| ಸುರೇಶ ಕೆ.ಪಿ |
ಕಾಂಗ್ರೆಸ್ ತನ್ನ ಪ್ರಣಾಲಿಕೆ ಬಿಡುಗಡೆ ಮಾಡಿದೆ. ಕಾಂಗ್ರೆಸ್ಸಿನ ಸದ್ಯದ ದುಸ್ಥಿತಿ ನೋಡಿದರೆ ಈ ಪ್ರಣಾಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಾರರು.. ಭಾಜಪಕ್ಕೆ ಪ್ರಣಾಳಿಕೆಯ ಅಗತ್ಯವೇ ಇದ್ದಂತಿಲ್ಲ! ( ದಮನ ಮಾಡಲು ಯಾವ ಪ್ರಣಾಳಿಕೆ ಬೇಕು?) ಪ್ರಾದೇಶಿಕ ಪಕ್ಷಗಳ ಪ್ರಣಾಳಿಕೆ ಹೇಗಿದೆಯೆಂದು ನಮಗೆ ಗೊತ್ತಿಲ್ಲ.!!
ಆದರೆ ಈ ಕಾಂಗ್ರೆಸ್ ಪ್ರಣಾಳಿಕೆಯ ಕೆಲವೊಂದು ಅಂಶವನ್ನು ಅಕ್ಷರ ಶತ್ರು ಭಾಜಪ ಹಾಗೂ ಮೋದಿ ಕಾಪಿ ಚೀಟಿ ಮಾಡಬಹುದು ಅಷ್ಟರ ಮಟ್ಟಿಗೆ ಈ ಪ್ರಣಾಳಿಕೆ ಭಾಜಪದ ಗಮನ ಸೆಳೆದೀತು!!
‘ಉದ್ಯೋಗ ಸೃಷ್ಠಿ’ ಮತ್ತು ‘ಕನಿಷ್ಠ ಆದಾಯ ಬೆಂಬಲ’ಗಳೆರಡು ಕಾಂಗ್ರೆಸ್ಸಿನ ಈ ಬಾರಿಯ ಪ್ರಮುಖ ಘೋಷಣೆಗಳು.
ಉದ್ಯೋಗ ಸೃಷ್ಟಿ ವಿಚಾರದಲ್ಲಿ ಕಾಂಗ್ರೆಸ್ ಕೆಲವು ಭರವಸೆಗಳನ್ನು ನೀಡಿದೆ.
* ಖಾಲಿ ಇರುವ 4 ಲಕ್ಷ ಸರ್ಕಾರೀ ಹುದ್ದೆಗಳ ಭರ್ತಿ (ಮುಂದಿನ ಮಾರ್ಚ್ ಒಳಗೆ)
* ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ 10 ಲಕ್ಷ ಹುದ್ದೆ ಸೃಷ್ಟಿ
ಇವೆರಡೂ ಕಣ್ಣು ಕೋರೈಸುವಂಥಾ ಸಂಗತಿಗಳು. ಆದರೆ ಇವು ಮೂಲತಃ ರಾಜ್ಯ- ಕೇಂದ್ರ ಜಂಟಿ ಕಾರ್ಯಾಚರಣೆ!! ಸರ್ಕಾರೀ ವೆಚ್ಚ ಕಡಿತಗೊಳಿಸುವ ವಚನ ಕೊಟ್ಟ ಮೇಲೆಯೇ ವಿಶ್ವ ಬ್ಯಾಂಕ್ ನಮಗೆ ಸಾಲ ಕೊಟ್ಟಿದ್ದು!! ಜಗತ್ತಿನ ಯಾವ ದೇಶದಲ್ಲೂ ಸರ್ಕಾರಗಳು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಹೊರತುಪಡಿಸಿ ಉಳಿದಂತೆ ಹುದ್ದೆ ಹೆಚ್ಚಿಸುತ್ತಾ ಹೋದ ಉದಾಹರಣೆ ಇಲ್ಲ!! ಆದ್ದರಿಂದ ಈ ಭರವಸೆ ಎಷ್ಟು ವಿಶ್ವಾಸಾರ್ಹ ಎಂಬುದು ಅವರವರಿಗೆ ಬಿಟ್ಟಿದ್ದು.
