Homeಅಂಕಣಗಳುತ್ಸುನೆಸಾಬುರೋ ಮಕಿಗುಚಿಯವರ ಸೃಷ್ಟಿಶೀಲ ಬದುಕಿಗಾಗಿ ಶಿಕ್ಷಣ ಎಂದರೇನು?

ತ್ಸುನೆಸಾಬುರೋ ಮಕಿಗುಚಿಯವರ ಸೃಷ್ಟಿಶೀಲ ಬದುಕಿಗಾಗಿ ಶಿಕ್ಷಣ ಎಂದರೇನು?

ಮಕಿಗುಚಿ ಆಗಿನ ಜಪಾನಿನ ಶಿಕ್ಷಣ ವ್ಯವಸ್ಥೆಯ ಲೋಪದೋಷಗಳನ್ನು ಖಂಡಿಸುವವರಾದರೂ, ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಈಗಲೂ ಅಂತಹ ದೋಷಗಳಿವೆ.

- Advertisement -
- Advertisement -

ಅಪ್ರಜ್ಞಾಪೂರ್ವಕವಾದ ಬದುಕನ್ನು ಪ್ರಜ್ಞೆಯ ಕಡೆಗೆ, ಮೌಲ್ಯರಹಿತ ಬದುಕನ್ನು ಮೌಲ್ಯದ ಕಡೆಗೆ ಮತ್ತು ವಿಚಾರಶೂನ್ಯತೆಯಿಂದ ವಿಚಾರದ ಕಡೆಗೆ ನಡೆಸುವುದೇ ಶಿಕ್ಷಣದ ಕಾರ್ಯ – ಸಮಾಜದಲ್ಲಿ ಇದನ್ನು ಸಾಕಾರಗೊಳಿಸಬಲ್ಲ ಮಾರ್ಗದರ್ಶಕರು ಮಾದರಿಯಾಗುವ ಶಿಕ್ಷಕರು ಎಂದು ಜಪಾನಿನ ತ್ಸುನೆಸಾಬುರೋ ಮಕಿಗುಚಿ ನಂಬಿದ್ದರು. ನೈತಿಕ ವ್ಯಕ್ತಿತ್ವವಾಗಲಿ, ಸರಿಯಾದ ಶೈಕ್ಷಣಿಕ ಹಿನ್ನೆಲೆಯಾಗಲಿ ಇರದಿದ್ದ ಶಿಕ್ಷಕರನ್ನು ಕಟುವಾಗಿ ಟೀಕಿಸುತ್ತಿದ್ದ ಮಕಿಗುಚಿಯ ಕೆಂಗಣ್ಣಿಗೆ ಅವನ ಕಾಲದ ಶಿಕ್ಷಣತಜ್ಞರು ಗುರಿಯಾಗಿದ್ದರು. 1931ರ ಆಸುಪಾಸಿನಲ್ಲಿ ಮಕಿಗುಚಿ ಶೈಕ್ಷಣಿಕ ಪದ್ಧತಿಗಳಲ್ಲಿರುವ ಸಮಸ್ಯೆಯ ಕುರಿತಾಗಿ ಎತ್ತಿರುವ ಪ್ರಶ್ನೆಗಳು ಈಗಲೂ ಹಾಗೆಯೇ ಇವೆ. ಹಾಗಾಗಿ ಮಕಿಗುಚಿಯ ವಿಚಾರಗಳು ಮತ್ತು ಯೋಜನೆಗಳ ಕುರಿತಾದ “ಸೃಷ್ಟಿಶೀಲ ಬದುಕಿಗಾಗಿ ಶಿಕ್ಷಣ” ಕೃತಿಯು ಈಗಲೂ ಪ್ರಸ್ತುತವಾಗುತ್ತದೆ. ಡೇಲ್ ಎಂ ಬೇಥೆಲ್ ಸಂಪಾದಿಸಿರುವ ಇದನ್ನು ಸುಮತೀಂದ್ರ ನಾಡಿಗ ಕನ್ನಡಕ್ಕೆ ಅನುವಾದ ಮಾಡಿದ್ದು, ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದ್ದಾರೆ.

