Homeಸಿನಿಮಾಕ್ರೀಡೆಉದ್ಯಮವಾಗಿ ರೂಪುಗೊಳ್ಳುತ್ತಿರುವ ಕ್ರಿಕೆಟ್ ಮೈದಾನಗಳು

ಉದ್ಯಮವಾಗಿ ರೂಪುಗೊಳ್ಳುತ್ತಿರುವ ಕ್ರಿಕೆಟ್ ಮೈದಾನಗಳು

- Advertisement -
- Advertisement -

ಮನುಷ್ಯನಿಗೆ ದೈಹಿಕ ಆರೋಗ್ಯ ಬಹಳ ಮುಖ್ಯ. ಯಾವುದಾದರೊಂದು ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರಿಂದ ಆತ ಉಲ್ಲಸಿತನಾಗಿ ಸದಾ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಕ್ರೀಡೆಗೆ ವಯಸ್ಸಿನ ಮಿತಿ ಇಲ್ಲ. ಮನುಷ್ಯ ತನ್ನೆಲ್ಲಾ ವಯಸ್ಸಿನಲ್ಲಿಯೂ ವಿಧವಿಧವಾದ ಕ್ರೀಡೆಯಲ್ಲಿ ಪಾಲ್ಗೊಳ್ಳಬಹುದು. ಆಟದ ಜೊತೆಗಿನ ಬಾಳ್ವೆ ಆತನ ಆಯುಷ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಎಲ್ಲ ಅಡೆತಡೆಗಳನ್ನು ಮೀರಿ, ಸಾಂಸಾರಿಕ ತೊಳಲಾಟದ ಮಧ್ಯೆಯೂ, ಬಿಡುವಿಲ್ಲದ ಜಂಜಾಟಗಳ ನಡುವೆಯೂ ಆಟದಲ್ಲಿ ಆಸಕ್ತಿವಹಿಸಿ ಆಡುವುದು ಒಳ್ಳೆಯ ಜೀವನಶೈಲಿಗೆ ಅಗತ್ಯ. “ಒಂದು ಕ್ರೀಡಾಂಗಣವು ನೂರು ಆಸ್ಪತ್ರೆಗಳಿಗೆ ಸಮ” ಎನ್ನುವ ಮಾತಿದೆ.

ಆರೋಗ್ಯಕರ ಜೀವನ ಶೈಲಿಗೆ ಅನುವು ಮಾಡಿಕೊಡುವ ದೈಹಿಕ ಚಟುವಟಿಕೆಗಳಿಗೆ ಹೆಚ್ಚು ಅಗತ್ಯ ಒಳ್ಳೆಯ ಆಟದ ಮೈದಾನಗಳು. ನಗರದ ಯಾಂತ್ರಿಕ ಬದುಕಿನ ನಡುವೆ ಕ್ರೀಡೆ ಮನುಷ್ಯನಿಗೆ ಉಲ್ಲಾಸದ ಉಸಿರನ್ನು ನೀಡುತ್ತದೆ. ನಗರವಾಸಿಗಳು ಹೆಚ್ಚಾಗಿ ಕ್ರಿಕೆಟ್, ಬ್ಯಾಡ್ಮಿಂಟನ್, ಫುಟ್‌ಬಾಲ್, ಹಾಕಿ ಇಂತಹ ಕ್ರೀಡೆಗಳನ್ನು ತಮಗೆ ಅನುಕೂಲವಾಗುವ ಸಮಯದಲ್ಲಿ ಆಡಲು ಇಚ್ಚಿಸುತ್ತಾರೆ. ಪ್ರಾಕ್ಟೀಸ್ ಮಾಡುವುದರಿಂದ ಹಿಡಿದು ಅಭ್ಯಾಸ ಪಂದ್ಯಗಳು, ಟೂರ್ನಮೆಂಟುಗಳಲ್ಲಿ ಭಾಗವಹಿಸುವ ತನಕ ಅವರ ಆಸಕ್ತಿ ಹೇಳಲಸದಳವಾಗಿದೆ. ಇದಕ್ಕಾಗಿ ಸಮಾನ ಮನಸ್ಕರ ಒಂದು ತಂಡ ರಚನೆಯಾಗಿರುತ್ತದೆ. ಇದು ಒಂದು ಪ್ರದೇಶ, ವಾರ್ಡು, ಬೀದಿ, ಸಂಸ್ಥೆ ಹೀಗೆ ಅನುಕೂಲಕ್ಕೆ ತಕ್ಕ ಹಾಗೆ ಒಂದು ಗುಂಪಿನ ತಂಡವಾಗಿ ರೂಪುಗೊಳ್ಳುತ್ತದೆ. ಹೀಗೆ ನಗರದ ಬಹುಪಾಲು ಮಂದಿಯಲ್ಲಿರುವ ಈ ಬಗೆಯ ಕ್ರೀಡಾಸಕ್ತಿಯನ್ನು ಗಮನಿಸಿ ಅನೇಕ ಮೈದಾನಗಳು ತಲೆ ಎತ್ತುತ್ತಿವೆ.