ಕಾಂಗ್ರೆಸ್ಸಿನ ಉಳಿದ ಉದ್ಯೋಗ ಸೃಷ್ಟಿಯ ವಿವರಗಳು ಜೊಲ್ಲು ತುಂಬಿದ ಬಾಯಲ್ಲಿ ವಾದ್ಯ ಊದಿದ ಹಾಗಿದೆ..!! ಉದಾ: ಕಡಿಮೆ ಕೌಶಲ್ಯದ ಉದ್ಯೋಗ ಸೃಷ್ಟಿಗಾಗಿ ‘ಜಲಾಶ್ರಯಗಳ ಪುನಶ್ಚೇತನ ಮಿಷನ್’, ‘ಬೀಳುಭೂಮಿ ಪುನಶ್ಚೇತನ ಮಿಶನ್’ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯ ನೀಲ ನಕ್ಷೆ ಕಾಂಗ್ರೆಸ್ ಮುಂದಿಟ್ಟಿದೆ. ಹಾಗೇ 2500 ಜನಸಂಖ್ಯೆ ಮೀರಿದ ಹಳ್ಳಿಗಳಲ್ಲಿ 2ನೇ ಆಶಾ ಕಾರ್ಯಕರ್ತೆಯರ ನೇಮಕ.
ಇವೆಲ್ಲವೂ ತಾತ್ಕಾಲಿಕ ಮತ್ತು ಅಭದ್ರ ಉದ್ಯೋಗಗಳು ಎಂದು ಕಾಂಗ್ರೆಸ್ಸಿಗೆ ಗೊತ್ತು. ಅದು ಕೂರಲು ಆಶಿಸುತ್ತಿರುವುದು ಮೋದಿ ಕೂತ ಕುರ್ಚಿಯಲ್ಲೇ ತಾನೇ.. ಆದ್ದರಿಂದ ಮೂಲತಃ ಉದ್ಯೋಗ ಸೃಷ್ಟಿಯ ಸೂಚಿಗಳನ್ನಿಟ್ಟಾಗಲೂ ಎಲ್ಲೂ ಸುಭದ್ರ ಖಾಯಂ ಉದ್ಯೋಗ ಅನ್ನುವುದನ್ನು ತಪ್ಪಿಯೂ ಹೇಳಿಲ್ಲ!!
ಆಟದ ಖದರು ಬದಲಾಗುತ್ತೆ ಅಂತ ಕಾಂಗ್ರೆಸ್ ನಂಬಿಕೆ ಇಟ್ಟುಕೊಂಡಿರುವುದು ರೂ 72000/-ದ ಕನಿಷ್ಠ ಆದಾಯದ ಬೆಂಬಲ ಘೋಷಣೆ ಮೇಲೆ.
ಪ್ರಣಾಳಿಕೆಪ್ರಕಾರ ಐದು ಕೋಟಿ ಕುಟುಂಬಗಳಿಗೆ ಈ ಸಹಾಯ ಸಿಗಲಿದೆ. ಆದರೆ ಯಥಾಪ್ರಕಾರದ ಜಾರಿಕೊಳ್ಳುವ ಜಾಣ ವಿವರಗಳು ತದನಂತರ ಕಾಣುತ್ತದೆ. ಪ್ರಣಾಳಿಕೆ ಪ್ರಕಾರ ಇದು ರಾಜ್ಯ- ಕೇಂದ್ರದ ಜಂಟಿ ಕಾರ್ಯಕ್ರಮ. ‘ಕುಟುಂಬಗಳು ಬಡತನದಿಂದ ಹೊರಬಂದ ಮೇಲೆ ಸತತವಾಗಿ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗದು’ ಎನ್ನುತ್ತೆ ಪ್ರಣಾಳಿಕೆ. ಅಂದರೆ ಪ್ರಾಯಶಃ ಕಾಲಮಿತಿಯ ಬೆಂಬಲ ಅಥವಾ ಶರತ್ತುಗಳನ್ನಿಟ್ಟುಕೊಂಡು ಕುಟುಂಬಗಳಿಗೆ ಸಹಾಯ ಸಿಗಬಹುದು. ಉದಾ: ಕುಟುಂಬದ ಯಾರಿಗೂ ಉದ್ಯೋಗ ಇಲ್ಲ ಎಂಬ ಪ್ರಮಾಣ ಪತ್ರ. ಉದ್ಯೋಗ ಸಿಕ್ಕಿದ ತಕ್ಷಣ ಬೆಂಬಲ ಸ್ಥಗಿತ ಹೀಗೆ..
ಇಂಥಾ ಕೇವಿಯೆಟ್ಗಳಿಲ್ಲದೇ ಈ ಸಾರ್ವತ್ರಿಕ ಬೆಂಬಲದ ಘೋಷಣೆ ಕಾಂಗ್ರೆಸ್ ಬಿಡಿ, ಸಾಕ್ಷಾತ್ ಲಕ್ಷ್ಮೀಪತಿ ತಿಮ್ಮಪ್ಪನೂ ಮಾಡಲಾರ. ಅಂದರೆ ಇಂಥಾ ಝಲಕ್ ಇರುವ ಯೋಜನೆಯೇ ಗಿಲೀಟು ಅನ್ನಿಸತೊಡಗಿದರೆ ಉಳಿದವು ಹೇಗಿರಬಹುದು?