ತ್ಸುನೆಸಾಬುರೋ ಮಕಿಗುಚಿ ತಾವೇ ಶಿಕ್ಷಕರಾಗಿದ್ದು ಬೋಧನೆಯ ಕ್ರಮದಲ್ಲಿ ಮತ್ತು ಶಿಕ್ಷಣದ ಬಗ್ಗೆ ತಳೆಯಬೇಕಾದ ನಿಲುವುಗಳ ಬಗ್ಗೆ ಸುಧಾರಣೆ ಆಗಲೇಬೇಕೆಂಬುದನ್ನು ಮನಗಂಡು ಅನೇಕ ಟಿಪ್ಪಣಿಗಳ ರಾಶಿಯನ್ನು ಮಾಡಿಕೊಂಡಿದ್ದರು. ಮೌಲ್ಯ ಸೃಷ್ಟಿಸುವ ಶಿಕ್ಷಣಕ್ಕಾಗಿ ಅವರು ಆಹ್ವಾನ ನೀಡಿದ್ದರು.

ಸಮಾಜದ ಎಲ್ಲಾ ವರ್ಗದವರಿಗೂ ದೊರಕುವ ಶಿಕ್ಷಣದ ಗುಣಮಟ್ಟವು ಉತ್ತಮವಾಗಿರಬೇಕೆಂಬ ದೃಷ್ಟಿಯಿಂದ ಮಿತವ್ಯಯ ಮತ್ತು ದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣವನ್ನು ಕ್ರಮಬದ್ಧಗೊಳಿಸಬೇಕಾದ ಅಗತ್ಯವಿದೆ. ಹಾಗೆಯೇ ಮನಸ್ಸಿಗೆ ತೋಚಿದಂತೆ ಅನುಸರಿಸುವ ಕುರುಡು ಶಿಕ್ಷಣ ವಿಧಾನಗಳನ್ನು ಬಿಟ್ಟು ಸ್ಪಷ್ಟ ವಿಚಾರಗಳ, ಸುಯೋಜಿತ, ಸುವ್ಯವಸ್ಥಿತ ಮತ್ತು ಸುಸಂಸ್ಕೃತವಾದ ಶಿಕ್ಷಣ ಸಾಧ್ಯವಾಗುವಂತೆ ಶಿಕ್ಷಣ ಸಂಸ್ಥೆಗಳನ್ನು ಮತ್ತು ಆಡಳಿತವನ್ನೂ ಸುಗಮಗೊಳಿಸಬೇಕು. ಶಿಕ್ಷಣವನ್ನು ಸತತವಾಗಿ ಉತ್ಪಾದಕವಾಗಿ ಮತ್ತು ಸೃಷ್ಟಿಶೀಲವಾಗಿಡುವುದಕ್ಕೆ ಶಿಕ್ಷಣ ವ್ಯವಸ್ಥೆಯನ್ನು ಮತ್ತು ಬೋಧನಾ ಕ್ರಮಗಳನ್ನು ಅವಾಸ್ತವಿಕವಾಗಿ ಯೋಚಿಸುವ ಶಿಕ್ಷಣತಜ್ಞರ ಕೈಯಿಂದ ಬಿಡಿಸಬೇಕು. ಬಹಳ ಮುಖ್ಯವಾಗಿ ಸಮಾಜದ ದೃಷ್ಟಿಯಿಂದ ಶಾಲೆಗಳು ನೈತಿಕ ಶಿಕ್ಷಣದ ಕೇಂದ್ರಸ್ಥಾನವಾಗಬೇಕು ಹಾಗೆಯೇ ಸಮಾಜದ ಸಂರಚನೆಯ ಪ್ರಕ್ರಿಯೆಯಲ್ಲಿ ಮಕ್ಕಳ ಸಹಭಾಗಿತ್ವ ಇರುವ ಹಾಗೆ ನೋಡಿಕೊಳ್ಳಬೇಕು. ಇವು ಮಕಿಗುಚಿಯ ಒತ್ತಾಯಗಳು. ಅದಕ್ಕಾಗಿ ತಳೆಯಬೇಕಾದ ತಾತ್ವಿಕ ನಿಲುವುಗಳನ್ನು, ಅನುಸರಿಸಬೇಕಾದ ಕ್ರಮಗಳನ್ನು ಮತ್ತು ಕಲಿಕೆಯ ವಿಧಾನಗಳನ್ನು ಸ್ಪಷ್ಟವಾಗಿ ಸೂಚಿಸುತ್ತಾ ಹೋಗುತ್ತಾರೆ.

