HomeUncategorizedಪಂಚರಾಜ್ಯ ಫಲಿತಾಂಶ ಬಿಜೆಪಿಗೆ ಹಿನ್ನಡೆ ಏನೋ ಆಗಿದೆ, ಆದರೆ..: ಪ್ರೊ. ಎ ನಾರಾಯಣ

ಪಂಚರಾಜ್ಯ ಫಲಿತಾಂಶ ಬಿಜೆಪಿಗೆ ಹಿನ್ನಡೆ ಏನೋ ಆಗಿದೆ, ಆದರೆ..: ಪ್ರೊ. ಎ ನಾರಾಯಣ

- Advertisement -
- Advertisement -

ಈ ವಾರದ ಆರಂಭದಲ್ಲಿ ಪ್ರಕಟವಾದ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷ ಎಂಬ ದೈತ್ಯ ರಾಜಕೀಯ ಶಕ್ತಿಗೆ ದೊಡ್ಡ ಮಟ್ಟದ ಸಮಾಧಾನ ತರುವಂತಹದ್ದು ಏನೂ ಇಲ್ಲ. ಹಾಗಂತ ಈ ಚುನಾವಣೆಯ ಫಲಿತಾಂಶ ಕಂಡು ಪ್ರತಿಪಕ್ಷಗಳು ಎಷ್ಟರ ಮಟ್ಟಿಗೆ ಸಮಾಧಾನ ಹೊಂದಬಹುದು? ಎರಡು ರಾಜ್ಯಗಳಲ್ಲಿ ಜಯಿಸಿ ಇತರ ಮೂರು ಕಡೆ ಹಿನ್ನಡೆ ಅನುಭವಿಸಿದ ಬಿಜೆಪಿಗೆ ಸುರಂಗದ ಕೊನೆಯಲ್ಲೆಲ್ಲೋ ಒಂದು ಬೆಳಕು ಕಂಡಂತೆ ಭಾಸವಾದರೆ ಅದು ಭ್ರಮೆಯಲ್ಲ. ಆ ಮೂರು ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಿದ ಪಕ್ಷಗಳಿಗೆ ಮುಂದಿನ ಐದು ವರ್ಷಗಳ ನಂತರದ ದಾರಿ ಗೋಜಲು ಗೋಜಲಾಗಿ ಕಾಣಿಸಿದರೆ ಅದೂ ಕೂಡಾ ವಸ್ತುಸ್ಥಿತಿ. ಎಲ್ಲಾ ಚುನಾವಣೆಗಳ ಫಲಿತಾಂಶಗಳಂತೆಯೇ ಈ ಸಾಲಿನ ರಾಜ್ಯ ಚುನಾವಣೆಗಳ ಫಲಿತಾಂಶ ಕೂಡಾ ಸದ್ಯಕ್ಕೆ ಹೇಳುವ ಸತ್ಯ ಮತ್ತು ಶಾಶ್ವತವಾಗಿ ಬಿಟ್ಟುಹೋಗುವ ಸತ್ಯ ಬೇರೆ ಬೇರೆಯಾಗಿಯೇ ಇವೆ.

ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಬಿಜೆಪಿ ಎರಡನೆಯ ಅವಧಿಗೆ ಅಧಿಕಾರ ಉಳಿಸಿಕೊಂಡಿದೆ. ಅಸ್ಸಾಂನ ವಿಶಿಷ್ಟ ಜನಾಂಗೀಯ ರಾಜಕೀಯದ ಹಿನ್ನೆಲೆಯಲ್ಲಿ ಬಿಜೆಪಿಯ ಮತೀಯ ರಾಜಕೀಯ ತಂತ್ರ ಅಲ್ಲಿ ಫಲಿಸಿದಂತೆ ಕಾಣುತ್ತದೆ. ಹಾಗೆಯೇ ಪಾಂಡಿಚೇರಿಯಲ್ಲಿ ಬಿಜೆಪಿ ಸ್ಥಳೀಯ ಎನ್.ಆರ್. ಕಾಂಗ್ರೆಸ್ ಜತೆ ಸೇರಿ ಸೆಣಸಿ ಚುನಾವಣೆ ಗೆದ್ದಿದೆ ಎನ್ನುವಲ್ಲಿ ಕೇಸರಿ ಪಕ್ಷಕ್ಕೆ ದಕ್ಷಿಣದ ಎರಡನೆಯ ಬಾಗಿಲು ತೆರೆದುಕೊಂಡಿದೆ. ಅದರಾಚೆಗೆ ಕೇರಳದಲ್ಲಿ ಬಿಜೆಪಿಗೆ ಆದದ್ದು ದೊಡ್ಡ ಮಟ್ಟಿನ ನಿರಾಶೆ. ಗೆದ್ದು ಅಧಿಕಾರ ಹಿಡಿಯದೇ ಹೋದರೂ ’ಕಿಂಗ್ ಮೇಕರ್’ ಆಗಬಲ್ಲಷ್ಟು ಸ್ಥಾನಗಳನ್ನು ಕೇರಳದಲ್ಲಿ ಪಡೆದೆ ತೀರುತ್ತೇವೆ ಅಂತ ತನ್ನ ಬತ್ತಳಿಕೆಯಲ್ಲಿರುವ ಎಲ್ಲಾ ರೀತಿಯ ದುರ್ಮಂತ್ರಾಸ್ತಗಳನ್ನು ಪ್ರಯೋಗಿಸಿದ ಮೇಲೂ, ಕೇರಳದಲ್ಲಿ ಬಿಜೆಪಿ ಇದ್ದ ನೆಲೆಯನ್ನೂ ಕಳೆದುಕೊಂಡಿದೆ. ಹೋದ ಬಾರಿ ಒಂದು ಸ್ಥಾನವನ್ನು ಗೆದ್ದುಕೊಂಡ ಬಿಜೆಪಿ ಈ ಬಾರಿ ಒಂದು ಸ್ಥಾನವನ್ನೂ ಗೆದ್ದಿಲ್ಲ. ಸಾಲದು ಎಂಬಂತೆ, ಅಲ್ಲಿ ಬಿಜೆಪಿಯ ಮತಗಳಿಕೆಯ ಪ್ರಮಾಣ ಕೂಡಾ ಕುಸಿದಿದೆ. ಪ್ರತೀ ಚುನಾವಣೆಯಲ್ಲೂ ಸಿಪಿಎಂ ನೇತೃತ್ವದ ಎಡ ಪ್ರಜಾತಾಂತ್ರಿಕ ರಂಗ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಿಕ ರಂಗ (ಯುಡಿಎಫ್)ಗಳನ್ನೂ ಪರ್ಯಾಯವಾಗಿ ಆರಿಸುತ್ತಾ ಬಂದಿದ್ದ ಕೇರಳದ ಮತದಾರರು ಈ ಬಾರಿ ಎಲ್‌ಡಿಎಫ್ ಸರಕಾರವನ್ನು ಮರು ಚುನಾಯಿಸಿದ್ದಾರೆ.

ತಮಿಳುನಾಡಿನಲ್ಲಿ ಆದ ಭ್ರಮನಿರಸನವೂ ಕಡಿಮೆಯೇನಲ್ಲ. ಎಐಡಿಎಂಕೆಯನ್ನು ಬಗಲಿಗೆ ಕಟ್ಟಿಕೊಂಡು ದ್ರಾವಿಡ ನಾಡನ್ನು ವಶಪಡಿಸಿಕೊಳ್ಳುತ್ತೇವೆ, ಪೆರಿಯಾರ್ ನೆನಪನ್ನು ತಮಿಳು ಮಣ್ಣಿನಿಂದ ತೊಳೆದು ಚೆಲ್ಲುತ್ತೇವೆ ಅಂತ ಹೊರಟಿದ್ದ ಬಿಜೆಪಿಗೆ ಅಲ್ಲೂ ಆದದ್ದು ನಿರಾಶೆಯೇ. ಎಐಡಿಎಂಕೆ ಸೋತಿದೆ, ಬಿಜೆಪಿಗೆ ನಾಲ್ಕು ಸ್ಥಾನಗಳು ಬಂದಿವೆ. ಹತ್ತು ವರ್ಷಗಳ ನಂತರ, ಅಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಿದೆ. ಇನ್ನು, ಅತ್ಯಂತ ಕುತೂಹಲಕಾರಿ ಚುನಾವಣಾ ಕಾದಾಟಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದಲ್ಲಂತೂ 200 ಸೀಟುಗಳನ್ನು ಗೆದ್ದು ಅಧಿಕಾರ ಹಿಡಿದೇಬಿಟ್ಟೆವು ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಾ ತಿರುಗಾಡುತ್ತಿದ್ದ ಬಿಜೆಪಿಯ ನಾಯಕರು ಈಗ ತಮ್ಮ ಪಾಲಿಗೆ ಬಂದ 75ಸೀಟುಗಳಲ್ಲೇ ತೃಪ್ತಿಪಡಬೇಕಿದೆ. ಇದು ಚುನಾವಣಾ ಫಲಿತಾಂಶಗಳ ಸ್ಥೂಲ ಚಿತ್ರಣ.

