Homeಅಂಕಣಗಳುಮಾತು ಮರೆತ ಭಾರತ-35; ಮಿರ್ಯಾಲಗುಡ ಫೈಲ್: ’ಅಪ್ಪನನ್ನು ಗಲ್ಲಿಗೇರಿಸಿ’ ಎಂದ ಅಮೃತಳ ಕತೆ

ಮಾತು ಮರೆತ ಭಾರತ-35; ಮಿರ್ಯಾಲಗುಡ ಫೈಲ್: ’ಅಪ್ಪನನ್ನು ಗಲ್ಲಿಗೇರಿಸಿ’ ಎಂದ ಅಮೃತಳ ಕತೆ

- Advertisement -
- Advertisement -

ಗಮನಿಸಿ : ಫೆಬ್ರವರಿ 20, 2023ರಲ್ಲಿ ಪ್ರಕಟಗೊಂಡ ಈ ಹಳೆಯ ಬರಹವನ್ನು ಮತ್ತೊಮ್ಮೆ ಹಂಚಿಕೊಳ್ಳಲಾಗಿದೆ. ಈ ಪ್ರಕರಣದ ಮೊದಲ ಆರೋಪಿ ಮಾರುತಿರಾವ್ 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡನೇ ಅಪರಾಧಿಗೆ ಮರಣದಂಡನೆ ಮತ್ತು ಉಳಿದ 6 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಾ.10,2025ರಂದು ತೆಲಂಗಾಣದ ನ್ಯಾಯಾಲಯದ ಆದೇಶಿಸಿದೆ.   

’ನನ್ನ ತಂದೆಯನ್ನು ನೇಣಿಗೇರಿಸಿ’ ಎಂದು ಅಮೃತವರ್ಷಿಣಿ ಪೊಲೀಸರನ್ನೂ ಹಾಗೂ ಮಾಧ್ಯಮದವರನ್ನು ಅಂಗಲಾಚುತ್ತಿದ್ದಳು. ಅವಳ ಕಣ್ಣುಗಳು ಕಣ್ಣೀರಲ್ಲಿ ಮಿಂದು ಕೆಂಪಗಾಗಿದ್ದವು. ತಂದೆಯನ್ನೇ ಗಲ್ಲಿಗೇರಿಸಲು ಬೇಡಿಕೊಳ್ಳುವ ಮಗಳು ನಿಜಕ್ಕೂ ಮಗಳೇ ಎಂದು ನೀವು ಪ್ರಶ್ನಿಸಬಹುದು. ಓದುತ್ತಾ ಹೋದಂತೆ ನಿಮಗೆ ಉತ್ತರ ಸಿಗಲಿದೆ.