ಮಕಿಗುಚಿ ಆಗಿನ ಜಪಾನಿನ ಶಿಕ್ಷಣ ವ್ಯವಸ್ಥೆಯ ಲೋಪದೋಷಗಳನ್ನು ಖಂಡಿಸುವವರಾದರೂ, ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಈಗಲೂ ಅಂತಹ ದೋಷಗಳಿವೆ. ವ್ಯಕ್ತಿ ಮತ್ತು ಸಮಾಜದ ಅನೇಕಾನೇಕ ವೈಪರೀತ್ಯಗಳ ದುರಂತಗಳಿಗೆ ಕಾರಣ ಅವೈಚಾರಿಕ ಮತ್ತು ಅವೈಜ್ಞಾನಿಕ ಶಿಕ್ಷಣದ ಪದ್ಧತಿಯೇ ಕಾರಣವಾಗಿದೆ. ಪರೋಕ್ಷ ಮತ್ತು ಪ್ರತ್ಯಕ್ಷ ಹಾಗೂ ಔಪಚಾರಿಕ ಮತ್ತು ಅನೌಪಚಾರಿಕ; ಎಲ್ಲಾ ಬಗೆಯ ಶಿಕ್ಷಣಗಳೂ ಇದರಲ್ಲಿ ಸೇರಿವೆ.
ಮಕಿಗುಚಿಯ ಗಮನಿಸುವಂತೆ ಶಿಕ್ಷಣದ ಉದ್ದೇಶ ’ಆನಂದ’. ವ್ಯಕ್ತಿಯೊಬ್ಬನಿಗೆ ಈ ಆನಂದ ಸಾಮಾಜಿಕ ಪ್ರಜ್ಞೆಯ ಮೂಲಕ ಸಿಗುತ್ತದೆ ಎಂಬುದು ಅವರ ವಾದ. ತಾವೇ ಶಿಕ್ಷಕರಾಗಿದ್ದ ಮಕಿಗುಚಿ ತಮ್ಮ ಶಿಕ್ಷಣ ಕ್ಷೇತ್ರದ ಅನುಭವ ಮತ್ತು ವಿಚಾರಗಳನ್ನು ಟಿಪ್ಪಣಿ ಮಾಡುತ್ತಿದ್ದರು. ಇದರಿಂದಾಗಿ ಸಂಪ್ರದಾಯಸ್ಥರೊಡನೆ ಮತ್ತು ಸರ್ಕಾರದ ವ್ಯವಸ್ಥೆಯೊಡನೆ ಅರಿಗೆ ನಿರಂತರ ಸಂಘರ್ಷವಿತ್ತು. ಇದೇ ಕಾರಣದಿಂದಾಗಿ ಅವರು ಬಂಧನಕ್ಕೆ ಒಳಗಾಗಿದ್ದರು. 1944ರಲ್ಲಿ ಅವರು ಜೈಲಿನಲ್ಲಿಯೇ ಮರಣಿಸಿದರು.