ಈ ರೀತಿ ನೋಡಿದಾಗ ಈ ಚುನಾವಣಾ ಫಲಿತಾಂಶ ಬಿಜೆಪಿ ವಿರೋಧಿಪಕ್ಷಗಳ ಮೊಗದಲ್ಲಿ ನಗು ತರಿಸಬೇಕು. ಈ ಪಕ್ಷಗಳು ಮಾತ್ರವಲ್ಲ, ಚುನಾವಣೆ ಗೆಲ್ಲಲು ಬಿಜೆಪಿ ಬಳಸುವ ಭೀಕರ ಪ್ರಜಾತಂತ್ರ ವಿರೋಧಿ ವಿಧಾನಗಳ ಬಗ್ಗೆ ಆತಂಕಿತರಾಗಿದ್ದ ದೇಶದ ಪ್ರಜ್ಞಾವಂತ ಜನತೆಗೂ ಒಂದು ರೀತಿಯ ಸಮಾಧಾನ ತರುವಂತಹ ಫಲಿತಾಂಶ ಇದು ಅಂತ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ, ಫಲಿತಾಂಶಗಳನ್ನು ಇನ್ನೊಂದು ರೀತಿಯಲ್ಲಿ ನೋಡೋಣ. ಮೊದಲಿಗೆ ಪಶ್ಚಿಮ ಬಂಗಾಳದ ಫಲಿತಾಂಶವನ್ನು ಪರಿಶೀಲಿಸಿದರೆ ಅಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ಸು ಬಿಜೆಪಿಯನ್ನು ಸೋಲಿಸಿ ಮೂರನೆಯ ಅವಧಿಗೆ ಅಧಿಕಾರ ಉಳಿಸಿಕೊಂಡಿದೆ ಎಂಬುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಬಿಜೆಪಿ ಆ ರಾಜ್ಯದ ಇತರ ಎಲ್ಲಾ ಪಕ್ಷಗಳನ್ನೂ ಸೋಲಿಸಿ ಅಲ್ಲಿ ಪ್ರಧಾನ ಪ್ರತಿಪಕ್ಷದ ಸ್ಥಾನ ಪಡೆದಿದೆ ಎನ್ನುವುದು.

ಹೋದ ಬಾರಿ (2019) ಲೋಕಸಭಾ ಚುನಾವಣೆ ನಡೆಯುವವರೆಗೆ ಪಶ್ಚಿಮ ಬಂಗಾಳದ ವಿಧಾನ ಸಭೆಯಲ್ಲಿ ಅತಿ ಹೆಚ್ಚು ಎಂದರೆ ಕೇವಲ ಮೂರು ಸ್ಥಾನಗಳನ್ನು ಹೊಂದಿ ನಗಣ್ಯ ಪಕ್ಷವಾಗಿದ್ದ ಬಿಜೆಪಿ ಈ ಚುನಾವಣೆಯಲ್ಲಿ ತನ್ನ ಸ್ಥಾನಗಳ ಸಂಖ್ಯೆಯನ್ನು ಎಪ್ಪತ್ತೈದಕ್ಕೆ ಹೆಚ್ಚಿಸಿಕೊಂಡಿದೆ. ಈತನಕ ಯಾವುದೇ ನೆಲೆಯನ್ನೇ ಹೊಂದಿರದ ಒಂದು ರಾಜ್ಯದಲ್ಲಿ ಬಿಜೆಪಿ ಹೊಸದಾಗಿ ತನ್ನನ್ನು ತಾನು ಪ್ರಬಲವಾಗಿ ಪ್ರತಿಷ್ಠಾಪಿಸಿಕೊಂಡಿದೆ. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗೆದ್ದು ಅಧಿಕಾರ ಪಡೆಯದೇ ಹೋದರೂ, ಅದು ಆ ರಾಜ್ಯದ ವಿಧಾನ ಸಭೆಯಲ್ಲೀಗ ಪ್ರಮುಖ ಪ್ರತಿಪಕ್ಷ. ತೃಣಮೂಲ ಕಾಂಗ್ರೆಸ್ಸಿನ ಎದುರಿಗೆ ಸೋತ ಬಿಜೆಪಿ ಉಳಿದೆಲ್ಲಾ ಪ್ರತಿಪಕ್ಷಗಳನ್ನು ಮಣಿಸಿದೆ. ಸೊನ್ನೆ ಇದ್ದದ್ದು ಒಂದಾಗುವುದು ನಿಜವಾದ ಗೆಲುವು, ಒಂದಿದ್ದದ್ದು ಎರಡಾಗುವುದು ಅಷ್ಟು ದೊಡ್ಡ ಗೆಲುವಲ್ಲ.