ಪ್ರಣಯ್ ಕುಮಾರ್ ತೆಲಂಗಾಣದ ನಲಕೊಂಡ ಬಳಿ ಇರುವ ಮಿರ್ಯಾಲಗುಡ ಪಟ್ಟಣದ ದಲಿತ ಯುವಕ. ಆರ್ಥಿಕವಾಗಿ ಮುಂದುವರಿದಿದ್ದ ದಲಿತ ಕುಟುಂಬದ ಹಿರಿಯ ಮಗ. ಅವನಿಗಿನ್ನೂ 23 ವರ್ಷ ಮಾತ್ರ. ಅದೇ ಪಟ್ಟಣದ ಪ್ರಭಾವಿ ವೈಶ್ಯ ಕುಟುಂಬದ ವ್ಯಾಪಾರಿ ಮಾರುತಿರಾವ್ ಮಗಳು ಅಮೃತವರ್ಷಿಣಿ. ಅಮೃತ ಮತ್ತು ಪ್ರಣಯ್ ಇಬ್ಬರೂ ಶಾಲಾದಿನಗಳಿಂದಲೇ ಉತ್ತಮ ಸ್ನೇಹಿತರು. ಒಂದೇ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಕಲಿಯುತ್ತಿದ್ದಾಗ ಇವರಿಬ್ಬರ ನಡುವೆ ಪ್ರೇಮಾಂಕುರವಾಯಿತು. ಯಥಾಪ್ರಕಾರ ಪ್ರೀತಿ ಜಾತಿಯನ್ನು ಮೀರಿ ನಿಂತಿತು. ಆದರೆ ಭಾರತದ ಹಿರಿಯ ಜಾತಿ ಭಯೋತ್ಪಾದಕರು ಮೀರಿಲ್ಲವಲ್ಲ! ಪಿಯುಸಿಯಲ್ಲಿಯೇ ಒಮ್ಮೆ ಪ್ರಣಯ್‌ಗೆ ಅಮೃತಳ ತಂದೆ ಎಚ್ಚರಿಕೆ ನೀಡಿದ್ದರು. ಮಗಳ ಸಹವಾಸಕ್ಕೆ ಬರಬೇಡವೆಂದು ಸೂಚಿಸಿದ್ದರು. ಇವರಿಬ್ಬರ ನಡುವಿನ ಪ್ರೀತಿಗೆ ಬ್ರೇಕ್ ಹಾಕಲು ಮಗಳು ಅಮೃತ ಪಿಯುಸಿ ಪಾಸ್ ಆದ ನಂತರ ಮುಂದೆ ಕಾಲೇಜಿಗೆ ಒಂದು ವರ್ಷ ಕಾಲ ಸೇರಿಸಲೇ ಇಲ್ಲ. ನಂತರದ ವರ್ಷ ಅಮೃತ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದಾಗ ಪ್ರಣಯ್ ಸಹ ಇಂಜಿನಿಯರಿಂಗ್ ಓದುತ್ತಿದ್ದನು. ಒಟ್ಟಿಗೆ ಇರಬೇಕೆಂದು ಅಂದುಕೊಂಡ ಮೇಲೆ ಅದೆಷ್ಟು ವರ್ಷ ದೂರವಿದ್ದರೇನು? ಅಷ್ಟು ಸುಲಭವಾಗಿ ಪ್ರೀತಿಸಿದ ಸಂಗಾತಿಯನ್ನು ಮರೆಯಲು ಸಾಧ್ಯವೇ? 2018ರ ಜನವರಿ ತಿಂಗಳಂದು ಪ್ರಣಯ್ ಹಾಗೂ ಅಮೃತವರ್ಷಿಣಿ ಇಬ್ಬರೂ ವಿವಾಹವಾದರು. ಈ ವಿವಾಹ ಮಾರುತಿ ರಾವ್ ಮತ್ತು ಕುಟುಂಬಕ್ಕೆ ಕಿಂಚಿತ್ತೂ ಇಷ್ಟವಿರಲಿಲ್ಲ. ತೆಲಂಗಾಣ ರಾಷ್ಟ್ರೀಯ ಪಕ್ಷದ ಪದಾಧಿಕಾರಿಯಾಗಿದ್ದ ಮಾರುತಿರಾವ್‌ಗೆ ಪ್ರತಿಷ್ಠೆ ನೆತ್ತಿಗೇರಿ ತಲೆ ತಿರುಗುತ್ತಿತ್ತು. ಮಗಳು ಗರ್ಭಿಣಿ ಆದ ವಿಚಾರ ತಿಳಿದಾಗ ಆಕೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವ ವೈದ್ಯರ ಮೂಲಕವೇ ಗರ್ಭಪಾತ ಮಾಡಿಸಿಕೊಂಡು ಮನೆಗೆ ಮರಳುವಂತೆ ಸೂಚಿಸಿದ್ದನು. ಆದರೆ ಅಮೃತ ಪ್ರಣಯನ ರೀತಿಯಲ್ಲಿಯೇ ಇನ್ನಷ್ಟು ಗಟ್ಟಿಯಾಗಿದ್ದಳು. ಮೇಲ್ಜಾತಿ ಹುಡುಗಿ ತನ್ನ ಮನೆ ಬಿಟ್ಟು, ತಮ್ಮ ಮನೆ ತುಂಬಿಕೊಂಡಿದ್ದಾಳೆಂದು ಪ್ರಣಯ್ ತಂದೆತಾಯಿಯೂ ಸಹ ಪ್ರೀತಿಯಿಂದ ಸಲಹುತ್ತಿದ್ದರು. ಹೀಗೆ ಎಲ್ಲಾ ರೀತಿಯ ಪ್ರಯತ್ನ ಮಾಡಿದಾಗಲೂ ಸಹ ಮಗಳು ಮನೆಗೆ ಬರುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದಾಗ ಮಾರುತಿರಾವ್‌ಗೆ ಬಹಳ ನಿರಾಶೆಯಾಗಿತ್ತು.