ಭಾರತದಲ್ಲಿ ವಿಶೇಷವಾಗಿ ಕ್ರಿಕೆಟ್‌ನ ಬಗ್ಗೆ ಆಸಕ್ತಿ ಹೆಚ್ಚಿರುವುದರಿಂದ ಬೆಂಗಳೂರು ನಗರದ ಸುತ್ತಮುತ್ತ ಕ್ರಿಕೆಟ್ ಮೈದಾನಗಳು ಹೆಚ್ಚು ತಲೆ ಎತ್ತಿವೆ. ಸರ್ಜಾಪುರ, ಹೊಸಕೋಟೆ, ಕೆಂಗೇರಿ, ಯಲಹಂಕದ ಆಸುಪಾಸು ಇಂತಹ ಕ್ರೀಡಾಂಗಣಗಳು ಇದ್ದು ಹೆಚ್ಚು ಬೇಡಿಕೆಯನ್ನು ಸೃಷ್ಟಿಸಿವೆ. ಹೀಗಾಗಿ ನಗರದ ಹೊರವಲಯದ ಭೂಮಾಲೀಕರು ತಮ್ಮ ಜಮೀನನ್ನು ಲಾಭದ ದೃಷ್ಟಿಯಿಂದ ಕ್ರೀಡಾ ಸೌಕರ್ಯಗಳಿಗೆ ಬಾಡಿಗೆಗೆ ಅಥವಾ ಗುತ್ತಿಗೆಗೆ ಕೊಡುತ್ತಿದ್ದಾರೆ. ವ್ಯವಸಾಯದ ಭೂಮಿಯಾಗಿದ್ದರೂ, ರೈತನಿಗೆ ಕಷ್ಟ, ಸಮಸ್ಯೆಗಳನ್ನೆ ತಂದೊಡ್ಡುತ್ತಿರುವ ಬೇಸಾಯವನ್ನು ಬಿಟ್ಟು ಒಂದಷ್ಟು ಆರ್ಥಿಕ ಸಬಲತೆಯನ್ನು ತಂದುಕೊಡಬಲ್ಲ ಈ ವ್ಯವಹಾರಕ್ಕೆ ಕೈಹಾಕುತ್ತಿದ್ದಾರೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ವ್ಯವಸಾಯ ಅವರಿಗೆ
ಲಾಭತಂದುಕೊಡುತ್ತಿಲ್ಲ. “ನಾ ಸಾಯ, ನೀ ಸಾಯ, ಮನೆ ಮಂದಿಯೆಲ್ಲ ಸಾಯ ಬೇಸಾಯ” ಎಂಬ ಗಾದೆ ಮಾತಿದೆ. ರೈತನೇ ಇಡೀ ರಾಷ್ಟ್ರಕ್ಕೆ ಅನ್ನದಾತನಾಗಿದ್ದರೂ, ಆತನ ಬೆಳೆಗೆ ಸಿಗಬೇಕಾಗಿರುವ ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತಿಲ್ಲ. ಹೀಗಾಗಿ ರೈತನು ಇಂತಹ ಪರ್ಯಾಯ ವ್ಯವಸ್ಥೆಗೆ ಕೈ ಹಾಕುತ್ತಿದ್ದಾನೆ. ಇದು ಅವನಿಗೆ ಲಾಭದಾಯಕವೂ ಕೂಡ ಆಗಿದೆ. ಏಕೆಂದರೆ ಆತ ಇಲ್ಲಿ ಬಂಡವಾಳವನ್ನು ಹಾಕಬೇಕಾದ ಅವಶ್ಯಕತೆಯಿಲ್ಲ. ಯಾರು ಜಮೀನನ್ನು ಮೈದಾನವನ್ನಾಗಿ ಪರಿವರ್ತಿಸಲು ಹೊರಟಿರುತ್ತಾನೋ ಆತನೇ ಎಲ್ಲಾ ಖರ್ಚನ್ನು ನಿಭಾಯಿಸಬೇಕಾಗುತ್ತದೆ. ಪಿಚ್ ತಯಾರಿಕೆ, ಮೈದಾನವನ್ನು ಸಮಗೊಳಿಸುವುದು, ಮೈದಾನದಲ್ಲಿರಬಹುದಾದ ಸಣ್ಣಸಣ್ಣ ಕಲ್ಲುಗಳನ್ನು ತೆಗೆಸುವುದು, ಬೌಂಡರಿ ಗೆರೆಯನ್ನು ಹಾಕಿಸುವುದು, ಪಿಚ್ ಮೇಲೆ ಹಾಕಲು ಮ್ಯಾಟ್ ತರುವುದು ಇತ್ಯಾದಿ. ಇಂತಹ ಖರ್ಚನ್ನು ಭರಿಸಿ ಮೈದಾನವನ್ನು ಆಡುವ ಮಟ್ಟಕ್ಕೆ ಸಜ್ಜುಗೊಳಿಸಲಾಗುತ್ತದೆ. ಮುಂದೆ ಇದರಿಂದ ಲಾಭದ ನಿರೀಕ್ಷೆಯನ್ನು ಮಾಡಲಾಗುತ್ತದೆ.

