ಮುಸ್ಲಿಂ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಜಾನ್ಪುರ ಜಿಲ್ಲಾ ಮಹಿಳಾ ಆಸ್ಪತ್ರೆ ವೈದ್ಯರು ತನ್ನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಗರ್ಭಿಣಿಯೊಬ್ಬರು ಆರೋಪಿಸಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ವೈದ್ಯರ ವಿರುದ್ದ ಆಕ್ರೋಶಕ್ಕೆ ಕಾರಣವಾಗಿದ್ದು, ಕೆಲ ದಿನಗಳ ಹಿಂದೆ ಹೆರಿಗಾಗಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.
“ನಾನು ಮುಸ್ಲಿಮರಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಅವರು (ವೈದ್ಯೆ) ಹೇಳಿದರು. ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಮತ್ತೊಬ್ಬರು ಮುಸ್ಲಿಂ ಮಹಿಳೆಗೂ ಇದೇ ರೀತಿ ಹೇಳಿದ್ದಾರೆ. ನನ್ನನ್ನು ಆಪರೇಷನ್ ಥಿಯೇಟರ್ಗೆ ಕರೆದೊಯ್ಯದಂತೆ ವೈದ್ಯೆ ನರ್ಸ್ಗೆ ಸೂಚಿಸಿದರು” ಎಂದು ಜಾನ್ಪುರದ ಚಾಂದ್ವಾಕ್ ಮೂಲದ ಶಮಾ ಪರ್ವೀನ್ ವಿಡಿಯೋದಲ್ಲಿ ಆರೋಪಿಸಿದ್ದಾರೆ.
“ಅವಳನ್ನು (ಗರ್ಭಿಣಿಯನ್ನು) ಶಸ್ತ್ರಚಿಕಿತ್ಸೆ ಕೋಣೆಗೆ ಕರೆತರಬೇಡಿ. ಆಕೆ ಮುಸ್ಲಿಂ, ನಾನು ಆಕೆಗೆ ಚಿಕಿತ್ಸೆ ನೀಡುವುದಿಲ್ಲ” ಎಂದು ವೈದ್ಯೆ ಹೇಳಿದರು ಎಂದು ಪರ್ವೀನ್ ಅವರ ಪತಿ ಆರೋಪಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಫರ್ವೀನ್ ಅವರ ಆರೋಪದ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ತನಿಖೆ ಆರಂಭಿಸಿದೆ ಎಂದು ಕೆಲ ವರದಿಗಳು ಹೇಳಿವೆ. ವೈದ್ಯರು ಮತ್ತು ಸಿಬ್ಬಂದಿಯಿಂದ ವಿವರಣೆ ಕೇಳಿರುವುದಾಗಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಮಹೇಂದ್ರ ಗುಪ್ತಾ ತಿಳಿಸಿದ್ದಾರೆ ಎಂದು ಎನ್ಡಿಟಿವಿ ಇಂಡಿಯಾ ವರದಿ ಮಾಡಿದೆ.
ಆರೋಪಗಳು ನಿಜವೆಂದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ಚಿಕಿತ್ಸೆ ನಿರಾಕರಿಸಲಾಗಿದೆ ಎನ್ನಲಾದ ದಿನದಂದು ಆಸ್ಪತ್ರೆಯಲ್ಲಿ ನಾಲ್ಕರಿಂದ ಐದು ಮುಸ್ಲಿಂ ಮಹಿಳೆಯರು ಮಕ್ಕಳಿಗೆ ಜನ್ಮ ನೀಡಿದ್ದಾರೆ ಮತ್ತು ಚಿಕಿತ್ಸೆ ಪಡೆದಿದ್ದಾರೆ ಎಂದು ಎಂದು ಗುಪ್ತಾ ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿ ಅನುಸರಿಸುತ್ತಿರುವ ವಿಭಜಕ ರಾಜಕೀಯ ಮತ್ತು ಕೋಮುವಾದದ ಪರಿಣಾಮವೇ ಇಂತಹ ಘಟನೆಗಳು ಎಂದು ವಿರೋಧ ಪಕ್ಷಗಳು ಭಾನುವಾರ (ಅ.5) ಆರೋಪಿಸಿವೆ.
