ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರವನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಗರಿಷ್ಠ ಶಿಕ್ಷೆ ಖಾತರಿ ಪಡಿಸುವಂತೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತ ಹಾಗೂ ತುಮಕೂರಿನ ಟೌನ್ ಹಾಲ್ ಬಳಿ ನಾಳೆ ಪ್ರತಿಭಟನೆ ನಡೆಯಲಿದೆ.
ಅತ್ಯಾಚಾರವು ಸೆಪ್ಟೆಂಬರ್ 14 ರಂದು ಹತ್ರಾಸ್ ಎಂಬ ಹಳ್ಳಿಯಲ್ಲಿ ಸಂಭವಿಸಿದ್ದು, ಉತ್ತರ ಪ್ರದೇಶ ಪೊಲೀಸರು ಮೊದಲಿಗೆ ಘಟನೆಯನ್ನು ಕೊಲೆ ಯತ್ನ ಪ್ರಕರಣ ಎಂದು ದಾಖಲಿಸಿದ್ದರು ಎನ್ನಲಾಗಿದೆ. ಯುವತಿಯ ಔಪಚಾರಿಕ ಹೇಳಿಕೆಯ ನಂತರವೇ ಪ್ರಕರಣವನ್ನು ಅತ್ಯಾಚಾರ ಆರೋಪ ಎಂದು ದಾಖಲಿಸಿದ್ದರು ಎಂದು ಯುವತಿಯ ಕುಟುಂಬಿಕರು ಆರೋಪಿಸಿದ್ದರು. ಅತ್ಯಾಚಾರಿಗಳು ಯುವತಿಯನ್ನು ತೀವ್ರವಾಗಿ ಹಿಂಸಿಸಿದ್ದು ನಿನ್ನೆ ಬೆಳಿಗ್ಗೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಯುಪಿ ದಲಿತ ಯುವತಿ ಆಸ್ಪತ್ರೆಯಲ್ಲಿ ಸಾವು
’ಪೀಪಲ್ ಸಾಲಿಡಾರಿಟಿ ಕನ್ಸರ್ನ್, ಬೆಂಗಳೂರು’ ಸಂಘಟನೆಯು ನಾಳೆ ಬೆಳಿಗ್ಗೆ 10:30 ಕ್ಕೆ ಬೆಂಗಳೂರಿನ ಮೈಸೂರು ವೃತ್ತದ ಬಳಿ ಸಂತ್ರಸ್ಥೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳು ಭಾಗವಹಿಸಲಿದೆ.
ಯುವತಿಯ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ತುಮಕೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಂಜೆ 5:30 ಕ್ಕೆ ನಗರದ ಟೌನ್ಹಾಲ್ನಲ್ಲಿ ಪ್ರತಿಭಟನೆ ನಡೆಸಲಿದೆ.
ಪ್ರಕರಣದಲ್ಲಿ ನಾಲ್ವರು ಆರೋಪಿಗಳಾದ ಸಂದೀಪ್, ರಾಮು, ಲವ್ ಕುಶ್ ಮತ್ತು ರವಿ ಮೇಲೆ ಸಾಮೂಹಿಕ ಅತ್ಯಾಚಾರ, ಸೆಕ್ಷನ್ 302 (ಕೊಲೆ) ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ಗಳನ್ನು ದಾಖಲಿಸಲಾಗಿದೆ. ಮೃತ ಯುವತಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಅತ್ಯಾಚಾರ ಆರೋಪಿಗಳು ಮೇಲ್ಜಾತಿಯವರು ಎನ್ನಲಾಗಿದ್ದು ಪ್ರಕರಣದಲ್ಲಿ ಪೊಲೀಸರು ಪಕ್ಷಾಪಾತ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಯುಪಿ ಅತ್ಯಾಚಾರ ಪ್ರಕರಣ: ಕುಟುಂಬದವರಿಗೆ ತಿಳಿಸದೆ ಯುವತಿಯ ಶವಕ್ಕೆ ಬೆಂಕಿಯಿಟ್ಟ ಪೊಲೀಸರು!