ಯಾವ ಸಾಮಾಜಿಕ ಪರಿಸರದಲ್ಲಿ ಶೈಕ್ಷಣಿಕ ಮನಸ್ಸಾಕ್ಷಿಯು ಜೀವಂತವಾಗಿರುವುದಿಲ್ಲವೋ ಅಲ್ಲಿ ಶಿಕ್ಷಣ ವ್ಯವಸ್ಥೆಯು ಸಂಪ್ರದಾಯವಾದಿಗಳ ಮತ್ತು ವಾಣಿಜ್ಯ ಲಾಭಬಡುಕರ ಅನುಕೂಲಕ್ಕೆ ತಕ್ಕಂತೆ ಜನರನ್ನು ರೂಪಿಸುತ್ತಾ ಹೋಗುತ್ತದೆ. ಇದರ ಸ್ಪಷ್ಟತೆಯಲ್ಲಿಯೇ ಮಕಿಗುಚಿ ವಿದ್ಯಾರ್ಥಿಗಳನ್ನು ಬಾಧಿಸುವ ಆಲೋಚನಾ ಕ್ರಮದಿಂದ ಬಿಡಿಸುವುದು ಮಾತ್ರವಲ್ಲದೇ ಅವರನ್ನು ಪರೀಕ್ಷೆ ಎಂಬ ನರಕ ಹಾಗೂ ಮತ್ತಿತರ ಮಾನಸಿಕ ರೋಗಗಳಿಂದಲೂ ಬಿಡಿಸಬೇಕೆಂದು ಹೆಣಗಾಡಿದರು.

1913ರ ಆಸುಪಾಸಿನ ನವ ಜಪಾನಿನಲ್ಲಿ ಸಂಪ್ರದಾಯಸ್ಥರು ಮತ್ತು ಕನ್‌ಫ್ಯೂಶಿಯಸ್ ಪಂಥದವರು ನಿಷ್ಟೆ ಮತ್ತು ವಿಧೇಯತೆಯನ್ನು ಕಲಿಸಿ ಒಳ್ಳೆಯ ಪ್ರಜೆಗಳನ್ನು ರೂಪಿಸಬೇಕೆಂದು ವಾದಿಸುತ್ತಿದ್ದರು. ಮತ್ತೊಂದು ಬಣವು ಪ್ರಜೆಗಳಿಗೆ ಸ್ವತಂತ್ರವಾದ ಮನಸ್ಸನ್ನು ಬೆಳೆಸುವುದರಿಂದ ಶಿಕ್ಷಣ ಭವಿಷ್ಯಕ್ಕೆ ಸಹಾಯವಾಗುತ್ತದೆ ಎಂದು ವಾದಿಸುತ್ತಿತ್ತು. ಆದರೆ ರಾಷ್ಟ್ರೀಯತೆ ಮತ್ತು ಸೈನ್ಯ ವಿಸ್ತರಣೆಯನ್ನು ಮುಂದಿಟ್ಟುಕೊಂಡಿದ್ದ ಸಂಪ್ರದಾಯವಾದಿಗಳೇ ಪ್ರಭಾವಶಾಲಿಗಳಾಗಿದ್ದರು. ಮಕಿಗುಚಿಯ ಬದುಕು ಮತ್ತು ಅವರ ಕೆಲಸಗಳೆರಡೂ ಶಿಕ್ಷಣ ಮತ್ತು ಧರ್ಮದ ಎರಡೂ ಕ್ಷೇತ್ರಗಳಲ್ಲಿ ಸಂಪ್ರದಾಯಸ್ಥರನ್ನು ನೇರವಾಗಿ ವಿರೋಧಿಸಿದವು. ಕಟ್ಟುವುದು ಎಂದರೆ ಮೊದಲು ಕೆಡಹುವುದು ಅವಶ್ಯವಾಗುತ್ತದೆ ಎಂದ ಮಕಿಗುಚಿಯ ಪ್ರಹಾರಗಳಿಂದ ವಿಚಲಿತವಾದ ಸಂಪ್ರದಾಯವಾದಿಗಳು ವಿಶ್ವವಿದ್ಯಾಲಯದ ಶಿಕ್ಷಣವಿಲ್ಲವೆಂದು ಅವರನ್ನು ಹೊರಗುಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಅವರ ವಿಚಾರಗಳಿಗೆ ಪ್ರವೇಶವನ್ನೇ ಕೊಡಲಿಲ್ಲ. ಅವರ ಕಟುವಾದ ವಿಮರ್ಶೆ ಮತ್ತು ವಿರೋಧಗಳಿಂದಾಗಿ ಅವರ ಬೆಂಬಲಿಗರ ಸಂಖ್ಯೆ ಕಡಿಮೆ ಇತ್ತು ಮತ್ತು ಶತ್ರುಗಳೇ ಹೆಚ್ಚಿನ ಪಾಲಿದ್ದರು. ಶಿಕ್ಷಣ ವಿಷಯದಲ್ಲಿ ಭ್ರಮನಿರಸನಗೊಂಡ ಮಕಿಗುಚಿ ಧಾರ್ಮಿಕ ಸುಧಾರಣೆಯ ಕಡೆಗೂ ಹೊರಳಿದರು. ಬೌದ್ಧ ಧರ್ಮಕ್ಕೆ ಪರಿವರ್ತನೆಯಾಗಿ ಆಗಿನ ಸಂಪ್ರದಾಯಸ್ಥ ಶಿಂಟೋ ಧರ್ಮವನ್ನು ಕಟುವಾಗಿ ಟೀಕಿಸಿದ ನೆಪಕ್ಕೇ ಅವರನ್ನು ಜೈಲಿನಲ್ಲಿ ಕೊಳೆಹಾಕಿದರು. ಹದಿನೇಳು ತಿಂಗಳ ಜೈಲುವಾಸದಲ್ಲಿ ಸರಿಯಾದ ಆಹಾರ ಪೋಷಣೆ ದೊರಕದೇ ಕೊನೆಗೆ ಅಲ್ಲಿಯೇ ಸತ್ತರು.