ಕ್ರಿಕೆಟ್‌ನಲ್ಲಿ ಹತ್ತು, ಇಪ್ಪತ್ತು, ಐವತ್ತು ಓವರುಗಳ ಪಂದ್ಯಗಳು ನಡೆಯುತ್ತವೆ. ಇದರಲ್ಲಿ ಟೆನ್ನಿಸ್ ಬಾಲ್ ಹಾಗೂ ಲೆದರ್ ಬಾಲ್ ಕ್ರಿಕೆಟ್ ಪಂದ್ಯಗಳು ಬೇರೆಬೇರೆಯಾಗಿ ಆಯೋಜನೆಯಾಗುತ್ತವೆ. ಟೆನ್ನಿಸ್ ಬಾಲ್ ಕ್ರಿಕೆಟ್‌ನಲ್ಲಿ ಕೇವಲ ಪಂದ್ಯಾವಳಿಗಳಿಗೆ (ಟೂರ್ನ್‌ಮೆಂಟ್) ಕ್ರೀಡಾಂಗಣ ಅಥವಾ ಮೈದಾನಗಳನ್ನು ಆಯೋಜಕರು ಬಾಡಿಗೆಗೆ ಪಡೆಯುವರು. ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ಅಭ್ಯಾಸಕ್ಕೆ, ಅಭ್ಯಾಸ ಪಂದ್ಯಕ್ಕೆ, ಟೂರ್ನ್‌ಮೆಂಟ್‌ಗಳಿಗೆ ಕ್ರೀಡಾಂಗಣಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಕ್ರೀಡಾಂಗಣದ ಮಾಲೀಕರು ಇದಕ್ಕೆ ಬೇರೆಬೇರೆ ದರವನ್ನು ನಿಗದಿ ಮಾಡುವರು. ಸಾಮಾನ್ಯವಾಗಿ ಒಂದು ದಿನದ ಪಂದ್ಯವಾದರೆ ’ಟರ್ಫ್’ ಕ್ರಿಕೆಟ್ ಮೈದಾನಕ್ಕೆ ಹತ್ತರಿಂದ ಹದಿನೈದು ಸಾವಿರದವರೆಗೆ ದರವಿರುತ್ತದೆ. ಅದು ಸೋಮವಾರದಿಂದ ಶುಕ್ರವಾರದವರೆಗಿದ್ದರೆ ಆರರಿಂದ ಎಂಟು ಸಾವಿರದವರೆಗಿರುತ್ತದೆ. ವಾರಾಂತ್ಯದಲ್ಲಿ ಅದರ ಬೆಲೆ ಕೊಂಚ ಜಾಸ್ತಿ. ಮ್ಯಾಟ್ ಹಾಕಿರುವ ಪಿಚ್ ಆಗಿದ್ದು ಸಾಮಾನ್ಯ ಮೈದಾನವಾಗಿದ್ದರೆ ಮೂರು ಸಾವಿರದಿಂದ ಐದು ಸಾವಿರದವರೆಗೆ ಲಭ್ಯವಾಗುತ್ತದೆ. ಪ್ರತಿದಿನ ಕೆ.ಎಸ್.ಸಿ.ಎ, ಶಾಲಾ, ಕಾಲೇಜು, ಖಾಸಗಿ ಪಂದ್ಯಾಟಗಳು ಸೇರಿ ಬೆಂಗಳೂರು ಸುತ್ತಮುತ್ತ ನೂರಾರು ಪಂದ್ಯಗಳು ನಡೆಯುತ್ತವೆ.