ಈ ಅರ್ಥದಲ್ಲಿ ಬಿಜೆಪಿಯ ಸೋಲಿನಲ್ಲಿ ಅದರ ವಿರೋಧ ಪಕ್ಷಗಳು ದೊಡ್ಡ ಸಮಾಧಾನ ಹೊಂದುವ ಸ್ಥಿತಿಯಲ್ಲಿ ಇಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವಿದೆ. ಬಿಜೆಪಿ. ಪಶ್ಚಿಮ ಬಂಗಾಳದಲ್ಲಿ ಈ ಹಂತಕ್ಕೆ ಬೆಳೆಯಲು ಬಿಜೆಪಿ ಪ್ರಯೋಗಿಸಿದ ದಾಳಗಳು ಭಯಾನಕವಾಗಿದ್ದವು. ಇನ್ನಷ್ಟು ಎತ್ತರಕ್ಕೆ ಬೆಳೆಯಲು ಆ ಪಕ್ಷ ಅಲ್ಲಿ ಏನೇನು ಮಾಡಬಹುದು ಎನ್ನುವುದೇ ಈಗ ಕುತೂಹಲದ ವಿಷಯ. ಈ ಬಾರಿಯ ಅವಮಾನಕ್ಕೆ ಸೇಡು ಎಂಬಂತೆಯೂ, ಮುಂದಿನ ಬಾರಿ ಅಧಿಕಾರ ಪಡೆದೇ ತೀರಬೇಕು ಎಂಬಂತೆಯೂ ಬಿಜೆಪಿ ಅಲ್ಲಿ ಫೀಲ್ಡಿಗೆ ಇಳಿದುಬಿಟ್ಟರೆ ಅದು ಈ ದೇಶದ ರಾಜಕೀಯವನ್ನು ಯಾವ ಮಟ್ಟಕೆ ಒಯ್ಯಬಹುದು ಎನ್ನುವ ಪ್ರಶ್ನೆಯನ್ನು ಈಗ ಮುಖ್ಯವಾಗಿ ಕೇಳಬೇಕಿದೆ. ಚುನಾವಣಾ ರಾಜಕೀಯದಲ್ಲಿ ಯಥೇಚ್ಛವಾಗಿ ಹಿಂಸೆಯನ್ನು ಬಳಸುವುದರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಕೂಡಾ ಹಿಂದೆ ಬಿದ್ದಿಲ್ಲ ಎನ್ನುವುದು ವಾಸ್ತವ. ಆದರೆ ಪ್ರತಿ ಚುನಾವಣೆಯಲ್ಲೂ ಭಾರತೀಯ ಮತದಾರನ ಎದುರು ಇರುವುದು ಕಡಿಮೆ ವಿನಾಶಕಾರಿ ಶಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮಾತ್ರ.