ಮಾರುತಿರಾವ್

ಪ್ರಣಯ್ ಮತ್ತು ಅಮೃತವರ್ಷಿಣಿಯ ಮದುವೆಯನ್ನು ಗಟ್ಟಿಯಾಗಿ ವಿರೋಧಿಸಿದ್ದ ಮಾರುತಿರಾವ್ ಮಗಳನ್ನು ಮನವೊಲಿಸಲು ಸೋತಾಗ ಅತ್ಯಂತ ಅಮಾನವೀಯ ಆಲೋಚನೆ ಮಾಡಿದ್ದನು. ತನ್ನ ಮಗಳ ಗಂಡ ಪ್ರಣಯ್‌ನನ್ನು ಕೊಲ್ಲಿಸಿಬಿಡಲು ಒಂದು ಕೋಟಿಗೆ ಸುಫಾರಿ ನೀಡಿದ್ದನು. ಮುಂಗಡ ಹಣವನ್ನಾಗಿ 15 ಲಕ್ಷ ರೂಪಾಯಿಗಳನ್ನೂ ಪಾವತಿಸಿದ್ದನು. ಪ್ರಣಯನನ್ನು ಕೊಲ್ಲಲು ಮುಂದಾದ ಸುಫಾರಿ ಕಿಲ್ಲರ್ ಬಿಹಾರದ ಸುಭಾಷ್ ಕುಮಾರ್ ಶರ್ಮಾ. ಹೀಗೆ ಮಾರುತಿರಾವ್ ಒಳಗಿದ್ದ ’ಜಾತಿ ಭಯೋತ್ಪಾದಕ’ ಧುತ್ತನೆ ಎಚ್ಚರವಾಗಿದ್ದನು. ಒಂದು ಕೋಟಿ ಹೋದರೂ ಪರವಾಗಿಲ್ಲ; ದಲಿತನನ್ನು ಮದುವೆಯಾಗಿ ತನ್ನ ಸನಾತನ ಮಾನ ಕಳೆದಳೆಂದು ಭಾವಿಸಿ ಕೊಲೆಗೆ ಸಂಚು ರೂಪಿಸಿದನು.

