದರೆ ನಿಮ್ಮ ಪ್ರಸ್ತಾಪದಲ್ಲಿ ಅದಿಲ್ಲ. ಆದರೆ ಸಾರ್ವಜನಿಕವಾಗಿ ನೀವು ಬಹುಮತ ಸಾಬೀತುಪಡಿಸುವ ಮಾತುಗಳನ್ನಾಡಿದ್ದೀರಿ. ಅದರ ಬಗ್ಗೆ ಸ್ಪಷ್ಟನೆ ನೀಡಿ.
2 ಒಂದು ವೇಳೆ ನೀವು ಬಹುಮತ ಸಾಬೀತುಪಡಿಸುವುದಾದರೆ ಶಾಸಕರಿಗೆ ಮೊದಲೇ ತಿಳಿಸಬೇಕು. ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣಕ್ಕಾಗಿ 21 ದಿನಗಳ ಮುಂಚಿತವಾಗಿ ಶಾಸಕರಿಗೆ ತಿಳಿಸಬೇಕು.
3 ಸದನ ನಡೆಯುವ ವೇಲೆ ಸಾಮಾಜಿಕ ಅಂತರವನ್ನು ಹೇಗೆ ಕಾಯ್ದುಕೊಳ್ಳುತ್ತೀರಿ?
ಒಟ್ಟಿನಲ್ಲಿ ಎರಡು ವಾರದಿಂದ ಭುಗಿಲೆದ್ದಿರುವ ರಾಜಸ್ಥಾನ ಬಿಕ್ಕಟ್ಟು ಅಂತ್ಯವಾಗುವ ಲಕ್ಷಣಗಳು ಕಂಡುಬರುತ್ತಿವೆ.
ಸುಪ್ರೀಂ ನಲ್ಲಿ ಸಚಿನ್ ಪೈಲಟ್ ಬಣದ ವಿರುದ್ಧ ಸಲ್ಲಿಸಿದ್ದ ಅರ್ಜಿ ಕೈಬಿಟ್ಟ ರಾಜಸ್ಥಾನ ಸ್ಪೀಕರ್..