ಕೇರಳದಲ್ಲೂ ಅಷ್ಟೇ. ಅಲ್ಲಿ ಬಿಜೆಪಿ ಈ ಬಾರಿ ಕಳೆದ ಬಾರಿಗಿಂತಲೂ ಕಳಪೆ ಸಾಧನೆಗೈದಿರಬಹುದು. ಇದಕ್ಕೆ ಕಾರಣಗಳೇನಿರಬಹುದು ಎನ್ನುವುದರ ಬಗ್ಗೆ ವಿಶದವಾದ ಅಧ್ಯಯನದ ಅಗತ್ಯವಿದೆ. ಆದರೆ ಆ ರಾಜ್ಯದ ರಾಜಕೀಯದ ಗತಿ ನೋಡಿದರೆ ಅಲ್ಲಿ ಮುಂದೊಂದು ದಿನ ಬಿಜೆಪಿ ಪ್ರಬಲವಾಗಿ ನೆಲೆಯೂರುವ ಅವಕಾಶವಂತೂ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಕೇರಳದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಯಿಂದ ಚುನಾವಣೆಗೆ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿರುವುದು. ಇನ್ನು ಕಾಂಗ್ರೆಸ್ಸಿನಲ್ಲಿ ಇದ್ದು ರಾಜಕೀಯವಾಗಿ ಬೆಳೆಯಲು ಸಾಧ್ಯವಿಲ್ಲ ಅಂತ ಒಂದಷ್ಟು ಮಂದಿ ನಾಯಕರು ಹೊಸ ನೆಲೆಯ ಹುಡುಕಾಟಕ್ಕೆ ಹೊರಟರೆ ಅವರಿಗೆ ಸುಲಭವಾಗಿ ಲಭಿಸುವ ವೇದಿಕೆ ಬಿಜೆಪಿಯೇ ಆಗಿರುತ್ತದೆ.

ಹೀಗೆ ನಿರ್ನಾಮವಾಗುತ್ತಿರುವ ಪಕ್ಷಗಳಿಂದ ಹೊರಬಿದ್ದವರನ್ನೇ ನೆಚ್ಚಿಕೊಂಡು ಬಿಜೆಪಿ ಬಹಳಷ್ಟು ರಾಜ್ಯಗಳಲ್ಲಿ ಬೆಳೆದಿದೆ. ಆದುದರಿಂದ ಈ ಬಾರಿ ಕೇರಳದಲ್ಲಿ ಎಡರಂಗದ ಗೆಲುವು ಪರೋಕ್ಷವಾಗಿ ಬಿಜೆಪಿಯ ಗೆಲುವೂ ಆಗಿದೆ. ಒಂದು ವೇಳೆ ಈ ಬಾರಿ ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ, ರಾಜಕೀಯವಾಗಿ ನೆಲೆಯೂರಲು ಅಲ್ಲಿ ಬಿಜೆಪಿ ಇನ್ನೂ ಕಾಯಬೇಕಿತ್ತು. ಈಗ ಕೇರಳದಲ್ಲೂ ಬಿಜೆಪಿಗೆ ಒಂದು ಚಾರಿತ್ರಿಕ ವೇದಿಕೆ ನಿರ್ಮಾಣವಾದ ಹಾಗೆ ಕಾಣಿಸುತ್ತದೆ. ಇದನ್ನು ತಪ್ಪಿಸಬೇಕಾದರೆ, ಕಾಂಗ್ರೆಸ್ ಪಕ್ಷ ಕೇರಳದಲ್ಲಿ ಬಹಳಷ್ಟು ಶ್ರಮ ಪಡಬೇಕಾಗುತ್ತದೆ. ಅಂತಹದ್ದೊಂದು ಸಾಧ್ಯತೆ ಕೇರಳದ ಕಾಂಗ್ರೆಸ್ಸಿನೊಳಗೆ ಈಗಂತೂ ಕಾಣಿಸುತ್ತಿಲ್ಲ.