ಕೆಲವು ಮೈದಾನಗಳಲ್ಲಿ ಉದ್ದಗಲ ಅಧಿಕವಾಗಿದ್ದರೆ, ಹೆಚ್ಚುವರಿಯಾಗಿ ಅಭ್ಯಾಸದ ನೆಟ್‌ಗಳನ್ನು ಸಹ ಹಾಕಲಾಗುತ್ತದೆ. ಅದಕ್ಕೂ ಗಂಟೆಗೆ 200ರಿಂದ 500 ರೂ.ರವರೆಗೆ ನಿಗದಿಗೊಳಿಸಲಾಗಿರುತ್ತದೆ. ಕತ್ತಲಾದ ಮೇಲೆ ಅಭ್ಯಾಸ ಮಾಡುವ ಹಾಗೆ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿರುತ್ತದೆ. ಸಾಯಂಕಾಲದ ಮೇಲೆ ಅಭ್ಯಾಸ ಮಾಡುವವರು ಗಂಟೆಯ ಲೆಕ್ಕದಂತೆ ಬಾಡಿಗೆಗೆ ಪಡೆದು ಆಡಬಹುದು. ಇಷ್ಟೇ ಅಲ್ಲದೇ ಬೇರೆ ಬೇರೆ ವಯೋಮಾನದವರಿಗೆ ’ಕ್ರಿಕೆಟ್ ಕ್ಯಾಂಪ್’ಗಳನ್ನು ಮಾಡುವರು. ಬೇಸಿಗೆ ಶಿಬಿರ, ವಾರ್ಷಿಕ ಶಿಬಿರದಂತಹ ಕಲಿಸುವ ಶಿಬಿರಗಳನ್ನು ಏರ್ಪಡಿಸಿ ಅದರಿಂದ ಸಾಕಷ್ಟು ಲಾಭವನ್ನು ಮಾಡಿಕೊಳ್ಳುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಹೀಗೆ ಲಾಭರಹಿತವಾಗಿದ್ದ ಭೂಮಿಯಲ್ಲಿ ಫಲವತ್ತಾದ ಲಾಭವನ್ನು ಕ್ರಿಕೆಟ್ ತಂದುಕೊಡುತ್ತಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ಬಹುಪಾಲು ಕ್ರೀಡಾಂಗಣಗಳನ್ನು ದೀರ್ಘಕಾಲಕ್ಕೆ ಬಾಡಿಗೆಗೆ ತೆಗೆದುಕೊಳ್ಳುತ್ತದೆ. ಅದು ಕೆ.ಎಸ್.ಸಿ.ಎ. ನಿಗದಿಪಡಿಸಿರುವ ಮಾನದಂಡದ ಪ್ರಕಾರವಿದ್ದರೆ ಮಾತ್ರ ಅಂತಹ ಕ್ರೀಡಾಂಗಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ಆ ಕ್ರೀಡಾಂಗಣದ ನಿರ್ವಹಣೆಯ ಜವಾಬ್ದಾರಿಯನ್ನು ಅದೇ ವಹಿಸಿಕೊಳ್ಳುತ್ತದೆ. ಹೀಗಿದ್ದರೂ ಖಾಸಗಿಯಾಗಿ ನಿರ್ಮಿಸಿರುವ ಕ್ರೀಡಾಂಗಣದ ಮಾಲೀಕರು ಕೆ.ಎಸ್.ಸಿ.ಎ.ಗೆ ಬಾಡಿಗೆಗೆ ಕೊಡಲು ಹಿಂದೇಟು ಹಾಕುವರು. ಏಕೆಂದರೆ ಒಮ್ಮೆ ಅವರಿಗೆ ಒಪ್ಪಿಸಿಬಿಟ್ಟರೆ ಕ್ರೀಡಾಂಗಣದ ಮಾಲೀಕರು ಬೇರೆ ಯಾವ ಟೂರ್ನ್‌ಮೆಂಟ್‌ಗಳನ್ನು ನಡೆಸಲಾಗಲೀ ಅಥವಾ ಬೇರೆಯವರಿಗೆ ಬಾಡಿಗೆಗೆ ಕೊಡಲಾಗಲೀ ಆಗುವುದಿಲ್ಲ. ಹಾಗಾಗಿ ಹೆಚ್ಚು ಲಾಭಾಂಶವನ್ನು ತರುವ ಖಾಸಗಿ ಟೂರ್ನ್‌ಮೆಂಟ್‌ಗಳನ್ನು ನಡೆಸಲು ಇಷ್ಟಪಡುವರು. ಹಲವು ತಂಡಗಳು ಭಾಗವಹಿಸುವ ಈ ಟೂರ್ನಿಗಳ ಪ್ರವೇಶ ಶುಲ್ಕ ಹತ್ತು ಸಾವಿರದಿಂದ ಮೂವತ್ತು ಸಾವಿರ ರೂ.ದವರೆಗೆ ಇರುತ್ತದೆ. ಇಷ್ಟು ಶುಲ್ಕ ಕಟ್ಟಿದರೂ ವಿಜೇತ ತಂಡಕ್ಕೆ ಬಹುಪಾಲು ಟೂರ್ನಿಗಳಲ್ಲಿ ನಗದು ಬಹುಮಾನವಿರುವುದಿಲ್ಲ. ಕೇವಲ ಟ್ರೋಫಿ ಮಾತ್ರ ಕೊಡಲಾಗುತ್ತದೆ.