ಸುಮಾರು ನಾಲ್ಕು ಬಾರಿ ಪ್ರಣಯನನ್ನು ಕೊಲ್ಲಲು ಯತ್ನಿಸಿದ ಭಯೋತ್ಪಾದಕ ’ಶರ್ಮಾ’ ಪದೇಪದೇ ವಿಫಲನಾಗಿದ್ದನು. ಮಾರುತಿರಾವ್ ಅದೆಷ್ಟು ಚಾಲಾಕಿ ನಯವಂಚಕನೆಂದರೆ ತನ್ನ ಹೆಂಡತಿ ಹಾಗೂ ಮಗಳು ಅಮೃತವರ್ಷಿಣಿ ಪರಸ್ಪರ ದೂರವಾಣಿ ಕರೆ ಮಾಡಿ ಮಾತನಾಡಿಕೊಂಡು ಚೆನ್ನಾಗಿರಲು ಅನುವು ಮಾಡಿಕೊಟ್ಟು, ಪ್ರಣಯ್ ಚಲನವಲನಗಳನ್ನು ತಿಳಿದುಕೊಳ್ಳುತ್ತಿದ್ದನು. ಸೆಪ್ಟೆಂಬರ್ 13ರಂದು ಎಂದಿನಂತೆ ಕರೆ ಮಾಡಿದ್ದ ಅಮೃತಳ ತಾಯಿ ಮಗಳೊಂದಿಗೆ ಮಾತಾಡಿದ್ದರು. ಹೀಗೆ ಮಾತಾಡುವಾಗ ಸ್ವತಃ ಅಮೃತ ನಾಳೆ (ಸೆಪ್ಟೆಂಬರ್ 14) ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ತಿಳಿಸಿದ್ದಳು. ಇದನ್ನು ಅರಿತ ಮಾರುತಿರಾವ್ ಸುಫಾರಿ ಕಿಲ್ಲರ್ ಶರ್ಮಾನಿಗೆ ವಿಷಯ ತಿಳಿಸಿದ್ದನು. ಸೆಪ್ಟೆಂಬರ್ 14, 2018ರಂದು ಮಿರ್ಯಾಲಗುಡದ ಆಸ್ಪತ್ರೆಗೆ 5 ತಿಂಗಳ ಗರ್ಭಿಣಿಯಾಗಿದ್ದ ಹೆಂಡತಿ ಅಮೃತಳನ್ನು ನಿಯಮಿತ ತಪಾಸಣೆಗೆ ಕರೆದುಕೊಂಡು ಬಂದಿದ್ದ ಪ್ರಣಯ್ ಮತ್ತು ಆತನ ತಾಯಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಶರ್ಮಾ, ಅವರು ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆಯೇ ಪ್ರಣಯ್ ಮೇಲೆರಗಿ ಕಬ್ಬಿಣದ ಸಲಾಕೆಯಿಂದ ಮನಸೋಇಚ್ಛೆ ತಲೆಗೆ ಥಳಿಸಿ ಕೊಂದೇಬಿಟ್ಟನು. ಶರ್ಮಾ ಎಂಬ ಭಯೋತ್ಪಾದಕ ತನ್ನ ಸನಾತನ ಪರಂಪರೆಯ ರಕ್ಷಣೆ ಮಾಡಲು ಐದನೇ ಬಾರಿಗೆ ಯಶಸ್ವಿಯಾಗಿ ಒಂದು ಅಮಾಯಕ ಜೀವ ತೆಗೆದಿದ್ದನು. ಅದೂ ಸಹ ದಲಿತನೆಂಬ ಕಾರಣಕ್ಕೆ! ಈ ಇಡೀ ಘಟನೆ ಆಸ್ಪತ್ರೆಯ ಸಿ.ಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿ ಇಡೀ ಪ್ರಪಂಚವೇ ನೋಡಿತು. ಆ ಭೀಕರ ಭಯೋತ್ಪಾದಕ ಕೃತ್ಯ ಕಂಡು ಭಾರತದ ’ಮನುಷ್ಯರು’ ಅಕ್ಷರಶಃ ಬೆಚ್ಚಿಬಿದ್ದರು.

ಇದನ್ನೂ ಓದಿ: ಇನ್ನೂ ನಡೆಯುತ್ತಿದೆ ಜಾತ್ಯಹಂಕಾರಗಳ “ರುದ್ರ ನರ್ತನ”

ಈ ಕೊಲೆಯಾದ ಸಮಯದಲ್ಲಿ ಮಾರುತಿರಾವ್ ತನ್ನ ಮೇಲೆ ಅನುಮಾನ ಬಾರದಿರಲೆಂದು ’ದೃಶ್ಯಂ’ ಸಿನೆಮಾ ಮಾದರಿಯಲ್ಲಿ ಅಲಿಬಿ (ಅಪರಾಧ ನಡೆದ ಸಮಯದಲ್ಲಿ ಬೇರೆ ಜಾಗದಲ್ಲಿರುವುದಕ್ಕೆ ಸಾಕ್ಷಿ) ಸೃಷ್ಟಿಮಾಡುವ ಕಾರಣಕ್ಕಾಗಿ, ಗಣೇಶ ಚತುರ್ಥಿಗೆ ಆಹ್ವಾನ ಮಾಡುವ ನೆಪದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದನು. ದಾರಿಯಲ್ಲಿ ಬೇಕಂತಲೇ ಕಾರು ನಿಲ್ಲಿಸಿ ರಾಜಕಾರಣಿಯೊಬ್ಬರನ್ನು ಮಾತನಾಡಿಸಿದ್ದನು.