ಎಲ್ಲಿಯವರೆಗೂ ಶಾಲೆಗಳು ಸಮಾಜದ ನೈತಿಕ ರೋಗಗಳ ಬಗ್ಗೆ ಪರಿಹಾರವನ್ನು ಹುಡುಕುವುದಿಲ್ಲವೋ, ಅಲ್ಲಿಯವರೆಗೂ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತದೆ ಎನ್ನುವ ಮಕಿಗುಚಿಯ ಮಾತುಗಳು ಎಲ್ಲಾ ದೇಶದ ಸಮಾಜಗಳಿಗೂ ಅನ್ವಯಿಸುತ್ತದೆ.

ಶಿಕ್ಷಣದ ಉದ್ದೇಶವನ್ನು ರೂಪಿಸಿಕೊಳ್ಳದೇ ಹೋದರೆ ಜನಸಮೂಹದ ಮನಸ್ಥಿತಿಗಳು ಅವಾಸ್ತವದ ಭ್ರಮೆಗಳಲ್ಲಿಯೇ ಕೊಳೆಯುತ್ತಾ ಇಡೀ ಸಮಾಜವೇ ರೋಗಗ್ರಸ್ತವಾಗಿರುತ್ತದೆ. ಮುಂಬರುವ ಪೀಳಿಗೆಗಳು ಬಹುಪಾಲು ಅನೈತಿಕತೆಯನ್ನೇ ಸಹಜ ವ್ಯವಸ್ಥೆಯೆಂದು ಒಪ್ಪಿಕೊಂಡುಬಿಡುತ್ತವೆ. ಹಾಗಾಗಿ ಮಕಿಗುಚಿಯ ಪ್ರಕಾರ ಶಿಕ್ಷಣ ಸುಧಾರಣೆಯ ಮೊದಲ ಅರ್ಥಪೂರ್ಣ ಹೆಜ್ಜೆಯೆಂದರೆ, ಜನರ ನಿತ್ಯಜೀವನ ಮತ್ತು ಅವಶ್ಯಕತೆಗಳಿಂದ ಶಿಕ್ಷಣದ ಉದ್ದೇಶ ಹೊರಹೊಮ್ಮಬೇಕು ಎನ್ನುವ ಅರಿವಿನ ವಿಕಾಸ. ಅವರು ಶಿಕ್ಷಣದ ಉದ್ದೇಶ ಆನಂದವೆಂದಾಗ, ಆನಂದಕ್ಕೆ ಮೂಲವಾಗಿರುವುದು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಪ್ರಜ್ಞೆಯ ಬೆಳವಣಿಗೆ.