ಕೋವಿಡ್ ಕಾಲದಲ್ಲಿ ಕೆ.ಎಸ್.ಸಿ.ಎ. ಟೂರ್ನ್‌ಮೆಂಟುಗಳು ನಡೆಯದಿದ್ದಾಗ ಖಾಸಗಿ ಟೂರ್ನಮೆಂಟುಗಳಿಗೆ ಹೆಚ್ಚಿನ ಬೇಡಿಕೆ ನಿರ್ಮಾಣವಾಯಿತು. ಖಾಸಗಿ ಟೂರ್ನಿಗಳಿಗೆ ರಾಜ್ಯಮಟ್ಟದಲ್ಲಿ ಆಡುವ ಆಟಗಾರರು ಕೂಡ ಲಗ್ಗೆ ಇಟ್ಟರು. ಕರ್ನಾಟಕ ಕ್ರಿಕೆಟ್ ತಂಡವನ್ನು ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಪ್ರತಿನಿಧಿಸಿರುವ ಲುವ್‌ನೀತ್ ಸಿಸೋಡಿಯಾ ಇಂತಹ ಟೂರ್ನಿಯಲ್ಲಿ ಆಡಿ ನಿಗದಿತ 50 ಓವರ್‌ಗಳ ಪಂದ್ಯಾಟದಲ್ಲಿ, 129 ಎಸೆತಗಳಲ್ಲಿ 312 ರನ್‌ಗಳನ್ನು ಬಾರಿಸಿದನು. ಇದರಿಂದ ರಾಷ್ಟ್ರಮಟ್ಟದಲ್ಲಿ ಆತನ ಹೆಸರಾಯಿತು. ಈ ವರ್ಷ ನಡೆಯುವ ಐ.ಪಿ.ಎಲ್. ಆಟಗಾರರ ಆಕ್ಷನ್‌ನಲ್ಲಿ ಸಿಸೋಡಿಯಾ ಹೆಸರಿರುವುದು ಖಾಸಗಿ ಟೂರ್ನಿಗಳಿಗೆ ಒಂದು ಬೆಲೆಯನ್ನು ತಂದುಕೊಟ್ಟಿದೆ. ಇದಕ್ಕೆ ಮಹತ್ವವನ್ನು ಒದಗಿಸಿಕೊಟ್ಟಿದೆ.