ಪ್ರಣಯ್ ಕೊಲೆಯಾದ ದಿನವೇ ಅಮೃತವರ್ಷಿಣಿ ತನ್ನ ತಂದೆಯ ವಿರುದ್ಧ ಈ ಮೇಲಿನ ಮಾತುಗಳನ್ನು ಆಡಿದ್ದಳು. ತನ್ನ ಗಂಡ ಕೊನೆಯುಸಿರೆಳೆಯುವುದನ್ನು ಸ್ವತಃ ಕಣ್ಣಿಂದ ನೋಡಿದ ಅಮೃತ ಪೊಲೀಸರ ಮುಂದೆ ತನ್ನ ತಂದೆಯೇ ಕೊಲೆಗಾರ ಎಂದು ಹೇಳಿದ್ದಳು. ಇದರ ಆಧಾರದಲ್ಲಿ ಮಾರುತಿರಾವ್‌ನನ್ನು ಬಂದಿಸಲಾಯಿತಾದರೂ, ಪೊಲೀಸರಿಗೂ ಸಹ ಈತನ ಮೇಲೆ ಅನುಮಾನ ಬರದಂತೆ ನೋಡಿಕೊಳ್ಳಲಾಗಿತ್ತು. ಕೊಲೆಗಾರ ಶರ್ಮಾನನ್ನು ಸಿಸಿ ಕ್ಯಾಮೆರಾ ಫುಟೇಜ್ ಸಹಾಯದಿಂದ ಬಿಹಾರದಲ್ಲಿ ಪತ್ತೆ ಹಚ್ಚಿದಾಗಲೇ ಮಾರುತಿರಾವ್ ನಿಜ ಬಣ್ಣ ಬಯಲಾಗಿದ್ದು. ಈ ಮಾರುತಿರಾವ್ ತನ್ನ ಹೆಂಡತಿಯ ಮುಂದೆಯೂ ಸಹ ತನ್ನಲ್ಲಿನ ವಿಷವನ್ನು ಕಕ್ಕಿಕೊಂಡಿರಲಿಲ್ಲ. ತನ್ನೆಲ್ಲಾ ಕುಟಿಲ ಯೋಜನೆಯನ್ನು ತನ್ನ ತಮ್ಮ ಶ್ರವಣನ ಬಳಿ ಮಾತ್ರ ಹೇಳಿಕೊಂಡಿದ್ದ. ಅವರಿಬ್ಬರೂ ಸೇರಿ ಇಷ್ಟೆಲ್ಲ ಮಾಡಿದ್ದರು.

ಪ್ರಣಯ್ ಹೋದ ಮೇಲೆ ಧೃತಿಗೆಡದ ಅಮೃತ ಪ್ರಣಯ್ ಕುಟುಂಬದೊಂದಿಗೆ ಇದ್ದು ಅವರಿಗೆ ಧೈರ್ಯ ತುಂಬಿದಳು. ಸರ್ಕಾರ 4 ಲಕ್ಷ ಪರಿಹಾರ ಮತ್ತು ಸರ್ಕಾರಿ ನೌಕರಿ ನೀಡಲು ಬಂದಾಗ ಖಡಾಖಂಡಿತವಾಗಿ ಅದನ್ನು ನಿರಾಕರಿಸಿ ’ನನ್ನ ತಂದೆಯನ್ನು ನೇಣಿಗೇರಿಸಿ’ ಎಂದು ಅಂಗಲಾಚಿಕೊಂಡಿದ್ದಳು.

ಪ್ರಣಯ್ ಹೋದ ನಾಲ್ಕು ತಿಂಗಳಿಗೆ ಮುದ್ದಾದ ಮಗುವಿಗೆ ಜನ್ಮ ನೀಡಿದಳು. ಆ ಮಗುವಿನ ಹೆಸರು ನಿಹಾನ್ ಪ್ರಣಯ್.