ತಮಿಳುನಾಡು ಮುಖ್ಯಮಂತ್ರಿಯಾಗಿ ಎಂ.ಕೆ. ಸ್ಟಾಲಿನ್ ಪ್ರಮಾಣ ವಚನ | Naanu gauri

ಆದರೆ, ಬಿಜೆಪಿ ಮಾತ್ರ ಸೋತ ತಕ್ಷಣ ’ಇನ್ನೈದು ವರ್ಷದಲ್ಲಿ ಕೇರಳವನ್ನು ವಶಪಡಿಸಿಕೊಂಡೆ ತೀರುತ್ತೇವೆ’ ಅಂತ ಘೋಷಿಸಿದೆ. ಕೇರಳದಲ್ಲಿ ಬಿಜೆಪಿ ಈ ತನಕ ಬಳಸಿದ ರಾಜಕೀಯ ಪಟ್ಟುಗಳು ಮತ್ತು ನುಡಿಗಟ್ಟುಗಳು ಕೆಲಸಕ್ಕೆ ಬಂದಿಲ್ಲ. ಆದರೆ, ಅಧಿಕಾರ ಹಿಡಿಯಲು ಆ ಪಕ್ಷ ಹೊಸ ಹೊಸ ಪಟ್ಟುಗಳನ್ನು ಆವಿಷ್ಕರಿಸಿಕೊಳ್ಳುತ್ತಲೇ ಇರುತ್ತದೆ. ನಾಳೆ ಅದಕ್ಕೆ ಅಲ್ಲಿ ಕಾಂಗ್ರೆಸ್ಸಿನಿಂದ ವಲಸೆ ಬಂದವರನ್ನು ಬಳಸಿಕೊಂಡು ಬೆಳೆಯುವ ಅನಿವಾರ್ಯತೆ ಎದುರಾದರೆ, ಗೋವಾದಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ವರಸೆ ಬದಲಿಸಿಕೊಂಡು ಅಧಿಕಾರ ಪಡೆದಂತೆ, ಕೇರಳದಲ್ಲಿ ಕೂಡಾ ಅದನ್ನೇ ಮಾಡುವ ಸಾಧ್ಯತೆ ಇದೆ. ಕೇರಳದ ಅಲ್ಪಸಂಖ್ಯಾತರ ಪೈಕಿ ಕ್ರಿಶ್ಚಿಯನ್ನರನ್ನು ಬಳಸಿಕೊಂಡು ಹೊಸ ಸಾಮಾಜಿಕ ಸಮೀಕರಣವನ್ನು ಬಿಜೆಪಿ ನಡೆಸಲಿದೆ ಎನ್ನುವ ಚರ್ಚೆಗಳು ಈಗಾಗಲೇ ಕೇಳಿಸುತ್ತಿವೆ.

ತಮಿಳುನಾಡು ಮಾತ್ರ ಸದ್ಯಕ್ಕೆ ಬಿಜೆಪಿಯ ರಾಜಕೀಯಕ್ಕೆ ಪ್ರಬಲವಾದ ಒಂದು ಪ್ರಾದೇಶಿಕ ಪರ್ಯಾಯವನ್ನು ಹೊಂದಿರುವುದು. ಅಲ್ಲಿ ಇನ್ನೂ ದ್ರಾವಿಡ ರಾಜಕೀಯದ ಛಾಯೆ ಉಳಿದಿದೆ. ಬಿಜೆಪಿಯ ’ಒಂದು ರಾಷ್ಟ್ರ ಒಂದು ಒಂದು ಧರ್ಮದ ಪ್ರತಿಪಾದನೆಗೆ ತಮಿಳುನಾಡಿನ ಜನ ಅಷ್ಟಾಗಿ ಸ್ಪಂದಿಸಲಿಲ್ಲ ಎನ್ನುವುದು ಮಾತ್ರವಲ್ಲ, ಅದನ್ನು ಪ್ರಬಲವಾಗಿ ವಿರೋಧಿಸಿದರು ಕೂಡಾ. ಈ ಪ್ರತಿರೋಧ ಎಷ್ಟರ ಮಟ್ಟಿಗಿತ್ತು ಎಂದರೆ, ಬಿಜೆಪಿಯ ಜತೆ ಮೈತ್ರಿ ಮಾಡಿಕೊಂಡ ನಂತರವೂ ಎಐಡಿಎಂಕೆ ಪಕ್ಷದ ನಾಯಕರು ನರೇಂದ್ರ ಮೋದಿಯವರ ಜತೆ ವೇದಿಕೆಯಲ್ಲಿ ಅಥವಾ ಪೋಸ್ಟರ್‌ಗಳಲ್ಲಿ ಕಾಣಿಸಿಕೊಳ್ಳಲು ಅಂಜುತ್ತಿದ್ದರು. ತಮಿಳು ನಾಡಿನಲ್ಲಿ ಹಿಂದುತ್ವದ ಅಮಲೇರಿಸಿ ರಾಜಕೀಯ ಮಾಡುವ ಉದ್ದೇಶದಿಂದ ಬಿಜೆಪಿ ಅಲ್ಲಿಗೆ ಅತ್ಯಂತ ಭೀಕರವಾಗಿ ಹಿಂದುತ್ವವನ್ನು ಪ್ರತಿಪಾದಿಸುವ ಕೆಲ ’ಎಳೆಯ ಪ್ರತಿಭೆ’ಗಳನ್ನು ಆರಿಸಿ ಕಳುಹಿಸಿತ್ತು. ಅಂತವರೆಲ್ಲಾ ಅಲ್ಲಿ ಹೋಗಿ ದ್ರಾವಿಡ ರಾಜಕೀಯವನ್ನು ಮತ್ತು ಪೆರಿಯಾರ್ ತತ್ವಗಳನ್ನು ಮನಸೋ ಇಚ್ಛೆ ಹೀಯಾಳಿಸಿದ್ದು ಆಗಿತ್ತು.