ಈ ಎಲ್ಲಾ ಪಂದ್ಯಾಟಗಳ ನೇರ ಸ್ಕೋರ್ ಬೋರ್ಡ್ ತೋರಿಸುವ (CRICheroes) ಆಪ್ ಇದೆ. ಯಾರು ಬೇಕಾದರೂ ಈ ಆಪ್‌ಅನ್ನು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಉಪಯೋಗಿಸಬಹುದಾಗಿದೆ. ಪಂದ್ಯ ಪ್ರಾರಂಭವಾಗುವ ಮೊದಲು ಆಡುವ ಹನ್ನೊಂದರ ಬಳಗದ ಪ್ರತಿಯೊಬ್ಬರ ಮೊಬೈಲ್ ನಂಬರನ್ನು ಎರಡು ತಂಡದವರು ನಮೂದಿಸಬೇಕು. ಹೀಗೆ ಹಾಕಿದಾಗ ಮಾತ್ರ ಪಂದ್ಯದ ಸ್ಕೋರನ್ನು ಇಲ್ಲಿ ತೋರಿಸಲು ಸಾಧ್ಯವಾಗುತ್ತದೆ. ಇದರಿಂದ ಎಲ್ಲ ರೀತಿಯ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುವ ಆಟಗಾರರ ಕ್ರಿಕೆಟ್ ಕೆರಿಯರ್‌ನ ವಿವರಗಳು ಸೃಷ್ಟಿಯಾಗುತ್ತಾ ಹೋಗುತ್ತವೆ. ಬಹುಪಾಲು ಕ್ರಿಕೆಟ್ ಪಂದ್ಯಗಳ ನೇರ ಸ್ಕೋರ್ ವಿವರ ಇದರಲ್ಲಿ ಸಿಗುತ್ತದೆ. ಕ್ರಿಕ್‌ಹೀರೋಸ್ (CRICheroes) ಕ್ರಿಕೆಟ್ ಆಟಗಾರರ ಮೆಚ್ಚಿನ ಆಪ್ ಆಗಿದೆ. ಬೆಂಗಳೂರಿನಂತಹ ನಗರದಲ್ಲಿ ಪ್ರತಿದಿನ ನಡೆಯುವ ನೂರಾರು ಪಂದ್ಯಗಳ, ಸಾವಿರಾರು ಆಟಗಾರರ ವಿವರಗಳು ಇಲ್ಲಿ ಸಿಗುತ್ತವೆ. ಈ ಆಪ್ ಅನೇಕ ಯುವ ಆಟಗಾರರ ಆಟವನ್ನು ಉತ್ತಮಗೊಳಿಸಿಕೊಳ್ಳಲು ಒಳನೋಟಗಳನ್ನು ಕೊಡುತ್ತದೆ.

ವ್ಯಾಗನ್ ವ್ಹೀಲ್, ಅಂಕಿಅಂಶ, ಟೂರ್ನ್‌ಮೆಂಟ್ ವಿವರಗಳು, ಆಯೋಜಕರ ವಿವರ, ಪಂದ್ಯ ನಡೆಯುವ ಸ್ಥಳ, ದಿನಾಂಕ, ಲೀಡರ್ ಬೋರ್ಡ್, ಟಾಪ್ ಪರ್ಫಾರ್‌ಮೆನ್ಸ್, ಮೈ ಪರ್ಫಾರ್‌ಮೆನ್ಸ್, ಮೈ ಟೀಮ್ಸ್, ಮೈ ಸ್ಟ್ಯಾಟಿಸ್ಟಿಕ್ಸ್, ಫೈಂಡ್ ಫ್ರೆಂಡ್ಸ್, ಕ್ರಿಕೆಟ್ ಅಸೋಸಿಯೇಶನ್ಸ್, ಕ್ರಿಕೆಟ್ ಕ್ಲಬ್ಸ್, ನ್ಯೂಸ್, ಕ್ವಿಜ಼್, ಪೋಲ್ಸ್, ಮಾರ್ಕೆಟಿಂಗ್ ಅಲ್ಲದೇ ಆಂಪೈರ್‌ಗಾಗಿ ನೊಂದಾವಣಿ, ಆಟಗಾರರ ನೊಂದಾವಣಿ, ಮೈದಾನದ ಲಭ್ಯತೆ, ಆಟಗಾರರ ಲಭ್ಯತೆ, ಸ್ಕೋರರ್ ಲಭ್ಯತೆ, ಕಾಮೆಂಟೇಟರ್‍ಸ್, ಅವರನ್ನು ಸಂರ್ಪಕಿಸಬಹುದಾದ ವಿಳಾಸ ಎಲ್ಲಾ ವಿವರಗಳು ಇದರಲ್ಲಿ ಸ್ಪಷ್ಟವಾಗಿವೆ.