ಉಳಿದವು? ಕಾಂಗ್ರೆಸ್ಸಿನ ಬೌದ್ಧಿಕ ದಾರಿದ್ರ್ಯ ನೋಡಬೇಕೆಂದಿದ್ದರೆ ಕೆಲವು ಹಾರು ಹೇಳಿಕೆಯ ಭಾಗಗಳನ್ನು ಗಮನಿಸಬೇಕು.
ಉದಾ: ಕೈಮಗ್ಗ ಮತ್ತಿತರ ಪಾರಂಪರಿಕ ಉತ್ಪನ್ನಗಳ ಉತ್ಪಾದನೆ ಮತ್ತು ರಪ್ತಿಗೆ ವಿಶೇಷ ಪ್ರೋತ್ಸಾಹ ನೀಡಲಾಗುವುದು ‘ ಎಂಬ ವಾಕ್ಯ ಇದೆ. ಅದರಿಂದಾಚೆ ಯಾವ ಗಟ್ಟಿ ವಿವರಗಳೂ ಇಲ್ಲ! ಏನಿದರ ಅರ್ಥ?
ಹಾಗೇ ಮೋದಿಯವರ ‘ಮೇಕ್ ಇನ್ ಇಂಡಿಯಾ’ಕ್ಕೆ ಪ್ರತಿಯಾಗಿ ‘ಮೇಕ್ ಫಾರ್ ದಿ ವರ್ಲ್ಡ್’ ಎನ್ನುವ ಘೋಷಣೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ. ಇದೇನಪ್ಪಾ ಅಂದರೆ ಅದೇ ಹಳೇ ಎಸ್.ಇ.ಜೆಡ್ ಬಾಟಲನ್ನು ತೊಳೆದು ಹೊಸ ಲೇಬಲ್ ಹಾಕಿ ಕೂತಿದೆ ಕಾಂಗ್ರೆಸ್. ಹಳೇ ಎಸ್.ಇ.ಜೆಡ್ ನ ಕಮಟು ವಾಸನೆ ಇದರಲ್ಲೂ ಮುಂದುವರಿದಿದೆ.
ಕೃಷಿಯಲ್ಲಿ ಏನಪ್ಪಾ ಅಂದರೆ ‘ಕೃಷಿ ಅಭಿವೃದ್ಧಿ ಮತ್ತು ಯೋಜನೆಯ ರಾಷ್ಟ್ರೀಯ ಆಯೋಗ’ ಹಾಗೂ ‘ಅತೀ ಸಣ್ಣ ರೈತ ಮತ್ತು ಕೃಷಿ ಕೂಲಿಕಾರ ಆಯೋಗ’ ಸ್ಥಾಪಿಸಲಾಗುವುದು ಎಂದು ಕಾಂಗ್ರೆಸ್ ಎದೆ ತಟ್ಟಿ ಹೇಳಿಕೊಂಡಿದೆ.!
ಈ ಆಯೋಗ ಸ್ಥಾಪಿಸುವುದೆಂದರೆ ಸಮಸ್ಯೆಗೆ ಪರಿಹಾರ ಹೊಳೆಯದೇ ಉಸುಕಲ್ಲಿ ತಲೆ ಹುದುಗಿಸುವುದು ಎಂದರ್ಥ
ಈಗಾಗಲೇ ಇಂಥಾ ಬೋರ್ಡ್, ಸೀಟು ಕವರ್ ಬದಲಾಯಿಸಿ ಹಳೇ ಬಸ್ಸಿಗೇ ರಯ್ಯಾ ಎಂದ ಮೋದಿ ನಮ್ಮನ್ನು ಎಲ್ಲಿ ತಂದು ಕೆಡವಿದ್ದಾರೆ ಎಂಬುದನ್ನು ಗಮನಿಸಿದರೆ ಕಾಂಗ್ರೆಸ್ ಬಗ್ಗೆ ವಿಶ್ವಾಸ ಹುಟ್ಟುವುದಿಲ್ಲ.