“ಯಾವುದೇ ನಾಗರಿಕ ಸಮಾಜದಲ್ಲಿ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ ಮತ್ತು ಇದು ವೃತ್ತಿಯ ನೀತಿಗೆ ವಿರುದ್ಧವಾಗಿದೆ. ಆಡಳಿತಾರೂಢ ಬಿಜೆಪಿಯ ನಿರಂತರ ದ್ವೇಷ ರಾಜಕಾರಣದಿಂದಾಗಿ ಸಮಾಜದಲ್ಲಿ ಆಳವಾಗಿ ಬೇರೂರಿರುವ ವಿಭಜನೆಯ ಪರಿಣಾಮ ಇದು. ಸರ್ಕಾರಿ ಯಂತ್ರವು ಅಲ್ಪಸಂಖ್ಯಾತರೊಂದಿಗೆ ತಾರತಮ್ಯ ಮತ್ತು ಕ್ರೌರ್ಯವನ್ನು ಮಾಡುತ್ತಿರುವಾಗ, ಅದು ಸಮಾಜವನ್ನು ಮತ್ತಷ್ಟು ವಿಭಜಿಸುತ್ತದೆ. ಒಂದೆಡೆ, ಫತೇಪುರದಲ್ಲಿ ಹಳೆಯ ಸಮಾಧಿಯನ್ನು ಧ್ವಂಸಗೊಳಿಸಲು, ಕನ್ವರ್ ಯಾತ್ರೆಯ ಸಮಯದಲ್ಲಿ ಅಂಗಡಿಗಳಿಗೆ ಹಾನಿ ಮಾಡಲು ಸಮಾಜ ವಿರೋಧಿ ಶಕ್ತಿಗಳಿಗೆ ಮುಕ್ತ ಅವಕಾಶ ನೀಡಲಾಗಿದ್ದು, ಮತ್ತೊಂದೆಡೆ, ಉತ್ತರ ಪ್ರದೇಶದಾದ್ಯಂತ ಅಲ್ಪಸಂಖ್ಯಾತ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ” ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಮತ್ತು ಗಾಝಿಪುರದ ಹಿರಿಯ ಲೋಕಸಭಾ ಸದಸ್ಯ ಅಫ್ಝಲ್ ಅನ್ಸಾರಿ, ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. “ವಿಡಿಯೋ ಬಗ್ಗೆ ತನಿಖೆ ನಡೆಸಬೇಕು. ಇದು ನಿಜವಾಗಿಯೂ ಸಂಭವಿಸಿದ್ದರೆ ಕಲ್ಪನೆಗೂ ಮೀರಿದ್ದು. ಏಕೆಂದರೆ ವೈದ್ಯರನ್ನು ಸಮಾಜದಲ್ಲಿ ಹೆಚ್ಚಿನ ಗೌರವದಿಂದ ಕಾಣಲಾಗುತ್ತದೆ ಮತ್ತು ರೋಗಿಗಳ ನಡುವೆ ತಾರತಮ್ಯ ಮಾಡಬಾರದು. ಆದರೆ, ಇದು ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವವರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿರುವ ವಿಶಾಲ ಮಾದರಿಯ ಕಡೆಗೆ ಬೆರಳು ತೋರಿಸುತ್ತದೆ. ಗ್ರಾಮ ಸಭಾ ಭೂಮಿಯಿಂದ ಅತಿಕ್ರಮಣಗಳನ್ನು ತೆರವುಗೊಳಿಸಲು ಪತ್ರವನ್ನು, ವಿಶೇಷವಾಗಿ ಯಾದವ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಗೆ ನೀಡಲಾಗುತ್ತಿರುವುದನ್ನು ನಾವು ನೋಡಿದ್ದೇವೆ. ಮೇಲ್ಭಾಗದಲ್ಲಿರುವ ಜನರು ಸಮಾಜದ ಒಂದು ವರ್ಗದ ವಿರುದ್ಧ ವಿಷಪೂರಿತ ಭಾಷೆಯನ್ನು ಮಾತನಾಡುತ್ತಿದ್ದಾರೆ. ನ್ಯಾಯಾಂಗವು ಅಂತಹ ಭಾಷೆ ಮತ್ತು ನಿರ್ದಿಷ್ಟ ಸಮುದಾಯಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವುದನ್ನು ಸಹ ಅರಿತುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅನ್ಸಾರಿ ತಿಳಿಸಿದ್ದಾರೆ.
“ದೇವರ ಎರಡನೇ ರೂಪವೆಂದು ಪರಿಗಣಿಸಲ್ಪಟ್ಟ ವೈದ್ಯರು ಧರ್ಮ ಕೇಳಿ ಚಿಕಿತ್ಸೆ ನೀಡಲು ನಿರಾಕರಿಸಿದರು” ಎಂದು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. “ಇದು ಮೋದಿ ಮತ್ತು ಯೋಗಿಯವರ ಕನಸಿನ ನವ ಭಾರತ” ಎಂದಿದ್ದಾರೆ.
ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರು ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದು ಸಿಎಂ ಆದಿತ್ಯನಾಥ್ ಹರಡಿದ ದ್ವೇಷದ ಪರಿಣಾಮ ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಟೀಕಿಸಿದ್ದಾರೆ.
‘ಸಂವಿಧಾನದ ಮೇಲೆ ಧಾರ್ಮಿಕ ಅಂಧತ್ವದ ಸವಾರಿ’: ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿರುವುದಕ್ಕೆ ತೀವ್ರ ಖಂಡನೆ