ಹೀಗೆ ಆನ್‌ಲೈನ್ ಸ್ಕೋರಿಂಗ್, ಮೈದಾನಗಳ ಲಭ್ಯತೆ, ಹೆಚ್ಚುಹೆಚ್ಚು ಪಂದ್ಯಾವಳಿಗಳ ಆಯೋಜನೆ ಕ್ರಿಕೆಟ್ ಆಟಗಾರರನ್ನು ಸೆಳೆಯುತ್ತಿದೆ. ಈ ಕಡೆಗೆ ಹೆಚ್ಚು ಆಕರ್ಷಿತರಾಗುವಂತೆ ಮಾಡುತ್ತಿದೆ. ಬೆಂಗಳೂರು ನಗರದ ಮಧ್ಯದಲ್ಲಿ ಆಟ ಆಡಲು ಮೈದಾನಗಳು ಸಿಗುವುದಿಲ್ಲ. ಭಾನುವಾರಗಳು ಹಾಗೂ ರಜಾದಿನಗಳಲ್ಲಿ ಕ್ರೀಡಾಪಟುಗಳು ಹಣಕೊಡದೆ ಮುಕ್ತವಾಗಿ ಆಡುವ ಆಟದ ಮೈದಾನಗಳನ್ನು ಹುಡುಕಿಕೊಂಡು ಹೋಗುವರು. ಹೀಗೆ ಹೊರಟವರಿಗೆ ಕೆಲವೇಕೆಲವು ಮೈದಾನಗಳು ಆಡಲು ಸಿಗುತ್ತವೆ. ಆದರೆ ಅಲ್ಲಿ ನೂರಾರು ಮಂದಿ ಒಂದೇ ಮೈದಾನದಲ್ಲಿ ಆಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುತ್ತದೆ. ಯಾರ ಚೆಂಡು ಎಲ್ಲಿ ಹೋಗುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಅನೇಕ ಜನರಿಗೆ
ಗಂಭೀರ ಗಾಯಗಳಾಗಿರುವುದೂ ಇದೆ. ಅನೇಕರು ದೃಷ್ಟಿಹೀನರಾಗಿರುವುದು ಇದೆ. ಹೀಗಾಗಿ ಕಾಂಕ್ರೀಟ್ ಕಾಡಿನ ಮಧ್ಯೆ ಆಟದ ಮೈದಾನಗಳ ಕೊರತೆ ಎದುರಿಸುತ್ತಿರುವುದರಿಂದ ಬೆಂಗಳೂರಿನ ಹೊರವರ್ತುಲದಲ್ಲಿ ಆಟದ ಮೈದಾನಗಳು ತಲೆ ಎತ್ತುತ್ತಿರುವುದು ಆಟಗಾರರ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ.

ಡಾ. ರಿಯಾಜ್ ಪಾಷಾ

ಡಾ. ರಿಯಾಜ್ ಪಾಷ
ರಿಯಾಜ್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್‌ಡಿ ಪದವಿ ಪಡೆದಿದ್ದಾರೆ.


ಇದನ್ನೂ ಓದಿ: ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೊಂದು ಭರವಸೆ: 16 ನೇ ವರ್ಷಕ್ಕೆ ಜೂನಿಯರ್ ನಂ 1 ಪಟ್ಟಕ್ಕೇರಿದ ತಸ್ನಿಮ್ ಮಿರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...