ಈ ಚುನಾವಣೆಯಲ್ಲಿ ಇವೆಲ್ಲಾ ಬಿಜೆಪಿಗೆ ಮುಳ್ಳಾದಂತೆ ಕಾಣಿಸುತ್ತದೆ. ಆದರೆ ಪಾಂಡಿಚೇರಿಗೆ ಎಂಟ್ರಿ ಕೊಟ್ಟಿರುವ ಬಿಜೆಪಿ ತಮಿಳು ನಾಡನ್ನು ಪ್ರವೇಶಿಸುವ ತನ್ನ ಯೋಜನೆಯನ್ನು ಅಷ್ಟು ಸುಲಭವಾಗಿ ಬಿಟ್ಟುಬಿಡಲಾರದು. ಒಂದು ರಾಜಕೀಯ ಪಕ್ಷವಾಗಿ, ಪ್ರಜಾತಂತ್ರದ ಪರಿಕರಗಳನ್ನು ಬಳಸಿಕೊಂಡು ಯಾವುದೇ ರಾಜ್ಯದಲ್ಲಿ ತನ್ನ ನೆಲೆ ಸ್ಥಾಪಿಸಲು ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯವೂ ಇದೆ. ಆದರೆ, ಅಧಿಕಾರದ ವಿಚಾರದಲ್ಲಿ ಹತಾಶ ಸ್ಥಿತಿ ತಲುಪಿದಾಗ ಬಿಜೆಪಿಯವರು ಬಳಸುವ ತಂತ್ರ, ಭಾಷೆ, ವರಸೆ, ವ್ಯವಹಾರ ಇತ್ಯಾದಿಗಳೆಲ್ಲಾ ಪ್ರಜಾತಂತ್ರ ವಿರೋಧಿಯಾಗಿರುತ್ತವೆ ಮಾತ್ರವಲ್ಲ ಸಮಾಜದ ಸಾಸ್ಥ್ಯಕ್ಕೇನೆ ಅಪಾಯ ತಂದೊಡ್ಡುವಂತಿರುತ್ತವೆ.

ಇಂತಹ ಯಾವ ರೀತಿಯ ವ್ಯೂಹವನ್ನು ಅದು ತಮಿಳುನಾಡಿನಲ್ಲಿ ಮುಂದಕ್ಕೆ ಬಳಸಿಕೊಳ್ಳಲಿದೆ ಎನ್ನುವುದನ್ನು ವಿರೋಧ ಪಕ್ಷಗಳು ತುಂಬಾ ಎಚ್ಚರಿಕೆಯಿಂದ ಗಮನಿಸುವ ಅಗತ್ಯವಿದೆ. ಆದರೆ, ಎಲ್ಲಾ ವಿರೋಧ ಪಕ್ಷಗಳೂ ಬಿಜೆಪಿಯ ಈ ಪ್ರಜಾತಂತ್ರ ವಿರೋಧಿ ಮಾರ್ಗಗಳ ಬಗ್ಗೆ ಆತಂಕಿತರಾಗಿದ್ದಾರೆ ಅಂತ ಏನೂ ಇಲ್ಲ. ಆದುದರಿಂದ ತಮಿಳುನಾಡಿನ ವಿಷಯದಲ್ಲೂ ಸದ್ಯಕ್ಕೆ ಅಲ್ಲಿ ಬಿಜೆಪಿಯ ಅಪಾಯಕಾರಿ ರಾಜಕೀಯಕ್ಕೆ ಹಿನ್ನಡೆಯಾಗಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಅಲ್ಲಿ ಬಿಜೆಪಿಯ ಮುಂದಿನ ನಡೆಯನ್ನು ನಿರೀಕ್ಷಿಸಬೇಕಿದೆ.

