ಕೊರೊನಾ ಸಾಂಕ್ರಾಮಿಕದ ನೆಪದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸುಮಾರು 10 ಸಾವಿರ ಕೋಟಿಗಳಷ್ಟು ಬೃಹತ್ ಹಗರಣ ನಡೆಸಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.
ಕೊರೊನಾ ಸೋಂಕಿತರು ಆಸ್ಪತ್ರೆಗಳನ್ನು ಬಿಟ್ಟು ಮನೆಯಲ್ಲೇ ಹೋಮ್ ಐಸೋಲೇಷನ್ ಆಗುವವರಿಗೆ ಕಿಟ್ ನೀಡಲಾಗುವುದು ಎಂದು ಹೇಳಿದ್ದ ಸರ್ಕಾರ ಯಾವುದೇ ಕಿಟ್ ನೀಡಿಲ್ಲ. ಆದರೆ ಕಿಟ್ ನೀಡಲಾಗಿದೆ ಎಂದು ಸುಮಾರು 150 ಕೋಟಿ ರೂಪಾಯಿ ಹಣ ದೋಚಲಾಗಿದೆ ಎಂದು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಲ್ ಸೆಂಟರ್ಗಳ ಮೂಲಕ ಸೋಂಕಿತರಿಗೆ ಕರೆ ಮಾಡಲು ಸರ್ಕಾರವೇ ತಿಳಿಸಿರುವಂತೆ 69 ರೂಪಾಯಿಗಳನ್ನು ನೀಡಲಾಗುತ್ತಿದೆ. ಸುಮ್ಮನೆ ಅಂದಾಜು ಲೆಕ್ಕ ಹಾಕಿದರೂ 8 ಲಕ್ಷ ಜನರಿಗೆ 5 ಬಾರಿ ಕರೆ ಮಾಡಲು ನೂರಾರು ಕೋಟಿ ವ್ಯಯಿಸಲಾಗಿದೆ. ಹೆಚ್ಚುವರಿಯಾಗಿ 50 ರೂಪಾಯಿ ನೀಡಿ ಹಣ ದೋಚಲಾಗಿದೆ ಎಂದು ಹೇಳಿದರು.
ದೀಪಾವಳಿ ಮತ್ತು ದಸರಾ ಹಬ್ಬಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಂಪರ್ ಕೊಡುಗೆ ನೀಡುತ್ತಿದ್ದು ಕೊರೊನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ರಾಜ್ಯವನ್ನು 3 ನೇ ಸ್ಥಾನದಿಂದ 2 ನೇ ಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೊರೊನಾ ವೈರಸ್ ನಿಯಂತ್ರಣಕ್ಕೆ ರಾಜ್ಯದಲ್ಲೂ ದೆಹಲಿ ಮಾದರಿಯನ್ನು ಅನುಸರಿಸಿ ಎಂದು ಸ್ವತಃ ಪ್ರಧಾನ ಮಂತ್ರಿಗಳೇ ಹೇಳಿದ್ದರೂ ನಮ್ಮ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿತು. ವೈಯಕ್ತಿಕವಾಗಿ ನಾನೇ ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳಿಗೆ ಕರೆ ಮಾಡಿ, ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದರು ಸ್ಪಂದಿಸಲಿಲ್ಲ ಎಂದು ದೂರಿದರು.
ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ಮಾಧ್ಯಮ ಸಂಚಾಲಕ ಜಗದೀಶ್, ಮುಖ್ಯ ವಕ್ತಾರ ಶರತ್ ಖಾದ್ರಿ ಉಪಸ್ಥಿತರಿದ್ದರು.