ಈ ಕೊಲೆ ಮಾಡಿದ ಹಾಗೂ ಮಾಡಲು ಕೈವಾಡ ರೂಪಿಸಿದ ಏಳು ಜನರನ್ನು ಬಂಧಿಸಲಾಯಿತು. ಮುಖ್ಯ ಆರೋಪಿ ಮಾರುತಿ ರಾವ್ ಹಾಗೂ ಶ್ರವಣ. ಹಲವು ತಿಂಗಳುಗಳ ಕಾಲ ಜೈಲಿನಲ್ಲಿದ್ದ ಮಾರುತಿರಾವ್ ಜಾಮೀನಿನ ಮೇಲೆ ಹೊರಬಂದನು. ಬಂದ ದಿನವೇ ವೈಶ್ಯ ಸಂಘದ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡನು. ಬಹುಶಃ ಜಾತಿಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರಬಹುದು. ಪ್ರಾಣ ತೆಗೆದಾದರೂ ಸರಿ, ಪ್ರಾಣ ಕೊಟ್ಟಾದರೂ ಸರಿ, ಜಾತಿ ಪ್ರತಿಷ್ಠೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಆಲೋಚಿಸುವವರೆಲ್ಲರೂ ಭಯೋತ್ಪಾದಕರೇ ಆಗಿದ್ದಾರೆ. ಅಂತಹ ಭಯೋತ್ಪಾದಕರಲ್ಲಿ ಈ ಮಾರುತಿರಾವ್ ಸಹ ಒಬ್ಬ. ಈತ ಸತ್ತ ದಿನ ಸೋಷಿಯಲ್ ಮೀಡಿಯಾದಲ್ಲಿ ಆತನ ಪರವಾಗಿ ದುಃಖ ವ್ಯಕ್ತಪಡಿಸುತ್ತ ಅಮೃತಳನ್ನು ಹೀಗಳೆದವರೆಲ್ಲರೂ ಜಾತಿವಾದಿ ಭಯೋತ್ಪಾದಕರೇ ಆಗಿದ್ದಾರೆ. ಇಂತಹವರಿಗೆ ಆದಷ್ಟು ಬೇಗ ಬುದ್ಧಿ ಕಲಿಸುವ ಕಾನೂನು ಜಾರಿಗೊಳ್ಳಬೇಕಿದೆ. ಅದಕ್ಕಿಂತಲೂ ಹೆಚ್ಚಾಗಿ ಮರ್ಯಾದೆಗೇಡು ಹತ್ಯೆಗಳ ವಿರುದ್ಧ ಆಂದೋಲನ ರೂಪುಗೊಳ್ಳಬೇಕಿದೆ.

ಇದನ್ನೂ ಓದಿ: ಪ್ರೀತಿ ಕೊಂದ ಜಾತಿ… ಜಾತಿಯನ್ನು ಕೊಲ್ಲುವುದು ಯಾವಾಗ?

ಇಂತಹ ಮರ್ಯಾದೆಗೇಡು ಹತ್ಯೆಗಳನ್ನು ತಡೆಗಟ್ಟಲು ರಾಜಸ್ಥಾನ ಸರ್ಕಾರ 2019ರಲ್ಲಿ ಒಂದು ಕಾಯ್ದೆಯನ್ನು ಎರಡೂ ಸದನಗಳಲ್ಲಿ ಪಾಸು ಮಾಡಿದೆ. ಆದರೆ ಇದಕ್ಕೆ ರಾಷ್ಟ್ರಪತಿಯವರ ಅಂಕಿತವಿನ್ನೂ ಬಿದ್ದಿಲ್ಲ.

ಭಾರತದ ದತ್ತಾಂಶ ಸಂಸ್ಥೆಯು 2017ರಲ್ಲಿ ಅಧ್ಯಯನ ಮಾಡಿರುವ ಪ್ರಕಾರ ಅಂತರ್ಜಾತಿ ವಿವಾಹ ಗ್ರಾಮಗಳಲ್ಲಿ ಶೇ.5.2 ಇದ್ದರೆ ನಗರಗಳಲ್ಲಿ ಶೇ.4.9 ರಷ್ಟಿದೆ. ಭಾರತದಲ್ಲಿ ದಿನದಿಂದ ದಿನಕ್ಕೆ ಮರ್ಯಾದೆಗೇಡು ಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೊಂದು ಪರಿಹಾರ ಅತಿ ಜರೂರಾಗಿ ಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...