ಚಿನ್ನ ಕಳ್ಳಸಾಗಾಣೆ ಪ್ರಕರಣ: ಪಿಣರಾಯಿ ವಿಜಯನ್ ಹೆಸರನ್ನು ಉಲ್ಲೇಖಿಸುವಂತೆ ಆರೋಪಿಗೆ ಒತ್ತಡ!

ಚುನಾವಣಾ ಫಲಿತಾಂಶಗಳ ಸತ್ಯ ಸದ್ಯದ ಮಾತ್ರಕ್ಕೆ ಸ್ಪಷ್ಟವಾಗಿಯೂ, ಸೀಮಿತವಾಗಿಯೂ ಇದೆ. ಅದೇನೆಂದರೆ, ಈ ಐದು ರಾಜ್ಯಗಳ ಚುನಾವಣೆಗಳನ್ನು ಬಳಸಿಕೊಂಡು ಬಿಜೆಪಿ ದಕ್ಷಿಣ ಭಾರತದಲ್ಲಿ ಮತ್ತು ಪೂರ್ವ ಭಾರತದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಯೇ ತೀರಬೇಕೆಂದು ಹಠತೊಟ್ಟು ಬಳಸಬಾರದಾಗಿದ್ದ ತಂತ್ರಗಳನ್ನೆಲ್ಲಾ ಬಳಸಿ ಒಂದು ಪ್ರಯತ್ನ ಮಾಡಿತ್ತು. ಪೂರ್ವ ಭಾರತದಲ್ಲಿ ಅಂದರೆ ಪಶ್ಚಿಮ ಬಂಗಾಳದಲ್ಲಿ ಅದು ಒಂದು ಮಟ್ಟಿಗೆ ಯಶಸ್ವಿಯಾಗಿದೆ. ದಕ್ಷಿಣದಲ್ಲಿ ಪಾಂಡಿಚೇರಿ ಎಂಬ ಸಣ್ಣ ಕಿಂಡಿ ಮಾತ್ರ ಅದರ ಪಾಲಿಗೆ ತೆರೆದುಕೊಂಡದ್ದು. ಎರಡು ಪ್ರಮುಖ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಯ ಪ್ರಯತ್ನ ನೆಲಕಚ್ಚಿದೆ. ಆದರೆ ಇದು ಬಿಜೆಪಿಯ ದಕ್ಷಿಣ ದಿಗ್ವಿಜಯದ ಕೊನೆ ಎಂದೇನೂ ಅಲ್ಲ. ಇದು ಈ ದಂಡಯಾತ್ರೆಯ ಎರಡನೆಯ ಹಂತದ ಪ್ರಾರಂಭವೂ ಆದೀತು. ಹಾಗಿದೆ ಈ ಎರಡು ರಾಜ್ಯಗಳ ರಾಜಕೀಯ. ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಸಾಲದು ಎನ್ನುವ ಸತ್ಯ ಮತ್ತೊಮ್ಮೆ ಢಾಳಾಗಿ ಗೋಚರಿಸಿದೆ. ಬಿಜೆಪಿಯ ಜತೆ ಸೆಣಸಲು ಪ್ರಾದೇಶಿಕ ಪಕ್ಷಗಳೇ ಸರಿ. ಆದರೆ ಈ ಪ್ರಾದೇಶಿಕ ಪಕ್ಷಗಳು ಕೂಡಾ ಈ ಚುನಾವಣೆಯಲ್ಲಿ ಗೆದ್ದಿದ್ದೇವೆ ಎನ್ನುವ ಕಾರಣಕ್ಕೆ ವಿರಮಿಸುವ ಸ್ಥಿತಿಯಲ್ಲಿ ಇಲ್ಲ.


ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...