ಮಕಿಗುಚಿಯ ಪ್ರಕಾರ ಆಧುನಿಕ ಜಪಾನಿನಲ್ಲಿ (ಎರಡನೇ ವಿಶ್ವಯುದ್ಧದ ಸಂದರ್ಭ) ಶಿಕ್ಷಣದ ದುರಂತವೆಂದರೆ, ಅದು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಲಿಲ್ಲ ಎಂಬುದು. ಇದನ್ನು ಮನಗಂಡೇ ಮಕಿಗುಚಿ ಮನುಷ್ಯರು ಹುಟ್ಟಿನಿಂದಲೇ ಸೃಷ್ಟಿಶೀಲರಾಗಿರುತ್ತಾರೆ. ಅವನ್ನು ನಾಶ ಮಾಡದೇ ಇದ್ದರೆ, ಅದು ತನ್ನ ವರ್ತನೆಗಳಲ್ಲಿ ಅಭಿವ್ಯಕ್ತಿಯನ್ನು ಪಡೆಯುತ್ತವೆ ಎಂದು ಅದಕ್ಕೆ ತಳಹದಿಯಾಗಿ ನೈತಿಕ ಮೌಲ್ಯವನ್ನೇ ಗುರುತಿಸಿದರು.

ಕಲಿಕೆಯೆಂಬುದು ನಿರಂತರ ಪ್ರಕ್ರಿಯೆಯಾಗಿದ್ದು, ಶೈಕ್ಷಣಿಕ ವಿಜ್ಞಾನವು ಕಾಲದಿಂದ ಕಾಲಕ್ಕೆ ವಿಕಾಸಗೊಳ್ಳುತ್ತಾ ತನ್ನ ನೈತಿಕ ನಡೆಗಳನ್ನು ಸ್ಪಷ್ಟಗೊಳಿಸಿಕೊಳ್ಳದೇ ಹೋದಲ್ಲಿ ಸಮಾಜವು ಕೂಪಮಂಡೂಕವಾಗಿದ್ದುಕೊಂಡು ತನ್ನದೇ ಹೊಂಡದಲ್ಲಿ ಮುಳುಗುತ್ತದೆ ಎಂಬುದೇ ತ್ಸುನೆಸಾಬುರೋ ಮಕಿಗುಚಿಯ ಆತಂಕವಾಗಿತ್ತು. ಆ ಆತಂಕದಿಂದ ಜಪಾನು ಈಗ ಹೊರತಾಗಿದೆಯೋ ಇಲ್ಲವೋ, ಆದರೆ ಭಾರತದಲ್ಲಂತೂ ಅದು ಜೀವಂತವಾಗಿರುವ ಆತಂಕವೇ ಆಗಿದೆ.


ಇದನ್ನೂ ಓದಿ: ಬ್ರಾಹ್ಮಣ ವಿರೋಧಿ ಪಠ್ಯಪುಸ್ತಕ ವಿವಾದ: ಸಿಎಂ ವಿರುದ್ದ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...