ಕಾಂಗ್ರೆಸ್ಸಿನ ಸಮಸ್ಯೆ ಏನು? ಕೋಮುವಾದೀ ರಾಜಕೀಯ ಹೊರತುಪಡಿಸಿ ಕಾಂಗ್ರೆಸ್ಸಿಗೆ ಭಾಜಪದ ಜೊತೆ ತಕರಾರಿಲ್ಲ!! ಭಾಜಪ ತನ್ನ ಕನ್ನಡಿ ಬಿಂಬದಂಥಾ ಎದುರಾಳಿಯಾಗಿ ತನ್ನ ಕುರ್ಚಿಯಲ್ಲಿ ಕೂತಿದೆ ಎಂಬುದಷ್ಟೇ ಬೇಗುದಿ. ಇಷ್ಟು ವರ್ಷ ತಾನು ಆಳುವಾಗ ಕೆಡಿಸಿ ಕೂತ ಸಂಗತಿಗಳನ್ನೆಲ್ಲಾ ಭಾಜಪ ಕೆದಕಿ ತನ್ನ ಮೇಲೆ ಎಸೆಯುವ ಪರಿಗೆ ಕಾಂಗ್ರೆಸ್ ಬ್ರೈನ್ ಡೆಡ್ ಆಗಿ ಕೂತಿದೆ. ಅದಕ್ಕೀಗ ಹೊಸ ಹೊಳಹುಗಳೂ ಇಲ್ಲ. ಅದನ್ನು ನೆಚ್ಚುವ ಕನಸುಗಣ್ಣಿನ ಯುವ ಪಡೆಯೂ ಇಲ್ಲ. ಉಳಿದ ಪಕ್ಷಗಳಿಗಿಂತ ಭಿನ್ನವಾದ ದೇಶದ ನಿಜ ಅಭಿವೃದ್ಧಿಯ ನೀಲನಕ್ಷೆ ತನ್ನಲ್ಲಿದೆ ಎಂದು ಕ್ಲೈಮ್ ಮಾಡುವ ಕಾಣ್ಕೆಯೂ ಇಲ್ಲ. ಸಕಾರೀ ಉದ್ಯೋಗ ಕಡಿತ ಮಾಡಿ ಅಭದ್ರ ಗುತ್ತಿಗೆ ಉದ್ಯೋಗದ ಪರ್ವ ಶುರು ಮಾಡಿದ ಕಾಂಗ್ರೆಸ್ ಸಂಪೂರ್ಣ ಭಿನ್ನವಾಗಿ ಯೋಚಿಸಲು ಸಾಧ್ಯವಿಲ್ಲ. ಕೃಷಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಇತ್ಯಾತ್ಮಕ ಬದಲಾವಣೆ ತರಲು ದೊಡ್ಡ ವಿವರಗಳ ದೀರ್ಘ ಕಾಲೀನ ಕಲ್ಪನೆ ಇರಬೇಕು. ಈಗ ಘೋಷಿಸಿರುವಂಥಾದ್ದು ಮೀನು ಕೊಡುವ ವಿಧಾನವೇ ಹೊರತು ಮೀನು ಹಿಡಿಯುವುದನ್ನು ಕಲಿಸುವ ವಿಧಾನ ಅಲ್ಲ. ಮೋದಿಯೇನೋ ತೊಲಗಬೇಕು. ಆದರೆ ಕಾಂಗ್ರೆಸ್ ಕೈಗೆ ಕೊಟ್ಟರೆ ಪರಿಸ್ಥಿತಿ ಸುಧಾರಿಸಿತೆಂಬ ಭರವಸೆ ಇಲ್ಲಿ ಕಾಣಿಸುವುದಿಲ್ಲ. ಅಷ್ಟಕ್ಕೂ ಕಾಂಗ್ರಸ್ಸಿಗೇ ಇಷ್ಟು ಸ್ಥಾನ ಬಂದೀತೆಂಬ ನಂಬಿಕೆ ಇಲ್ಲದಿರುವಾಗ ಪ್ರಣಾಳಿಕೆಯಲ್ಲಿ ಬರೆಯಲು ತೊಡಕೇನೂ ಇಲ್ಲ!!
ಕಳೆದ ಬಾರಿಯ ರಾಜ್ಯದ ಪ್ರಣಾಳಿಕೆ ಎಷ್ಟು ಅಧ್ವಾನವಾಗಿತ್ತೆಂದರೆ ಥೇಟ್ ಮೊಯಿಲಿಯಂಥಾ ಕಲಸುಮೇಲೋಗರ ನಿಪುಣರೇ ಬರೆದಂತಿತ್ತು. ಈ ಪ್ರಣಾಲಿಕೆ ಸ್ಟಾಂಪ್ ಪೇಪರ್ ಮೇಲೆ ಗಾಳಿಯಲ್ಲಿ ಸಹಿ ಹಾಕುವ ನಟನೆಯಂತಿದೆ.


